Monday, June 7, 2010

ಅಧುನಿಕ ಭಸ್ಮಾಸುರ ವಧೆ...

ಅರ್ಜಂಟಿನಲ್ಲಿ ನಿಮಗೊಂದು ಆಧುನಿಕ [ಅತ್ಯಾಧುನಿಕ...?] ಕಥೆಯೊಂದನ್ನು ಹೇಳಲು ಬಂದೆ.

ನಿಜ ಅಂದರೆ ಇದು ನನ್ನವರು ಮಕ್ಕಳಿಗೆ ಹೇಳಲು ಹೊರಟ ಕಥೆ....!ನನ್ನವರ ಕಥಾ ಶೈಲಿಯ ಬಗ್ಗೆ ಆಸಕ್ತರು ಇಲ್ಲಿ
ನೋಡಿ ತಿಳಿಯಬಹುದು.ನನ್ನವರ ಕಾನ್ಸೆಪ್ಟ್ ಗೆ ನನ್ನ ಸ್ಕ್ರಿಪ್ಟ್....!!



ಈಶ, ನಾಣಿ ಮತ್ತು ಬರಮು ಪರಮ ಮಿತ್ರರು. ಅವರಲ್ಲಿ ಈಶ ಮತ್ತು ನಾಣಿ ಸ್ವಲ್ಪ ಜಾಸ್ತಿಯೇ ಫ್ರೆಂಡ್ಸು.

ಈಶ ಸ್ವಲ್ಪ ಕೊಳಕ, ಅಲ್ಲದೆ ಅಧ್ಯಾತ್ಮ ಜೀವಿ. ಸನ್ ರೇಸ್ ನಿಂದ ಮೈಗೆ ಅಲರ್ಜಿಯಾಗುವುದೆಂದು ಅವನು ಯಾವಾಗಲೂ ಪರಿಹಾರಾರ್ಥವಾಗಿ ಮೈ ತುಂಬಾ ಬೂದಿಯನ್ನು ಬಳಿದು ಕೊಳ್ಳುತ್ತಾನೆ. ಪಾರ್ವತಿ, ಅವನ ವೈಫು ಯಾವಾಗಲೂ ಈ ವಿಚಾರದ [ವಿಕಾರದ] ಬಗ್ಗೆ ಅಬ್ಜೆಕ್ಟ್ ಮಾಡುತ್ತಲೇ ಇರುತ್ತಾಳೆ. ಆದರೆ ಪಾರ್ವತಿ ಅದರಲ್ಲೆಲ್ಲಾ ಭಾರೀ ನಾಜೂಕು.ಮೈತಾಲೀ ಮಿಟ್ಟಿ , ಕ್ರೀಮು, ಪೌಡರುಗಳನ್ನೇ ಬಳಸುತ್ತಾಳೆ.
''ಯಾವಾಗಲೂ ನ್ಯಾಚುರಲ್ ಆಗಿರವು ...ತೆಳತ್ತನೇ, '' ಎನ್ನುವುದು ಈಶನ ಸಮರ್ಥನೆ.

ಇಷ್ಟಾಯ್ತಾ.... ಈಶನಿಗೆ ದಿನಾಲೂ ಬೂದಿ ಒದಗಿಸಲು ಪಾರ್ವತಿಯೇ ಬೇಕು. ದಿನಾಲೂ ಸ್ಮಶಾನಕ್ಕೆ ಹೋಗಿ... ಐ ಮೀನ್ ಹರಿಶ್ಚಂದ್ರ ಘಾಟ್ ಗೆ ಹೋಗಿ ಹೆಣ ಸುಟ್ಟ ಬೂದಿಯನ್ನ ತಂದು ಘನವಸ್ತುಗಳಾವುವೂ ಇಲ್ಲದಂತೆ ಜರಡಿಯಾಡಿ ಹಚ್ಚಿಕೊಳ್ಳಲು ಯೋಗ್ಯವಾದ ಪೌಡರ್ ಮಾಡಿಕೊಡಬೇಕು.[ಎಲ್ಲಾ ಕಡೆ ಒಲೆ ಉರಿಸಲು ಗ್ಯಾಸ್ ಇರುವುದರಿಂದ ಒಲೆ ಬೂದಿ ಸಿಗದ ಕಾರಣ ಈ ಆಲ್ಟರ್ನೆಟ್ ಅಡ್ಜಸ್ಟ್ಮೆಂಟು ]

