Tuesday, December 28, 2010

ನನಗೂ ಜ್ಞಾನೋದಯ ಆಯ್ತು....!!!!

ನಾನು  ಹೋಳಿಗೆ ಮಾಡಿದೆ....!! 

ಇದೇನ್ಮಹಾ..? ಹೋಳಿಗೆ ಎಲ್ಲರೂ ಮಾಡ್ತಾರೆ.ನಾನೂ ಮಾಡ್ತೇನೆ.ನಮ್ಮಮ್ಮನೂ ಮಾಡ್ತಾರೆ... ಅಂತ ಅಂದುಕೊಳ್ತೀರೇನೋ ?


ಈ ಮೊದಲೂ ಹೋಳಿಗೆಯನ್ನು ನಾನು  ಮಾಡಿದ್ದೆ .ಬೇರೆ ತರದ ಅಡುಗೆಯನ್ನೂ ಮಾಡ್ತೇನೆ.  ಚೆನ್ನಾಗಿ  ಇರುತ್ತದೆ  ಎಂದು ತಿ೦ದವರು ಹೇಳುತ್ತಾರೆ....!  ಅಂದರೆ ಸಾಂಬಾರು ಸಾಂಬಾರಿನಂತೆಯೇ, ಉಪ್ಪಿನಕಾಯಿ ಉಪ್ಪಿನಕಾಯಿಯಂತೆ, ನೀರ್ಗೊಜ್ಜು  ಅದರಂತೆಯೇ,ಪಾಯಸವಾಗದ ಕೇಸರೀಬಾತೂ,  ಪಾನಕ ಬರೀ ನೀರಾಗದೆ ಪಾನಕವಾಗಿಯೇ ಇರುತ್ತದೆಂದು ಉಳಿದವರು ಹೇಳಿದ್ದು ಹೌದು. 
ನೀವು  ಮಾಡಿದ ಅಡುಗೆಯ ರುಚಿ   ನಿಮಗೆ  ಗೊತ್ತಾಗುವುದಿಲ್ಲವೇ...? ಮತ್ತೆ ಪ್ರಶ್ನೆ  ಕೇಳಬೇಡಿ. ನಮ್ಮ ಮುಖ ನೋಡಿಕೊಳ್ಳಲು ನಮಗೆ ಕನ್ನಡಿ ಬೇಕು.
  


 ಈ ಸಲ ಹೋಳಿಗೆ ಮಾಡಿದೆ ....!!  ಮಾಡ್ತಾ ಮಾಡ್ತಾ ಮೈಮರೆತು ಹೋದೆ.  ಕರೆಕ್ಟಾಗಿ ನಲವತ್ತೊಂಬತ್ತು ಹೋಳಿಗೆ ಆಯ್ತು.ಜೊತೆಗೆ  ನನಗೂ ಜ್ಞಾನೋದಯ ಆಯ್ತು....!!!!


ಹೌದು...ಹೌದಪ್ಪಾ... ಲೈಫು ಇಷ್ಟೇನೆ..!
ಯಾರೋ ಕಣಕದಲ್ಲಿ ಹೂರಣ ತುಂಬಿ ಬಾಳೆ ಎಲೆ ಮೇಲಿಡುವರು . ಮತ್ಯಾರೋ ಅದನ್ನು ಚಂದಕ್ಕೆ, ಮನ ಬಂದಂತೆ ಲಟ್ಟಿಸುವರು. ಇನ್ಯಾರೋ ಬಿಸಿಕಾವಲಿಯ ಮೇಲೆ ಹಾಕಿ ಕೌಚಿ ಮಗುಚಿ ಮಾಡುವರು.ಹದವಾಗಿ ಬೇಯಿಸಿದರೆ ಹೋಳಿಗೆ ಸವಿಯಲು ಸಿದ್ಧ.
ಇಷ್ಟೇ ಜೀವನ.ಈ ಜೀವನ ಎಷ್ಟೊಂದು ಸಿಹಿಯಲ್ಲವೇ..? ಎಷ್ಟೊಂದು ರುಚಿಯಲ್ಲವೇ..?

ಮತ್ತೇನು ಕಷ್ಟ ..? 
ಕಷ್ಟ ಹೋಳಿಗೆಯ ಕ್ವಾಲಿಟಿಯ ಮೇಲೆ ಇರುವುದು ..ಸೃಷ್ಟಿಕರ್ತರ ಚಾತುರ್ಯದ ಮೇಲಿರುವುದು.. ಅನ್ನಿಸ್ತಾ ಇದೆ.  ಪ್ರಶ್ನೆಗಳು  ಅನೇಕ.


ಎಲ್ಲರ ಮನೆ ಹೋಳಿಗೆಯ ಹೂರಣವೂ ಸಮನಾಗಿ ಸಿಹಿ ಇರುವುದೇ..?
ಕಣಕ ಹದ ಬಂದಿತ್ತೆ..?
ಹೂರಣ ಹೊರ ಬರದಂತೆ ಕಣಕದಿಂದ ಒಂದೇ ಸಮನಾಗಿ ತುಂಬಿದ್ದರೆ..?
 ಲಟ್ಟಿಸುವಾಗ ನುರಿತವರ ಕೈಗೆ ಸಿಕ್ಕಿತ್ತೇ..? ಲಟ್ಟಣಿಗೆಯಿಂದ ಲಟ್ಟಿಸುವಾಗ ಹೂರಣವೇನಾದರೂ ಕಣಕದಿಂದ ಹೊರ ಬಂದಿತ್ತೆ..? ಕಣಕ ಲಟ್ಟಣಿಗೆಗೆ  ಮೆತ್ತಿಕೊಂಡಿತ್ತೆ..? ಆಕಾರ ಸರಿಯಾಗಿತ್ತೋ ಅಥವಾ ಯಾವ ದೇಶದ್ದೋ ನಕ್ಷೆಯನ್ನು   ಹೋಲುತ್ತಿತ್ತೋ..? ಬಾಳೆ ಎಲೆಯಿ೦ದ ತೆಗೆದು ಕಾವಲಿಗೆ ಹಾಕುವಾಗಲೇನಾದರೂ ಹರಿದು ಹೋಯಿತಾ...? ಕಾವಲಿ ಸೌಟಿನಿಂದ  ಮಗುಚಿ ಹಾಕುವವರು  ಮೊದಲ ಪದರ ಸರಿಯಾಗಿ ಬೆ೦ದ ನಂತರ ಮಗುಚಿದರೋ ಇಲ್ಲವೋ..?ಕಾವಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಂಡಿದ್ದರೋ ಇಲ್ಲವೋ...? ಹೋಳಿಗೆ ಹತ್ತಿತೆ..?ಹರಿಯಿತೆ..?ಗ್ಯಾಸ್ ಖಾಲಿಯಾಗಿ ಬೆಂಕಿ ಆರಿ ಅರೆ ಬೆಂದಿತೆ..? ಎರಡೂ ಮಗ್ಗುಲು ಬೆಂದ ನಂತರವಷ್ಟೇ ಹೋಳಿಗೆಯನ್ನು ನಿಧಾನಕ್ಕೆ ಮಡಚಿ  ತೆಗೆದು ಬಿಳಿ ಬಟ್ಟೆಯ ಮೇಲೆ ಹಾಕಬೇಕು..? ಪೇಪರಿನ ಮೇಲೆ ಹಾಕಿದರೆ ಹೋಳಿಗೆಗೆ   ಪೇಪರ್ ವಾಸನೆ  ಹಿಡಿದುಕೊಳ್ಳುತ್ತದೆ  ಎಚ್ಚರ ಮುಖ್ಯ. ಇದೆಲ್ಲಾ ಸರಿಯಾಗಿ ಅನುಸರಿಸಿದರೆ ಚಂದದ, ರುಚಿಯಾದ ಹೋಳಿಗೆ ಲಭ್ಯ. 


