Monday, December 21, 2009

ನನ್ನ ಕನ್ನಡ ಪ್ರೇಮ....!!..?

ಅಯ್ಯೋ ... ನವೆಂಬರ್ ಕಳೆದು, ಡಿಸೆಂಬರ್ ಕೂಡಾ ಮುಗಿಯುತ್ತಿದೆ , ಇನ್ನೂ ಕನ್ನಡ ಕನ್ನಡ ಎಂದು ಗೋಳಿಡುವುದನ್ನು ನಿಲ್ಲಿಸಿಲ್ಲವೆನ್ರೀ ....ಅಂದರೆ ಹುಷಾರ್ ... ಜಗಳ ಮಾಡಿಬಿಡುತ್ತೇನೆ....!!

ನೋಡಿ ಇವರೇ... ನನ್ನ ಮಕ್ಕಳಿಗೆ ದಿನಾಲೂ ರಾತ್ರೆ ಮಲಗುವಾಗ ಕಥೆ ಕೇಳುವ ಅಭ್ಯಾಸ. ಶಿಶಿರನಂತೂ,'' ಅಮ್ಮಾ ಇವತ್ತು ಬರೀಮೂರು ಕಥೆ ಹೇಳಿದರೆ ಸಾಕು, '' ಎನ್ನುತ್ತಾನೆ.....! ಮಕ್ಕಳಿಗೆ ಕಥೆ ಹೇಳಲು ಸಾಕಷ್ಟು ಪ್ರಾಕ್ಟೀಸ್ ಬೇಕಾಗುವುದು. ಹಗ್ಗದ ಮೇಲೆ ನಡೆದ ಹಾಗೆ.ಶುರು ಮಾಡಿದ ಕಥೆಯನ್ನು ಪೂರಾ ಕೇಳಿದ ಮೇಲೆ , 'ಇದು ಬೇಡ , ಬೇರೆಯದು ಹೇಳು... ' ಎನ್ನುತ್ತಾರೆ.ನಿನ್ನೆ ಹೇಳಿದ ಕಥೆಯನ್ನೇ ಮತ್ತೆ ಹೇಳುವುದಾದರೆ , ಸ್ವರ , ಧಾಟಿ ,ಕಥೆಯ ಶೈಲಿ ಸಂಯೋಜನೆಯಲ್ಲಿ ಚೂರೂ ಮುಕ್ಕಾಗದ ರೀತಿಯಲ್ಲಿಯೇ ಹೇಳಬೇಕು. ಸ್ವಲ್ಪ ವ್ಯತ್ಯಾಸವಾದರೂ ,'ನೀನು ಸುಳ್ಳು ಸುಳ್ಳೇ ಕಥೆ ಹೇಳುತ್ತೀಯ , ' ಎಂಬ ಆರೋಪ ಬೇರೆ.

ಕೆಲವೊಮ್ಮೆ ಕಥೆ ಹೇಳೀ ಹೇಳೀ ನನಗೆ ಬೇಸರ ಬಂದು ನನ್ನವರಿಗೆ ಮಧುರ ಶಿಕ್ಷೆಯನ್ನು ವರ್ಗಾಯಿಸುತ್ತೇನೆ. ಮಕ್ಕಳಿಗೆ ಅಪ್ಪನಕಥೆಯ ವಿಶೇಷತೆಯೇ ಬೇರೆ.......!!!!

ಅಪ್ಪನ ಕಥೆಯಲ್ಲಿ ಬರುವ ಕರ್ಣನ ಕೈಯಲ್ಲಿ A.K. 47 ಇರುತ್ತದೆ... ಅರ್ಜುನ ಸ್ಟೇನ್ ಗನ್ ನಿಂದ ಡಗ...ಡಗ ....ಡಗ..... ಶೂಟ್ ಮಾಡುತ್ತಿರುತ್ತಾನೆ.
ಘತೊತ್ಕಜನ ಬಾಯಿಯಿಂದಂತೂ ಬಾಂಬುಗಳ ಸುರಿಮಳೆ.... !!!
ಭೀಮ ಬಕಾಸುರನಿಗೆ ಒಯ್ಯುವ ಬಂಡಿಯಲ್ಲಿ ಗೋಬಿಮಂಚೂರಿ , ಕಾಶ್ಮೀರಿ ಪುಲಾವ್ , ಟೊಮ್ಯಾಟೋ ಸೂಪ್, ಪಾನಿಪೂರಿ ಇನ್ನಿತರಚಾಟ್ಸ್ ಮತ್ತು ಕೊನೆಯಲ್ಲಿ ಚಾಸ್ [ಮಜ್ಜಿಗೆ] ಇರುತ್ತವಲ್ಲಾ....!
ಗೀತೋಪದೇಶದ ಕೃಷ್ಣ '' worry ಮಾಡ್ಕೋಬೇಡ, ಹೇಳೋದ್ ಸ್ವಲ್ಪ ಕೇಳ್ರಾಜಾ.. ಅನ್ನುತ್ತಾನೆ ಅರ್ಜುನನಿಗೆ.. !
ಕರಡಿ u.p.s. ಮಾರಲು ಹೊರಡುತ್ತದೆ. ಬೆಕ್ಕಿಗೆ ವಿಸಿಟಿಂಗ್ ಕಾರ್ಡ್ ಕೊಡುವುದು. ಕೊಟೇಶನ್ ರೆಡಿ ಮಾಡುವುದು ಮತ್ತು ಬಿಲ್ಕೊಡುವುದು .


ಮಕ್ಕಳಿಗೆ ಅಪ್ಪನ ಕಥೆ ಕೇಳಲು ಮಜಾ ಬರುತ್ತದೆ. ಆದರೆ ಪೂರಾ ಕೇಳಿದ ಮೇಲೆ ಶಿಶಿರನಿಗೆ ಸಂಶಯ ಉಂಟಾಗಿ , 'ಅಮ್ಮಾ ನೀನು ಸರಿಯಾಗಿ ಹೇಳು '... ಎಂದು ನನ್ನ ಕಡೆ ತಿರುಗುತ್ತಾನೆ.ಐಶು ಹೇಳಿಟ್ಟಿದ್ದಾಳೆ , ಪುರಾಣದ ಕಥೆಯಲ್ಲಿ ಬಿಲ್ಲು , ಬಾಣ ಮಾತ್ರ ಇತ್ತು ಅಂತ. ಸಮಸ್ಯೆ ಮತ್ತೆ ನನ್ನ ಸುತ್ತಲೇ ಸುತ್ತ ತೊಡಗುತ್ತದೆ.

ನನ್ನ ಸರಕೆಲ್ಲಾ ಖರ್ಚಾದ ಕಾರಣ ಇದಕ್ಕೊಂದು ಪರಿಹಾರ ಕಾಣಿಸಲು ಹೊಸ ಕಥೆಗಳ ಅನ್ವೇಷಣೆಗೆ ಹೊರಟೆ ಪುಸ್ತಕದಂಗಡಿಗೆ.
ಹತ್ತಿರದಲ್ಲಿರುವ ಅಂಗಡಿಯಲ್ಲಿ ದೊರಕುವ ಪುಸ್ತಕಗಳು ನನ್ನಲ್ಲಿಯೂ ಇರುವುದರಿಂದ , ಬೇರೊಂದು ಮಿನಿ ಮಾಲ್ ಗೆ ಹೋದೆ .. ಬುದ್ಧಿವಂತಳಂತೆ....
ಸಣ್ಣ ಪುಟ್ಟ ವಸ್ತುಗಳನ್ನು ಆಯ್ಕೆ ಮಾಡಿಕೊಂಡು , ಪುಸ್ತಕಗಳೇನಾದರೂ ಇವೆಯಾ ಅಂತ ಕಣ್ಣು ಹಾಯಿಸಿದೆ .. ಪಕ್ಕದ ಸ್ಟ್ಯಾಂಡಿನಲ್ಲಿ ಅರ್ಧ ಇಂಚು ದಪ್ಪದ ರಟ್ಟಿನ ಇಂಗ್ಲೀಷ್ ಪುಸ್ತಕಗಳು ಕಣ್ಣು ಕುಕ್ಕುತ್ತಿದ್ದವು . '' ಕನ್ನಡ ಕಥೆ ಪುಸ್ತಕಗಳು ಎಲ್ಲಿವೆ ...?'' ಅಂತ ಕೇಳಿದಾಗ ಸೇಲ್ಸ್ ಬಾಯ್ ನನ್ನ ವಿಚಿತ್ರವಾಗಿ ನೋಡಿದ .
''ಇಂಗ್ಲೀಶ್ ಬುಕ್ಸ್ ತಗೊಳ್ಳಿ ಮೇಡಂ ... ಯಾವುದು ಕೊಡಲಿ ....? ''
''ಕನ್ನಡ ಪುಸ್ತಕಗಳು ಇಲ್ವೇನ್ರೀ....?''
''ಇಲ್ಲ ಮೇಡಂ ''
''ಯಾಕಿಟ್ಟಿಲ್ಲ....''? ತರ್ಸಿ ...
ಕಾರಣಗಳು ಸಾವಿರಾರು
''ಇಲ್ಲ ಮೇಡಂ, ಕನ್ನಡ ಪುಸ್ತಕ ಯಾರೂ ಕೇಳಲ್ಲ ,
ಖರ್ಚಾಗಲ್ಲ,
ಪುಬ್ಲಿಶರ್ಸ್ ಕಳಿಸಿ ಕೊಡಲ್ಲ ,''
''ಅರೆ... ನೀವು ಆರ್ಡರ್ ಕೊಟ್ರೆ ಯಾಕೆ ಕಳ್ಸಿ ಕೊಡೋಲ್ಲಾರೀ.....?
ಇಲ್ಲ ಮೇಡಂ , ಅವ್ರು rack ಕೊಡೊಲ್ಲಾ ಮೇಡಂ ....
ನನಗೆ ಸಿಟ್ಟಿನಿಂದ ಮೂರ್ಚೆ ಬರುವುದೊಂದೇ ಬಾಕಿ.
'' ಇದೂ ಒಂದು ಕಾರಣಾ ಏನ್ರೀ.... ? ಏನ್ ಹೇಳ್ತಾ ಇದೀರಾ ... ಇದೆ rack ನಲ್ಲೆ ಇಡಬಹುದಲ್ಲಾ.....ನಾನು ಯಾವ ಮಹಾ ಪುಸ್ತಕಗಳನ್ನು ಕೇಳಿದೆ... ? ಮಕ್ಕಳ ಕಥೆ ಪುಸ್ತಕವಪ್ಪಾ ... ಅದೇ ತರದ ಇಂಗ್ಲೀಶ್ ಪುಸ್ತಕ ಇಟ್ಟಿದ್ದೀರಲ್ರೀ...ಇದು ಯಾವ ರಾಜ್ಯಾರೀ ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....? ಸ್ವಲ್ಪಾ ಆದರೂ ಅಭಿಮಾನ ಬೇಡ್ವಾ... ಇಲ್ಲೇ ವ್ಯಾಪಾರ ಮಾಡ್ತೀರ . ಕನ್ನಡದೊರೆಯೇ ಬೇಕು ಇವೆಲ್ಲ ವಸ್ತು ಖರೀದಿಸಲಿಕ್ಕೆ ....... ಅಮೇರಿಕಾದವರು ಬರುತ್ತಾರಾ.. ಇಂಗ್ಲೀಶ್ ಪುಸ್ತಕ ಕೊಂಡೊಯ್ಯೋದಕ್ಕೆ... ? ''
'' ಮೇಡಂ ತರ್ಸಿ ಕೊಡ್ತೀವಿ ಮೇಡಂ, ಇಂಗ್ಲೀಶ್ ಪುಸ್ತಕ ಚೆನ್ನಾಗಿದೆ ನೋಡಿ , ಮೇಡಂ ''

ಅಂಗಡಿಯಿಂದ ಹೊರಬಂದೆ. ಇಂಗ್ಲೀಶ್ ಕಥೆ ಪುಸ್ತಕ ಕೊಂಡು ನಾನು ಓದಿಕೊಂಡು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಮಕ್ಕಳಿಗೆ ಕತೆ ಹೇಳಬೇಕೇ.... ನಾನು ....? ಆಗದು ... ಆಗದು ... ಕನ್ನಡ ಪುಸ್ತಕವೇ ಬೇಕು....
ಬೆಂಗಳೂರಿಗೆ ಕನ್ನಡ ಅಲರ್ಜಿಯಾ......ಗೊತ್ತಾಗುತ್ತಿಲ್ಲಾ. ಕರುನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ ಇಂತಾ ಅವಸ್ತೆ.ಕನ್ನಡ ಮಾತಾಡುವವರನ್ನು ಕಂಡರೆ ಅಸಡ್ಡೆ. ಕನ್ನಡದಲ್ಲಿ ಸಾಹಿತ್ಯ ರಚನಾಕಾರರಿಗೆ ಬರವಿಲ್ಲ . ಸಾಹಿತ್ಯಾಸಕ್ತರಿಗೂ .... ಕನ್ನಡ ಪುಸ್ತಕ ಮಾರಾಟ ಮಳಿಗೆಗಳ ಕೊರತೆ ಇದೆ ಅಷ್ಟೇ.
ಮತ್ತೆರಡು ಅಂತದೆ ಕುಲಮಳ್ಳಾ ಮಿನಿ ಮಾಲಿಗೆ ಹೋದೆ .. ನೋಡೋಣ ಇಲ್ಲಿ ಹೇಗೆ ಅಂತಾ .....ಅಲ್ಲೂ ಹಾಗೆಯೇ..

ನನಗೆ ಭಾಷಾಂಧತೆ ಏನಿಲ್ಲ. ಯಾವ ಭಾಷೆಯೇ ಇರಲಿ ,ಮಕ್ಕಳಿಗೆ ಮಾತೃಭಾಷೆಯಲ್ಲಿ ಭಾವನೆ ಅರ್ಥವಾಗುವಷ್ಟು ಚೆನ್ನಾಗಿ ಬೇರೆ ಭಾಷೆಯಲ್ಲಿ ಆಗುವುದಿಲ್ಲ.
ಇಂಗ್ಲೀಶ್ ಒಂದು ತರಾ ಮಾಯಾವೀ ಭಾಷೆ. ಬೆಂಗಳೂರಿಗರಿಗೆ ಅಡಿಕ್ಷನ್. ರಾಜ್ಯದ ಉಳಿದ ಭಾಗಗಳಲ್ಲಿ ಚಟ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಹೊರನಾಡಿನಲ್ಲಿ ನೆಲೆಸಿರುವ ಎಷ್ಟೋ ಕನ್ನಡದ ಮಂದಿ ಕನ್ನಡದ ಕಂಪನ್ನ , ಪೆಂಪನ್ನ ನೆನೆಸಿಕೊಳ್ಳುತ್ತಾರೆ.

ಮತ್ತೆ ಮರುವಾರ ಅದೇ ಅಂಗಡಿಗೆ ಹೋದೆ . ಬೆನ್ನು ಬಿಡದ ಬೇತಾಳದಂತೆ.

ಕನ್ನಡ ಪುಸ್ತಕ ಇರಲಿಲ್ಲ .ಮುಂದೆ ಮೂರು ಸಾರಿ ಹೋದಾಗಲೂ ಇದೆ ಕಥೆ. ಸಲ ಮತ್ತೆ ಚೆನ್ನಾಗಿ ಜಗಳ ಮಾಡಿದೆ . ಏನೇನು ಮಾತಾಡಿದೆನೋ... ನೆನಪಿಲ್ಲ ಅಷ್ಟು ಜೋರು ಜಗಳ..

ಅವನು ಪುಸ್ತಕವನ್ನೇ ಇಡದಿದ್ದಿದ್ದರೆ ನನಗೆ ಸಮಸ್ಯೆ ಏನಿರಲಿಲ್ಲ . ಇಂಗ್ಲೀಶ್ ಪುಸ್ತಕ ಇಡುವವನಿಗೆ ಕನ್ನಡ ಪುಸ್ತಕ ಇಟ್ಟರೆ ಆಗುವುದೇನು ಅನ್ನುವುದು ನನ್ನ ಪ್ರಶ್ನೆ. ಕೊಳ್ಳುವವರು ನಾವಿದ್ದೆವಲ್ಲಾ....ಪುಕ್ಕಟೆ ಕೊಡಿ ಅಂತ ಕೇಳಿದೆನಾ..? ಯಾವುದಾದರೂ ಮಾರುವುದು ತಾನೇ.

ಸಲ ನನ್ನವರೂ ನನ್ನ ಜಗಳಕ್ಕೆ ಜೊತೆಯಾಗಿದ್ದರು.
''ಇನ್ನು ನಿಮ್ಮ ಅಂಗಡಿಗೆ ಯಾವ ಕಾರಣಕ್ಕೂ ಬರುವುದಿಲ್ಲ , '' ಎಂದು ಪ್ರತಿಜ್ಞೆ ಮಾಡಿಯೇ ಹೊರಬಂದೆ .ಮಕ್ಕಳಿಗೆಂದು ಆಯ್ದುಕೊಂಡ ಚಾಕೊಲೆಟ್ ಸಹಾ ಅಲ್ಲೇ ಬಿಸಾಕಿ.....

