Showing posts with label ತಿದ್ದಿ ...ತೀಡಿ... Show all posts
Showing posts with label ತಿದ್ದಿ ...ತೀಡಿ... Show all posts

Tuesday, July 17, 2018

''ಜಿಲೇಬಿ''ಎಂಬ ಮಾಟಗಾತಿ

 ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ......  ಜಿಲೇಬಿ ರುಚಿಯೊಂದಿಗೆ.. 
 
 
ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ  ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್ತಾ, ರಗಳೆ ಮಾಡುತ್ತಾ ಗೋಳು ಹೊಯ್ದು ಕೊಂಡಿದ್ದೀನಷ್ಟೆ .. ಇದು ಲಾಸ್ಟು .. ನಂಬಿ ಪ್ಲೀಸ್ ನನ್ನ ನಂಬಿ.
ಮೊದಲ ಸಲ  ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲೇಬಿ ಮಾಡಿದ್ದನ್ನು ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿದ್ದು ನಿಮಗೂ ನೆನಪಿಗೆ ಬಂದಿರಬಹುದು. ಅದು ಜಿಲೇಬಿ...  ಜಿಲೇಬಿ ಹೌದೋ ಅಲ್ಲವೋ ಎಂಬುದನ್ನು ನಮ್ಮನೆಯಲ್ಲಿರುವ  ಮೂವರು ತಜ್ಞರು ಅಳೆದು ಸುರಿದು ( ಸುರಿದಿದ್ದು ಎಲ್ಲಿಗೆ ಅಂತ ಯಾರೂ ತನಿಖೆ ಮಾಡಬೇಡಿ ದಯವಿಟ್ಟು..!) ನೋಡಿ,  ಇವಳಿಂದ ಮಾತ್ರ ಜಿಲೇಬಿ ಎಂದು ಕರೆಸಿಕೊಳ್ಳಲ್ಪಡುವ ಬೇರೆ ಯಾವುದೋ ಒಂದು ವಸ್ತು  ಎಂದು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದರೂ ನಾನು ಮಾತ್ರಾ ಅದನ್ನುಸಾರಾಸಗಟಾಗಿ ತಿರಸ್ಕರಿಸಿ ಜಗತ್ತಿನ ಯಾವುದೋ ಒಂದು ಅದ್ಭುತವೇ ಸರಿ ಎಂಬಂತೆ ಬ್ಲಾಗು, ಫೇಸ್ಬುಕ್ಕು ಜೊತೆಗೆ ನಾಡಿನ  ಎಲ್ಲ ಸ್ತರದವರಿಗೂ ತಿಳಿಯಲೆಂಬಂತೆ ಪತ್ರಿಕೆಗೂ ಕಳಿಸಿ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ನಿನ್ನೆ ಮೊನ್ನೆ ನಡೆದಂತಿದೆ..!  ಅಂತೂ ಮೊದಲ ಪ್ರಯತ್ನ ಯಶಸ್ವಿಯಾಗಿ ಡಿಸ್ ಕ್ವಾಲಿಫೈ ಆಯ್ತು... !
