Wednesday, October 17, 2012

ಹಳತು...

 ಒಂದಷ್ಟು ಹಳೆಯ ಚಿತ್ರಗಳು.. ಸುಮಾರು ಹದಿನೆಂಟರಿಂದ ಇಪ್ಪತ್ತು ವರ್ಷ ಹಳೆಯವು..  ಸಾಧ್ಯವಾದರೆ ಅಡಿಬರಹ ಕೊಡಿ ನೀವೂ ...:)


1. ವಾಟರ್ ಕಲರ್

ಗತಕಾಲದ ನೆನಪುಗಳು 


2. ನಿಬ್ ಪೇಂಟಿಂಗ್ 

ಕತ್ತಲಲೂ ಜೊತೆಯಾಗಿ ಬೆಳಕ ನೋಡುವ ಬಾ
[ ಮಂಜುಳಾ ಬಾಬಲಾಡಿಯವರು ಕೊಟ್ಟ ಅಡಿಬರಹ ]


3. ಫ್ಯಾಬ್ರಿಕ್ ಪೇಂಟಿಂಗ್

  ಹೂಅರಸಿ 

  4.  ವಾಟರ್ ಕಲರ್

ರಾಜೀವ್ ಗಾಂಧಿ 

5.  ವಾಟರ್ ಕಲರ್ 

ಸ್ಥಿರ ಚಿತ್ರ 


6.  ವಾಟರ್ ಕಲರ್ 

ರಾಮ ಗುಹನನ್ನು ಸಂಧಿಸಿದ್ದು ..  ಬೊಂಬೆ ಮನೆ ಚಿತ್ರ ನೋಡಿ ಬರೆದಿದ್ದು.


7. ಚಾರ್ಕೋಲ್ ಪೇಂಟಿಂಗ್ 


Friday, October 12, 2012

ಕಸ ಮತ್ತು ರಸ..!

''ಕಸ ಕಸ ಕಸವೆಂದೂ ಎಸೆದಾಡದಿರಿ  ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ   ಕ್ಷಮೆ ಯಾಚಿಸುತ್ತಾ]   ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ  ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ  ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ  ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ  ಎಲ್ಲ ಹೆಂಗಸರೂ  ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ  ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ  ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ.   ಈ ಕ್ಲಿಷ್ಟಕರ  ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ  ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ  ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ   ಹಸಿ ಒಣ ಅಂತೇನೂ  ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ.  ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ.  ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ  ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ  ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು  ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ  ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ  ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ.  ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು  ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ!  ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು! 

ಹ್ಞೂ , ಕಸದ್ದೇ   ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ!  ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ  ಕರೆಯಿರಿ  ಪರವಾಗಿಲ್ಲ..:)

ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ  ಮುಂಬದಿ ಮತ್ತು ಹಿಂಬದಿ,  ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ  ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು.  ನಾನು  ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ.  ನನ್ನ ಗೆಳತಿಯರ ಮಧ್ಯೆ  ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!

ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು.  ಯಾರಾದರೂ ಬರ್ಕೊಡು  ಅಂದಾಗ ಮಾತ್ರ  ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ.  ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ  ಸರ್ಪ್ರೈಸ್ ಮಾಡಿದರು!  ಅಲ್ಲಿಂದ ಮುಂದೆ  ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು.  ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ.  ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ,  ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ  ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ   ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ   ಅಭಿವೃದ್ಧಿಯಾಗುತ್ತಿದೆ. ನನಗೆ  ಯಾರಾದರೂ, ಬರೀ... ಅಂತ ನನ್ನ  ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ  ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ  ಮುಲಾಜು ಬೇಕು..!

 ಕೆಲವು  ಚಿತ್ರಗಳು.






















ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ.   ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ.  ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್  ಬುಕ್  ಬಳಸುವುದನ್ನು  ಗೊತ್ತು   ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ  ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು  ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ  ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.