ದಾರಿಯಲ್ಲಿ ನನ್ನವರಿಂದ ಅವಾರ್ಡ್ ಸಿಕ್ಕಿತು.. '' ಪರವಾಗಿಲ್ಲ ಕಣೆ ನೀನು , ಚೆನ್ನಾಗಿ ಜಗಳ ಮಾಡಿದೆ.. ನನ್ನೊಂದಿಗೆ ಮಾತ್ರಾ ಜಗಳ ಮಾಡುವುದು ಅಂದುಕೊಂಡಿದ್ದೆ, '' ಡ್ರೈವ್ ಮಾಡುತ್ತಿರುವವರ ಮುಖಭಾವ ಗೊತ್ತಾಗಲಿಲ್ಲ. ಮೀಸೆಯಡಿಯಲ್ಲಿ ತುಂಟನಗು ಇದ್ದಿರಲೇ ಬೇಕು.....!


ಸಾಧ್ಯವಾದರೆ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಕಲಿಯೋಣ. ಎಲ್ಲಾ ತಾಯಂದಿರಿಗೂ ಮಗುವಾಗೋಣ . ಆದರೆ ಹೆತ್ತಮ್ಮನನ್ನು ಮರೆಯುವುದು ಎಷ್ಟು ಸರಿ. ಬೇರೆ ಭಾಷೆಗಳನ್ನು ಗೌರವಿಸೋಣ . ಮಾತೃ ಭಾಷೆಯನ್ನು ಬೆಳೆಸೋಣ. ಅಲ್ಲವೇ....?
ಅದೇ ಸಿಟ್ಟಿನಿಂದ ಈ ಸಲದ ಪುಸ್ತಕ ಪ್ರದರ್ಶನಕ್ಕೆ ಹೋದವಳು ನಾಲ್ಕು ಪುಸ್ತಕ ಹೆಚ್ಚಿಗೆ ಖರೀದಿ ಮಾಡಿದ್ದೇನೆ.....!!
ಆ ಪುಸ್ತಕಗಳಿಗೆ ಬೈಂಡ್ ಮಾಡುವಾಗ ಇದೆಲ್ಲಾ ನೆನಪಾಗಿ ಮತ್ತೆ ಸಿಟ್ಟು ಬಂತು..... ಅಷ್ಟೇ..

ನಾನು ಮತ್ತೆ ಬೇರೆ ಅಂಗಡಿಗಳಿಗೆ ಹೋಗುತ್ತೇನೆ.
ಕನ್ನಡ ಪುಸ್ತಕ ಕೇಳುತ್ತೇನೆ.
ಇರದಿದ್ದಲ್ಲಿ ಜಗಳ ಮಾಡಿ ಕಿರಿಕಿರಿ ಮಾಡುತ್ತೇನೆ. ತರದ ಅಂಗಡಿಗಳು ಒಂದಲ್ಲ ಒಂದು ದಿನ ಅರಿತುಕೊಳ್ಳಬಹುದು.
ಬಲ್ಲವರು ಕನ್ನಡಕ್ಕಾಗಿ ಕಹಳೆ ಊದುತ್ತಾರೆ.....
ನಾನು.... ಜಗಳ ಮಾಡುತ್ತೇನೆ.....!!!

ಯಾರಿದ್ದೀರಾ......? ನನ್ನ ಸಿಟ್ಟಿಗೆ ತುಪ್ಪ ಹೊಯ್ಯುವವರು......!
..

Wednesday, December 16, 2009

ಆಕಾಶವೇ ಮಿತಿಯೇ ......?

ಜಗತ್ತನ್ನು ಹೊಸ ದೃಷ್ಟಿಯಿಂದ ನೋಡುವುದು ...
ಹೊಸ ಹೊಳಹಿನೊಂದಿಗೆ ಹೊಸತರ ಸೃಷ್ಟಿ ...
ಪ್ರತಿಯೊಂದು ಕಡೆಯೂ ಹೊಸ ತನ ...!
ಇದು ಸೃಜನಶೀಲತೆಯಲ್ಲವೇ.......?
ಪ್ರಪಂಚದಲ್ಲಿ ಮನುಷ್ಯರಿಗೆ ಮಾತ್ರ ಒಲಿದಿರುವ ಕ್ರಿಯೇಟಿವಿಟಿ ಲೆಕ್ಕವಿಲ್ಲದಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ವಿಜ್ಞಾನ ,ತಂತ್ರಜ್ಞಾನ, ಗಣಿತ, ಕಲೆ, ಸಾಹಿತ್ಯ,ವಾಸ್ತುಶಿಲ್ಪ , ವ್ಯಾಪಾರ ಹೀಗೆ ಜೀವನದ ಎಲ್ಲಾ ವಿಭಾಗಗಳಲ್ಲೂ ಮಾನವನ ಹೊಸತನ ದಿನೇ ದಿನೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ನಮ್ಮ ಮೆದುಳಿನಲ್ಲಿ ಕ್ರಿಯೇಟಿವಿಟಿ ಎಲ್ಲಿ ಹುಟ್ಟುತ್ತದೆ, ಗೊತ್ತೇ ....? ಮೆದುಳಿನ ಮುಂಬಾಗದಲ್ಲಿ . ಅದಕ್ಕೆ frontal lobe ಎನ್ನುತ್ತಾರೆ.ಜೊತೆಗೆ ಜಾಗ ನಿದ್ರೆ , ಮನಸ್ಥಿತಿ [mood] , ಖಿನ್ನತೆ ಮತ್ತು ಚಟಗಳು ಇವುಗಳಿಗೂ ಕಾರಣವಾಗಿದೆ.
ನೋಡಿ ಬೇಕಾದರೆ... ತುಂಬಾ ಕ್ರಿಯೇಟಿವ್ ಆಗಿರುವವರು ಮೂಡಿಗಳಾಗಿರುತ್ತಾರೆ.
ಉದಾ :ಪ್ರಸಿದ್ಧ ಭೌತಶಾಸ್ತ್ರಜ್ಞ ಅಇನ್ಸ್ಟೀನ್ . ಕೆಲವೊಮ್ಮೆ ಅವನಿಗೆ ತಾನ್ಯಾರು , ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಮರೆತುಹೊಗುತ್ತಿತ್ತಂತೆ . ಆದರೆ ಅವನದು ಅದೆಂತಹಾ ಸೃಜನಶೀಲ ವ್ಯಕ್ತಿತ್ವ ಎನ್ನುವುದು ಲೋಕಕ್ಕೆಲ್ಲ ಪರಿಚಿತವಲ್ಲವೇ....?
ಆರ್ನೆಷ್ಟ್ ಹೆಮಿಂಗ್ವೆ .. ಆತ ಪ್ರಸಿದ್ಧ ಬರಹಗಾರ ಮತ್ತು ಕಲಾವಿದ , ಖಿನ್ನತೆಯಿಂದ ಬಳಲುತ್ತಿದ್ದು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ.
ಅನೇಕ ಕ್ರಿಯೇಟಿವ್ ವ್ಯಕ್ತಿಗಳು ತಮ್ಮ ಹುಚ್ಚುತನಕ್ಕೂ ಹೆಸರಾಗಿರುತ್ತಾರೆ. ಆರ್ಕಿಮಿಡಿಸ್ ಸಾಪೇಕ್ಷ ಸಾಂದ್ರತೆಯ ನಿಯಮ ಹೊಳೆದಾಕ್ಷಣ ಯುರೇಕಾ ....ಯುರೇಕಾ ....ಎನ್ನುತ್ತಾ ಸ್ನಾನಗೃಹದಿಂದ ಬೆತ್ತಲೆಯಾಗಿಯೇ ಬೀದಿಯಲ್ಲಿ ಓಡುತ್ತಾ ಅರಮನೆಗೆ ಹೋದ ಕತೆ ಗೊತ್ತಲ್ಲವೇ ...? ಕ್ರಿಯೇಟಿವಿಟಿ ಇರುವವರೆಲ್ಲಾ ಹೀಗೆಯೇ ಅಂತಲ್ಲ .. ...! ಜಾಗ ಹಾಗಿದೆ ಅಂತ...

ಸೃಜನಶೀಲತೆ ಆಥವಾ ಕ್ರಿಯೇಟಿವಿಟಿ ಅನ್ನುವುದು ಸೃಜನಶೀಲ ವ್ಯಕ್ತಿ , ಪರಿಸರ, ಕ್ರಿಯೆ ಮತ್ತು ಸೃಜನಶೀಲ ಉತ್ಪನ್ನ ಇವುಗಳಿಂದ ಕೂಡಿರುತ್ತದೆ.
ಒಬ್ಬ ವ್ಯಕ್ತಿ ಕ್ರಿಯೇಟಿವ್ ಆಗಿರಲು ಮಾಧ್ಯಮದಲ್ಲಿ ಹೆಚ್ಚಿನ ಬುದ್ಧಿಮತ್ತೆ ಅತ್ಯವಶ್ಯ.ಕ್ರಿಯೇಟಿವಿಟಿ ವಂಶದಲ್ಲಿ ಹರಿಯುತ್ತದೆ.ರೇಡಿಯಂ ಕಂಡುಹಿಡಿದ ಮೇರಿ ಕ್ಯೂರಿ ಮತ್ತು ಪೆಯರಿ ಕ್ಯೂರಿ ಮತ್ತು ಇವರ ಮಕ್ಕಳು ನೊಬೆಲ್ ಪುರಸ್ಕೃತರು.
ಸರ್ ಫ್ರಾಂಸಿಸ್ ಗ್ಯಾಲ್ಟನ್ ಎನ್ನುವವನು ಅನೇಕ ಪ್ರತಿಭಾಶಾಲಿಗಳ , ಪಂಡಿತರ ಜೀವನಚರಿತ್ರೆಗಳನ್ನು ಅಭ್ಯಾಸ ಮಾಡಿ ವಿಷಯವನ್ನು ಸ್ಪಷ್ಟ ಪಡಿಸಿದ್ದಾನೆ . Genius and productive creators ಬಗ್ಗೆ ಅಭ್ಯಾಸ ಮಾಡಿದ ಸ್ವತಹ ಗ್ಯಾಲ್ಟನ್ ಮತ್ತು ವಿಕಾಸವಾದದ ಚಾರ್ಲ್ಸ್ ಡಾರ್ವಿನ್ ಇಬ್ಬರೂ ರಕ್ತಸಂಬಂಧಿಗಳು.


ಸೃಜನಶೀಲತೆ ಎನ್ನುವುದು ಅಭ್ಯಾಸ ಮಾಡಿದಂತೆ ಹೆಚ್ಚುತ್ತಾ ಹೋಗುವುದು. ಉತ್ತಮ ರಿಸರ , ಪ್ರೇರಣೆ, ಬುದ್ಧಿಮತ್ತೆ, ಮತ್ತು ವ್ಯಕ್ತಿತ್ವ ಕ್ರಿಯೇಟಿವಿಟಿಯನ್ನು ಹೆಚ್ಚುಗೊಳಿಸಲು ಸಹಕರಿಸುತ್ತವೆ.

ಆಂತರಿಕ ಪ್ರೇರಣೆ , ಶಿಸ್ತು , ಸಂಯಮ , ಶ್ರದ್ಧೆ, ನಂಬಿಕೆ , ಉತ್ಕ್ರುಷ್ಟತೆಗೆ ಮೀಸಲಾದ ಜೀವನ ಶೈಲಿ , ಅಡತಡೆಗಳಿಗೆ ಹೆದರದೆ ಮುನ್ನುಗ್ಗುವ ಛಲ, ವಿಷಯದ ಬಗ್ಗೆ ಆಳವಾದ ಜ್ಞಾನ ,ಬದ್ಧತೆ ಗುಣಗಳೆಲ್ಲಾ ಸೃಜನಶೀಲ ವ್ಯಕ್ತಿಗಳಲ್ಲಿ ಅಡಕವಾಗಿರುತ್ತವೆ.


ಓಹೋ .. ಕೊರೆತ ಸಾಕು ಮಾಡಿ ವಿಷಯಕ್ಕೆ ಬನ್ನಿ ಅನ್ನುತ್ತೀರಾ.... ? ಕಳೆದ ಸಂಚಿಕೆ ಕೊನೆತುತ್ತು ಮರೆತಿಲ್ಲ ನಾನು.ಅದೂ ಕೂಡಾ ಸೃಜನಶೀಲತೆಗೊಂದು ಚಿಕ್ಕ ನಿದರ್ಶನ ಅನ್ನಲು ಇಷ್ಟೆಲ್ಲಾ ಪೀಠಿಕೆ ಅಷ್ಟೇ...

ಇದು ಒಂದು ಮದುವೆಯ ಆಹ್ವಾನ ಪತ್ರಿಕೆಯ ವಿನ್ಯಾಸವೆಂದರೆ ನಂಬುತ್ತೀರಾ....?
ಬಾಟಲಿಯ
ಕಾರ್ಕ್ ತೆಗೆದಾಗ ಸುರುಳಿ ಮಾಡಿದ ಕರೆಯೋಲೆಯಿತ್ತು. ಬಾಟಲಿಯ ಕುತ್ತಿಗೆಯಲ್ಲಿರುವ ಸಂಚಿಯಲ್ಲಿ ಸುಗಂಧ ಬೀರುವ ಗುಳಿಗೆಗಳು ಮತ್ತು ಮದುವೆ ನಡೆಯುವ ಸ್ಥಳದ ಮಾರ್ಗಸೂಚಿ .ಬಾಟಲಿಯ ಹೊರಮೈಗೆ ವಿವಾಹದ ವಿವರಗಳುಳ್ಳ ಲೇಬಲ್ ಅಂಟಿಸಿದ್ದಾರೆ. ಒಳಬಾಗದಲ್ಲಿ ಚೆಂದಕ್ಕೆ ಟಿಕಲಿಗಳು. ಎಷ್ಟು ಚೆನ್ನಾಗಿ concept workout ಮಾಡಿದ್ದಾರೆ ನೋಡಿ.. !

ಆಹ್ವಾನ ಪತ್ರಿಕೆಯೊಂದನ್ನು ಹೀಗೂ ಮಾಡಬಹುದು ಅನ್ನುವುದು ಇದನ್ನು ನೋಡಿದ ಮೇಲಷ್ಟೇ ನನಗರ್ಥವಾಯಿತು. ನನ್ನವರು ಮೊದಲು ಇದನ್ನು ತೋರಿಸಿದಾಗ ಏನೆಂದು ಗೊತ್ತಾಗದೆ ಬೇಸ್ತು ಬಿದ್ದಿದ್ದೆ ........! ನಿಮ್ಮ ಥರಾನೇ .......!!!

ಸೃಜನಶೀಲತೆಗೆ ಆಕಾಶವೇ ಮಿತಿಯಲ್ಲವೇ....? UNLIMITED CREATIVITY......!!!

ಕೊನೆತುತ್ತು : ಯಾರಿಗೂ ಫೋಟೋದಲ್ಲಿರುವುದು ಏನೆಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಸಾಕಷ್ಟು ತಲೆ ಕೆಡಿಸಿಕೊಂಡಿದಕ್ಕಾಗಿ ಯಾರಿಗೂ ಬೇಜಾರು ಮಾಡಬಾರದೆಂದು ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗಿದೆ ......!!! ಬೇಕಷ್ಟು ಆಯ್ದುಕೊಳ್ಳಿ...!













Thursday, December 10, 2009

ಇದು ಶಂಕರಭಟ್ಟನ ಕ್ರಿಕೆಟ್ಟು...!

ನಮ್ಮನೆಯಲ್ಲಿ ಆಗಾಗ ಕೇರಂ ಆಡುತ್ತಿರುತ್ತೇವೆ . ಅ೦ದರೆ ವರ್ಷಕ್ಕೆರಡು ಮೂರು ಸಲ..!

ಹಾಗೆ ಹೇಳುವುದಾದರೆ ನಾವೆಲ್ಲಾ ಕೇರಂ ಆಟದಲ್ಲಿ ಶೂರರು.. .....ಆಡಲು ಶುರುಮಾಡಿದೆವೆಂದರೆ ಘಂಟೆಗಟ್ಟಲೆ ಆಡುತ್ತೇವೆ ...

ಒಂದೇ ಬೋರ್ಡನ್ನ..!!

ನಮ್ಮದೂ ಒಂದು ಸ್ಪೆಷಾಲಿಟಿ ಇದೆ ......?

ಪಾನುಗಳನ್ನು ಪೌಚಲ್ಲಿ ಬೀಳಿಸುವುದು .....ಎಲ್ಲರೂ ಆಡುತ್ತಾರೆ .ಅದೇನು ಮಹಾ.. ? ಹೇಗೆ ಹೊಡೆದರೂ ಪಾನು ಬೀಳದಂತೆ ಆಡುವುದು ವಿಶೇಷ ...!!! ಗೊತ್ತಾಯಿತೆ...? ನಾವು ಹಾಗೆ ಆಡುತ್ತೇವೆ. ಒಂದು ತರಾ ಕ್ಷೇಮ ಸಮಾಚಾರದ ಪತ್ರವಿದ್ದ ಹಾಗೆ..

