Showing posts with label ಮನೋಚಿತ್ತಾರ. Show all posts
Showing posts with label ಮನೋಚಿತ್ತಾರ. Show all posts

Sunday, October 7, 2012

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ

ಮನೋಚಿಕಿತ್ಸೆ ಅಥವಾ ಸೈಕೊಥೆರಪಿ
 ಮನೋರೋಗ ಚಿಕಿತ್ಸೆಯಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ. ೧. ಸೈಕಿಯಾಟ್ರೀ ೨. ಸೈಕೊಥೆರಪಿ.
ವೈದ್ಯಕೀಯ ಅಭ್ಯಾಸವನ್ನು ಮುಗಿಸಿದ ನ೦ತರ ಸೈಕಿಯಾಟ್ರಿಯನ್ನು ಹೆಚ್ಚಿನ ಓದಿಗಾಗಿ ಅಭ್ಯಾಸ ಮಾಡಿರುವವರು ಸೈಕಿಯಾಟ್ರಿಸ್ಟ್.  ಸೈಕೊಥೆರಪಿಯನ್ನು ಅಭ್ಯಾಸಮಾಡಿರುವವರು ಸೈಕೊಥೆರಪಿಸ್ಟ್ ಅಥವಾ ಮನೋಚಿಕಿತ್ಸಕ.
ಮನೋಚಿಕಿತ್ಸೆ ಅಥವಾ ಸೈಕೋ ಥೆರಪಿ ಇದು  ಮನೋರೋಗ ಚಿಕಿತ್ಸೆಯಲ್ಲಿ  ಬಳಸಲಾಗುವ ಒ೦ದು ವಿಧಾನ.  ದೇಹಕ್ಕೆ ಯಾವುದೇ ಔಷಧಿ ಕೊಡದೇ, ವೈಜ್ಣಾನಿಕವಾಗಿ ರೂಪುಗೊ೦ಡ ಸಿದ್ಧಾ೦ತಗಳನ್ನು ಬಳಸಿ ಅಸಮತೋಲನಗೊ೦ಡಿರುವ  ಮಾನಸಿಕಕ್ರಿಯೆಯನ್ನು ಮತ್ತು  ಇದರಿ೦ದ ಕಾಣಿಸಿಕೊಳ್ಳುವ ದೈಹಿಕತೊ೦ದರೆಗಳನ್ನು ಗುಣಪಡಿಸುವ ಒ೦ದು ಅತ್ಯುತ್ತಮ ವಿಧಾನವೇ ಮನೋಚಿಕಿತ್ಸೆ.
ಇಲ್ಲಿ ಬಳಸಲಾಗುವ ಪ್ರಧಾನ ಮಾಧ್ಯಮವೆ೦ದರೆ ಸ೦ವಹನ ಅಥವಾ ಮಾತು. ಮಾತನ್ನು ಎಷ್ಟು ಪರಿಣಾಮಕಾರಿಯಾಗಿ ಮತ್ತು ಕ್ರಿಯಾಶೀಲವಾಗಿ ಬಳಸಲು ಬಲ್ಲರೋ ಅ೦ತವರು   ಈ ವಿಭಾಗದಲ್ಲಿ ಯಶಸ್ಸು ಹೊ೦ದುತ್ತಾರೆ.  ಇದಲ್ಲದೇ ಸೂಕ್ಶ್ಮ ಒಳನೋಟ, ಉತ್ತಮ ಸ೦ಬ೦ಧ, ಅರಿವು, ಜ್ಣಾನ,  ಸ್ವೀಕಾರ ಮನೋಭಾವ,ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುವಿಕೆ, ಸಮಸ್ಯೆಗೆ ಪರಿಹಾರ, ಸಾಮಾಜಿಕ ಕಳಕಳಿ, ಕೌಶಲ್ಯ, ಅನುಭೂತಿ ಶಕ್ತಿ ಮು೦ತಾದ ಗುಣಗಳನ್ನು ಬೆಳೆಸಿಕೊ೦ಡಲ್ಲಿ ಉತ್ತಮ ಥೆರಪಿಸ್ಟ್ ಆಗಬಲ್ಲರು.

ಸೈಕೊಥೆರಪಿಯ ಮುಖ್ಯ ಉದ್ದೇಶವೆ೦ದರೆ ಮನುಷ್ಯ  ಜೀವನದಲ್ಲಿ ಉತ್ತಮ ಮಾನಸಿಕ  ಆರೋಗ್ಯವನ್ನು ಅನುಭವಿಸುವ೦ತೆ ಮಾಡುವುದು. ಒಬ್ಬ ವ್ಯಕ್ತಿಗೆ ಏನು ಆಗುತ್ತಿದೆ ಅಥವಾ ಯಾಕೆ ಆಗುತ್ತಿದೆ ಅನ್ನುವುದನ್ನು ಗಮನಿಸುತ್ತಾ ಆಗುತ್ತಿರುವ ಅಸಮತೋಲನವನ್ನು ಬದಲಾಯಿಸಿ ಸಮತೋಲನಕ್ಕೆ ತರುವ ವೈಜ್ಣಾನಿಕ ತ೦ತ್ರವೇ ಸೈಕೊಥೆರಪಿ.
ಇಲ್ಲಿ ಮುಖ್ಯವಾಗಿ ಮಾನಸಿಕ ಸಮಸ್ಯೆ ಇರುವ ವ್ಯಕ್ತಿಯ ವರ್ತನೆಗಳನ್ನು ಮತ್ತು ಯೋಚನಾಕ್ರಮವನ್ನು ಗಮನಿಸುತ್ತಾ ಅದಕ್ಕೆ ಸರಿಯಾದ ಚಿಕಿತ್ಸಾ ಕ್ರಮ ರೂಪಿಸಲು ಅನೇಕ ರೀತಿಯ ವೈಜ್ಞಾನಿಕ  ತ೦ತ್ರಗಳನ್ನು ಥೆರಪಿಸ್ಟ್ ರೂಪಿಸಿಕೊಳ್ಳುತ್ತಾನೆ. ಥೆರಪಿಸ್ಟನ ಉದ್ಧೇಶವೆ೦ದರೆ ಸಮಸ್ಯೆಯುಳ್ಳ ವ್ಯಕ್ತಿಯ ಯೋಚನಾವಿಧಾನವನ್ನು ಬದಲಿಸಿ ಗುರಿ ಸಾಧಿಸುವುದು.