ಒಮ್ಮೆ ಏನಾಯ್ತೆಂದರೆ, ಪಾರ್ವತೀ ಈಶನಿಗೆ ಕೊಟ್ಟ ಬೂದಿಯಲ್ಲಿ ಅದ್ಯಾವುದೋ ಎಲುಬೋ ... ಎಂತದೋ ಇತ್ತಂತೆ.
ಸಾಣಿಗೆ ಎಲ್ಲಾದ್ರೂ ತೂತು ಬಿದ್ದಿತ್ತೋ ಏನೋ ಪಾಪ.... ಪಾರ್ವತಿಯ ಮೇಲೆ ಈಶ ಭಯಂಕರ ಸಿಟ್ಟು ಮಾಡಿದ.......!!!!!
ಪಾರ್ವತಿ ಕಾರಣ ಕೊಟ್ಟರೂ ಕೇಳದೆ ಪೌಡರ್ ಡಬ್ಬಿಯನ್ನ
ಎತ್ತಿ ರಪ್ಪೆಂದು..ನೆಲದ ಮೇಲೆ ಬೀಸಾಡಿದ....
ಆ ರಭಸಕ್ಕೆ ಅಲ್ಲೊಬ್ಬ ''ಮಗ'' ಹುಟ್ಟಿದ.....!!!!!!![ ಅತ್ಯಾದುನಿಕ ಕಾಲ ] ಅಯ್ಯಬ್ಬಾ......ಅವನ ರೂಪವೋ.....ಥೇಟ್ ರಾಕ್ಷಸಾಕಾರ...!!! ಕೂಗಿದ ಅಂದ್ರೆ ಬ್ರಹ್ಮಾಂಡ ನಡುಗಬೇಕು...[ಬೂದಿಯಿಂದಲೂ ಮಕ್ಕಳು ಹುಟ್ಟುವ, ಮೈ ಬೆವರ ಮಣ್ಣಿನಿಂದಲೂ ಮಕ್ಕಳು ಹುಟ್ಟುವ ತಲೆ ಕೂದಲಿ೦ದಲೂ ಹುಟ್ಟುವ ಅತ್ಯಾಧುನಿಕ ಟೆಕ್ನಾಲಜಿ......!!!!!!]

ಅಷ್ಟೊತ್ತಿಗೆ ಈಶನ ಸಿಟ್ಟು ಕಮ್ಮಿಯಾಗತೊಡಗಿತು. ಪರಿಸ್ಥಿತಿ ಅರ್ಥ ಆಯ್ತು.
ಆದರೂ ಹುಟ್ಟಿದ ಮಗನಿಗೆ ಸಂಸ್ಕಾರ ಕೊಡಬೇಕಲ್ಲ.. ಹೆಸರಿಟ್ಟ. ''ಭಸ್ಮಾಸುರ '' ಭಸ್ಮದಿಂದ ಹುಟ್ಟಿದವ ಎಂದು. ಮಾತು ಕಲಿಸಿದ. ಸಂಬಂಧ ತಿಳಿಸಿಕೊಟ್ಟ. ಮಾಡಲೊಂದು ಕೆಲಸ ಬೇರೆ ಕೊಟ್ಟ...
'' ಮಗನೆ.... ಇನ್ನು ಮೇಲಿಂದ ನನಗೆ ಮೈಗೆ ಹಚ್ಚಿಕೊಳ್ಳಲು ನೀನೆ ಬೂದಿ ವ್ಯವಸ್ಥೆ ಮಾಡು....''

ಸರಿ.. ಅಂತೆಯೇ ಮಗನ ಕೆಲಸ... ಬೂದಿ ತಂದು ಅಪ್ಪನಿಗೆ ಕೊಡುವುದು... ನಡೆಯುತ್ತಾ ಇತ್ತು.
ಹೀಗಿರಲೋಮ್ಮೆ ರಾಕ್ಷಸ ಮಗನಿಗೊಂದು ಯೋಚನೆ ಬಂತು.