ಪ್ರೀತಿಯ ............ಗೆ

ಇಲ್ಲಿ ನಾವೆಲ್ಲಾ ಕ್ಷೇಮ . ಅಲ್ಲಿ ನೀವೂ ಕೂಡಾ ಕ್ಷೇಮವೆಂದು ನಂಬಿದ್ದೇನೆ.ಇನ್ನೇನೂ ವಿಶೇಷಗಳಿಲ್ಲ . ಉಳಿದ ಸಮಾಚಾರಗಳು ಮುಂದಿನ ಪತ್ರದಲ್ಲಿ ಅಥವಾ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ
.....................


ಮುಂದಿನ ಪತ್ರ ಸಹಾ ಹೀಗೆಯೇ .... ಸ್ವಾರಸ್ಯವಿಲ್ಲದ್ದು.

ಆದರೆ ನಾವು ಕಾಲೇಜಿನಲ್ಲಿದ್ದಾಗ ನೀರಸದಲ್ಲಿಯೇ ರಸ ಹುಡುಕುವ ಪ್ರಯತ್ನ ಮಾಡುತ್ತಿದ್ದೆವು. ತರಗತಿಗೆ ಹೋಗುವ ಅವಸರದಲ್ಲಿದ್ದಾಗ , ಬೇರೆ ಕ್ಲಾಸಿನ ಗೆಳತಿಯರು ಸಿಕ್ಕರೆ ಅವಸರದಲ್ಲೇ ಹೇಳುವುದು..

ಪ್ರೀತಿಯ ಗೆಳತಿ ರೇವತಿ ...

ನಾನು ಕ್ಷೇಮ . ನೀನು ಕ್ಷೇಮವೆಂದು ನಂಬಿದ್ದೇನೆ . ಸಮಾಚಾರ ಹೇಳಲು ಪುರಸೊತ್ತಿಲ್ಲ. ಉಳಿದ ಸಮಾಚಾರಗಳು ಇನ್ನೊಮ್ಮೆ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ ಗೆಳತಿ

.............

ಎನ್ನುತ್ತಾ ಕ್ಲಾಸಿನೊಳಗೆ ಓಡುವುದು...ಕಿರುನಗುತ್ತಾ...



ಹೀಗಿರುವಾಗ ಅಂದು ಮಧ್ಯಾಹ್ನದ ಮೇಲೆ ನಾನು, ಐಶು ಮತ್ತು ನನ್ನವರು ಕೇರಂ ಆಡಲು ಕುಳಿತೆವು.ಐಶು ಪಾನನ್ನೆಲ್ಲಾ ಜೋಡಿಸಿಡುತ್ತಿದ್ದಳು.ಶಿಶಿರ ಮಲಗಿದ್ದವನು ಎದ್ದು ಬಂದ.


''ನನ್ನನ್ನು ಮಾತ್ರಾ ಆಟಕ್ಕೆ ಸೇರಿಸಿ ಕೊಳ್ಲೋಲ್ಲಾ... ''ಅವನದು ಗಲಾಟೆ.
''ಸರಿ , ಇಲ್ಲಿ ಕುಳಿತುಕೋ.''
''ಬೇಡಾ, ನಾನು ಐಶು ಕುಳಿತಲ್ಲಿಯೇ ಕುಳಿತುಕೊಳ್ಳುವುದು , ಐಶು ನೀ ಏಳು ... '' ಪಾಪ.. ಅವಳನ್ನು ಎಬ್ಬಿಸಿ ತಾನು ಅವಳ ಜಾಗದಲ್ಲಿ ಕುಳಿತ ..
''ನಾನೇ ಪಷ್ಟು .....ಆಡುವುದು ..''ಸ್ಟ್ರೈಕರ್ ತಗೊಂಡ . ಶಿಶಿರ ಬಂದನೆಂದರೆ ನಿಯಮಗಳೆಲ್ಲ ಗಾಳಿಗೆ .....ಐಶುಗು ಗೊತ್ತು ಅದು . ಅವಳು ನಗುತ್ತಾ .. ''ಆಡು ಪುಟ್ಟಾ....''
''ನೋಡೀಗ ಅಷ್ಟೂ ಪಾನೂ ನಾನೇ ಬೀಳಿಸ್ತೀನಿ, '' ಎಲ್ಲೆಲ್ಲೋ ಸ್ಟ್ರೈಕರ್ ಇಟ್ಟು ಅಂತೂ ಹೊಡೆದ.ಕೂಗಿದ ,''ಬಿತ್ತೂ,''
ಏನು ಬಿದ್ದಿದ್ದು.. ಡ್ಯೂ....!!!ಸ್ಟ್ರೈಕರ್ ಪೌಚಲ್ಲಿ ಬಿದ್ದಿತ್ತು.
ಅದೆಲ್ಲ ಅವನಿಗೆ ಗೊತ್ತಿಲ್ಲ. ಸ್ಟ್ರೈಕರ್ ಆದರೂ ಬೀಳಲಿ, ಏನಾದರೂ ಬೀಳಲಿ.ಬೋರ್ಡ್ ಮೇಲಿದ್ದ ನಾಲ್ಕು ಪಾನುಗಳನ್ನು'' ಇವಿಷ್ಟು ನಂದು ''ಎನ್ನುತ್ತಾ ಎತ್ತಿಟ್ಟುಕೊಂಡ.ನಮಗೆ ನಗು. ಇವರು ಹೇಳಿದರು , '' ಮಾರಾಯ, ನಿಂದು ಶಂಕರಭಟ್ಟನ ಕ್ರಿಕೆಟ್ಟು,''

''ಏನು..ಅದು ?''


''ನಾವೆಲ್ಲ ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮಗೂ ,ಪಕ್ಕದೂರಿಗೂ ನಡುವೆ.ಅಲ್ಲೊಬ್ಬ ಭಯಂಕರ ಆಟಗಾರ , ಬ್ಯಾಟ್ಸಮನ್ .. ಶಂಕರಭಟ್ಟ ಅಂತ. ನಮ್ಮದೆಲ್ಲ ಅಡಿಕೆ ಮರದ ಬ್ಯಾಟು . ಅವನದು ಕಂಪನಿ ಬ್ಯಾಟು ..ಕಾಲಿಗೆ ಶೂ ಮತ್ತೆ ಪ್ಯಾಡು..ನಮಗೆ ಅದೆಲ್ಲಾ ಇರಲಿಲ್ಲ. ನಮ್ಮದೇನಿದ್ದರೂ ಹವಾಯಿ ಚಪ್ಪಲು .ಅಂವ ಬ್ಯಾಟ್ ಬೀಸುತ್ತಾ ಬರುವ ರೀತಿಗೆ ಎಂತಹಾ ಎದುರಾಳಿ ತಂಡದವರೂ ಹೆದರಿ ನಡುಗಬೇಕು...! ಹಾಗೆ. ಬಂದು ನಿಂತವನು ಗಂಬೀರ ವದನನಾಗಿ ಮೈದಾನವನ್ನೆಲ್ಲ ವೀಕ್ಷಿಸಿ, ಕವಾಯಿತು ಮಾಡುತ್ತಿದ್ದ... ಬ್ಯಾಟು ಬೀಸಿ,ಕೂತು, ಎದ್ದು..... ಹಾಗೂ ಸೊಂಟ ತಿರುವಿ...! ಥೇಟ್ ಭಾರತ ತಂಡದ ಆಟಗಾರರಂತೆ.


ಎದುರಿಗೆ ಬೌಲರ್ ಓಡುತ್ತಾ ಬಂದು ಫಾಸ್ಟ್ ಬೌಲಿಂಗ್ ಮಾಡಿದ,
ಹೋ ....... ......... ......... ......... .......... .......... ...........
....ಬ್ಯಾಟ್ ಬೀಸಿದ ಹೊಡೆತಕ್ಕೆ,........ ಎಲ್ಲರೂ ದಂಗಾಗಿ ಮೈದಾನದ ಹೊರಗೆ ನೋಡಿದರು.
ಬಾಲು ಬಿದ್ದಿದ್ದೆಲ್ಲಿ ಗೊತ್ತೇ............?
ಎಲ್ಲೋ ಅಲ್ಲ .. ವಿಕೆಟ್ಟಿಗೆ ತಾಗಿ ಕಾಲು ಬುಡದಲ್ಲಿ... !!!!!!!!!
ಹಾಗಾಯ್ತು ಶಿಶಿರಾ...."
ಐಶು ಗೆ ನಗು ತಡೆಯಲಾಗಲಿಲ್ಲ.


ತುಂಬಾ ತಯಾರಿ ನಡೆಸಿ ನಂತರ ವಿಫಲರಾದರೆ ನನ್ನವರು ಯಾವಾಗಲೂ ಹೀಗೆ ಹೇಳುತ್ತಾರೆ ,
ಇದು ಶಂಕರಭಟ್ಟನ ಕ್ರಿಕೆಟ್ಟು.....


ಕೊನೆ ತುತ್ತು : ಇದು ಏನು ?






ಕಂಡು ಹಿಡಿದವರಿಗೆ ಆಕರ್ಷಕ ಬಹುಮಾನವಿದೆ.....!!!!!

Sunday, December 6, 2009

ಗೀಳು

ಅವಳಿಗೆ ಕಥೆ ಪುಸ್ತಕದ ಗೀಳು....
ಇವನಿಗೆ ಸಿನಿಮಾದ ಗೀಳು...
ಅದು ಏನು ಕಂಪ್ಯೂಟರಿನ ಗೀಳು ನಿನಗೆ ....
ಈ ರೀತಿಯ ಮಾತುಗಳನ್ನು ನಾವು ಕೇಳಿರುತ್ತೇವೆ ಹಾಗು ಆಡಿರುತ್ತೇವೆ.ಈ ಮೇಲಿನ ತರದವು ಅತಿರೇಕಕ್ಕೆ ಹೋದಾಗ ಅದು ಗೀಳು ರೋಗ ಎಂದು ಪರಿಗಣಿಸಲ್ಪಡುತ್ತದೆ.

ಗೀಳು ರೋಗ..... ಇದೊಂದು ಮಾನಸಿಕ ತೊಂದರೆ''ಪುನರಾವರ್ತನೆಗೊಳ್ಳುವ ಆಲೋಚನೆಗಳಿಂದ ಆತಂಕ . ಹುಟ್ಟುತ್ತದೆ. ಆತಂಕವನ್ನು ಹತ್ತಿಕ್ಕಲು , ಅದರಿಂದ ಬಿಡುಗಡೆಗೊಳ್ಳಲು ವ್ಯಕ್ತಿ ಪುನರಾವರ್ತಿತ ಕ್ರಿಯೆಯಲ್ಲಿ ತೊಡಗುತ್ತಾನೆ.'' ಇದು ಆತಂಕದಿಂದ ಹುಟ್ಟುವ ಖಾಯಿಲೆ [anxiety disorder]
ಉದಾ : ಪದೇ ಪದೇ ಕೈ ತೊಳೆಯುವುದು. ದೇವರ ಪೂಜೆ ಮಾಡುತ್ತಲೇ ಇರುವುದು , ಬಾಗಿಲ ಅಗಳೀ ಹಾಕಿದೆಯೋ ಇಲ್ಲವೋ ಎಂದು ಪದೇ ಪದೇ ಪರೀಕ್ಷಿಸುವುದು , ಹಿಂಸಿಸುವ ಆಲೋಚನೆಗಳು. ಲೈಂಗಿಕ ಅಸಂಬದ್ಧತೆಗಳು, ..ಇತ್ಯಾದಿ ...

ಈ ತೊಂದರೆ ಹೆಂಗಸರಿಗಿಂತಾ ಗಂಡಸರಲ್ಲಿ ದುಪ್ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.ಪ್ರತಿಶತ ೨ ರಿಂದ ೩ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ . ಈ ಗೀಳು ತೊಂದರೆಗೆ ಮೆದುಳಿನ ಅಸಮರ್ಪಕ ಬೆಳವಣಿಗೆ, ನರ ಚೋದಕಗಳ ಸ್ರವಿಸುವಿಕೆಯಲ್ಲಿನ ಏರು ಪೇರು, ಜೀನ್ ಗಳಲ್ಲಿನ ಮಾರ್ಪಾಡು [Gene mutation] ಕಾರಣಗಳಾಗಬಹುದು . ಅನುವಂಶೀಯವಾಗಿಯೂ ಬರಬಹುದು.

ಸ್ವಚ್ಚತೆಯ ಗೀಳು : ಈ ವ್ಯಕ್ತಿಗಳು ಪದೇ ಪದೇ ಕೈ ತೊಳೆಯುತ್ತಲೇ ಇರುವರು.ಬಾಗಿಲ ಹಿಡಿಕೆ ಮುಟ್ಟಿದರೆ , ಕೈ ಚೀಲ ಮುಟ್ಟಿದರೆ, ಕಡೆಗೆ ತಮ್ಮದೇ ತಲೆ, ಕೈ, ಕಾಲು ಮುಟ್ಟಿಕೊಂಡರೂ ತಕ್ಷಣ ಹೋಗಿ ಕೈ ತೊಳೆಯುತ್ತಾರೆ.ಕೈ ತೊಳೆಯುವುದಾದರೂ ಹೇಗೆ..? ಒಮ್ಮೆ ತೊಳೆದದ್ದು ಸರಿಯಾಗಿಲ್ಲವೇನೋ ಎಂಬ ಅನುಮಾನ ಕಾಡಿ ಮತ್ತೆ ಸಾಬೂನು ,ಡೆಟ್ಟಾಲ್ ಇತ್ಯಾದಿಗಳನ್ನೆಲ್ಲಾ ಉಪಯೋಗಿಸಿ ಕೈ ತೊಳೆಯುವುದು. ಹೀಗೆಯೇ ಅರ್ಧ ತಾಸು ಕೈ ತೊಳೆಯುತ್ತಲೇ ಇರುವರು. ಯಾವಾಗಲೂ ಕೈ ತೊಳೆಯುತ್ತಲೇ ಇರುವುದರಿಂದ ಚರ್ಮ ಸುಲಿದು ಹುಣ್ಣುಗಳಾಗಬಹುದು [Dermatitis].

ಬಾಗಿಲ ಹಿಡಿಕೆಯಲ್ಲಿ ರೋಗಾಣುಗಳಿರುತ್ತವೆ .ಅದನ್ನು ಮುಟ್ಟಿ ಕೈ ತೊಳೆಯದೇ ಉಳಿದ ಕಡೆ ಮುಟ್ಟಿದರೆ ರೋಗಾಣುಗಳು ಹರಡುತ್ತವೆ. ಎಲ್ಲರಿಗೂ ರೋಗ ಬರುತ್ತದೆ ಎನ್ನುವುದು ಇವರ ಸಮರ್ಥನೆ.ಬಾರಿ ಬಾರಿಗೂ ಕೈ ತೊಳೆಯುವುದು ಇವರ ಆತಂಕ ನಿವಾರಣೆಗಾಗಿ....! ಈ ರೀತಿ ಅರ್ಥ ಹೀನವಾಗಿ ವರ್ತಿಸುವುದು ಅವರ ಗಮನದಲ್ಲೇ ಇದ್ದರೂ ಬಿಡಲಾರರು.

ಹಿಂಸೆಯಲ್ಲಿ : ಕೆಲವರಿಗೆ ಬೇರೆಯವರನ್ನು ಹಿಂಸಿಸಬೇಕೆನ್ನುವ ಆಲೋಚನೆಗಳು ಬರುತ್ತವೆ. ಆದರೆ ಇವರು ಹಿಂಸಾ ವಿನೋದಿಗಳಲ್ಲ. ಈ ರೀತಿ ಆಲೋಚನೆಗಳು ಬರುತ್ತವೆ ಎಂದು ಸ್ವತಹ ಆತಂಕಕ್ಕೊಳಗಾಗುತ್ತಾರೆ.

ವಸ್ತುಗಳ ಸಂಗ್ರಹ [compulsive hoarding] : ಇದು ಒಂದು ತರಹ ಅನುಪಯೋಗಿ ವಸ್ತುಗಳ ಮೇಲಿನ ಮೋಹ. ನಾವು ಯಾವ ವಸ್ತುಗಳನ್ನು ಕಸ ಎಂದು ತೊಟ್ಟಿಗೆ ಎಸೆಯುತ್ತೆವೋ ಅಂತಹಾ ವಸ್ತುಗಳೆಲ್ಲವೂ ಈ ವ್ಯಕ್ತಿಗೆ ಅತ್ಯಮೂಲ್ಯವಾದುದಾಗಿರುತ್ತದೆ.ಕೋಣೆಯ ತುಂಬಾ ಹಳೆ ಪೇಪರ್ ರಾಶಿ, ಗೋಣಿ ಚೀಲಗಳು, ಹರಕು ಬಟ್ಟೆ ,ಒಡಕು ಡಬ್ಬ ,ಹಣ್ಣುಗಳ ಸಿಪ್ಪೆ,ಹೀಗೆ ಎಲ್ಲಾ ರೀತಿಯ ಕಸಗಳನ್ನೂ ಕೂಡಿಟ್ಟುಕೊಂಡಿರುತ್ತಾರೆ.ಈ ಕೊಳಕುತನದಿಂದಾಗಿ ದುರ್ವಾಸನೆ ಮತ್ತು ಇಲಿಗಳ ಒಡನಾಟ ಸಾಕಷ್ಟಿರುತ್ತದೆ. ಯಾವಾಗಲಾದರೂ ಬೇಕಾಗಬಹುದು ಎಂಬ ದೂರದೃಷ್ಟಿ....! ಬೇರೆಯವರಿಂದ ಕಡ ತಂದ ವಸ್ತುಗಳನ್ನು ಹಿಂತಿರುಗಿಸಲಾರದ ವ್ಯಾಮೋಹ .. ಮತ್ತು ಕೆಲವೊಮ್ಮೆ ಕಳ್ಳತನದ ಸ್ವಭಾವ [kleptomania]ವನ್ನು ಸಹಾ ಹೊಂದಿರುತ್ತಾರೆ.ಯಾವುದೇ ಭಾವನಾತ್ಮಕ ಸಂಬಂಧವಿರದಿದ್ದರೂ ಕೂಡಾ ಹಾಳಾದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅವು ವಸ್ತುಗಳಾಗಲೀ,ಪ್ರಾಣಿಗಳಾಗಲೀ, ಹಣವಾದರೂ ಆಗಲಿ. ಅನಗತ್ಯ ಸಂಗ್ರಹ ಒಂದು ಗೀಳೇ......