ಹೆತ್ತವಳಿಗೆ ಹೆಗ್ಗಣ ಮುದ್ದು .. ಕಟ್ಟಿಕೊಂಡವನಿಗೆ ಕೋಡಂಗಿ ಮುದ್ದು ಎನ್ನುವಂತೆ ನಾ ಮಾಡಿದ ಜಿಲೇಬಿ ನನಗೆ ಮುದ್ದು .. :)  ಯಾರೇನೇ ಅಂದರೂ ನಾನು ಮಾತ್ರ ಮತ್ತೊಮ್ಮೆ ಮಗದೊಮ್ಮೆ ನನ್ನ ಜಿಲೇಬಿ ಪ್ರಯೋಗಗಳನ್ನು ಮಾಡುತ್ತಲೇ ಹೋದೆ. ಪ್ರತಿ ಸಾರಿಯೂ ಒಂದೊಂದು ಹೊಸ ವಿಷಯವನ್ನು ಕಲಿಯುತ್ತಲೇ ಹೋದೆ.
ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು.  ಹಿಟ್ಟಿನ ಹದ, ಜಿಲೇಬಿ ಬೇಯಿಸುವ ಹದ , ಸಕ್ಕರೆ ಪಾಕ, ಉರಿ, ಜಿಲೇಬಿ ಹಿಟ್ಟನ್ನು ಎಣ್ಣೆಗೆ ಬಿಡುವ ಕಲೆ ಎಲ್ಲವೂ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ನಿಮಗೆ ಉತ್ತಮ ಜಿಲೇಬಿ ಭಾಗ್ಯ  ಸಿಗುತ್ತದೆ. ನಾನು ಸುಮಾರು ಏಳೆಂಟು ಸಲ ಜಿಲೇಬಿ ಮಾಡಿ ಮಾಡಿ ಈ ನಡುವೆ ತಿನ್ನಲು ಯೋಗ್ಯವಾದ ಜಿಲೇಬಿಗಳನ್ನು ಮಾಡುತ್ತಿದ್ದೇನೆ. ಯೂ ಟ್ಯೂಬ್ ನೋಡಿ, ಅವರಿವರು ಮಾಡಿದ್ದನ್ನು ನೋಡಿ ಮನದಲ್ಲೇ ಲೆಕ್ಕಾಚಾರ ಹಾಕಿ, ಯಾರ್ಯಾರನ್ನೋ ಕೇಳಿ ಈ ಮಟ್ಟಕ್ಕೆ ಬಂದಿದ್ದೇನೆ. ರಾಜಕುಮಾರನೊಬ್ಬ  ಸಾವಿರಾರು ಮೈಲಿ ಪ್ರಯಾಣ ಮಾಡಿ ಏಳು ಸಮುದ್ರದ ಆಚೆ, ಏಳು ಕೋಟೆಯ ನಡುವೆ ಬಂಧಿತಳಾದ ರಾಜಕುಮಾರಿಯನ್ನು ಕರೆತರಲು ಹರ ಸಾಹಸ ಮಾಡಿದಂತೆ ನಾನೂ ಈ ಸ್ವೀಟಿನ ತಯಾರಿಯಲ್ಲಿ ಎಲ್ಲ ತಪ್ಪುಗಳನ್ನೂ ಹಾದು ಬಂದು ಸಾಹಸ ಗೈದಿದ್ದೇನೆ  ಎನ್ನಲು ಸಂತೋಷಿಸುತ್ತೇನೆ . :)