ಅರ್ಥ ಆಗ್ತಾ ಇದೆ.  ಹಾಗೇ ನಮ್ಮ ಬದುಕೂ ಅಲ್ಲವೇ..?  ಪ್ರಕೃತಿ ಮತ್ತು ಪೋಷಣೆ ಸರಿಯಾಗಿದ್ದಲ್ಲಿ,ಒಂದಕ್ಕೊಂದು ಪೂರಕವಾಗಿದ್ದಲ್ಲಿ  ಮಾತ್ರ ಚಂದದ ಜೀವನ ಸಾಧ್ಯ.. 
ಯಾರೋ ಕಣಕದಲ್ಲಿ  ತುಂಬಿದ ಹೂರಣದ ಉಂಡೆಯಂತೆ ಮಗುವೊಂದನ್ನು  ಈ ಪ್ರಪಂಚದ ಬಾಳೆ ಎಲೆ ಮೇಲೆ ತಂದಿಡುವರು. ಅವರೊಂದಿಗೆ  ಮತ್ಯಾರೋ ಇನ್ಯಾರೋ ಸಮಾಜದ ಜನರು ಲಟ್ಟಿಸಿ ಸಂಸ್ಕಾರ ಕೊಟ್ಟು  ನಮ್ಮದಾದೊಂದು  ರೂಪ ಕೊಡುವರು . ಅದರಂತೆ ಕಷ್ಟ ನಷ್ಟಗಳ  ಕಾವಲಿಯ ಮೇಲೆ  ಸುತ್ತಲಿನ ಜನ   ಕೌಚಿ ಮಗುಚಿ ಹಾಕಿ ನಮ್ಮ ತನವನ್ನು ಪರೀಕ್ಷಿಸುವರು. ಚಂದದ ಹೊಂಬಣ್ಣ  ನೋಡಿ ಹಿರಿ ಹಿರಿ ಹಿಗ್ಗುವರು. ಮತ್ಯಾರೋ ಹೊತ್ತಿಸಿಕೊಂಡು,  ಹರಿದುಕೊಂಡು ಸಹಿಸಲಾರದೆ ಕುಗ್ಗುವರು. ಇದೆಲ್ಲದರ ಒಟ್ಟುರೂಪ  ನಾವು, ನಮ್ಮ ಜೀವನ.


ಅತ್ಯುತ್ತಮ  ವಂಶವಾಹಿಗಳು ,  ಉತ್ತಮ ಸಂಸ್ಕಾರ, ಯೋಗ್ಯ ಪರಿಸರ ಇದ್ದಲ್ಲಿ, ಸಿಕ್ಕಲ್ಲಿ ಮಗುವೊಂದು ಉತ್ತಮ ಮಾನವನಾಗಿ ಬೆಳೆಯುವುದು.
ಯಾವುದಾದರೊಂದು ಕೊರತೆಯಿದ್ದಲ್ಲಿ ಕೆಲವಷ್ಟಕ್ಕೆ ಸೀಮಿತವಾಗುವುದು.......

ಹೀಗೆ....ನಮ್ಮದೇನಿಲ್ಲ. ಎಲ್ಲಾ ನೇಚರ್  ಎಂಡ್  ನರ್ಚರ್.


 ಹೋಳಿಗೆ ಮಾಡ್ತಾ ಮಾಡ್ತಾ ಮಾಡ್ತಾ....... ಜ್ಞಾನೋದಯವಾದದ್ದು ಹೀಗೆ....!!!


ನನ್ನ ಕೊರ್ತಾ ತಾಳಲಾರದೆ ನಿಮಗೀಗ ಮೂರ್ಚೆ ಬರುವಂತಾಗಿರಬಹುದೇ..?ಯೋಚಿಸುತ್ತಿದ್ದೇನೆ. ಮಾಡಿದ ಹೋಳಿಗೆ ಮಿಕ್ಕಿದೆ.ತಿಂದೂ, ನೋಡೀ  ಬಾಯಿ ಮನಸ್ಸು ಸಿಹಿ ಮಾಡಿಕೊಳ್ಳಿ.





ಬರಲಿರುವ ಹೊಸ ವರುಷ  ೨೦೧೧ ನಿಮಗೆಲ್ಲರಿಗೂ  ಶುಭ ತರಲಿ.

[ವಿ. ಸೂ. ಅಕ್ಷಯ ಬಟ್ಟಲಲ್ಲಿ ಇದ್ದದ್ದು ನಾಲ್ಕೇ ಹೋಳಿಗೆ. ಮೊದಲು ಬಂದವರಿಗೆ ಆಧ್ಯತೆ...:-))  ]

Monday, December 20, 2010

ಅಡಿಕೆ ಒಲೆಯ ಬೆಂಕಿಯ ನೆನಪಲ್ಲಿ.

