Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.