ಮೊದಲು ವಿಧಾನ ವಿವರಿಸುತ್ತೇನೆ ನಿಧಾನ  ಕೇಳಿ.
ಒಂದು ಲೋಟ ಮೈದಾ ಹಿಟ್ಟಿಗೆ ಎರಡು ಚಮಚ ಮೊಸರು+ ಒಂದು ಚಮಚ ಕಡಲೆ ಹಿಟ್ಟು + ಚಿಟಿಕೆ ಅರಿಶಿನ + ನೀರು ಹಾಕಿ  ದೋಸೆಯ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ದಪ್ಪ ಹದಕ್ಕೆ ಗಂಟುಗಳಿಲ್ಲದಂತೆ  ಕದಡಿ. ಸುಮಾರು ೧೦ ಘಂಟೆ ಹಿಟ್ಟು ಹುಳಿ ಬರಲು ಬಿಡಿ. ಮಾಡುವ ಹೊತ್ತಿಗೆ ಚಿಟಿಕೆ ಸೋಡಾ ಬೆರೆಸಿ.
ಸಕ್ಕರೆ ಪಾಕಕ್ಕೆ-  ಎರಡು ಲೋಟ ಸಕ್ಕರೆಗೆ ಒಂದು  ಲೋಟ ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಳ್ಳಬೇಕು. ಪಾಕ ತುಂಬಾ ಬಿಸಿಯೂ ಇರದೇ ತಣ್ಣಗೂ ಇರದೇ ಮಧ್ಯಮ  ತಾಪದಲ್ಲಿ ಇರಲಿ. ಒಂದು ಚಮಚ ಲಿಂಬೆ ಹುಳಿ + ಒಂದು ಚಮಚ ಜೇನುತುಪ್ಪ ವನ್ನು ಕುದಿಯುವಾಗಲೇ ಸೇರಿಸಿ. ಕೇಸರಿ ಎಸಳುಗಳನ್ನು ಸೇರಿಸಬಹುದು.
ಅಗಲ ತಳದ ಪ್ಯಾನನ್ನು ಓಲೆ ಮೇಲಿಟ್ಟು ಎಣ್ಣೆ ಹಾಕಿ. ಸುಮಾರು ಒಂದೂವರೆ ಇಂಚು ಮುಳುಗುವಷ್ಟು ಇರಲಿ. ಉರಿ ಸಿಮ್ ನಲ್ಲಿರಲಿ. ಮಧ್ಯದಲ್ಲಿ ತೂತಿರುವ ದಪ್ಪ ಬಟ್ಟೆ ಅಥವಾ ಸ್ಕ್ವೀಝರ್ ಗೆ ಹಿಟ್ಟನ್ನು ತುಂಬಿಕೊಳ್ಳಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹನಿ ಹಿಟ್ಟು ಎಣ್ಣೆಗೆ ಹಾಕಿದರೆ ಅದು ತಕ್ಷಣ ತಳ  ಬಿಟ್ಟು ಏಳುತ್ತದೆ .. ಅಂದರೆ ಕಾದಿದೆ ಅಂತ ಅರ್ಥ. ಈಗ ನಿಧಾನಕ್ಕೆ ಹಿಟ್ಟನ್ನು ಜಿಲೇಬಿ ಆಕಾರಕ್ಕೆ (?) ಎಣ್ಣೆಗೆ ಬಿಡಿ. ಕರಿಯುವವರೆಗೆ ಸಹನೆಯಿಂದ ಕಾಯುವುದೂ ಇಲ್ಲಿ ಮುಖ್ಯ. ಜಿಲೇಬಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾದ ಲಕ್ಷಣ ಕಂಡುಬಂದಾಗ ತೆಗೆದು ಪಾಕಕ್ಕೆ ಹಾಕಿ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಪಾಕದಲ್ಲಿ ಅದ್ದಿ ನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ.