'
ಎಲ್ಲರೂ ಹೈ ಫೈ ಮಾಡಿಕೊಂಡು ಅವರವರ ವೆಹಿಕಲ್ ನಲ್ಲಿ ಜುಮ್ಮಂತ ಓಡಾಡಿ ಕೊಂಡಿರುವಾಗ, ಸ್ವಂತ ಜಾಬ್ ಮಾಡುವಾಗ, ನಾನು ಮಾತ್ರ ಅಪ್ಪನಲ್ಲಿ ಬೂದಿ ಕೆಲಸ ಮಾಡಬೇಕೆ.? ಎಷ್ಟು ದಿನಾ ಅಂತ ಹೀಗೆ ಇರುವುದು ...?' ಅನ್ನುವ ಒಂದು ವಿಚಾರ ಮಾಡುತ್ತಾ ...ಇದಕ್ಕೆ '' ಏನಾದರೂ ಮಾಡಲೇ ಬೇಕು'' ಎಂದುಕೊಳ್ಳುತ್ತಾ ಒಂದು ಖತರ್ನಾಕ್ ಐಡಿಯ ಯೋಚಿಸಿಕೊಂಡು ಅಳುತ್ತಾ ...ಐ ಮೀನ್ ಅಳುವಂತೆ ನಟಿಸುತ್ತ ಈಶನಲ್ಲಿಗೆ ಬಂದ.


ಈಶ ಮಗ ಅಳುತ್ತಿದ್ದುದನ್ನು ನೋಡಿ ಕರಗಿ ಹೋದ.  ದಿನಾ ಬೂದಿಯನ್ನು ಸರಿಯಾಗಿ ಗಾಳಿಸಿ ತಂದು ಕೊಡುತ್ತಿದ್ದುದರಿಂದ ಅವನಿಗೆ ಮಗನ ಮೇಲೆ ಪ್ರೀತಿ ಬಹಳ.
'' ಮಗಾ ಎಂತಾತ... ಅಳದೆಂತಕಾ....? '' ಬಾಳಾ ವಾತ್ಸಲ್ಯದಿಂದ ವಿಚಾರಿಸಿದ.

''ಊಂ ........ಊಂ .... ಬೂದಿ ಎಲ್ಲೂ ಸಿಗ್ತೇ ಇಲ್ಲೇ.   ಅದ್ಕೆ ನೀ ನನಗೊಂದು ''ವರ'' ಕೊಡವೂ ....ಊಂ ...ಊಂ .. ''

''ಹ್ನೂ ... ಅಕ್ಕು ಮಾರಾಯಎಂತ 'ವರ ' ಕೊಡವು ಕೇಳಾ.  ಕೊಡ್ತಿ ಅದ್ಕಿನ್ನೆಂತು.   ಅಳದೊಂದ್ ನಿಲ್ಸು ಕೇಳಲಾಗ್ತಿಲ್ಲೇ...''

'' ಕೊಡವೂ ... ಮತ್ತೆ.. ಊಂ... ಊಂ.. ಕೇಳಿದ್ಮೇಲೆ ಇಲ್ಲೇ ಹೇಳಲಿಲ್ಲೇ....''

'' ಕೇಳು .. ಕೇಳು..ಅಳು ನಿಲ್ಸು.. ಕೇಳಲಾಗ್ತಿಲ್ಲೇ.''

''ಊಂ.... ಮತ್ತೆ.. ಮತ್ತೆ.. ನಾ ಯಾರ ತಲೆ ಮೇಲೆ ಕೈ ಇಟ್ರೂ ಅವು ಸುಟ್ಟ ಭಸ್ಮವಾಗವೂ.... ಊಂ.. ವರ ಕೊಡ್ತ್ಯಾ... ? ಇಲ್ದಿದ್ರೆ ನಿಂಗೆ ಬೂದಿ ಸಿಗ್ತೆ ಇಲ್ಲೇ. ''

ಅಷ್ಟರಲ್ಲಿ ಪಾರ್ವತಿ ಈ ಸಂವಾದವನ್ನು ಕೇಳುತ್ತಿದ್ದವಳು, ''ಅಯ್ಯೋ ಹಂಗೊಂದು ವರ ಕೊಡಡಿ.. ಅನರ್ಥ ಆಗಿ ಹೋಕೂ.....'' ಕೂಗಿದಳು ಅಡುಗೆಮನೆಯಿಂದಲೇ..