ಈಗೊಂದೆರಡು ಮೂರು ದಿನದಿಂದ ಚಳಿ ಯಾವ ಪರಿ ಬಿದ್ದಿದೆಯೆಂದರೆ ಹಳೆ ನೋವುಗಳೆಲ್ಲ ಮರುಕಳಿಸಿ ಬಿಟ್ಟಿವೆ.ಚಿಕ್ಕವರಿರುವಾಗ ಆಡುವಾಗ, ಓಡುವಾಗ, ನಡೆಯುವಾಗ ಬಿದ್ದಿದ್ದರದ್ದು, ಜಪ್ಪಿಸಿಕೊಂಡಿದ್ದು, ಜಜ್ಜಿಕೊಂಡಿದ್ದು, ಇನ್ಜಕ್ಷನ್ನು ತಗೊಂಡಿದ್ದರದ್ದು ಎಲ್ಲದರ ನೋವೂ ಈ ಚಳಿಯಲ್ಲಿ ಹೊಸತಾಗಿ ಬಂದಂತೆ ನಗು ನಗುತ್ತಿದೆ. ಎಲ್ಲಾದರೂ ಹೊಡ್ಚಲು ಹಾಕಿಕೊಂಡು ಕೂರೋಣ ಅನ್ನಿಸುತ್ತಿರುವುದು ನೋವಿನ ವಿಶೇಷ.



    ಊರಲ್ಲಾಗಿದ್ದರೆ ಅಡಿಕೆ ಬೇಯಿಸುವ ಒಲೆ ಬುಡ ಬಿಡುವುದು ಬೇಡವಾಗಿತ್ತು.ಧಗ ಧಗ ಉರಿಯುವ ಬೆಂಕಿಯನ್ನು ನೋಡುತ್ತಾ , ಅದರ ಉರಿವ ಪರಿಗೆ ಬೆರಗಾಗುತ್ತಾ, ಕೊಳ್ಳಿ ನುರಿಯುತ್ತಾ,ಕುಂಟೆ ಸರಿಸುತ್ತಾ,  ಒಲೆ ಬುಡ ಕೆದಕುತ್ತ,  ಹಾಳೆ ಭಾಗ ಹಾಕುತ್ತಾ, ಅಡಿಕೆ ಬೇಯುವಾಗಿನ ತೊಗರಿನ ಕಂಪನ್ನು ಆಸ್ವಾದಿಸುತ್ತಾ  ಚಳಿ ಕಾಯಿಸ ಬಹುದಾಗಿತ್ತು.


ನನಗದೇ ನೆನಪಾಗುತ್ತಿದೆ.ಸಣ್ಣವರಿರುವಾಗ ನಾವು  ರಾತ್ರಿ  ಅಪ್ಪಯ್ಯ ಒಲೆ ಬೆಂಕಿ ಒಟ್ಟಿ ಅಡಿಕೆ ಬೇಯಿಸುವ ಹಂಡೆಯಲ್ಲಿ  ದೊಡ್ಡ ಜಾಲರಿ ಸೌಟಿನಿಂದ ಅಡಿಕೆಗಳನ್ನು ಕೌಚಿ ಮಗುಚಿ ಮಾಡುತ್ತಿದ್ದರೆ ನಾನು ನನ್ನಕ್ಕ ಅಂದಿನ ಶಾಲಾ ವಿಧ್ಯಮಾನಗಳನ್ನು  ಹಂಚಿಕೊಳ್ಳುತ್ತಾ ಚಳಿ ಕಾಯಿಸುತ್ತಿದ್ದೆವು.ಗೋಣೀ ಚೀಲವೋ, ಮೆಟ್ಟುಗತ್ತಿ ಮಣೆಯೋ ಯಾವುದಾದರೊಂದು ಸುಖಾಸನ.


ಮಲೆನಾಡಿನಲ್ಲಿ ಚಳಿ ಬಹಳ. ಆಗೆಲ್ಲಾ ಬೇಸಿಗೆಯಲ್ಲೂ ಒಂದು ಕಂಬಳಿ ಹೊದೆಯುವಷ್ಟು ಚಳಿ ಇರುತ್ತಿತ್ತು.  ಒಲೆ ಮುಂದೆ ನಮ್ಮಿಬ್ಬರ ಜೊತೆ ಒಂದು ಪಕ್ಕದಲ್ಲಿ ನಾಯಿ 'ಜೂಲ' ಮತ್ತು  ಇನ್ನೊಂದು ಪಕ್ಕದಲ್ಲಿ  ಬೆಕ್ಕು 'ಸಿದ್ದಿ' ಖಾಯಂ ಹಕ್ಕುದಾರರು. ಚಳಿಯಲ್ಲಿ ಅವಕ್ಕೆ ಜಗಳಕ್ಕಿಂತಲೂ ಒಲೆಯೇ ಮುಖ್ಯವಾಗಿತ್ತು.ಆಗಾಗ ಜೂಲ ಮಾತ್ರಾ ಕಿವಿ ನಿಗುರಿಸಿ  ಬೆಕ್ಕಿನ ಕಡೆ ಒಮ್ಮೆ ಮತ್ತು ನಮ್ಮ ಕಡೆ ಒಮ್ಮೆ ನೋಡುವ ಕೆಲಸ ಮಾಡುತ್ತಿತ್ತು. ಸಿದ್ದಿ ಮಾತ್ರಾ ರಾಣಿಯಂತೆ ನಮಗೊರಗಿ ಪವಡಿಸುತ್ತಿತ್ತು.  ಎಷ್ಟಾದರೂ ಜಾತಿ ವೈಷಮ್ಯ ಇದ್ದೇ ಇರುತ್ತದೆ. ತನ್ನ ಬುದ್ಧಿ ಗೊತ್ತಾಗಿ ಹೋಯಿತೇನೋ ಒಡತಿಯರಿಗೆ  ಎನ್ನುವಂತೆ ಜೂಲ ಆಗಾಗ  ಮುಖ ಹುಳ್ಳಗೆ ಬೇರೆ ಮಾಡುತ್ತಿತ್ತು. 


