Sunday, April 24, 2011

ಅಪ್ಪಯ್ಯನ ಹಳೆ ಸೈಕಲ್ಲೂ.. ಕೆಂಪಿ ದನವೂ..

 ನನ್ನ ತಂದೆಯವರ ಬಳಿ ಒಂದು ಹಳೆ ಸೈಕಲ್ ಇದೆ.ಸಾವಿರದೊ೦ಬೈನೂರಾ  ಐವತ್ತೇಳನೆ ಇಸವಿಯಲ್ಲಿ ನೂರಾ ಐವತ್ತೈದು ರೂಪಾಯಿಗಳಿಗೆ ಅವರು ಚೌಕಾಸಿ ಮಾಡಿ ಖರೀದಿಸಿದ್ದು ಅದು.  ಅದು ಎಷ್ಟು ಹಳೆಯದು ಎಂದು  ಅವರಿಗೂ  ಗೊತ್ತಿಲ್ಲ..! ಆವರು ಖರೀದಿಸಿದ್ದೇ ಸೆಕೆಂಡ್ ಹ್ಯಾಂಡ್ ಸೈಕಲ್ಲು.. ಈಗ  ಅದರ ಬಹುತೇಕ ಎಲ್ಲಾ ಭಾಗಗಳನ್ನೂ ಬದಲಾಯಿಸಲಾಗಿದೆ.. ! ಎಲ್ಲಾ ಪಾರ್ಟ್ಸೂ ಒಟ್ಟಿಗೆ  ಹಾಳಾಗದು.ಅಂತೆಯೇ   ಹೊಸ ಬಿಡಿ ಭಾಗ ಜೋಡಿಸಿದಾಗ ಹಳೆ ಭಾಗದ ಹಳೆತನ ಮುಂದುವರೆದುಕೊಂಡು ಹೋಗುತ್ತಿರುತ್ತದೆ. ಅಂತೂ   ಅಪ್ಪಯ್ಯನಿಗೆ [ನಮ್ಮ ತಂದೆ ] ವಯಸ್ಸು  ಈಗ ಎಪ್ಪತ್ತೈದು ದಾಟಿದ ಹಾಗೆ ಅದಕ್ಕೂ ಐವತ್ತೊಂದೆರಡಾದರೂ ದಾಟಿದ್ದಿರಲೇ ಬೇಕು!

ಅಪ್ಪಯ್ಯ ಕಷ್ಟ ಜೀವಿ.. ಬಹು ಕಷ್ಟದ ಬಾಲ್ಯ . ಅಪ್ಪಯ್ಯನ ಬದುಕನ್ನು ಅವನೇ ಬದುಕಿದ್ದಾನೆ. ಕಿತ್ತಳೆ ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು  ಹದಿನೈದು ಮೈಲಿ ದೂರದ ಸಂತೆಗೆ ಹೋಗಿ ಮಾರಿ ಸಿಕ್ಕ ಹಣದಲ್ಲಿ ದಿನಸಿ ತಂದು ಆವತ್ತಿನ ಊಟ ಉಣ್ಣುವ ಪರಿಸ್ಥಿತಿ ಇತ್ತಾಗ.   ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ ಖರೀದಿಸಿದ ಸೈಕಲ್ಲು ಅವನ ಬಹುತೇಕ ಕಷ್ಟಗಳನ್ನು ತಾನೂ ಹಂಚಿಕೊಂಡಿದೆ. ಅದಕ್ಕಾಗಿಯೇ ಏನೋ ಅದರ ಮೇಲೆ ತೀವ್ರ  ಅಭಿಮಾನ ಆಪ್ಪಯ್ಯನಿಗೆ. ಜೀವನದ ಕಷ್ಟದ ಸಮಯದಲ್ಲಿ ಜೊತೆ ಕೊಟ್ಟ ಯಾರೇ ಆಗಲಿ, ಅದು ಜೀವವೇ ಆಗಲೀ ಜಡವೇ ಆಗಲೀ ಅದರೆಡೆಗೊಂದು ಅಭಿಮಾನ ಕೊನೆವರೆಗೂ  ಮನುಷ್ಯನಲ್ಲಿ ಬೇರೂರಿರುತ್ತದೆ.ಅದನ್ನು ಬಾರಿ ಬಾರಿಗೂ ವ್ಯಕ್ತ ಪಡಿಸಲೇ ಬೇಕೆಂದಿಲ್ಲ..  

