Monday, January 10, 2011

ಕವಿತೆ


ಅವಿತಿಟ್ಟುಕೊಳ್ಳಲಾರದೆ
 ಕಲ್ಪನಾ ಸಾಗರದಲೆಯೊಂದು  
ಬಂದು ಮಾನಸ  ದಡಕ್ಕಪ್ಪಳಿಸಿ 
ಹೆಜ್ಜೆ ಗುರುತನೊಂದುಳಿಸಿ  ಕವಿತೆಯಾಯ್ತು
ಭಾವಾ೦ಭುದಿಯಲಿ  ತೇಲಿ ತೇಲಿ 
ಛ೦ದಸ್ಸಿನ ಚಂದವಿರದಿದ್ದರೂ 
ವ್ಯಾಕರಣದ ಹಂಗಿರದಿದ್ದರೂ 
ಮನಕ್ಕೊಪ್ಪುವ   ಭಾವಗೀತೆಯಾಯ್ತು 

ದಡವನಪ್ಪಿದ್ದು ಲವಣವೋ ಹವಳವೋ 
ಮರಳೋ ಹರಳೋ ಶಂಖವೋ  ಶೃ೦ಖಲೆಯೊ 
 ತಬ್ಬಿದವನಿಗೆ  ಗೊತ್ತು
ಅಂದವೋ ಅನುಬಂಧವೋ 
ಚಂದವೋ ಸ್ವಚ್ಚಂದವೋ ಸ್ಮೃತಿಯೋ  ವಿಸ್ಮೃತಿಯೋ 
ಸವಿದವನಿಗೆ ಗೊತ್ತು

ಕಲ್ಪನೆಗಿದೆಯೇ  ಎಲ್ಲೆ
ಹೃದಯ ಪಲುಕಿದಂತೆಲ್ಲಾ
ತೆರೆಯಾಗಿ ಅಲೆಯಾಗಿ ದಿಬ್ಬಣದಂತೆ
ಮೆರವಣಿಗೆ ಹೊರಡುವುದರ  ಪರಿಗೆ
ಬೆರಗಾಗಿ ಮೈಮರೆವಾಗಿ 
ಚಲಿಸಲಾಗದೆ ಹಾಗೇ ಶಿಲೆಯಾದೆನಲ್ಲಿಯೇ ..! 

19 comments:

  1. "ದಡವನಪ್ಪಿದ್ದು ಲವಣವೋ ಹವಳವೋ ಮರಳೋ ಹರಳೋ ಶಂಖವೋ ಶೃ೦ಖಲೆಯೊ 'ತಬ್ಬಿದವನಿಗೆ' ಗೊತ್ತು"

    ---

    ವಾವ್,
    ತುಂಬಾ ಹಿಡಿಸಿತು.. :)

    ReplyDelete
  2. ಕವಿತೆಯೋ ಭಾವಕ್ಕೆ ಹಿಡಿದ ಕನ್ನಡಿಯೋ
    ಕವಯಿತ್ರಿಗೆ ಸಾಹಿತ್ಯಸಾಗರದಿ ಸಿಕ್ಕ ಮಾಣಿಕ್ಯವೋ
    ಕವಯಿತ್ರಿಯಾ ಕಲ್ಪನೆ ಕಂಡು ಹೀಗೂ ಕವಿತೆಯ
    ಬರೆಯಬಹುದೇ ಯಂಬ ಅಚ್ಚರಿಯಾಯ್ತು

    ReplyDelete
  3. ನಿಮ್ಮ ಕವನ ಹುಟ್ಟಿದ ಪರಿ ಇಷ್ಟ ಆಯಿತು...:) ದಡವನಪ್ಪಿದ್ದು ಹವಳ ಎ೦ದೆನಿಸುತ್ತದೆ ನನಗೆ ಈ ಕವನ ಓದಿದ ಮೇಲೆ :)

    ReplyDelete
  4. ದಡವನಪ್ಪಿದ್ದು ಹವಳವೆನ್ನುವದರಲ್ಲಿ ಏನೂ ಸಂದೇಹವಿಲ್ಲ. ಉತ್ತಮ ಕಲ್ಪನೆಗೆ ಉತ್ತಮ ಛಂದಸ್ಸನ್ನು ಜೋಡಿಸಿ, ಖುಶಿಯಾಗುವಂತಹ ಕವನವನ್ನು ನೀಡಿದ್ದೀರಿ.