'' ಕೊಡ್ತೀ ಹೇಳಿದ್ಮೇಲೆ ಕೊಡದೆಯ.   ಆನ್ ಯಾವತ್ತಾದರೂ ಮಾತಿಗೆ ತಪ್ಪವ್ ನನೆ....? ನೀನೂ ಹಂಗೇ ಮಾಡ್ತೆ...''ಎಂದು ಹೇಳಿದವನೇ ಈಶ್ವರ ಉರುಫ್ ಈಶ ಭಸ್ಮಾಸುರನಿಗೆ '' ನೀ ಯಾರ ತಲೆ ಮೇಲೆ ಕೈ ಇಟ್ರೂ ಅವರು ಭಸ್ಮವಾಗಲೀ ...'' ಎಂದು ವರ ಕೊಟ್ಟೆ ಬಿಟ್ಟ.

ವರ ಸಿಕ್ಕಿದ್ದೇ ತಡ, ಭಸ್ಮಾಸುರ ಕಂಡ ಕಂಡವರ ತಲೆ ಮೇಲೆಲ್ಲಾ ಕೈ ಇಟ್ಟು ಅವರನ್ನೆಲ್ಲಾ ಬೂದಿ ಮಾಡಿದ. ಇವನ ಉಪಟಳ ದಿನಾ ದಿನಾ  ಹೆಚ್ಚಾಯ್ತು.

ಇಷ್ಟೇ ಆಗಿದ್ರೆ ಸಾಕಿತ್ತು. ಅವರಿವರ ಸೈಟು, ಫಾರಂ ಹೌಸು.. ಎಲ್ಲಾದರ ಮೇಲೂ ಕಣ್ಣು ಬಿದ್ದು ಅಲ್ಲಿಯ ದೊಡ್ ದೊಡ್ ಮನುಷ್ಯರನ್ನೆಲ್ಲಾ ಅಟ್ಟಿಸಿಕೊಂಡು ಹೊರಟ. ''ಎಲ್ಲಾರ್ನೂ ಭಸ್ಮಾ ಮಾಡ್ತೀ..... ಏನಂತ ತಿಳ್ಕೈಂದ... ನನ್ನ...ಹ್ಞಾ.... '' ಎನ್ನುತ್ತಾ ಅಲೆದಾಡಿದ.

ಎಲ್ಲಾರಿಗೂ ಭಯವಾಗತೊಡಗಿ ಎಲ್ಲಾ ಸೀದಾ ಈಶ್ವರನಲ್ಲಿಗೆ ಬಂದು 'ನಿಮ್ಮನೆ ಮಾಣಿ ಹಿಂಗಿನ್ಗಲ್ಲ ಮಾಡ್ತಿದ್ದ. ನೀ ಒಂಚೂರು ಬುದ್ಧಿ ಹೇಳದೆಯ...' ಹೇಳಿ ಹೇಳಿದರು ದೇವೇಂದ್ರ.   ಮತ್ತೆ ಅವನ ಫ್ರೆಂಡ್ಸ್ ಎಲ್ಲ.

ಅವತ್ತೇ ಭಸ್ಮಾಸುರ ಭಸ್ಮ ತಗಂಡು ಈಶ್ವರನ ಹತ್ರ ಬಂದಿದ್ದೆ ತಡ.


''
ಎಂತಾ ಮಾಣಿ, ಆನ್ ನಿಂಗೆ ವರ ಕೊಟ್ಟಿದ್ದು ಕಂಡ ಕಂಡವರ ತಲೆ ಮೇಲೆ ಕೈ ಇಡು ಹೇಳನಾ..? '' ಹೇಳಿ ಅವನಿಗೆ ಹೊಡೆಯಲು ಹೊರಟ.

ಭಸ್ಮಾಸುರ ಮೊದಲೇ ನೀಚ, ವರದ ಬಲ ಬೇರೆ...
''ಹ್ಹ...ಹ್ಹ..ಹ್ಹಾ... ನೀ ಯಂಗೆ ಎಂತಾ ಮಾಡಲೂ ಆಗ್ತಿಲ್ಲೆ.. ಹೊಡಿತ್ಯ... ಹೊಡಿ ನೋಡನ. ಆನ್ ನಿನ್ ತಲೆ ಮೇಲೇ ಕೈ ಇಡ್ತೀ.... ಹ್ಹ..ಹ್ಹ... ಹ್ಹಾ....''