ಬಸ್ಸು, ಇನ್ನಿತರೇ ವಾಹನಾದಿ ಸೌಕರ್ಯಗಳಾದ ಮೇಲೆ ಅಪ್ಪಯ್ಯ ಅದನ್ನು ಚಲಾಯಿಸುವುದನ್ನು ಬಿಟ್ಟಿದ್ದಾನೆ. ಆದರೆ ಮನೆಗೆ ಬರುವ ನೆಂಟರ ಮಕ್ಕಳಾದಿಯಾಗಿ ಅನೇಕ ಜನರು ಸೈಕಲ್ ಹೊಡೆಯುವುದನ್ನು ಅಪ್ಪಯ್ಯನ ಸೈಕಲ್ಲಿನಲ್ಲಿಯೇ ಕಲಿತಿದ್ದಾರೆ. ದೂರದ ಊರಿಂದ ಕೂಲಿಗೆ ಬರುವ ಕೂಲಿಯಾಳುಗಳಿಗೂ ವಾರಕ್ಕೆ ಮೂರು, ನಾಲ್ಕು ದಿನ ದಾರಿ ಹಾಯಿಸುತ್ತಿದ್ದುದು ಅದರ ಚರಿತ್ರೆಯ ಪುಟಗಳಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ಅದರ ಒವರ್ಹ್ವಾಲಿಂಗ್ ಮಾಡಿಸಿ ಜತನ ಮಾಡುತ್ತಿರುತ್ತಾನೆ.
 ಅಪ್ಪಯ್ಯ ಎಷ್ಟೋ ಕಷ್ಟಗಳನ್ನು ಸೈಕಲ್ಲಿನ ಜೊತೆಯಲ್ಲಿಯೇ ಅನುಭವಿಸಿದ್ದಾನೆ.  ಹೋರಾಡಿದ್ದಾನೆ, ಬಿದ್ದಿದ್ದಾನೆ, ಗೆದ್ದಿದ್ದಾನೆ.ಈಗ ಮನೆಯಲ್ಲಿ ಮೊಮ್ಮೊಕ್ಕಳದು ಚಿಕ್ಕ ಪುಟ್ಟ ಸೈಕಲ್ಲಿನಿಂದ ಹಿಡಿದು ಗೇರ್ ಸೈಕಲ್ಲಿನ ವರೆಗೆ ಇದೆ. ಆದರೆ ಅವ್ಯಾವುವೂ ಅಪ್ಪಯ್ಯನ ಸೈಕಲ್ಲಿನ ಯೋಗ್ಯತೆಗೆ ಬರವು. 'ಈಗಿನ  ಹತ್ ಸೈಕಲ್ಲಿನ  ಯೋಗ್ಯತೆ ಯನ್ ಒಂದ್ ಸೈಕಲ್ಲಿನ ಯೋಗ್ಯತಿಗೆ ಸರಿ  ಬತಲೇ..' ಎಂದು ಆಗಾಗ  ಸ್ವಗತದಲ್ಲಿ ಉದ್ಘರಿಸುತ್ತಿರುತ್ತಾನೆ.
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ  ಇರ್ತು...  ಎಂತಾ ಸೈಕಲ್ ಮಾಡ್ತ್ವೆನ..'  ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು  ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
ಅಪ್ಪಯ್ಯನ ಹಳೆ ಕಷ್ಟದ  ಕಥೆಯಲ್ಲಿ ಸೈಕಲ್ಲಿನದು  ಒಂದು ಪ್ರಮುಖ ಪಾತ್ರ. ಆಗ ಕಷ್ಟ ಪಟ್ಟಿದ್ದೆಲ್ಲವೂ ಈಗ ಅಪ್ಪಯ್ಯನದು  ನೆನಪು ಅಷ್ಟೇ.    ಅದು ಹಾಗೆಯೇ..  ಸುಖದ ಮೆಟ್ಟಿಲಿನಲ್ಲಿ ನಿಂತು ತಿರುಗಿ ನೋಡಿದಾಗ ಪಟ್ಟ ಕಷ್ಟ, ನೋವುಗಳೆಲ್ಲವೂ ಸುಖದ ನೋವುಗಳಾಗೆ ಕಾಣಿಸುತ್ತವೆ. ಜಯಿಸಿದ ಸಾರ್ಥಕ ಭಾವ ಅನ್ನುವುದು  ಕಷ್ಟದ ಎಸೆನ್ಸ್ ಒಂದನ್ನು  ಮಾತ್ರ ಉಳಿಸುತ್ತದೆ.

ಹೀಗಿದ್ದಾಗಲೂ ಒಮ್ಮೆ  ಅಪ್ಪಯ್ಯನಿಗೆ ಆ ಸೈಕಲ್ಲನ್ನು ಮಾರುವ ಆಲೋಚನೆ ಬಂದು ಬಿಟ್ಟಿತ್ತು. ''ನಮಗಂತೂ ಇದು ಇನ್ನು ಉಪಯೋಗಿಲ್ಲೇ. . ಸುಮ್ನೆ ಮನೇಲಿ ತುಕ್ಕು ಹಿಡಿಸ ಬದ್ಲು ಹುಟ್ಟಿದಷ್ಟಕ್ಕೆ ಕೊಟ್ ಹಣದ್ರಾತು.   ಲಾಭಕ್ಕಲ್ಲ, ಪುಗಸಟ್ಟೆ ಕೊಡದು ಬ್ಯಾಡ ಹೇಳಿ.. ಏನ್ ಹೇಳ್ತ್ಯ ಗಣಪಯ್ಯ ನೀನು..'' ಎಂದು ಅಪ್ಪಯ್ಯ ತನ್ನ ಸ್ನೇಹಿತನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಹೌದು.  ಅಪ್ಪಯ್ಯನ ಕಷ್ಟ ಸುಖಗಳನ್ನೆಲ್ಲಾ ಕಣ್ಣಾರೆ ಕಂಡ ಆ ಸ್ನೇಹಿತ ಹೇಳಿದ್ದಿಷ್ಟು.'' ಹೌದೌದು.. ನಿಂಗೆ ಇದೊಂದು ಸೈಕಲ್ಲೂ ..ಮತ್ತೆ ಕೆಂಪಿ ದನಾನೂ ಮಾರ್ಕ್ಯಂಡೆ  ಅರಮನೆ ಕಟ್ಸಕೂ ಅಂತ ವಿಚಾರಿದ್ದು  ಕಾಣ್ತು'' ಎಂದು ಒಂದೇ ಮಾತಿನಲ್ಲಿ ಅಪ್ಪಯ್ಯನ
ವಿಚಾರಕ್ಕೆ ಕೊಡಲಿ ಏಟು ಹಾಕಿದ. ಅಪ್ಪಯ್ಯ ನಿಜಕ್ಕೂ ತಾನು ಈ ತರಾ ವಿಚಾರ ಮಾಡಿದೆನಲ್ಲಾ ಎಂದು ಭಾರೀ ಬೇಜಾರು ಮಾಡಿಕೊಂಡದ್ದು ನನಗಿನ್ನೂ ನೆನಪಿದೆ.