    ReplyDelete
  5. ವಿಜಯಶ್ರೀ ಅವರೇ.
    "ದಡವನಪ್ಪಿದ್ದು ಲವಣವೋ ಹವಳವೋ ಮರಳೋ ಹರಳೋ ಶಂಖವೋ ಶೃ೦ಖಲೆಯೊ 'ತಬ್ಬಿದವನಿಗೆ' ಗೊತ್ತು"
    ಎನ್ನುವ ಸಾಲುಗಳು ತುಂಬಾ ಮುದ್ದಾಗಿವೆ .ಒಂದು ಚೆಂದಾದ ಕವಿತೆ ಬರೆದು ಕೊಟ್ಟ ನಿಮ್ಮಗೆ ಅನಂತ ಧನ್ಯವಾದಗಳು

    ReplyDelete
  6. ವಿಜಯಾ...

    ಸಹಜ ಸುಂದರ ... ಅರ್ಥಪೂರ್ಣ.....ಸಾಲುಗಳು..!!

    ಇಷ್ಟವಾಯ್ತು.. !!

    ReplyDelete
  7. ಮೇಡಮ್,

    "ಚಂದವೋ ಸ್ವಚ್ಚಂದವೋ ಸ್ಮ್ರುತಿಯೋ ವಿಸ್ಮ್ರುತಿಯೋ
    ಸವಿದವನಿಗೆ ಗೊತ್ತು"....

    ಹಾಗೆ ಈ ಕವನವೂ ಇಷ್ಟವಾಯಿತು.

    ReplyDelete
  8. ಚಂದವೋ ಸ್ವಚ್ಚಂದವೋ ಸ್ಮ್ರುತಿಯೋ ವಿಸ್ಮ್ರುತಿಯೋ
    ಸಾಲುಗಳಲ್ಲಿ ಅದು ಸ್ಮೃತಿ ಅಂತ ಅಗಬೇಕಲ್ವ?
    ನನಗೆ ಹಾಗೆ ಅನಿಸತ್ತೆ

    ಸುಂದರ ಕವನ

    ReplyDelete
  9. ದಡವನಪ್ಪಿದ್ದು ಲವಣವೋ ಹವಳವೋ
    ಮರಳೋ ಹರಳೋ ಶಂಖವೋ ಶೃ೦ಖಲೆಯೊ
    ತಬ್ಬಿದವನಿಗೆ ಗೊತ್ತು--- ee saalu tumba istavaaytu

    super kavana

    ReplyDelete
  10. ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.

    ಗುರುಮೂರ್ತಿಯವರೆ..
    ತಪ್ಪು ಸರಿಪಡಿಸಿದ್ದೇನೆ..:)

    ReplyDelete
  11. ಕವಿತೆ ಹುಟ್ಟುವ ಪರಿಯ ವರ್ಣನೆ ಸೊಗಸಾಗಿದೆ. ಕವಿತೆಯೂ ಸೂಪರ್.

    ReplyDelete
  12. ದಡವನಪ್ಪಿದ್ದು ಲವಣವೋ ಹವಳವೋ
    ಮರಳೋ ಹರಳೋ ಶಂಖವೋ ಶೃ೦ಖಲೆಯೊ
    ತಬ್ಬಿದವನಿಗೆ ಗೊತ್ತು

    wov wov very nice

    ReplyDelete
  13. ವ್ಯಾಕರಣದ ಹಂಗಿರದಿದ್ದರೂ
    ಮನಕ್ಕೊಪ್ಪುವ ಭಾವಗೀತೆಯಾಯ್ತು

    NICE ONE!!!

    ReplyDelete
  14. kavite huttuva prakriyeya sutta heneda sundara shabda jaala manavanna aralisitu. tumbaa adbhuta kavana

    ReplyDelete
  15. ಚುಕ್ಕಿ ಚುಕ್ಕಿ ಸೇರಿ ಚಿತ್ತಾರವಾಗಿದೆಯಿಲ್ಲಿ
    ಹೆಕ್ಕಿ ಹೆಕ್ಕಿ ಕಾಳು ಬಿತ್ತಾದರಾಗುವುದಲ್ಲಿ
    ಒಂದು ಕವನ..ಮತ್ತೊಂದು ದವಸಕಣ...
    ವಿಜಯಶ್ರೀ...ಆಶ್ಚರ್ಯಕಾದಿತ್ತು ನನಗೆ ಎರೆಡೆರಡು ಕವನಗಳ ನಿಮ್ಮ ಬ್ಲಾಗ್..ಎರಡಕ್ಕೂ ನಮೂದಿಸ್ತಿದ್ದೇನೆ,,ಪ್ರತಿಕ್ರಿಯೆ..

    ReplyDelete