ಅಣ್ಣಂದಿರಿಗೆ ಸುಲಿದ ಅಡಿಕೆಯ ಸಿಪ್ಪೆಗಳನ್ನು ಒಗೆಯುವ ಕೆಲಸ ಮತ್ತು ರಾತ್ರಿ ಪಾಳಿಯ ಅಡಿಕೆ ಸುಲಿಯುವವರಿಗೆ ಹಸಿ ಅಡಿಕೆ ರಾಶಿ ಮಾಡುವ ಕೆಲಸ. ಅವಿಷ್ಟು ಮಾಡಿ ಅವರೂ 'ಸರ್ಕಳ್ರೆ' ಎನ್ನುತ್ತಾ ನಮ್ಮ ಜೊತೆಗೂಡುತ್ತಿದ್ದರು. ಆ ಬೆಂಕಿಗೆ ಮುಖ ವೋಡ್ಡಿದರೂ ಬೆನ್ನಿಗೆ ಚಳಿ ಬಿಡದು. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಬೆನ್ನು ಕಾಯಿಸಿಕೊಳ್ಳುವುದು.ಮುಂಬಾಗ ಸೆಖೆ, ಬೆನ್ನಿಗೆ ಚಳಿ. ಸ್ವೆಟರ್ ಬೇರೆ ಇರುತ್ತಿತ್ತು.  ಅಪ್ಪಯ್ಯ ಮಾತ್ರಾ ಬನೀನನ್ನೂ ಹಾಕಿಕೊಳ್ಳದೆ ಹೆಗಲ ಮೇಲೆ ಟವೆಲ್ ಮಾತ್ರಾ ಹಾಕಿಕೊಂಡು  ಬರಿ ಮೈಯಲ್ಲೇ ಅಡಿಕೆ ಬೇಯಿಸುವ ಕೆಲಸ ಮಾಡುತ್ತಿದ್ದ.''ಚಳಿ ಆಗ್ತಲ್ಯನ ಅಪ್ಯ '' ಅಂದರೆ,''ಕೆಲಸ ಮಾಡ್ತಾ ಇದ್ರೆ ಚಳಿಯೆಲ್ಲಾ ನೆಗ್ದು ಬಿದ್ ಹೋಗ್ತು , ಪುಟ್ಟ ಪುಟ್ಟ ಕೈಯಲ್ಲಿ ನಿನ್ಗನೂ ಕೆಲಸ ಮಾಡಿದ್ರೆ  ಚಳಿ ಹತ್ರನೂ ಸುಳೀತಲ್ಲೇ'' ಎನ್ನುತ್ತಿದ್ದುದು ಈಗ ನೆನಪಿನಲ್ಲಿ ಸುಳಿಯುತ್ತಿದೆ. 

'ಬೆಂಕಿ ನೆಗ್ಯಾಡ್ತಾ ಇದ್ದು ನೋಡು' ಎಂದು ನನ್ನ ಎರಡನೇ ಅಣ್ಣ ತೋರಿಸುತ್ತಿದ್ದ. ದೊಡ್ಡ ದೊಡ್ಡ ಕುಂಟೆಯ ಇದ್ದಿಲಾದ ಭಾಗದಲ್ಲಿ ಕೆಲವೊಮ್ಮೆ ಹೊಳೆಯುವ ಮಣಿಗಳ ಸಾಲಿನಂತೆ ಕೆಂಡ ಉರಿಯುತ್ತಿತ್ತು. ಅದನ್ನು ನನಗೆ ವರ್ಣಿಸಲು ಕಷ್ಟವಾಗುತ್ತಿದೆ.ಅದನ್ನು  ನೋಡುತ್ತಿದ್ದರೆ  ಬೆಂಕಿ ನಕ್ಕಂತೆ ಭಾಸವಾಗುತ್ತಿತ್ತು.!


ಕೆಲವೊಮ್ಮೆ ಯಾರ ಮನೆಯಲ್ಲಾದರೂ ಮುಂಚೆಯೇ  ಆಲೆ ಮನೆ  ಶುರು ಆದರೆ ಕಬ್ಬು ತಂದು ಕೊಡುತ್ತಿದ್ದರು.ಕಬ್ಬುಸಿಗಿದು ತಿನ್ನುವ ಕೆಲಸವೂ ಒಲೆ ಮುಂದಿನ ಅಧ್ಯಾಯದಲ್ಲಿ ಸೇರಿಕೊಳ್ಳುತ್ತಿತ್ತು. ನನಗೆ ಕಬ್ಬು ತುಂಬಾ ಇಷ್ಟ. 'ಒಂದು ಹಲ್ಲು ಇರುವ ವರೆಗೂ ಕಬ್ಬು ತಿನ್ನುತ್ತೇನೆ ' ಎಂದು  ನಾನಾದರೂ ಆಗ ಘನಘೋರ  ಪ್ರತಿಜ್ಞೆಯನ್ನೇ  ಮಾಡಿದ್ದೆ. ಈಗ ಪ್ರತಿಜ್ಞೆಯನ್ನು  ಮುರಿದಿದ್ದೇನೆ.....!!


ಈಗ ಸ್ವೆಟರ್ ಹಾಕಿಕೊಂಡು   ಗಣಕ ಯಂತ್ರದ ಕೀಲಿ ಮಣೆಯ ಮೇಲೆ ಕುಟ್ಟುತ್ತಿದ್ದರೆ ಏಳುವುದಕ್ಕೆ ಮನಸ್ಸು ಬಾರದು. ಚಳಿ ಅಷ್ಟಿದೆ. ಚಳಿ ದೇಶದವರೆಲ್ಲ ಹೇಗಿರುತ್ತಾರಪ್ಪ...?  ಅಕ್ಷರ ದೋಷವಾಗಿದ್ದರೆ ನೀವೇ ಸರಿ ಮಾಡಿಕೊಳ್ಳಿ.  ಸರಿ ಮಾಡಲೂ ಚಳಿ.....! ನಾನು ಅಡಿಕೆ ಒಲೆಯ ಬೆಂಕಿ ಕಾಯಿಸುವ  ಕನಸು ಕಾಣುತ್ತಾ ಮನಸನ್ನು ಬೆಚ್ಚಗೆ ಮಾಡಿಕೊಳ್ಳುತ್ತೇನೆ.

Friday, December 17, 2010

ಇವುಗಳನ್ನೆಲ್ಲಾ ನೀವು ಎಲ್ಲಾದರೂ ನೋಡಿದ್ದೀರಾ..?

ಗಿಡಕ್ಕಷ್ಟು ನೀರ್ ಹಾಕಿ ಬತ್ತೆ.. ನೀವ್ ಅಲ್ಲಿ ಕೂಕಣಿ..