ಶಿವ ಉರುಫ್ ಈಶನಿಗೆ ಈಗ ಭಯವಾಗತೊಡಗಿತು.. ತಾನು ಕೊಟ್ಟ ವರದ ಅನರ್ಥ ಹೀಗಾಗುತ್ತೆ ಅಂದು ಕೊಂಡಿರದ ಶಿವ ಓಡತೊಡಗಿದ.  ಬಿಟ್ಟಾನ ಭಸ್ಮಾಸುರ.   ಅವನೂ ಅಟ್ಟಿಸಿಕೊಂಡು ಬಂದ.

ಓಡಿದ..ಓಡಿದ.. ಶಿವನಿಗೆ ಏನ್ ಮಾಡಲೂ ತೋಚಲಿಲ್ಲ. ಪಾರ್ವತಿ ಮಾತಾದರೂ ಕೇಳಬೇಕಿತ್ತು.  ಪಕ್ಕನೆ ಆಪ್ತ ಮಿತ್ರ ನಾಣಿಯ ನೆನಪಾಯಿತು.ಅವನ ಮನೆ ಕಡೆ ಧಾವಿಸಿದ.


ನಾಣಿ ತನ್ನ ವೈಕುಂಠ ನಿವಾಸದಲ್ಲಿ ಬೆಳಿಗ್ಗೆ ಎದ್ದು ಲಕ್ಷ್ಮಿ ಮಾಡಿದ ದೋಸೆ , ಮಾವಿನ ಹಣ್ಣಿನ ರಸಾಯನ ತಿಂದು ಅದನ್ನೇ ಬಣ್ಣಿಸುತ್ತಾ ಸೋಫಾದ ಮೇಲೆ ಪೇಪರ್ ನೋಡುತ್ತಾ ಕುಳಿತಿದ್ದ. ''ಮಾವಿನ ಹಣ್ಣು ಚನ್ನಾಗಿತ್ತನೆ...? ರಸಾಯನ ಚನಾಗಾಗಿತ್ತು. ಸುಳ್ಳಲ್ಲಾ .... ಎಳ್ಳು ಬೀಸಿ ಹಾಕಿದ್ಯನೆ...? ''
''ಹೌದು ಕಾಯಿ, ಎಳ್ಳು ಎಲ್ಲಾ ಬೀಸಿ ಹಾಕಿದ್ದಿ. ನಾಳೆ ಇನ್ನಷ್ಟು ಹಣ್ಣು ತಗಂಡು ಬನ್ನಿ.  ಹುಡ್ರಲ್ಲ ತಿನ್ಕತ್ತ...''ಕಿಚನ್ನಿಂದ ಕೇಳಿ ಬಂತು.

ಬಾಗಿಲು ಬಡಿದ ಸದ್ದಾಯ್ತು..ದಬ.. ದಬ... ಸದ್ದು ಹೆಚ್ಚಾಯ್ತು. ನಾಣಿಯೇ ಎದ್ದು.. ಒಂದು ಕೈಯಲ್ಲಿ ಪೇಪರ್ ಹಿಡಿದುಕೊಂಡೆ ಬಾಗಿಲು ತೆರೆದ..

''ನಾಣಿ  ನಾರಾಯಣಾಶ್ರೀಮನ್ನಾರಾಯಣ  ಬಾವಯ್ಯಾ.   ನೀನೆ ಕಾಪಾಡವೂ.. ಎನ್ನ...'' ಎನ್ನುತ್ತಾ ತೆರೆದ ಬಾಗಿಲಿಂದ ನಾಣಿಯನ್ನ ದಬ್ಬಿಕೊಂಡೆ ಬಂದು ಸೋಫಾದಲ್ಲಿ ಕುಸಿದ..

''ಬಾಗ್ಲು ಹಾಕುಅವ ಬತ್ತಬಂದ್ ಬುಡ್ತಾ...ಬಾಗ್ಲು ಹಾಕು...''ಶಿವ ಅವಸರಿಸಿದ..

''ಎಂತಾತ ಮಾರಾಯ, ಮತ್ಯನ್ತಾ ಭಾನ್ಗಡೆ ಮಾಡ್ಕ್ಯಂಡು ಬೈನ್ದ್ಯಾ...?ಯಾರ್ ಬತ್ವಾ?   ಹೆದ್ರಡಾ ಹೇಳುನಾ ಇದ್ದಿ... ''

ಶಿವ ಎಲ್ಲವನ್ನೂ, ಹೀಗ್ ಹೀಗೆ , ಹೀಗ್ಹೀಗೆ ಅಂತ ಒಂದೇ ಉಸುರಿಗೆ ಹೇಳಿ ಮುಗಿಸಿದ.