ಲೈಂಗಿಕತೆಯಲ್ಲಿ ಗೀಳು [sexual obsessions] : ಈ ಗೀಳಿರುವವರಲ್ಲಿ ಅವರಿಗೆ ಯಾವ ವ್ಯಕ್ತಿಯೇ ಇರಲಿ, ಅಪರಿಚಿತರು,ಬಂಧುಗಳು, ಮಕ್ಕಳು, ಸಹವರ್ತಿಗಳು, ಪೋಷಕರು,ಅಲ್ಲದೆ ಪ್ರಾಣಿಗಳ ಜೊತೆಯಲ್ಲಿ ಕೂಡ ಲೈಂಗಿಕತೆಗೆ ಸಂಬಂಧಿಸಿದ ಅರ್ಥಹೀನ ಯೋಚನೆಗಳು ಪದೇ ಪದೇ ಬರ ತೊಡಗುತ್ತವೆ.ಇಂತಹಾ ಆಲೋಚನೆಗಳಿಂದ ಆತಂಕಕ್ಕೊಳಗಾಗಿ ಕೀಳರಿಮೆಯಿಂದ ತನ್ನನ್ನೇ ಟೀಕಿಸಿಕೊಳ್ಳತೊಡಗುತ್ತಾನೆ. ಸದಾ ಆತಂಕದಲ್ಲಿಯೇ ಇರುವುದರಿಂದ ಲೈಂಗಿಕ ಅಸಾಮರ್ಥ್ಯ ಕಾಣಿಸಿಕೊಳ್ಳುತ್ತದೆ. ಮತ್ತೆ ಆತಂಕ.....ತಾನೇನಾದರೂ ಸಲಿಂಗ ಕಾಮಿಯಿರಬಹುದೇ... ? ಸಂಗಾತಿಯೊಂದಿಗಿನ ನಿರಾಸಕ್ತಿ ಈ ರೀತಿಯ ಆಲೋಚನೆಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಹೀಗೂ ಇರುತ್ತದೆ . ಈ ಗೀಳಿರುವವರು ಯಾವುದೇ ಹೆಂಗಸಿನೊಂದಿಗೆ ಹಸ್ತಲಾಘವ ಮಾಡಲು ಹಿಂಜರಿಯುತ್ತಾರೆ.ಕಾರಣ... ಇದರಿಂದ ಹೇಗಾದರೂ [?] ಆಕೆ ಗರ್ಭಿಣಿಯಾಗಿಬಿಟ್ಟರೆ........??? ಹೀಗೆಲ್ಲಾ ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ತಮ್ಮ ಆಲೋಚನೆಯನ್ನು ಹತ್ತಿಕ್ಕಲಾರದವರಾಗುತ್ತಾರೆ.

ಈ ಗೀಳು ರೋಗದವರಿಗೆ ತಮ್ಮ ಆಲೋಚನೆಗಳೆಲ್ಲಾ ಅಸಂಬದ್ಧ ಎಂದು ಗೊತ್ತಾಗುತ್ತದೆ . ತಾವ್ಯಾಕೆ ಈ ರೀತಿ ವರ್ತಿಸುತ್ತೇವೆ ಎಂದು ಆತಂಕ ಪಡುತ್ತಲೇ ಮತ್ತೆ ಸಂಬಂಧಪಟ್ಟ ಕ್ರಿಯೆಯಲ್ಲಿ ತೊಡಗುತ್ತಾರೆ. ಮತ್ತೆ ಆತಂಕ..... ಮತ್ತೆ ಕ್ರಿಯೆ... ವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಗೀಳುರೋಗ [obsessive compulsive disorder] ದವರಿಗೂ ಗೀಳು ವ್ಯಕ್ತಿತ್ವ [obsessive compulsive personality disorder] ದವರಿಗೂ ವ್ಯತ್ಯಾಸವಿದೆ.

ಗೀಳು ರೋಗದವರು ತಮ್ಮ ಆಲೋಚನೆಗಳು ಅರ್ಥವಿಲ್ಲದ್ದು ಎಂದು ಅರಿತಿರುತ್ತಾರೆ. ಆದರೆ ಅದನ್ನು
ಸರಿಪಡಿಸಿಕೊಳ್ಳಲಾರದವರಾಗಿರುತ್ತಾರೆ.

ಆದರೆ ಈ ಗೀಳು ವ್ಯಕ್ತಿತ್ವದವರದ್ದು ಮಾತ್ರಾ ಸ್ವಲ್ಪ ಕಷ್ಟವೇ .ಈ ವ್ಯಕ್ತಿಗಳು ಗೀಳು ರೋಗದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಕೂಡಾ ಅದನ್ನು ಒಪ್ಪಿಕೊಳ್ಳಲಾರರು....!ಪ್ರತಿಯೊಂದರಲ್ಲೂ ಪರಿಪೂರ್ಣತೆ, ಅಚ್ಚುಕಟ್ಟುತನ ,ನಿಯಮ ಪರಿಪಾಲನೆ ಇವುಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ನಿರೀಕ್ಷಿಸುತ್ತಾರೆ. ಹೀಗೇ ಇರಬೇಕು ಎಂಬ ಪೂರ್ವ ನಿರ್ಧಾರಿತರಾಗಿರುವ ಇವರು ಅದು ಸರಿಯಿಲ್ಲ ,ಇದು ಸರಿಯಿಲ್ಲ ಎಂಬ ಆತಂಕದಲ್ಲಿಯೇ ಯಾವಾಗಲೂ ಇರುತ್ತಾರೆ. ಅತಿ ನಿರೀಕ್ಷೆಯಿಂದ ಯಾವ ಕೆಲಸವನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ.ಇದು ತಮ್ಮದೊಂದು ಖಾಯಿಲೆ ಎಂದು ಸುತರಾಂ ಒಪ್ಪಿಕೊಳ್ಳಲಾರರು. Perfectionist ಎಂಬ ಸ್ವಯಂ ಬಿರುದಿನಿಂದ ಕಂಗೊಳಿಸುತ್ತಿರುತ್ತಾರಲ್ಲ ....!!! ತಮ್ಮ ಕೆಲಸಗಳು ಎಷ್ಟು ಸರಿ ಎಂಬುದನ್ನೂ , ಕೈ ತೊಳೆಯದಿದ್ದರೆ ರೋಗ ಹೇಗೆ ಹರಡುತ್ತದೆ ಎನ್ನುವುದಕ್ಕೆ ಬೇಕಾದರೆ ಒಂದು ಘಂಟೆ ಉಪನ್ಯಾಸ ಕೊಡಬಲ್ಲರು . ದುಡ್ಡು ಕೂಡಿ ಇಡದಿದ್ದರೆ ಮುಂದೆ ಏನೇನು ಕಷ್ಟ ಅನುಭವಿಸ ಬೇಕಾಗುವುದೋ ಎಂಬ ಆತಂಕದಿಂದ ಖರ್ಚೇ [ಅತಿ ಮಿತ ] ಮಾಡದೆ ಕೂಡಿ ಇಡುತ್ತಲೇ ಹೋಗುವರು ....!!

ಒರಟುತನ , ಅತಿಯಾದ , ಅನಗತ್ಯ ನೈತಿಕ ಪ್ರದರ್ಶನ, ವಿರಾಮದಲ್ಲೂ ಅಗತ್ಯವಿಲ್ಲದಿದ್ದರೂ ಕೆಲಸ ಮಾಡುತ್ತಲೇ ಇರುವುದು ಇತರ ಲಕ್ಷಣಗಳು.ಅತಿ ನಿರೀಕ್ಷೆಯಿಂದ ಕೆಲವೊಮ್ಮೆ ಸಂಬಂಧಗಳೇ ಕಳಚಿಕೊಳ್ಳುವುವು. [ಗಂಡ ಹೆಂಡಿರಲ್ಲಿ,ತಂದೆ ಮಕ್ಕಳ ನಡುವೆ ]

ಸೈಕೋ ಥೆರಪಿ ಮತ್ತು ಔಷಧಿಗಳಿಂದ ಗೀಳನ್ನು ಹೋಗಲಾಡಿಸಬಹುದು . ಚಿಕಿತ್ಸೆ ಹೆಚ್ಚಿನ ಸಮಯವನ್ನು ಬೇಡಿದರೂ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ. ಬಂಧುಗಳೂ ಮತ್ತು ಸಮಾಜದ ಸಹಾಯವಿದ್ದಲ್ಲಿ ಈ ಗೀಳಿನಿಂದ ಮುಕ್ತರಾಗಬಹುದು.

ಹಾಗಾಗಿ ನಮಗೇನಾದರೂ ಈ ರೀತಿಯ ವ್ಯಕ್ತಿಗಳು ಎದುರಾದಲ್ಲಿ ನಾವು ಕಿರಿಕಿರಿಗೊಳಗಾಗದೆ ಸುಮ್ಮನಿದ್ದು ಸೌಹಾರ್ಧತೆಯನ್ನು ಪ್ರದರ್ಶಿಸುವುದು ಒಳಿತು.

ಕೊನೆ ತುತ್ತು :ಅನಗತ್ಯವಾಗಿ ಪುಸ್ತಕಗಳ ಸಂಗ್ರಹ ಮತ್ತು ಒಂದೇ ಪುಸ್ತಕದ ಅನೇಕಪ್ರತಿಗಳನ್ನು ಕಾರಣವಿಲ್ಲದೆ ಸಂಗ್ರಹಿಸಿಟ್ಟುಕೊಳ್ಳುವುದನ್ನು Bibliomaniya ಎನ್ನುತ್ತಾರೆ.

Tuesday, December 1, 2009

ನಲ್ಲನಿಗೊಂದು ಎಸ್ಸೆಮ್ಮೆಸ್ಸು ......?

ಕಾಯುತ್ತಿದ್ದೇನೆ ...
ನಿನ್ನಲ್ಲೇ ಮನಸಿಟ್ಟು
ಬಾಗಿಲಿಗೆ ದೃಷ್ಟಿ ನೆಟ್ಟು ..
ನೆನೆಸುತ್ತಾ ...
ಮೊದಲ ನೋಟ..
ಕೊಡಿಸಿದಾ ಪಾನಿಪೂರಿ
ಮುಡಿಸಿದಾಮಲ್ಲಿಗೆಯ ಘಮ ...
ಉಣದೆ...
ತಿನದೇ..
ಒಲೆ ಹೊತ್ತಿಸದೆ
ದಾರಿ ಕಾಯುತ್ತಿದ್ದೇನೆ ಪ್ರಿಯಾ ....
ಬಾ
ಬೇಗ
ಆಫೀಸಿನಿಂದ....
ಕಟ್ಟಿಸಿಕೊಂಡು
ಸಾಲೆದೋಸೆ
ಹೋಟೆಲಿನಿಂದ.....!!!!!

Monday, November 23, 2009

ದತ್ತಾತ್ರೇಯನ ಅವಾಂತರಗಳು

ನಾನು ಬೆಂಗಳೂರಿಗೆ ಬಂದು ವರ್ಷವಾಗಿತ್ತಷ್ಟೆ . ನಾನು ಮತ್ತು ಸೂರಿ ದಾಸರಹಳ್ಳಿಯ ಹನುಮೇಗೌಡರ ವಠಾರದಲ್ಲಿ ವಾಸ್ತವ್ಯ ಹೂಡಿದ್ದೆವು. ಅದೊಂದು ಸುವ್ಯವಸ್ತಿತ ರೂಂ . ಕಿಚನ್,ಡೈನಿಂಗ್ ಹಾಲ್,ಬೆಡ್ರೂಮ್ ಅಲ್ಲದೆ ಸ್ಟೋರ್ ರೂಂ ಕೂಡಾ ಅದೊಂದೇ ರೂಮಿನಲ್ಲಿ ಸುಸಜ್ಜಿತಗೊಂಡಿತ್ತಾದ್ದರಿಂದ ಬೇಕಾದಾಗ ಬಯಸಿದ್ದು ಕೈ ಕಾಲಿಗೆ ಎಟಕುವ ಸೌಲಭ್ಯವಿತ್ತು.

ಈ ನಡುವೆ ನಮ್ಮಿಬ್ಬರಿಗೆ ಇನ್ನೋರ್ವನ ಜೊತೆ ರೂಂ ಹಂಚಿಕೊಳ್ಳುವ ಸೌಭಾಗ್ಯ ಒದಗಿಬಂತು. ಮೂರನೆಯವನಾಗಿ ದಾಖಲಾದವನೇ ಶ್ರೀಮಾನ್ ದತ್ತಾತ್ರೇಯ. ಅವನ ವ್ಯಕ್ತಿತ್ವವನ್ನು ಬಣ್ಣಿಸಲಸದಳ.....!! ಅವನ ಜಾಣ್ಮೆಗೆ ಅವನೇ ಸಾಟಿ....!ಅಂಥಾ ಉದ್ಯೋಗದ ಅಭಾವದ ಕಾಲದಲ್ಲಿಯೂ ದಿನಕ್ಕೊಂದು ಉದ್ಯೋಗ ಬದಲಿಸಬಲ್ಲ ಅಸಾಧ್ಯ ಚತುರ...!

ಆತ ನಮ್ಮ ರೂಮಿಗೆ ಎಂಟರಾದದ್ದೇ ಆದದ್ದು ..... ರೂಮಿನ ದಿಕ್ಕೇ ಬದಲಾಗಿ ಹೋಯಿತು.ರಾತ್ರಿ ಮಲಗುವಾಗ ನಾವೆಲ್ಲ ಒಂದೇ ದಿಕ್ಕಿಗೆ ತಲೆ ಹಾಕಿ ಮಲಗಿದರೆ ದತ್ತು ದಿನಕ್ಕೊಂದು ದಿಕ್ಕಿಗೆ ತಲೆ ಹಾಕಿರುತ್ತಿದ್ದ.ಅಂವ ಮಾತ್ರಾ ಗಡಿಯಾರದ ಘಂಟೆ ಮುಳ್ಳೇ......! ಮಲಗುವಾಗಲೂ ಹೆಚ್ಚೇನು ತ್ರಾಸಿರಲಿಲ್ಲ. ಕಿವಿಗೆ ಹತ್ತಿ, ತಲೆಗೆ ಯಕ್ಷಗಾನದ ಭಾಗವತರನ್ನು ನೆನಪಿಗೆ ತರುವಂತಾ ರುಮಾಲು, ಹೊದೆಯಲು ಎಂತಾ ಬೇಸಿಗೆಯಲ್ಲೂ ಎರಡೇ ಎರಡು ಬ್ಲಾಂಕೆಟ್ ಸಾಕಾಗಿತ್ತು !

