Tuesday, November 17, 2009

ಹೈಪೋಕಾಂಡ್ರಿಯಾ [Hypochondria]

ಸಾಮಾನ್ಯವಾಗಿ ಮನುಷ್ಯನ ದೈಹಿಕ ಸಮತೋಲನ ತಪ್ಪಿದಾಗ ಕಾಣಿಸಿಕೊಳ್ಳುವ ಮುಖ್ಯ ಲಕ್ಷಣಗಳೆಂದರೆ ತಲೆನೋವು ,ಹೊಟ್ಟೆನೋವು,ನಿಶ್ಯಕ್ತಿ ಹಾಗು ಎದೆಬಡಿತ ಹೆಚ್ಚಾಗುವುದು. ಇವು ಆರೋಗ್ಯದ ಕಡೆ ಕಾಳಜಿ ವಹಿಸುವಂತೆ ಪ್ರಕಟವಾಗುವ ಮುನ್ನೆಚ್ಚರಿಕೆಗಳು ಕೂಡಾ.

ಕೆಲವೊಮ್ಮೆ ಈ 'ಕಾಳಜಿ 'ಅನ್ನುವುದು ಅತಿಯಾಗಿ ಖಾಯಿಲೆಯಾಗುತ್ತದೆ. ಯಾರಿಗೋ ಬ್ರೈನ್ ಹೆಮರೆಜ್ ಆಯಿತೆಂದು ಕೊಳ್ಳೋಣ.ಅದರ ಲಕ್ಷಣಗಳು ಮೊದಲು ಅತಿಯಾದ ತಲೆನೋವು , ನಂತರ ಪ್ರಜ್ಞೆ ತಪ್ಪುವುದು ಹೀಗೆ ..... ಸಹಜವಾದ ಸುಸ್ತಿನಿಂದಲೋ ,ನಿದ್ರೆಗೆಟ್ಟಿದ್ದರಿಂದಲೋ ಅಥವಾ ಇನ್ನಾವುದೋ ಕಾರಣದಿಂದ ನಮ್ಮಲ್ಲೂ ಅಲ್ಪ ಸ್ವಲ್ಪ ಈ ರೀತಿಯ ತಲೆನೋವು ಕಾಣಿಸಿಕೊಂಡಾಕ್ಷಣ 'ಅಯ್ಯೋ , ನನಗೆ ಬ್ರೈನ್ ಹೆಮರೆಜ್ ಆಗುತ್ತಿದೆ' ಎಂದು ಹೌಹಾರುವುದು ,ಕಳವಳಗೊಳ್ಳುವುದು ಮಾಡಿ ಮನೆಮಂದಿಯನ್ನೆಲ್ಲಾ ಗಾಬರಿಗೊಳಿಸುವುದು. ದಿನವಿಡೀ ಅದನ್ನೇ ಚಿಂತಿಸುವುದು.ಅದರಿಂದ ತಲೆನೋವು ಇನ್ನಷ್ಟು ಹೆಚ್ಚಿಸಿಕೊಳ್ಳುವುದು.

'' ಯಾವುಯಾವುದೋ ಭಯಂಕರ ಕಾಯಿಲೆಗಳ ಅಲ್ಪ ಸ್ವಲ್ಪ ಚಿನ್ಹೆಗಳು ನಮ್ಮ ದೇಹದಲ್ಲಿ ಕಾಣಿಸಿಕೊಂಡಾಗ ಆ ಕಾಯಿಲೆಗೆ ನಾವು ಒಳಗಾಗಿಯೇ ಬಿಟ್ಟಿದ್ದೇವೆಂದು ಅತಿಯಾಗಿ ತಳಮಳಗೊಳ್ಳುವ ಹಾಗು ಅದೇ ಚಿಂತೆಯಲ್ಲಿ ದಿನನಿತ್ಯದ ಜೀವನವನ್ನು ಹಾಳುಮಾಡಿಕೊಳ್ಳುವ ಈ ಸ್ವಭಾವ ........ಒಂದು ಮನೋದೈಹಿಕ ಕಾಯಿಲೆ. ಇದಕ್ಕೆ ಹೈಪೋಕಾಂಡ್ರಿಯಾ [Hypochondria ] ಅಥವಾ ಹೈಪೋಕಾಂಡ್ರಿಯಾಸಿಸ್ ಎನ್ನುತ್ತಾರೆ . ''

ಕೆಲವರು ತಮಗೇನೋ ದೊಡ್ಡ ಕಾಯಿಲೆ ಬಡಿದಿದೆಯೆಂದು ಪದೇ ಪದೇ ವೈದ್ಯರ ಹತ್ತಿರ ಹೋಗುತ್ತಿರುತ್ತಾರೆ.ಯಾವುದೇ ಗುರುತರ ಕಾಯಿಲೆ ಇಲ್ಲವೆಂದರೂ ವೈದ್ಯರ ಮಾತಿನಲ್ಲಿ ವಿಶ್ವಾಸವಿಲ್ಲ.ವೈದ್ಯರನ್ನು ಬದಲಾಯಿಸುತ್ತಾರೆಯೇ ಹೊರತು ತಮ್ಮ ನಂಬಿಕೆಯನ್ನು ಬದಲಾಯಿಸಲಾರರು.