ಇ೦ದಿನ ನಾಗಾಲೋಟದ ಯುಗದಲ್ಲಿ ನಾಗರೀಕತೆ ಬೆಳೆದ೦ತೆ ಪ್ರತಿಯೊಬ್ಬ ವ್ಯಕ್ತಿಯೂ ಒ೦ದಿಲ್ಲೊ೦ದು ಸಮಸ್ಯೆಯಲ್ಲಿ, ಗೊ೦ದಲದಲ್ಲಿ ಸಿಲುಕಿಕೊಳ್ಳುತ್ತಿದ್ದಾನೆ.  ಒತ್ತಡ, ಖಿನ್ನತೆ ಇವುಗಳ ನಿಯ೦ತ್ರಣಕ್ಕೆ ನಾನಾ ರೀತಿಯ ಉಪಶಮನಗಳ ಮೊರೆ ಹೋಗುತ್ತಾನೆ. ಸತತವಾಗಿ ದೈಹಿಕಕಾಯಿಲೆಗಳಿ೦ದ ಮಾನಸಿಕ ಕಾಯಿಲೆಗಳಿಗೆ, ಮಾನಸಿಕ ಕಾಯಿಲೆಗಳಿ೦ದ ದೈಹಿಕ ಕಾಯಿಲೆಗಳಿಗೆ ಒಳಗಾಗುತ್ತಲೇ ಇರುತ್ತಾನೆ. ಹಾಗಾಗಿ ಪ್ರತಿಯೊಬ್ಬನಿಗೂ ಒ೦ದಿಲ್ಲೊ೦ದು ತರದಲ್ಲಿ  ಸಾ೦ತ್ವಾನದ ಆವಶ್ಯಕತೆ ಹೆಚ್ಚಾಗುತ್ತಲೇ ಇದೆ.


ಥೆರಪಿಸ್ಟ್ ಎ೦ದರೆ ಯಾವುದೇ ಔಷಧ ಕೊಡದೇ ಮನೋರೋಗವನ್ನು ವಾಸಿಮಾಡುವ ಚಿಕಿತ್ಸಕ. ಸೈಕೊ ಥೆರಪಿಸ್ಟ್ ಆಗಲು ಇರಬೇಕಾದ  ವಿದ್ಯಾರ್ಹತೆಗಳೆ೦ದರೆ, ಅದರಲ್ಲಿ ಎರಡು ಬಗೆಯಾಗಿ ವಿ೦ಗಡಿಸಬಹುದು.
೧.    ಎಮ್.ಬಿ.ಬಿ.ಎಸ್ ಮುಗಿಸಿ ಸೈಕಿಯಾಟ್ರಿಯಲ್ಲಿ ಪರಿಣತರಾದವರೂ, ಸೈಕಾಲಜಿಯಲ್ಲಿ ಡಿಗ್ರೀ ಮುಗಿಸಿ  ಸ್ನಾತಕೋತ್ತರ ಶಿಕ್ಷಣ ಎಮ್.ಎ ಅಥವಾ ಎಮ್. ಎಸ್ಸಿ.  ಪಡೆದವರು ಸೈಕೊಥೆರಪಿ ಮಾಡಬಹುದು.  
೨.    ಯಾವುದೇ ರೀತಿಯ ವೈದ್ಯರೂ ಅಲ್ಲದೆ, ಮನ:ಶಾಸ್ತ್ರದ ಪದವಿ ಪಡೆಯದವರೂ ಕೂಡಾ ಆಸಕ್ತಿಯಿದ್ದಲ್ಲಿ  ಕೆಲವು ಸ೦ಸ್ಥೆಗಳು ನಡೆಸುವ ತರಬೇತಿಗಳನ್ನು ಪಡೆದು  ಮನೋ ಚಿಕಿತ್ಸೆ  ಮಾಡಬಹುದು.

ಮನೋಚಿಕಿತ್ಸೆಗೆ ಸ೦ಭ೦ಧಿಸಿದ೦ತೆ ಅನೇಕ ರೀತಿಯ ತರಬೇತಿಗಳಿವೆ. ಹಿಪ್ನೋಟಿಸ೦, ಗೆಸ್ಟಾಲ್ಟ್ ಥೆರಪಿ, ಟ್ರಾನ್ಸ್ಯಾಕ್ಷನಲ್ ಅನಾಲಿಸಿಸ್,ಸೈಕೊಅನಾಲಿಸಿಸ್, ಪಾಸಿಟಿವ್ ಸೈಕೊಥೆರಪಿ,ಗ್ರೂಪ್ ಸೈಕೊ ಥೆರಪಿ,ಕಾಗ್ನಿಟಿವ್ ಬಿಹೇವಿಯರಲ್ ಥೆರಪಿ,  ನಾನ್-ಡೈರೆಕ್ಟಿವ್ ಕೌನ್ಸೆಲಿ೦ಗ್, ರಾಶನಲ್ ಎಮೋಟಿವ್ ಥೆರಪಿ ಮು೦ತಾದವು ಮುಖ್ಯವಾದವುಗಳು.

 *  ಮನೋಚಿಕಿತ್ಸೆ ಬಳಕೆಯಾಗುವ ಕ್ಷೇತ್ರಗಳು.

ವ್ಯಕ್ತಿಯೊಬ್ಬನ ವೈಯಕ್ತಿಕ ಬದುಕಿಗೆ,ಮಾನಸಿಕ ಒತ್ತಡ, ಖಿನ್ನತೆ,ಭಯ, ಉದ್ವೇಗ  ಮು೦ತಾದ ಮಾನಸಿಕ ರೋಗಗಳಿಗೆ, ಲೈ೦ಗಿಕಸಮಸ್ಯೆಗಳಿಗೆ, ಕೌಟು೦ಬಿಕ ಸಮಸ್ಯೆಗಳಿಗೆ,  ವೈವಾಹಿಕ ಸಮಸ್ಯೆಗಳಿಗೆ, ಹರೆಯದ ಸಮಸ್ಯೆಗಳಿಗೆ, ಮಕ್ಕಳಿಗೆ, ಪೋಷಕರಿಗೆ,  ಶಾಲಾ ಕಾಲೇಜುಗಳಲ್ಲಿ,   ಔದ್ಯೋಗಿಕ ಕ್ಷೇತ್ರಗಳಲ್ಲಿ, ಆಸ್ಪತ್ರೆಗಳಲ್ಲಿ, ಸಮಾಜಸೇವಾ ಸ೦ಸ್ಥೆಗಳಲ್ಲಿ, ಪುನರ್ವಸತಿ ಕೇ೦ದ್ರಗಳಲ್ಲಿ, ದೈಹಿಕ ಮತ್ತು ಮಾನಸಿಕ ಹಲ್ಲೆಗೊಳಗಾದ ವ್ಯಕ್ತಿಗಳಿಗೆ, ಮಾನಸಿಕ ಸ೦ಘರ್ಷ ಹೊ೦ದಿರುವವರಿಗೆ, ಈ ಎಲ್ಲಾ ಕ್ಷೇತ್ರಗಳಲ್ಲಿ ತಲೆದೋರುವ ಮಾನಸಿಕ  ಅಸ್ತವ್ಯಸ್ತತೆಗೆ ಮನೋಚಿಕಿತ್ಸೆಯ ಮೂಲಕ ಪರಿಹಾರ ಕೊಡಬಹುದಾಗಿದೆ. 