ಅವನ ಬೆಳಗಿನ ದಿನಚರಿ ಮಾತ್ರಾ .......ಪುಣ್ಯಾತ್ಮ ಟೀ ಮಾಡಲು ಪಾತ್ರೆ ಒಲೆಯ ಮೇಲಿಟ್ಟು ಸ್ನಾನಕ್ಕೆ ಹೋದರೆ ಬರುವಷ್ಟರಲ್ಲಿ ಬ್ಲಾಕ್ ಟೀ (?) ಯನ್ನು ಪಾತ್ರೆಯಿಂದ ಉದುರಿಸ ಬೇಕಾಗುತ್ತಿತ್ತು. ಸ್ನಾನ ಮಾಡುವಾಗೇನಾದರೂ ನಲ್ಲಿಯಲ್ಲಿ ನೀರು ಬರುವುದು ನಿಂತು ಹೋದರೆ ನಲ್ಲಿಯನ್ನು ಆರಿಸದೇ ನೆಟ್ಟಗೆ ಆಫೀಸಿಗೆ ಹೋಗುವುದು ಅವನ ಜಾಯಮಾನ.
ಅಂದು ಅವನಿಗೆ ಸೆಕೆಂಡ್ ಶಿಫ್ಟಿನ ಕೆಲಸ . ನಾನು, ಸೂರಿ ಮೊದಲೇ ಮನೆ ಬಿಟ್ಟಿದ್ದೆವು . ನೀರು ಬರುವುದು ನಿಂತಿದ್ದ ನಲ್ಲಿಯನ್ನು ಆರಿಸದೇ ಇಂವ ಆಫೀಸಿಗೆ ನಡೆದ. ಸಾಯಂಕಾಲ ನಾವು ಬಂದು ನೋಡುವ ಹೊತ್ತಿಗೆ ರೂಂ ಮಿನಿ ಸ್ವಿಮ್ಮಿಂಗ್ ಫೂಲಾಗಿತ್ತು...... ಪಾತ್ರೆಗಳು, ಹಾಸಿಗೆ ವಸ್ತ್ರಗಳಿಗೆ ನೀರಿನಲ್ಲಿ ಈಜುವ ಸಂತೋಷ .... ನಮಗೆ ತಡೆಯಲಾರದ ಆಕ್ರೋಶ ..ಮನೆಗೆ ಬಂದವನಲ್ಲಿ ವಿಚಾರಿಸಿದರೆ ಅಂವ ಹ್ಹ .... ಎಂದು ನಕ್ಕ ...ಜಡ ಶಂಕ್ರ....!!! ಅಂದು ರಾತ್ರಿ ಒದ್ದೆ ಹಾಸಿಗೆ ಮೇಲೆ ನಿದ್ದೆ ಬಾರದೆ ಹೊರಳಾಡಿದ್ದು ಮಾತ್ರಾ ಇನ್ನೂ ಹಸಿಹಸಿ ....ನೆನಪು

ನಾವು ಅವನನ್ನು ಸುಧಾರಿಸಿಕೊಳ್ಳಬೇಕಿತ್ತೇ ಹೊರತೂ ಅವನಿಂದ ಸುಧಾರಣೆ ನಿರೀಕ್ಷಿಸುವಂತೆಯೇ ಇರಲಿಲ್ಲ .( ಆಗ ಸುಧಾರಿಸಿಕೊಂಡು ಅಭ್ಯಾಸ ಮಾಡಿಕೊಂಡಿದ್ದು ಮದುವೆಯಾದ ಮೇಲೆ ಉಪಯೋಗಕ್ಕೆ ಬಂತೆಂದು ಹೇಳಿ ಮಡದಿಯ ಕೆಂಗಣ್ಣಿಗೆ ಗುರಿಯಾದದ್ದು ......ಸುಳ್ಳಲ್ಲ.)

ಅವನು ಮಾಡದ ಕೆಲಸವಿಲ್ಲ . ಅದ್ಯಾವುದೋ ಸೊಳ್ಳೆ ನಿವಾರಕಗಳ ವಿತರಕ ಅಂಗಡಿಗೆ ಸೇಲ್ಸ್ ಮ್ಯಾನ್ ಆಗಿಸೇರಿ ನಾಲ್ಕು ದಿನಕ್ಕೆ ಅದನ್ನು ಬಿಟ್ಟ. ನಂತರ ಒಂದು ಪ್ಲಾಸ್ಟಿಕ್ ಕವರ್ ಗಳ ವಿತರಕ ಅಂಗಡಿಗೆ ಸೇರಿದ.ಇಲ್ಲೂ ಸೇಲ್ಸ್ ಮ್ಯಾನ್ ಕೆಲಸವೇ. ಅಂಗಡಿಗಳಿಗೆ ಕವರ್ ಮಾರಿ ಬರುವ ಕೆಲಸ.ಅಂಗಡಿಯವನೊಬ್ಬ ಸರಿಯಾಗಿ ಹಣ ಪಾವತಿ ಮಾಡಲಿಲ್ಲ.ದತ್ತು ಏನ್ ಸಾಮಾನ್ಯದವನೇ .... ? ನಿನ್ನ ಅಂಗಡಿ ವಸ್ತುಗಳನ್ನೆಲ್ಲ ಸೀಜ್ ಮಾಡುವೆನೆಂದು ಹೆದರಿಸಿದ . ಅಂಗಡಿಯವನಿಗೆ ಇದೇನು ಹೊಸದೇ...? ಆಯ್ತಪ್ಪಾ ತಗಂಡು ಹೋಗು ಎಂದು ತಾನೆ ಮೂಟೆಯಲ್ಲಿ ತುಂಬಿಕೊಟ್ಟ. ದತ್ತು ಗೆದ್ದ ಸಂಭ್ರಮದಲ್ಲಿ ರೂಮಿಗೆ ಬಂದು ನಮಗೆ ತೋರಿಸಿದ. ಅವು , ಒಂದು ಬೇಲೂರು ಶಿಲಾಬಾಲಿಕೆಯಂತಾ ಪೌಡರ್ ಡಬ್ಬ ಮತ್ತು ಹದಿನೈದು ಕೆಜಿ ಅಕ್ಕಿ . ಅಕ್ಕಿಯಾದರೂ ಎಂತಾ ಕ್ವಾಲಿಟಿ....! ಹುಳುಗಳ ಮಧ್ಯೆ ಅಕ್ಕಿಯನ್ನು ಹುಡುಕಬೇಕಿತ್ತು.

ಆ ಕೆಲಸವೂ ಹೆಚ್ಚು ದಿನ ಬಾಳಿಕೆ ಬರಲಿಲ್ಲ. ಈಗ ಸೇರಿದ್ದು ಒಂದು ಅಕ್ಕಿ ಮಿಲ್ . ನಂತರದ್ದೆ ಸ್ವಲ್ಪ ಇಂಟರೆಸ್ಟಿಂಗ್ ಸ್ಟೋರಿ. ಸೇರಿದ ಕೆಲವೇ ದಿನಗಳಲ್ಲಿ ಇವನನ್ನು ನೈಟ್ ಶಿಫ್ಟ್ ಗೆ ಹಾಕಿದರು. ರಾತ್ರಿ ಹತ್ತರಿಂದ ಬೆಳಿಗ್ಗೆ ಆರರ ವರೆಗೆ ಕೆಲಸ. ನಾಲ್ಕು ದಿನ ರಾತ್ರಿ ನಿದ್ದೆ ಗೆಟ್ಟು ಕೆಲಸ ಮಾಡಿದ . ಐದನೇ ದಿನದಿಂದ ತನ್ನ ಚಾಳಿ ಶುರುಮಾಡಿದ. ಕಳ್ಳತನದಲ್ಲಿ ಮಲಗಲು ವ್ಯವಸ್ತೆಯನ್ನು ತುಂಬಾ ವ್ಯವಸ್ತಿತವಾಗಿಯೇ ಮಾಡಿಕೊಂಡ.ಅಕ್ಕಿ ತುಂಬಲು ಬಳಸುವ ಎರಡು ಗೋಣಿಚೀಲ ತೆಗೆದು ಕೊಂಡು , ಒಂದರಲ್ಲಿ ಕಾಲನ್ನೂ, ಇನ್ನೊಂದರಲ್ಲಿ ತಲೆಯನ್ನೂ ತೂರಿಸಿಕೊಂಡು ಕ್ಯಾಪ್ಸೂಲ್ ತರದಲ್ಲಿ ಅಕ್ಕಿ ಮೂಟೆಗಳ ಸಂದಿಯಲ್ಲಿ ನಿದ್ದೆ ಹೊಡೆಯಲಾರಂಬಿಸಿದ. ಈ ಉಪಾಯ ಸುಮಾರು ದಿನ ನಡೆಯಿತು.

ಒಂದು ದಿನ ಇವನ ಗ್ರಾಚಾರಕ್ಕೆ... ಇನ್ಸ್ಪೆಕ್ಷನ್ನಿಗೆಂದು ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ರೆ ಹಾಜರಿ ಪುಸ್ತಕ ಹಿಡಿದು ಬಂದರು. ಒಬ್ಬನ ಸುಳಿವಿಲ್ಲ . ಹುಡುಕಲು ಆಜ್ನೆಯಾಯಿತು.ಅಕ್ಕಿ ಮೂಟೆಗಳ ಸಂದಿಯಲ್ಲಿ ಗೊರಕೆ ಹೊಡೆಯುತ್ತಿದ್ದ ಕ್ಯಾಪ್ಸೂಲ್ ದತ್ತು ಸಿಕ್ಕಿ ಬಿದ್ದ . G.M. ತರಾಟೆಗೆ ತೆಗೆದು ಕೊಂಡರು. ಹುಷಾರಿರಲಿಲ್ಲ.....ಅದೂ ಇದೂ ಹೇಳಿ ಕಣ್ಣೀರುಗರೆದ. ವಾರ್ನ್ ಮಾಡಿ ಬಿಟ್ಟರು. ಈ ಸಲ ದತ್ತು ಬದುಕಿಕೊಂಡ.

ಆಮೇಲೆ ಕೆಲದಿನಗಳು ಸರಿಯಾಗೇ ಕೆಲಸ ಮಾಡಿದ . ನಾಯಿ ಬಾಲ ಯಾವತ್ತೂ ಡೊಂಕೆ ... ಅದಕ್ಕೆ ಅಪಚಾರ ಆಗಬಾರದಲ್ಲ.. ಈ ಸಲ ನಿದ್ದೆ ಮಾಡಲು ಹೊಸ ತಂತ್ರವೊಂದನ್ನು ಅಳವಡಿಸಿಕೊಂಡ.ಅಕ್ಕಿ ಮೂಟೆಗಳ ಸಾಗಣಿಕೆಗೆಂದು ಲಾರಿಗಳು ನಿಂತಿರುತ್ತಿದ್ದವಲ್ಲಾ... ಲಾರಿಯಲ್ಲಿ ಮಲಗಲು ಶುರು ಮಾಡಿದ .ದಿಕ್ಕು ದೆಸೆ ಇಲ್ಲದ ದತ್ತು ಸ್ಟೇರಿಂಗ್ ಕಡೆ ಕಾಲಿಡಬೇಕೋ ,ತಲೆಯಿಡಬೇಕೋ ಒಂದೂ ಯೋಚಿಸದೆ ಮಲಗಿ ಗೊರೆಯುವುದೊಂದೇ ಮಾಡಿದ. ಒಂದಿನ ನಿದ್ರೆಯ ಭರದಲ್ಲಿ ಇವನ ಕಾಲು ಲಾರಿಯ ಹಾರನ್ ಮೇಲೆ ಬಿತ್ತು. ಪೊಂ .......... ........ ......... ಹಾರನ್ ಹೊಡೆದು ಕೊಳ್ಳತೊಡಗಿತು. ದತ್ತುಗೆ ಎಚ್ಚರವಾಗಿ ಗಡಿಬಿಡಿಯಾಗಿ ಶಬ್ಧವನ್ನು ನಿಲ್ಲಿಸಲು ನೋಡಿದ. ಊಹೂ .... ಹಾರನ್ ಸ್ಟ್ರಕ್ ಆಗಿಬಿಟ್ಟಿತ್ತು .

ಸೆಕ್ಯುರಿಟಿಯವರೆಲ್ಲ ಅಲರ್ಟ್ ಆದರು.ಶಬ್ದ ಬರುತ್ತಿರುವ ಲಾರಿಯ ಸಮೀಪ ಬರತೊಡಗಿದರು.ದತ್ತುಗೆ ಭಯವಾಗತೊಡಗಿ ಗೊಂದಲದಲ್ಲಿ ಏನು ಮಾಡಬೇಕೆಂದು ತೋಚದೆ ಬೆಡ್ ಶೀಟ್ ಮುಚ್ಚಿಕೊಂಡು ಓಡತೊಡಗಿದ. ಹಾಗೆಯೇ ಸಿಕ್ಕುಬಿದ್ದ.ಯಾರೆಂದು ನೋಡುವುದಕ್ಕಿಂತ ಮೊದಲು ಗುದ್ದುಗಳು ಬಿದ್ದವು. ಅಯ್ಯಯ್ಯೋ.... ಬಿಡಿ ನಾನು ದತ್ತಾತ್ರೇಯ..... ಎಂದು ಗೋಳಿಟ್ಟ. ಈ ಸಲ ಯಾವ ತಂತ್ರವೂ ನಡೆಯಲಿಲ್ಲ. ಆನ್ ದಿ ಸ್ಪಾಟ್ .... ಸಸ್ಪೆಂಡ್ ಆಯಿತು.

ಮುಖ ಒಣಗಿಸಿಕೊಂಡು ರೂಮಿಗೆ ಬಂದು ಬಿದ್ದುಕೊಂಡ. ಎರಡು ದಿನ ರೂಮಿನಲ್ಲಿಯೇ ಇದ್ದುದನ್ನು ಕಂಡು ನಾವು ಕೇಳಿದೆವು . ಈ ಕಥೆಯೆಲ್ಲಾ ಹೇಳಿದ.ಸಿಕ್ಕಿಹಾಕಿಕೊಂಡೆ ....ಎಂದು ಪಶ್ಚಾತ್ತಾಪ ಪಟ್ಟ ಹೊರತೂ ಬುದ್ದಿ ಕಲಿತ ಮಾತಾಡಲಿಲ್ಲ.

ನಂತರ ಇನ್ನೊಂದು ಕಡೆ ಕೆಲಸಕ್ಕೆ ಸೇರಿ , ಅಲ್ಲಿ ಫ್ಯಾಕ್ಟರಿಯ ಪಾಸ್ ಬುಕ್ ಕದ್ದು , ಪೋಲೀಸ್ ಕಂಪ್ಲೇಂಟ್ ಆಗಿ, ಪೊಲೀಸರು ರೂಮಿನ ತನಕ ಬಂದದ್ದೂ ಆಯ್ತು. ನಮ್ಮ ರೂಂ ಓನರಿಗೆ ದತ್ತು ನಮ್ಮ ರೂಮಿನಲ್ಲಿರುವ ಬಗ್ಗೆ ಗೊತ್ತಿರಲಿಲ್ಲವಾದ್ದರಿಂದ ದತ್ತಾತ್ರೇಯ ಎನ್ನುವವರು ಯಾರೂ ಇಲ್ಲಿಲ್ಲ ಎಂದು ಕಳಿಸಿ ಬಿಟ್ಟ.ಸಧ್ಯ ಬಚಾವಾದ..!

ನಮಗೆ ಇವನ ಸಹವಾಸ ಸಾಕಾಗಿ ಹೋಗಿತ್ತು.ಅವನ ಕೈಚೀಲ,ಹಾಸಿಗೆ ಹೊರಗಿಟ್ಟು,'' ನಾವು ರೂಂ ಬದಲಾಯಿಸುತ್ತಿದ್ದೇವೆ ನಿನಗಿಲ್ಲಿ ಅವಕಾಶವಿಲ್ಲ . ''ಎಂದು ಕಳಿಸುವಷ್ಟರಲ್ಲಿ ಹೈರಾಣವಾಗಿದ್ದೆವು. ಜೀವನದಲ್ಲಿ ಗೊತ್ತು ಗುರಿಯಿಲ್ಲದೆ, ಸ್ಥಿರತೆಯಿಲ್ಲದೆ, ಹೋದಲ್ಲೆಲ್ಲಾ ಒಂದೊಂದು ಭಾನಗಡಿ ಮಾಡಿಕೊಳ್ಳುವ ದತ್ತಾತ್ರೇಯ ಅಲ್ಲಿ ಇಲ್ಲಿ ಕೆಲಸ ಮಾಡಿ ಯಾವುದೂ ಬರಕಾಸ್ತಾಗದೆ, ಊರು ಸೇರಿಕೊಂಡಿದ್ದಾನೆ.ಹುಟ್ಟು ಗುಣ ಸುಟ್ಟರೂ ಬಿಡ... ಎಂಬಂತೆ ಯಡವಟ್ಟು ಮಾತಾಡುತ್ತಾ , ಹುಚ್ಚನಂತೆ ಅಲ್ಲಿ ಇಲ್ಲಿ ಅಲೆಯುತ್ತಿದ್ದಾನೆ.

ಆದರೆ ಜೀವನದಲ್ಲಿ ಹೇಗಿರಬಾರದು ಎಂಬುದನ್ನು ಕಲಿಸಿದ ಆತ ನಿಜವಾಗೂ ನನ್ನ ಗುರು......!

(ಈ ಮೇಲೆ ಬರೆದಿದ್ದೆಲ್ಲ ನನ್ನವರು ನನಗೆ ಹೇಳಿದ ಅನುಭವ ಕಥನ.)

Tuesday, November 17, 2009

ಹೈಪೋಕಾಂಡ್ರಿಯಾ [Hypochondria]

ಸಾಮಾನ್ಯವಾಗಿ ಮನುಷ್ಯನ ದೈಹಿಕ ಸಮತೋಲನ ತಪ್ಪಿದಾಗ ಕಾಣಿಸಿಕೊಳ್ಳುವ ಮುಖ್ಯ ಲಕ್ಷಣಗಳೆಂದರೆ ತಲೆನೋವು ,ಹೊಟ್ಟೆನೋವು,ನಿಶ್ಯಕ್ತಿ ಹಾಗು ಎದೆಬಡಿತ ಹೆಚ್ಚಾಗುವುದು. ಇವು ಆರೋಗ್ಯದ ಕಡೆ ಕಾಳಜಿ ವಹಿಸುವಂತೆ ಪ್ರಕಟವಾಗುವ ಮುನ್ನೆಚ್ಚರಿಕೆಗಳು ಕೂಡಾ.