  ಮಾಡಿದ ಮತ್ತು ಮಾಡುವ ತಪ್ಪುಗಳು . 
 
೧.  ಹಿಟ್ಟು ತೆಳ್ಳಗೆ ಆದರೆ ಜಿಲೇಬಿ ದುಂಡನೆಯ ಜಿಲೇಬಿಯಾಗದೆ ಚಪ್ಪಟೆಯಾಗುತ್ತದೆ. ಜಿಲೇಬಿ ಗರಿಗರಿಯಾಗದೆ ಮೆತ್ತಗಾಗುತ್ತದೆ. ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ.
೨. ಸಕ್ಕರೆ ಪಾಕ ತೆಳ್ಳಗಾದರೆ ಸ್ವಲ್ಪ ಹೊತ್ತಿನ ನಂತರ ಜಿಲೇಬಿಯಿಂದ ಪಾಕ ಸೋರಿ ಹೋಗುತ್ತದೆ. ತೀರಾ ದಪ್ಪ ಇದ್ದಲ್ಲಿ ಪಾಕ ಹೀರಿಕೊಳ್ಳುವುದಿಲ್ಲ.   ಮೊದ ಮೊದಲು ಪಾಕ ಸರಿ ಹದದಲ್ಲಿ ಇದ್ದು ತಣ್ಣಗಾದಂತೆ ದಪ್ಪವಾಗುತ್ತದೆ.. ತುಸುವೇ ನೀರು ಬೆರೆಸಿ ಮತ್ತೆ ಒಂದು ಕುದಿ ಬರಿಸಿಕೊಳ್ಳಬೇಕು                           
೩, ಎಣ್ಣೆ ಸಣ್ಣ ಉರಿಯಲ್ಲಿಯೇ ಕಾಯಬೇಕು ಮತ್ತು ಕೊನೆಯವರೆಗೂ ಉರಿ  ಸಿಮ್ ನಲ್ಲಿಯೇ ಇರಬೇಕು. ಕರಿಯಲು ಎಣ್ಣೆ ಕಡಿಮೆಯಾದರೆ ಸರಿಯಾಗಿ ಬೇಯುವುದಿಲ್ಲ. ಹಿಟ್ಟು ತಳ ಬಿಟ್ಟು ಮೇಲೆ ಬರುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಲೇ ಬೇಕು. ಕೌಚಿ ಮಗುಚಿ ಬೇಯಿಸಬೇಕು. ಉರಿ ಜಾಸ್ತಿಯಾದರೆ ಜಿಲೇಬಿ ಗರಿಗರಿಯಾಗುವುದಿಲ್ಲ. 
೪. ಇನ್ನು ಜಿಲೇಬಿ ಬಿಡುವ ಕಲೆ... ನಿಮ್ಮ ಹಣೆಬರಹದಲ್ಲಿ ಹೇಗಿದೆಯೋ ಯಾರಿಗ್ಗೊತ್ತು..:) ಮೊದಮೊದಲು ಸಕಲೆಂಟು ಜಾತಿಯ ಜೀವರಾಶಿಗಳ ಉಗಮವಾಗಿ ಸಮುದ್ರ ಮಥನದಲ್ಲಿ ಕೊನೆಯಲ್ಲಿ ಅಮೃತ ದೊರಕಿದಂತೆ ನಾಲ್ಕಾರು ಪ್ರಯೋಗಗಳ ಬಳಿಕ ಒಂದು ಶೈಲಿ ನಿಮಗೆ ಒಲಿಯಬಹುದು...  :) ನಾನೂ ಇನ್ನೂ ಪ್ರಾಕ್ಟೀಸ್ ಹಂತದಲ್ಲಿಯೇ ಇದ್ದೇನೆ.  ಕಾಲಾಂತರದಲ್ಲಿ ಸುಧಾರಣೆ ಆಗಬಹುದೆಂಬ ಬಹುದೊಡ್ಡ ನಂಬಿಕೆಯೊಂದಿಗೆ ..:)

ನನ್ನದು ಟ್ರಯಲ್ ಅಂಡ್ ಎರರ್ ಪದ್ಧತಿ ...  ಹಾಗಾಗಿ ನನ್ನ ಜಿಲೇಬಿಗೆ ಇನ್ನೂ ಉತ್ತಮ ತರಗತಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ  ಅಗತ್ಯ ಇರಬಹುದು...  ಇಲ್ಲಿರುವ ಜಿಲೇಬಿ ಪಂಡಿತರುಗಳು ಹೆಚ್ಚಿನ ಮಾಹಿತಿ ಕೊಡುತ್ತಾರೆಂದು ಭಾವಿಸುತ್ತಾ ಈ ರಗಳೆಯನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳು .

Friday, August 23, 2013

ನಮ್ ಕಾಲು ನಾವೇ ಎಳ್ಕೊಂಡ್ರೆ ಹೇಗಿರುತ್ತೆ ..!! ?


 ಗೆಳತಿ ಜಯಲಕ್ಷ್ಮಿ ಶೇಖರ್ ಯಾವತ್ತೂ ಹೇಳ್ತಿರ್ತಾರೆ ,  ''ವಿಜಯ ನಮ್ಮ ಕಾಲನ್ನು ನಾವೇ ಎಳ್ ಕೊಳ್ಳೋದು ಕಷ್ಟ ಕಣ್ರೀ, ಆದ್ರೆ ನೀವು ನಿಮ್ಮ ಕಾಲನ್ನೇ  ಎಷ್ಟ್ ಚನ್ನಾಗಿ ಎಳ್ಕೊತೀರ ಅಂತೆಲ್ಲಾ.  ನನಗೆ ಆಶ್ಚರ್ಯ,  '' ನಾನ್ಯಾವಾಗ ನನ್  ಕಾಲ್ ಎಳ್ಕೊಂಡೆ,  ಇವ್ರ್ಯಾವಾಗ ನೋಡಿದ್ರು  ಅಂತಾ.''   ಆದರೂ 'ಚನ್ನಾಗಿ' ಅಂತ ಹೇಳಿದ್ರು ಅಂತ ನಾನು ಯಾರೂ ಇಲ್ಲದಾಗ ನನ್ನ ಕಾಲು   ನಾನೇ ಎಳೆದುಕೊಳ್ಳುವ   ಪ್ರಯೋಗ ಶುರುಮಾಡಿದೆ . ನನ್ನ ಕೈಗೆ ಕಾಲೇ ಎಟುಕಲಿಲ್ಲ.  ಎನ್ಮಾಡಲಿ ..?  ಬೇಜಾರಾಗೊಯ್ತು. ಮನಸ್ಸೆಲ್ಲಾ ಬ್ಲಾಂಕು ..ಸೊನ್ನೆ,   . ತಲೆ ಪೂರಾ ಶೂನ್ಯ..   ಜಯಲಕ್ಷ್ಮಿ ಸುಳ್ಳೇ ಹೇಳಿದ್ದಾರೆ   ಅಂತ ತಲೆ ಮೇಲೆ ಕೈ ಹೊತ್ತು ಕೂತೆ.   ಪ್ರಾಕ್ಟಿಕಲ್ ಫೇಲು .. ಥಿಯರಿನಾದ್ರೂ ಬರಿಯೋಣ ಅಂದುಕೊಂಡು ಪೆನ್ನು ತಗೊಂಡಿದ್ದಕ್ಕೆ   ಹೀಗಾಯ್ತು  ನನ್ನ ಕಥೆ.   ನನ್ನ ಕಾಲು ನಾನೇ ಎಳೆದುಕೊಂಡರೆ, ಎಳೆದುಕೊಳ್ಳುತ್ತಾ ಇದ್ದರೆ ನಾನು ಹೀಗೇ ಕಾಣಬಹುದು  ಸೊನ್ನೆ ಥರಾ,  ಅನ್ನುವ ಇಮ್ಯಾಜಿನೆಷನ್ನು... :) :)   







Wednesday, June 19, 2013

ಮಾವನವರ ಚಿತ್ರ .

