Showing posts with label ನೆನಪುಗಳು. Show all posts
Showing posts with label ನೆನಪುಗಳು. Show all posts

Tuesday, July 17, 2018

''ಜಿಲೇಬಿ''ಎಂಬ ಮಾಟಗಾತಿ

 ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ......  ಜಿಲೇಬಿ ರುಚಿಯೊಂದಿಗೆ.. 
 
 
ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ  ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್ತಾ, ರಗಳೆ ಮಾಡುತ್ತಾ ಗೋಳು ಹೊಯ್ದು ಕೊಂಡಿದ್ದೀನಷ್ಟೆ .. ಇದು ಲಾಸ್ಟು .. ನಂಬಿ ಪ್ಲೀಸ್ ನನ್ನ ನಂಬಿ.
ಮೊದಲ ಸಲ  ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲೇಬಿ ಮಾಡಿದ್ದನ್ನು ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿದ್ದು ನಿಮಗೂ ನೆನಪಿಗೆ ಬಂದಿರಬಹುದು. ಅದು ಜಿಲೇಬಿ...  ಜಿಲೇಬಿ ಹೌದೋ ಅಲ್ಲವೋ ಎಂಬುದನ್ನು ನಮ್ಮನೆಯಲ್ಲಿರುವ  ಮೂವರು ತಜ್ಞರು ಅಳೆದು ಸುರಿದು ( ಸುರಿದಿದ್ದು ಎಲ್ಲಿಗೆ ಅಂತ ಯಾರೂ ತನಿಖೆ ಮಾಡಬೇಡಿ ದಯವಿಟ್ಟು..!) ನೋಡಿ,  ಇವಳಿಂದ ಮಾತ್ರ ಜಿಲೇಬಿ ಎಂದು ಕರೆಸಿಕೊಳ್ಳಲ್ಪಡುವ ಬೇರೆ ಯಾವುದೋ ಒಂದು ವಸ್ತು  ಎಂದು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದರೂ ನಾನು ಮಾತ್ರಾ ಅದನ್ನುಸಾರಾಸಗಟಾಗಿ ತಿರಸ್ಕರಿಸಿ ಜಗತ್ತಿನ ಯಾವುದೋ ಒಂದು ಅದ್ಭುತವೇ ಸರಿ ಎಂಬಂತೆ ಬ್ಲಾಗು, ಫೇಸ್ಬುಕ್ಕು ಜೊತೆಗೆ ನಾಡಿನ  ಎಲ್ಲ ಸ್ತರದವರಿಗೂ ತಿಳಿಯಲೆಂಬಂತೆ ಪತ್ರಿಕೆಗೂ ಕಳಿಸಿ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ನಿನ್ನೆ ಮೊನ್ನೆ ನಡೆದಂತಿದೆ..!  ಅಂತೂ ಮೊದಲ ಪ್ರಯತ್ನ ಯಶಸ್ವಿಯಾಗಿ ಡಿಸ್ ಕ್ವಾಲಿಫೈ ಆಯ್ತು... !
ಹೆತ್ತವಳಿಗೆ ಹೆಗ್ಗಣ ಮುದ್ದು .. ಕಟ್ಟಿಕೊಂಡವನಿಗೆ ಕೋಡಂಗಿ ಮುದ್ದು ಎನ್ನುವಂತೆ ನಾ ಮಾಡಿದ ಜಿಲೇಬಿ ನನಗೆ ಮುದ್ದು .. :)  ಯಾರೇನೇ ಅಂದರೂ ನಾನು ಮಾತ್ರ ಮತ್ತೊಮ್ಮೆ ಮಗದೊಮ್ಮೆ ನನ್ನ ಜಿಲೇಬಿ ಪ್ರಯೋಗಗಳನ್ನು ಮಾಡುತ್ತಲೇ ಹೋದೆ. ಪ್ರತಿ ಸಾರಿಯೂ ಒಂದೊಂದು ಹೊಸ ವಿಷಯವನ್ನು ಕಲಿಯುತ್ತಲೇ ಹೋದೆ.
ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು.  ಹಿಟ್ಟಿನ ಹದ, ಜಿಲೇಬಿ ಬೇಯಿಸುವ ಹದ , ಸಕ್ಕರೆ ಪಾಕ, ಉರಿ, ಜಿಲೇಬಿ ಹಿಟ್ಟನ್ನು ಎಣ್ಣೆಗೆ ಬಿಡುವ ಕಲೆ ಎಲ್ಲವೂ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ನಿಮಗೆ ಉತ್ತಮ ಜಿಲೇಬಿ ಭಾಗ್ಯ  ಸಿಗುತ್ತದೆ. ನಾನು ಸುಮಾರು ಏಳೆಂಟು ಸಲ ಜಿಲೇಬಿ ಮಾಡಿ ಮಾಡಿ ಈ ನಡುವೆ ತಿನ್ನಲು ಯೋಗ್ಯವಾದ ಜಿಲೇಬಿಗಳನ್ನು ಮಾಡುತ್ತಿದ್ದೇನೆ. ಯೂ ಟ್ಯೂಬ್ ನೋಡಿ, ಅವರಿವರು ಮಾಡಿದ್ದನ್ನು ನೋಡಿ ಮನದಲ್ಲೇ ಲೆಕ್ಕಾಚಾರ ಹಾಕಿ, ಯಾರ್ಯಾರನ್ನೋ ಕೇಳಿ ಈ ಮಟ್ಟಕ್ಕೆ ಬಂದಿದ್ದೇನೆ. ರಾಜಕುಮಾರನೊಬ್ಬ  ಸಾವಿರಾರು ಮೈಲಿ ಪ್ರಯಾಣ ಮಾಡಿ ಏಳು ಸಮುದ್ರದ ಆಚೆ, ಏಳು ಕೋಟೆಯ ನಡುವೆ ಬಂಧಿತಳಾದ ರಾಜಕುಮಾರಿಯನ್ನು ಕರೆತರಲು ಹರ ಸಾಹಸ ಮಾಡಿದಂತೆ ನಾನೂ ಈ ಸ್ವೀಟಿನ ತಯಾರಿಯಲ್ಲಿ ಎಲ್ಲ ತಪ್ಪುಗಳನ್ನೂ ಹಾದು ಬಂದು ಸಾಹಸ ಗೈದಿದ್ದೇನೆ  ಎನ್ನಲು ಸಂತೋಷಿಸುತ್ತೇನೆ . :)

ಮೊದಲು ವಿಧಾನ ವಿವರಿಸುತ್ತೇನೆ ನಿಧಾನ  ಕೇಳಿ.
ಒಂದು ಲೋಟ ಮೈದಾ ಹಿಟ್ಟಿಗೆ ಎರಡು ಚಮಚ ಮೊಸರು+ ಒಂದು ಚಮಚ ಕಡಲೆ ಹಿಟ್ಟು + ಚಿಟಿಕೆ ಅರಿಶಿನ + ನೀರು ಹಾಕಿ  ದೋಸೆಯ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ದಪ್ಪ ಹದಕ್ಕೆ ಗಂಟುಗಳಿಲ್ಲದಂತೆ  ಕದಡಿ. ಸುಮಾರು ೧೦ ಘಂಟೆ ಹಿಟ್ಟು ಹುಳಿ ಬರಲು ಬಿಡಿ. ಮಾಡುವ ಹೊತ್ತಿಗೆ ಚಿಟಿಕೆ ಸೋಡಾ ಬೆರೆಸಿ.
ಸಕ್ಕರೆ ಪಾಕಕ್ಕೆ-  ಎರಡು ಲೋಟ ಸಕ್ಕರೆಗೆ ಒಂದು  ಲೋಟ ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಳ್ಳಬೇಕು. ಪಾಕ ತುಂಬಾ ಬಿಸಿಯೂ ಇರದೇ ತಣ್ಣಗೂ ಇರದೇ ಮಧ್ಯಮ  ತಾಪದಲ್ಲಿ ಇರಲಿ. ಒಂದು ಚಮಚ ಲಿಂಬೆ ಹುಳಿ + ಒಂದು ಚಮಚ ಜೇನುತುಪ್ಪ ವನ್ನು ಕುದಿಯುವಾಗಲೇ ಸೇರಿಸಿ. ಕೇಸರಿ ಎಸಳುಗಳನ್ನು ಸೇರಿಸಬಹುದು.
ಅಗಲ ತಳದ ಪ್ಯಾನನ್ನು ಓಲೆ ಮೇಲಿಟ್ಟು ಎಣ್ಣೆ ಹಾಕಿ. ಸುಮಾರು ಒಂದೂವರೆ ಇಂಚು ಮುಳುಗುವಷ್ಟು ಇರಲಿ. ಉರಿ ಸಿಮ್ ನಲ್ಲಿರಲಿ. ಮಧ್ಯದಲ್ಲಿ ತೂತಿರುವ ದಪ್ಪ ಬಟ್ಟೆ ಅಥವಾ ಸ್ಕ್ವೀಝರ್ ಗೆ ಹಿಟ್ಟನ್ನು ತುಂಬಿಕೊಳ್ಳಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹನಿ ಹಿಟ್ಟು ಎಣ್ಣೆಗೆ ಹಾಕಿದರೆ ಅದು ತಕ್ಷಣ ತಳ  ಬಿಟ್ಟು ಏಳುತ್ತದೆ .. ಅಂದರೆ ಕಾದಿದೆ ಅಂತ ಅರ್ಥ. ಈಗ ನಿಧಾನಕ್ಕೆ ಹಿಟ್ಟನ್ನು ಜಿಲೇಬಿ ಆಕಾರಕ್ಕೆ (?) ಎಣ್ಣೆಗೆ ಬಿಡಿ. ಕರಿಯುವವರೆಗೆ ಸಹನೆಯಿಂದ ಕಾಯುವುದೂ ಇಲ್ಲಿ ಮುಖ್ಯ. ಜಿಲೇಬಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾದ ಲಕ್ಷಣ ಕಂಡುಬಂದಾಗ ತೆಗೆದು ಪಾಕಕ್ಕೆ ಹಾಕಿ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಪಾಕದಲ್ಲಿ ಅದ್ದಿ ನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ.

  ಮಾಡಿದ ಮತ್ತು ಮಾಡುವ ತಪ್ಪುಗಳು . 
 
೧.  ಹಿಟ್ಟು ತೆಳ್ಳಗೆ ಆದರೆ ಜಿಲೇಬಿ ದುಂಡನೆಯ ಜಿಲೇಬಿಯಾಗದೆ ಚಪ್ಪಟೆಯಾಗುತ್ತದೆ. ಜಿಲೇಬಿ ಗರಿಗರಿಯಾಗದೆ ಮೆತ್ತಗಾಗುತ್ತದೆ. ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ.
೨. ಸಕ್ಕರೆ ಪಾಕ ತೆಳ್ಳಗಾದರೆ ಸ್ವಲ್ಪ ಹೊತ್ತಿನ ನಂತರ ಜಿಲೇಬಿಯಿಂದ ಪಾಕ ಸೋರಿ ಹೋಗುತ್ತದೆ. ತೀರಾ ದಪ್ಪ ಇದ್ದಲ್ಲಿ ಪಾಕ ಹೀರಿಕೊಳ್ಳುವುದಿಲ್ಲ.   ಮೊದ ಮೊದಲು ಪಾಕ ಸರಿ ಹದದಲ್ಲಿ ಇದ್ದು ತಣ್ಣಗಾದಂತೆ ದಪ್ಪವಾಗುತ್ತದೆ.. ತುಸುವೇ ನೀರು ಬೆರೆಸಿ ಮತ್ತೆ ಒಂದು ಕುದಿ ಬರಿಸಿಕೊಳ್ಳಬೇಕು                           
೩, ಎಣ್ಣೆ ಸಣ್ಣ ಉರಿಯಲ್ಲಿಯೇ ಕಾಯಬೇಕು ಮತ್ತು ಕೊನೆಯವರೆಗೂ ಉರಿ  ಸಿಮ್ ನಲ್ಲಿಯೇ ಇರಬೇಕು. ಕರಿಯಲು ಎಣ್ಣೆ ಕಡಿಮೆಯಾದರೆ ಸರಿಯಾಗಿ ಬೇಯುವುದಿಲ್ಲ. ಹಿಟ್ಟು ತಳ ಬಿಟ್ಟು ಮೇಲೆ ಬರುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಲೇ ಬೇಕು. ಕೌಚಿ ಮಗುಚಿ ಬೇಯಿಸಬೇಕು. ಉರಿ ಜಾಸ್ತಿಯಾದರೆ ಜಿಲೇಬಿ ಗರಿಗರಿಯಾಗುವುದಿಲ್ಲ. 
೪. ಇನ್ನು ಜಿಲೇಬಿ ಬಿಡುವ ಕಲೆ... ನಿಮ್ಮ ಹಣೆಬರಹದಲ್ಲಿ ಹೇಗಿದೆಯೋ ಯಾರಿಗ್ಗೊತ್ತು..:) ಮೊದಮೊದಲು ಸಕಲೆಂಟು ಜಾತಿಯ ಜೀವರಾಶಿಗಳ ಉಗಮವಾಗಿ ಸಮುದ್ರ ಮಥನದಲ್ಲಿ ಕೊನೆಯಲ್ಲಿ ಅಮೃತ ದೊರಕಿದಂತೆ ನಾಲ್ಕಾರು ಪ್ರಯೋಗಗಳ ಬಳಿಕ ಒಂದು ಶೈಲಿ ನಿಮಗೆ ಒಲಿಯಬಹುದು...  :) ನಾನೂ ಇನ್ನೂ ಪ್ರಾಕ್ಟೀಸ್ ಹಂತದಲ್ಲಿಯೇ ಇದ್ದೇನೆ.  ಕಾಲಾಂತರದಲ್ಲಿ ಸುಧಾರಣೆ ಆಗಬಹುದೆಂಬ ಬಹುದೊಡ್ಡ ನಂಬಿಕೆಯೊಂದಿಗೆ ..:)

ನನ್ನದು ಟ್ರಯಲ್ ಅಂಡ್ ಎರರ್ ಪದ್ಧತಿ ...  ಹಾಗಾಗಿ ನನ್ನ ಜಿಲೇಬಿಗೆ ಇನ್ನೂ ಉತ್ತಮ ತರಗತಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ  ಅಗತ್ಯ ಇರಬಹುದು...  ಇಲ್ಲಿರುವ ಜಿಲೇಬಿ ಪಂಡಿತರುಗಳು ಹೆಚ್ಚಿನ ಮಾಹಿತಿ ಕೊಡುತ್ತಾರೆಂದು ಭಾವಿಸುತ್ತಾ ಈ ರಗಳೆಯನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳು .

Wednesday, June 19, 2013

ಮಾವನವರ ಚಿತ್ರ .

ಇದು ನಾನು ರಚಿಸಿದ ನನ್ನ ಮಾವನವರ ಚಿತ್ರ . ಅವರು ನಮ್ಮನ್ನಗಲಿ ಮೂರು ವರ್ಷಗಳ ಮೇಲಾಯ್ತು.  ಬದುಕಿದ್ದಾಗ ಅನೇಕ ಸಲ ಹೇಳಿದ್ದರು.   ''ವಿಜಯ, ನನ್ನದೊಂದು ಚಿತ್ರ ಬರಿ'' ಅಂತ. ನಾನು ಬರೆದಿರಲಿಲ್ಲ. ನನಗೆ ಇಷ್ಟರ ಮಟ್ಟಿಗೆ ಚಿತ್ರಿಸಲು ಬರುತ್ತೆ ಅನ್ನುವ ಕಲ್ಪನೆ ಆಗ  ನನಗಿರಲಿಲ್ಲ. ಆ ಅಳುಕಿನಿಂದ  'ಬರೀತೀನಿ, ಬರೀತೀನಿ' ಅನ್ನುತ್ತಾ ಕಾಲ ಕಳೆಯುತ್ತಿದ್ದಂತೆ  ಅವರೇ 'ಬರುತ್ತೀನಿ,' ಎನ್ನುತ್ತಾ ಎದ್ದು ಹೋದರು.  ನನಗೆ ಅದೊಂತರ ಗಿಲ್ಟ್ ಸದಾ ಕಾಡುತ್ತಲೇ ಇರುತ್ತದೆ. ಕೆಲವು ತಿಂಗಳುಗಳ ಕೆಳಗೆ  ಮನೆಯಲ್ಲಿ  ಮದುವೆ  ಸಮಾರಂಭವಿತ್ತು. ಆ ಸಮಯದಲ್ಲಿ   ಈ ಚಿತ್ರ ಬರೆದು ಕಟ್ಟು ಹಾಕಿಸಿ ಗೋಡೆಗೆ ನೇತು ಹಾಕಿದೆ.  ಮಾವ ಇದ್ದಿದ್ದರೆ ತುಂಬಾ ಸಂತಸ ಪಡುತ್ತಿದ್ದರು.




ಚಿತ್ರ ಬರೆದಾದ ತಕ್ಷಣ ಸ್ಕ್ಯಾನ್ ಮಾಡದೇ   ಗಡಿಬಿಡಿಯಲ್ಲಿ ಫ್ರೇಮ್ ಹಾಕಿಸಿ ಊರಿಗೆ  ಕಳಿಸಿಯಾಯ್ತು . ನಂತರ ಫೋಟೋ ತೆಗೆದು ಇಲ್ಲಿ ಹಾಕಿದ್ದು.  
ಮಾವ



ವಂದನೆಗಳು


Wednesday, April 3, 2013

ಬೇರಿನಲ್ಲೇನಿದೆ ಮಹಾ..!!

ಬಸ್ಸಿಳಿದು ಮನೆಗೆ ಬರುವ ದಾರಿಯಲ್ಲಿ  ಅಪ್ಪಯ್ಯನ ಜೊತೆ ಹೆಜ್ಜೆ ಹಾಕುವುದೆಂದರೆ ಅದು ಓಟಕ್ಕೆ ಸಮ.ದಾಪುಗಾಲಿಡುತ್ತಾ ಹೋಗುತ್ತಿರುವ  ಅಪ್ಪಯ್ಯನನ್ನು  ರಸ್ತೆಯ ಪಕ್ಕದ ಇಳಿಜಾರಿನ ದರೆಯಲ್ಲಿ ಚಾಚಿಕೊಂಡಿರುವ ಒಣ  ಮರದ ಬೇರೊಂದು ತಡೆದು ನಿಲ್ಲಿಸಿಬಿಡುತ್ತಿತ್ತು.    ನಾನು  ಓಡುತ್ತಾ  ಬಂದು ''ಯಂತಾ ಅಪ್ಯಾ ...'' ಎನ್ನುವ ಹೊತ್ತಿಗೆ ಅಪ್ಪಯ್ಯನ ತಲೆಯಲ್ಲೊಂದು ಆಕಾರ ಕುಣಿಯುತ್ತಿರುತ್ತಿತ್ತು. ''ಈ ಬೇರು ನೋಡಿದ್ಯಾ..  ಯಂತ್ ಕಂಡಂಗೆ  ಕಾಣ್ತು  ಹೇಳು ನೋಣ.....'' ಎನ್ನುತ್ತಾ ನಮ್ಮ ಕಲಾಪ್ರಜ್ನೆಗೆ ಸವಾಲು ಹಾಕುತ್ತಿದ್ದ. ಬೇರಿಗೆ ಮೊದಲ ಸಾಮ್ಯತೆ ಹಾವಾಗಿದ್ದರಿಂದ ''ಹಾವು ಮಾಡ್ಳಕ್ಕನಾ ಇದ್ರಲ್ಲಿ,?'' ಎನ್ನುತ್ತಾ  ನಾನೂ  ಅದರ ಹಾವ ಭಾವ ಪರಿಶೀಲಿಸುತ್ತಿದ್ದೆ. ''ಆನೆ ಸೊಂಡ್ಲಿದ್ದಂಗೆ ಇಲ್ಯನೇ,'' ಎನ್ನುತ್ತಾ ಅಪ್ಪಯ್ಯ  ''ಬಾ ಹೋಪನ''ಎನ್ನುತ್ತಾ ಕರೆದೊಯ್ಯುತ್ತಿದ್ದ. ಸಾಯಂಕಾಲದ ಹೊತ್ತಿಗೋ, ಮರುದಿನವೋ ಕತ್ತಿ  ತಂದು ಅದನ್ನು ನಿಧಾನಕ್ಕೆ ಬಿಡಿಸಿಕೊಂಡು ಮನೆಗೆ ತಂದು ಬಿಸಿನೀರಲ್ಲಿ ನೆನೆಸಿಟ್ಟು ಅದರ ತೊಗಟೆ ಬಿಡಿಸುವ ಯತ್ನದಲ್ಲಿರುತ್ತಿದ್ದ.ಅದನ್ನು ಒಣಗಿಸಿ ಅದನ್ನು ತಿದ್ದಿ ತೀಡಿ,  ಮರಳು ಪೇಪರ್ ಹಾಕಿ ಉಜ್ಜಿ, ಅದಕ್ಕೆ ಪಾಲಿಷ್  ಹಾಕಿ  ಅದರ ಅಸ್ಪಷ್ಟ ರೂಪಕ್ಕೊಂದು  ಸುಂದರ ರೂಪವನ್ನು ತೆರೆದಿಡುತ್ತಿದ್ದ. 

 ಅಪ್ಪಯ್ಯನ ಈ ಕಾಷ್ಠ ಶಿಲ್ಪದ ಪ್ರೇಮ ಬೆಳೆಯಲು ಪ್ರಾರಂಭವಾಗಿದ್ದು ಸುಮಾರು ಅವನ ಮಧ್ಯ ವಯಸ್ಸಿನ ನಂತರ.  ನಮಗೆಲ್ಲಾ ಪಾಠ ಕಲಿಸಿದ ನಮ್ಮೂರ ಪ್ರಾಥಮಿಕ ಶಾಲೆಯ ಮೇಷ್ಟರು   ಈ ರೀತಿಯ ಬೇರು ನಾರುಗಳ ಶಿಲ್ಪಗಳನ್ನು ಮಾಡುವ ಹವ್ಯಾಸದವರಾಗಿದ್ದರು. ಅಪ್ಪಯ್ಯನಿಗೆ ಯಾವುದನ್ನಾದರೂ ಮಾಡಬೇಕೆಂದು  ತಲೆಗೆ ಹೊಕ್ಕಿತೆಂದರೆ ಶತಾಯ ಗತಾಯ ಅದನ್ನು ಮಾಡಿಯೇ ಸಿದ್ಧ..  ಹೀಗೆ ಸುಮ್ಮನೆ ಯಾವುದೋ ಬೇರೊಂದನ್ನು ತಂದು ಅದನ್ನು ಕೆತ್ತಿ ಹಾವಿನ ರೂಪ ಕೊಟ್ಟ.  ಅಲ್ಲಿಂದ  ದಿನಗಳೆದಂತೆ ಅಪ್ಪಯ್ಯನ ಆಸಕ್ತಿ ಹೆಚ್ಚಾಗುತ್ತಲೇ ಹೊಯಿತು. ಒಂದಾದ ಮೇಲೊಂದರಂತೆ , ಕಂಡ ಕಂಡ ಒಣ ಮರಗಳನ್ನೆಲ್ಲಾ ಪರಿಶೀಲಿಸಿ ಬೇರು ಹುಡುಕುವುದೂ,   ಅದಕ್ಕೊಂದು ರೂಪ ಕೊಡುವುದೂ ನಿತ್ಯದ ಕೆಲಸವಾಯಿತು. ಅದಕ್ಕೆಂದೇ ಚಿಕ್ಕ ದೊಡ್ಡ ಚಾಣ, ಉಳಿ, ಈ ತರದ ಹತಾರಗಳನ್ನೆಲ್ಲಾ ಕೊಂಡು ತಂದು  ಮಧ್ಯ ರಾತ್ರಿಯ ವರೆಗೂ ಕೆತ್ತಿ ಉಜ್ಜಿ  ತಿರುಗಿಸಿ ಮುರುಗಿಸಿ ನೋಡುತ್ತಾ ಮನಸ್ಸಿನಲ್ಲಿಯೇ ಸಮಾಧಾನ ಪಡುತ್ತಿದ್ದ.    ನಾವೂ ಅಪ್ಪಯ್ಯನ ಪಕ್ಕ ಕುಕ್ಕರುಗಾಲಲ್ಲಿ  ಕುಳಿತುಕೊಂಡು  ಈ ಕೆಲಸಗಳನ್ನೆಲ್ಲಾ ನೋಡುತ್ತಿದ್ದೆವು. ಮೊದಮೊದಲಿಗೆ ಅದೇನು ಆಕಾರ ತಳೆಯುತ್ತದೆ ಅನ್ನುವುದು ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ.  ಇದು ಅದರ ಹಾಗೆ ಕಾಣುತ್ತೆ, ಇದರ ಹಾಗೆ ಕಾಣುತ್ತೆ ಅನ್ನುತ್ತಾ ಸುಳ್ಳು ಸುಳ್ಳೇ  ಲೆಕ್ಕಾಚಾರ  ಹಾಕುತ್ತಿದ್ದೆವು.ಕೊನೆ ಕೊನೆಗೆ ರೂಪ ಸ್ಪಷ್ಟವಾಗುತ್ತಾ ಬಂದಂತೆ 'ಹೌದಲ್ವಾ, ನಮಗೆ ಗೊತ್ತೇ ಆಗ್ಲಿಲ್ಲ 'ಅನ್ನುತ್ತಾ ಪೆಚ್ಚುನಗು ಬೀರುತ್ತಿದ್ದೆವು.   ಕಲಾವಿದನಿಗಷ್ಟೇ ಗೊತ್ತು ಕಲೆಯ ಮರ್ಮ..!  ಸುಮ್ಮನೇ  ನೋಡಿದರೆ ಈ ಬೇರಿನಲ್ಲೇನಿದೆ  ಮಹಾ ಅನ್ನಿಸಿಬಿಡುತ್ತೆ..  ಬೇರು ಹುಡುಕಿದ್ದು, ಅದಕ್ಕೆ  ಸಂಸ್ಕಾರ ಕೊಟ್ಟಿದ್ದು,    ಕೊನೆಗೆ  ಕಲ್ಪನೆಗೆ ತಕ್ಕ ರೂಪು ತಾಳಲು ಮಾಡಿದ  ಶತಪ್ರಯತ್ನ,  ಇವೆಲ್ಲದರ ಕಥೆ  ಅಪ್ಪಯ್ಯನ ಬಾಯಲ್ಲೇ ಕೇಳಲು  ಚಂದ!