''ಅಲ್ದಾ ಮಾರಾಯ. ನಿಂಗೆ ಖುಷಿಯಾದರೂ ಮಕ್ಕ ಹುಟ್ತಾ ... ಸಿಟ್ ಬಂದರೂ ಮಕ್ಕ ಹುಟ್ತಾ ....!! ಸ್ವಲ್ಪ ಜ್ಞಾನ ಬ್ಯಾಡ್ದನಾ....? ವರ ಗಿರ ಕೊಡಕಿದ್ರೆಅನಾಹುತ ಅನಾಹುತವೇ. ನೀ ನಮ್ಮನಿಗೆ ಬರದೇ ಇಂತದಕ್ಕೆಮತ್ಯಾವಾಗ್ಲೂ ಪುರ್ಸೋತ್ತಿರ್ತಲ್ಲೇ... '' ಎಂದು ನಾಣಿ ಚೆನ್ನಾಗಿ ಕ್ಲಾಸ್ ತಗೊಂಡ..

''ನೋಡಾ..... ಎಂತಾರೂ ಪರಿಹಾರ ಕೊಡಹಂಗಿದ್ರೆ ಕೊಡು. ಮೊದ್ಲೇ ತಲೆ ಕೆಟ್ಟೋಜು...... ನಿಂಗೆ ಆಗ್ತಾ ಹೇಳು... ಇಲ್ದಿದ್ರೆ ಬರಮು ಹತ್ರಾರೂ ಹೋಗದೆಯ...... ಒಳ್ಳೆ ಗೋಟಾವಳಿ ವ್ಯಾಪಾರಾಗೊಜು....''

'' ಸುಮ್ನಿರಾ ಸಾಕು... ಅವಂಗೆ ಮೂರ್ಹೊತ್ತೂ ಸೃಷ್ಟಿ ಕಾರ್ಯ ಮಾಡದೆಯಾ...ಕೆಲಸ. ಈಗಿತ್ಲಾಗಂತೂ ವಯಸ್ಸಾತು ಅವಂಗೆ. ನೋಡು ಅರುಳು ಮರುಳು ಆದಂಗೆ ಆಯ್ದು. ಒಂದು ಮಕ್ಕ ಸೈತ ಸರಿ ಹುಟ್ತ್ವಲ್ಲೇಕೆಲವರಿಗೆ ಒಂದೊಂದೇ ಸಲಕ್ಕೆ ಅವಳಿ, ತ್ರಿವಳಿ.   ಇಲ್ದಿದ್ದ್ರೆ ಸಯಾಮಿ.  ಮತ್ ಕೆಲವರಿಗೆ ಎಂತಾ ಮಾಡಿದರೂ ಮಕ್ಕಾನೆ ಅಗ್ತ್ವಲ್ಲೇ. ಅವನತ್ರ ಹೋಗ್ತ್ನಡಾ ಇಂವಕೇಳೆ ಲಕ್ಷ್ಮೀ,  ಶಿವ್ ಬಾವಯ್ಯನ ಮಾತ....''

''ಸರಿಯಾಹಂಗಾರೆ ನೀನೆ ಎಂತಾರೂ ಉಪಾಯ ಹೇಳು ಭಸ್ಮಾಸುರನಿಂದ ತಪ್ಸಿಗಮ್ಬಲೇ'' .....'' ಅಯ್ಯೋ ಬಾವ,   ಅಂವ ಬಂದನೋ ಮಾರಾಯ....''

ಭಸ್ಮಾಸುರ ಕರ್ಕಶವಾಗಿ ಶಿವನನ್ನು ಕರೆಯುತ್ತಾ , ಕೂಗುತ್ತಾ..ನಾರಾಯಣನ ಮನೆ ಕಡೆ ಬರುವುದು ಕಾಣಿಸಿತು. ಹೆಜ್ಜೆ ಸದ್ದು ಒಳ್ಳೆ ಭೂಕಂಪವನ್ನೇ ನೆನಪಿಸುತ್ತಿತ್ತು.