ಕೆಂಪಿ ದನವೂ ಅಷ್ಟೇ.ಅದು ನಮ್ಮನೆಯಲ್ಲೇ ಹುಟ್ಟಿದ ಕರು ದೊಡ್ಡದಾಗಿದ್ದು. ಬಹುಷಃ ನಮ್ಮೂರಲ್ಲಿ ಯಾರ ಮನೆಗೆ ಹೋದರು ಕೆಂಪಿ ಅನ್ನುವ ಹೆಸರಿನ ದನವೊಂದಿರುತ್ತದೆ. ದನಗಳಿಗೆ ಕೆಂಪಿ, ಗಂಗೆ, ಗೌರಿ, ಕಪಿಲೆ, ಬೆಳ್ಳಿ, ಈ ಹೆಸರುಗಳು ಮಾಮೂಲು. ಅದು ಹೇಗಿತ್ತಪ್ಪಾ ಅಂದ್ರೆ, ಗಾ೦ವಟೀ ದನ ಕುಳ್ಳಕ್ಕೆ, ಚಿಕ್ಕದಾಗಿ,  ಮುದ್ದಾಗಿ ಇತ್ತು.ಬಣ್ಣ ಕೂಡಾ ಕೆಂಪೇ.  ಕರು ಹಾಕಿದ ದಿನದಿಂದ ಹಾಲು ಕೊಡಲು ಶುರು ಮಾಡಿದರೆ ಮತ್ತೆ ಮೂರು ವರ್ಷಕ್ಕೆ ಮತ್ತೊಂದು  ಕರು ಹಾಕುವ ಹಿಂದಿನ ದಿನದ ವರೆಗೂ ಒಂದು ದಿನವೂ ಬಿಟ್ಟದ್ದಿಲ್ಲ. ಕರು ಹಾಕಿದ ಶುರುವಿನಲ್ಲಿ ಕರುವಿಗೆ ಬಿಟ್ಟು  ಅರ್ಧ ಲೀಟರಿನಷ್ಟು ಹಾಲು  ಕೊಡುತ್ತಾ ಕೊನೆಯಲ್ಲಿ ಅರ್ಧ ಕಾಫೀ ಕಪ್ಪಿನ ಪ್ರಮಾಣಕ್ಕೆ ಇಳಿಯುತ್ತಿತ್ತು. ಅದನ್ನಾದರೂ ಆಯಿ ಎಲ್ಲದಕ್ಕೂ ಮೊದಲಾಗಿ ಕರೆದು ನೋಡುವವರ ಕಣ್ಣು ಬೀಳಬಾರದೆಂದು ಸೆರಗು ಮುಚ್ಚಿ ಅಡುಗೆ ಮನೆಗೆ ಒಯ್ಯುತ್ತಿದ್ದಳು.   ಒಂದು ದಿನ ಒದ್ದಿದ್ದಿಲ್ಲ. ಹಾಯ್ದಿದ್ದಿಲ್ಲ. ದೇವರಿಗೆ ಹೂ ತಪ್ಪಿದರೂ ಕೆಂಪಿ ದನದ ಹಾಲು ತಪ್ಪದು. ಅದು ಇರುವ ವರೆಗೆ ದೊಡ್ದಹಬ್ಬದ   ಗೋ ಪೂಜೆಗೆ  ಬೇರೆ ದನಗಳಿಗೆ ಪ್ರವೇಶವಿರಲಿಲ್ಲ. ಕರು ಹಾಕಿದ ಹತ್ತು ದಿನ ಸೂತಕ ಎಂದು ದೇವರಿಗೆ ನೈವೇದ್ಯಕ್ಕೆ ಅದರ ಹಾಲಿರಲಿಲ್ಲ ಹೊರತಾಗಿ ಕಾಫೀ ಬಳಕೆಗೆ ಅದರದ್ದೇ ಹಾಲು. ಕರು ಹಾಕಿತು ಗಿಣ್ಣ ಸಿಗುವುದೆಂಬ ಭರವಸೆಯನ್ನೆಲ್ಲಾ  ನಾವ್ಯಾರೂ ಇಟ್ಟು ಕೊಳ್ಳುವ ಹಾಗೆಯೇ ಇರಲಿಲ್ಲ.ಸಾರ್ವಕಾಲಿಕ ಹಾಲು ಸರಬರಾಜು ಹಾಗಾಗಿ ಗಿಣ್ಣವಾಗುವುದು ಹೇಗೆ..? ಈ ದನವೇ ಹೆಚ್ಚುಗಾರಿಕೆಗೆ ಕಾರಣವಾಗುವ ಬಗೆ ಹೇಗೆ ಎಂದರೆ ಎಷ್ಟೊತ್ತಿಗೆ ಹೋಗಿ ಹಾಲು ಕರೆದರೂ ಇದ್ದಷ್ಟನ್ನು ಕೊಡುವ ಪರಿ.ಬಂದ ನೆಂಟರಿಗೆ ಕಾಫೀ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲು ಈ ದನವೇ ಕಾರಣ. ಉಳಿದಂತೆ ನಾಲ್ಕಾರು  ದನಗಳು ಕೊಟ್ಟಿಗೆ ತುಂಬಾ  ಇದ್ದವು ಕೂಡಾ.  ಎಲ್ಲವೂ ಕಾಟು ದನಗಳೇ ಆದರೂ ಅದರಲ್ಲಿ ಎರಡು ಬರಡು, ಒಂದು ಇನ್ನೂ ಕರು ಹಾಕದ  ಮಣಕ, ಇನ್ನೆರಡು ಚಾಳಿ.  ಚಾಳಿ ಮಾಡುವ ದನಗಳೆಂದಾದರೂ ಹೇಗೆ, ಅರ್ಧ ಲೋಟ ಹಾಲು ಕರೆಯಲು ಆಯಿ ಇಪ್ಪತ್ತು ಬಾರಿ ಕೊಟ್ಟಿಗೆಗೂ ಮನೆಗೂ ಓಡಾಡಬೇಕಿತ್ತು.



