Sunday, October 31, 2010

ಜಲವಿಹಾರ

 ನಿನ್ನೆ ಲಾಲ್ ಬಾಗ್ ಕೆರೆಯಲ್ಲಿ ಸಿಕ್ಕ ಕೆಲ ಸಂತಸದ ಕ್ಷಣಗಳು.
ಇಲ್ಲಿದೆ ಮೀನು.. 


 ನಮ್ಮ ಸಂಸಾರ ಆನಂದ ಸಾಗರ 


ಜೊತೆಯಲಿ... ನೀರಲಿ...


 ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..


ಕದಡದಿರು ಬಿಂಬ 




ಗೆಳತೀ ಓ ಗೆಳತಿ ಕೇಳೆ ಸ್ವಲ್ಪಾ...



ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

Thursday, October 21, 2010

ಮರಿ ಹಾಕಿದ ನಾಯಿ ತನ್ನ ಮೊದಲ ಮರಿಯನ್ನು ತಿನ್ನುತ್ತದೆಯೇ...?

''ಮಕ್ಕಳೇ ... ಒಲೆ ಬದಿಗೆ ಹೋಗಬೇಡಿ. ಒಲೆ ಒಳಗೆ  ನಾಯಿ  ಮರಿ ಹಾಕಿದೆ...  ಹತ್ತಿರ ಹೋದವ್ರನ್ನ ಕಚ್ಚಿ ಬಿಡುತ್ತೆ.''
ಅಂಗಳದಲ್ಲಿ  ತೊಗರೊಲೆ  ಬದಿಗೆ   ಥ್ರೋಬಾಲ್ ಆಡುತ್ತಿದ್ದ ಕ್ಷಮಾ ಮತ್ತು ಪಾರ್ಥ ರನ್ನು ಕರೆದು ಅಜ್ಜ ಎಚ್ಚರಿಸಿದರು.ತೊಗರೊಲೆ ಅಂದರೆ ಅಡಿಕೆ ಬೇಯಿಸಲು ಉಪಯೋಗಿಸುವ ದೊಡ್ಡ ಒಲೆ.ನಾಯಿ ಒಲೆ ಒಳಗೆ, ಚೀಲದ ಸಂದು ಹೀಗೆ ಮರಿ ಹಾಕಲೊಂದು ಜಾಗ ಮಾಡಿಕೊಳ್ಳುತ್ತದೆ.
'' ಟಾಮಿ ಮರಿ ಹಾಕಿದೆಯಾ?  ನಾನು ನೋಡಬೇಕು... ತೋರಿಸು ಅಜ್ಜ...." ಕ್ಷಮಾ ಅಜ್ಜನಿಗೆ ಗಂಟು ಬಿದ್ದಳು.
''  ಹೇಳಿದ್ದೆ  ತಪ್ಪಾಯ್ತು. ನೋಡು ಮರಿ ಹಾಕಿದ ನಾಯಿಗೆ ಸಿಟ್ಟು ಜಾಸ್ತಿ. ಕಚ್ಚತ್ತೆ ಅಂದರೆ ಕೇಳಬೇಕು..ಇಲ್ಲ ನಾಯಿ ಕಚ್ಚಿದ್ದಕ್ಕೆ ಹೊಕ್ಕುಳ ಸುತ್ತ  ಹದಿನಾಲ್ಕು ಇಂಜಕ್ಷನ್ ಹಾಕಿಸ್ಕೋ ಬೇಕಾಗುತ್ತೆ.. ''
'' ದೂರದಿಂದ ನೋಡ್ತೇನೆ. ಟಾಮಿ ಪಾಪ ಏನೂ ಮಾಡಲ್ಲ, ಟಾಮಿ .. ಟಾಮಿ .. ಕ್ರು.. ಕ್ರು .. '' ಪಾರ್ಥ ಒಲೆಯಲ್ಲಿ ಬಗ್ಗಿ ನೋಡಿದ.
''  ಅಜ್ಜ ..    ಮೂರು ಮರಿ ಇದೆ.  ಕಣ್ಣು ಕೂಡಾ ಬಿಟ್ಟಿಲ್ಲ..'' ಬೆರಗಿನಿ೦ದ ತನ್ನ ಬಟ್ಟಲುಗಣ್ಣು ಅರಳಿಸುತ್ತಾ ಹೇಳಿದ.
''ನಾಕ್  ಹಾಕಿರ್ತೈತಿ....  ಮದಾಲಿನ್  ಮರೀನಾ ನಾಯೇ ತಿನ್ದ್ಬುಡ್ತೈತಿ. ಮೂರ್ ಉಳ್ಕಂಡ್  ಐತೆ ... '' ಕೆಲಸದ ಮಂಜ ವೀಳ್ಯದೆಲೆಗೆ ಸುಣ್ಣ ಸವರುತ್ತಾ ಹೇಳಿದ.
'' ಸುಳ್ಳು,  ಯಾವ್ದೂ ತನ್ನ ಮರೀನೆ ತಾನು ತಿನ್ನಲ್ಲಪ್ಪಾ.. ''  ಕ್ಷಮಾ ನಂಬಲು ತಯಾರಿಲ್ಲ.
''ಅಲ್ಲಾ .. ನಾ ನೋಡೀನಿ.. ಹೊದೊರ್ಸ ನಮ್ಮನೆ ನಾಯಿ ನಾ ನೋಡ್ ನೋಡ್ತಾ ಇದ್ದಂಗೆ ತಿಂದ ಬುಡ್ಲಾ.. ? ಮದಾಲಿನ್ ಮರೀನ್ ತಿನ್ನದ್ ಸುಳ್ಳಲ್ಲ... '' ಮ೦ಜ ವಾದಿಸಿದ.