''ನೀ ಹೆದ್ರಡದಾ... ಬಾವ.  ನೀ ಇಲ್ಲಿ ಗೆಸ್ಟ್ ರೂಮಲ್ಲಿ ಬಾಗ್ಲು ಹಾಕ್ಯಂಡು ಸಂದಿಂದ ನೋಡ್ತಾ ಇರು ಕೀ ಹೋಲಿಂದ. ನಾ ಎಲ್ಲನೋಡ್ಕ್ಯತ್ತಿ. ಒಳ್ಳೆ ಬೋಳೆ ಶಂಕರನ ಸವಾಸಾತು ...'' ಎಂದವನೇ ಶಿವನನ್ನು ಗೆಸ್ಟ್ ರೂಮಿಗೆ ಕಳಿಸಿ ತಾನು ಬೆಡ್ ರೂಮಿನ ಒಳಹೋದ ನಾರಾಯ್ಣ.

ನಾರಾಯ್ಣ.  ಅವ ಮೊದ್ಲೇ ಮ್ಯಾನೇಜ್ಮೆಂಟ್ ಗುರೂ.   ಕ್ರೈಸಿಸ್ ಮ್ಯಾನೆಜ್ ಮಾಡಲು ಹೇಳಿಕೊಡಬೇಕೆ...?ಬಾಳಾ ಕಡೆ ಉಪದೇಶ ಕೊಟ್ಟು ಒಳ್ಳೆ ಒಳ್ಳೆ ಹೆಸರು ತಗೊಂಡವನು.

ಶಿವ ಕೀ ಹೋಲಿಂದ ನೋಡುತ್ತಿದ್ದ .
ಭಸ್ಮಾಸುರನ ಹೆಜ್ಜೆ ಸದ್ದು ಹತ್ತಿರವಾಗುತ್ತಿತ್ತು. ಆಗ ನಾರಾಯಣನ ಬೆಡ್ರೂಮಿನಿಂದ ಸುಂದರಿಯೊಬ್ಬಳು ಹೊರಬಂದಳು. ಅವಳು ಎಷ್ಟು ಸುಂದರವಾಗಿದ್ದಳೆಂದರೆ ಅವಳನ್ನು ನೋಡುತ್ತಿದ್ದ ಶಿವನಿಗೆ ಭಸ್ಮಾಸುರನ ಭಯವೇ ಮರೆತು ಹೋಯಿತು...!!ಇದ್ಯಾವ ಮೋಹಿನಿ ಅಂತ.... ಮತ್ತು ಈ ನಾಣಿ ಹೀಗೊಂದು ಸೆಟಪ್ ಬೇರೆ ಇಟ್ಕೊಂಡಿದ್ದಾನಾ....? ತಂಗಿ ಲಕ್ಶ್ಮಿ ಎಲ್ಲಿ ಹೋದಳು..?.ಹಿಂದ್ ಗಡೆ ಕಸ ಮುಸರೆ ಮಾಡಲೇ ಹೊಯ್ದ್ಲಾ..?ಇವ್ಳು ಯಾರಾಗಿಕ್ಕು...?ಅಂತೆಲ್ಲ ಆಲೋಚಿಸತೊಡಗಿದ ಶಿವ.

ಅಷ್ಟೊತ್ತಿಗೆ ಭಸ್ಮಾಸುರ ಬಾಗಿಲ ಬಳಿ ಬಂದು ಬಾಗಿಲನ್ನು ಒದ್ದ ಹೊಡೆತಕ್ಕೆ  ಸುಮಾರಿನ ಮನೆ ಬಾಗಿಲಾಗಿದ್ರೆ ಚೂರ್ ಚೂರ್ ಆಗಿರುತ್ತಿತ್ತು. ಅದು ನಾರಾಯಣನ ಮನೆ ಬಾಗಿಲಾದ್ದರಿಂದ ಗಟ್ಟಿ  ಇತ್ತು.

ಒಳ ಬಂದವನೇ ಭಸ್ಮಾಸುರ 'ಎಲ್ಹೊದ್ಯೋ ಅಪ್ಪಾ... ' ಎಂದು ಕೂಗಲು ಬಾಯಿ ತೆರೆದವನು ಹಾಗೆಯೇ ನಿಂತ. ಮೋಹಿನಿಯನ್ನು ನೋಡಿ ಅವನೂ ವಿಸ್ಮಯಗೊಂಡ. ತೆರೆದ ಬಾಯಿ   ಬಿಟ್ಟ ಕಣ್ಣು ಮುಚ್ಚದೆ.... !!!!!