ಕೆಲವೊಮ್ಮೆ ಈ 'ಕಾಳಜಿ 'ಅನ್ನುವುದು ಅತಿಯಾಗಿ ಖಾಯಿಲೆಯಾಗುತ್ತದೆ. ಯಾರಿಗೋ ಬ್ರೈನ್ ಹೆಮರೆಜ್ ಆಯಿತೆಂದು ಕೊಳ್ಳೋಣ.ಅದರ ಲಕ್ಷಣಗಳು ಮೊದಲು ಅತಿಯಾದ ತಲೆನೋವು , ನಂತರ ಪ್ರಜ್ಞೆ ತಪ್ಪುವುದು ಹೀಗೆ ..... ಸಹಜವಾದ ಸುಸ್ತಿನಿಂದಲೋ ,ನಿದ್ರೆಗೆಟ್ಟಿದ್ದರಿಂದಲೋ ಅಥವಾ ಇನ್ನಾವುದೋ ಕಾರಣದಿಂದ ನಮ್ಮಲ್ಲೂ ಅಲ್ಪ ಸ್ವಲ್ಪ ಈ ರೀತಿಯ ತಲೆನೋವು ಕಾಣಿಸಿಕೊಂಡಾಕ್ಷಣ 'ಅಯ್ಯೋ , ನನಗೆ ಬ್ರೈನ್ ಹೆಮರೆಜ್ ಆಗುತ್ತಿದೆ' ಎಂದು ಹೌಹಾರುವುದು ,ಕಳವಳಗೊಳ್ಳುವುದು ಮಾಡಿ ಮನೆಮಂದಿಯನ್ನೆಲ್ಲಾ ಗಾಬರಿಗೊಳಿಸುವುದು. ದಿನವಿಡೀ ಅದನ್ನೇ ಚಿಂತಿಸುವುದು.ಅದರಿಂದ ತಲೆನೋವು ಇನ್ನಷ್ಟು ಹೆಚ್ಚಿಸಿಕೊಳ್ಳುವುದು.

'' ಯಾವುಯಾವುದೋ ಭಯಂಕರ ಕಾಯಿಲೆಗಳ ಅಲ್ಪ ಸ್ವಲ್ಪ ಚಿನ್ಹೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ಆ ಕಾಯಿಲೆಗೆ ನಾವು ಒಳಗಾಗಿಯೇ ಬಿಟ್ಟಿದ್ದೇವೆಂದು ಅತಿಯಾಗಿ ತಳಮಳಗೊಳ್ಳುವ ಹಾಗು ಅದೇ ಚಿಂತೆಯಲ್ಲಿ ದಿನನಿತ್ಯದ ಜೀವನವನ್ನು ಹಾಳುಮಾಡಿಕೊಳ್ಳುವ ಈ ಸ್ವಭಾವ ........ಒಂದು ಮನೋದೈಹಿಕ ಕಾಯಿಲೆ. ಇದಕ್ಕೆ ಹೈಪೋಕಾಂಡ್ರಿಯಾ [Hypochondria ] ಅಥವಾ ಹೈಪೋಕಾಂಡ್ರಿಯಾಸಿಸ್ ಎನ್ನುತ್ತಾರೆ . ''

ಕೆಲವರು ತಮಗೇನೋ ದೊಡ್ಡ ಕಾಯಿಲೆ ಬಡಿದಿದೆಯೆಂದು ಪದೇ ಪದೇ ವೈದ್ಯರ ಹತ್ತಿರ ಹೋಗುತ್ತಿರುತ್ತಾರೆ.ಯಾವುದೇ ಗುರುತರ ಕಾಯಿಲೆ ಇಲ್ಲವೆಂದರೂ ವೈದ್ಯರ ಮಾತಿನಲ್ಲಿ ವಿಶ್ವಾಸವಿಲ್ಲ.ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ನಂಬಿಕೆಯನ್ನು ಬದಲಾಯಿಸಲಾರರು.

ಇನ್ನು ಕೆಲವರು ಯಾವುದಾದರೂ ರೋಗದ ಲಕ್ಷಣಗಳನ್ನು ಗಮನಿಸಿದರೂ ಸಹಾ ವೈದ್ಯರ ಹತ್ತಿರ ಹೋಗಲಾರರು.ವೈದ್ಯರೇನಾದರೂ ದೊಡ್ಡ ರೋಗವಿದೆಯೆಂದು ಹೇಳಿದರೆ.....ಎನ್ನುವ ಭಯದಿಂದ ತಮ್ಮಲ್ಲಿಯೇ ಗೌಪ್ಯವಾಗಿರಿಸಿಕೊಂಡು, ರೋಗವನ್ನು ಉಲ್ಬಣಗೊಳಿಸಿಕೊಂಡು ತೊಂದರೆ ಪಡುತ್ತಿರುತ್ತಾರೆ ಮತ್ತು ತೊಂದರೆ ಕೊಡುತ್ತಿರುತ್ತಾರೆ.
ಈ ಎಲ್ಲಾ ಸ್ವಭಾವಗಳೂ ಹೈಪೋಕಾಂಡ್ರಿಯಾದ ಲಕ್ಷಣಗಳು.

ಈ ರೀತಿ ಕಾಯಿಲೆಗಳ ಬಗ್ಗೆ ಅತಿಯಾಗಿ ಚಿಂತಿಸುತ್ತಾ ,ಅನುಕೂಲವಿದ್ದವರು (!)ದಿನಗಟ್ಟಲೆ ಅಂತರ್ಜಾಲದಲ್ಲಿ ವೈದ್ಯಕೀಯ ವಿವರಗಳಿಗಾಗಿ ಶೋಧಿಸುತ್ತಾ 'ಸೈಬರ್ ಕಾಂಡ್ರಿಯಾ ' [Cyberchondria] ಎನ್ನುವ ಹೊಸ ರೋಗವೊಂದನ್ನು ತಂದುಕೊಳ್ಳುತ್ತಾರೆ.

ಹೈಪೋಕಾಂಡ್ರಿಯಾ ಸಾಮಾನ್ಯವಾಗಿ ಖಿನ್ನತೆ ,ಗೀಳುರೋಗ , ಭಯಗಳು [phobia] ಇವುಗಳೊಂದಿಗೆ ಸಾಮರಸ್ಯ ಹೊಂದಿದೆ. ಅನುವಂಶಿಕತೆಯೇನೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ.ಅನಾವಶ್ಯಕ ಉದ್ವೇಗ , ಒತ್ತಡ ಹಾಗೂ ಕಾಡುವ ಕಾಯಿಲೆಗಳಾದ ಸಕ್ಕರೆ ಕಾಯಿಲೆ ,ಸಂಧಿವಾತ ಕೆಲವೊಮ್ಮೆ ಕಾರಣಗಳಾಗುವ ಸಾಧ್ಯತೆ ಇರುತ್ತದೆ.ಖಿನ್ನತೆಗೆ ಕಾರಣವಾಗುವ ,ಮೆದುಳಿನಲ್ಲಿ ಸ್ರವಿಸುವ ರಾಸಾಯನಿಕಗಳಾದ serotonin ಮತ್ತು norepinephrine ಗಳ ಏರುಪೇರು ಕೂಡಾ ಕಾರಣವಾಗಬಲ್ಲದು. ಮೀರಿದ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ.....!

ಇದನ್ನು ಸೈಕೋ ಥೆರಪಿಯಿಂದ ತಹಬದಿಗೆ ತರಬಹುದು.ಆಪ್ತ ಸಮಾಲೋಚನೆಯ ಮೂಲಕ ವಸ್ತುಸ್ತಿತಿಯ ಅರಿವು ಮೂಡಿಸುವುದರಿಂದ ರೋಗಿಯಲ್ಲಿ ಆತ್ಮವಿಶ್ವಾಸ ತುಂಬಬಹುದು.

Tuesday, November 10, 2009

ಮಕ್ಕಳೆಂಬ ಕೌತುಕಗಳು

ನನಗಿಬ್ಬರು ಮಕ್ಕಳು . ಮಗಳು ಐಶ್ವರ್ಯ ದೊಡ್ಡವಳು. ಮಗ ಶಿಶಿರ ಐದು ವರುಷದವನು .
ನನ್ನ ಮಗ ತುಂಟ . ಅವನಿಗೆ ಏನನ್ನೇ ಹೊಸತು ತಂದು ಕೊಟ್ಟರೂ ಅದನ್ನು ತಕ್ಷಣ ಉಪಯೋಗಿಸುವುದಿಲ್ಲ.ಅತ್ತ ತಿರುಗಿಸಿ ಇತ್ತ ತಿರುಗಿಸಿ ನೋಡುತ್ತಾ ತನ್ನಲ್ಲಿಯೇ ಹೆಮ್ಮೆಪಟ್ಟುಕೊಳ್ಳುತ್ತಿರುತ್ತಾನೆ.ಬಂದವರಿಗೆಲ್ಲಾ ' ನೋಡು ಹೊಸಾದು 'ಎಂದು ತೋರಿಸುತ್ತಾ ಇರುತ್ತಾನೆ.ಹೊಸತನ್ನು ಹಾಗೆಯೇ ಉಳಿಸಿಕೊಳ್ಳುವ ಯತ್ನ ಅವನದು.ಹೊಸ ಪೆನ್ಸಿಲ್ ,ಪುಸ್ತಕ ,ಶೂ ಹೀಗೆ ಏನೇ ತೆಗೆಸಿ ಕೊಟ್ಟರೂ ಅದನ್ನು ತಕ್ಷಣ ಬಳಸಲು ಒಪ್ಪುವುದಿಲ್ಲ.ಪೆನ್ಸಿಲ್ ಕೆತ್ತಿದರೆ ಚಿಕ್ಕದಾಗಿ ಖಾಲಿಯಾಗುವುದೆಂದು ಕೆತ್ತುವಂತೆಯೇ ಇಲ್ಲ.ನೋಟ್ ಪುಸ್ತಕ ಬರೆದರೆ ಹಳತಾಗುವುದೆಂದು ಬರೆಯದೇ ಹಾಗೆಯೇ ಇಟ್ಟುಕೊಳ್ಳುತ್ತಾನೆ.ಚಪ್ಪಲಿ ಹೊರಗಡೆಗೆ ಹಾಕಿಕೊಂಡು ಹೋದರೆ ಗಲೀಜಾಗುತ್ತದೆಂದು ಹಾಲ್ ನ ಮೂಲೆಯಲ್ಲಿ ಇಟ್ಟಿರುತ್ತಾನೆ ಜೋಪಾನವಾಗಿ.ಎಲ್ಲರೂ'' ಜಿಪುಣ ಕಣೋ ನೀನು ''ಎನ್ನುತ್ತಿರುತ್ತಾರೆ.ನನಗೆ ಮಾತ್ರಾ ಹಾಗನ್ನಿಸುವುದಿಲ್ಲ . ಒಮ್ಮೆ ಉಪಯೋಗಿಸಲು ಶುರು ಮಾಡಿದ ಅಂದರೆ ಸ್ವಲ್ಪ ಹೊತ್ತಿನಲ್ಲಿಯೇ ಆಟಿಕೆಗಳ ಒಂದೊಂದು ಭಾಗವೂ ಒಂದೊಂದು ದಿಕ್ಕಿಗೆ ದೇಶಾಂತರ ಹೊರಟು ಬಿಡುತ್ತವೆ . ಆರಿಸಲು ಪೊರಕೆಯೇ ಬೇಕು.

ನಾನು ,ನನ್ನ ಮಗಳು ಐಶು ಶಿಶಿರನೊಂದಿಗೆ ಕಣ್ಣ ಮುಚ್ಚಾಲೆ ಆಡುತ್ತಿರುತ್ತೇವೆ.ಒಮ್ಮೆ ಐಶು ಕಳ್ಳಿಯಾಗಿದ್ದಳು . ನಾನು, ಶಿಶಿರ ಬಾತ್ ರೂಮಿನಲ್ಲಿ ಅಡಗಿ ಕೊಂಡೆವು .ಐಶು ಹುಡುಕುತ್ತಾ ಬಂದಳು.ಶಿಶಿರ ' ನಾವು ಬಾತ್ ರೂಮಿನಲ್ಲಿ ಅಡಗಿ ಕೊಂಡಿಲ್ಲ 'ಎಂದು ದೊಡ್ಡದಾಗಿ ಹೇಳಿದ . ಐಶು ನಮ್ಮಿಬ್ಬರನ್ನು ಔಟ್ ಮಾಡಿದಳು.

ಶಿಶಿರನ ಕಥೆ ಒಂದಲ್ಲ , ಎರಡಲ್ಲ . ಒಂದಿನ ಪಾತ್ರೆ ತೊಳೆಯುವ ವಿಂ ಬಾರ್ ತೆಗೆದುಕೊಂಡು ಬಕೆಟ್ಟಿನಲ್ಲಿ ನೀರಿನೊಂದಿಗೆ ಕದಡುತ್ತಿದ್ದ.ಬರುತ್ತಿರುವ ನೊರೆಯೊಂದಿಗೆ ಐಸ್ಕ್ರೀಂ ಎಂದು ಆಟವಾಡುತ್ತಿದ್ದ . ನಾನು ಕೂಗಿದೆ, '' ಶಿಶಿರಾ ವಿಂ ಬಾರ್ ಮುಟ್ಬೇಡ .ಆಡಿದ್ದು ಸಾಕು ಬಾ ಇಲ್ಲಿ.. ಶಿಶಿರ ಕೈ ಸರಿಯಾಗಿ ತೊಳೆಯದೇ ಹಾಗೇ ಬಂದ.

ನಾನು ಬುದ್ಧಿ ಮಾತು ಹೇಳಲಾರಂಬಿಸಿದೆ....''ಪುಟ್ಟಾ ವಿಂ ಬಾರ್ ಜೊತೆಗೆಲ್ಲಾ ಆಟ ಆಡಬಾರದು . ಅದನ್ನ ಮುಟ್ಟಿದರೆ ನಿನ್ನ ಮೆತ್ತಗಿನ ಪುಟಾಣಿ ಕೈ ಒರಟಾಗಿ ಹೋಗತ್ತೆ. ಸರಿಯಾಗಿ ಕೈ ತೊಳದಿಲ್ಲ ನೋಡು.ಹೊಟ್ಟೆಗೆ ಹೋದ್ರೆ ವಿಷ ಗೊತ್ತಾ.. ಆಮೇಲೆ ಹೊಟ್ಟೆನೋವು, ವಾಂತಿ........ಮುಂದುವರೆಸುತ್ತಲಿದ್ದೆ.

ಶಿಶಿರ ಒಂದೇ ಮಾತಲ್ಲಿ ನನ್ನ ಬಾಯಿ ಮುಚ್ಚಿಸಿದ.'' ಅಮ್ಮಾ , ನಮ್ಮನೆಯಲ್ಲಿ ಪಾತ್ರೇನ ವಿಷ ಹಾಕಿ ತೊಳಿತಾರಾ........?


ಇನ್ನೊಮ್ಮೆ ನಾವೆಲ್ಲಾ ದಕ್ಷಿಣ ಭಾರತದ ಕಡೆ ಪ್ರವಾಸ ಹೋಗಿದ್ದೆವು . ತಂಜಾವೋರು ನೋಡಿಕೊಂಡು ಹೋಟಲಿನಲ್ಲಿ ಊಟ ಮಾಡಿಕೊಂಡು ಹೊರಟೆವು. ದಾರಿಯಲ್ಲಿ ನಮ್ಮ ವಾಹನ ನಿಲ್ಲಿಸಿ ಎಲ್ಲರಿಗೂ ಐಸ್ಕ್ರೀಂ ಕೊಡಿಸಲಾಯಿತು.ಎಲ್ಲರೂ ತಿನ್ನತೊಡಗಿದರು . ಶಿಶಿರ ಮಾತ್ರಾ ಮನೆಗೆ ಹೋದಮೇಲೆ ತಿನ್ನುತ್ತೇನೆಂದ..........!ಎಲ್ಲರೂ ನಕ್ಕರು.

ಮಕ್ಕಳು ಯಾವ ರೀತಿ ಆಲೋಚಿಸುವರೆಂಬುದು ಗೊತ್ತೇ ಆಗುವುದಿಲ್ಲ.ನನಗಂತೂ ದಿನ ದಿನವೂ ವಿಸ್ಮಯವಾಗಿಯೇ ಕಾಣಿಸುವುದು.ಅವರ ಛೇಸ್ಟೆಗಳು ಹೊಸತನ್ನ ನಮಗೂ ಕಲಿಸುತ್ತವೆ.