''ಅಜ್ಜ ಹೌದಾ ..? ಮಂಜ ಹೇಳಿದ್ದು ನಿಜಾನ ...?''
''ಹಾಗಂತ ಹೇಳ್ತಾರೆ.. ಎಲ್ಲವೂ ತಿನ್ನತ್ತೆ ಅ೦ತ ಅಲ್ಲ.. ಹೋಗು ಮಹಡಿ ಮೇಲೆ ನಿನ್ನ ಅತ್ತೆ ಇದ್ದಾಳಲ್ಲ..ಅವಳನ್ನು ಕೇಳು.. ಸರಿಯಾಗಿ ವಿವರಿಸ್ತಾಳೆ. ''
''ಅತ್ತೆ .... ಅತ್ತೇ....  ವೀಣತ್ತೆ..'' ಮನೆ ಮೊಳಗುವಂತೆ ಕರೆಯುತ್ತಾ  ಮೆಟ್ಟಿಲುಗಳನ್ನು ಧಡ ಧಡ ಹತ್ತಿ ಬಂದರು ಕ್ಷಮಾ ಮತ್ತು ಪಾರ್ಥ.. ವೀಣಾ ಓದುತ್ತಾ  ಕುಳಿತಲ್ಲಿಗೆ.
ಮಕ್ಕಳು ತಮ್ಮ ಸಮಸ್ಯೆಯನ್ನು ಅತ್ತೆಯ ಮುಂದಿಟ್ಟರು. ''ಅತ್ತೇ, ನಾಯಿ ಮರಿ ಹಾಕಿದ ನಂತರ ತನ್ನ ಮರಿಗಳನ್ನೇ ತಿನ್ನುತ್ತಾ....? ಯಾಕೆ ತಿನ್ನುತ್ತೆ..? ಆಮೇಲೆ ಉಳಿದ ಮರಿಗಳನ್ನು ಯಾರಿಗೂ ಮುಟ್ಟಲು ಬಿಡದಂತೆ ಕಾಪಾಡುತ್ತದಲ್ಲ... ಯಾಕೆ ಹೀಗೆ....?
ಮಕ್ಕಳಿಬ್ಬರೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ವೀಣಾ ವಿವರಿಸಲು ತೊಡಗಿದಳು..'' ನೋಡಿ ..
ನೀವು ಹೈಸ್ಕೂಲ್ ಮಕ್ಕಳಲ್ಲವೇ, ನಿಮಗೆ ಅರ್ಥವಾಗುತ್ತದೆ ಈ ವಿಚಾರಗಳೆಲ್ಲ. 


ನಾಯಿ ಸೂಕ್ಷ್ಮ ಪ್ರಾಣಿ... ಅದಕ್ಕೆ ಹುಟ್ಟಿನಿಂದ ಬರುವ ಸಹಜ ಗುಣದ [basic instinct] ಜೊತೆಗೆ    ಹೇಳಿಕೊಟ್ಟಿದ್ದನ್ನು ಕಲಿಯುವ ಗುಣವಿದೆ. ಅದು ಕೆಲವನ್ನು ನೋಡಿಯೂ  ಅನುಸರಿಸಬಲ್ಲದು.ಅವು ಮರಿಯಾಗಿದ್ದಾಗಲೇ ಕಲಿಸುವಿಕೆ ಶುರು ಮಾಡಬೇಕಲ್ಲದೆ ಬೆಳೆದ ನಾಯಿಗಳಿಗೆ ಕಲಿಸುವುದು ಕಷ್ಟ.
ಈಗ ನಾಯಿ ತನ್ನ ಮರಿಯನ್ನು ಏಕೆ ತಿನ್ನುತ್ತದೆ....? ಪಟ್ಟಿ ಮಾಡೋಣ.



೧ . ನಾಯಿ ಮರಿ  ಹೊರಬರುವಾಗ ಮಾಸು ಚೀಲದ [ placenta ] ಸಮೇತ ಬರುತ್ತದೆ.ಪ್ರತಿ ಪ್ರಾಣಿಗೂ ತಾಯ್ತನ ಅನ್ನುವುದು ಸಹಜ ಗುಣ. ಅದು ಈ ಮಾಸುಚೀಲ ಅಥವಾ ನೀರ್ಮೊಟ್ಟೆಯನ್ನು ತನ್ನ ಹಲ್ಲುಗಳಿಂದ ಹರಿದು ಹೊಕ್ಕಳು ಬಳ್ಳಿಯನ್ನು ತುಂಡರಿಸಿ  ಮರಿಯನ್ನು ನೆಕ್ಕಲು ತೊಡಗುತ್ತದೆ.ಇದು ಮರಿಯ ಉಸಿರಾಟ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮತ್ತು ಸಹಜವಾಗಿಯೇ ಎಲ್ಲಾ ಪ್ರಾಣಿಗಳೂ ತಮ್ಮ ಮಾಸನ್ನು ತಿನ್ನುತ್ತವೆ. ಮಾಸು ಕೀಳುವ ರಭಸದಲ್ಲಿ ಕೆಲವೊಮ್ಮೆ ಮರಿಗಳನ್ನೂ ಅಕಸ್ಮಾತ್ತಾಗಿ ತಿನ್ನುವ ಸಾಧ್ಯತೆಗಳಿವೆ.


೨.  ನಾಯಿ ಸುಮಾರಾಗಿ  ಮರಿ ಹಾಕುವ   ಒಂದು ದಿನ ಮುಂಚಿನಿಂದ ಆಹಾರವನ್ನು ಸರಿಯಾಗಿ ಸೇವಿಸುವುದಿಲ್ಲ. ತಿಂದಿದ್ದನ್ನು ಕಾರಿಕೊಳ್ಳುತ್ತದೆ.  ಹೆಚ್ಚಿನ ನಾಯಿಗಳದು ಕೋಪದ ಗುಣ.ತನಗೆ ನೋವಾದಾಗ, ನೋವಿಗೆ ಕಾರಣವಾದ  ವಸ್ತು ಅಥವಾ ಪ್ರಾಣಿಯ ಮೇಲೆ ಆಕ್ರಮಣ ಮಾಡುತ್ತದೆ. ಹೆರಿಗೆಯ ಸಮಯದಲ್ಲಾದ ನೋವಿನಿಂದ ಪ್ರಚೋದನೆಗೊಂಡ ನಾಯಿ ತನ್ನ ಮರಿಯನ್ನೇ ಕಚ್ಚುವ    ಸಾಧ್ಯತೆಗಳುಂಟು. ಮತ್ತು ಹಾಗೆಯೇ  ಮಾಂಸಹಾರಿ ಪ್ರಾಣಿಯಾದ್ದರಿಂದ ತಿನ್ನಲೂ ಬಹುದು.


೩. ಅಲ್ಲದೆ ಹೆರಿಗೆಯ ನಂತರ ತೀವ್ರವಾಗಿ ಹಸಿವೆಯಾಗುವುದೂ ಅಲ್ಲದೆ ನೋವಿನಿಂದ ಉಂಟಾದ ಕ್ರೋಧವೂ  ತನ್ನ ಮರಿಯನ್ನು ತಾನೇ ತಿನ್ನಲು ಕಾರಣವಿರಬಹುದು.ಏಕೆಂದರೆ ಮನುಷ್ಯರಂತೆ ಅವುಗಳಿಗೆ ವಿವೇಚನಾ ಶಕ್ತಿಯಿರುವುದಿಲ್ಲವಲ್ಲ.ಒಮ್ಮೆ ಹೊಟ್ಟೆ ತುಂಬಿದ ನಂತರ ಸಹಜ ತಾಯಿ ಭಾವದಿಂದ ಉಳಿದ ಮರಿಗಳನ್ನು ಕಾಪಾಡಬಹುದು. ಮತ್ತು ಆಗ ತನ್ನ ಮರಿಗಳನ್ನು  ಮುಟ್ಟಲು ಬಂದವರನ್ನು ಹೆದರಿಸುತ್ತದೆ.ಕೆಲವೊಮ್ಮೆ ಕಚ್ಚುತ್ತದೆ. ಅವುಗಳನ್ನು ಮೆತ್ತಗೆ ಕರೆಯುತ್ತಾ ವಿಶ್ವಾಸಕ್ಕೆ ತೆಗೆದುಕೊಂಡಾಗ ಅದು ನಮ್ಮನ್ನು ನಂಬುತ್ತದೆ.


ಮತ್ತು ಎಲ್ಲಾ ನಾಯಿಗಳೂ ಈ ರೀತಿ ತನ್ನ ಮರಿಯನ್ನು ತಾನೇ ತಿನ್ನುವುದಿಲ್ಲ. ಕೋಪದ ಪ್ರವೃತ್ತಿಯಿರುವ ನಾಯಿಗಳು ಹೀಗೆ ಮಾಡುತ್ತವೆ. [aggresive ness ] ಎಲ್ಲ  ನಾಯಿಗಳೂ  ಕಚ್ಚುವುದಿಲ್ಲವಲ್ಲ... ಹಾಗೇ.   ಅಲ್ಲದೆ ಪ್ರಾಣಿಗಳ ಕೆಲವು ನಡವಳಿಕೆಗಳು ಇನ್ನೂ ಅರ್ಥವಾಗದೆ ಇರುವಂತಹದ್ದು ಬೇಕಷ್ಟಿವೆ.     




 ಮತ್ತೆ ಅಲ್ಲಿಯೇ ಹೋಗಬೇಡಿ.. ಗೊತ್ತಾಯ್ತೆನ್ರೋ '' 
''ಸರಿ,   ಪೇರಳೆ ಮರಕ್ಕೆ ಹೋಗೋಣ '' ಎನ್ನುತ್ತಾ ಕ್ಷಮಾ ಪಾರ್ಥ  ಹೊರಗೆ  ನಡೆದರು.


 ಹೆಚ್ಚು ಕಡಿಮೆತಾಯಿಯ ಸಮಕ್ಕಿದೆ ಮರಿ. ಆದರೂ ತಾಯಿ ಪ್ರೀತಿ.

 ಪ್ರಾಣಿಗಳ ನಡವಳಿಕೆಗಳ ಅಧ್ಯಯನ ತು೦ಬಾ ಆಸಕ್ತಿ ದಾಯಕ. ಅವುಗಳ ವೈವಿಧ್ಯತೆಯನ್ನು, ವೈಚಿತ್ರ್ಯವನ್ನು  ಸೂಕ್ಷ್ಮವಾಗಿ ಗಮನಿಸಿಯೇ ಅರಿತುಕೊಳ್ಳಬೇಕು. ಮನುಷ್ಯರಂತೆ ಮಾತಾಡಬಲ್ಲವಾಗಿದ್ದರೆ ಒಮ್ಮೆ ಕೇಳಿ ನೋಡಬಹುದಿತ್ತು.. ಅಲ್ಲವೇ ?




[ ಈ ಬಗ್ಗೆ  ಇನ್ನೂ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ಹಂಚಿಕೊಳ್ಳಿ]

Tuesday, October 12, 2010

ಹೆಜ್ಜೆ ಮೇಲೆ ಹೆಜ್ಜೆ .. ಚಿತ್ತಾರದರಮನೆಗೆ ಆಯ್ತು ವರುಷ.....!

  ತುಂಬಾ ದಿನಗಳೇ ಆಗಿ ಹೋಯ್ತು. ಬ್ಲಾಗಿನ ಕಡೆ ಮುಖ ಹಾಕಿ..  
ಅಷ್ಟರಲ್ಲೇ ಚಿತ್ತಾರದರಮನೆಗೆ ವರ್ಷವಾಯ್ತೆನ್ನುವ ವಿಚಾರ ನನ್ನ ತಲೆಗೆ ಹೋಗಿದ್ದೂ ಲೇಟಾಗೆ... ಹಾಗಾಗಿ ಬಣ್ಣ ಬಡಿಯ ಬೇಕಾಗಿದೆಯೆ೦ದು ಗಡಿಬಿಡಿಯಲ್ಲಿಯೇ ಬ೦ದೆ....
ಮತ್ತಿನ್ನೇನು....  ಮಾತಿನ ಮಧ್ಯದಲ್ಲಿ ಸಿಕ್ಕಿದ ಮಾಹಿತಿಯ ಬೆನ್ನು ಹಿಡಿದು ಹೋದಾಗ ಸಿಕ್ಕಿದ್ದು ಈ ಚಿತ್ತಾರದರಮನೆಗೊಂದು ಸೈಟು ... 
ಸೈಟು   ಮಾಡಿಟ್ಟು ಕೊ೦ಡ ಮೇಲೆ ಮನೆ ಕಟ್ಟಿದ್ದೂ ಆಯ್ತು.. ಕಲರವ ಶುರು ಆಗಿದ್ದೂ ಆಯ್ತು.
ಸಪ್ಟೆ೦ಬರ್ ನಲ್ಲಿ ಶುರು ಮಾಡಿದ್ದಾದರೂ ಬರೆದದ್ದು ವಿಜಯದಶಮಿ ಕಳೆದ ಮೇಲೆ.. ಅಕ್ಟೋಬರ್ ಮಧ್ಯದಲ್ಲಿ.

ಬಹುಷ: ನಾನೇನಾದರೂ ಬರೆದಿದ್ದು [ಅಥವಾ ಅಕ್ಷರಗಳನ್ನು  ಕುಟ್ಟಿದ್ದು ] ಅ೦ತ ಅ೦ದರೆ ಈ ಬ್ಲಾಗಿನಲ್ಲಿಯೇ.. ಅಲ್ಲಿಯವರೆಗೆ ಬರಹ ಅದು,ಇದು ಮಣ್ಣು ಮಶಿ. ಅ೦ತ ಯೋಚಿಸಿದ್ದೇ ಇಲ್ಲ.

ಮೊದಲ ಪೋಸ್ಟ್ ಹಾಕಿದ ನ೦ತರ ನೂರಾ ಒ೦ದು ಸಲ ನಾನೇ ಓದಿದೆ....!!!!!! ಲಲಿತಾ ಸಹಸ್ರ ನಾಮ ಓದಿದ೦ತೆ.....!!!!  ಬ್ಲಾಗ್ ಅ೦ದರೇನೂ೦ತ ಗೊತ್ತಾಗಲಿಕ್ಕೆ ಸುಮಾರು ದಿನ ಬೇಕಾಯ್ತು. ಅಲ್ಲದೆ ನಾನು ಟೆಕ್ನಾಲಜಿಯಲ್ಲಿ ಸ್ವಲ್ಪ ಹಿ೦ದೆ.
ಪೋಸ್ಟ್ ಹಾಕಿದಾಕ್ಷಣ ಚುಕ್ಕಿ ಚಿತ್ತಾರದ ಮೇಡ್೦ ... ಅಕ್ಕಯ್ಯ...ತ೦ಗಿ... ಅದೇನೋ ಬರೆದಿದ್ದಾರೆ... ಅ೦ದುಕೊ೦ಡು ಸಡಗರದಿ೦ದ ಬ೦ದು ಓದುವವರು  ನೀವು....
 ನನ್ನ ಬ್ಲಾಗ್ ಬರಹಗಳನ್ನು ಓದಿ ಅದನ್ನು ವಿಮರ್ಶಿಸಿ,   ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದವರು ನೀವು .