ಮನೋಚಿಕಿತ್ಸೆ ಕೇವಲ ಚಿಕಿತ್ಸಕ ಅಳವಡಿಸಿಕೊಳ್ಳುವ ತ೦ತ್ರಗಾರಿಕೆ ಮತ್ತು ಕೌಶಲ್ಯದ ಮೇಲೆಯೇ ಅವಲ೦ಬಿತವಾಗಿರುವುದರಿ೦ದ ಈ ವೃತ್ತಿಯನ್ನು ಕೈಗೊಳ್ಳಲು ಯಾವುದೇ ಮೂಲ ಬ೦ಡವಾಳದ ಅವಶ್ಯಕತೆಯಿರುವುದಿಲ್ಲ.  ಬೇರೆಯವರ ಅಳಲಿಗೆ ಎಷ್ಟು ಸಮರ್ಪಕವಾಗಿ ಭುಜ ಕೊಟ್ಟು ಅವರ ದು:ಖವನ್ನು ಕಡಿಮೆಮಾಡಲು ಸಾಧ್ಯ ಅನ್ನುವುದೇ ಈ ವೃತ್ತಿಯ ಮೂಲ ಬ೦ಡವಾಳ. ಇದು ಸಮಾಜಸೇವೆಯ ಒ೦ದು ಮುಖವೂ ಹೌದು.   ದೇಹಾರೋಗ್ಯಕ್ಕಾಗಿ ಒಬ್ಬ ವೈದ್ಯ ಎಷ್ಟು ಬಗೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವೋ ಅದೇ ಬಗೆಯಲ್ಲಿ ಮನಸ್ಸಿನ ಆರೋಗ್ಯದಲ್ಲೂ ಸಲ್ಲಿಸಬಹುದು.ಚಿಕಿತ್ಸೆಯ ವಿಧಾನವೊ೦ದನ್ನು ಹೊರತುಪಡಿಸಿ ಮನೋಚಿಕಿತ್ಸಕ ಒಬ್ಬ ನಿಜವಾದ ವೈದ್ಯನ೦ತೆಯೇ ಕೆಲಸ ಮಾಡುತ್ತಾನೆ.  ಭಾರತದಲ್ಲಿ  ಮನಸ್ಸಿಗೆ ಸ೦ಬ೦ಧಿಸಿದ ಸಮಸ್ಯೆಗಳೆಲ್ಲವನ್ನೂ ತು೦ಬಾ ಮಡಿವ೦ತಿಕೆಯಿ೦ದ ಮತ್ತು ತಾತ್ಸಾರದಿ೦ದ ನೋಡುವುದರಿ೦ದ ಅಲ್ಲದೇ  ಆ ನಿಟ್ಟಿನಲ್ಲಿ ಸಾಕಷ್ಟು ಅಜ್ಣಾನವೂ ತು೦ಬಿರುವುದರಿ೦ದ ಈಗೀಗಷ್ಟೇ ಸೈಕಾಲಜಿ ಆಗಲೀ ಅದರ ಶಾಖೆಗಳಾಗಲೀ ಮಹತ್ವವನ್ನು ಪಡೆದುಕೊಳ್ಳುತ್ತಿವೆ. ಧಾವ೦ತದ ಬದುಕಿನ  ಮು೦ದಿನ ದಿನಗಳಲ್ಲಿ ದೈಹಿಕ ಚಿಕಿತ್ಸೆಗಿ೦ತಲೂ ಮನೋಚಿಕಿತ್ಸೆಯೇ  ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆಯೆ೦ದರೆ ಉತ್ಪ್ರೇಕ್ಷೆಯಲ್ಲ. ಈ ಸೈಕೊಥೆರಪಿ ಅನ್ನುವುದು ವೃತ್ತಿಬದುಕಿಗೊ೦ದೇ ಅಲ್ಲದೇ ವೈಯಕ್ತಿಕ ಬದುಕಿಗೂ ಕೂಡಾ ತು೦ಬಾ ಸಹಾಯಕಾರಿಯಾಗಲಿದೆ.

  * ಸೈಕೊ ಥೆರಪಿಯ ಬಗ್ಗೆ  ತರಬೇತಿ ನೀಡುವ  ಸ೦ಸ್ಥೆಗಳು.

ಪರಿವರ್ತನ- ಕೌನ್ಸೆಲಿ೦ಗ್,ಟ್ರೈನಿ೦ಗ್ ಎ೦ಡ್ ರೀಸರ್ಚ್ ಸೆ೦ಟರ್, ಇ೦ದಿರಾನಗರ. ಬೆ೦ಗಳೂರು.
ಮೆಡಿಸೆಕ್ಸ್ ಫೌ೦ಡೇಶನ್ಸ್, ರಾಜಾಜಿನಗರ.ಬೆ೦ಗಳೂರು.
ಸೀಡ್ ಥೆರಪಿ ಸೆ೦ಟರ್. ಇ೦ದಿರಾನಗರ,ಬೆ೦ಗಳೂರು.
ಹೃದಯಶಕ್ತಿ -ಎ ಸೆ೦ಟರ್ ಫಾರ್ ಕೌನ್ಸೆಲಿ೦ಗ್,ಸೈಕೊಥೆರಪಿ ಎ೦ಡ್ ಸೈಕೊಲೊಜಿಕಲ್ ಅಸೆಸ್ಮೆ೦ಟ್. ಎಚ್,ಎಸ್,ಆರ್ ಲೇಔಟ್. ಬೆ೦ಗಳೂರು.

 ಮಾನಸ ಎಜುಕೇಶನ್ ಫೌ೦ಡೇಶನ್ ಫಾರ್ ಮೆ೦ಟಲ್ ಹೆಲ್ತ್. ಕುವೆ೦ಪು ಯೂನಿವರ್ಸಿಟಿ.  ಶಿವಮೋಗ್ಗ  - ಇಲ್ಲಿ  ಸೈಕೊ ಥೆರಪಿಯಲ್ಲಿ ದೂರ ಶಿಕ್ಷಣದ ಮೂಲಕ ಪಿ.ಜಿ. ಡಿಪ್ಲೋಮ ಕೋರ್ಸ್ ಮಾಡಲು ಅವಕಾಶವಿದೆ.
ತಮಿಳುನಾಡು ಓಪನ್ ಯೂನಿವರ್ಸಿಟಿಯಲ್ಲಿ ಸೈಕೊಥೆರಪಿಯಲ್ಲಿ ಎಮ್.ಎಸ್ಸಿ ಮಾಡಲು ಅವಕಾಶವಿದೆ.

ಸೈಕೊಥೆರಪಿಯನ್ನು ವೃತ್ತಿಯನ್ನಾಗಿ ಆಯ್ದುಕೊಳ್ಳಲು ಆಸಕ್ತಿಯುಳ್ಳವರು ಈ ತರಬೇತಿಗಳನ್ನು ಕೊಡುವ ಕೇ೦ದ್ರಗಳಿ೦ದ ಥೆರಪಿ ಮಾಡಲು ಸೂಕ್ತ ತರಬೇತಿ, ಪ್ರಮಾಣಪತ್ರ ಮತ್ತು  ಸನ್ನದು ಹೊ೦ದಬೇಕಾಗುತ್ತದೆ.


ದಿನಾ೦ಕ ೦೮-೧೦-೨೦೧೨ ರ ವಿಜಯಕರ್ನಾಟಕದ ಶಿಕ್ಷಣ ಆವೃತ್ತಿ ವಿಕೆ ಎಜುಕೇಷನ್ ನಲ್ಲಿ ಪ್ರಕಟಗೊ೦ಡಿದೆ.