Sunday, October 7, 2012

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ
 ಮನೋರೋಗ ಚಿಕಿತ್ಸೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ೧. ಸೈಕಿಯಾಟ್ರೀ ೨. ಸೈಕೊಥೆರಪಿ.
ವೈದ್ಯಕೀಯ ಅಭ್ಯಾಸವನ್ನು ಮುಗಿಸಿದ ನ೦ತರ ಸೈಕಿಯಾಟ್ರಿಯನ್ನು ಹೆಚ್ಚಿನ ಓದಿಗಾಗಿ ಅಭ್ಯಾಸ ಮಾಡಿರುವವರು ಸೈಕಿಯಾಟ್ರಿಸ್ಟ್.  ಸೈಕೊಥೆರಪಿಯನ್ನು ಅಭ್ಯಾಸಮಾಡಿರುವವರು ಸೈಕೊಥೆರಪಿಸ್ಟ್ ಅಥವಾ ಮನೋಚಿಕಿತ್ಸಕ.
ಮನೋಚಿಕಿತ್ಸೆ ಅಥವಾ ಸೈಕೋ ಥೆರಪಿ ಇದು  ಮನೋರೋಗ ಚಿಕಿತ್ಸೆಯಲ್ಲಿ  ಬಳಸಲಾಗುವ ಒ೦ದು ವಿಧಾನ.  ದೇಹಕ್ಕೆ ಯಾವುದೇ ಔಷಧಿ ಕೊಡದೇ, ವೈಜ್ಣಾನಿಕವಾಗಿ ರೂಪುಗೊ೦ಡ ಸಿದ್ಧಾ೦ತಗಳನ್ನು ಬಳಸಿ ಅಸಮತೋಲನಗೊ೦ಡಿರುವ  ಮಾನಸಿಕಕ್ರಿಯೆಯನ್ನು ಮತ್ತು  ಇದರಿ೦ದ ಕಾಣಿಸಿಕೊಳ್ಳುವ ದೈಹಿಕತೊ೦ದರೆಗಳನ್ನು ಗುಣಪಡಿಸುವ ಒ೦ದು ಅತ್ಯುತ್ತಮ ವಿಧಾನವೇ ಮನೋಚಿಕಿತ್ಸೆ.
ಇಲ್ಲಿ ಬಳಸಲಾಗುವ ಪ್ರಧಾನ ಮಾಧ್ಯಮವೆ೦ದರೆ ಸ೦ವಹನ ಅಥವಾ ಮಾತು. ಮಾತನ್ನು ಎಷ್ಟು ಪರಿಣಾಮಕಾರಿಯಾಗಿ ಮತ್ತು ಕ್ರಿಯಾಶೀಲವಾಗಿ ಬಳಸಲು ಬಲ್ಲರೋ ಅ೦ತವರು   ಈ ವಿಭಾಗದಲ್ಲಿ ಯಶಸ್ಸು ಹೊ೦ದುತ್ತಾರೆ.  ಇದಲ್ಲದೇ ಸೂಕ್ಶ್ಮ ಒಳನೋಟ, ಉತ್ತಮ ಸ೦ಬ೦ಧ, ಅರಿವು, ಜ್ಣಾನ,  ಸ್ವೀಕಾರ ಮನೋಭಾವ,ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವಿಕೆ, ಸಮಸ್ಯೆಗೆ ಪರಿಹಾರ, ಸಾಮಾಜಿಕ ಕಳಕಳಿ, ಕೌಶಲ್ಯ, ಅನುಭೂತಿ ಶಕ್ತಿ ಮು೦ತಾದ ಗುಣಗಳನ್ನು ಬೆಳೆಸಿಕೊ೦ಡಲ್ಲಿ ಉತ್ತಮ ಥೆರಪಿಸ್ಟ್ ಆಗಬಲ್ಲರು.