ಅದು ಸುಮಾರು ಅಮೆರಿಕಾದ w.t.c.ಕಟ್ಟಡ ವಿಧ್ವಂಸಗೊಂಡ ವರ್ಷ .ಎಲ್ಲರ ಬಾಯಲ್ಲೂ ಬಿನ್ ಲಾಡೆನ್ ,ಜಾರ್ಜ್ ಬುಷ್ ಎನ್ನುವ ಹೆಸರುಗಳೇ ನಲಿದಾಡುತ್ತಿದ್ದವು.
ಐಶು , ನನ್ನ ಮಗಳು ಚಿಕ್ಕವಳಿದ್ದಾಗ ತುಂಬಾ ಚೂಟಿ.ನಿಂತಲ್ಲಿ ನಿಲ್ಲುತ್ತಿರಲಿಲ್ಲ. ಕೇಳುವ ಪ್ರಶ್ನೆಗಳಿಗೆ ಅನೇಕಕ್ಕೆ ನನ್ನಲ್ಲಿ ಉತ್ತರವಿರುತ್ತಿರಲಿಲ್ಲ. ಒಂದಿನ ರಾತ್ರಿ ಮಲಗಿದ್ದೆವು .ಸಮಯ ಹನ್ನೊಂದು ದಾಟಿತ್ತು.ನನಗೆ ನಿದ್ದೆಯ ಜೋಂಪು ಹತ್ತ ತೊಡಗಿತ್ತು .ಐಶು 'ಅಮ್ಮಾ.......'ಎಂದು ಕರೆದಳು. ಕಣ್ಣು ಮುಚ್ಚಿಕೊಂಡೇ ಊ.....ಗುಟ್ಟಿದೆ . ''ನಿದ್ದೆ ಬರ್ತಾ ಇಲ್ಲಾ........''ರಾಗವೆಳೆದಳು.ನಾನು ''ರಾಮರಾಮ ಹೇಳ್ತಾ ಮಲಗು..ನಿದ್ದೆ ಬರತ್ತೆ .''ಎಂದು ತಿರುಗಿ ಮಲಗಿದೆ.ನನ್ನವರಿಗಿನ್ನೂ ನಿದ್ರೆ ಬಂದಿರಲಿಲ್ಲಾಂತ ಕಾಣಿಸುತ್ತೆ, '' ಪುಟ್ಟಾ......ಪಕ್ಕದ್ಮನೆ ವೆಂಕಟೇಶ ,ಪಕ್ಕದ್ಮನೆ ವೆಂಕಟೇಶ.... ಅಂದ್ರೂ ನಿದ್ರೆ ಬರತ್ತೆ ಪುಟ್ಟಾ....''ಎಂದರು ನನ್ನನ್ನು ಛೇಡಿಸಲು. ಐಶು ತಕ್ಷಣ ''ಬಿನ್ ಲಾಡೆನ್, ಬಿನ್ ಲಾಡೆನ್.........ಎನ್ನಲು ಶುರು ಮಾಡಬೇಕೆ.....!!ನಮ್ಮಿಬ್ಬರಿಗೂ ನಗುವೋ ನಗು . ನಿದ್ದೆ ಹಾರಿಯೇ ಹೋಯ್ತು.

ಮಕ್ಕಳ ಪ್ರತೀ ನಡವಳಿಕೆಯೂ ಹೊಸತಲ್ಲವೇ...? ಕೌತುಕವಲ್ಲವೇ .....? ನಿಮಗೂ ಈ ರೀತಿಯ ಅನುಭವಗಳಾಗಿರಬಹುದಲ್ಲವೇ.....?

Tuesday, November 3, 2009

ಡಿಸ್ಥಿಮಿಯ.......!ಏನಿದು.......?

ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದಾಗ ಈ ವಿಷಯ ಚರ್ಚೆಯಲ್ಲಿತ್ತು.ಪರಿಚಯದ ಮಧ್ಯ ವಯಸ್ಸಿನ ಹೆಣ್ಣು ಮಗಳೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು ಎಂಬುದಾಗಿ.
ಆಕೆ ಜೀವನದಲ್ಲಿ ಅಪಾರ ಕಷ್ಟವನ್ನು ಉಂಡಾಕೆ.ಮದುವೆಯಾಗಿ ಕೈಲೊಂದು ಕೂಸು ಬರುವ ಹೊತ್ತಿಗೆ ವೈಧವ್ಯವೂ ಜೊತೆಯಾಗಿತ್ತು.ಜೀವನವನ್ನು ಎದುರಿಸಲು ಆಕೆ ಪಟ್ಟ ಪಾಡು ಲೆಕ್ಕವಿಲ್ಲದಷ್ಟು.ನರ್ಸ್ ಟ್ರೈನಿಂಗ್ ಮಾಡಿಕೊಂಡ ಆಕೆ ಹಳ್ಳಿಗಳಲ್ಲಿ ಸೇವೆ ಸಲ್ಲಿಸುವ ಬಾಯಮ್ಮ ಆದಳು.ಮಗ ಮಾವನ ಮನೆಯಲ್ಲಿ ಬೆಳೆಯುತ್ತಿದ್ದ.ಅನೇಕ ವರ್ಷಗಳಿಂದ ಆಕೆಗೆ ಒಂಟಿತನವೇ ಜೊತೆ.ದಿನವಿಡೀ ಕರ್ತವ್ಯದ ನಿಮಿತ್ಯ ಹಳ್ಳಿಗಳಲ್ಲಿ ಸುತ್ತಾಟ.ಕಷ್ಟ ಸುಖ ಹೇಳಿಕೊಳ್ಳಲು ಯಾರೂ ಇಲ್ಲ.... ಬಗ್ಗಿದವರ ಮೇಲೆ ಇನ್ನೊಂದು ಗುದ್ದು ಎಂಬಂತೆ ಸೌಮ್ಯ ಸ್ವಭಾವದ ಇವಳ ಮೇಲೆ ಕೆಲಸದ ಒತ್ತಡ .ವಿನಾಕಾರಣ ಮೇಲಧಿಕಾರಿಗಳ ಸಿಡಿಮಿಡಿ.

ಬಹುಷಃ ಈ ಸಮಯದಲ್ಲಿಯೇ ಆಕೆಯ ಮಾನಸಿಕ ಸ್ಥಿತಿ ಹತೋಟಿ ಕಳೆದು ಕೊಳ್ಳಲು ಶುರುವಾಗಿರಬಹುದು.ಹತ್ತಿರದಿಂದ ಗಮನಿಸುವವರು ಯಾರೂ ಇಲ್ಲವಾದ್ದರಿಂದ ಬೂದಿ ಮುಚ್ಚಿದ ಕೆಂಡದಂತೆ ಅದು ಆಕೆಯನ್ನು ಸುಡುತ್ತಿತ್ತು ಅನ್ನಿಸುತ್ತದೆ.ಮಾನಸಿಕವಾಗಿ ತುಂಬಾ ನೊಂದಾಕೆ ಎಂಬ ಭಾವದಿಂದ ಬಿಂಬಿತಳಾದ ಆಕೆಯ ಕೆಲವು ಅಸಂಬದ್ದತೆಗಳು ತವರಿನವರಿಗಾಗಲೀ,ಬಂಧುಗಳಿಗಾಗಲೀ ಸುಳಿವೇ ಸಿಗಲಿಲ್ಲ.ಆಕೆಯ ಕಷ್ಟಕ್ಕೆ ತವರಿನವರ ಸಹಾಯ ,ಬೆಂಬಲ ಸದಾ ಇರುತ್ತಿತ್ತು ಕೂಡಾ.ಮಗ ದೊಡ್ಡವನಾಗಿ ಒಳ್ಳೆಯ ರೀತಿಯಲ್ಲಿ ಸ್ವಂತ ಉದ್ಯೋಗ ಮಾಡಿಕೊಂಡಿದ್ದರೂ ಆಕೆಯು ಯೋಚಿಸುತ್ತಿದ್ದ ರೀತಿಯೇ ಬೇರೆ.ತಂದೆಯಿಲ್ಲದ ಮಗನಿಗೆ ಮದುವೆಯಾಗುವುದೋ ಇಲ್ಲವೊ....? ತನ್ನ ಸ್ಥಿತಿಯನ್ನು ನೋಡಿ ಸಂಬಂಧ ಬೆಳೆಸುವವರಾರು...? ಹೀಗೆ ನಾನಾತರದ ನಕಾರಾತ್ಮಕ ಯೋಚನೆಗಳು. ಆಗಾಗ ಹೇಳುತ್ತಿದ್ದಳಂತೆ.


ವಯಸ್ಸಿನ ನಿಮಿತ್ಯ ಸೊಂಟನೋವು ಶುರುವಾಗಿ ಸೊಂಟದ ನರದ ಆಪರೇಶನ್ ಕೂಡಾ ಆಗಿತ್ತು.ದೈಹಿಕ ತೊಂದರೆಯ ಜೊತೆಗೆ ತನ್ನ ಬಗೆಗೆ ಬೆಳೆಸಿಕೊಂಡ ಕೀಳರಿಮೆಯೂ ಸೇರಿಕೊಂಡು ಆಕೆ ಅದೇನು ನಿರ್ಧಾರ ತೆಗೆದುಕೊಂಡಳೋ...... ಒಂದು ದುರದೃಷ್ಟದ ಮುಂಜಾನೆ ಬಾವಿಗೆ ಬಿದ್ದು ಜೀವ ತೆಗೆದುಕೊಂಡಳು.

ಜೀವನವಿಡೀ ಕಷ್ಟ ಸಹಿಸಿಕೊಂಡ ಆಕೆ ಹೀಗೇಕೆ ಮಾಡಿದಳು...? ಹುಡುಕಲು ಹೊರಟವರಿಗೆ ತನ್ನ ಸಾವಿಗೆ ಯಾರೂ ಕಾರಣರಲ್ಲವೆಂದು ಬರೆದಿಟ್ಟ ಪತ್ರ ಸಿಕ್ಕರೂ ಮೊದಲು ಕಾಣಿಸಿದ್ದು ಮನೆ ತುಂಬಾ ತರತರದ ವಸ್ತುಗಳ ರಾಶಿ.ಬೇಕಾದ್ದಕ್ಕಿಂತಾ ಸಧ್ಯದ ಪರಿಸ್ಥಿತಿಯಲ್ಲಿ ಅಪ್ರಸ್ತುತವಾದವುಗಳೇ ಆಗಿತ್ತು.ಪೆಟ್ಟಿಗೆ ತುಂಬಾ ನೂರಾರು ಸೋಪುಗಳು,ನೆರಿಗೆ ಮುರಿಯದ [ಬಳಸದ]ಐವತ್ತರವತ್ತು ಸೀರೆಗಳು,ಲೆಕ್ಕವಿಲ್ಲದಷ್ಟು ಪಾತ್ರೆಪರಡಿಗಳು..
ಜೀವವಿಲ್ಲದ ಈ ವಸ್ತುಗಳೇ ಆಕೆಯ ಸಂಗಾತಿಗಳೇನೋ ಎಂಬಂತೆ....!!


ನನಗನ್ನಿಸಿದ ಪ್ರಕಾರ ಇದೊಂದು ಮಾನಸಿಕ ಖಾಯಿಲೆಯ ಪರಿಣಾಮ.ಇದು ಹೆಚ್ಚಾಗಿ ಡಿಸ್ಥಿಮಿಯಾ ಎನ್ನುವ ಮಾನಸಿಕ ಖಿನ್ನತೆಯ ಲಕ್ಷಣಗಳನ್ನು ಹೊಂದಿದೆ.

ಏನಿದು ....?ಡಿಸ್ಥಿಮಿಯ ...!!!

ಡಿಸ್ಥಿಮಿಯ ..ಇದು ತೀವ್ರತೆ ಕಡಿಮೆ ಇರುವ,ಬಹುಕಾಲದಿಂದ ಕಾಡುತ್ತಿರುವ ಮಾನಸಿಕ ಖಿನ್ನತೆ[ಮೈಲ್ಡ್ ಕ್ರೋನಿಕ್ ಡಿಪ್ರೆಶನ್]
ಸುಲಭವಾಗಿ ಹೇಳುವದಾದರೆ ಮನಸ್ಸಿನ ಕೆಟ್ಟ ಸ್ಥಿತಿ.
ಇದು ಮಾನಸಿಕ ಖಿನ್ನತೆಗಳ ಫಲಕದ ಅಡಿಯಲ್ಲಿಯೇ ಕಾಣಿಸಿಕೊಂಡರೂ ತೀವ್ರತೆ ಕಡಿಮೆ ಇರುವ ಕಾರಣ ಸಾಮಾನ್ಯರ ಗಮನಕ್ಕೆ ಸುಲಭವಾಗಿ ನಿಲುಕಲಾರದು.

ಈ ಕಾಯಿಲೆ ಯಾವ ಕಾರಣದಿಂದ ಬರಬಹುದೆಂಬುದು ನಿಖರವಾಗಿ ತಿಳಿದಿಲ್ಲವಾದರೂ ಮೆದುಳಿನಲ್ಲಿ ಸ್ರವಿಸುವ,ಉದ್ವೇಗ ನಿಯಂತ್ರಿಸುವ ರಾಸಾಯನಿಕ serotonin ನ ಅಸ್ಥವ್ಯಸ್ತತೆಯೇ ಕಾರಣ ಎಂಬುದು ಕೆಲವರ ಅಂಬೋಣ .
ಆನುವಂಶಿಕವಾಗಿ ಬರುವ ಸಾಧ್ಯತೆ ಪ್ರತಿಶತ ೫೦ ಕ್ಕೂ ಹೆಚ್ಚು.ಪ್ರತಿಶತ ೩ ಜನರು ಪ್ರತಿವರ್ಷವೂ ಈ ಕಾಯಿಲೆಗೆ ಈಡಾಗುತ್ತಿದ್ದಾರೆ.ಪ್ರೀತಿಪಾತ್ರರಾದವರ ಅಗಲಿಕೆ,ಸಾವು,ಘೋರವಾದಂತಹಾ ನೋಟ,ಅವಮಾನ,ಒಂಟಿತನ ಇವುಗಳಿಂದ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಈ ಡಿಸ್ಥಿಮಿಯಾ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ನಿರಾಶಾವಾದ,ನಿರಾಸಕ್ತಿ,ಏಕಾಗ್ರತೆಯ ಕೊರತೆ,ಸ್ವಂತಿಕೆಯ ಕೊರತೆ,ನಿರ್ಧಾರ ತೆಗೆದುಕೊಳ್ಳುವಲ್ಲಿನ ಅಸಾಮರ್ಥ್ಯ,ನಿಶ್ಯಕ್ತಿ,ನಿದ್ರಾಹೀನತೆ ಅಥವಾ ಅತಿನಿದ್ರೆ,ಹಸಿವಾಗದಿರುವಿಕೆ ಅಥವಾ ಅತಿ ಹಸಿವು ಇವು ಈ ಖಿನ್ನತೆಯ ಮುಖ್ಯ ಲಕ್ಷಣಗಳಾಗಿರುತ್ತವೆ.

ಎಷ್ಟೋ ಸಲ ನಾವು ಅನೇಕ ಕಾರಣಗಳಿಂದ ಖಿನ್ನರಾಗುತ್ತೇವೆ.ಪರಿಸ್ಥಿತಿಗನುಸಾರವಾಗಿ.... ನಾಲ್ಕಾರು ದಿನಗಳು ಕಳೆದಂತೆ ಅದು ತನ್ನಿಂತಾನೆ ಮರೆಯಾಗಿ ದಿನನಿತ್ಯದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೇವೆ.ಎಲ್ಲರ ಜೀವನದಲ್ಲಿ ಇದು ಸಹಜವೆಂಬಂತೆ ನಡೆದುಕೊಂಡು ಹೋಗುತ್ತಿರುತ್ತದೆ.ಆದರೆ ಈ ಡಿಸ್ತಿಮಿಯಾ ಇರುವವರಲ್ಲಿ ಖಿನ್ನತೆ ೨ ವರ್ಷಗಳಿಗೂ ಮುಂದುವರೆಯುತ್ತದೆ. ವ್ಯಕಿಗೆ ಅದರ ಅರಿವೇ ಆಗುವುದಿಲ್ಲ. ಗಂಡಸರಿಗಿಂತಾ ಹೆಂಗಸರಲ್ಲಿ ಈ ಕಾಯಿಲೆಯ ಪ್ರಮಾಣ ೨-೩ ಪಟ್ಟು ಹೆಚ್ಚು.ಇದು ಹರಯದಲ್ಲಿ ಅಥವಾ ಮಧ್ಯವಯಸ್ಸಿನಲ್ಲಿ ಶುರುವಾಗುತ್ತದೆ.ಈ ವ್ಯಕ್ತಿಗಳು ಸಂತೋಷವನ್ನು ಅನುಭವಿಸಲಾರರು. ನಿರಾಶಾವಾದತ್ತ ಮುಖ ಮಾಡಿಕೊಳ್ಳುವ ಇವರು ಸದಾ ಅಂತರ್ಮುಖಿಗಳಾಗಿರುತ್ತಾರೆ. ಉಳಿದವರೂ ಅವರು ಇರುವುದೇ ಹಾಗೆ ಅಂದುಕೊಂಡು ಬಿಟ್ಟಿರುತ್ತಾರೆ. ಮೊದಲಿನಿಂದ ಅವರು ಹಾಗೇ ಅನ್ನುವ ಅಭಿಪ್ರಾಯವಿರುತ್ತದೆ. ಆದರೆ ಒಳಗಿನ ಕೆಂಡ ಅಹಿತಕರ ಘಟನೆಗಳಲ್ಲಿ ಪರ್ಯವಸಾನಗೊಳ್ಳುವ ಸಾಧ್ಯತೆಗಳಿರುತ್ತದೆ.