ನಿಮಗೆ ನನ್ನ ಮೊದಲ ನಮಸ್ಕಾರ.

ಪ್ರತಿಯೊ೦ದು ಕ್ರಿಯೆಗೂ ಪ್ರೇರಣೆ ಬೇಕಾಗುತ್ತದೆ.. ಪ್ರೇರಣೆ ಇದ್ದಲ್ಲಿ ಪ್ರಗತಿಯೂ ಹೆಚ್ಚು . 
ನಾನು ಬರೆದ ಲೇಖನಗಳಾಗಲೀ, ಕಥೆಗಳಾಗಲೀ,  ಕವಿತೆಯಾಗಲೀ, ಚಿತ್ರಗಳಾಗಲೀ ನಿಮ್ಮೆಲ್ಲರ ಪ್ರೋತ್ಸಾಹವಿರದಿದ್ದಲ್ಲಿ  ಬೆಳೆಯುವುದು ಇನ್ನೂ  ನಿಧಾನವಾಗುತ್ತಿತ್ತೇನೋ ..... ಅಥವಾ ಆಸಕ್ತಿ ಕಡಿಮೆಯಾಗುತ್ತಿತ್ತೇನೋ..ಈ ಬ್ಲಾಗಿನ ಮಾಧ್ಯಮದಲ್ಲಿ ನನಗೆ ಪ್ರೇರಣೆಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹ... ಸಹಾಯ ... ಸಾ೦ತ್ವಾನ...
ಈ ಸಾಗರದಲ್ಲಿ ನಾನೊ೦ದು ಬಿ೦ದು. ಚಿಕ್ಕದೊ೦ದು ಚುಕ್ಕಿ. ಈ ಚುಕ್ಕಿಯನ್ನು ವಿಸ್ತಾರ ಮಾಡಲು ಸಹಕರಿಸಿದ್ದೀರಿ.  ತೆವಳುತ್ತಾ,  ತೊದಲುತ್ತಾ ಸಾಗುವ ನನ್ನ ನಡೆಗೊ೦ದು, ನುಡಿಗೊ೦ದು  identity ಒದಗಿಸಿದ್ದೀರಿ. ನನ್ನ ಕ್ರಿಯಾಶೀಲತೆ ಹೆಚ್ಚಿಸಿದ್ದೀರಿ.


ನಿಮಗೆ ನನ್ನ ನಮನ....


ನನ್ನದು  ಬರಹವೋ ಸಾಹಿತ್ಯವೋ ಮತ್ತೆ೦ತದೋ... ಅ೦ತೂ ನನ್ನ ಅಭಿಪ್ರಾಯಗಳನ್ನು ಹ೦ಚಿಕೊಳ್ಳಲು ಇರುವ ಅವಕಾಶ... ಒ೦ದು ವೇದಿಕೆ ಇದು. ನೀವೆಲ್ಲಾ ನನ್ನ ಅಭಿಪ್ರಾಯಗಳನ್ನು ಓದಿದ್ದೀರಿ. ಮೆಚ್ಚಿದ್ದೀರಿ. ತಪ್ಪು ತಿದ್ದಿದ್ದೀರಿ.  ನಿಮ್ಮ ಅಭಿಪ್ರಾಯಗಳ ಮೂಲಕ ನನ್ನ ಒಳ ಅರಿವಿನ ಹರಿವನ್ನು ಹೆಚ್ಚಿಸಿದ್ದೀರಿ. ಪ್ರತಿಕ್ರಿಯಿಸಿದ.. ಓದಿದ... ಪ್ರತಿಯೊಬ್ಬರೂ ನನಗೆ ತು೦ಬಾ ಮುಖ್ಯ.  ಮತ್ತೆ ನಿಮ್ಮೆಲ್ಲರ ಸ೦ಗಡ ನಾನೂ ಬರುತ್ತಿದ್ದೇನೆ....



ನನ್ನ ಕುಟು೦ಬದೊಡಗೂಡಿ ನಿಮಗೆಲ್ಲರಿಗೂ  ನನ್ನ ಹ್ರುತ್ಪೂರ್ವಕ ನಮಸ್ಕಾರಗಳು...