ಹಾಗಾಗಿ ಈ ಎರಡು ಸಂಗತಿಗಳಲ್ಲಿ ಅಪ್ಪಯ್ಯನಿಗೆ ನಿಯತ್ತಿಗಿಂತಾ ಬೇರೆ ಯಾವುದೂ ಕಾಣಿಸಿಲ್ಲ. ತನ್ನ ಕಷ್ಟದ ಸಮಯದಲ್ಲಿ ಇವೆರಡೂ ತನ್ನ ಕೈ ಬಿಟ್ಟಿಲ್ಲ ಎನ್ನುವ ಸಮಾಧಾನ ಅವನಿಗೆ.ಎಷ್ಟೋ ದೊಡ್ಡ ದೊಡ್ಡ ಸಂಗತಿಗಳು ಇದ್ದರೂ ಕೂಡಾ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಿಗುವ ಸಾಂತ್ವಾನ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಈಗ ಕೊಟ್ಟಿಗೆ ತು೦ಬಾ ದೊಡ್ಡ ಜಾತಿಯ ದನಗಳೇ ಇವೆ. ಬೇಕಷ್ಟು ಹಾಲು ಕೊಡುತ್ತವೆ. ಆದರೂ ಕಷ್ಟ ಪಟ್ಟು ಪಡೆದಿದ್ದರ ಸುಖ ಇದರಲ್ಲಿಲ್ಲ..! ಆಗ ಪ್ರತಿ ಕ್ಷಣವೂ ಅನುಭವಕ್ಕೆ ಬರುತ್ತಿತ್ತು.. ಕಷ್ಟದ್ದು.!   ಸುಲಭವಾಗಿ ಸಿಕ್ಕುವುದರೆಡೆಗೆ ಯಾವಾಗಲೂ ತಾತ್ಸಾರವೇ ನಮಗೆ. ಮೊಸರು ತಾಡನೆಗೊಳಗಾಗಿ ಆಗಿ ಕೊನೆಯಲ್ಲಿ ಬೆಣ್ಣೆ ಸಿಗುವುದಿಲ್ಲವೇ..?ಹಾಗೆ..ಜೀವನ ಕೂಡ.. ಅಪ್ಪಯ್ಯನ ಪ್ರಕಾರ. ಸುಖದ ಬೆಲೆ ಗೊತ್ತಾಗಬೇಕಿದ್ದರೆ ಅದಕ್ಕಾಗಿ ಹಗಲಿರುಳೂ  ಹಂಬಲಿಸ ಬೇಕು.

ಕೆಂಪಿ ದನ ಈಗಿಲ್ಲ.. ಆದರೆ ಸೈಕಲ್ಲು ಮಾತ್ರಾ ಅಪ್ಪಯ್ಯನ ಕಷ್ಟಗಳಿಗೆ ಸಾಕ್ಷಿಯಾಗಿ ಇನ್ನೂ ಬಳಕೆಯಲ್ಲಿದೆ.


ವಂದನೆಗಳು.

Friday, April 15, 2011

ರೇಷ್ಮೆ ಹುಳುಗಳ ಜೀವನದಾಟ.. ಪಾಠ..

ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ  ರೇಷ್ಮೆ ಹುಳುಗಳ  ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ   ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ   ಮಾಹಿತಿಗಳೊಂದಿಗೆ ಒಳಗಡೆ    ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ  ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್]  ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು  ಅನುವು ಮಾಡಿಕೊಟ್ಟರು.  
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.

ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು   ಮಾಹಿತಿಯನ್ನೂ ಹೊಂದಿಸಿ  ಮತ್ತಷ್ಟು ವಿಸ್ತರಿಸಿಕೊಳ್ಳಲು  ಅಂತರ್ಜಾಲಮುಖಿಯಾದೆ.


ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು 

ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.


ಬಾಂಬಿಕ್ಸ್ ಮೊರಿ     [  bombyx mori  ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ  ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ   ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.



ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.

ಬಲಿತ ಹುಳುಗಳು 

ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ  ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ. 


ಕೋಶದ ಸಿದ್ದತೆಯಲ್ಲಿರುವ ಹುಳು
 
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ  ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು  sericin .  ಫೈಬ್ರೊಇನ್  ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.

ಪೂರ್ಣಗೊಂಡ ಕೋಶ [cocoon ]




ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ   ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್   ಸಾವಿರ ಅಡಿಗಳಿಂದ ಮೂರು  ಸಾವಿರ ಅಡಿ ಉದ್ದದ ಎಳೆಯಿಂದ  ಮಾಡಲ್ಪಟ್ಟಿರುತ್ತದೆ.  ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.

ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ  ಹಾತೆಯಾಗಿ ಹೊರಬರುತ್ತದೆ.  ಇದು ಸ್ರವಿಸುವ  ಪ್ರೋಟಿಯೋಲಿಟಿಕ್ ಕಿಣ್ವ  ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.

ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ  ವೈವಿಧ್ಯಮಯವಾಗಿ   ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ  ಮಾತ್ರ  ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ  ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..

ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...!  ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!

ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!


ವಂದನೆಗಳು 

Tuesday, April 12, 2011

ಲ೦ಚದ ಮೂಲ..ಇಲ್ಲೂ ಇರಬಹುದು...

ಅಣ್ಣಾಹಜಾರೆಯವರು  ಭ್ರಷ್ಟಾಚಾರ  ವಿರೋಧಿ ಆಂದೋಲನದ ಪ್ರಯುಕ್ತ ಹಮ್ಮಿಕೊಂಡಿದ್ದ ನಿರಶನ ಸತ್ಯಾಗ್ರಹ ತಾತ್ಕಾಲಿಕವಾಗಿ ಮುಗಿದಿದೆ. ಲೋಕಪಾಲ್  ವಿಧೇಯಕವನ್ನು ಮಳೆಗಾಲದಲ್ಲಿ ಮಂಡಿಸುತ್ತೇವೆನ್ನುವ  ಹೇಳಿಕೆಗಳು ಸರಕಾರದಿಂದ ಹೊರಟಿವೆ. ಮಳೆಗಾಲದ ಮಳೆಯಲ್ಲಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಅಥವಾ ಚೂರು ಪಾರು ಮಳೆಯಿಂದ ಮುಗ್ಗುಲು ಹಿಡಿಸದಿದ್ದರೆ ಸಾಕು. ಜಾರಿಗೆ ಬರುವಲ್ಲಿ ಅದಿನ್ನೆಷ್ಟು ಭ್ರಷ್ಟವಾಗಿರುತ್ತದೋ  ಕಾಣೆ. 
ಈ ಕೆಲ ದಿನಗಳಿಂದ ದಿನಪತ್ರಿಕೆ ಓದಲು   ಹೆಮ್ಮೆ ಆಗುತ್ತಿರುವುದು ನಿಜ. ಅಣ್ಣಾ ಹಜಾರೆಯವರೊಂದಿಗೆ ಅದೆಷ್ಟೊಂದು ಬೆಂಬಲದ ಕೈಗಳು.ಸಾವಿರವಲ್ಲ. ಕೋಟಿ ..! ಆ ಮಾಹಾಕಾಳಿಗೂ ಇಷ್ಟು ಕೈಗಳಿರಲಿಲ್ಲ...!  

ಓದುತ್ತ ಓದುತ್ತ ಹೋದಂತೆ ಅರಿವಿಲ್ಲದೆ ಎದ್ದು ನಿಲ್ಲುವಂತಹಾ ವೀರಾವೇಶ ನನಗೆ. ಈ ಎಲ್ಲಾ ತರದ ಲಂಚ, ಆಮಿಷ, ಹಿಂಸೆ,  ಮೋಸಾದಿ ಭ್ರಷ್ಟಾಚಾರಗಳನ್ನೂ ಒಮ್ಮೆಲೇ ಯಾವುದಾದರೂ ಫಿನಾಯಿಲ್ಲೋ, ಮಾರ್ಜಕದಿಂದಲೋ  ತೊಳೆದು ಬಿಡುವ ಆಸೆ ನನಗೆ. ಹಾಗೆ ಮಾಡಲು ಸಾಧ್ಯವಾಗಿದ್ದಿದ್ದರೆ ತೊಳೆದ ನಂತರ ಸುತ್ತಲೂ ಲಕ್ಷ್ಮಣ ರೇಖೆ ಎಳೆದು,   ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು ಮತ್ತೆ ಬಾರದಂತೆ  ಬಂದೋಬಸ್ತ್ ಮಾಡುವ ಬಯಕೆ ನನಗೆ.
ಇಷ್ಟು ವರ್ಷದ ಭ್ರಷ್ಟಾಚಾರದ ಬೇರನ್ನು ಕೀಳಲು ಹೀಗೆಲ್ಲಾ ಮಾಡಿದರೆ ಆದೀತೆ ...?    ಅನಿಸುತ್ತಿದ್ದಂತೆ   ಮತ್ತೆ ತಣ್ಣಗೆ ಕುಳಿತುಕೊಳ್ಳುವುದು...! 
ನಾನಾದರೂ ಏನು ಮಾಡಲು ಸಾಧ್ಯ.. ಮಾಡುವುದಿದ್ದರೆ ನನ್ನ ಪರಿಧಿಯಲ್ಲಿಯೇ ಮಾಡಬೇಕು. ಗಂಡ, ಮನೆ,  ಮಕ್ಕಳು..... ಗೃಹಿಣಿಯಾಗಿ, ತಾಯಿಯಾಗಿ ನಾನೇನು ಮಾಡಬಲ್ಲೆ .. ?  ಯೋಚಿಸುತ್ತಿರುವೆ.