ಹಾಗಾಗಿ ಯಾವುದೇ ವ್ಯಕ್ತಿ ಎರಡು ವಾರಗಳಿಗಿಂತಲೂ ಹೆಚ್ಚಿನ ಕಾಲಾವಧಿಯಲ್ಲಿ ಖಿನ್ನತೆ ಅನುಭವಿಸುತ್ತಿದ್ದರೆ ಅವರನ್ನು ಸೂಕ್ಷ್ಮವಾಗಿ ಗಮನಿಸಿ ವೈದ್ಯರಲ್ಲಿ ತಪಾಸಿಸುವುದೊಳಿತು.


ಖಿನ್ನತೆಯನ್ನು ಹೋಗಲಾಡಿಸಲು ದಾರಿಯಿದೆಯೇ......?

ಸಾಕಷ್ಟು ಮಾರ್ಗಗಳಿವೆ.ಕೆಲವರಿಗೆ ಮಾತ್ರೆ ಔಷಧಿಗಳು ಬೇಕಾಗಬಹುದು.ಆದರೆ ಸೈಕೋಥೆರಪಿ ತುಂಬಾ ಪ್ರಯೋಜನಕಾರಿ.ಕಾಗ್ನಿಟಿವ್ ಥೆರಪಿ [ಆಪ್ತ ಸಮಾಲೋಚನೆಯ ಮೂಲಕ ಅರಿವು,ತಿಳುವಳಿಕೆ ಮೂಡಿಸುವುದು],ಬಿಹೇವಿಯರ್ ಥೆರಪಿ [ಜನರೊಂದಿಗೆ ವ್ಯವಹರಿಸುವಲ್ಲಿ ಧನಾತ್ಮಕ ಚಿಂತನೆ]ಕೂಡಾ ಪ್ರಯೋಜನಕಾರಿ. ಔಷಧಿಗಳೊಂದಿಗೆ ಥೆರಪಿಯೂ ಸೇರಿದರೆ ಉತ್ತಮ ಫಲಿತಾಂಶ ದೊರೆಯುವುದರಲ್ಲಿ ಸಂಶಯವಿಲ್ಲ.

ವ್ಯಕಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಮೊದಲ ಹಂತದಲ್ಲಿಯೇ ಚಿಕಿತ್ಸೆಯನ್ನು ಪ್ರಾರಂಭ ಮಾಡಿದರೆ ಖಿನ್ನತೆಯನ್ನು ಕೊನೆಗಾಣಿಸಬಹುದು ಮತ್ತು ನಂತರದಲ್ಲಿ ಆಗುವ ಅವಗಢಗಳನ್ನೂ ತಡೆಯಬಹುದು.


ವಂದನೆಗಳು.

Thursday, October 29, 2009

ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ ...

ಬ್ಲಾಗೂರಲ್ಲೊಂದು ಸೈಟು ಮಾಡಿದ್ದೇನೆ
ಹಾಗೇ ಅಡಿಪಾಯ ಹಾಕಿದ್ದೇನೆ ...
ಪುಟ್ಟ ಮನೆ ಕಟ್ಟುತ್ತಿದ್ದೇನೆ........
ಒಂದೇ ಬಾಗಿಲು..ನಾಲ್ಕು ಕೋಣೆ
ಚಿಕ್ಕ ಪುಟ್ಟ ಕಿಟಕಿಗಳು....ಅಲ್ಲಲ್ಲಿ ಗೂಡು ಕಪಾಟು..
ಕಟ್ಟುತ್ತೇನೆ ..ಕೀಳುತ್ತೇನೆ....
ಮತ್ತೆ ಹಾಗೇ ಮೆತ್ತುತ್ತೇನೆ ..ಸಿಂಗಾರ ಮಾಡುತ್ತೇನೆ....
ನನ್ನ ಮನೆ...ನನ್ನ ಇಷ್ಟ...ಕೆಲವೊಮ್ಮೆ ಕಷ್ಟ ..ಸಮಯ ನಷ್ಟ.....!
ಅನುಭವ ಹೊಸತು ..ಮನದಲ್ಲೇ ಮಸೆತು....
ಕಟ್ಟಬೇಕಿದೆ ಅರಮನೆ......!
ನಿಮಗೊಂದು ನೆರೆಮನೆ....!
ಬಾಗಿಲಿಗೆ ರಂಗೋಲಿ ..ಗೋಡೆಗೆ ಚಿತ್ತಾರ..
ಹೊಸಿಲಿಗೆ ತೋರಣ....ರುಚಿಸಬಲ್ಲ (?) ಹೂರಣ ...
ಕಟ್ಟುತ್ತಿದ್ದೇನೆ ಇನ್ನೂ ...ಕಟ್ಟಬೇಕಿದೆಯಿನ್ನೂ....
ಮೆತ್ತು ....ಮೇಲ್ಮೆತ್ತು ...
ಹೀಗೆ ಹಲಹತ್ತು ......
ಬರುತ್ತಾರೆ ..ಅಕ್ಕ ಪಕ್ಕದವರು ಹೀಗೆ.... ಒಳಗೆ...
ನೋಡುತ್ತಾರೆ..ಮಾತನಾಡುತ್ತಾರೆ.
ಕೆಲವರು ಉಳಿಯುತ್ತಾರೆ...ಸಲಹೆ ಕೊಡುತ್ತಾರೆ...
ಕಷ್ಟ ಸುಖ ಹಂಚುತ್ತಾರೆ.....
ಕರೆಯುತ್ತಾರೆ .....ತಮ್ಮ ಮನೆಗೆ....
ಇಡುತ್ತಾರೆ ತಮ್ಮದೊಂದು ನುಡಿಮುತ್ತ.....
ಮನೆಯ ಶೋಕೇಸ್ ಒಳಗೆ .....
ಹ್ಞಾ ....ಬನ್ನಿರಲ್ಲ ..ನೀವು ಬ್ಲಾಗೂರಿಗೆ ...
ಮನೆಯೊಂದ ಕಟ್ಟಿರಲ್ಲ...!
ಜಾತಿಯಿಲ್ಲ...ಮತವಿಲ್ಲ...
ನಿಮ್ಮ ದನಿ ನಿಮ್ಮದು ..ನನ್ನ ದನಿ ನನ್ನದು,
ಅನುಭವದ ಮೂಟೆ ..ನಗೆ ಬುಗ್ಗೆ ವೂಟೆ...
ಸಂಪೂರ್ಣ ಸ್ವಾತಂತ್ರ್ಯ ...!
ನನ್ನದೇ ಮನೆಗೊಂದು ಇಟ್ಟಿದ್ದೆನಲ್ಲ ಹೆಸರ....
ಚುಕ್ಕಿ ಚುಕ್ಕಿ ಸೇರಿಸಿ ಚುಕ್ಕಿ ಚಿತ್ತಾರ....!
ನಿಮ್ಮೆಲ್ಲರ ಬರುವು ತರುವುದಲ್ಲ ....!
ಒಂದಷ್ಟು ಖುಷಿ ...ಸಂತೋಷ...
ಮನವೆಲ್ಲ ಉಬ್ಬಿ....ಹೆಮ್ಮೆ ಒಮ್ಮೊಮ್ಮೆ.....
ಬರುವಿರಲ್ಲ ...!? ಬ್ಲಾಗೂರ ನನ್ನ ಮನೆಗೆ.........!!!!!!!

Monday, October 26, 2009

ಕ್ಯಾಮರಾ ಕೊಂಡ ತಪ್ಪಿಗೆ..

ನೋಡುವ ಮುನ್ನ....

ಹ್ಞಾ ......ನಾನೇನು ಉತ್ತಮ ಛಾಯಾಗ್ರಾಹಕಿಯು ಅಲ್ಲಾ . ಛಾಯಾಗ್ರಹಣ ನನ್ನ ಹವ್ಯಾಸವೂ ಅಲ್ಲ. ನನ್ನವರಲ್ಲಿ ಹಠ ಹಿಡಿದು ಕ್ಯಾಮರಾ ಕೊಂಡ ತಪ್ಪಿಗೆ ಅಲ್ಲಲ್ಲಿ ಕ್ಲಿಕ್ಕಿಸಿದ್ದೇನೆ... ಆಯ್ದ ಕೆಲವನ್ನ ನನ್ನ ಬ್ಲಾಗಿನರಮನೆಯ ಗೋಡೆಗೆ ಇಳಿ ಬಿಟ್ಟಿದ್ದೇನೆ.. ದೃಷ್ಟಿಯಾಗದಿರಲೆಂದು....!!!!!??? ಹೆಲಿ ಕೊರ್ನಿಯಾದ ಚಲುವು ...


ಷೋಡಶಿ ....




ಬಾನಿನಲ್ಲೇಕೆ ಬೆಣ್ಣೆ ಕಾಯಿಸುತ್ತಿದ್ದಾರೆ.......?

ನೀರ್ಗನ್ನಡಿ...


ರೆಕ್ಕೇ ....ಹರಿದಾ.....ಚಿಟ್ಟೇಯು ನಾನು....


ಮುಗುದೆಯ ಚಲುವ ನೋಡಾ....




ಛೀ ..ಕಳ್ಳಿ....























Wednesday, October 21, 2009

ಆಟಿಸಂ ...ಒಂದು ಭಿನ್ನತೆ.

ಮೊದಲು ಇದನ್ನು ಪೀಟಿಕೆಯಿಂದ ಶುರು ಮಾಡೋಣ.
ಆಪಕೀ ಅಂತರಾ....ಎನ್ನುವ ಒಂದು ಮೆಘಾ ಧಾರಾವಾಹಿ ಝೀ ಟೀವಿಯಲ್ಲಿ ದಿನಾಲು ರಾತ್ರಿ ೮.೩೦ ರಿಂದ ಪ್ರಸಾರವಾಗುತ್ತಿದೆ.ಇದು ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುತ್ತಿರುವ , ಮನೋವಿಜ್ಞಾನಕ್ಕೆ ಸಂಬಂಧಿಸಿದ  ಒಂದು ಉತ್ತಮ ಧಾರಾವಾಹಿ ಎನ್ನಬಹುದು.

ಇದರ ಕಥಾವಸ್ತುವೇ ಆಟಿಸಂ.ಒಂದು ಆಟಿಸ್ಟಿಕ್ ಮಗು ಮನೆಯಲ್ಲಿದ್ದರೆ ಆ ಸಂಸಾರ ಏನೆಲ್ಲಾ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಎನ್ನುವುದನ್ನು ತುಂಬಾ ವಿವರವಾಗಿ,ನೈಜವಾಗಿ ತೋರಿಸುತ್ತಿದ್ದಾರೆ.ನೆರೆಹೊರೆಯವರ ತಿರಸ್ಕಾರ ,ಸಮಾಜದ ಪೂರ್ವಾಗ್ರಹ ,ನಂತರದಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವ ಪ್ರಯತ್ನ,ಥೆರಪಿ ಇವುಗಳನ್ನು ತುಂಬಾ ವಿಸ್ತಾರವಾಗಿ ಚಿತ್ರಿಸಿದ್ದಾರೆ.

ನಮ್ಮ ನಡುವೆಯೇ ಈ ರೀತಿಯ ಮಗುವೊಂದಿದ್ದಿದ್ದರೆ ಧಾರಾವಾಹಿಯಲ್ಲಿ ವರ್ಣಿಸಿದಂತಹ ಸಮಸ್ಯೆಗಳೇ ಉದ್ಭವಿಸುತ್ತಿತ್ತೇನೋ..?ಸುತ್ತಲಿನ ಸಮಾಜ ಮಗುವಿನ ತೊಂದರೆಯನ್ನು ಹುಚ್ಚು ಎಂದು ಪರಿಗಣಿಸಿ ದೂರ ಸರಿಸುವುದು ಹಾಗು ತಾಯ್ತಂದೆಯರ ವಿಹ್ವಲತೆ ನೋಡುಗರನ್ನು ಯೋಚನೆಗೆ ಹಚ್ಚುತ್ತದೆ.


ಹಾಗಾದರೆ ಈ ಆಟಿಸಂ ಎಂದರೆ ಏನು ?ಅದರ ಗುಣ ಲಕ್ಷಣಗಳೇನು?

ಮೆದುಳಿನಲ್ಲಿರುವ ನರಗಳ ಬೆಳವಣಿಗೆಯಲ್ಲಿನ ಅವ್ಯವಸ್ಥೆಯೇ ಆಟಿಸಂ ಅಥವಾ ಆಟಿಸ್ಟಿಕ್.
ಇಂತಹಾ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಸಾಮಾಜಿಕ ಹೊಂದಾಣಿಕೆ ಮತ್ತು ಭಾಷೆಯ ಬಳಕೆಯಲ್ಲಿನ ತೊಡಕು ಎದ್ದು ಕಾಣುವ ಲಕ್ಷಣಗಳಾಗಿವೆ.ಇದು ಮುಖ್ಯವಾಗಿ ಆನುವಂಶಿಕ ತಳಹದಿಯನ್ನು ಹೊಂದಿದ್ದರೂ ಕೂಡಾ ಅದನ್ನು ಅರ್ಥೈಸಿ ಕೊಳ್ಳುವುದು ತುಂಬಾ ಕಠಿಣ ತರದ್ದಾಗಿದೆ. ಆಟಿಸಂ ನ ಲಕ್ಷಣಗಳು ಸುಮಾರಾಗಿ ಎರಡು ವರ್ಷದ ಮಕ್ಕಳಿರುವಾಗಿನಿಂದಲೇ ಕಾಣಿಸಿಕೊಳ್ಳುತ್ತದೆ.ಇದು ಮಗುವಿನಿಂದ ಮಗುವಿಗೆ ಭಿನ್ನವಾಗಿರುತ್ತದೆ.ಕಣ್ಣುಗಳಲ್ಲಿ ಕಾಂತಿ ಇಲ್ಲದಿರುವಿಕೆ,ಸಂವಹನದ ಕೊರತೆ ,ಪುನರಾವರ್ತಿತ ಕ್ರಿಯೆಗಳು(ಮಾಡಿದ್ದನ್ನೇ ಮಾಡುವುದು,ಒಂದೇ ಶಬ್ಧವನ್ನು ಪದೇ ಪದೇ ಉಚ್ಚರಿಸುತ್ತಿರುವುದು) ಒಬ್ಬರನ್ನೇ ನೆಚ್ಚಿ ಕೊಳ್ಳುವುದು ಇವು ಇತರ ಲಕ್ಷಣಗಳಾಗಿವೆ.
ಆದರೆ ಆಟಿಸ್ಟಿಕ್ ಮಕ್ಕಳು ಸಾಮಾನ್ಯ ಮಕ್ಕಳಂತೆ ನೆನಪಿನ ಶಕ್ತಿ ,ಸಮಸ್ಯೆ ಬಿಡಿಸುವಿಕೆ,ಗಣಿತ,ಕಲೆ ಇವುಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಬಲ್ಲರು.


ಪೋಷಕರು ಚಿಕ್ಕಂದಿನಲ್ಲಿಯೇ ಈ ತೊಂದರೆಯನ್ನು ಗುರುತಿಸಿ ಸೂಕ್ತ ಪಾಲನೆ, ಪೋಷಣೆ ಮತ್ತು ಉತ್ತಮ ತರಬೇತಿಯನ್ನು ಕೊಟ್ಟಲ್ಲಿ ಅವರನ್ನು ಕೂಡಾ ಸಮಾಜದ ಮುಖ್ಯವಾಹಿನಿಯಲ್ಲಿ ತರುವುದು ಕಷ್ಟ ಸಾಧ್ಯವೇನಲ್ಲ.ಸಮಾಜ ಇವರ ತೊಡಕನ್ನು ಅರಿತುಕೊಂಡು ,ಇದೊಂದು ರೋಗ ,ಹುಚ್ಚು ಸ್ವಲ್ಪ ಲೂಸು ಎಂಬಿತ್ಯಾದಿ ಹಣೆ ಪಟ್ಟಿ ಕಟ್ಟದೆ ಕೈಲಾದ ಸಹಾಯವನ್ನು ಮಾಡುವುದು ಹೊಣೆಯರಿತಕೆಲಸವಾಗಿದೆ.
ಇದು ಒಂದು ಅಸಮತೆ ಅಥವಾ ಭಿನ್ನತೆಯೇ ಹೊರತು ರೋಗವಲ್ಲ .ಆದರೆ ಇದಕ್ಕೆ ಉಪಶಮನವೇ ಹೊರತು ನಿವಾರಣೆ ಇಲ್ಲವೇ ಇಲ್ಲ.ಆಟಿಸ್ಟಿಕ್ ಮಗು ಆಟಿಸ್ಟಿಕ್ ವ್ಯಕ್ತಿಯಾಗಿಯೇ ಜೀವಿಸುವುದು ಅನಿವಾರ್ಯ.ನಿಯಮಿತ ಶಿಕ್ಷಣ ,ಥೆರಪಿ ಇವುಗಳಿಂದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳ ಬಹುದು ಅಷ್ಟೆ.
ಇರುವ ಸಮಸ್ಯೆಯನ್ನು ಒಪ್ಪಿಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ಇದಕ್ಕೆ ಪರಿಹಾರ.ಪೋಷಕರ ಸಹನೆ,ಸಹಕಾರ ಅತ್ಯಗತ್ಯ.