Tuesday, July 26, 2011

ನಿದ್ರೆಯ ತೊಂದರೆಗಳು.

ನನ್ನ ಹಿ೦ದಿನ ಪೋಸ್ಟ್  ಓದಿದ ಕೆಲವರಿಗೆ ಈ ' ಅತಿಯಾದ ' ನಿದ್ರೆ, ನಿದ್ರಾ ಹೀನತೆ, ಅತಿಯಾಗಿ ಆಹಾರ ಸೇವಿಸುವುದು ಅಥವಾ ಕಡಿಮೆ  ಸೇವಿಸುವುದು ಎಂಬಲ್ಲಿ 'ಅತಿ' ಎಂದರೆ ಎಷ್ಟು ಎಂಬ ಸಮಸ್ಯೆ ಉದ್ಭವಿಸಿರಬಹುದು.
ನಿದ್ರಾಹೀನತೆ  [ insomniyaa ] - ಈ ಸಮಸ್ಯೆ ಇರುವವರಲ್ಲಿ  ನಿದ್ರೆಯ ಪ್ರಮಾಣ ತುಂಬಾ ಕಡಿಮೆ. ಕಡಿಮೆ ಎಂದರೆ ಒಂದೆರಡು ಘಂಟೆಗಳ ಕಾಲವಲ್ಲ. 

ನಿದ್ರೆಯಲ್ಲಿ  ಹಂತಗಳು ಬದಲಾಗುತ್ತಾ ಇರುತ್ತವೆ. ನಿದ್ರೆಯ ಹಂತಗಳು ನಾಲ್ಕು.ಸುಮಾರು 90 ರಿಂದ 110 ನಿಮಿಷಗಳ ಚಕ್ರ ಇದು.
೧   -  ಮೊದಲನೆಯದು ಜೋಂಪು ಬರುವಿಕೆ.  ಇದನ್ನು ಥೀಟಾ  ತರಂಗಗಳು ಎನ್ನುತ್ತಾರೆ. 
 ೨ -  ಎರಡನೆಯ ಹಂತದಲ್ಲಿ  ಕಣ್ಣು ಗೋಳದ ಚಲನೆ ಇರದು ಮತ್ತು ಶ್ವಾಸೋಚ್ವಾಸ  ಧೀರ್ಘವಾಗಿರದೇ  ಚಿಕ್ಕದಾಗಿರುತ್ತದೆ.ದೇಹದ ಉಷ್ಣತೆಯಲ್ಲಿ ಇಳಿಮುಖವಾಗುತ್ತದೆ.
೩ - ೪ - ಮೂರು ಮತ್ತು ನಾಲ್ಕನೆಯ ಹಂತದಲ್ಲಿ ನಿದ್ರೆ ಗಾಢವಾಗುತ್ತಾ  ಹೋಗುತ್ತದೆ.   ರಕ್ತದೊತ್ತಡ ಕಡಿಮೆಯಾಗುತ್ತದೆ  ಮತ್ತು ಶ್ವಾಸೋಚ್ಚಾಸ ಕ್ರಿಯೆ ನಿಧಾನವಾಗುತ್ತಾ ಹೋಗುತ್ತದೆ.ಈ ಹಂತವನ್ನು ಡೆಲ್ಟಾ ತರಂಗಗಳು ಎನ್ನುತ್ತಾರೆ. ಈ ಹಂತದಲ್ಲಿ ನಿದ್ರಿಸುತ್ತಿರುವ  ವ್ಯಕ್ತಿಗಳನ್ನು ಎಬ್ಬಿಸುವುದು ಸ್ವಲ್ಪ ಕಷ್ಟ.
೧,೨,೩,೪ ಹಂತಗಳ ಜೊತೆಗೆ ಇನ್ನೊಂದು ಹಂತವಿದೆ.  ಅನಿಯಂತ್ರಿತ ಕಣ್ಣುಗಳ ಚಲನೆಯಲ್ಲಿರುವ ನಿದ್ರಾ ಹಂತ ಅಂದರೆ REM sleep [  rapid eye movement].ನಾಲ್ಕರ ಹಂತದ ನಂತರ ಮತ್ತೆ ಮೂರು, ಎರಡು, ಒಂದು ನಂತರ REM   ಹಂತಕ್ಕೆ ಬರುವುದು.   ಈ ಹಂತದಲ್ಲಿ ಮೆದುಳು ತುಂಬಾ ಕ್ರಿಯಾಶೀಲವಾಗಿರುತ್ತದೆ   ಮತ್ತು ಕನಸುಗಳು   ಬೀಳುತ್ತವೆ   ಅಲ್ಲದೆ   ಬಿದ್ದ ಕನಸುಗಳು ನೆನಪಲ್ಲುಳಿಯುತ್ತವೆ.  ಇದು ಮೊದಲ ಹಂತದ ನಿದ್ರೆಯ ನಂತರ ಕಾಣಿಸಿಕೊಳ್ಳುತ್ತದೆ ಮತ್ತು REM ಮುಗಿದಮೇಲೆ  ಮೊದಲ  ಹಂತದಿಂದ  ನಿದ್ರೆ ಮುಂದುವರೆಯುವುದು.    ಕೆಲವೊಮ್ಮೆ ಎರಡನೆಯ ಹಂತ ಸಹಾ ಶುರುವಾಗಬಹುದು. ರಾತ್ರಿಯ ಮೊದಲ ಜಾವಗಳಲ್ಲಿ ಕಡಿಮೆ ಸಮಯ ತೆಗೆದುಕೊಳ್ಳುವ ಇದು ಬೆಳಗಿನ ಜಾವದಲ್ಲಿ ಹೆಚ್ಚು ಸಮಯ ತೆಗೆದು ಕೊಳ್ಳುತ್ತದೆ. .ಪ್ರತಿ ರಾತ್ರಿ  ಸುಮಾರು ಮೂರರಿಂದ ಐದು ಸಲ ಈ ಅವಸ್ಥೆಗೆ ನಾವು ಜಾರುತ್ತೇವೆ.ವಯಸ್ಸಾದವರಲ್ಲಿ ಈ  ಅವಸ್ಥೆ  ಹೆಚ್ಚು ಸಮಯ ಇರುತ್ತದೆ.