ನಾಲ್ಕು ಜನ ತಾಯಂದಿರ ಗುಂಪಿನಲ್ಲಿ ಕೇಳಿಸುವ ಮಾತುಗಳು ಮಕ್ಕಳ ಹೊರತಾಗಿ ಬೇರೆ ಇರುವುದೇ ಇಲ್ಲ..!.

ತಾಯಂದಿರಂತೂ ಮಕ್ಕಳ ಹೋಂ ವರ್ಕೂ, ಅವರ ಟ್ಯೂಷನ್ನು, ಅವರ ಊಟ,ಅವರ ಕಾಟ  ಇವುಗಳ ಬಗೆಗೆ ಚಿಂತನೆ ನಡೆಸುವರು.

ಮಕ್ಕಳು ಊಟ ಮಾಡೋಲ್ಲ , ಹೋಂ ವರ್ಕ್ ಮಾಡೋಲ್ಲ.. ಓದೋಲ್ಲ ., ಬರಿಯೋಲ್ಲ,  
ಬರೀ ಟೀವಿ ನೋಡು, ಕಂಪ್ಯೂಟರ್ ನೋಡು, ಗೇಂ ಆಡು.  

ಈ ಮಾಡದಿರುವ ಕೆಲಸಗಳನ್ನು ಮಾಡಿಸಲೇ ಬೇಕೆಂಬ ' ಅನಿವಾರ್ಯತೆ 'ಹೆತ್ತವರಿಗೂ.. 

ಊಟ ಮಾಡಿದ್ರೆ ಚಾಕ್ಲೆಟ್ ಕೊಡ್ತೀನಿ.. 
 ದಿನಾ ಹೋಂ ವರ್ಕ್ ಮಾಡಿದ್ರೆ ಮುಂದಿನ ವಾರ ಬೆನ್ 10  ವಾಚು ಕೊಡಿಸ್ತೀನಿ.. 
ಫಸ್ಟ್ ರ್ಯಾಂಕ್  ಬಂದ್ರೆ ವೀಡಿಯೋ ಗೇಮ್ ಕೊಡಿಸ್ತೀನಿ..

ಚಾಕ್ಲೆಟ್ ಗಾಗಿ, ಟಾಯ್ ವಾಚ್ ಗಾಗಿ, ವೀಡಿಯೋ ಗೇಂ ಗಾಗಿ [ ಸ್ವಲ್ಪ ಹೆಚ್ಚು ಕಡಿಮೆ ] ಹೇಳಿದ    ಕೆಲಸವಾಗುವುದು ...! 
  ಮತ್ತು ಮುಂದೆ  ಕೆಲಸವಾಗಲು ಈ ತರದ   'reinforcement 'ಅನಿವಾರ್ಯವಾಗಿ ಹೆಚ್ಚು ಹೆಚ್ಚು ಬೇಕಾಗಲು ಶುರುವಾಗುವುದು...! 


ಮಕ್ಕಳಿಗೆ ಉತ್ತೇಜನ, ಪ್ರೋತ್ಸಾಹ ಬೇಕೇ ಬೇಕು .. ಅನ್ನುವ ಮಾತು ನಿಜ.  ಮೊದ ಮೊದಲು ಊಟದಲ್ಲಾಗಲೀ, ಓದಿನಲ್ಲಾಗಲೀ ಆಸಕ್ತಿ ಮೂಡಿಸಲು ಈ ರೀತಿಯ ಬಾಹ್ಯ   ಉತ್ತೇಜನ ಅವಶ್ಯವೇ.   ಆದರೆ ನಂತರದಲ್ಲಿ ಅದು ಕ್ರಮೇಣ ಕಡಿಮೆಯಾಗಿ ಆಂತರಿಕವಾಗಿ  ಉತ್ತೇಜಿಸಲ್ಪಡಬೇಕು. ಆದರೆ ಆಗುತ್ತಿಲ್ಲ . ಏಕಿರಬಹುದು...? ಉತ್ತರ ನಿಮಗೂ ಗೊತ್ತಿಲ್ಲದ್ದಲ್ಲ. 
 ಪ್ರಕೃತಿಯೊಂದಿಗೆ ಬೆರೆಯಲೇ ಆಗುತ್ತಿಲ್ಲ..   ಮಕ್ಕಳಿಗೆ ಹೊರಾಂಗಣ ಆಟವಾಡಲೇ  ಸಾಧ್ಯವಾಗುತ್ತಿಲ್ಲ.  ಆಟದಲ್ಲಿ ಮೈ ಮರೆಯುತ್ತಿಲ್ಲ. ಶಾಂತತೆಯಿಂದ ನಿದ್ರಿಸಲಾರರು.