ಇನ್ನು ಕೆಲವರು ಯಾವುದಾದರೂ ರೋಗದ ಲಕ್ಷಣಗಳನ್ನು ಗಮನಿಸಿದರೂ ಸಹಾ ವೈದ್ಯರ ಹತ್ತಿರ ಹೋಗಲಾರರು.ವೈದ್ಯರೇನಾದರೂ ದೊಡ್ಡ ರೋಗವಿದೆಯೆಂದು ಹೇಳಿದರೆ.....ಎನ್ನುವ ಭಯದಿಂದ ತಮ್ಮಲ್ಲಿಯೇ ಗೌಪ್ಯವಾಗಿರಿಸಿಕೊಂಡು, ರೋಗವನ್ನು ಉಲ್ಬಣಗೊಳಿಸಿಕೊಂಡು ತೊಂದರೆ ಪಡುತ್ತಿರುತ್ತಾರೆ ಮತ್ತು ತೊಂದರೆ ಕೊಡುತ್ತಿರುತ್ತಾರೆ.
ಈ ಎಲ್ಲಾ ಸ್ವಭಾವಗಳೂ ಹೈಪೋಕಾಂಡ್ರಿಯಾದ ಲಕ್ಷಣಗಳು.

ಈ ರೀತಿ ಕಾಯಿಲೆಗಳ ಬಗ್ಗೆ ಅತಿಯಾಗಿ ಚಿಂತಿಸುತ್ತಾ ,ಅನುಕೂಲವಿದ್ದವರು (!)ದಿನಗಟ್ಟಲೆ ಅಂತರ್ಜಾಲದಲ್ಲಿ ವೈದ್ಯಕೀಯ ವಿವರಗಳಿಗಾಗಿ ಶೋಧಿಸುತ್ತಾ 'ಸೈಬರ್ ಕಾಂಡ್ರಿಯಾ ' [Cyberchondria] ಎನ್ನುವ ಹೊಸ ರೋಗವೊಂದನ್ನು ತಂದುಕೊಳ್ಳುತ್ತಾರೆ.

ಹೈಪೋಕಾಂಡ್ರಿಯಾ ಸಾಮಾನ್ಯವಾಗಿ ಖಿನ್ನತೆ ,ಗೀಳುರೋಗ , ಭಯಗಳು [phobia] ಇವುಗಳೊಂದಿಗೆ ಸಾಮರಸ್ಯ ಹೊಂದಿದೆ. ಅನುವಂಶಿಕತೆಯೇನೂ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ.ಅನಾವಶ್ಯಕ ಉದ್ವೇಗ , ಒತ್ತಡ ಹಾಗೂ ಕಾಡುವ ಕಾಯಿಲೆಗಳಾದ ಸಕ್ಕರೆ ಕಾಯಿಲೆ ,ಸಂಧಿವಾತ ಕೆಲವೊಮ್ಮೆ ಕಾರಣಗಳಾಗುವ ಸಾಧ್ಯತೆ ಇರುತ್ತದೆ.ಖಿನ್ನತೆಗೆ ಕಾರಣವಾಗುವ ,ಮೆದುಳಿನಲ್ಲಿ ಸ್ರವಿಸುವ ರಾಸಾಯನಿಕಗಳಾದ serotonin ಮತ್ತು norepinephrine ಗಳ ಏರುಪೇರು ಕೂಡಾ ಕಾರಣವಾಗಬಲ್ಲದು. ಮೀರಿದ ಹಂತದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆಗಳೂ ಇಲ್ಲದಿಲ್ಲ.....!

ಇದನ್ನು ಸೈಕೋ ಥೆರಪಿಯಿಂದ ತಹಬದಿಗೆ ತರಬಹುದು.ಆಪ್ತ ಸಮಾಲೋಚನೆಯ ಮೂಲಕ ವಸ್ತುಸ್ತಿತಿಯ ಅರಿವು ಮೂಡಿಸುವುದರಿಂದ ರೋಗಿಯಲ್ಲಿ ಆತ್ಮವಿಶ್ವಾಸ ತುಂಬಬಹುದು.