ಕೆಲವು ರೂಪಾಂತರಗೊಂಡ  ಬೇರುಗಳು 

 ಹಾವುಗಳು  ಮತ್ತು ಮುಂಗುಸಿ .. 


 ಆನೆ ಮುಖ 

 ಕೆಂಬೂತ ಮತ್ತು ನವಿಲು 

 ಕ್ರಿಕೆಟ್ ಬೌಲರ್ 

 ಪೀರ್ ಸಾಬ್ 



 ಮತ್ತು ಮಹಮ್ಮದ್ ಸಾಬ್ 

 ನರ್ತಕಿ 


    ಅಪ್ಪಯ್ಯ ಮತ್ತು ಅವನ  ಕಾಷ್ಠ ಶಿಲ್ಪಗಳನ್ನು ಒತ್ತಾಯಪೂರ್ವಕವಾಗಿ ಚಿತ್ರಿಸಿದ್ದು.. [ ಈಗ ಯಂಗೆ ಪುರ್ಸೋತ್ತಿಲ್ಲೇ,  ಕಡಿಗೆ  ಫೋಟೋ ತೆಗಿಲಕ್ಕು  ಎನ್ನುವ ಅಪ್ಪಯ್ಯನನ್ನು ಹಿಡಿದು ಕೂರಿಸಿದ್ದು  ಹೀಗೆ ...:)   ] 


ಈಗೀಗ ಈ ಬೇರುಕೆತ್ತುವ ಕೆಲಸ  ಸ್ವಲ್ಪ ಕಡಿಮೆಯಾಗಿದೆ. ವಯಸ್ಸಿನ ಕಾರಣದಿಂದ ಹಾಗೂ ಆರೋಗ್ಯದ ಕಾರಣದಿಂದ ತುಂಬಾ ಹೊತ್ತು ಕುಳಿತುಕೊಳ್ಳಲು ಕಷ್ಟ .  ಆದರೂ  ಊರಿಗೆ  ಹೋದಾಗೆಲ್ಲಾ, ''ಇದೊಂದು ಹೊಸಾದು ನೋಡಿದ್ಯನೇ,'' ಅನ್ನುತ್ತಾ ಹೊಸದೊಂದು ಆಕೃತಿಯನ್ನು ತೋರಿಸುತ್ತಾನೆ ಅಪ್ಪಯ್ಯ..!

ವಂದನೆಗಳು

 . 

Monday, September 10, 2012

ಗೋಡೆ ಮೇಲಿನ ಚಿತ್ತಾರಗಳು.


 ನಮ್ಮ ಮನೆಗೆ ಯಾರಾದರೂ  ನೆಂಟರು ಬರುತ್ತಾರೆಂದು ಗೊತ್ತಾದ ಹಿಂದಿನ ದಿನ ನಾವು ಮನೆಗೆ ಬಣ್ಣ ಹೊಡೆಸುವುದರ  ಬಗ್ಗೆ  ಚರ್ಚಿಸುತ್ತೇವೆ. ಮನೆಗೆ ಕಾಲಿಟ್ಟ ಪ್ರತಿ ನೆಂಟರೂ ''ಓಹ್ಹೋ .. ಗೋಡೆಯ ತುಂಬಾ ಬರೆದು ಮುಗಿಸಿದ್ದಾನೆ.. ಮಗರಾಯ,'' ಎನ್ನುತ್ತಾ ದೇಶಾವರೀ ನಗೆ ಬೀರುತ್ತಾರೆ. ನೀವೇನಾದರೂ  ಬಂದು ಸೋಫಾದ ಮೇಲೆ ಕೂತು ಎದುರಿನ ಗೋಡೆಯನ್ನು ಸಹಜವಾಗಿ ದಿಟ್ಟಿಸಿದಿರೋ  ನೀವು ಮೂರ್ಚೆಹೊಗುತ್ತೀರಿ. ಎದುರಿಗೆ ಅಷ್ಟೂ ಹಲ್ಲುಗಳನ್ನೂ ಕಿರಿದು ಹೆದರಿಸುತ್ತಿರುವ ದೊಡ್ಡ ಬಾಯಿಯ ರಾಕ್ಷಸನಿದ್ದಾನೆ.  ರಾಕ್ಷಸನ ಚಿತ್ರವಿದೆ! ಶಿಶಿರನ ಕರ ನೈಪುಣ್ಯ!




ಸುಮಾರು ಅವನಿಗೆ ಎರಡು ವರ್ಷಗಳಿದ್ದಾಗ ನಾವೂ ಬಾಡಿಗೆ ಮನೆ ಬಿಟ್ಟು ಹೊಸದಾಗಿ ನಮ್ಮದೇ ಮನೆ ಕಟ್ಟಿಸಿಕೊಂಡು ಚಂದದ ಬಣ್ಣ ಹುಡುಕಿ ಹೊಡೆಸಿಕೊಂಡು ಗೃಹ ಪ್ರವೇಶಿಸಿದೆವು.ಹೊಸಾ ಮನೆ, ಹೊಸ ಬಣ್ಣ, ನಮ್ಮ ಟೇಸ್ಟಿಗೆ ನಾವೇ ಮೆಚ್ಚಿಕೊಳ್ಳುತ್ತಾ ಇರುವ ಒಂದು ದಿನ ನಮ್ಮವರು ಸ್ನಾನ ಮುಗಿಸಿ ಹೊರ ಬಂದವರೇ ಅತ್ಯಾಶ್ಚರ್ಯಕರವಾದ ಧ್ವನಿಯಲ್ಲಿ ನನ್ನನ್ನು ಕರೆದರು, 'ನೋಡಿಲ್ಲಿ ಎಷ್ಟ್ ಚನಾಗಿ ಬರೆದಿದ್ದಾನೆ,'  ಎನ್ನುತ್ತಾ! ನಾನಾದರೂ ಕೈಯಲ್ಲಿ ದೋಸೆ ಸೌಟನ್ನು ಹಿಡಿದುಕೊಂಡು ಬೆಡ್ ರೂಮಿಗೆ ಓಡಿದೆ. ನಮ್ಮವರು ಮುಖದಲ್ಲಿ ಸಾವಿರ ಕ್ಯಾಂಡಲ್ ಲೈಟ್  ಬೀರುತ್ತಾ, ಹಿಗ್ಗುತ್ತಾ ನಿಂತಿದ್ದು ಕಾಣಿಸಿ ಅವರ ದೃಷ್ಟಿಯನ್ನು ಹಿಂಬಾಲಿಸಿದರೆ ಅಲ್ಲಿ ಕಾಣಿಸಿತು. ABCD ಎನ್ನುವ ಹೊಳೆಯುವ ಅಕ್ಷರಗಳು.  ಮಗ ಇಂಜಿನಿಯರೋ, ಡಾಕ್ಟರೋ ಆದನೇನೋ ಎನ್ನುವ ಸಂಭ್ರಮದಲ್ಲಿ ಬರೆದ ಅಕ್ಷರಗಳನ್ನು ನೋಡುತ್ತಿದ್ದಂತೆ ಒಮ್ಮೆಲೇ ಉಸಿರು ಅರ್ಧವಾಯಿತು! ಬೆಡ್ ರೂಮಿನ ಗೋಡೆಯ ಮೇಲೆ ಕ್ರೆಯಾನ್ಸ್ ನಿಂದ ಮುದ್ದಾದ ಅಕ್ಷರಗಳು ನಳ ನಳಿಸುತ್ತಿದ್ದವು!  ''ಪುಟ್ಟಾ ಗೋಡೆಯ ಮೇಲೆ ಬರೀ ಬಾರದು,'' ಎನ್ನುತ್ತಾ ನಾನಾದರೂ ಗೋಡೆ ಹಾಳಾಯಿತೆಂದು  ತೀವ್ರವಾದ ಸಂತಾಪದಿಂದ ಕೈಯಲ್ಲಿರುವ ಕ್ರೆಯಾನ್ಸ್ ಕಸಿದು ಬಚ್ಚಿಟ್ಟೆ. ಮಗಳಿಗೆ ''ಕಂಡ ಕಂಡಲ್ಲಿ ಪೆನ್ಸಿಲ್ಲು, ಕ್ರೆಯಾನ್ಸು ಒಗೆದರೆ ನೋಡು,'' ಎನ್ನುತ್ತಾ ಸುಮ್ಮನೆ ಅವಳಿಗೆ ಜೋರು ಮಾಡಿದೆ.ನನ್ನವರು ಮಾತ್ರಾ ಗೋಡೆಯ ಮೇಲೆ ಬರೆದ ಅನ್ನುವುದಕ್ಕಿಂತ ಎಷ್ಟು ಚನ್ನಾಗಿ ಬರೆದಿದ್ದಾನೆ, ಅನ್ನುವ ಆನಂದಾನುಭೂತಿಯಿಂದ ಹೊರಬಂದಂತೆ ಕಾಣಿಸಲಿಲ್ಲ.ನಾನು   ಇವರ ಹಳೆ ಬನಿಯನ್ನನ್ನು ನೆನೆಸಿ    ಹಿಂಡಿ ಬರೆದದ್ದನ್ನು  ಮೆಲ್ಲಗೆ ಒರೆಸಿ ಅಳಿಸಲು  ಶುರು ಮಾಡಿದೆ.
 ಅವನು ಬರೆದಂತೆಲ್ಲಾ ನನ್ನದು ಒರೆಸುವ ಕೆಲಸ. ಹೀಗೆ ಸುಮಾರು ದಿನ.




ಅವನಿಗೆ ಗೋಡೆಯ ಮೇಲೆ ಬರೆಯುವ ಆಸೆ ಅದೆಷ್ಟು ತೀವ್ರವೆಂದರೆ ಎಲ್ಲಿ ಏನಾದರೂ ಚಿಕ್ಕ ಪೆನ್ಸಿಲ್ಲೋ ಕ್ರೆಯಾನ್ಸೋ ಸಿಕ್ಕರೆ ಸಾಕು ಬಚ್ಚಿಟ್ಟುಕೊಂಡು ಬರೆಯುತ್ತಿದ್ದ. ಮೊದ  ಮೊದಲು ಅಕ್ಷರಗಳು, ಸೊನ್ನೆ ಸುತ್ತುವುದು,ಗೆರೆ ಎಳೆಯುವುದು ಹೀಗೆ. ಪ್ರಿ ಕೇಜಿಗೆ ಸೇರಿಸಿದ ಮೇಲೆ ಅದು ಕಥಾರೂಪಗಳನ್ನು ಪಡೆಯಲು ಶುರುವಾಯಿತು. ಆಗವನಿಗೆ ಯಕ್ಷಗಾನವೆಂದರೆ ಸಿಕ್ಕಾಪಟ್ಟೆ ಆಸಕ್ತಿ. ಅದರ ಕಿರೀಟಗಳನ್ನು ಅಪ್ಪನಿಂದ ಪೇಪರ್ ಮೇಲೆ ಬರೆಸಿಕೊಳ್ಳುತ್ತಿದ್ದ. ತದನಂತರ ಗೋಡೆಯ ಮೇಲೆ ನಾನಾ ತರದ ಕಿರೀಟಗಳು.  ಆದಿಶೇಷನ ಚಿತ್ರ,  ಕೆಳಗೆ ವಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಎತ್ತಿಕೊಂಡು ಹೋಗುವಂತೆ. ಜೊತೆಗೆ ಅವನ ಸಂಗಡಿಗರು ಒಂದಷ್ಟು ಚಿಕ್ಕ, ದೊಡ್ಡ ಹಾವುಗಳು.ಉದ್ದ ಹಾವು ಬರೆಯುತ್ತೀನೆಂದು ಚೇರ್ ಹತ್ತಿ ಮೇಲಿನಿಂದ ಕೆಳವರೆಗೆ ಬರೆದಿದ್ದು.   ಶಾಲೆಯಲ್ಲಿ ಪಾಠ ಮಾಡಿದಂತೆಲ್ಲಾ ಅದು ನಮ್ಮ ಮನೆಯ ಗೋಡೆಯ ಮೇಲೆ.   ಸೋಲಾರ್ ಸಿಸ್ಟಂ,  ಅದರಲ್ಲಿ ಸೂರ್ಯ ಮತ್ತು ಚಂದ್ರ  ಜೊತೆ ಜೊತೆಯಲ್ಲೇ ಇರುತ್ತಾರೆ! ಶನಿಗ್ರಹವಂತೂ ನೋಡಲು ಎರಡು ಕಣ್ಣು ಸಾಲದು. ಪರ್ಮನೆಂಟ್ ಮಾರ್ಕರ್ ಎಲ್ಲಿ ಸಿಕ್ಕಿತ್ತೋ ಏನೋ ಅದರಲ್ಲೇ ಬರೆದಿದ್ದ. ಬಿಲ್ಲು ಬಾಣ ಬತ್ತಳಿಕೆಗಳ ಚಿತ್ರವಂತೂ ಹೇರಳವಾಗಿ ಕಾಣ ಸಿಗುತ್ತವೆ. ಅಷ್ಟೊತ್ತಿಗೆ ಯಕ್ಷಗಾನದ ಖಯಾಲಿ ಕಡಿಮೆಯಾಗಿ ಕಾರ್ಟೂನುಗಳ ಮೇಲೆ ತಲೆ ಹಾಯ ತೊಡಗಿತು. ಬೆನ್ ಟೆನ್ ನ ಅಷ್ಟೂ ಕ್ಯಾರೆಕ್ಟರ್ಗಳೂ, ಸ್ಪೈಡರ್ ಮ್ಯಾನ್,   ಬ್ಯಾಟ್ ಮಾನ್, ಆ ಮ್ಯಾನ್, ಈ ಮ್ಯಾನ್ ಅನ್ನುವ ಹೊತ್ತಿಗೆ ಒರೆಸಿ ಒರೆಸಿ ನಾನು ನಿಶ್ಯಕ್ತಿ ಮ್ಯಾನು !





ಅವನು ಬರೆದಂತೆಲ್ಲಾ ಹಿಂದೆ ಹಿಂದೆ ನಾನು ಖಡ್ಗವನ್ನು ಹಿರಿದು  ದಕ್ಷಯಜ್ನವನ್ನು ಧ್ವಂಸ ಮಾಡುವ ವೀರಭದ್ರನಂತೆ ಇವರ ಹಳೆ ಬನಿಯನ್ ಹಿಡಿದು ಎಲ್ಲವನ್ನೂ ಒರೆಸುತ್ತಾ ವೀರಗಾಸೆ ಶುರುಮಾಡಿದೆ. ಒರೆಸುವಾಗ ನನಗೆ ತೀವ್ರವಾಗಿ ಬೇಜಾರಾಗುತ್ತಿತ್ತು. 'ಎಷ್ಟ್ ಚನ್ನಾಗ್ ಬರ್ದಿದಾನೆ. ಪೇಪರ್ ಮೇಲೆ ಬರೆಯಕ್ಕೆ  ಏನ್ ಧಾಡಿ ಇದಕ್ಕೆ,'  ಎನ್ನುತ್ತಾ  ಬಹಳ  ಸಂತಾಪದಲ್ಲಿಯೇ ಒರೆಸುತ್ತಿದ್ದೆ. ನಾನು ಒರೆಸಿದ್ದರಿಂದ ಅವನಿಗೆ ತುಸುವಾದರೂ ಬೇಜಾರಿಲ್ಲದೆ ನಾನು ಮುಂದೆ ಮುಂದೆ ಹೋದಂತೆ ಹಿಂದೆ ಹಿಂದೆ ಬರುತ್ತಿದ್ದ  ಹೊಸ ಚಿತ್ರಗಳ ಸರಣಿಯೊಂದಿಗೆ. ಇವರ ತೂತಾದ ಬನಿಯನ್ ಗಳೆಲ್ಲಾ ಹರಿದು ಚಿಂದಿಯಾದವು. ಈಗ ಸ್ವಲ್ಪ ಮಾಸಲಾದ ಬನಿಯನ್ನುಗಳನ್ನು ನಾನು ನನ್ನ ಗೋಡೆ ವರೆಸುವ ಬಟ್ಟೆಯನ್ನಾಗಿ ಮಾಡಿಕೊಳ್ಳುವ ಹೊತ್ತಿಗೆ ಇವರು ಹೌಹಾರ ತೊಡಗಿದರು. ಬೇರೆ ಬಣ್ಣದ  ಬಟ್ಟೆಯಾದರೆ ಬಟ್ಟೆಯ ಬಣ್ಣ ಮತ್ತೆ ಗೋಡೆಗೆ ಮೆತ್ತುವುದಿಲ್ಲವೇ..? ಅಂತೆಯೇ ನನ್ನ ಪ್ಲಾನು. ನಾನು ಒರೆಸಿದ ಪರಿಣಾಮಕ್ಕೆ ಗೋಡೆ ಅಲ್ಲಲ್ಲಿ ಬಣ್ಣ ಬಿಟ್ಟುಕೊಂಡು ಮತ್ತಷ್ಟು ವಿಕಾರವಾಗಿ ಕಾಣಿಸತೊಡಗಿತು.




ಮೆತ್ತಗೆ ಹೇಳಿದರಿಲ್ಲ, ಜೋರು ಮಾಡಿ ಹೇಳಿದರಿಲ್ಲ. ಎರಡು ಕೊಟ್ಟು ಹೇಳಿದರೂ ಊಹ್ಞೂ .. ಗೋಡೆಯ ಮೇಲೆ ಬರೆಯುವುದನ್ನು ತಪ್ಪಿಸಲಾಗಲೇ ಇಲ್ಲ. ಡ್ರಾಯಿಂಗ್ ಪುಸ್ತಕವಾಯ್ತು, ಬಿಳೀ ಬೋರ್ಡ್ ಆಯ್ತು. ಅದೆಲ್ಲಾ ಬೋರಾಗಿ ಮತ್ತೆ ಗೋಡೆಯೇ ಬೇಕಾಯ್ತು.   ಮತ್ತೆ ಬಂದವರೆಲ್ಲಾ ಹೇಳತೊಡಗಿದರು. ''ಬರ್ಕೊಳ್ಳಿ ಬಿಡಿ.  ಆಮೇಲೆ ಒಂದೇ ಸಲ ಬಣ್ಣ ಹೊಡೆಸಿದರಾಯ್ತು..'' ಎಂದು ಸಮಾಧಾನ ಪಡಿಸಿದರು. ಗೆಳತಿಯೊಬ್ಬಳು, ''ನೀವು ಎಲ್ಲಾ ಹುಟ್ಟಾ ಕಲಾವಿದರಲ್ಲವೇ..? ಬರ್ಕೊಳ್ಳಿ ಬಿಡೇ,''  ನನಗೇ  ಅಂದಳು. ಬಿಟ್ಟರೂ ಸೈ, ಬಿಡದಿದ್ದರೂ ಸೈ.


ಅಷ್ಟೊತ್ತಿಗೆ ಸುಧಾದಲ್ಲಿ ಯಾರೋ ಪುಣ್ಯಾತ್ಮನ ಬಗೆಗೆ ಬರೆಯಲಾಗಿತ್ತು.ಹೆಸರು ಮರೆತೆ, ಆತ ತುಂಬಾ ಕ್ರಿಯೇಟಿವ್ ವ್ಯಕ್ತಿ. ಆತನೂ ಗೋಡೆಯ ಮೇಲೆ ಬರೆಯುತ್ತಿದ್ದನಂತೆ! ಮತ್ತು ಮಕ್ಕಳಿಗೆ ಗೋಡೆಯ ಮೇಲೆ ಬರೆಯಲು ಬಿಡಿ, ಅವರ ಕಲ್ಪನಾ ಶಕ್ತಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಎಂದೆಲ್ಲಾ ಸಂದೇಶ ಕೊಟ್ಟಿದ್ದ. ಅದನ್ನು ಓದಿದ ಮೇಲೆ ನಮಗೆ ಮತ್ತಷ್ಟು ಸಮಾಧಾನವಾಯಿತು. ಪ್ಹಾರಿನ್ನಿನವರು ಹೇಳಿದ್ದಾರೆಂದರೆ ಅದು ಸರಿಯೇ ಸರಿ, ಎನ್ನುತ್ತಾ ಅಲ್ಲಿಂದ ನನ್ನ ಹರಕು ಬನಿಯನ್ ಹಿಡಿದುಕೊಂಡು ಮಾಡುವ  ಯಕ್ಷಗಾನ, ತಾಳ ಮದ್ದಲೆ, ವೀರ ಗಾಸೆ ಎಲ್ಲವನ್ನೂ ಬಿಟ್ ಹಾಕಿ 'ಅಮ್ಮಾ ಬೋರು' ಅಂದರೆ 'ಅಲ್ಲೇ  ಗೋಡೆ ಮೇಲೆ ಏನಾರು ಬರೀ' ಅನ್ನುವಷ್ಟರ ಮಟ್ಟಿಗೆ ಒಳ್ಳೆಯವಳಾದೆ.

 ಈಗ ಗೋಡೆಯ ಮೇಲೆ ನಾನೇನಾದ್ರೂ ಬರೀಬೇಕಂದ್ರೂ  ಚೂರೂ ಜಾಗವಿಲ್ಲ! ಪಕ್ಕದ ಮನೆಗೆ ಹೋಗಿ ಸಖೇದಾಶ್ಚರ್ಯಗಳಿಂದ ಕೇಳುತ್ತಾನಂತೆ, 'ನಿಮ್ಮ ಮನೆಯಲ್ಲಿ ಗೋಡೆಯೆಲ್ಲಾ ಖಾಲಿ ಇದೆಯಲ್ಲಾ..?' ಅಂತ. ಆವತ್ತು ಅಪ್ಪನ ಹತ್ತಿರ ಹೇಳುತ್ತಿದ್ದ. ''ನನಗೂ ಹೆಲಿಕ್ಯಾಪ್ಟರಿಗೆ ಕೀ ಕೊಟ್ಟರೆ ಹಾರುವಂತೆ ಕೀ ಇದ್ದಿದ್ದರೆ ನಾನೂ ಹಾರಿಕೊಂಡು ಮನೆಯ ಸೀಲಿಂಗ್ ಮೇಲೆ ಬರೆಯುತ್ತಿದ್ದೆ,'' ಅಂತ. ಮಗನ ಈ ಘನಂಧಾರೀ ಪ್ಲಾನಿಗೆ ಇವರು ಬೆಚ್ಚಿಬಿದ್ದದ್ದು ಹೌದು.

ಮಕ್ಕಳ ಕಲ್ಪನೆಗಳನ್ನು ಹಿಂಬಾಲಿಸಿಕೊಂಡು ಹೋದರೆ ನಮಗಾದರೂ ಎಷ್ಟೊಂದು ಉಪಾಯಗಳು ಹೊಳೆದು ಬಿಡುತ್ತವೆ.  ಅವರನ್ನು ಇರುವಂತೆಯೇ ಬೆಳೆಯಲು  ಬಿಡಿ.  ಆ ಕಲ್ಪನೆಗಳನ್ನೆಲ್ಲಾ  ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ.

ಆವತ್ತು ಶಾಲೆಯಿಂದ ಬರುತ್ತಾ ಎದುರು ಮನೆ ಆಂಟಿಗೆ ಹೇಳುತ್ತಿದ್ದ. ''ಆಂಟೀ ನಂಗೆ ಫಸ್ಟ್ ಪ್ರೈಸು.. ಡ್ರಾಯಿಂಗ್ ಕಾಂಪಿಟೆಶನ್ ನಲ್ಲಿ.!'' ಮನೆಗೆ ಬಂದು ಪ್ರೈಸ್ ತೋರಿಸಿದ. ಒಂದು ಆರ್ಟ್  ಸೀಡಿ.ಡ್ರಾಯಿಂಗ್ ಬುಕ್, ಕಲರಿಂಗ್ ಪೆನ್ಸಿಲ್ಸ್ .     ನಾನು ಅಂತಾದರೂ ಬಿಡದೆ, ''ಎಲ್ಲರಿಗೂ ಕೊಟ್ರಾ ನಿನಗೊಂದೆ ಕೊಟ್ರಾ?'' ಕೇಳಿದೆ.  ಗೋಡೆಯ ಮೇಲೆ ಬರೆದದ್ದು ಬಿಟ್ರೆ ಉಳಿದಂತೆ ಅವನ ಸಾಮರ್ಥ್ಯ ನನಗೆ ಗೊತ್ತಿರಲಿಲ್ಲ!
 ''ನನಗೊಬ್ಬನಿಗೆ..'' ನನಗೆ ಅನುಮಾನ,  ನಾಲ್ಕಾರು ಬಾರಿ ಕೇಳಿದೆ, ''ಅಮ್ಮಾ ಎಷ್ಟು ಸಲ ಹೇಳಲಿ, ಪಸ್ಟು ಪ್ರೈಸನ್ನು  ಒಬ್ಬರಿಗೇ  ಕೊಡೋದು'' ಅಂದ. ನಾನು ಬಾಯಿ ಮುಚ್ಚಿಕೊಂಡೆ.
ಅವನಿಗೆ ಈಗೀಗ ನಾಚಿಕೆಯಾಗುತ್ತದೆ. ಯಾರಾದರೂ ನೆಂಟರು ಬಂದವರು ಸೀದಾ ಅವನಲ್ಲೇ ಕೇಳುತ್ತಾರೆ, ಅಕ್ಕನ ಗೆಳತಿಯರ ಮುಂದೆ ನಾಚಿಕೆ  ತುಸು ಜಾಸ್ತಿ.. ''ಅಮ್ಮಾ ಗೋಡೆಗೆ ಬಣ್ಣ ಹೊಡೆಸಿ'' ಅನ್ನುವ ರಾಗ ಶುರು ಮಾಡಿದ್ದಾನೆ.ನನಗೆ ಮಾತ್ರ ಇಷ್ಟವಿಲ್ಲ.


ನನಗೆ ಅವನ ಕಲ್ಪನೆಗಳನ್ನು ಒರೆಸಿ, ಅಳಿಸಿ  ಹಾಳು  ಮಾಡಿದ್ದಕ್ಕೆ ಬಹಳ ಬೇಜಾರಿದೆ.  ಒರೆಸಿದರೂ ಮತ್ತೆ ಮತ್ತೆ ಬರೆದು ಸ್ವಲ್ಪ ಮಟ್ಟಿಗೆ ನನ್ನ ತಪ್ಪಿತಸ್ತ ಭಾವವನ್ನು ಕಡಿಮೆ ಮಾಡಿದ್ದಾನೆ. ಅದಕ್ಕೆ ನಮಗೀಗ ಮನೆಗೆ ಬಣ್ಣ ಹೊಡೆಸಿದರೆ ಗೋಡೆಯ ತುಂಬಾ ಇರುವ  ಅವನ ಮುಗ್ಧತೆಯೆಲ್ಲಾ ಕಳೆದು ಹೋಗಿಬಿಡುತ್ತದಲ್ಲಾ ಅನ್ನುವ ಚಿಂತೆ.  ಮೊನ್ನೆ ಮೊನ್ನೆ ವರೆಗೂ ಬರೆದ.  ನಾಳೆಯೂ ಬರೆದರೆ  ಬರೆಯಲಿ ಬಿಡಿ. ನಿಮ್ಮ ಮಕ್ಕಳಿಗೂ ಬಿಟ್ಟು ಬಿಡಿ, ಬರೆದರೆ ಬರೆದುಕೊಳ್ಳಲಿ.



[ಅವನ ಗೋಡೆಯ ಮೇಲಿನ ಚಿತ್ರಗಳು ತುಂಬಾ ಮಬ್ಬು ಮಬ್ಬಾಗಿವೆ. ಅದಕ್ಕೆ ಅದರ ಪರಿಚಯ ನಿಮಗೆ ಇಲ್ಲ..:)]

ವಂದನೆಗಳು.

Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

Tuesday, June 12, 2012

ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಬಸ್ಸಿಗಾಗಿ ಕಾದು  ಕಾದು  ಸುಸ್ತಾಯಿತು. ಬೇಗ ಬೇಗ ಕೆಲಸ ಮುಗಿಸಿ ಇರುವ ಸ್ವಲ್ಪ  ಸಮಯದಲ್ಲಿ ಏನೋ ತರಲು  ಎಲ್ಲೋ  ಹೋಗಬೇಕಿತ್ತು. ಆಟೋ ಒಂದೂ ಸಿಗಲಿಲ್ಲ.  ಮೀಟರಿನ ಮೇಲೆ ಇಷ್ಟು ಎಕ್ಸಟ್ರಾ ಕೊಟ್ಟು   ಅವರನ್ನು ಓಲೈಸಿ ಹೋಗುವುದಕ್ಕಿಂತ ಬಸ್ಸೇ ಮೇಲು ಅಂದುಕೊಂಡು, ಆಟೋದವರ ಸೊಕ್ಕಿಳಿಸಲು   ಬಸ್ ಸ್ಟ್ಯಾಂಡ್ ಗೆ ಬಂದು ನೋಡಿದರೆ ನನಗೆ ಬೇಕಾದ ಬಸ್ಸೊಂದು ಬಿಟ್ಟು ಯಾವ್ಯಾವುದೋ ಎಲ್ಲೆಲ್ಲಿಗೋ ಹೋಗುವ ಬಸ್ಸುಗಳೆಲ್ಲ ಬರುತ್ತಿದ್ದವು ಹೋಗುತ್ತಿದ್ದವು. ಸುಮಾರು ಹೊತ್ತಾಯಿತು. ಸಮಯ ನೋಡಿಕೊಂಡೆ. ಬಸ್ ಸ್ಟ್ಯಾಂಡಿಗೆ  ಬಂದು ಇನ್ನೂ ಐದು ನಿಮಿಷವಾಗಿತ್ತು. ಥೋ,  ಅಷ್ಟರಲ್ಲಿ ನನಗೆ ಐದಾರು ಘಂಟೆಯೇ ಆದಂತಾಗಿತ್ತು.  ಕಾಯಲು ಸಹನೆಯೇ ಸಾಲುತ್ತಿಲ್ಲ ಈ ನಡುವೆ. ಇವರು ಆಟೋದಲ್ಲಿ  ಹೋಗು  ಅಂದರೂ ಕೇಳದೆ ಬಸ್ಸಿನಲ್ಲೇ ಹೋಗುತ್ತೇನೆ ಅಂತ ಜುಟ್ಟು  ಹಾರಿಸಿಕೊಂಡು ಬಂದಿದ್ದಕ್ಕೆ ಯಾಕೋ ಮರ್ಯಾದೆಯೇ ಸಿಗುತ್ತಿಲ್ಲ..!

ಶಾಲೆ ಕಾಲೇಜುಗಳಿಗೆ ಹೋಗುವಾಗ ಅದೆಷ್ಟು ಹೊತ್ತು ಬಸ್ಸಿಗಾಗಿ ಕಾಯುತ್ತಿದ್ದೆವು. ಬರೆದರೆ ದೊಡ್ಡ ಇತಿಹಾಸ ಪುಸ್ತಕವೇ  ಆಗುತ್ತದೆ.
ನಮ್ಮೂರಿಗೆ ಸಾಕಷ್ಟು ಬಸ್ಸುಗಳಿದ್ದರೂ  ಒಂದೂ ಸಮಯಕ್ಕೆ ಸರಿಯಾಗಿ ಬರುವ ನಿಷ್ಠೆ ತೋರುತ್ತಿರಲಿಲ್ಲ. ಕಟ್ ರೂಟು ಬೇರೆ. ಪ್ರತಿಯೊಬ್ಬರೂ ಮತ್ತೊಬ್ಬರನ್ನು  ''ಇವತ್ತು ಐದು ಘಂಟೆ ಹಂಸಗಾರು  ಬಸ್ಸು ಎಷ್ಟೊತ್ತಿಗೆ ಬರುತ್ತದೆ?'' ಎಂದೇ ಕೇಳುವುದು ರೂಢಿಯಾಗಿ ಹೋಗಿತ್ತು. ಆರು ಘಂಟೆ ಆರೂವರೆ, ಏಳು  ಹೀಗೆ ಬಸ್ಸಿನ ಸಮಯ ವ್ಯತ್ಯಾಸವಾಗುತ್ತಿತ್ತು. ಆ ಬಸ್ಸು ಕೆಲವೊಮ್ಮೆ ಬರುತ್ತಲೇ ಇರಲಿಲ್ಲ.  ಕುಮುಟಾದಿಂದ ಬರುವ ಬಸ್ಸು ಮಧ್ಯದಲ್ಲಿ ಎಲ್ಲಾದರೂ ಕೆಟ್ಟು ನಿಂತು ದೊಡ್ಡವರು ತಮ್ಮ  ಕವಳದ  ಬಾಯಿಯಲ್ಲಿ ''ಬಸ್ಸು ಇವತ್ತು ಅಲ್ಲೆಲ್ಲೋ ಬಾಳೆಬರೆ  ಘಾಟೀಲಿ  ಕರ ಹಾಕಿದ್ದಡಾ'' ಎಂದು ಆಕಾಶಕ್ಕೆ ಮಳೆಗರೆಯುತ್ತಿದ್ದರು.ಅದು  ಬಿಟ್ಟರೆ ಮತ್ತೆ ರಾತ್ರಿ ಒಂಬತ್ತರ ವರದಕ್ಕೆ ಕಾಯಬೇಕಿತ್ತು.ಹೆಚ್ಚಾಗಿ ಸಾಗರದ ಬಸ್ ಸ್ಟ್ಯಾಂಡ್ ನಲ್ಲಿ ಬಂಗಾರಿ ಭಟ್ಟರ ಮನೆ ಹೊರಗೆ ನಿಲ್ಲಲು  ಸ್ವಲ್ಪ ಜಾಗವಿತ್ತು. ಅಲ್ಲಿ ನಾವೆಲ್ಲಾ ಹೆಣ್ಣು ಮಕ್ಕಳು ನಿತ್ಕೊಂಡು ಕೂತ್ಕೊಂಡು ಬಸ್ ಸ್ಟ್ಯಾಂಡ್  ಕಾಯ್ಕೊಂಡು ಇರುತ್ತಿದ್ದೆವು.  ನೀರು ಪಾರು ಬೇಕಾದ್ರೆ ಅವ್ರ ಮನೆಯಲ್ಲೇ ಕೇಳಿ ಕುಡಿಯುವುದು. ಸೇವಾಸಾಗರಕ್ಕೆ ಹೋಗುವ ಚಿಳ್ಳೆ  ಪಿಳ್ಳೆಗಳಿಂದ  ಹಿಡಿದು ಕಾಲೇಜು ಕನ್ಯೆಯರ ವರೆಗೆ ಎಲ್ಲರೂ ಅಲ್ಲೇ  ಝಾಂಡಾ  ಊರುವುದು. ಅಜ್ಜಿ ಮನೆ ಅಂತ ಒಂದಿತ್ತು. ಅಲ್ಲೂ ಕೆಲವರು ಇರುತ್ತಿದ್ದರು.  ಇಲ್ಲಾ ಅಂದರೆ ಪೈ ಅಣ್ಣನ ಅಂಗಡಿ. ನಮ್ಮ ಶಾಲೆ ಕಾಲೇಜುಗಳ ಮಂಗಾಟ, ಕಕ್ರತನ, ಇನ್ನಿತರೇ ಕೆಲಸಕ್ಕೆ ಬರುವ, ಬಾರದ ಸುದ್ದಿಗಳೆಲ್ಲ ವಿನಿಮಯವಾಗುತ್ತಿದ್ದು ಅಲ್ಲೇ.  ಹೊತ್ತು ಕಳೆಯಲು ಹುಂಡಿ ಪದ, ಚುಕ್ಕಿ ಆಟ.ಕೆಲ ಸ್ಕೂಲ್ ಮಕ್ಕಳು ಪಾಪ ಅಲ್ಲೇ ತಮ್ಮ ಹೋಂ ವರ್ಕ್ ಮಾಡಿಕೊಳ್ಳುತ್ತಿದ್ದರು.ನಾನಂತೂ ಎಷ್ಟೊಂದು ಸಾಯಿಸುತೆ, ಉಷಾ ನವರತ್ನರಾಮ್ ತರದವರು ಬರೆದ ಪ್ರೇಮ ಕಾದಂಬರಿಗಳನ್ನೆಲ್ಲಾ ಅಲ್ಲೇ ಓದಿ ಅಲ್ಲೇ  ಮರೆಯುತ್ತಿದ್ದೆನೋ ಏನೋ..!  ಬಸ್ ಸ್ಟ್ಯಾಂಡಿನಲ್ಲಿ   ಲೈನ್ ಹೊಡೆಯುವ ಹುಡುಗರು ಬಂಗಾರಿ ಭಟ್ಟರ ಮನೆ  ಬಾಗಿಲಿಗೆ ಕಣ್ಣೋಟ ಎಸೆಯುತ್ತಾ, ಕ್ರಾಪು ತೀಡುತ್ತಾ ಪ್ಯಾಂಟು ಜೋಬಿನಲ್ಲೊಂದು ಕೈ ಹಾಕಿಕೊಂಡು ಬಸ್  ಸ್ಟ್ಯಾಂಡಿನಲ್ಲಿ ಮೇಲೆ ಕೆಳಗೆ ಓಡಾಡುತ್ತಿದ್ದರು. ಕೆಲ ತುಂಟ ಹುಡುಗಿಯರು ಕಣ್ಣು ಗೋಲಿಯನ್ನು  ಮೂಗಿನ ಪಕ್ಕಕ್ಕೆ ತಂದು ವಚ್ಗಣ್ಣು  ಮಾಡಿ  ಹೆದರಿಸುತ್ತಿದ್ದರು. ಅಂತೂ ನಮಗೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ.ಮಧ್ಯಾಹ್ನ ತಿಂದ ಒಣಕಲು ದೋಸೆಯೋ, ಅಥವಾ ಉಪ್ಪಿಟ್ಟೋ   ಹೊರತೂ ಹಸಿವಾದರೂ ನಾವ್ಯಾರೂ ಹಾಗೆಲ್ಲಾ ಹೋಟೆಲಿಗೆ ಹೋಗುತ್ತಿರಲಿಲ್ಲ.  ಯಾವಾಗಲಾದರೂ   ನಿಂಬೆ ಹುಳಿ  ಪೆಪ್ಪರಮೆಂಟು ಇಲ್ಲ  ಯಾರಾದರೂ ಉಪ್ಪಿಗೆ ಹಾಕಿದ ನೆಲ್ಲಿಕಾಯಿಗಳನ್ನು ಕೊಟ್ಟರೆ  ಬಾಯಲ್ಲಿ ಅಡಗಿಸಿ ಇಟ್ಟುಕೊಳ್ಳುವುದು. ಅಪರೂಪಕ್ಕೊಮ್ಮೆ ಐಸ್ ಕ್ಯಾಂಡಿಯನ್ನು ತಿನ್ನುತ್ತಿದ್ದೆವು. ಅಂತೂ ಬಸ್ಸು ಬರುವವರೆಗೆ ಅಲ್ಲೇ ಜೋತು ಬಿದ್ದಿರುತ್ತಿದ್ದೆವು. ನಮ್ಮೂರ ಬಸ್ಸಿಗೆ ಬರುವ ಗಂಡು ಮಕ್ಕಳೆಲ್ಲ ಬೇರೆ ಬಸ್ಸಿಗೆ ಹೋಗಿ ಮೂರು ಮೈಲು ನಡೆದುಕೊಂಡು ಮನೆಗೆ ಹೋಗಿಬಿಡುತ್ತಿದ್ದರು.   ಹೆಣ್ಣುಮಕ್ಕಳಿಗೆ ಹಾಗೆ  ಹೋಗಲು ಭಯ.



ಬೆಳಿಗ್ಗೆ ಕಾಲೇಜಿಗೆ ಹೋಗಲು  ಎಂಟೂವರೆ ಬಸ್ಸು ಹತ್ತಿದೊಡನೆಯೇ  ಸಾಯಂಕಾಲದ ಬಸ್ಸು ಬರುತ್ತಾ ..? ಇವತ್ತು ಯಾವ ಕಂಡಕ್ಟರು..? ಯಾವ ಡ್ರೈವರ್ರು..?  ಯಾವ ಯಾವ ಪೀರಿಯಡ್ಡು ಇದೆ..? ಯಾರ್ಯಾರು ಐದು ಘಂಟೆ ಬಸ್ಸಿಗೆ ಬರುವವರು..? ಎಲ್ಲಾ ತನಿಖೆ  ಶುರುವಾಗುತ್ತಿತ್ತು. ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು  ಕಾಯ್ಕೊಂಡು  ಮನೆಗೆ ಬರೋಕೆ ಅನ್ನುವಷ್ಟರ ಮಟ್ಟಿಗೆ ನಮ್ಮ  ಬಸ್ ಸ್ಟ್ಯಾಂಡ್  ಕಾವಲು ನಡೆಯುತ್ತಿತ್ತು...! ಇವತ್ತು ಬಸ್ಸು ಬಂದರೆ ಡ್ರೈವರಿಗೆ ಒಂದು ಕಾಯಿ ಒಡೆದು ಕೊಡುತ್ತೇನೆ ಎನ್ನುವ ತಲೆಹರಟೆ ಹರಕೆಗಳನ್ನೆಲ್ಲಾ ಹೊತ್ತು ಕೊಳ್ಳುತ್ತಿದ್ದೆವು. ಚಿಳ್ಳೆ ಪಿಳ್ಳೆಗಳ ಜೊತೆ ಸುಮ್ಮನೆ ಕೀಟಲೆ ಮಾಡುತ್ತಿದ್ದೆವು. ಯಾರಾದರೂ ಹೊಸ ಶೂ ಹಾಕಿಕೊಂಡು ಬಂದರೆ '' ಎರಡೂ  ಕಾಲಿಗೂ ಒಂದೇ ತರದ್ದು ಶೂ ಹಾಕ್ಕೊಂಡು ಬಂದಿದ್ದೀಯಲ್ಲ.  ಎರಡಿದೆ ಆಲ್ವಾ ನನಗೊಂದು ಕೊಡು.ಆಗ್ಲಿ ಕೊಡಾ.. ಪ್ಲೀಸ್ ಕೊಡಾ.. '' ಅಂತಾ ರೇಗಿಸುತ್ತಿದ್ದೆವು.ಕೈ ತುಂಬಾ ಬಳೆ  ಹಾಕಿಕೊಂಡು ಬಂದವರನ್ನು ನೋಡಿ,'' ಮಾರಾಯ್ತಿ ಯಾವ  ಕಡೆಯಿಂದ ಇಷ್ಟು  ಬಳೆ  ಸುರುಗಿಕೊಂಡಿದ್ದೀಯಾ ಅಂತಾನೂ  ಗೊತ್ತಾಗ್ತಿಲ್ವೇ.. ..ಕನ್ಫ್ಯೂಸ್ ಆಗ್ತಿದೆ ಕಣೆ ''ಅಂತಾ ಸುಳ್ಳು ಸುಳ್ಳೇ ಆಶ್ಚರ್ಯ ಪಡುತ್ತಿದ್ದೆವು. ಹೇಗಾದರೂ ಮೂರು ತಾಸು ಸಮಯ ಕೊಲ್ಲಬೇಕಿತ್ತಲ್ಲ.   ಸಮಯಕ್ಕೆ ಸರಿಯಾಗಿ ಅಪರೂಪಕ್ಕೊಮ್ಮೆ ಬಸ್ಸು ಬಂದರೆ ನಮಗೆ ಏನನ್ನೋ  ಕಳೆದುಕೊಂಡ ಹಾಗೆ..!  ಕಾಲೇಜು ಏನು ಓದಿದೆವೋ ಬಿಟ್ಟೆವೋ ನೆನಪಿಲ್ಲ ಆದರೆ ಬಸ್ಸು ಕಾದಿದ್ದು ಮಾತ್ರ ಮರೆಯಲಾದೀತೇ ..?

ಮತ್ತೊಂದೇನೆಂದರೆ ಬಸ್ಸು ಬಂದ ದಿನ ಬಸ್ಸು ಸರಿಯಾಗಿ ಬರುತ್ತಿಲ್ಲ ಅಂತಾ ಬಸ್ಸು ತಡೆದು ಸ್ಟ್ರೈಕ್ ಮಾಡುತ್ತಿದ್ದೆವು.ಸಿರಸಿಯಿಂದ ಡಿಪೋ ಮ್ಯಾನೇಜರ್ ಬಂದು ಸಮಾಧಾನ ಮಾಡಿ ಬಸ್ಸು ಬಿಡಿಸಿಕೊಂಡು ಹೋಗಬೇಕಾಗಿತ್ತು. ಅಂತೂ ಬಸ್ಸು ಬಂದರೂ ಒಂದೇ ಬರದಿದ್ದರೂ ಒಂದೇ.

 ಕಾದಿದ್ದು ಕಾದಂತೆಯೇ ಅನಿಸದೆ ಚೂರೂ ಬೇಸರಿಸದೆ ಹಸನ್ಮುಖಿಯರಾಗಿ ಮನೆಗೆ ಬರುತ್ತಿದ್ದುದು ಹೇಗೆ ಅಂತ ನನಗೆ ಆಶ್ಚರ್ಯವಾಗುತ್ತದೆ.ಮನೆಯಲ್ಲಿ ಅಪ್ಪ ಅಮ್ಮ ಮಾತ್ರಾ, ಬಸ್ಸಿನ್ನು ಬರಲಿಲ್ಲ ಕಾಣುತ್ತೆ ..ಹುಡ್ರು ಬಂದಿಲ್ಲ... ಎಂದು ಆಗಾಗ ಹೇಳುತ್ತಿದ್ದರೇನೋ..? ಆವತ್ತಿನ ಕಾಲಕ್ಕೆ ಅಷ್ಟೆಲ್ಲಾ ಯಾರೂ ಹೆದರುವ ಅವಶ್ಯಕತೆಯೂ ಇರಲಿಲ್ಲ. ಈಗಾದರೆ ಇಲ್ಲಿ ನನ್ನ ಮಕ್ಕಳು ಹಾಗೆ ಸ್ಕೂಲು ಬಿಟ್ಟು  ಮೂರು ನಾಲ್ಕು ಘಂಟೆಯಾದರೂ   ಬರದಿದ್ದರೆ  ಪೋಲೀಸ್ ಕಂಪ್ಲೇಂಟೇ   ಕೊಡುವುದಿಲ್ಲವೇ ನಾನು..?  ಕಾಯುವ ಸಹನೆಯೂ ಇಲ್ಲ ಮತ್ತು ಧೈರ್ಯವೂ ಇಲ್ಲ..!

ಈಗೀಗ ಯಾರೂ ಅಲ್ಲಿ ಬಸ್ಸು ಕಾಯುವ, ಬಸ್ಸಿನ ಹಂಗಿಗೆ ಸಿಗುವ ಮಕ್ಕಳು ಸಿಗುವುದಿಲ್ಲ. ಪ್ರೈವೇಟ್ ಕಾರು ವ್ಯಾನು ಸ್ಕೂಲಿಗೆ ನೇರ ಕರೆದೊಯ್ಯುತ್ತವೆ.




ಇಂತಿರುವಾಗ ಮತ್ತೆ ಈಗಲೂ  ಬಸ್ಸು ಕಾಯುವ ಹಣೆಬರಹ  ಅಂದುಕೊಳ್ಳುವಷ್ಟರಲ್ಲಿ  ಬಸ್ಸು ಬಂತು. ಆ ಬಸ್ಸೋ .. ನೇರ ನಾನು ಆಟೋದಲ್ಲಿ ಹೋದರೆ ಹತ್ತು ನಿಮಿಷಕ್ಕೆ ಹೋಗುತ್ತಿದ್ದೆ. ಇದು ನಾನಿಳಿಯುವ  ಗಮ್ಯವನ್ನು ತಲುಪಲು ಬರೋಬ್ಬರಿ ಮುಕ್ಕಾಲು ಘಂಟೆ ತೆಗೆದುಕೊಂಡಿತು . ಬಸ್ಸು ಕಾದದ್ದಕ್ಕಿಂತಾ ಬಸ್ಸಿನಲ್ಲಿ ಕಾದಿದ್ದೇ ಹೆಚ್ಚಾಯ್ತು. ಅಲ್ಲೆಲ್ಲಾ ಕೆಲಸ ಮುಗಿದು ಮತ್ತೆ ಬಸ್ಸು ಕಾಯುವ ಧೈರ್ಯ ಮಾಡಲಿಲ್ಲ ನಾನು. ಆಟೋ ಕರೆದರೆ ಮೀಟರಿನ ಮೇಲೆ ನಲವತ್ತು ಜಾಸ್ತಿ ಕೊಡಿ ಅಂದ. 'ಬೇಡ ಹೋಗು' ಅಂತಂದೆ. ಇನ್ನೊಬ್ಬ ಮೂವತ್ತು ಅಂದ. ಮತ್ತೊಬ್ಬ ಹತ್ತು ಕೊಟ್ಟರೆ ಬರುತ್ತೇನೆ ಅಂದ.'ಸರಿ,' ಅಂದು  ಹೀಗೆ ಚೌಕಾಸಿ ಮಾಡಿ ಮೂವತ್ತು ಉಳಿಸಿದ [ ಮೀಟರಿನ ಮೇಲೆ ಮತ್ತೆ]  ಸಂತೃಪ್ತಿಯಲ್ಲಿ ಮನೆ ಸೇರಿದೆ...!

  • ಫೇಸ್ಬುಕ್ ಗೆಳೆಯರ ಪ್ರತಿಕ್ರಿಯೆಗಳು..

    • Imthiyaz Perla ತುಂಬಾ ಚೆನ್ನಾಗಿದೆ .. ಇಷ್ಟವಾಯಿತು


    • Shirva Harish Shetty ನಿಮ್ಮ ಲೇಖನ ಓದಿ ಬಸ್ಸಲ್ಲಿ ಸುಖ ಪ್ರವಾಸ ಮಾಡಿದಂತೆ ಆಯಿತು, ನಿಮ್ಮ ವಾಸ್ತವದ ಅನುಭವ ಜನ ಸಾಮಾನ್ಯರ ಮನೋ ಭಾವನೆಯಂತೆ, ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ, ಓದುತ ಹೋಗಬೇಕೆಂದು ಮನಸ್ಸಾಗುತ್ತದೆ......ಲೇಖನ ತುಂಬಾ ಇಷ್ಟವಾಯಿತು.


    • Dev Narsya ಇಷ್ಟವಾಯಿತು............., ನಿಮ್ಮ ಬರೆಯುವ ಶೈಲಿ ತುಂಬಾ ಚನ್ನಾಗಿದೆ.....




    • ಸತೀಶ್ ಡಿ. ಆರ್. ರಾಮನಗರ ಈ ರೀತಿಯ ಅನುಭವ ಎಲ್ಲರಿಗೂ ಆಗುತ್ತದೆ. ಮುಖ್ಯವಾಗಿ ತಾಳ್ಮೆ ಬೇಕು. ಬಸ್ಸಿಗಾಗಿ ಕಾಯುವ, ಆಟೋದವನ ಮುಂದೆ ಚೌಕಾಸಿ ಮಾಡುವ ಸಂದರ್ಭಗಳಂತೂ ನಮ್ಮ ತಾಳ್ಮೆಯನ್ನು ಕೆಣಕುತ್ತವೆ. ಸುಂದರ ಸರಳ ಲೇಖನ.


    • Paresh Saraf ಆ ಹಳೆಯ ಶಾಲಾ ದಿನಗಳ ನೆನಪು ಹಸಿಯಾಯಿತು.. ನಿಜ ಇಂದು ಆ ಚಿಕ್ಕ ಚಿಕ್ಕ ಆನಂದಗಳು ಮಾಯವಾಗುತ್ತಿವೆ.ನಾಲ್ಕು ವರ್ಷದ ಮಗುವೊಂದು ಅಪ್ಪ ಮೊಬೈಲ್ ಕೊಡು
      "ಆಂಗ್ರಿ ಬರ್ಡ್ಸ್" ಆಡ್ತೇನೆ ಅಂತ ಹೇಳುವುದನ್ನು ಕೇಳಿದೆ. ಆಗ ಅನಿಸಿತು ಈಗಿನ ಮಕ್ಕಳು ನಾಲ್ಕು ಗೋಡೆಗಳ ಮಧ್ಯೆ ಇದ್ದು ಸಾಮಾಜಿಕ ಜೀವನ ಮತ್ತು ಸಾಮಾನ್ಯ ಜ್ಞಾನವನ್ನೇ
      ಮರೆಯುತ್ತಾರೋ ಎಂದು. ನನ್ನ ವಿದ್ಯಾರ್ಥಿ ಜೀವನ ನೆನಪಿಸಿದಿರಿ.. ಸುಂದರ.. ಶುಭವಾಗಲಿ :)




    • Shama Nandibetta ‎"ಆಂಗ್ರಿ ಬರ್ಡ್ಸ್" ಆಡುವುದು ಮಾತ್ರವಲ್ಲ; ಮಕ್ಕಳೂ "ಆಂಗ್ರಿ ಬರ್ಡ್ಸ್" ಆಗ್ತಾ ಇದ್ದಾರೆ ಅನಿಸೋಲ್ವೆ Paresh Saraf... ಇದು ನಮ್ಮ ಜೀವನ ಶೈಲಿಯ ಕೊಡುಗೆಯಾ ?


    • Paresh Saraf
      ಖಂಡಿತ.. ಇಂದಿನ ನ್ಯೂಕ್ಲಿಯರ್ ಕುಟುಂಬಗಳು, ಹಣ ಗಳಿಸುವುದ್ದನ್ನು ಕಲಿಸಿ, ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿ ಇವೆಲ್ಲವುಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತಿದೆ. ಸಹ ಜೀವನ, ಜೀವನ ತತ್ವಗಳನ್ನು ಕಲಿಸಬೇಕಾದ ಪ್ರಾಥಮಿಕ ಶಾಲೆಗಳು ಲಕ್ಷಗಟ್ಟಲೆ ಡೊನೇಶನ್ ಪಡೆದು ಆ ಹಂತದಲ್ಲೇ ಮಕ್ಕಳನ್ನು ಸ್ಪರ್ಧೆಗೆ ಹಚ್ಚುತ್ತಿವೆ. ಮಕ್ಕಳಿಗೆ ಸಂಸ್ಕಾರ ನೀಡಲು ಅಪ್ಪ ಅಮ್ಮರಿಗೆ ಸಮಯ ಇಲ್ಲದೆ ಬೇಬಿ ಸಿಟ್ಟಿಂಗ್ಗಳು ನಾಯಿ ಕೊಡೆಯಂತೆ ತಲೆಯೆತ್ತಿವೆ. ಇವೆಲ್ಲದರ ನಡುವೆ ಮಗುವಿನ ಮನಸ್ಸು ಸಂಕುಚಿತವಾಗುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ....



    • Shama Nandibetta ಅಪ್ಪ ಅಮ್ಮನಿಗೆ ಪುರುಸೊತ್ತಿಲ್ಲ; ಪುರುಸೊತ್ತು ಇದ್ದು ಸಂಸ್ಕಾರ ಕೊಡಬಲ್ಲ ಅಜ್ಜ ಅಜ್ಜಿಯರು ಇವರಿಗೆ ಬೇಕಿಲ್ಲ. ಬದುಕಲು ಕಲಿಸದಿರುವ ಶಿಕ್ಷಣ ಪದ್ಧತಿಯೇ ಅಲ್ಲವೇ ಇಷ್ಟೊಂದು ಆತ್ಮಹತ್ಯೆಗಳ ಮೂಲ...


    • Shama Nandibetta Oscar Wilde ಹೇಳಿದ, “Now-a-days, people know the price of everything, but the value of nothing.” ಮಾತು ನೆನಪಾಯ್ತು


    • Banavasi Somashekhar ಓದಿಸಿಕೊಂಡು ಹೋಯಿತು.ಜೀವನಾನುಭವವನ್ನು ಕಣ್ಣಿಗೆ ಕಟ್ಟಿತು.


    • Uday Shankar ಕಾಲೇಜಿಗೆ ಹೋಗುವುದ್ಯಾಕೆ ಅಂತ ಅಂದರೆ ಬಸ್ಸು ಕಾಯ್ಕೊಂಡು ಮನೆಗೆ ಬರೋಕೆ........... superrrr lines........... :D


Wednesday, March 14, 2012

ಒ೦ದು ಬಸ್ಸಿನ ಪ್ರಯಾಣ..!

ಕ.ರಾ.ರ. ಸಾ.ಸಂ ಬಸ್ಸು ನಾವಿದ್ದ ಸ್ಟಾಪಿಗೆ  ಬ೦ದು ನಿಲ್ಲುತ್ತಿದ್ದ೦ತೆ ಟಿಕೆಟ್ ತೋರಿಸಿ ಲಗುಬಗೆಯಿ೦ದ ಹತ್ತಿದೆವು. ಒಂದು ದಿನದ ಮಟ್ಟಿಗೆ ನಮಗೆ ಊರಿಗೆ ಹೋಗುವುದಿತ್ತು. ದಿವಂಗತ ಮಾವ ನಮ್ಮನ್ನು ಹರಸಿ ಹೋಗಲು ಬರುವ ದಿನವಾಗಿತ್ತು. ಅದಕ್ಕೆ ಮಕ್ಕಳಿಗೆ ಒಂದು ದಿನದ ರಜೆ ಹಾಕಿಸಿ ಕರೆದೊಯ್ದಿದ್ದೆವು. ಬಸ್ಸಿನ ಒಳಗೆ ಹತ್ತುತ್ತಿದ್ದಂತೆಯೇ ಡ್ರೈವರ್ ''ಓಹೋ ಊರಿಗೆ ಹೋಗುವಾಗ ಎಲ್ಲಾ ಒಟ್ಟಿಗೆ ಹೋಗುವುದಾ...?'' ಎಂದು ಕೇಳಿದ. ನಾನೂ ನನ್ನ ಓರಗಿತ್ತಿ ಮಕ್ಕಳೊಂದಿಗೆ ಹೊರಟಿದ್ದೆವು. ಅವನಿಗೆ ಈ ಪರೀಕ್ಷಾ ಸಮಯದಲ್ಲಿ  ಬಸ್ಸಿನಲ್ಲಿ  ಜನಸಮೂಹವೇ ಕಾಣಿಸಿದಂತಾಗಿ ಆಶ್ಚರ್ಯ ಗೊಂಡಿದ್ದ.  ಅವನು  ನಮ್ಮೂರ ಬಸ್ ರೂಟಿನ ಖಾಯಂ ಡ್ರೈವರ್ರು. ನಮಗೆ ಅವನ ಪರಿಚಯವಿಲ್ಲದಿದ್ದರೂ ಅವನಿಗೆ ಮಾತ್ರಾ ಅವನ ಬಸ್ಸಿನ ರೂಟಿನ ಅಷ್ಟೂ ಮನೆಗಳಿಗೆ ಬೆಂಗಳೂರಿನಿಂದ ಯಾರ್ಯಾರು ನೆಂಟರು ಬರುತ್ತಾರೆಂಬುದು ಎಲ್ಲರಿಗಿಂತ ಚನ್ನಾಗಿ  ಗೊತ್ತು...!

ರಾತ್ರಿ  ಇಲ್ಲಿ ಬಸ್ಸು ಹತ್ತಿದರೆ ಬೆಳಕು ಹರಿಯುವ ಮುನ್ನ ಊರಲ್ಲಿರಬಹುದು. ನಮ್ಮೂರ ಕ.ರಾ.ರ. ಸಾ.ಸಂ ರಾಜ[ ಹಿಂಸೆ ]ಹಂಸ  ಬಸ್ಸು ಹತ್ತಿ ಕಾದಿಟ್ಟ ಸೀಟಿನಲ್ಲಿ ವಿರಾಜಮಾನರಾದೆವು.. ಮತ್ತು ನಾನಂತೂ ಅಲರ್ಟ್ ಆಗಿಯೇ ಕುಳಿತುಕೊಂಡೆ!   ಮತ್ತೇನಲ್ಲ ..  ಬಸ್ಸಿನ ಮೂಲನಿವಾಸಿಗಳಿಗೆ ಗೌರವ ಕೊಟ್ಟು!     ಅಗಣಿತ  ತಿಗಣೆಯ  ಗಣಗಳ ನಡುವೆ ಸುಮ್ಮನೆ ಕುಳಿತಿಹೆ ನಾನು..! ಸಮಾಜವಾದದ ಪ್ರಕಾರ  ನನ್ನದು   ತಿಗಣೆ   ಸಾಮ್ರಾಜ್ಯದ ಮೇಲಿನ ಅತಿಕ್ರಮಣ.. ಅಲ್ಲವೇ..? ತಿಗಣೆ , ಜಿರಳೆ ಮತ್ತು ಅಲೆಮಾರಿ ಜನಾಂಗದವರಾದ ಸೊಳ್ಳೆಗಳಿಗೂ ಈ ಭೂಮಿಯ ಅರ್ಥಾತ್ ಬಸ್ಸಿನ ಮೇಲೆ ಬದುಕಲು ಹಕ್ಕಿಲ್ಲವೇ..?   ಅವರ ಖಾಯಂ ಸೀಟಿನಲ್ಲಿ ನಾನು ಟೆಂಪರರಿಯಾಗಿ ಭಯ ಭಕ್ತಿಯಿ೦ದ ಕುಳಿತುಕೊಳ್ಳುವುದೇ ಕ್ಷೇಮ.

ಸುಮಾರು ಹೊತ್ತು ಬಹಳ ಹುಶಾರಿಯಿಂದಲೇ ಕುಳಿತರೂ ಕುಳಿತುಕೊಳ್ಳಲು ಪರಿಸ್ಥಿತಿ ಸುಮ್ಮನೆ ಬಿಡದು. ಶಿಶಿರ ''ಅಮ್ಮಾ ಕಥೆ ಹೇಳು'' ಅಂದ.  ಅವನಿಗೆ ಕಥೆ ಹೇಳಿದ್ದು ಅಕ್ಕಪಕ್ಕದವರಿಗೆ ಹರಿಕಥೆಯೋ ಶನಿಕಥೆಯೋ ಆಗಿ ಪರಿಣಮಿಸಿದರೆ ಅದಕ್ಕೆ ನಾನು ಜವಾಬ್ಧಾರಳೇ..?  ಅಷ್ಟೊತ್ತಿಗೆ ಬಸ್ಸಿನ ತೊನೆದಾಟ ಮತ್ತು ಬ್ರೇಕು ಹಾಕುವುದು, ಹೊಂಡ ಹಾರಿ ಮುಗ್ಗರಿಸುವುದು.. ಇದರೊಳಗೆ ನನ್ನ ಹುಶಾರಿಯೆಲ್ಲಾ ಹಾರಿಹೋಯಿತು.ಮತ್ತು ಎಲ್ಲಿವರೆಗೆ ಸಾಧ್ಯ..?

ಒಮ್ಮೆಯಂತೂ ಹೀಗೆ ಊರಿಗೆ ಹೋಗುವಾಗ ಪುಟ್ಟ ಶಿಶಿರನಿಗೆ ಸಿಕ್ಕಾಪಟ್ಟೆ ತಿಗಣೆ  ಕಚ್ಚಿ  ಬಿಳಿಯ ಆಗಸದಲ್ಲಿ ಕೆಂಪು ನಕ್ಷತ್ರಗಳು ಹೊಳೆಯುವಂತೆ  ಮುಖ  ಥಳ ಗುಟ್ಟುತ್ತಿತ್ತು.    ಗುಲಾಬಿ ಕಾಲ್ಗಳಲ್ಲಿ ಮದರಂಗಿಯ ಬೊಟ್ಟುಗಳನ್ನಿಟ್ಟಂತೆ   ತಿಗಣೆ ಚಿತ್ತಾರ ಬಿಡಿಸಿತ್ತು.
 ಸ್ವಲ್ಪ ಹೊತ್ತಿಗೆ ಅವ ನಿದ್ದೆ ಹೋದ. ನನಗೆ  ಹಾಗೆಲ್ಲಾ ನಿದ್ದೆ ಬಂದು ಬಿಡುವುದೇ.. ಅದೂ ಹೀಗೆಲ್ಲಾ ಸಂಗತಿ  ಇರುವಾಗ.

ಬಸ್ಸು ಬಹುಷಃ ಖರೀದಿಸಿದ  ಮೊದಲಲ್ಲಿ ಹೊಸದಾಗಿಯೇ ಇತ್ತೇನೋ..! ನಮ್ಮೂರ ಬಸ್ಸು .. ಅದು. ಅದರ  ಬಗೆಗೆ ಅಭಿಮಾನ ಇರಬೇಕಾದ್ದು ನ್ಯಾಯ.   ನಾನೂ ಹಾಗೆಯೇ ಒರಗಿಕೊಂಡೆ. ನನ್ನ ತಲೆ ಕಡೆಯೇ ಒ೦ದು ಲೈಟ್ ಇತ್ತು.  ಅದರ ಹೊರಗಾಜು ಒಡೆದುಹೋಗಿ ಸೀಳು ಸೀಳಾಗಿತ್ತು.. ನನ್ನ ಪ್ರಕಾರ ಯಾರೋ ಎಂಟಡಿ ಇರುವವರ ತಲೆಗೆ ತಾಗಿ ಅದು ಒಡೆದಿರಬಹುದು! ಆದರೂ ಬೆಳಕಿತ್ತು..!   ಒಂದೆರಡು ಸೊಳ್ಳೆಗಳು ಮುಖದ ಮೇಲೆ ಹಾರಾಡಿ  ತಮ್ಮ  ಸಂಗೀತವನ್ನು ಚೆನ್ನಾಗಿ  ನುಡಿಸಿ ಹಾರಿಹೋದವು. ಲೈಟೆಲ್ಲಾ ಆರಿಸಿ ಸುಮಾರು ಹೊತ್ತಾಯ್ತು .ತಣ್ಣನೆಯ ಗಾಳಿ ತನ್ನ ಚಾಮರ ಸೇವೆಯನ್ನು ಒದಗಿಸಲು ತೊಡಗಿತು.ಕಿಟಕಿ ಗ್ಲಾಸ್ ಮುಚ್ಚಿದೆನಾದರೂ ಅದಕ್ಕೆ ಮತ್ತಿನ್ನೆಂತಾ ದಾಕ್ಷಿಣ್ಯವೋ ಏನು ಕಥೆಯೋ ಅದು ನಿಧಾನಕ್ಕೆ ಜಾರಿ ಜಾರಿ ಗಾಳಿಯ ಸೇವೆಯನ್ನು ಜಾರಿಯಲ್ಲಿರಿಸಿತು.ತುಂಬಾ ಚಳಿ  ಆಗುತ್ತಿತ್ತು. ಮನೆಯಿಂದ ಹೊರಡುವಾಗ ಎಷ್ಟು ಸೆಖೆ..  ಬಸ್ಸಿನಲ್ಲಿ  ವಿಪರೀತ ಚಳಿ..!   ಹವಾಮಾನ  ಕ್ಷಣ ಕ್ಷಣ  ಬದಲಾಗುತ್ತದೆ.  ಮುಂದೆ ಹೋಗಬೇಕೋ  ಹಿಂದೆ ಹೋಗಬೇಕೋ  ಅದಕ್ಕೂ ಕಾಲದ ಕನ್ಫ್ಯೂಜನ್ನು. ಕಾಣದ ಪೊಲ್ಯೂಷನ್ನು.
ಬಸ್ಸಿನ   ಸೀಟು ಮಾತ್ರ ಒಳ್ಳೆ ಜಾರುಬಂಡಿಯನ್ನು ನೆನಪಿಸಿತು ನನಗೆ. ಬಸ್ಸು ಮುಂದೆ ಮುಂದೆ ಸಾಗಿದಂತೆ ಸೀಟಿನಲ್ಲಿ ಕುಳಿತವರು ಮೆಲ್ಲ ಮೆಲ್ಲ ಧರೆಗೆ..


ಮಧ್ಯ ರಾತ್ರಿಯಷ್ಟಿರಬಹುದು. ನನಗೆ ನಿದ್ರೆ ಆವರಿಸಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಬಾಗಿಲು ನಿಧಾನ ಜಾರಿ ಗಾಳಿ ನುಗ್ಗುತ್ತಿತ್ತು. ಕಿವಿಗೆ ಶಾಲು ಸುತ್ತಿಕೊಂಡರೂ ಮುಖಕ್ಕೆ ಗಾಳಿಯ ಬಡಿತ.  ಆಡ್ರಾ ಡ್ಡ ಣಾಕು ಮುಕಾ  ಣಾಕು ಮುಕಾ.. ಎ೦ದು ಮುಂಗುರುಳು ಮುಖದ ಮೇಲೆ ನರ್ತಿಸುತ್ತಿತ್ತು.

ಆಗ  ನಿಧಾನಕ್ಕೆ  ಕೇಳಿಸ ತೊಡಗಿತ್ತು ,   ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ಅನ್ನುವಂತೆ ಒಡಕು ಗೆಜ್ಜೆಯ ಸ್ವರ... ಏನದು ಸದ್ದು..? ಯಾವುದರದ್ದು..?  ಸ್ಮಶಾನದಲ್ಲಿ ಎಲುಬು ಕಡಿಯುವ ಶಾಕಿನಿ ಡಾಕಿಣಿ ಪಿಶಾಚಗಳಿರಬಹುದೇ..? ಅಥವಾ ಮೊಹಿನಿಯೋ , ನಾಗವಲ್ಲಿಯೋ..?  ಯಾವದಾದರೂ ಸಂಸ್ಕಾರ ಸಿಗದ ಪ್ರೇತ ದಾರಿ ತಪ್ಪಿ  ಬಸ್ಸಿಗೆ ಬಂದಿರಬಹುದೇ..?

  ಥತ್ಥೆರಿಕೆ .... ಮುಂದಿನ ಸೀಟಿನ ಕಿಟಕಿಯ ಗ್ಲಾಸೂ.. ಅದರ ಮುಂದಿನ ಸೀಟಿನದೂ.. ಅದಕ್ಕೂ ಮುಂದಿನ .. ಹಿಂದಿನ ಕಿಟಕಿಯ ಗ್ಲಾಸುಗಳು ಇಂಗ್ಲೀಷರು  ಸ್ವಾತಂತ್ರ್ಯ ಕೊಟ್ಟಿದ್ದು ತಮಗೇನೆ ಎಂಬಂತೆ ಹಿಂದೆ ಮುಂದೆ ಅಲುಗಾಡುತ್ತಾ.. ಸದ್ದು ಮಾಡುತ್ತಾ..  ಸರ್ವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದವು.. ಮಕ್ಕಳೆಲ್ಲಾ ನಿದ್ರೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ವಿವರಿಸಿ ಹೇಳುವ ಪ್ರಮೆಯವೊಂದು ಬರಲಿಲ್ಲ. ಇಲ್ಲದಿದ್ದರೆ ಹಾರರ್ ಸಿನಿಮಾದ ಪ್ರಭಾವದಿಂದ ಸದ್ದು  ಭೂತದ್ದೇ ಇರಬಹುದು, ಎಂದು ಮಕ್ಕಳು ವಾದ ಹೂಡಿ..ತೋರಿಸು ಎಂದೂ.. ಅದರ ಕುರಿತಾಗಿ ಪ್ರಶ್ನೆ ಕೇಳುತ್ತಾ ಬಸ್ಸಿನ ಎಲ್ಲರೂ ನನ್ನನ್ನು ಪ್ರೇತವನ್ನು ನೋಡುವಂತೆ ನೋಡಿ ಬಿಡುವ ಪ್ರಸಂಗವೊಂದು ತನ್ನಷ್ಟಕ್ಕೆ ತಾನೇ ತಪ್ಪಿ ಹೋಯಿತು.

ಆದರೆ ಪ್ರತಿ ಸಲದಂತೆ ಈ ಸಲ ತಿಗಣೆ  ಕಡಿಯದೇ,  ಈ ಮೊದಲು  ಕಚ್ಚಿಸಿಕೊಂಡ  ಸಂತ್ರಸ್ತ  ಜನರ ಒಕ್ಕೊರಲ  ಆರ್ತನಾದವನ್ನು ಆಲಿಸಿ ಅದರ   ಸಂತಾನವನ್ನು ಸರಕಾರದವರು ಕಡಿತಗೊಳಿಸಿದ್ದುದು,  ಅದರಿಂದಾಗಿ ಈ ಬಸ್ಸಿನಲ್ಲಿ ಅವುಗಳ  ಸಂಸಾರವೇ ಸರ್ವನಾಶಗೊಂಡಿದ್ದುದು  ನನಗೆ ಬೆಳಗಾದ ನಂತರ ಜ್ಞಾನೋದಯವಾಯಿತು..! ಜಿರಳೆಗಳೂ ತಮ್ಮ ವಾಸ್ತವ್ಯವನ್ನು ಬೇರೆಡೆಯಲ್ಲೆಲ್ಲಿಯೋ ಹೂಡಿ ಅವುಗಳೂ ಕಾಣದಾಗಿ ಬಸ್ಸು ಪ್ರಾಯಶಃ   ಬಣ ಬಣ ಗುಟ್ಟಿತು.ಹಾಗಾಗಿ ಬರಿಯ ಸಂಗೀತಸೇವೆಯೇ ಅಂದಿನ  ಪ್ರಧಾನ ಆಕರ್ಷಣೆಯಾಗಿತ್ತು.

ಅಂತೂ ಯಾವುದೇ ಪ್ರಾಣಿ ರೂಪೀ  ಮಾರಕಾಸ್ತ್ರಗಳ ಹಾವಳಿಗೊಳಗಾಗದೆ ಸಾವಕಾಶ ಮನೆ ತಲುಪಿದೆವು.. ರಾತ್ರಿ ಪುನಃ ವಾಪಾಸು ಬೆಂಗಳೂರಿಗೆ ಹೊರಟು ಅತಿ ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ  ಸ್ಲೀಪಿಂಗ್ ಕೋಚ್ ಬಸ್ಸಿನಲ್ಲಿ ಬಂದೆವು. ಅದು ಒಳ್ಳೆ ರೋಲರ್ ಕೋಸ್ಟರ್ ತರಾ ನಮ್ಮೂರ ತಿರುಮುರುವು ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಬೀಸಿ ಬೀಸಿ ಒಗೆಯುತ್ತಾ ಜಾತ್ರೆಯ ಅನುಭವವನ್ನು   ನೆನಪು ಮಾಡಿಕೊಳ್ಳುತ್ತಾ ಬೆಂಗಳೂರು ತಲುಪಿಸಿದ್ದು ಈಗ ಇತಿಹಾಸ....!



Thursday, January 5, 2012

ಗೋಲ್ಕೊ೦ಡ ಕೋಟೆಯ ಕೆಲ ನೆನಪುಗಳು.

 ಹೈದರಾಬಾದಿನಲ್ಲಿ ನೋಡಿದ ಸ್ಥಳಗಳಲ್ಲಿ ನನ್ನನ್ನು ಸೆಳೆದದ್ದು ಈ ಕೋಟೆ.
  ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.


 ಇಲ್ಲಿಂದ ಕೋಟೆ  ಹತ್ತಲು ಶುರು...









 ಬಾಲ ಹಿಸಾರ್ ದ್ವಾರ ..



 ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ.  ಇದರ ಕೆಳಗೆ  ಚಪ್ಪಾಳೆ ತಟ್ಟಿದರೆ ಅದು ಕೋಟೆಯ  ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ.   ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ  ಎಂಬ ಸೂಚನೆಯನ್ನು ರಾಜನಿಗೆ  ರವಾನಿಸುತ್ತಿದ್ದರಂತೆ.



 ದರ್ಬಾರ್ ಹಾಲ್  ನ ನೋಟ ದೂರದಿಂದ..!



 ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ  ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!



 ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..



ನಟರಾಜ್...



ತಾರಾಮತಿ ಪ್ಯಾಲೇಸ್.  ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.!  ಕೋಣೆಯ    ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...




 ಕೋಟೆಯ  ತುದಿಯಲ್ಲಿರುವ  ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ.  ಇದಕ್ಕೆ ನೇರವಾಗಿ  ಎಂಟು   ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ  ಸ್ಥಳ ನನಗೆ ರಾಜರ ಪೀಕದಾನಿಯನ್ನು    ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)




ಕೋಟೆ ಹತ್ತಲು ಮೆಟ್ಟಿಲುಗಳು..



ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ  ಶತ್ರುಗಳ ಚಲನವಲನವನ್ನು ಇದರ ಮರೆಯಿಂದ  ಗಮನಿಸುತ್ತಿದ್ದರಂತೆ..



 ಬಾಲಹಿಸಾರಿನ ಮೆಟ್ಟಿಲು  ಹತ್ತಿ  ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!


ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.



ಕೋಟೆಯ ಮೇಲಿನಿಂದ ಕೆಳಗೆ ನೋಡಿದಾಗ ...:( 



ನೀರು ಸಂಗ್ರಹಕ್ಕೆ.. 
ಆಗಲೇ ಅವರು ಮಳೆ ಕೊಯ್ಲು ಮಾಡುತ್ತಿದ್ದರಂತೆ. ಯುದ್ಧದ ಸಮಯದಲ್ಲಿ  ನೀರಿನ ಅಭಾವವಾಗದಿರಲು ನೀರು ಶೇಖರಣೆ ಮಾಡುತ್ತಿದ್ದರಂತೆ.


ವಾತಾಯನ ವ್ಯವಸ್ಥೆಗೆ ..ಕಿಂಡಿ.


ಇದು ಏರ್ ಕಂಡಿಶನ್  ವ್ಯವಸ್ಥೆ, ಗೋಡೆಯಲ್ಲಿ ಹುದುಗಿಸಿದ  ಮಣ್ಣಿನ ಪೈಪುಗಳ ಮೂಲಕ ನೀರು ಸಂಚಲನೆ.

ಆಗಿನ ಕಾಲದ ರಾಜರ ವೈಭವಗಳನ್ನು ಆಯಾ ಸ್ಥಳಗಳಲ್ಲಿಯೇ ಕಲ್ಪಿಸಿಕೊಳ್ಳಲು ಒಂತರಾ ಮಜಾ.ಅವರದ್ದೇನು ವೈಭೋಗ, ಆರ್ಭಟ !     ಆದರೂ ಈಗಿನಂತೆ ವಿಮಾನು, ಇಂಟರ್ನೆಟ್ಟು, ಮೆಟ್ರೋ ಟ್ರೇನು ಇದೆಲ್ಲ ಇರಲಿಲ್ಲ ಬಿಡಿ. ಸಾಮಾನ್ಯ ಜನರಾದರೂ   ನಾವೇ ಬೆಟರ್ರು.. :)



Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.



  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.



ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.




ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..





ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.