ಒಂದನೆಯದಾಗಿ  ಟ್ಯೂಷನ್ನು,  ಹೋಂ ವರ್ಕಿನಿಂದ ಆಡಲು  ಸಮಯವಿಲ್ಲ. ಇನ್ನೊಂದು ಆಡಲು ಮನೆ ಎದುರಿಗೆ ಅಂಗಳವೇ ಇಲ್ಲ. ಈಗಿನ ಶಾಲೆಗಳಲ್ಲೂ ಕೂಡಾ ಆಟದ ಬಯಲು ಇರದು.. ಇರುವ ಜಾಗದಲ್ಲೆಲ್ಲಾ ಗೋಡೆಗಳನ್ನು ಕಟ್ಟಿ ಮತ್ತಷ್ಟು ಮಕ್ಕಳನ್ನು ತುಂಬಿದರೆ ಆಡಲು ಜಾಗವೆಲ್ಲಿ..?  


ಮಕ್ಕಳಿಗೆ ಆಟದಿಂದ ದೈಹಿಕ ಶ್ರಮದೊಂದಿಗೆ ಮಾನಸಿಕ ವಿಕಾಸವೂ ಆಗುವುದು ..ಹಸಿವೂ ಆಗುವುದು , ಹಠವೂ ಕಡಿಮೆಯಾಗುವುದು .. ಅನ್ನುವುದನ್ನು  ಪತ್ರಿಕೆಗಳಲ್ಲಿ ಓದುವೆವು. ಹಿರಿಯರು ಹೇಳುವರು. ನಮಗೂ ಗೊತ್ತು. ಎಲ್ಲಾ ಸರಿ. ಆಡಲು ಎಲ್ಲಿಗೆ ಕಳಿಸೋಣ..? ದಿನಾಲು ಎಲ್ಲರಿಗೂ  ದೂರದ  ಪಾರ್ಕ್ ಗೆ ಕರೆದೊಯ್ಯಲು ಸಾಧ್ಯವೇ?  

ನಗರಗಳಲ್ಲಿ  ಆಡಲು ರಸ್ತೆಯೇ ಗತಿ.. ಅಲ್ಲಿ ವಾಹನಗಳ ಭೀತಿ, ಮಕ್ಕಳನ್ನು ಅಪಹರಿಸುವವರ ಭೀತಿ.. ಬೀದಿ ನಾಯಿಗಳ ಭೀತಿ.. ಹೀಗೆ ಭೀತಿಗಳ ಮೂಟೆಯನ್ನೇ ಮಕ್ಕಳಲ್ಲಿ ತುಂಬಿ ಕಳುಹಿಸುವವರು ನಾವು.  ಹೀಗಿರುವಾಗ  ಮಕ್ಕಳ ಕಣ್ಣುಗಳಲ್ಲಿ ಭೀತಿಯ ಹೊರತಾಗಿ ಬಣ್ಣಗಳು ಮೂಡಲು ಸಾಧ್ಯವೇ..? ರಸ್ತೆಯ ಧೂಳಿನಲ್ಲಿ, ತಾರಿನಲ್ಲಿ, ಕಸದ ಬುಟ್ಟಿಗಳಲ್ಲಿ, ಚರಂಡಿಯಂಚಿನಲ್ಲಿ  ಕನಸುಗಳು  ಅರಳಬಲ್ಲದೇ..? ಪ್ರಪಂಚದೆಡೆಗೊಂದು ಸಾತ್ವಿಕ ಕುತೂಹಲ ಸೃಷ್ಟಿಯಾಗ ಬಲ್ಲದೇ..? ಅವರ ಸುತ್ತಲಿನ   ಪರಿಸರ  ಅವರಿಗೆ  ಆಪ್ಯಾಯಮಾನವಾಗಬಲ್ಲುದೆ..?

ಏನು ಮಾಡೋಣ..? ಅವರಿಗೆ  ಬಣ್ಣಗಳನ್ನು, ಕನಸುಗಳನ್ನು, ಕುತೂಹಲವನ್ನು  ಕೊಡಲು ಸಾಧ್ಯವಿಲ್ಲದ ಗಿಲ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಏನೇನು ಸವಲತ್ತುಗಳನ್ನು ಕೊಡಲು ಸಾಧ್ಯವಾಗುವುದೋ ಅವೆಲ್ಲವನ್ನೂ ಕೊಡಲು ಶುರುಮಾಡುವೆವು ನಾವು. 