11 comments:

  1. ಮೆದುಳಿನಲ್ಲಿ ಸ್ರವಿಸುವ ರಾಸಾಯನಿಕಗಳನ್ನು ಹತೋಟಿಯಲ್ಲಿ ತರಲು ಸಾಧ್ಯವೆ? ಆ ರೀತಿಯಲ್ಲಿ ಖಿನ್ನತೆಯನ್ನು ತಡೆಗಟ್ಟಬಹುದೆ?

    ReplyDelete
  2. ನಿಜ, ಇಂಥಹ ಅದೆಷ್ಟೋ ವ್ಯಕ್ತಿಗಳನ್ನು ನಾನು ನೋಡಿದ್ದೇನೆ,
    ಆತ್ಮಬಲ, ಮನೋಬಲವೇ ಇದಕ್ಕೆ ಒಳ್ಳೆಯ ಮದ್ದು ಎನಿಸುತ್ತದೆ

    ReplyDelete
  3. ತುಂಬಾ ಅಮೂಲ್ಯ ವಿವರಗಳನ್ನು ಕೊಟ್ಟಿದೀರಿ..... ಧನ್ಯವಾದಗಳು.... ಇದರಿಂದ ಬಳಲುತ್ತಿರುವ ಮನುಷ್ಯ, ತಾನೇ ಸರಿ ಎಂದು ವಾದಿಸುತ್ತಾನೆ ಆ ಟೈಮ್ ನಲ್ಲಿ ಅಲ್ಲವಾ.....

    ReplyDelete
  4. ಹೆದರಿಕೆ ಎಷ್ಟು ಕಾಟ ಕೊಡ್ತದೆ ಅಲ್ವ... ಇದನ್ನ ಓದಿದಾಗ ಫಸ್ಟ್ ನೆನಪಿಗೆ ಬಂದದ್ದು ನನ್ನ ಅಮ್ಮ... ಒಂದು ವರ್ಷದ ಹಿಂದಿನ ಘಟನೆ.. ನನ್ನ ಅಮ್ಮನಿಗೆ ಮೆದುಳಿಗೆ ರಕ್ತ ಸಂಚಾರ ಸರಿಯಾಗಿ ಆಗದೆ ಆಸ್ಪತ್ರೆ ಸೇರಿ ರೆಕಾವರಿ ಆಗಲಿಕ್ಕೆ ತುಂಬಾ ದಿನ ಬೇಕಾಗಿತ್ತು.. ಸ್ವಲ್ಪ ದಿನಗಳ ನಂತರ ಬೇರೆ ಬೇರೆ ರೀತಿಯ ತೊಂದರೆಗಳು ಇವೆ ಅಂತ ಹೇಳ್ತಾ ಇದ್ಲು ಮತ್ತೆ ಆಸ್ಪತ್ರೆಗೆ ಸೇರಿಸಿದಾಗ ಡಾಕ್ಟರ ಹೇಳಿದ್ರು ಹಿಂದಿನ ಸಲಕ್ಕಿಂತ ತುಂಬಾ ಅರೋಗ್ಯ ಸುಧಾರಿಸಿದೆ ಅಂತ ಹೇಳಿದ್ರು.. ಮತ್ತೆ ಇ ಬಾರಿ ಏನು ಆಗಿಲ್ಲ... ಮನಸ್ಸಿನಲ್ಲಿ ಏನೋ ಹೆಚ್ಚು ಯೋಚನೆ ಮಾಡಿದ್ದಾರೆ ಅದಕ್ಕೆ ಹೀಗೆ ಆಗಿದ್ದರೆ ಅಂತ ಹೇಳಿದ್ರು.. ಡಾಕ್ಟರ ನಮ್ಮ ಪರಿಚಯದವರು ಆಗಿರೋದರಿಂದ ಪಿನ್ ಪಿನ್ ವಿಷಯಗಳನ್ನು ಹೇಳ್ತಾ ಇದ್ರೂ.. ಎಕ್ಷ್ತ್ರ ಕೇರ್ ತಗೊಳ್ತಿದ್ರು... ನಂತರ ಎಲ್ಲ ಸೇರಿ ಧರ್ಯ ಹೇಳಿದ್ ಮೇಲೆ ಓಕೆ ಆದ್ಲು.. ಈಗ ನಮಗೆ ಧರ್ಯ ಹೇಳುವ ಹಾಗೆ ಆಗಿದ್ದಾಳೆ... ಅದೇ ಖುಷಿಯ ವಿಚಾರ...
    ಈ ಬಾರಿಯ ಲೇಖನ ತುಂಬಾ ವಿಷಯಗಳನ್ನು ಹೇಳ್ತಾ ಇವೆ... ಚೆನ್ನಾಗಿದೆ...
    ನಿಮ್ಮವ,
    ರಾಘು.

    ReplyDelete
  5. ವ್ಯಕ್ತಿಯು ವರ್ತನೆಯಲ್ಲಿನ ಅಸಹಜತೆಯನ್ನು ಗುರುತಿಸಿಕೊ೦ಡರೆ
    ಸ್ವತಃ ವರ್ತನೆಯಲ್ಲಿ ಬದಲಾವಣೆ ತ೦ದು ಕೊಳ್ಳಲು ಪ್ರಯತ್ನಿಸಬಹುದು ಅಲ್ಲವೇ?
    ಒಳ್ಳೆಯ ಬರಹ.

    ReplyDelete
  6. ಸುನಾಥ್ ಸರ್.

    ಮೆದುಳಿನಲಿ ಸ್ರವಿಸುವ ರಾಸಾಯನಿಕಗಳನ್ನು ಸೂಕ್ತ ಔಷಧಗಳಿ೦ದ ತಡೆಗಟ್ಟಲು ಸಾಧ್ಯವಿದೆ.ಖಿನ್ನತೆಯನ್ನು ತಡೆಗಟ್ಟಲು ವೈದ್ಯರು ಸೂಚಿಸಿದ ಕ್ರಮದ೦ತೆ ಅನುಸರಿಸುವುದು ಮುಖ್ಯ.
    ವ೦ದನೆಗಳು.

    ಗುರು,ಮೊಗೇರ‍,ರಾಘು ಮತ್ತು ಮನಮುಕ್ತಾ ಅವರೆ......ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

    ReplyDelete
  7. ವಿಜಯಶ್ರೀ ಅವರೆ,

    ಮತ್ತೊಂದು ಮಾನಸಿಕ ಸಮಸ್ಯೆಯ ಬಗ್ಗೆ ತುಂಬಾ ಚೆನ್ನಾಗಿ ಬೆಳಕು ಚೆಲ್ಲಿದ್ದೀರಿ. ಕೆಲ ತಿಂಗಳ ಹಿಂದೆ ಇಲ್ಲೂ ಅಂದರೆ ಬೆಂಗಳೂರಿನಲ್ಲೂ H1N1 ರೋಗದ ಪ್ರತಿ ಹೈಪೋಕಾಂಡ್ರಿಯಾಕ್ಕೆ ಇಡೀ ಸಮೂಹ ಒಳಗಾಗಿತ್ತು. ನಿಜ ಹೇಳಬೇಕೆಂದರೆ ನನಗೂ ಸ್ವಲ್ಪ ಭಯವಾಗಿದ್ದು ನಿಜ. ನನ್ನ ೨ ವರುಷದ ಪುಟ್ಟ ಮಗು ಪ್ಲೇಹೋಂ‌‍ಗೆ ಹೋದರೆ ಎಲ್ಲಿ ಈ ಮಾರಿ ಬರಬಹುದೋ ಎಂದು ಕಳುಹಿಸಲೇ ಇಲ್ಲ ಸ್ವಲ್ಪ ದಿನ! ಈಗ ಅದನ್ನೆಲ್ಲಾ ಎಣಿಸಿಕೊಂಡರೆ ನಗು ಬರುವುದು. ಬರುವುದನ್ನು ಸಂಪೂರ್ಣ ತಡೆಯಲಾಗದು. ಕಾಳಜಿ ಅಗತ್ಯ. ಆದರೆ ಅತಿ ಸರ್ವತ್ರ ವರ್ಜಯೇತ್ ಅಲ್ಲವೇ?

    ಉತ್ತಮ ಲೇಖನ. ಧನ್ಯವಾದಗಳು.

    ReplyDelete
  8. ತೇಜಸ್ವಿನಿ ಅವರೆ...
    ಈ ಮಾಧ್ಯಮದವರ ಗಲಾಟೆಯಲ್ಲಿ ಹೀಗೆಲ್ಲಾ ಭಯ ಸ್ರುಷ್ಟಿಯಾಗುತ್ತಿರುವುದು ನಿಜ. ಆದರೆ ಅದು ತಾತ್ಕಾಲಿಕ.
    ನಿಮ್ಮ ಅನುಭವ ಹ೦ಚಿಕೊ೦ಡಿದ್ದಕ್ಕೆ ತು೦ಬಾ ಧನ್ಯವಾದಗಳು.

    ReplyDelete
  9. ತುಂಬ ಚೆನ್ನಾಗಿದೆ ನಿಮ್ಮ ಲೇಖನ..ಎಷ್ಟೊಂದು ವಿಷಯಗಳನ್ನು ಎಷ್ಟು ಚೆನ್ನಾಗಿ ಬರೆಯುವಿರಿ .. :) ಧನ್ಯವಾದಗಳು
    ಸುಮಾ

    ReplyDelete
  10. ಲೇಖನ ತು೦ಬಾ ಚೆನ್ನಾಗಿದೆ

    ReplyDelete