ಬಾಲ್ಯದಿಂದ ವೃದ್ದಾಪ್ಯದ ವರೆಗೂ ನಿದ್ರೆಯ ಪ್ರಮಾಣ ಇಳಿಮುಖವಾಗುತ್ತದೆ. ಒಬ್ಬ ವಯಸ್ಕನಿಗೆ ದಿನಕ್ಕೆ ಏಳರಿಂದ ಎಂಟು ಘಂಟೆಗಳ ನಿದ್ರೆ ಬೇಕಾಗುತ್ತದೆ. ಕೊಂಚ ಹೆಚ್ಚು ಕಡಿಮೆ ಇರಬಹುದು. ಆದರೆ 'ನಿದ್ರಾಹೀನತೆ' ಇರುವವರಲ್ಲಿ  ಆತ ಸಂಪೂರ್ಣವಾಗಿ  ನಿದ್ರೆಯ ಎಲ್ಲಾ ಹಂತಗಳನ್ನೂ ಕ್ರಮಿಸಲು ಅಸಮರ್ಥನಾಗುತ್ತಾನೆ. ಮೊದಲ ಹಂತದಲ್ಲಿಯೇ   ಇದ್ದು ಹೊರಳಾಡುತ್ತಾ ಇರುತ್ತಾನೆ. ಪದೇ ಪದೇ ಎಚ್ಚರವಾಗುತ್ತದೆ. ಡೆಲ್ಟಾ ತರಂಗಗಳ ಹಂತ ಅಥವಾ ಗಾಢ ನಿದ್ರೆಯ ಅವಸ್ಥೆಯನ್ನು ತಲುಪಲು ಸಾಧ್ಯವಾಗದಿದ್ದಾಗ ಮೆದುಳಿನ ಕ್ರಿಯಾಶೀಲತೆಯಲ್ಲಿ ವ್ಯತ್ಯಾಸವಾಗುತ್ತದೆ.  ಅದು ತಿಂಗಳಾನುಗಟ್ಟಲೆ ಮುಂದುವರೆದರೆ ಮೆದುಳಿನಲ್ಲಿ ಬಿಡುಗಡೆಯಾಗುವ ರಾಸಾಯನಿಕಗಳಲ್ಲಿ ವ್ಯತ್ಯಾಸವಾಗಿ ಮಾನಸಿಕ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ನಿದ್ರಾ ಹೀನತೆಯಿರುವವರಿಗೆ ಬೇಗ ನಿದ್ರೆ ಬರದು ಮತ್ತು ಬೇಗ ಎಚ್ಚರಾಗುತ್ತದೆ.ಎಷ್ಟೊತ್ತಿಗೂ ನಿದ್ರೆ ಗೆಟ್ಟವರಂತೆ, ಜಡತ್ವದಿಂದ ಇರುತ್ತಾರೆ. ಏಕಾಗ್ರತೆ ಇರದು. ಸದಾ ಕಿರಿಕಿರಿ ಆದಂತೆನಿಸುತ್ತದೆ. ಕೆಲಸದ ಒತ್ತಡ, ಅನಾರೋಗ್ಯ, ನೋವು ಇವುಗಳಿಂದ ಸರಿಯಾಗಿ ನಿದ್ರಿಸಲಾಗದಿದ್ದಾಗ ಸಮಸ್ಯೆಗಳು ಶುರುವಾಗುತ್ತದೆ.ಇದಕ್ಕೆ ಜೊತೆಗೂಡಿ ಡಿಪ್ರೆಶನ್, ಡಯಾಬಿಟೀಸ್, ರಕ್ತದೊತ್ತಡ ಕೂಡಾ ಬರುವ ಸಾಧ್ಯತೆಗಳು ಇವೆ.

 ಅತಿನಿದ್ರೆ ಅಥವಾ ಹೈಪರ್ಸೋಮ್ನಿಯ - ಈ ಸಮಸ್ಯೆ ಇರುವ ವ್ಯಕ್ತಿಗಳು ರಾತ್ರೆಯಿಡೀ ನಿದ್ರಿಸಿದರೂ ಮತ್ತೆ ಮತ್ತೆ ಹಗಲಿನಲ್ಲಿಯೂ ಗಾಢ ನಿದ್ರೆಗೆ ಜಾರುತ್ತಿರುತ್ತಾರೆ. ನಿದ್ರೆಯಿಂದ ಎಬ್ಬಿಸುವುದು ತುಂಬಾ ಕಷ್ಟ. ಕೆಲಸ ಮಾಡುತ್ತಾ ಮಾಡುತ್ತಾ ಇರುವಾಗಲೇ, ಊಟ  ಮಾಡುತ್ತಾ ಇರುವಾಗಲೇ.. [ ಓದುತ್ತಿರುವಾಗ ನಿದ್ರೆ ಮಾಡುವವರನ್ನು ಹೊರತು ಪಡಿಸಿ...:) ] ಮಾತನಾಡುತ್ತಾ ಆಡುತ್ತಲೇ, ಕೂತಲ್ಲಿ,  ನಿಂತಲ್ಲಿ    ನಿದ್ರೆ ಮಾಡತೊಡಗುತ್ತಾರೆ. ನಿದ್ರೆಯ ನಂತರದ ಉಲ್ಲಾಸ ಇರುವುದಿಲ್ಲ. ಉದ್ವೇಗ, ಕಿರಿಕಿರಿ, ಅಸಹನೆ, ಅಶಕ್ತತೆ, ಹಸಿವಿಲ್ಲದಿರುವುದು, ನಿಧಾನ ಪ್ರವೃತ್ತಿ ಮುಖ್ಯ ಲಕ್ಷಣಗಳು.ಮೆದುಳಿನ ಮೇಲೆ ಬಿದ್ದ ಪೆಟ್ಟು, ಅಥವಾ ಕೆಲವು ಔಷಧಗಳ ಅಡ್ಡ ಪರಿಣಾಮಗಳು ಇದಕ್ಕೆ ಕಾರಣವಾಗಬಹುದು.

ಡಿಪ್ರೆಶನ್  ಇದ್ದವರಲ್ಲಿ ಇನ್ಸೋಮ್ನಿಯಾ ಅಥವಾ ಹೈಪರ್ಸೋಮ್ನಿಯ ಯಾವುದಾರೂ  ಲಕ್ಷಣಗಳು ಕಾಣಿಸಬಹುದು.
ಇನ್ಸೋಮ್ನಿಯಾ  ಸೂಕ್ತ ಔಷಧಗಳಿಂದ ಗುಣವಾಗಬಹುದು. ಆದರೆ ಹೈಪೆರ್ಸೋಮ್ನಿಯ ಜೀವಮಾನವಿಡೀ ಕಾಡುತ್ತದಂತೆ.

ಪ್ರತಿಯೊಂದಕ್ಕೂ ಅದರದ್ದೇ ಆದ ಮಾನದಂಡವಿದೆ. ಬಿ.ಪಿ. ಶುಗರ್ರು, ಎಲ್ಲದಕ್ಕೂ ಇಂತಿಷ್ಟೇ ಪ್ರಮಾಣದಲ್ಲಿರಬೇಕೆಂಬ ಪ್ರಕೃತಿ ನಿಯಮದಂತೆ ನಿದ್ರೆ, ಆಹಾರಸೇವನೆ, ಚಟುವಟಿಕೆಗಳು ಎಲ್ಲಕ್ಕೂ ನಿಯಮ ಮೀರುವಂತಿಲ್ಲ. ಮೀರಿದರೆ ಅದು ಕಾಯಿಲೆಯಾಗುತ್ತದೆ.

     

Thursday, July 7, 2011

ಮಾನಸಿಕ ಖಿನ್ನತೆ. ಭಾಗ - ೧

ಈ ಮೊದಲು ನಾನು  ಖಿನ್ನತೆ ಯ ಬಗ್ಗೆ ಚೂರು ಪಾರು ಬರೆದಿದ್ದೆ.ಆ ಪೋಸ್ಟಿನಲ್ಲಿ ಒಂದು ಬಗೆಯನ್ನಷ್ಟೇ ವಿವರಿಸಿದ್ದೆ.
ಯಾರಿಗಾದರೂ ಖಿನ್ನತೆಯ [depression] ಸಮಸ್ಯೆ ಇದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ..? ಅವರು ಮೆಂಟಲ್ ಕೇಸು ಕಣ್ರೀ .. ಸ್ವಲ್ಪ ಹಾಗೆ.  ಜಾಸ್ತಿ ಮಾತಾಡ್ಸಕ್ಕೆ ಹೋಗಬೇಡಿ.  ಯಾವಾಗ ಹೇಗೆ ಅನ್ನೋದು ಗೊತ್ತಾಗಲ್ಲ.   ಈ ರೀತಿಯಲ್ಲಿ ನಮ್ಮ ವಿಚಾರ ಸಾಗುತ್ತದೆ.  ಖಿನ್ನತೆ ಅಂದರೆ ಹುಚ್ಚುತನವಲ್ಲ.ಡಿಪ್ರೆಶನ್ ಇರುವವರೆಲ್ಲ ಹುಚ್ಚರಲ್ಲ.


ಖಿನ್ನತೆಯಲ್ಲಿ ಅನೇಕ ವಿಧಗಳಿವೆ.
* ಮೇಜರ್ ಡಿಪ್ರೆಶನ್,
*  ಮಾದರಿಗೆ ಸರಿ ಹೊಂದದ ಎಟಿಪಿಕಲ್ ಡಿಪ್ರೆಶನ್,
* ಈ ಮೊದಲು ವಿವರಿಸಿದ ಡಿಸ್ಥೀಮಿಯ,
* ಮನೋ ವಿಕಾರತೆಯಿಂದ ಕೂಡಿದ ಸೈಕೊಟಿಕ್ ಡಿಪ್ರೆಶನ್,
* ಋತುಮಾನಕ್ಕೆ ತಕ್ಕಂತೆ  ಕಾಣಿಸಿಕೊಳ್ಳುವ  ಸೀಜನಲ್ ಆಫೆಕ್ಟಿವ್ ಡಿಸಾರ್ಡರ್,
*  ಬಾಳಂತಿ ಸನ್ನಿ ಎಂಬುದಾಗಿ ಪ್ರಚಲಿತವಿರುವ ಪೋಸ್ಟ್ ಪಾರ್ಟಂ ಡಿಪ್ರೆಶನ್ ಹಾಗೂ
*  ಬುದ್ದಿ ವಿಕಲ್ಪತೆಯಿಂದ ಕೂಡಿದ ಮ್ಯಾನಿಕ್ ಡಿಪ್ರೆಶನ್ ಅಥವಾ ಬೈ ಪೋಲಾರ್ ಡಿಪ್ರೆಶನ್.


ಡಿಪ್ರೆಶನ್ ಎಂದರೆ ಏನು ಮತ್ತು ಅದರ ಗುಣ ಲಕ್ಷಣಗಳೇನು..?

ಡಿಪ್ರೆಶನ್ ಎಂದರೆ,  ದಿನ ನಿತ್ಯ ಜೀವನಕ್ಕೆ ತೊಂದರೆ ಕೊಡುವ ದೀರ್ಘ ಕಾಲಿಕ ಮತ್ತು ಬದಲಾವಣೆಯಿಲ್ಲದ ಋಣಾತ್ಮಕ ಆಲೋಚನೆಗಳಿಂದ ಕೂಡಿದ ಮನಸ್ಥಿತಿ.

ಗುಣ ಲಕ್ಷಣಗಳೆಂದರೆ,

ಅನಾಸಕ್ತಿ - ಮೊದಲು ಇಷ್ಟ ಪಟ್ಟು ತೊಡಗಿಸಿ ಕೊಳ್ಳುತ್ತಿದ್ದ  ವಿಚಾರಗಳ ಬಗೆಗೆ ಆಸಕ್ತಿ ಹಿಮ್ಮುಖವಾಗುವುದು.



ತಪ್ಪಿತಸ್ಥ ಮನಸ್ಸು- ತನ್ನಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆಯೇನೋ ಅಥವಾ ಯಾವುದೋ ತಪ್ಪು ಮಾಡುತ್ತಿದ್ದೇನೆ ಅನ್ನುವ ಆಲೋಚನೆಗಳು.

ಅಸಾಮರ್ಥ್ಯ-  ತನ್ನಿಂದ ಯಾವ ಕೆಲಸವೂ ಆಗದು, ಎಷ್ಟೇ ಚಿಕ್ಕ,ಸರಳ ಕೆಲಸ ಮಾಡುವಾಗಲೂ ಕೂಡಾ ನಿರುತ್ಸಾಹಿಗಳಾಗಿರುವುದು.


                                
ಒಂಟಿತನ - ಈ ಡಿಪ್ರೆಶನ್ನಿಗೆ ಒಂಟಿತನವೂ ಕಾರಣವಾಗಿರಬಹುದು ಮತ್ತು ಡಿಪ್ರೆಶನ್ ಆವರಿಸಿಕೊಂಡ ಮೇಲೆ ಒಂಟಿತನ ಅನುಭವಿಸಬಹುದು. ಉದಾಹರಣೆಗೆ, ಎಲ್ಲರೂ ಮಾತನಾಡುತ್ತಾ ಖುಷಿಯಾಗಿರುವಾಗ ಒಬ್ಬರೇ  ಸುಮ್ಮನೆ ಮೂಲೆಯಲ್ಲೋ, ಕೋಣೆಯಲ್ಲೋ ನಿರಾಸಕ್ತಿಯಿಂದ ಕುಳಿತುಕೊಂಡಿರುವುದು.ಒಬ್ಬರೇ ಒಂಟಿಯಾಗಿರುವುದಕ್ಕೂ, ಮನಸ್ಸಿನಲ್ಲೇ ಒಂಟಿತನವನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹಾಸ್ಯ ಮಾಡುತ್ತಾ ಎಲ್ಲರೂ ನಗುತ್ತಿದ್ದರೂ ಖಿನ್ನತೆ ಇರುವವರು ಪ್ರತಿಕ್ರಿಯಿಸದೆ  ಒಂಟಿತನವನ್ನು ಅನುಭವಿಸುತ್ತಾರೆ.

ಹಸಿವು - ಕೆಲವರು ಆಹಾರವನ್ನೇ ಸರಿಯಾಗಿ ಸೇವಿಸುವುದಿಲ್ಲ. ಅಥವಾ ಪೌಷ್ಟಿಕಾಂಶದ ಕೊರತೆಯೂ ಕೆಲವು ಡಿಪ್ರೆಶನ್ನಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಹೊಟ್ಟೆಬಾಕತನವನ್ನು ತೋರಿಸುತ್ತಾರೆ.ಈ ಬಗ್ಗೆ ವಿವರಣೆಗೆ  ನನ್ನ್.ಈ ಪೋಸ್ಟಿನಲ್ಲಿ ನೋಡಬಹುದು.