ದೈತ್ಯ ಚೇಳು ನೋಡಿದ್ರೆ ಭಯ ಆಗುತ್ತೆ.



 ಇವರು ಆದಿಮಾನವರು   ನಾಡಿಗೆ ಬಂದಿದ್ದಾರೆ ..ನಾಗರೀಕರಾಗಲು......!!!



ಹಾವಾಡಿಸುವವ ಹಾವನ್ನು ಮರೆತು ಇಲ್ಲೇ ಬಿಟ್ಟು ಹೋಗಿದ್ದಾನೆ...    ಬುಸ್ಸ್.....!!


 ಅಲ್ಲ ಮಾರ್ರೆ ... ಅಡಿಕಿತ್ತು  ಎಲಿಯಿಲ್ಲ..ಎಂತ ಮಾಡುದ್ ಹೇಳಿ ...



ಇವ್ರು ಹುಬ್ಬಳ್ಳಿ ಯಜಮಾನ್ರು ......   

ಇವುಗಳೆಲ್ಲಾ  ಕೊಡಚಾದ್ರಿ ತಪ್ಪಲಿನಲ್ಲಿರುವ ಸಿಂಹ ರೆಸಾರ್ಟ್ ನಲ್ಲಿ ನಿರ್ಮಿಸಲಾದ ಸಿಮೆಂಟಿನ ಶಿಲ್ಪಗಳು.ಕೊನೆಯ ಫೋಟೋದಲ್ಲಿ ನೇರಳೆ ಜುಬ್ಬದ ಆಸಾಮಿ ಮಾತ್ರ ಶಿಲ್ಪ.....!!!!

ವಂದನೆಗಳು.

Sunday, December 12, 2010

ಮನಸ್ಸು ಇಲ್ಲದ ಮಾರ್ಗ.

ಇದೊಂದು ಮನಶ್ಯಾಸ್ತ್ರಕ್ಕೆ ಸಂಬಂಧಪಟ್ಟ ಪುಸ್ತಕ.  ಡಾ.ಮೀನಗುಂಡಿ ಸುಬ್ರಹ್ಮಣ್ಯ ಅವರ ಕೃತಿ.


ಸೈಕಾಲಜಿಸ್ಟ್ ಏನೋ ಮಾಡಿ ತಮ್ಮ ''ಮನಸ್ಸನ್ನು '' ಸರಿ ಮಾಡಿ ಬಿಡುತ್ತಾನೆ.ಬದಲಾಯಿಸುತ್ತಾನೆ. ಇದರಿಂದಾಗಿ ತಮ್ಮ ''ಮನಸ್ಸಿನಲ್ಲಿ''ಮತ್ತು ದೇಹದಲ್ಲಾಗುವ ನಕಾರಾತ್ಮಕ ಅನುಭವಗಳು ನಿಲ್ಲುತ್ತವೆ ಎಂಬ ನಿರೀಕ್ಷೆ ಇಟ್ಟುಕೊಂಡು ಅವರ ಬಳಿ ಹೋದ ಮಾನಸಿಕ ಸಮಸ್ಯಾ ವ್ಯಕ್ತಿಗಳಿಗೆ ಅವರು ತೋರಿಸಿದ ''ಮನಸ್ಸು'' ಇಲ್ಲದ ಮಾರ್ಗದ  ಬಗೆಗೆ ಬರೆದ ಪುಸ್ತಕದ ಕುರಿತು ನಿಮ್ಮಲ್ಲೊಂದಿಷ್ಟು ಹೇಳಿಕೊಳ್ಳೋಣ ಅಂತ ...


 ಈ ಪುಸ್ತಕದಲ್ಲಿ   ಸ್ವತಹ ಸೈಕೊಥೆರಪಿಷ್ಟರಾದ ಲೇಖಕರು     ಮನುಷ್ಯನ ಮಾನಸಿಕ ಸ್ಥಿತಿ, ಕಾರಣಗಳು, ಲಕ್ಷಣಗಳು, ಅದರ ಅವ್ಯವಸ್ತೆ, ಅದು ಮುಂದುವರೆಯುವ ರೀತಿ, ಪರಿಣಾಮ [ ಅವರ ಮೇಲೆ ಮತ್ತು ಸಾಮಾಜಿಕವಾಗಿ] ಇವುಗಳನ್ನು ಸೂಕ್ತವಾಗಿ ವಿವರಿಸುತ್ತಾ ಸಮರ್ಪಕವಾದ ಉದಾಹರಣೆಗಳೊಂದಿಗೆ ಸಾಮಾನ್ಯರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿ ವಿಶ್ಲೇಷಿಸಿದ್ದಾರೆ.


ಮನೋರೋಗ ಎಂದರೇನು ? ಅವುಗಳ ಬಗೆಗಳು, ಮನೋರೋಗದ ಬಗೆಗೆ ಜನರ ಪೂರ್ವಾಗ್ರಹಗಳೂ, ಮನೋ ಚಿಕಿತ್ಸಕರ ಬಗೆಗೆ ಸಾಮಾನ್ಯರ ಅಭಿಪ್ರಾಯಗಳೂ, ಮನೋಚಿಕಿತ್ಸಕರ ಜವಾಬ್ಧಾರಿ ಇವುಗಳ ಕುರಿತಾಗಿ ಆಕರ್ಷಕವಾಗಿ ಹಾಸ್ಯಭರಿತವಾಗಿ ವಿವರಿಸಿದ್ದಾರೆ.


ಉದಾಹರಣೆಗಳೊಂದಿಗೆ ಅವುಗಳನ್ನು' ಹ್ಯಾಂಡಲ್ ' ಮಾಡಿದ ರೀತಿಯನ್ನು ಓದುತ್ತಿದ್ದರೆ ವೈಜ್ಞಾನಿಕ ಕಾದಂಬರಿಯೊಂದನ್ನು ಓದುತ್ತಿರುವ ಅನುಭವವಾಗುತ್ತದೆ. ಸೈಕೋ ಥೆರಪಿಸ್ಟ್ ಗೆ  ಇರಬೇಕಾದ ಸಮಯಪ್ರಜ್ಞೆಯನ್ನು ಸೂಕ್ಷ್ಮವಾಗಿ ತೋರಿಸುತ್ತಾರೆ.


ಈ ಮನಶ್ಯಾಸ್ತ್ರದ ಸಂಬಂಧವಾಗಿ ಕೆಲಸಮಾಡಿದ ಅನೇಕ ಜನ ಮನಶ್ಯಾಸ್ತ್ರಜ್ನರನ್ನು ಪರಿಚಯಿಸಿದ್ದಾರೆ. ಕೆಲವು  ಮನೋಚಿಕಿತ್ಸೆಯ ವಿಧಾನಗಳನ್ನೂ   ಪರಿಚಯಿಸಿದ್ದಾರೆ.
ಟ್ರಾನ್ಸಾಕ್ಷನಲ್ ಅನಾಲಿಸಿಸ್ [ ಸಂವಾದ  ವಿಶ್ಲೇಷಣೆ ]  ಮತ್ತು  ಅದರ ಕರ್ತೃ  ಎರಿಕ್ ಬರ್ನ್ ಬಗೆಗೆ, ಗೆಸ್ಟಾಲ್ಟ್ ಥಿಯರಿಯ ಬಗೆಗೆ, ಅವುಗಳನ್ನು  ಮನೋಚಿಕಿತ್ಸೆಯಲ್ಲಿ  ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಸರಳವಾಗಿ ಹೇಳಲಾಗಿದೆ. ಮನುಷ್ಯರಾಡುವ  ಆಟಗಳು, ಈಗೋ ಸ್ಟೇಟ್ ಗಳ ಬಳಸುವಿಕೆ ಇವುಗಳನ್ನು ಓದುತ್ತಾ ಹೋದಂತೆ ನಮ್ಮಲ್ಲೇ ನಾವು ಅನೇಕ ವಿಚಾರಗಳನ್ನು, ಬದಲಾವಣೆಗಳನ್ನೂ   ಗುರುತಿಸಿಕೊಳ್ಳಬಹುದಾಗಿದೆ.


ಪೂರಕ, ಮಾರಕ ಮತ್ತು ಅವ್ಯಕ್ತ ಸಂವಾದಗಳನ್ನು ನಾವು ಹೇಗೆ ನಡೆಸುತ್ತೇವೆ..?  ನಮ್ಮ ಅವಶ್ಯಕತೆಗಳೇನು? ಸಿಹಿ ಘಾತ, ಕಹಿಘಾತ ಇವುಗಳನ್ನು ಹೇಗೆ ಪಡೆಯುತ್ತೇವೆ? ನಾವು ಹೇಗೆ ಕಾರಣಗಳನ್ನು ಹುಡುಕುತ್ತಿರುತ್ತೇವೆ.? ಹೇಗೆ ಜವಾಬ್ಧಾರಿಯನ್ನು'' ಮನಸ್ಸಿನ'' ಮೇಲೆ ಹಾಕುತ್ತೇವೆ. ? ಹೇಗೆ ಬದಲಾಗುವುದನ್ನು ತಪ್ಪಿಸಿಕೊಳ್ಳುತ್ತೇವೆ? ನಮ್ಮ ಮನೋವ್ಯಾಪಾರವೇನು?  ಮನಸ್ಸಿನ ಹರಿಕಥೆಯೇನು?ಈ ರೀತಿಯ ಅನೇಕ ಪ್ರಶ್ನೆಗಳಿಗೆ ನಮಗಿಲ್ಲಿ ಉತ್ತರ ದೊರಕುತ್ತದೆ.


''ಮನಸ್ಸು'' ಬದಲಾಗಲು ಸಾಧ್ಯವಿದೆ ಎಂದಾದರೆ ನಮ್ಮ ''ಮನಸ್ಸನ್ನು'' ಯಾರು ಬದಲಾಯಿಸಬೇಕು? ನಾವೆಯೇ ಅಥವಾ ಥೆರಪಿಷ್ಟರೆ ?


ಎಂದು ಪ್ರಶ್ನಿಸುವ ಲೇಖಕರು ಉತ್ತರವನ್ನು  ನಮ್ಮಿಂದಲೇ ಪಡೆಯುತ್ತಾರೆ.  ಯಾವುದನ್ನೂ ಒಪ್ಪಲೇ ಬೇಕೆನ್ನುವ ನಿಭಂಧನೆ ಇಲ್ಲ. ಅದನ್ನೂ ತಮ್ಮ ಥೆರಪಿಯಲ್ಲಿ ವಿವರಿಸುತ್ತಾರೆ.


ತುಂಬಾ ಸುಂದರವಾದ, ಉತ್ಕೃಷ್ಟವಾದ, ಸಂಪತ್ಭರಿತವಾದ ಪುಸ್ತಕವಿದು. ಈ ಪುಸ್ತಕ ನನಗೆ ಎಷ್ಟು  ಉತ್ತೇಜನ ಕೊಟ್ಟಿತೆಂದರೆ ಬಿಎಸ್ಸಿ ಯಲ್ಲಿ  ಪಿ. ಸಿ. ಎಂ. ಓದಿದ ನನಗೆ ಸ್ನಾತಕೋತ್ತರ ಅಭ್ಯಾಸಕ್ಕೆ ಮನಶ್ಯಾಸ್ತ್ರವನ್ನೇ ಆಯ್ದುಕೊಳ್ಳುವಂತೆ ಮಾಡಿತು. ಮನಸ್ಸಿನ ಮತ್ತಷ್ಟು ಮನೋವ್ಯಾಪಾರವನ್ನು ತಿಳಿಯಬೇಕೆನ್ನುವ ಹಂಬಲ ಹುಟ್ಟಿಸಿತು.


ಆಸಕ್ತರು ಖಂಡಿತಾ''ಮನಸ್ಸು ಇಲ್ಲದ ಮಾರ್ಗ '' ಓದಿ. ಆ ಬಗ್ಗೆ ''ಮನಸ್ಸು'' ಮಾಡಿ....!! ಇಂತಹಾ ಅತ್ಯುತ್ತಮ ಕೃತಿಯನ್ನು ಕನ್ನಡಕ್ಕೆ ಕೊಟ್ಟ ಮೀನಗುಂಡಿ ಸುಬ್ರಹ್ಮಣ್ಯ ಅವರಿಗೆ ನನ್ನ ಅನಂತಾನಂತ ವಂದನೆಗಳು.

Monday, December 6, 2010

ಇಚ್ಚಿತ್ತ [schizophrenia]

ಸೋಮು  ಒಕ್ಕಾಲಿನಲ್ಲಿ  ಬಿಸಿಲಿನಲ್ಲಿ ನಿಂತಿದ್ದ. ''ಎಲ್ಲರೂ ನನ್ನ ಆಲೋಚನೆಗಳನ್ನು   ಕದಿಯುತ್ತಿದ್ದಾರೆ. ಪೇಪರ್ ನಲ್ಲೆಲ್ಲಾ ನನ್ನ ಸುದ್ದಿಯನ್ನೇ ಬರೆದಿದ್ದಾರೆ.ನೋಡು ಟೀವಿ ಯವರೆಲ್ಲಾ ನನ್ನ ವಿಷಯವನ್ನೇ ಒದರುತ್ತಿದ್ದಾರೆ. ನನ್ನ ಆಲೋಚನೆಗಳನ್ನೆಲ್ಲಾ ಯಾರೋ ಕಂಟ್ರೋಲ್ ಮಾಡ್ತಾ ಇದ್ದಾರೆ.  ಅವರನ್ನು ಆಚೆ ಕಳಿಸು.'' ಪದೇ ಪದೇ ಇದೇ ತರದ ಮಾತುಗಳನ್ನಾಡುತ್ತ ಮನೆಯಲ್ಲಿದ್ದವರ  ತಲೆ ತಿಂದಿದ್ದ. 

ಇದು 'ಇಚ್ಚಿತ್ತದ' ಲಕ್ಷಣ.  
ನಾವೆಲ್ಲಾ ಸಾಮಾನ್ಯವಾಗಿ ಈ ತರದ ವ್ಯಕ್ತಿಗಳಿಗೆ' ಹುಚ್ಚು ಹಿಡಿದಿದೆ ' ಎಂಬುದಾಗಿ ಒಂದೇ ಮಾತಿನಲ್ಲಿ ಹೇಳಿಬಿಡುತ್ತೇವೆ.

ಸ್ಚಿಜೋಫ್ರೆನಿಯ   ಅಥವಾ ಇಚ್ಚಿತ್ತ   
ಇದೊಂದು ಸಾಮಾನ್ಯವಾಗಿ ಗುರುತಿಸಬಹುದಾದ ಮಾನಸಿಕ ಖಾಯಿಲೆ.......      ಇದನ್ನು     'ಒಡೆದ ಮನ ' ಎಂದು ವರ್ಣಿಸಬಹುದು.  ಗ್ರಹಿಕೆ, ಆಲೋಚನೆ ಮತ್ತು ಭಾವನೆಗಳಲ್ಲಿ ಅಸ್ತವ್ಯಸ್ತ ವಾಗುವುದು,   ಒಂದಕ್ಕೊಂದು ಸಂಬಂಧವಿಲ್ಲದಿರುವುದು  ಇದರ  ಮುಖ್ಯ ಲಕ್ಷಣ.

 ಇಚ್ಚಿತ್ತದ ನಡವಳಿಕೆಯ  ಸಾಮಾನ್ಯ ಚಿನ್ಹೆಗಳು ಹೀಗಿವೆ.
*  ಅತಿಯಾದ ನಡವಳಿಕೆಗಳು... ಉದಾ .. ಹೆಚ್ಚೆಚ್ಚು ಮಾತು, ನಗು,  ಬೈಗುಳ. ಹಿಂಸಾವೃತ್ತಿ, ಉದ್ದೇಶವಿಲ್ಲದೆ  ಮಾಡಿದ್ದನ್ನೇ ಮಾಡುವುದು.

*   ಖಿನ್ನತೆಯಿ೦ದ ಕುಳಿತಿರುವುದು.ಸ್ವಂತದ ಮತ್ತು ಸುತ್ತಲಿನ  ಸ್ವಚ್ಚತೆಯ ಕಡೆ ಗಮನವಿಲ್ಲದಿರುವುದು.

*  ಅಸ್ತವ್ಯಸ್ತ  ಸ್ಥಿತಿಯಲ್ಲಿ ಘಂಟೆಗಟ್ಟಲೆ, ಕೆಲವೊಮ್ಮೆ ದಿನಗಟ್ಟಲೆ ಇರುವರು. ಉದಾ - ಒಂದೇ ಕಾಲಿನಲ್ಲಿ ನಿಂತುಕೊಂಡಿರುವುದು.ಸೂರ್ಯನ ಕಿರಣಗಳು ಕಣ್ಣು ಕುಕ್ಕುತ್ತಿದ್ದರೂ ಅವನೆಡೆಗೆ ದೃಷ್ಟಿಯಿಟ್ಟು ನೋಡುವುದೂ ...

*   ಋಣಾತ್ಮಕ ನಡವಳಿಕೆಗಳು. ಉದಾ ಕೈ ತೋರಿಸು ಎಂದರೆ ತೋರಿಸೊಲ್ಲ ಎಂದು ಕೈ ಬಚ್ಚಿಟ್ಟು ಕೊಳ್ಳುವುದು. ಬಾಯಿ ತೆರೆ ಎಂದರೆ ಬಾಯಿ ಬಿಗಿ ಹಿಡಿದು ಮುಚ್ಚಿಕೊಳ್ಳುವುದು.

*ಕೆಲವೊಮ್ಮೆ ಅನಪೇಕ್ಷಿತ ವಿಧೇಯತೆ. ಎಷ್ಟು ಹೊಡೆದರೂ ಹೊಡೆಸಿಕೊಳ್ಳುವುದು, ಹೇಳಿದಂತೆ ಮಾಡುವುದೂ, ಸೂಜಿಯಿಂದ ನಾಲಿಗೆಯನ್ನು ಚುಚ್ಚುತ್ತೆನೆಂದರೂ... ಸರಿ ಎಂದು ನಾಲಿಗೆಯನ್ನು ಹೊರಚಾಚುವರು.ಚುಚ್ಚಿದರೂ ನಾಲಿಗೆಯನ್ನು ಒಳಗೆಳೆದು ಕೊಳ್ಳಲಾರರು.

*ಬೇರೆಯವರು  ಆಡಿದ್ದನ್ನೇ ಪ್ರತಿದ್ವನಿ ಮಾಡುವುದು. ಬೇರೆಯವರ ಭಂಗಿಗಳನ್ನು ಅನುಕರಿಸುವುದು.

*  ಕೆಲವೇ ಪದಗಳನ್ನು ಮಾತನಾಡಿಕೊಳ್ಳುತ್ತಿರುವುದು.ಪುನರಾವರ್ತನೆ. ಹೊಂದಾಣಿಕೆ ಯಿಲ್ಲದ ಮಾತುಗಳು.

*  ಆಲೋಚನಾ ಗತಿಯಲ್ಲಿ ತಡೆಯಾಗುವುದು. [thought block]

*   ಆಲೋಚನಾ ವಿಷಯದಲ್ಲಿನ ಅಸಮಂಜಸತೆ ....

*   ಭ್ರಮೆ..  
 ಇದು ಸಾಮಾನ್ಯವಾಗಿ ಹೆಚ್ಚಿನ ಸ್ಚಿಜೊಪ್ರೆನಿಕ್  ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುವ ಲಕ್ಷಣ.  ಯಾರೋ ಆಲೋಚನೆಗಳನ್ನು ಕದಿಯುತ್ತಿದ್ದಾರೆನ್ನುವುದೂ, ಆಲೋಚಿಸುವುದನ್ನು ತಡೆಯುತ್ತಿದ್ದಾರೆನ್ನುವುದೂ, ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದಾರೆನ್ನುವುದೂ,  ಆಗದವರ್ಯಾರೋ ತನ್ನನ್ನು ಕೊಲ್ಲಲು ಬಯಸಿದ್ದಾರೆನ್ನುವುದೂ, ಯಾರೋ ಪಿತೂರಿ ಮಾಡುತ್ತಿದ್ದಾರೆನ್ನುವುದೂ , ಕಿವಿಯಲ್ಲಿ, ತಲೆಯಲ್ಲಿ, ಎದೆಯಲ್ಲಿ ಅಥವಾ ಹೊಟ್ಟೆಯಲ್ಲಿ  ಯಾರೋ ಇಬ್ಬರು ತನ್ನ ಬಗ್ಗೆ ಮಾತಾಡುತ್ತಾರೆನ್ನುವುದೂ.. ಇವರ ದೂರುಗಳಾಗಿರುತ್ತವೆ. ಸಂಶಯ ಪ್ರವೃತ್ತಿ ಹೆಚ್ಚು. ಸಂಗಾತಿಯ ನೈತಿಕತೆಯ ಬಗ್ಗೆ ಸಂಶಯ.
ರುಚಿ , ವಾಸನೆ, ದೃಷ್ಟಿ ಇವುಗಳಿಗೆ ಸಂಬಂಧ ಪಟ್ಟ ಭ್ರಮೆಗಳಿಗಿಂತಲೂ ಶ್ರವಣೆ೦ದ್ರಿಯಕ್ಕೆ ಸಂಬಂಧಿಸಿದ ಭ್ರಮೆಗಳು ಹೆಚ್ಚು.

*  ಭೌದ್ಧಿಕವಾಗಿ, ಭಾವನಾತ್ಮಕವಾಗಿ, ಸಾಮಾಜಿಕವಾಗಿ ಅಸಮರ್ಪಕ ಹೊಂದಾಣಿಕೆ , ತನ್ನನ್ನೇ ಮರೆಯುವುದು..

* ನಿದ್ರಾಹೀನತೆ, ಜಡತೆ, ನೋವುಗಳು,  ಆಹಾರ ಸೇವನೆಯಲ್ಲಿ ಅಲಕ್ಷ್ಯ. 


ಇಚ್ಚಿತ್ತಕ್ಕೆ ಮುಖ್ಯ ಕಾರಣಗಳೆಂದರೆ,


*ಅತಿಯಾದ ಡೋಪಮೈನ್ ಎನ್ನುವ ನರಚೋದಕದ ಸ್ರವಿಸುವಿಕೆ,
* ಆನುವಂಶಿಕತೆ,
*ನರವ್ಯೂಹಗಳಲ್ಲಿನ ತೊಂದರೆ, ಮೆದುಳಿಗೆ ಪೆಟ್ಟು ಬಿದ್ದಿರುವುದು..ಇತ್ಯಾದಿ 

ಹದಿಹರೆಯದಲ್ಲಿ ಹೆಚ್ಚಾಗಿ ಇದು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಬಾಲ್ಯದಲ್ಲಿಯೂ, ವ್ರುದ್ದಾಪ್ಯದಲ್ಲಿಯೂ ಕಾಣಿಸಿಕೊಳ್ಳಬಹುದು.
 ಇದರಲ್ಲಿ ಅನೇಕ ವಿಧಗಳಿವೆ.
  ಇದರ ನಿವಾರಣೆಗೆ  ಔಷಧಗಳೇ ಬೇಕು. ಒಂದು ತಹಬದಿಗೆ ಬರಲು  ಆಸ್ಪತ್ರೆ ವಾಸವೂ ಬೇಕಾಗುತ್ತದೆ. 


 ಈ ರೋಗಿಗಳ ಬಗ್ಗೆ ಸಾಮಾಜಿಕ ಕಾಳಜಿ ಅತ್ಯಗತ್ಯ. ಹುಚ್ಚರೆಂದು ಕಲ್ಲು ಎಸೆಯುವುದು,  ಅವರನ್ನು ಕಟ್ಟಿ ಹಾಕುವುದೂ, ಥಳಿಸುವುದೂ ಖಂಡಿತಾ ಮಾಡಬಾರದು. ಆ ಸ್ತಿತಿಯಲ್ಲಿ ಅವರೊಬ್ಬ ವ್ಯಕ್ತಿಯಾಗಿರುವುದಿಲ್ಲ. ತಮ್ಮ ಬಗ್ಗೆ ಏನೇನೂ ಅರಿವಿರುವುದಿಲ್ಲ.ಸಮಾಜದ    ಸಹನೆ ಬೇಕು. ಕುಟುಂಬದವರ ಆರೈಕೆ, ಸಹಾಯ ,  ಸಾಂತ್ವಾನ , ತ್ಯಾಗ ಇವುಗಳಿಂದ ಇಚ್ಚಿತ್ತ ರೋಗಿಗಳು ತಮ್ಮ ಜೀವನವನ್ನು ಪುನಃ ರೂಪಿಸಿಕೊಳ್ಳಬಹುದಾಗಿದೆ.  




ವಂದನೆಗಳು.