ಅಷ್ಟೊತ್ತಿಗೆ....   ಒಳಗಡೆ ಸಿ.ಡಿ.ಪ್ಲೇಯರ್ ಹಾಡತೊಡಗಿತು.

ರಾ ..ರಾ..... ರಾ...ರಾ .... ಸರಸಕು ರಾರಾ....ರಾರಾ
... .........
ನನು ಒಕಸಾರಿ ಕನುಲಾರ ತಿಲಕಿನ್ಚರ...
ನಾ ವ್ಯಥಲಲ್ಲು ಮನಸಾರ ಆಲಿಂಚರ............. ......... ...... ........


ಮೋಹಿನಿ ಬಳುಕುತ್ತಾ, ನುಲಿಯುತ್ತಾ ನರ್ತಿಸ ತೊಡಗಿದಳು. ಅವಳನ್ನೇ ನೋಡುತ್ತಾ ಮೈ ಮರೆತಿದ್ದ ಭಸ್ಮಾಸುರ ತಾನೂ ಅವಳನ್ನೇ ಅನುಕರಿಸ ತೊಡಗಿದ. ತನ್ನನ್ನು ಸೋಲಿಸೆಂಬಂತೆ ಆಕೆಯೂ ಕಣ್ ಸನ್ನೆ ಮಾಡುತ್ತಾ, ಹುಬ್ಬು ಹಾರಿಸುತ್ತಾ ಕುಣಿಯತೊಡಗಿದಳು.
ಮೋಹಿನಿ ಮಾಡಿದಂತೆಯೇ ನರ್ತಿಸುತ್ತಾ .. ನರ್ತಿಸುತ್ತಾ... ಭಸ್ಮಾಸುರ ತನ್ನನ್ನೇ ಮರೆತುಬಿಟ್ಟ.ಲಲನೆ ಮಾಟವಾಗಿ ತನ್ನ ಕೈಗಳೆರಡನ್ನೂ ಮೇಲೆತ್ತುತ್ತಾ....... ಮೇಲೆತ್ತುತ್ತಾ.... ತನ್ನ ತಲೆಯ ಮೇಲಿರಿಸಿ ಕೊಂಡಳು.

.... ಅದನ್ನೇ ಮಾಡಿದ ಭಸ್ಮಾಸುರ......

ಎದುರಿಗೆ ದೊಡ್ಡದಾದ ಬೂದಿ ಗುಡ್ಡೆ  ಬಿತ್ತು.....!!!

ಮೋಹಿನಿ ತುಟಿಯಂಚಿನಲ್ಲಿ ನಕ್ಕು ಬೆಡ್ರೂಮಿನ ಕಡೆ ನಡೆಯ ತೊಡಗಿದಳು. ಒಮ್ಮೆಲೇ ಗೆಸ್ಟ್ ರೂಮಿನ ಬಾಗಿಲು ತೆರೆದ ಶಿವ ಹಾರಿ ಹೋಗಿ ಸುಂದರಿಯ ಕೈ ಹಿಡಿದು ಕೊಂಡ.

''ಯಾರೇ ನೀನು ಚೆಲುವೆ.... ನಿನ್ನಷ್ಟಕ್ಕೆ ನೀನೆ ಏಕೆ ನಗುವೇ....''

... ಬಿಡಲೇ, ಇದೂ ನಾನು ನಾಣಿ.  ಸ್ತ್ರೀವೇಶ ಹಾಕ್ಯ ಬೈಂದಿ.... ಲಕ್ಷ್ಮಿ ಒಳಗೆ ಬರ ಮೊದ್ಲು ಅವಳ ಸೀರೆ ಯಥಾಸ್ಥಾನಕ್ಕೆ ಸೇರಿಸಿದ್ನಾ ಬಚಾವೂಬಿಡು ಬಿಡು...'' ಎನ್ನುತ್ತಾ ಸೆರಗು ಬಿಡಿಸಿಕೊಂಡ ನಾಣಿ ಕೋಣೆಯ ಒಳಗೆ ಓಡಿದ..

''ಅಂತೂ ಒದಗಿದ ಸಂಕಷ್ಟ ಪರಿಹಾರಾತು ಮಾರಾಯ....'' ಎನ್ನುತ್ತಾ ಶಿವ ತನ್ನ ಮನೆ ಕೈಲಾಸನಿಲಯದ ಕಡೆ ನಡೆಯ ತೊಡಗಿದ .


ವಂದನೆಗಳು.