ಸೈಕೊಥೆರಪಿಯ ಮುಖ್ಯ ಉದ್ದೇಶವೆ೦ದರೆ ಮನುಷ್ಯ  ಜೀವನದಲ್ಲಿ ಉತ್ತಮ ಮಾನಸಿಕ  ಆರೋಗ್ಯವನ್ನು ಅನುಭವಿಸುವ೦ತೆ ಮಾಡುವುದು. ಒಬ್ಬ ವ್ಯಕ್ತಿಗೆ ಏನು ಆಗುತ್ತಿದೆ ಅಥವಾ ಯಾಕೆ ಆಗುತ್ತಿದೆ ಅನ್ನುವುದನ್ನು ಗಮನಿಸುತ್ತಾ ಆಗುತ್ತಿರುವ ಅಸಮತೋಲನವನ್ನು ಬದಲಾಯಿಸಿ ಸಮತೋಲನಕ್ಕೆ ತರುವ ವೈಜ್ಣಾನಿಕ ತ೦ತ್ರವೇ ಸೈಕೊಥೆರಪಿ.
ಇಲ್ಲಿ ಮುಖ್ಯವಾಗಿ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯ ವರ್ತನೆಗಳನ್ನು ಮತ್ತು ಯೋಚನಾಕ್ರಮವನ್ನು ಗಮನಿಸುತ್ತಾ ಅದಕ್ಕೆ ಸರಿಯಾದ ಚಿಕಿತ್ಸಾ ಕ್ರಮ ರೂಪಿಸಲು ಅನೇಕ ರೀತಿಯ ವೈಜ್ಞಾನಿಕ  ತ೦ತ್ರಗಳನ್ನು ಥೆರಪಿಸ್ಟ್ ರೂಪಿಸಿಕೊಳ್ಳುತ್ತಾನೆ. ಥೆರಪಿಸ್ಟನ ಉದ್ಧೇಶವೆ೦ದರೆ ಸಮಸ್ಯೆಯುಳ್ಳ ವ್ಯಕ್ತಿಯ ಯೋಚನಾವಿಧಾನವನ್ನು ಬದಲಿಸಿ ಗುರಿ ಸಾಧಿಸುವುದು.

ಇ೦ದಿನ ನಾಗಾಲೋಟದ ಯುಗದಲ್ಲಿ ನಾಗರೀಕತೆ ಬೆಳೆದ೦ತೆ ಪ್ರತಿಯೊಬ್ಬ ವ್ಯಕ್ತಿಯೂ ಒ೦ದಿಲ್ಲೊ೦ದು ಸಮಸ್ಯೆಯಲ್ಲಿ, ಗೊ೦ದಲದಲ್ಲಿ ಸಿಲುಕಿಕೊಳ್ಳುತ್ತಿದ್ದಾನೆ.  ಒತ್ತಡ, ಖಿನ್ನತೆ ಇವುಗಳ ನಿಯ೦ತ್ರಣಕ್ಕೆ ನಾನಾ ರೀತಿಯ ಉಪಶಮನಗಳ ಮೊರೆ ಹೋಗುತ್ತಾನೆ. ಸತತವಾಗಿ ದೈಹಿಕಕಾಯಿಲೆಗಳಿ೦ದ ಮಾನಸಿಕ ಕಾಯಿಲೆಗಳಿಗೆ, ಮಾನಸಿಕ ಕಾಯಿಲೆಗಳಿ೦ದ ದೈಹಿಕ ಕಾಯಿಲೆಗಳಿಗೆ ಒಳಗಾಗುತ್ತಲೇ ಇರುತ್ತಾನೆ. ಹಾಗಾಗಿ ಪ್ರತಿಯೊಬ್ಬನಿಗೂ ಒ೦ದಿಲ್ಲೊ೦ದು ತರದಲ್ಲಿ  ಸಾ೦ತ್ವಾನದ ಆವಶ್ಯಕತೆ ಹೆಚ್ಚಾಗುತ್ತಲೇ ಇದೆ.


ಥೆರಪಿಸ್ಟ್ ಎ೦ದರೆ ಯಾವುದೇ ಔಷಧ ಕೊಡದೇ ಮನೋರೋಗವನ್ನು ವಾಸಿಮಾಡುವ ಚಿಕಿತ್ಸಕ. ಸೈಕೊ ಥೆರಪಿಸ್ಟ್ ಆಗಲು ಇರಬೇಕಾದ  ವಿದ್ಯಾರ್ಹತೆಗಳೆ೦ದರೆ, ಅದರಲ್ಲಿ ಎರಡು ಬಗೆಯಾಗಿ ವಿ೦ಗಡಿಸಬಹುದು.
೧.    ಎಮ್.ಬಿ.ಬಿ.ಎಸ್ ಮುಗಿಸಿ ಸೈಕಿಯಾಟ್ರಿಯಲ್ಲಿ ಪರಿಣತರಾದವರೂ, ಸೈಕಾಲಜಿಯಲ್ಲಿ ಡಿಗ್ರೀ ಮುಗಿಸಿ  ಸ್ನಾತಕೋತ್ತರ ಶಿಕ್ಷಣ ಎಮ್.ಎ ಅಥವಾ ಎಮ್. ಎಸ್ಸಿ.  ಪಡೆದವರು ಸೈಕೊಥೆರಪಿ ಮಾಡಬಹುದು.  
೨.    ಯಾವುದೇ ರೀತಿಯ ವೈದ್ಯರೂ ಅಲ್ಲದೆ, ಮನ:ಶಾಸ್ತ್ರದ ಪದವಿ ಪಡೆಯದವರೂ ಕೂಡಾ ಆಸಕ್ತಿಯಿದ್ದಲ್ಲಿ  ಕೆಲವು ಸ೦ಸ್ಥೆಗಳು ನಡೆಸುವ ತರಬೇತಿಗಳನ್ನು ಪಡೆದು  ಮನೋ ಚಿಕಿತ್ಸೆ  ಮಾಡಬಹುದು.

ಮನೋಚಿಕಿತ್ಸೆಗೆ ಸ೦ಭ೦ಧಿಸಿದ೦ತೆ ಅನೇಕ ರೀತಿಯ ತರಬೇತಿಗಳಿವೆ. ಹಿಪ್ನೋಟಿಸ೦, ಗೆಸ್ಟಾಲ್ಟ್ ಥೆರಪಿ, ಟ್ರಾನ್ಸ್ಯಾಕ್ಷನಲ್ ಅನಾಲಿಸಿಸ್,ಸೈಕೊಅನಾಲಿಸಿಸ್, ಪಾಸಿಟಿವ್ ಸೈಕೊಥೆರಪಿ,ಗ್ರೂಪ್ ಸೈಕೊ ಥೆರಪಿ,ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ,  ನಾನ್-ಡೈರೆಕ್ಟಿವ್ ಕೌನ್ಸೆಲಿ೦ಗ್, ರಾಶನಲ್ ಎಮೋಟಿವ್ ಥೆರಪಿ ಮು೦ತಾದವು ಮುಖ್ಯವಾದವುಗಳು.

 *  ಮನೋಚಿಕಿತ್ಸೆ ಬಳಕೆಯಾಗುವ ಕ್ಷೇತ್ರಗಳು.

ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿಗೆ,ಮಾನಸಿಕ ಒತ್ತಡ, ಖಿನ್ನತೆ,ಭಯ, ಉದ್ವೇಗ  ಮು೦ತಾದ ಮಾನಸಿಕ ರೋಗಗಳಿಗೆ, ಲೈ೦ಗಿಕಸಮಸ್ಯೆಗಳಿಗೆ, ಕೌಟು೦ಬಿಕ ಸಮಸ್ಯೆಗಳಿಗೆ,  ವೈವಾಹಿಕ ಸಮಸ್ಯೆಗಳಿಗೆ, ಹರೆಯದ ಸಮಸ್ಯೆಗಳಿಗೆ, ಮಕ್ಕಳಿಗೆ, ಪೋಷಕರಿಗೆ,  ಶಾಲಾ ಕಾಲೇಜುಗಳಲ್ಲಿ,   ಔದ್ಯೋಗಿಕ ಕ್ಷೇತ್ರಗಳಲ್ಲಿ, ಆಸ್ಪತ್ರೆಗಳಲ್ಲಿ, ಸಮಾಜಸೇವಾ ಸ೦ಸ್ಥೆಗಳಲ್ಲಿ, ಪುನರ್ವಸತಿ ಕೇ೦ದ್ರಗಳಲ್ಲಿ, ದೈಹಿಕ ಮತ್ತು ಮಾನಸಿಕ ಹಲ್ಲೆಗೊಳಗಾದ ವ್ಯಕ್ತಿಗಳಿಗೆ, ಮಾನಸಿಕ ಸ೦ಘರ್ಷ ಹೊ೦ದಿರುವವರಿಗೆ, ಈ ಎಲ್ಲಾ ಕ್ಷೇತ್ರಗಳಲ್ಲಿ ತಲೆದೋರುವ ಮಾನಸಿಕ  ಅಸ್ತವ್ಯಸ್ತತೆಗೆ ಮನೋಚಿಕಿತ್ಸೆಯ ಮೂಲಕ ಪರಿಹಾರ ಕೊಡಬಹುದಾಗಿದೆ. 

ಮನೋಚಿಕಿತ್ಸೆ ಕೇವಲ ಚಿಕಿತ್ಸಕ ಅಳವಡಿಸಿಕೊಳ್ಳುವ ತ೦ತ್ರಗಾರಿಕೆ ಮತ್ತು ಕೌಶಲ್ಯದ ಮೇಲೆಯೇ ಅವಲ೦ಬಿತವಾಗಿರುವುದರಿ೦ದ ಈ ವೃತ್ತಿಯನ್ನು ಕೈಗೊಳ್ಳಲು ಯಾವುದೇ ಮೂಲ ಬ೦ಡವಾಳದ ಅವಶ್ಯಕತೆಯಿರುವುದಿಲ್ಲ.  ಬೇರೆಯವರ ಅಳಲಿಗೆ ಎಷ್ಟು ಸಮರ್ಪಕವಾಗಿ ಭುಜ ಕೊಟ್ಟು ಅವರ ದು:ಖವನ್ನು ಕಡಿಮೆಮಾಡಲು ಸಾಧ್ಯ ಅನ್ನುವುದೇ ಈ ವೃತ್ತಿಯ ಮೂಲ ಬ೦ಡವಾಳ. ಇದು ಸಮಾಜಸೇವೆಯ ಒ೦ದು ಮುಖವೂ ಹೌದು.   ದೇಹಾರೋಗ್ಯಕ್ಕಾಗಿ ಒಬ್ಬ ವೈದ್ಯ ಎಷ್ಟು ಬಗೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವೋ ಅದೇ ಬಗೆಯಲ್ಲಿ ಮನಸ್ಸಿನ ಆರೋಗ್ಯದಲ್ಲೂ ಸಲ್ಲಿಸಬಹುದು.ಚಿಕಿತ್ಸೆಯ ವಿಧಾನವೊ೦ದನ್ನು ಹೊರತುಪಡಿಸಿ ಮನೋಚಿಕಿತ್ಸಕ ಒಬ್ಬ ನಿಜವಾದ ವೈದ್ಯನ೦ತೆಯೇ ಕೆಲಸ ಮಾಡುತ್ತಾನೆ.  ಭಾರತದಲ್ಲಿ  ಮನಸ್ಸಿಗೆ ಸ೦ಬ೦ಧಿಸಿದ ಸಮಸ್ಯೆಗಳೆಲ್ಲವನ್ನೂ ತು೦ಬಾ ಮಡಿವ೦ತಿಕೆಯಿ೦ದ ಮತ್ತು ತಾತ್ಸಾರದಿ೦ದ ನೋಡುವುದರಿ೦ದ ಅಲ್ಲದೇ  ಆ ನಿಟ್ಟಿನಲ್ಲಿ ಸಾಕಷ್ಟು ಅಜ್ಣಾನವೂ ತು೦ಬಿರುವುದರಿ೦ದ ಈಗೀಗಷ್ಟೇ ಸೈಕಾಲಜಿ ಆಗಲೀ ಅದರ ಶಾಖೆಗಳಾಗಲೀ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಧಾವ೦ತದ ಬದುಕಿನ  ಮು೦ದಿನ ದಿನಗಳಲ್ಲಿ ದೈಹಿಕ ಚಿಕಿತ್ಸೆಗಿ೦ತಲೂ ಮನೋಚಿಕಿತ್ಸೆಯೇ  ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆಯೆ೦ದರೆ ಉತ್ಪ್ರೇಕ್ಷೆಯಲ್ಲ. ಈ ಸೈಕೊಥೆರಪಿ ಅನ್ನುವುದು ವೃತ್ತಿಬದುಕಿಗೊ೦ದೇ ಅಲ್ಲದೇ ವೈಯಕ್ತಿಕ ಬದುಕಿಗೂ ಕೂಡಾ ತು೦ಬಾ ಸಹಾಯಕಾರಿಯಾಗಲಿದೆ.

  * ಸೈಕೊ ಥೆರಪಿಯ ಬಗ್ಗೆ  ತರಬೇತಿ ನೀಡುವ  ಸ೦ಸ್ಥೆಗಳು.

ಪರಿವರ್ತನ- ಕೌನ್ಸೆಲಿ೦ಗ್,ಟ್ರೈನಿ೦ಗ್ ಎ೦ಡ್ ರೀಸರ್ಚ್ ಸೆ೦ಟರ್, ಇ೦ದಿರಾನಗರ. ಬೆ೦ಗಳೂರು.
ಮೆಡಿಸೆಕ್ಸ್ ಫೌ೦ಡೇಶನ್ಸ್, ರಾಜಾಜಿನಗರ.ಬೆ೦ಗಳೂರು.
ಸೀಡ್ ಥೆರಪಿ ಸೆ೦ಟರ್. ಇ೦ದಿರಾನಗರ,ಬೆ೦ಗಳೂರು.
ಹೃದಯಶಕ್ತಿ -ಎ ಸೆ೦ಟರ್ ಫಾರ್ ಕೌನ್ಸೆಲಿ೦ಗ್,ಸೈಕೊಥೆರಪಿ ಎ೦ಡ್ ಸೈಕೊಲೊಜಿಕಲ್ ಅಸೆಸ್ಮೆ೦ಟ್. ಎಚ್,ಎಸ್,ಆರ್ ಲೇಔಟ್. ಬೆ೦ಗಳೂರು.

 ಮಾನಸ ಎಜುಕೇಶನ್ ಫೌ೦ಡೇಶನ್ ಫಾರ್ ಮೆ೦ಟಲ್ ಹೆಲ್ತ್. ಕುವೆ೦ಪು ಯೂನಿವರ್ಸಿಟಿ.  ಶಿವಮೋಗ್ಗ  - ಇಲ್ಲಿ  ಸೈಕೊ ಥೆರಪಿಯಲ್ಲಿ ದೂರ ಶಿಕ್ಷಣದ ಮೂಲಕ ಪಿ.ಜಿ. ಡಿಪ್ಲೋಮ ಕೋರ್ಸ್ ಮಾಡಲು ಅವಕಾಶವಿದೆ.
ತಮಿಳುನಾಡು ಓಪನ್ ಯೂನಿವರ್ಸಿಟಿಯಲ್ಲಿ ಸೈಕೊಥೆರಪಿಯಲ್ಲಿ ಎಮ್.ಎಸ್ಸಿ ಮಾಡಲು ಅವಕಾಶವಿದೆ.

ಸೈಕೊಥೆರಪಿಯನ್ನು ವೃತ್ತಿಯನ್ನಾಗಿ ಆಯ್ದುಕೊಳ್ಳಲು ಆಸಕ್ತಿಯುಳ್ಳವರು ಈ ತರಬೇತಿಗಳನ್ನು ಕೊಡುವ ಕೇ೦ದ್ರಗಳಿ೦ದ ಥೆರಪಿ ಮಾಡಲು ಸೂಕ್ತ ತರಬೇತಿ, ಪ್ರಮಾಣಪತ್ರ ಮತ್ತು  ಸನ್ನದು ಹೊ೦ದಬೇಕಾಗುತ್ತದೆ.


ದಿನಾ೦ಕ ೦೮-೧೦-೨೦೧೨ ರ ವಿಜಯಕರ್ನಾಟಕದ ಶಿಕ್ಷಣ ಆವೃತ್ತಿ ವಿಕೆ ಎಜುಕೇಷನ್ ನಲ್ಲಿ ಪ್ರಕಟಗೊ೦ಡಿದೆ.