ಪ್ರಕೃತಿಯ ಸಾಂಗತ್ಯದ ಸವಿ  ನಾಲ್ಕು ಗೋಡೆಗಳ ಮಧ್ಯ ಸಿಗುವುದೇ..? ಹೊಳೆಯ ನೀರು,   ಮಾವಿನ ಮರ, ಗುಬ್ಬಚ್ಚಿ, ಕಾಕಮಟ್ಲೆ ಹಣ್ಣು,  ನಾನಾ ತರದ ಪ್ರಾಣಿ ಪಕ್ಷಿಗಳೂ, ಗುಡ್ಡ, ಬೆಟ್ಟ ಇವುಗಳನ್ನೆಲ್ಲಾ  ನಗರದಲ್ಲಿ ಎಲ್ಲಿಂದ ತರಲು ಸಾಧ್ಯ..?  ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಲ್ಲಿ ಅವರ ಸಾಂಗತ್ಯದಿಂದಲೂ ವಂಚಿತರು ಈ ಮಕ್ಕಳು.    ಪರಿಧಿಯೊಳಗಣ ಬದುಕು.ವಿಸ್ತಾರಕ್ಕೆಲ್ಲಿದೆ ಬಯಲು..?  ಮಕ್ಕಳ ಮನಸ್ಸು ವ್ಯಗ್ರ ಗೊಳ್ಳದೆ  ಮತ್ತೇನಾಗುವುದು..? 

ಅಳಬಾರದೆನ್ನುವುದಕ್ಕೆ ಲಂಚ.. ಊಟಕ್ಕೆ ಲಂಚ, ಓದಲು ಲಂಚ. ಬರೆಯಲು ಲಂಚ..  ಹೀಗೆ ಪ್ರತಿಯೊಂದಕ್ಕೂ ಲಂಚ ಕೊಡುವುದಷ್ಟೇ ನಮಗೆ ಉಳಿಯುವುದು.. !

 ನಾನಂತೂ ಅಂದುಕೊಂಡಿದ್ದೇನೆ,   ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!
[ಅನಿವಾರ್ಯವಾಗಿ ] ಪೋಷಕರೇ ಮೊದಲ ಗುರು.. !!!
ಇಂದಿನ ಮಕ್ಕಳೇ ಮುಂದಿನ ..............?

ಮನುಷ್ಯ ಬಾಲ್ಯದಲ್ಲಿ ಸ್ವಚ್ಚವಾಗಿ, ನೇರವಾಗಿಯೇ ಇರುವನು.. ಹಂತಗಳು ಬದಲಾಗುತ್ತಾ ಬಂದಂತೆ ಪರಿಸ್ಥಿತಿಯ  ಸಾಂದ್ರತೆಗನುಗುಣವಾಗಿ ಬಾಗುತ್ತಾ ಹೋಗುವನು...  


ಈ ಜೀವನ ವಕ್ರೀಭವನ ...  !  ಅಲ್ಲವೇ..?



ಇದು ಒಂದು ದಿನದ ಸಮಸ್ಯೆಯಲ್ಲ. ಮಕ್ಕಳ ಪೂರಾ ಬಾಲ್ಯದ ಸಮಸ್ಯೆ.. ಅಪ್ಪ, ಅಮ್ಮಂದಿರ ಅನಿವಾರ್ಯತೆ..

ಹೇಗೆ ಇದರ ವಿರುದ್ಧ ಹೋರಾಡೋಣ ಹೇಳಿ..?   ಪರಿಹಾರ ಹುಡುಕಲು  ಶುರು ಮಾಡಿರುವೆ.

ವಂದನೆಗಳು.

Sunday, April 3, 2011

ಕೊಕ್ಕರೆ ಬೆಳ್ಳೂರಿನ ಒ೦ದಷ್ಟು ಕೊಕ್ಕರೆಗಳು..


  ಇವು ಪೇ೦ಟೆಡ್ ಸ್ಟಾರ್ಕ್ ಗಳ೦ತೆ..





ಇಲ್ಲಿಯ  ಪ್ರತಿ ಮರದ ಮೇಲೂ   ಇವುಗಳದೇ  ಸ೦ಸಾರ..






ಗು೦ಪು ಗು೦ಪಾಗಿ ಮರದ ಮೇಲೆ ಕುಳಿತಿರುವ ಇವುಗಳನ್ನು ನೋಡುವುದೇ ಚ೦ದ.



 ಹೊಸಾ ಜೋಡಿ..ಇರಬಹುದೆ..?



 ಇಲ್ಲೇ ಎಲ್ಲೋ ಇದೆ ನನ್ನ ಗೂಡು..?


 ಹಾರುವೆ ಬಾನೆತ್ತರಕೆ..


 ಫೋಟೋಕ್ಕೆ ಫೋಸ್ ಕೊಡಲೆ೦ದೇ ಹೀಗೆ  ಕುಳಿತಿದ್ದು.



 ಮಕ್ಕಳು ಮರಿಗಳು  ಸ೦ಸಾರ.



 ಒಳ್ಳೆ ವಕೀಲ ಹಕ್ಕಿಗಳ ತರಾ ಕಾಣುತ್ವೆ.. ಮಕ್ಕಳಿಗೆ ಬಿಸಿಲು ತಾಗದಿರಲಿ.. ಎ೦ದು ರೆಕ್ಕೆ ಮರೆ ಮಾಡಿವೆ..!



 ಕತ್ತು ಕೊ೦ಕಿಸಿದಳಾ ಬಾಲೆ..


ಎಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು