Monday, June 27, 2011

ಜೀವನ ಕಲೆ !

ಭಾನುವಾರದ ದಿನ ಬೆಳಗಿನಲ್ಲಿ ಟ0ಟಾಣ ಟ0ಟಾಣ ಎನ್ನುವ ಸದ್ದಿನೊ೦ದಿಗೆ,  ನನ್ನ ತಲೆಯಲ್ಲಿ  ಹುಟ್ಟಿಕೊ೦ಡ ಕೆಲವು ವಿಚಾರಗಳು.


 ಸದ್ದು ಯಾವುದರದ್ದು..? ಪುಟ್ಟ ಬಾಲಕನೊಬ್ಬನ   ಮರಗಾಲು  [stilts] ಕುಣಿತದ್ದು..
ಅದ್ಯಾವುದೋ ಭಾಷೆಯಲ್ಲಿ ಪದ್ಯ ಹೇಳುತ್ತಾ  ಅದಕ್ಕೆ ತಕ್ಕಂತೆ ನರ್ತಿಸುವುದರದ್ದು.. 
ಅದು ಅವನ ಕಲೆಯ ಸದ್ದು ,  ಸಂಸ್ಕೃತಿಯ  ಸದ್ದು,  ಜೀವದ ಸದ್ದು .. ಬದುಕಿನ ಸದ್ದು..
 ಇಂದಿನ ಸದ್ದು.. ಅವನ ನಾಳೆಗಳ ಸದ್ದು..
ಸಧ್ಯಕ್ಕೆ ಅದು ಹೊಟ್ಟೆಯ ಸದ್ದು , ಹಸಿವಿನ ಸದ್ದು.. ಹೌದು ಅದು ಅವನ ಹಸಿವಿನ ಸದ್ದು..!! 


ನೋಡಿದರೆ ಪಾಪ ಅನ್ನಿಸುತ್ತದೆ. ಹತ್ತರಿ೦ದ ಹನ್ನೆರಡು ವಯಸ್ಸಿರಬಹುದು. ಆತ ಲಾಗ ಹಾಕುವುದು, ಮೈ ಬಾಗಿಸುವುದು ನೋಡುತ್ತಿದ್ದರೆ ಮೈ ನವಿರೇಳುತ್ತದೆ. ಯಾರಾದರೂ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸಿದ್ದನ್ನು  ನೋಡುತ್ತಿದ್ದರೆ 'ಬಿದ್ದರೆ 'ಅನ್ನುವ ಭಯ ನನಗೆ!   ಅಷ್ಟೊಂದು ಉದ್ದದ ಮರಗಾಲು ಹಾಕಿಕೊಂಡು ಡ್ಯಾನ್ಸ್ ಬೇರೆ ಮಾಡುತ್ತಾನೆ!  ಅದವರ ಕುಲ ಕಸುಬು. ಪಿತ್ರಾರ್ಜಿತ..!  ಯಾವ ರಿಯಾಲಿಟಿ ಶೋದಲ್ಲಿ ತೋರಿಸುವ ಕಸರತ್ತುಗಳಿಗೇನು ಕಡಿಮೆಯಿಲ್ಲ  ಅವನದು.   ಅವಕಾಶ ಸಿಕ್ಕಿಲ್ಲವೋ? ಅದವನಿಗೆ ಬೇಡವೋ?  ಅಂತೂ  ಹಾದಿ  ಬದಿಯ ಬದುಕು ಅವನದು. ಅನೇಕ ಕಡೆ ಹಳ್ಳ ದಾಟಲು ಮರಗಾಲು ಬಳಸುವ ಪದ್ದತಿಯಿದೆಯಂತೆ.    ಇಲ್ಲಿ ಜೀವನದ ನದಿ ದಾಟುತ್ತಿದ್ದಾನೆ ಅಷ್ಟೇ.


ಯಾವ ವಿಶ್ವ ವಿದ್ಯಾಲಯದಲ್ಲೂ ಕಲಿಸಲು ಸಾಧ್ಯವಾಗದ ಜೀವನ ಕಲೆ ಅವನದು.ಕಲೆಯೇ ಜೀವನ. ಹುಟ್ಟುಟ್ಟುತ್ತಲೇ    ಕಲಿತದ್ದು. 
ಸುಮ್ಮನೆ ಬಾಲ ಕಾರ್ಮಿಕರು , ಕೌಮಾರ್ಯದ  ಕೊಲೆ .. ಹಾಗೆ  ಹೀಗೆ  ಎಂದು  ಕೂಗಿ  ಕಿರುಚಾಡುವುದಕ್ಕಿಂತ, ಆಮೇಲೆ ನಡು ಹೊಳೆಯಲ್ಲಿ ಅವರನ್ನು ಬಿಟ್ಟು ಹೋಗುವುದಕ್ಕಿಂತ,   ಸಾಧ್ಯವಾದರೆ ನಿಂತು  ನೋಡಿ ಸಂತೋಷಿಸೋಣ, ಕೈಲಾದಷ್ಟು ದುಡ್ದೋ,  ಹಳೆ ಬಟ್ಟೆಯೂ ಏನೋ ಒಂದು ಕೊಡೋಣ, ಅವರನ್ನ ಇದ್ದ ಹಾಗೆಯೇ ಗೌರವಿಸೋಣ,  ಸಂತೋಷ ಪಟ್ಟಿದ್ದರ  ಋಣ ಅಷ್ಟರ ಮಟ್ಟಿಗೆ ಕಡಿಮೆಯಾದೀತು.ಮಕ್ಕಳ ಕಣ್ಣಿನ ಅಚ್ಚರಿಗೊಂದು ಬೆಲೆ ಕೊಟ್ಟಂತಾದೀತು.


ಬಂದದ್ದು ಭಾನುವಾರ, ಹಾಗಾಗಿ ಉಳಿದ ದಿನಗಳಲ್ಲಿ ಶಾಲೆಗೆ  ಹೋದರೂ  ಹೋಗಬಹುದು ಎನ್ನುವ ಆಶಾವಾದ ನನ್ನದು. ಅಲೆಮಾರಿಯಲ್ಲದಿದ್ದಲ್ಲಿ.  ಕೇಳಲಿಲ್ಲ ಅವನನ್ನು.




Friday, June 17, 2011

ಕಳೆದುಹೋಗಬೇಕಿದೆ..ಮತ್ತೆ..

ಜಿಟಿ ಜಿಟಿ ಮಳೆ .  ಇರುಚಲು ಬಡಿದು  ಬಾಲ್ಕನಿಯಲ್ಲಿಟ್ಟ ಪಾಟುಗಳ ತುಂಬೆಲ್ಲ ನೀರು.  ಹಾಕಿದ ಗಿಡಗಳೆಲ್ಲಾ ಕೊಳೆತು ಹೋಗುತ್ತವೋ ಏನೋ.. ?
ಯಾಕೋ  ಮನಸಿಗೆ  ಸೋಮಾರೀತನ.   ಮಕ್ಕಳು ಶಾಲೆಯಿಂದ ಬರಲಿನ್ನೂ ತುಂಬಾ ಹೊತ್ತಿದೆ.

ಟೀಪಾಯಿಯ ಮೇಲೆ ಪಗಡೆ ಕಾಯಿಗಳು  ಹರಡಿಕೊಂಡಿದ್ದು ಯಾಕೋ ಆಪ್ಯಾಯಮಾನ.  ಮಗ  ಬಂದವನೇ ಪಗಡೆ ಕಾಯಿ ಹುಡುಕುತ್ತಾನೆ.ಮಗಳು ಪಟ ಹಾಸುತ್ತಾಳೆ.  ಅಮ್ಮ, ಅಪ್ಪ ಬರಲೆಷ್ಟು ಹೊತ್ತಿದೆ.?  ಪಗಡೆ ಆಡೋಣ...

ಮನಸ್ಸು ಹಳೆಯದನ್ನೇ ಮೆಲುಕು ಹಾಕುತ್ತದೆ.  ಚಿಕ್ಕವರಿರುವಾಗ ತಮ್ಮನೊ೦ದಿಗೆ ಅತ್ತೆಯ ಕೈ ಹಿಡಿದೆಳೆದು ಹೀಗೆ ಮಾಡುತ್ತಿದ್ದದ್ದು ನಿನ್ನೆ ಮೊನ್ನೆ ನಡೆದ೦ತಿದೆ. ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ.ಮಳೆಯ ಮಹತ್ವ ಅದಲ್ಲವೇ ? ಅದಕ್ಕೂ  ನೆನಪುಗಳ ಜರೂರತ್ತಿದೆ.!

ಅತ್ತೆಯಾದರೂ ಪಾಪ..,  ಮದುವೆಯಾಗಿ ಮೂರು ವರುಷ ತು೦ಬುವುದರೊಳಗೆ, ಗ೦ಡ ತಿರುಗಿ ನೋಡದೇ  ಮೋಡದೆಡೆ ನಡೆದು ಬಿಟ್ಟಿದ್ದ. ಮಗುವೊ೦ದು ಇತ್ತ೦ತೆ ಅತ್ತೆಗೂ. ಅದಕ್ಕೆ ಅದ್ಯಾವುದೊ ಜ್ವರ ಬಡಿದು ತೀರಿಕೊ೦ಡಿತ೦ತೆ. ಅತ್ತೆಯ ಕನಸುಗಳೆಲ್ಲಾ ಕಮರಿಹೋದವು. ಮತ್ತೆ ಭುಗಿಲೇಳದ೦ತೆ ಕನಸುಗಳ ಕ೦ಪಾರ್ಟ್ಮೆ೦ಟಿಗೆ ದೊಡ್ಡದೊ೦ದು ಬೀಗ ಹಾಕಿ ಕೀಲಿಯನ್ನು ಎಡಗೈಲೆಲ್ಲೋ ಇಟ್ಟು ಮರೆತುಬಿಟ್ಟಿದ್ದಳು.ಸಿಕ್ಕ೦ತಾಗಿ ಸಿಗದೇ ಹೋದ ಬಿಸಿಲ್ಗುದುರೆಯಾಯ್ತು ಅತ್ತೆಯ ಬಾಳು.  ಮತ್ತೆ ಅತ್ತೆಗಾದರೂ ದಿಕ್ಕು ತವರೇ ಆಯಿತು.   ತಮ್ಮನ ಮನೆ ತನ್ನದು, ತಮ್ಮನ ಮಕ್ಕಳು ತನ್ನವು..  ದನ ಕರು, ಕೊಟ್ಟಿಗೆ, ಗದ್ದೆ ನೆಟ್ಟಿ, ತೋಟದ ಕಳೆ ಎಲ್ಲಾ ಕಡೆಗೂ ಅತ್ತೆಯೇ ದಿಕ್ಕು,  ''ಅಕ್ಕಿಯೊಂದಿದ್ದರೆ ಸಾಕ?  ಬರೀ ಅನ್ನನೆ ತಿನ್ನಕಾಗ್ತಾ?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಾಯ್ನ್ಕಾಯಿ , ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,''  ಎನ್ನುವವಳೂ ಆಕೆಯೇ.   ಆಸರಿಗೆ  ಮನೆಗೆ ಬಂದ ಆಳುಗಳ ಕೈಲಿ ಅಂಗಳದಲ್ಲಿ  ಮಣ್ಣು ಹೊಯ್ಸಿ ಏರಿ ಮಾಡಿಸಿಕೊಂಡು ಅವರೇ ಕಾಯಿಯ ಒಂದೊಂದೇ ಬೀಜ ಹುಗಿಯುವವಳೂ ಅವಳೇ. ತ್ಯಾರಣದ ಏರಿ ಮಾಡಿ ಮನೆ ಮುಂದೆ ಉದ್ಯಾನವನ ಮಾಡುವವಳೂ ಅವಳೇ. ಎಲ್ಲರ ಕನಸುಗಳಿಗೆ ಬಣ್ಣ ಹಚ್ಚುವವಳೂ ಅವಳೇ!

ಶಾಲೆ ಬಿಟ್ಟ ಮೇಲೆ ಸ೦ಜೆ ಕಡೆಗೆ  ಜೋರು ಮಳೆ ಹೊಯ್ಯುವಾಗ ಇನ್ನೇನು ಕೆಲಸ? ಅತ್ತೆಯ ಬಳಿ ಸಾರಿ ಕಥೆ ಹೇಳೆ ಅತ್ತೆ ಅ೦ದರೆ ಸಾಕು,  '' ಕಥೆ ನಾ ಎ೦ತಾ ಹೇಳ್ತ್ನೆ..? ಅದಕ್ಕೆ ಮಾಚಬಟ್ಟರು ಇದ್ವಲೇ, ಅವ್ವಾದ್ರೆ ಚೊಲೋತ್ನಾಗಿ ಹೇಳ್ತ. ಬನ್ನಿ ಪಗಡೆ ಆಡನ.  ಕೂಸೇ ಪಟ ಹಾಸಿ ಕಾಯಿ ಇಡು, ಈಗ ಬ೦ದಿ ಹಪ್ಳ ಸುಟ್ಕಂಬತ್ತಿ ನಾಕೆಯ.  ಕಡಿಗೆ ಎಂತಾರೂ  ತಿನ್ನಕ್ಕೊಡು ಹೇಳಿ ಅಮ್ಮಂಗೆ   ಗೋಳ್ಹೊಯ್ಯಡಿ. ಆ ಚಾಳಿ ಎಮ್ಮೆ ಕರಿಯಕ್ಕೆ ಹೊಯ್ದ.  ಆಗಿಂದ  ನಾಕ್ ಬಾರಿ ಆತು,  ಮೂರು ಸಲ ನಾ ನೋಡಿದ್ದಿ,  ಇನ್ನೆಷ್ಟು  ಬಾರೀ ನೋಡಕಾ ಏನ ? ಮತ್ತೆ  ದೋಸೆ ಅಕ್ಕಿ ಸೈತ ಬೀಸದಿದ್ದು,  ನಾ ಬರದು  ಒಂದೇ ಆಟಕ್ಕೆ  ಮತ್ತೆ ''

ಇಷ್ಟರ ಜೊತೆಗೆ ಮೊದಲೇ ಸುಟ್ಟು ಅಡಗಿಸಿಟ್ಟ  ಹಲಸಿನ ಬೇಳೆ, ಹಪ್ಪಳ  ಹಾಳೆ ತಟ್ಟೆಯಲ್ಲಿಟ್ಟುಕೊಂಡು ಬರುವ ಹೊತ್ತಿಗೆ ಅಕ್ಕ ತಮ್ಮನಲ್ಲಿ ಪಗಡೆ  ಕಾಯಿಯ ಬಣ್ಣಕ್ಕಾಗಿ ಜಗಳ.

'ನಂಗೆ ಕೆಂಪಿದು ಬೇಕು.' ತಮ್ಮನ ಹಕ್ಕು. 
'ಯಾವಾಗಲೂ ನಿಂಗೆ ಕೆಂಪಿ ಕಾಯಿ ಬೇಕಾ. ನಂಗೊತ್ತಿಲ್ಲೆ. ಇವತ್ತು ಕೆಂಪುಕಾಯಿ ನಾ ತಗತ್ತಿ.,  ಅತ್ತೆ ನೋಡೇ...'


ಜಗಳ ತಗಾದೆ ಮುಗಿದು ಅತ್ತೆಯ ಪ೦ಚಾಯ್ತಿಕೆ ನಡೆದು  ಅಂತೂ ಆಟ ಶುರು. ಅತ್ತೆಯ ಕೈಯ್ಯೋ ಕಯ್ಯಿ , ಅದು ಹೇಗೆ ಕವಡೆ ಪಳಗಿಸಿದ್ದಳೋ.    ಚಿತ್ತ, ನಾಕು , ಭಾರ ಬೇಕೆಂದಾಗಲೆಲ್ಲಾ ಒಚ್ಚಿ, ಮೂರು..  ಮೊದಲು ಕಾಯಿ ಇಳಿಸಿ  ಜುಗ ಕಟ್ಟುವುದು ಅವಳೇ. ಉಳಿದ  ಎಲ್ಲರ  ಕಾಯಿಯೂ ಆಗಾಗ ಮನೆಗೆ, 
ತಮ್ಮನದು ಬರೀ ಮೋಸ.  ಒಚ್ಚಿ ಬಿದ್ದರೆ ಮೆಲ್ಲ ಮಗಚಿಟ್ಟು 'ಭಾರ' ಮಾಡುವುದು,  ಹುಳ್ಳಗೆ ನಗುವುದು! ಚಿಮನೀ ಬುಡ್ಡಿಯ ದೀಪದ ಬೆಳಕಲ್ಲಿ ಹೌದೆಂದುಕೊಳ್ಳಬೇಕು!
ಅಂತೂ ಅತ್ತೆಯ ಕಾಯಿಯೇ ಮೊದಲು ತೆಗೆಯುವುದು.  ಅತ್ತೆಯೇ ಗೆಲ್ಲುವುದು.! ಜೀವನದ ಎಲ್ಲಾ ಪರೀಕ್ಷೆಗಳನ್ನೂ ಅನಿವಾರ್ಯವಾಗಿ ಎದುರಿಸಿದವಳು  ಅವಳು. ಗೆಲುವೋ, ಸೋಲೋ..? ಅರ್ಥವಾಗದ ವಯಸ್ಸುಅದು. ಅಪ್ಪ ಅಮ್ಮ ಆಗಾಗ ಹೇಳುತ್ತಿದ್ದುದು, ''ಪಾಪ ಇವಳ ಬಾಳು ಕಣ್ಣೀರಾದರೂ ಮೇಲೆ ಒಂಚೂರು ತೊಸ್ಕ್ಯತ್ಲಲ್ಲೇ, ಅವಳಿಗೆ ಹ್ಯಾಂಗೆ ಬೇಕಾ ಹಾಂಗೆ ಇರ್ಲಿ.''ಮಕ್ಕಳಿಗೆ  ಅದೆಲ್ಲಿ ಅರ್ಥವಾದೀತು?
’ಅತ್ತೇನೆ ಯಾವಾಗ್ಲೂ ಗೆಲ್ತಾ...’
'ಆಮೇಲೆ, ಒಂದ್ ಕೈ ಆಡಿಕೊಡೆ ಅತ್ತೆ ಒಚ್ಚಿ ಬೀಳ್ತೆ ಇಲ್ಲೇ..'
 'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..


''ಇನ್ ಸಾಕು. ಯಂಗೆ ಒಳಗೆ ಕೆಲಸ ಇದ್ದು. ನಿನ್ ಅಮ್ಮನೇ ದೋಸಿಗೆ ಬೀಸ್ತಾ ಇದ್ದ ಕಾಣ್ತು, ನಾ ಒಂಚೂರ್ ಕೈ ಹಾಕ್ತಿ. ನಿಂಗ ಇವತ್ತು ಶಾಲೆ ಬಿಟ್ ಬಂದವರು  ಮಗ್ಗಿ ಹೇಳಿದ್ರ. ?    ಬೇಗ ಬೇಗ ಬರ್ಕಂಡು ಓದ್ಕ್ಯ೦ಡು ಮಾಡ್ಕ್ಯಳಿ, ಅಪ್ಪ ಬಂದ್ರೆ ಬೈತ. ಸುಳ್ಳಲ್ಲ..ಮಾಚ್ ಭಟ್ರಿಗೆ  ಸಂಧ್ಯಾವನ್ನೇ  ಆತು ಕಾಣ್ತು. ಕಥೆ ಹೇಳ್ತ,  ಕೇಳ್ಳಕ್ಕು. ಬೇಗ್ ಬರ್ಕಂಡು ಮುಗ್ಸಿ.''
 ಆಯ್ತಪ್ಪಾ ...ಅದೂ ಮುಗಿಸಿಯಾಗುತ್ತಿತ್ತು.
ಈಗ ಮಾಚಭಟ್ಟರ ಸರದಿ.   ಅವರು ಸಹಾ ಜೀವನದಲ್ಲಿ ಸಾಕಷ್ಟು ಕಷ್ಟ ನುಂಗಿದವರೇ ಅಲ್ಲವೇ...? ಅವರ ಬಗ್ಗೆ ವಿವರ  ಯಾರಿಗ್ಗೊತ್ತು? ಮಗನೊಬ್ಬನಿದ್ದನಂತೆ, ಅವನ ಸಂಸಾರದೊಂದಿಗೆ  ಬೇರೆ ಮನೆ ಮಾಡಿಕೊಂಡು.

ಇವರಿಗೆ ಹೆಂಡತಿ ಸತ್ತು ಸುಮಾರು ವರ್ಷಗಳೇ ಆಗಿತ್ತೇನೋ.   ಅವರಿಗೂ ಎಪ್ಪತೈದರ ಮೇಲೆ ವಯಸ್ಸಾಗಿದ್ದಿರಬಹುದು.  ಮಳೆಗಾಲ ಶುರುವಿನಲ್ಲಿ  ಬಂದವರಿಗೆ ಮತ್ತೆ   ಚೌತಿಯ ಗಣಪತಿಯನ್ನು  ಮುಳುಗಿಸಿಯೇ ಹೋಗಬೇಕೆನ್ನುವುದು ಅಪ್ಪನ ಅಣತಿ.
ಅವರಿಗಾದರೂ ಮನೆಯಲ್ಲಿ ಕಾಯ್ದುಕೊಂಡಿರಲು ಯಾರಿದ್ದಾರೆ ? ಆದರೆ  ಆಗ ಅರ್ಥವಾಗದ ಅವರ ನಿಟ್ಟುಸಿರು ಈಗ ಅರಿವಿಗೆ ಬರುತ್ತದೆ.  ಅತ್ತೆಯ ಮದುವೆ ಮಾಡಿಸಿದ್ದು ಅವರೇ ಅಂತೆ.    'ಮಾಣಿ ಘನಾವ' ಎಂದು ಇಲ್ಲದ ತರಾತುರಿಯಲ್ಲಿ.   'ಯಾರ್ಯಾರ ಹಣೆ ಮೇಲೆ ಯಂತಾ ಬರದ್ದು  ಹೇಳದನ್ನ ಯಾರಿಗೆ ಓದಲಾಗ್ತು, ತಲೆ ಬಿಸಿ  ಮಾಡ್ಕ್ಯಳದು ಯಂತಕೆ ಭಟ್ರೇ,ನಮಗೆ ಶಿಕ್ಕಿದ್ದು ಇಷ್ಟೇಯ..' ಅಪ್ಪನ ಸಮಾಧಾನ.
 ಕಥೆ ಕೇಳುವವರಿಗೆ ಕಥೆಯಾದರೆ ಸಾಕು, ಊಟ ಮುಗಿಸಿ ಮಾಚಭಟ್ಟರ   ಒಂದು ಬದಿಗೆ ಅಕ್ಕ, ಇನ್ನೊಂದು ಬದಿಯಲ್ಲಿ ತಮ್ಮ ಆತು ಕುಳಿತರೆಂದರೆ ತಮ್ಮನಿಗೆ ಕಥೆ ಮುಗಿಯುವಷ್ಟರಲ್ಲಿಯೇ ತೊಡೆಮೇಲೆ ನಿದ್ದೆ.
ವೈವಿಧ್ಯಮಯ    ಕಥೆಗಳು ಅವು . ರಾಜಕುಮಾರಿಯನ್ನು  ಧುರುಳನೊಬ್ಬ  ಅಪಹರಿಸಿಕೊಂಡು ಹೋದದ್ದು..ಅವಳನ್ನು ಉಪಾಯವಾಗಿ ಶೂರನೊಬ್ಬ ಕರೆದುಕೊಂಡು ಬಂದಿದ್ದು, ಬರುವಾಗ  ಶತ್ರು ಬೆನ್ನಟ್ಟಿದ್ದು, ಪೊಟರೆಯೊಂದರಲ್ಲಿ ಇವರು  ಅಡಗಿಕೊಂಡಿದ್ದು. ಹೆಜ್ಜೆ ಗುರುತು, ವಾಸನೆ  ಕಂಡು ಹಿಡಿಯುವವರೊಂದಿಗೆ ಆತ ಇವರ ಪೊಟರೆಯನ್ನು ಗುರುತಿಸಿದ್ದು ಅಲ್ಲಿ ಈ ಮೊದಲು ವಾಸವಾಗಿದ್ದ ಭೂತವೊಂದು ಇವರಿಗೆ ಸಹಾಯಮಾಡಿದ್ದು.,  ಮಾಯದ ಕತ್ತಿಯಿಂದ ಹೋರಾಡಿದ್ದು.,

ಕಥೆ ತು೦ಬಾ ಉದ್ದ .ಉದ್ದ ... ಆಮೇಲೆ ಏನಾಯ್ತು..? ಕೇಳಿದಂತೆಲ್ಲಾ  ಒಂದಕ್ಕೆ ಇನ್ನೊಂದು ಕಥೆ  ಸೇರುವುದು, ಸರಕ್ಕೆ   ಮಣಿ ಸುರುಗಿದಂತೆ.  ಏಡಿ ಮನುಷ್ಯನ ಕಥೆ, ಕಪ್ಪೆ ರಾಣಿಯ ಕಥೆ, ಹುಲಿ ಬೆಟ್ಟದ ಕಥೆ,  ಮಂತ್ರವಾದಿಯ ಕಥೆ, ಭೂತದ ಕಥೆ  ಒಂದೇ ಎರಡೇ.. ಕಥೆಗಳ ಖಜಾನೆ.   ಕಥೆಯ ಪಾತ್ರಗಳಲ್ಲೆಲ್ಲಲ್ಲ ತೇಲಿ ಹೋಗುವ ಸುಖ ಮರೆಯುವುದಾದರೂ ಹೇಗೆ..?

 ಕಥೆ ಮುಗಿದ ಮೇಲೆ ಅತ್ತೆ ಮೆಲ್ಲನೆಬ್ಬಿಸಿ ಕರೆದುಕೊಂಡು ಹೋಗಿ ತನ್ನ  ಆ ಪಕ್ಕ ಈ ಪಕ್ಕ ಇಬ್ಬರನ್ನೂ ಮಲಗಿಸಿಕೊಂಡು ಕಥೆಯ ಭೂತ ಕನಸಿನಲ್ಲಿ ಬ೦ದರೆ ಹೆದರಬಾರದೆಂದು ಇಬ್ಬರ ಮೈ ಮೇಲೂ ಕೈ ಇಟ್ಟು ಕೊಂಡು ಮಲಗಿಸಿಕೊಳ್ಳುತ್ತಿರಲಿಲ್ಲವೇ?
ಅತ್ತೆ ಅಂದರೆ ಹಾಗೆ ಇರೋದು!

 ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು.. 
 ಹನಿದು ಕಣ್ಣೆಲ್ಲ ನೀರ್ಕಾಲುವೆ..! 

ಪಗಡೆಯ ಕಾಯಿಗಳನ್ನೆಲ್ಲ ಎತ್ತಿಡಲು ಹೋದರೆ ಕಾಯಿಗಳೆಲ್ಲಾ  ಅತ್ತೆಯ ಮುಖಗಳೇ ಆದವಲ್ಲ..! ಕುಣಿಯುತ್ತಾ ಕರೆಯುತ್ತಿರುವಳೇ ? ಪಗಡೆ ಆಡೋಣವೆಂದು....    ಪಟದ ಚೌಕಗಳೆಲ್ಲಾ ಮಾಚಭಟ್ಟರ ಕತೆಯ ಪಾತ್ರಗಳಾಗಿ ಹೊರಳಿ ಹೊರಳಿ ನೋಡುತ್ತಿವೆಯೇಕೆ..?

ಕಿರ್ರೋ .... ಕೀಕ್..ಕೀಕ್... ಕಿರ್ರೋ... ಕೀಕ್ ಕೀಕ್..

ಮಕ್ಕಳು ಬಂದರೇ? ಇಷ್ಟು ಬೇಗ ಸಮಯ ಕಳೆದು ಹೋಯಿತೇ...?

ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!

Sunday, June 12, 2011

ನ್ಯಾಲೆ!

ಅಲ್ಲೂ ಈಗ ಮಳೆಗಾಲವಂತೆ..
ಮೊಡವಂತೆ
ಮಳೆಯಂತೆ
ಬಟ್ಟೆ ಒಣಗೋಲ್ಲವಂತೆ
ಪಟ್ಟೆ ಪೀತಾಂಬರ  
ಸೀರೆ ಪತ್ತಲ 
ಮುಗ್ಗುಲು ಹಿಡಿಯುತ್ತಂತೆ
ಚುಕ್ಕಿಗಳೂರಲ್ಲಿ ಮನೆತುಂಬ ಮಕ್ಕಳಂತೆ 
ಚಂದ್ರನರಸಿಯರು ಉಪಾಯ ಮಾಡಿದರಂತೆ
ಮಳೆ ಸ್ವಲ್ಪ ಬಿಟ್ಟಾಗ 
ಗಾಳಿಯಾಡಲಿಕೆಂದು
 ಬಟ್ಟೆ ಒಣಸಲಿಕೆಂದು ಕಟ್ಟಿದರಂತೆ

ಮುಗಿಲ ಮ್ಯಾಲೆ   ಹೊಗೆಯ ನ್ಯಾಲೆ!







Sunday, June 5, 2011

ಹಲ್ಲು ನೋವಿನ ಕಥೆ- ವ್ಯಥೆ..!

ನನಗೆ ಎಷ್ಟೋ ಸಲ ಅನ್ನಿಸಿದೆ ಜ್ಞಾನ ಬಂದಿದೆ ಎಂದು...!  ಮತ್ತು ಆಗಾಗ ಅನ್ನಿಸುತ್ತಲೇ ಇರುತ್ತದೆ.  ಗಂಟಲ ದ್ವಾರದಿಂದ ತುಸುವೇ ಮುಂದೆ ಎರಡೂ ಪಕ್ಕದಲ್ಲಿರುವ ನಾಲ್ಕು ಹಲ್ಲುಗಳಲ್ಲಿ ಯಾವುದಾದರೂ ಒಂದು ಹಲ್ಲು ನೋವು ಶುರುವಾದಾಗ ತಟ್ಟನೆ ಗೋಚರವಾಗುತ್ತದೆ ಹಲ್ಲಿದೆ ಎಂಬುದರ ಜ್ಞಾನ.!
ಹದಿನೇಳರಿಂದ ಇಪ್ಪತೈದರ ನಡುವಿನ ವಯಸ್ಸಿನಲ್ಲಿ ಅದೇನೇನು ಕನಸು ಕಾಣುತ್ತ ಇರುವೆವೋ ಅದನ್ನೆಲ್ಲ ಒಮ್ಮೆಲೇ ಅಳಿಸಿ ಹಾಕುವಂತೆ ಈ ಜ್ಞಾನ ದಂತಗಳೆಂಬ ಹಲ್ಲುಗಳು ಮೂಡಲು ಶುರುವಾಗುತ್ತದಲ್ಲ;  ಆಗ ಗೊತ್ತಾಗುತ್ತದೆ ಹಲ್ಲಿನ ಮಹತ್ವ.. ಅಲ್ಲಿಯವರೆಗೆ ಸರಿಯಾಗಿ ಹಲ್ಲು ಸ್ವಚ್ಚ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡದ ಎಲ್ಲರೂ ಜಾಗ್ರತರಾಗ ತೊಡಗಿಬಿಡುತ್ತಾರೆ! ಹಲ್ಲಿನ ಬಗ್ಗೆ ತ೦ತಾನೇ  ಸ್ವಲ್ಪ ಜ್ಞಾನ ಇಟ್ಟುಕೊಳ್ಳುತ್ತಾರೆ..!


ಹುಟ್ಟುವಾಗಲೇ ಸಾಕಷ್ಟು ಕಷ್ಟ ಕೊಡುತ್ತಲೇ ಬರುವ ಜ್ಞಾನ ದಂತಗಳೆಂಬ ಅನುಪಯೋಗಿ ವಸ್ತುಗಳಿಂದ  ಏನೇನು ಸಮಸ್ಯೆಯಾಗುತ್ತದೆಂಬುದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು. ಹುಟ್ಟುವಾಗ ಸಿಕ್ಕಾಪಟ್ಟೆ ನೋವು ..ಕೆಲವಂತೂ ಹುಟ್ಟುವಾಗಲೇ ಹುಳುಕಾಗಿರುತ್ತವೆ. ಅಡ್ಡಾದಿಡ್ಡಿ ವಕ್ರ ಕೊಕ್ರವಾಗಿ ಹುಟ್ಟಿದರಂತೂ ಸರಿಯೇ ಸರಿ. ಮೇಲಿನ ದಂತಕ್ಕೆ ಅಥವಾ ಮೇಲ್ಪದರಕ್ಕೆ  ತಾಗಿ ಅಲ್ಲಿ ಹುಣ್ಣು ಮಾಡಿ ಬಾಯಿ ಬಾಯಿ ಬಿಡುವಂತೆ ಮಾಡಿಬಿಡುತ್ತದೆ  ಸಾಯಲಿ.
ವಸಡಿನಲ್ಲಿ ರಕ್ತ, ಬಾವು.. ನೋವು.ನೋವು ಬರುವುದಾದರೂ  ವರ್ಣಿಸುವುದು ಸಾಮಾನ್ಯರಿಗೆ ಸಾಧ್ಯವಿಲ್ಲ.  ಆ ಬದಿಯ ತಲೆ, ಕುತ್ತಿಗೆ, ಮೈಕೈ ಎಲ್ಲಾ ಚುಳುಚುಳು  ನೋವು ಶುರುವಾಗಿ  ನೋವಿನ ಮೂಲ ಯಾವುದು ಎನ್ನುವುದೇ ಗೊತ್ತಾಗದು. ಅಂತೂ   ಹುಟ್ಟುಟ್ಟುತ್ತಲೇ  ದಂತವೈದ್ಯರಿಗೆ ದುಡ್ಡು ಮಾಡಿ ಕೊಡಲು ತಯಾರಾಗಿ ಬಿಡುತ್ತದೆ  ಕರ್ಮ.

ಆಹಾರವನ್ನು ಜಗಿಯಲು ಒಂದು ಚೂರೂ ಸಹಾಯ ಮಾಡದಿದ್ದರೂ ಸರಿ ಅದರ ಶೇಖರಣೆ  ಜವಾಬ್ಧಾರಿ ಮಾತ್ರಾ ತನ್ನದೇ ಎಂಬಂತೆ  ಅಲ್ಲಲ್ಲಿ ತೂತು.!ಒಳ್ಳೆ 'ಕೊಟ್ಟ'ದಂತೆ.
  ಹಿಂದೆ ಪ್ಲೇಗ್ ಮಾರಿ ಬಂದಾಗ ಊರಿಗೆ ಊರೇ ಗುಳೆ ಹೊರಡುವ ಸಮಯದಲ್ಲಿ ತಮ್ಮಲ್ಲಿರುವ ಪಾತ್ರೆ ಪರಡಿ ಅಕ್ಕಿ ಇನ್ನಿತರೇ ಸಾಮಾನುಗಳನ್ನು  ನೆಲದಲ್ಲಿ 'ಕೊಟ್ಟ'  ಮಾಡಿ  ಅದರಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದರು.  ನೆಲದಲ್ಲಿ ಒಂದು ಎರಡ್ಮೂರು ಅಡಿ ಆಳ ತೋಡಿ ಅದನ್ನು ಬಳಿದು ಚಂದ ಮಾಡಿ ವಸ್ತುಗಳನ್ನು ಅದರಲ್ಲಿ ಇಟ್ಟು ಮುಚ್ಚುತ್ತಿದ್ದರಂತೆ. ಒಂತರಾ ದೊಡ್ಡ ಹಂಡೆಯಾಕಾರದಲ್ಲಿ ಇರುತ್ತಿತ್ತು ಈ ಕೊಟ್ಟ. ಬಳಿಕ ಪ್ಲೇಗಿನ ತೀವ್ರತೆ ಕಡಿಮೆಯಾದಾಗ ವಾಪಾಸು ಊರಿಗೆ ಮರಳಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಸ್ವಲ್ಪವೂ ಹಾಳಾಗಿರುತ್ತಿರಲಿಲ್ಲವಂತೆ.

ಈ ಹಲ್ಲಿನಲ್ಲೂ ಹಾಗೆಯೇ ಆಹಾರ ಪದಾರ್ಥ ಸೇರಿಕೊಂಡರೂ  ಗಡಿಬಿಡಿಯಲ್ಲಿ ತೆಗೆದು ಬಿಸಾಕಬೇಕಾದ ಅನಿವಾರ್ಯತೆ.ಮತ್ಯಾವಾಗಾದ್ರೂ ಉಪಯೋಗಕ್ಕೆ ಅಂತ ಇಟ್ಟು ಕೊಳ್ಳುವ ಹಾಗಿಲ್ಲ.!
ನೀವು  ಯಾವ ಟೂತ್ಪೆಷ್ಟನ್ನೇ ಬೇಕಾದರೂ ಬಳಸಿ ..  ಯಾವ ಸೊಂಟ ಮುರಿದ ಬ್ರಷ್ಯನ್ನೇ ಬಳಸಿ.. ಆ ಹಲ್ಲಿನ ವರೆಗೆ  ಬ್ರಶ್ಶು ತಾಗುವುದೇ ಇಲ್ಲ.  ತಿಪ್ಪರಲಾಗ ಹಾಕಿದರೂ ಯಾವ ನಮೂನೆ ಸರ್ಕಸ್ ಮಾಡಿದರೂ  ಜ್ಞಾನ ದಂತವನ್ನು ಚಕ ಮಕ ಮಾಡಲು ಸಾಧ್ಯವೇ ಇಲ್ಲ..!ಎದುರಿನ ಹಲ್ಲಿನ ನಗುವನ್ನು ಕಂಡು ಯಾರೂ ಮೋಸ ಹೋಗ ಬೇಡಿ..!!
ಹಲ್ಲಿನ ತೊಂದರೆ ಮಲೆ ನಾಡಿಗರಲ್ಲಿ ಹೆಚ್ಚು .ಸಿಹಿ ತಿನ್ನುವುದೊಂದು ಕಾರಣ ವಾದರೆ ತಾಂಬೂಲ ಇನ್ನೊಂದು ಕಾರಣ. ನೋಡಿ ಬೇಕಾದರೆ , ಮಲೆನಾಡಿನ ಜನ ಬಾಯಿ ಬಿಟ್ಟು ಹಲ್ಲು ತೋರಿಸಿ ನಗುವುದೇ ಇಲ್ಲ. ಸಿಕ್ಕಾಪಟ್ಟೆ ನಗು ಬಂತೆಂದರೆ ಆಕಾಶಕ್ಕೆ ಮುಖ ಮಾಡುತ್ತಾರೆ!  ಹವಳದಂತಹಾ ಹಲ್ಲಿನವರು!

ಹ್ಞು,ಇರಲಿ  ಈ ಹಲ್ಲಿನ  ಸಹವಾಸವೇ ಬೇಡ ಎ೦ದು ಹಲ್ಲು ಕೀಳಿಸಲು ದಂತ ವೈದ್ಯರ ಬಳಿಗೆ ಹೊದರೂ ಅಲ್ಲೂ ಏನು ಸುಖವಾಗಿ ಹಲ್ಲು ಕೀಳುವುದಿಲ್ಲ..  ಅವರ ಶಸ್ತ್ರಾಸ್ತ್ರಗಳನ್ನು ನೋಡಿದರೆ ನನಗೆ ಅಂಜಿಕೆ.
ನಾನು ಕೆಲವು ವರ್ಷಗಳ ಹಿಂದೆ ಹಲ್ಲು ಕೀಳಿಸಲು ಮೊದಲ ಸಲ ಒಬ್ಬ ಲೇಡಿ ಡಾಕ್ಟ್ರ ಹತ್ರ ಹೋಗಿದ್ದೆ.   ಆ ಪುಣ್ಯಾತ್ಗಿತ್ತಿ ಸುಮಾರು ಅರ್ಧ ಗಂಟೆಗೂಡಿ ನನ್ನ ಹಲ್ಲು ಕಿತ್ತದ್ದು  ವರ್ಣನೆಗೆ ನಿಲುಕದ  ಇತಿಹಾಸ ...!!!..   ಬಾಯಿ ಹರಿದೇ ಹೋಗುವುದರಲ್ಲಿತ್ತು.! ಅಹಿಂಸಾ ವಾದಿಯೇನೋ ಎಂಬಂತೆ ಸಾಕಷ್ಟು ಹಿಂಸೆ ಮಾಡಿದಳಾ ತಾಯಿ.
ಆಮೇಲಾಮೇಲೆ   ನನಗೆ ಹಲ್ಲಿನ ಸುದ್ದಿಯೆತ್ತಿದರೆ ಎಚ್ಚರ ತಪ್ಪುವಂತೆ ಆಗುತ್ತಿತ್ತು.
ನಾನು ಬಿಟ್ಟರೂ ಹಲ್ಲು ಬಿಡದು.. ಹಲ್ಲಿನ ನೋವು ಬಿಡದು ಸ್ವಾಮಿ. ಯಾವ ನೋವು ಬಂದರೂ ಹಲ್ಲು ನೋವೊಂದು ಬರುವುದು ಬೇಡ  ಎನ್ನುವ ಗೋಳಾಟ..   ಮತ್ತೆ ಬೇರೆ ಕಡೆ  ನೋವು ಬಂದಾಗ ಪುನಃ 'ಈ ನೋವೊಂದು ಬಿಟ್ಟು ಯಾವ ನೋವಾದರೂ ಅನುಭವಿಸಿಯೇನು' ಎನ್ನುವ ಪ್ರಲಾಪ..!

ಮತ್ತೆ ಕೆಲ ದಿನಗಳ ನಂತರ  ಇನ್ನೊಂದು ಬದಿಯ  ಹಲ್ಲು ನೋವು ಶುರುವಾಯಿತು.. ಈ ಸಲ ಆ ಲೇಡಿ  ಡಾಕ್ಟ್ರ ಹತ್ತಿರ ಹೋಗಲಿಲ್ಲ, ಬೇರೊಬ್ಬ ಜಂಟಲ್ ಮ್ಯಾನ್  ಡಾಕ್ಟ್ರ  ಹತ್ತಿರ ಮುಖಕ್ಕೆ ಕೈ ಒತ್ತಿ ಹಿಡಿದು ಹೆದರುತ್ತಲೇ ಹೋದೆ. ಪರವಾಗಿಲ್ಲ ಇವರು..!

 ಮರಗಟ್ಟುವ ಇಂಜಕ್ಷನ್ ನೀಡಿ  ಕೆಲ  ನಿಮಿಷ ಆದ ಮೇಲೆ  ಬಾಯಿ ಕಳಸಿ ಹಲ್ಲನ್ನು ಅವರ ಚಿಮ್ಮಟಿಗೆಯಿಂದ ಅಲುಗಾಡಿಸಿದರು..'ಈಗ ಹಲ್ಲು ಕೀಳಲೇ? ' ಅಂದರು. ನಾನು ಬಾಯಿ ಕಳೆದು ಕೊಂಡೇ' ಊಂ,'ಅಂದೆ. 'ಕಿತ್ತಿದ್ದಾಯ್ತು.'ಎಂದು ನಕ್ಕರು ಡಾಕ್ಟ್ರು.   'ವಾವ್' ನನಗೆ ಆದ ಖುಷಿ ಎಷ್ಟೆಂದರೆ ಈಗಿಂದೀಗಲೇ  ಎಲ್ಲಾ ಹಲ್ಲುಗಳನ್ನೂ ಕೀಳಿಸಿ ಬಿಡೋಣ ಅನ್ನುವಷ್ಟು.! 
ಅಲ್ಲವೇ ಮತ್ತೆ..! ಅರ್ಧ ಗಂಟೆ ನಿರೀಕ್ಷೆಯಲ್ಲಿದ್ದವಳಿಗೆ ಅರ್ಧ ನಿಮಿಷದಲ್ಲಿ ಹಲ್ಲು ಕಿತ್ತಾಯ್ತು ಎಂದರೆ ಸಂತೋಷ ಆಗದಿರುತ್ತದೆಯೇ...? 

ಇದರಿಂದ ನನಗೆ ತಿಳಿದ ನೀತಿಯೆಂದರೆ 'ಹಲ್ಲುದುರಿಸುವ ಕಲೆ ಹೆಂಗಸರಿಗಿಂತ  ಗಂಡಸರಿಗೆ ಸಿದ್ಧಿಸಿರುತ್ತದೆ.' ಎನ್ನುವುದು...!