ನಿದ್ರೆಯಲ್ಲಿನ ಬದಲಾವಣೆ- ನಿದ್ರಾ ಹೀನತೆ [ insomnia ]  ಅಥವಾ ಅತಿನಿದ್ರೆ [ hypersomnia ] ಕಾಡಬಹುದು.

 ದೈಹಿಕ ಚಟುವಟಿಕೆಗಳು- ಕೆಲವೊಮ್ಮೆ ಅತಿಯಾದ ಚಟುವಟಿಕೆಯನ್ನೂ, ಕೆಲವೊಮ್ಮೆ ನಿಧಾನಪ್ರವೃತ್ತಿಯನ್ನೂ ಕಾಣಬಹುದು.

ಏಕಾಗ್ರತೆಯಲ್ಲಿನ ಅಸಾಮರ್ಥ್ಯ- ವಸ್ತು,ವಿಷಯ ಗಳನ್ನು ಗ್ರಹಿಸುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮತ್ತು ನೆನಪಿನ ಶಕ್ತಿ ಕೂಡ ಕುಂಟಿತಗೊಳ್ಳಬಹುದು.ದೈಹಿಕ ಅಶಕ್ತತೆ ಕಾಣಿಸಿಕೊಳ್ಳಬಹುದು.

  ಕೆಲವೊಮ್ಮೆ ಅಸ್ಥಿರ, ಚಂಚಲ ಮನಸ್ಥಿತಿಯನ್ನೂ ಕಾಣಬಹುದು. ಬೇಗನೆ ಕಿರಿಕಿರಿಗೊಳಗಾಗುತ್ತಾರೆ.ಸುಮ್ಮನೆ ಸಿಟ್ಟಿಗೇಳುವುದು,
ಅನಗತ್ಯ ವಾದಕ್ಕಿಳಿಯಬಹುದು.

ಕೆಲವೊಮ್ಮೆ ಯಾವಾಗಲೂ ತಲೆನೋವು, ಬೆನ್ನುನೋವು, ಹೊಟ್ಟೆನೋವು, ಬೇಧಿ, ಮಲಬದ್ಧತೆ, ಸಂದುನೋವುಗಳು ಮುಂತಾದ ದೈಹಿಕ ಕಾಯಿಲೆಗಳನ್ನು ಅನುಭವಿಸಬಹುದು.  ವೈದ್ಯರಿಗೆ ಯಾವ ದೈಹಿಕ ತೊಂದರೆಯೂ ಕಾಣದಿರಬಹುದು.

ಹೆಚ್ಚಿನದಾಗಿ ಮಾನಸಿಕ ಖಿನ್ನತೆಯಿರುವವರು ಪ್ರಪಂಚದ ಬಗ್ಗೆ ಒಂದು ಋಣಾತ್ಮಕ ಮನೋಭಾವನೆಯನ್ನು ತೋರಿಸುತ್ತಾರೆ. ಅತೀ  ಕಾಳಜಿ,  ಅತೀ   ನಿರ್ಲಕ್ಷ್ಯ,  ಭವಿಷ್ಯದ  ಬಗೆಗೆ ಭಯ,ಗೊಂದಲ ಹೆಚ್ಚಾಗಿ ತೋರ್ಪಡಿಸುತ್ತಾರೆ.
ಪ್ರತಿಯೊಬ್ಬರೂ ನಮ್ಮ ಜೀವಮಾನದ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಖಿನ್ನತೆಗೆ ಒಳಗಾಗಿಯೇ ಆಗುತ್ತೇವೆ.ಆದರೆ ಬಹುಬೇಗ ಮಾಮೂಲಿನ ಜೀವನ ನಡೆಸಲು ಶುರು ಮಾಡುತ್ತೇವೆ. ಕೆಲವೊಮ್ಮೆ ನೆನಪು ಮಾಡಿಕೊ೦ಡರೂ, ನಂತರ ನಿಧಾನಕ್ಕೆ ಮರೆತು ಬಿಡುತ್ತೇವೆ. ತೀವ್ರತೆ ಕಡಿಮೆಯಾಗ ತೊಡಗುತ್ತದೆ. ಆದರೆ  ದಿನದ  ಹೆಚ್ಚಿನ  ಭಾಗ  ಖಿನ್ನತೆಯಲ್ಲಿಯೇ ಇದ್ದರೆ ಮತ್ತು ತೀವ್ರತೆ ಮೊದಲಿದ್ದಂತೆಯೇ ಮುಂದುವರೆದುಕೊಂಡು ಹೋಗುತ್ತಿದ್ದರೆ  ಅಂತವರಿಗೆ   ತಜ್ಞರ  ಜರೂರತ್ತಿದೆ.

ಹಾಗಾದರೆ ಈ ಮಾನಸಿಕ  ಖಿನ್ನತೆಗೆ ಕಾರಣಗಳೇನು..?ಇದಕ್ಕೆ ಮುಖ್ಯ ಕಾರಣಗಳೆಂದರೆ,   

೧. ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನದಾಗಿ ಸಂಬಂಧಗಳಲ್ಲಿನ ಮದುವೆಯಾದರೆ ಅವರ  ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚು. ಹತ್ತಿರದ ಸಂಬಂಧಿಗಳಲ್ಲಿ ಉದಾಹರಣೆಗೆ, ತಂದೆ ಅಥವಾ ತಾಯಿ, ಅಜ್ಜ ಅಜ್ಜಿ ಇವರುಗಳು ಖಿನ್ನತೆಯಿಂದ ಬಳಲುತ್ತಿದ್ದರೆ; ಅದು ಮುಂದಿನ ಸಂತತಿಗೆ  ವರ್ಗಾವಣೆಯಾಗುತ್ತದೆ.

೨.ನರಚೋದಕಗಳ ಅಸಮರ್ಪಕ ಸ್ರವಿಸುವಿಕೆ- ನಮ್ಮ ಎಲ್ಲ ಮಾನಸಿಕ ಕ್ರಿಯೆಗಳೂ ಕೆಲವು ರಾಸಾಯನಿಕ ವಸ್ತುಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.ಈ ರಾಸಾಯನಿಕಗಳ ಸ್ರಾವದಲ್ಲಿ ಏರು ಪೇರು ಆದಾಗ  ಮೆದುಳಿನ ನರ ಕೋಶಗಳಿಗೆ ಸಮರ್ಪಕ ಸೂಚನೆಗಳು ಸಿಗದೇ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕನೆಕ್ಷನ್ ತಪ್ಪಿ ಹೋಗಿರಬಹುದು. ರಾಂಗ್ ಕನೆಕ್ಷನ್ ಆಗಬಹುದು.  ಕೆಲವೊಮ್ಮೆ ಯಾವುದೋ ಸ್ವಿಚ್ ಒತ್ತಿದರೆ ಯಾವುದೋ ಲೈಟ್ ಹೊತ್ತಿಕೊಳ್ಳಬಹುದು.! ಎಲ್ಲಿಯೋ ಶಾಕ್ ಹೊಡೆಯಬಹುದು..!

೩.ಜೀವನದಲ್ಲಾಗುವ ಸಹಿಸಲಾಗದ ಆಘಾತ.- ಪ್ರೀತಿ  ಪಾತ್ರರ ಅಗಲುವಿಕೆ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಅತಿಯಾದ ಕೆಲಸದ ಒತ್ತಡ, ಅತಿಯಾದ ನಿರೀಕ್ಷೆ ಇವುಗಳೆಲ್ಲ ಖಿನ್ನತೆಗೆ ಕಾರಣವಾಗುತ್ತವೆ.

 ಇದರ ಮುಖ್ಯ ಪರಿಣಾಮಗಳೇನು..?

ಸಾಮಾಜಿಕವಾಗಿ ಸುಖ ಜೀವನ ನಡೆಸಲು ಕಷ್ಟವಾಗುತ್ತದೆ. ಕೆಲಸ, ಕುಟುಂಬ, ಮಕ್ಕಳನ್ನು ನಿರ್ವಹಿಸುವುದರಲ್ಲಿ ಅಸಮರ್ಥತೆ ತೋರುತ್ತದೆ.

ಈ ನಡುವೆ ನನ್ನ ಆಪ್ತ ಗೆಳತಿಯೊಬ್ಬಳು ಈ ಮಾನಸಿಕ ಖಿನ್ನತೆಯ ಪರಿಣಾಮವಾಗಿ ನೇಣಿಗೆ  ಶರಣಾದಳು. ಡಿಪ್ರೆಶನ್ ನ  ಮುಖ್ಯ ಪರಿಣಾಮಗಳಲ್ಲಿ ಈ ಆತ್ಮ ಹತ್ಯೆಯೂ ಒಂದು.ಪ್ರಪಂಚದಲ್ಲಿ ಶೇಕಡಾ ನಾಲ್ಕು ಜನ ಈ ಮೇಜರ್  ಡಿಪ್ರೆಶನ್ ಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ ಅರವತ್ತರಿಂದ ಅರವತ್ತೈದು ಜನ ಡಿಪ್ರೆಶನ್ ಅಥವಾ ಉಳಿದ  ಮಾನಸಿಕ ಸಮಸ್ಯೆಗೊಳಗಾದವರೇ  ಆಗಿರುತ್ತಾರೆ !  ಈ ಆತ್ಮಹತ್ಯಾ ಮನೋಭಾವನೆ  ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಖಿನ್ನತೆಗೊಳಗಾದವರಲ್ಲಿ ೨೫ ಪಟ್ಟು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಈ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯನ್ನು ಸೂಕ್ತ ಔಷಧಗಳಿಂದ, ಆಪ್ತ ಸಮಾಲೋಚನೆಯಿಂದ ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.ಸಹೃದಯ ಸಹಕಾರದಿಂದ  ಕೆಲವರಿಗೆ ಉತ್ತಮ ಫಲಿತಾಂಶಗಳೂ ಲಭ್ಯ.
ಆದರೆ ಈ ರೀತಿ ಯೋಚನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಅದಕ್ಕೆ ಮುನ್ಸೂಚನೆಯಾಗಿ ಯಾವುದಾದರೂ ಕ್ರಿಯೆ ನಡೆಯುತ್ತಿದ್ದರೆ ತಕ್ಷಣವೇ ಮಾನಸಿಕ ತಜ್ಞರನ್ನು ಕಾಣಲೇ ಬೇಕು.ಪ್ರಾರಂಭದ ಹಂತದಲ್ಲಿ  ಉತ್ತಮ ಫಲಿತಾಂಶಗಳೇ ದೊರಕುತ್ತದೆ.

ಆದರೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದರೆಂದರೆ,  ಹೇಗೋ ಉಳಿದರೂ ಕೂಡಾ ಅವರು ತಮ್ಮ ಅಂತ್ಯವನ್ನು ಆತ್ಮಹತ್ಯೆಯಲ್ಲಿಯೇ  ಪೂರ್ಣ  ಮಾಡಿ ಕೊಳ್ಳುತ್ತಾರೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಅವಶ್ಯ.ಯಾವ ವಿಚಾರಗಳಿ೦ದ ಪ್ರಚೋದನೆಗೊಳಗಾಗುವರೆ೦ಬ ಸಣ್ಣ ಸುಳಿವು ಸಿಕ್ಕರೂ ಸಹಾ ಅ೦ತಹವುಗಳಿ೦ದ ದೂರವಿರಿಸುವುದು ಉತ್ತಮ.
ಖಿನ್ನತೆಗೊಳಗಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ..ಅದು  ಅದರ ತೀವ್ರತೆಯನ್ನು ಆಧರಿಸಿರುತ್ತದೆ.

ಮತ್ತೆ ಕೆಲವರು ಬೇರೆಯವರ ಮೇಲೆ ಹಲ್ಲೆ ನಡೆಸಲೂ ಬಹುದು. ಸೈಕೊಟಿಕ್ ಅಥವಾ ಮ್ಯಾನಿಕ್ ಡಿಪ್ರೆಶನ್ನಿನ ವ್ಯಕ್ತಿಗಳು ಈ ನಡವಳಿಕೆ ತೋರಿಸಬಹುದು.

ಮೊದಲೇ ಹೇಳಿದ೦ತೆ ನನ್ನ ಆತ್ಮೀಯ ಗೆಳತಿಯೊಬ್ಬಳು ಕೆಲದಿನಗಳ ಹಿ೦ದೆ ನೇಣು ಹಾಕಿಕೊ೦ಡು ಮೃತಪಟ್ಟಳು.ಆಕೆಗೆ ಡಿಪ್ರೆಶನ್ನಿಗೆ ಕಾರಣವಾದದ್ದು ಕಾಯಿಲೆಯಿ೦ದ ನರಳಿ  ತೀರಿಕೊ೦ಡ  ಮಗಳ ವಿಚಾರ. ಹೊರಗಿನವರಿಗೆ ಒ೦ಚೂರೂ  ಡಿಪ್ರೆಶನ್ನಿನ  ಸುಳಿವೇ ಸಿಗದಷ್ಟು ಜೀವನೋತ್ಸಾಹ ಕಾಣಿಸುತ್ತಿತ್ತು ಆಕೆಯಲ್ಲಿ.  ಆದರೆ ಒಳಗಿನ ಪರಿಸರವೇ ಬೇರೆ ನೋಡಿ.ಯಾವುದು ಆ ಗಳಿಗೆಯಲ್ಲಿ ಪ್ರಚೋದಿಸಿತೊ ಅ೦ತೂ ಈಗಿಲ್ಲ ಆಕೆ. ಗೊತ್ತೇ ಆಗದ೦ತೆ ಒಳಗೊಳಗೇ ಕಾಡುವ, ಬಲಿ  ತೆಗೆದುಕೊಳ್ಳುವ ಮಾರಿ  ಇದು.

[ಈ ಮೊದಲು”ಈಪೋಸ್ಟಿನಲ್ಲಿ ’ಕೊಟ್ಟ ಲಿ೦ಕ್ ತಪ್ಪಾಗಿತ್ತು ಈಗ ಸರಿಪಡಿಸಿದ್ದೇನೆ.]
[ ಚಿತ್ರಕೃಪೆ ಅ೦ತರ್ಜಾಲ]              
[ಮು೦ದುವರೆಯುವುದು]