ಇದು ನಾನು ರಚಿಸಿದ ನನ್ನ ಮಾವನವರ ಚಿತ್ರ . ಅವರು ನಮ್ಮನ್ನಗಲಿ ಮೂರು ವರ್ಷಗಳ ಮೇಲಾಯ್ತು.  ಬದುಕಿದ್ದಾಗ ಅನೇಕ ಸಲ ಹೇಳಿದ್ದರು.   ''ವಿಜಯ, ನನ್ನದೊಂದು ಚಿತ್ರ ಬರಿ'' ಅಂತ. ನಾನು ಬರೆದಿರಲಿಲ್ಲ. ನನಗೆ ಇಷ್ಟರ ಮಟ್ಟಿಗೆ ಚಿತ್ರಿಸಲು ಬರುತ್ತೆ ಅನ್ನುವ ಕಲ್ಪನೆ ಆಗ  ನನಗಿರಲಿಲ್ಲ. ಆ ಅಳುಕಿನಿಂದ  'ಬರೀತೀನಿ, ಬರೀತೀನಿ' ಅನ್ನುತ್ತಾ ಕಾಲ ಕಳೆಯುತ್ತಿದ್ದಂತೆ  ಅವರೇ 'ಬರುತ್ತೀನಿ,' ಎನ್ನುತ್ತಾ ಎದ್ದು ಹೋದರು.  ನನಗೆ ಅದೊಂತರ ಗಿಲ್ಟ್ ಸದಾ ಕಾಡುತ್ತಲೇ ಇರುತ್ತದೆ. ಕೆಲವು ತಿಂಗಳುಗಳ ಕೆಳಗೆ  ಮನೆಯಲ್ಲಿ  ಮದುವೆ  ಸಮಾರಂಭವಿತ್ತು. ಆ ಸಮಯದಲ್ಲಿ   ಈ ಚಿತ್ರ ಬರೆದು ಕಟ್ಟು ಹಾಕಿಸಿ ಗೋಡೆಗೆ ನೇತು ಹಾಕಿದೆ.  ಮಾವ ಇದ್ದಿದ್ದರೆ ತುಂಬಾ ಸಂತಸ ಪಡುತ್ತಿದ್ದರು.




ಚಿತ್ರ ಬರೆದಾದ ತಕ್ಷಣ ಸ್ಕ್ಯಾನ್ ಮಾಡದೇ   ಗಡಿಬಿಡಿಯಲ್ಲಿ ಫ್ರೇಮ್ ಹಾಕಿಸಿ ಊರಿಗೆ  ಕಳಿಸಿಯಾಯ್ತು . ನಂತರ ಫೋಟೋ ತೆಗೆದು ಇಲ್ಲಿ ಹಾಕಿದ್ದು.  
ಮಾವ



ವಂದನೆಗಳು


Friday, November 2, 2012

ಬಾಳೆದಿಂಡಿನ ದೀಪಸ್ಟ್ಯಾಂಡ್..

 ದೀಪಾವಳಿ ಬೆಳಕಿನ ಹಬ್ಬ. ಕತ್ತಲ ಕೊಳೆಯ ತೊಳೆಯುವ ಹಬ್ಬ. ತಾಮಸವ ಕಳೆದು ಜಗಕೆಲ್ಲ ಸತ್ವವ ಕೊಡುವ ಹಬ್ಬ. ಅಮಾವಾಸ್ಯೆ ಕಳೆದು ಪಾಡ್ಯ ಬರುತ್ತಿದ್ದಂತೆ ಮನೆ ಮನೆಯಲ್ಲೂ, ಪ್ರತಿ ಹೊಸಲಿನಲ್ಲೂ ಸಾಲು ಸಾಲಾಗಿ ಬೆಳಕಿನ ಚಿತ್ತಾರಗಳು. ತುಳಸಿ ಕಟ್ಟೆಯ ಸುತ್ತ, ಅಂಗಳದ ತುಂಬೆಲ್ಲಾ ಬಲೀಂದ್ರನನ್ನು ಸ್ವಾಗತಿಸಲು ತೆಂಗಿನ ಕಡ್ಡಿಗೆ ಬಿಳಿ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿ ಹಚ್ಚಿ ಅಲ್ಲಲ್ಲಿ ಸಾಲಾಗಿ ಸಿಕ್ಕಿಸಿದ ಸೂಡಿಗಳು.



 

ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!

ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.



 ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ,   ಚಿಕ್ಕ ಚಾಕು.


  
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.



 * ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.

* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು



* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.

ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !

ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
  ಇದು ದೀಪಾವಳಿ ಸ್ಪೆಶಲ್ ದೀಪ.
 ಈ ಲೇಖನ  ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ  ಪ್ರಾಪರ್ಟಿಯಲ್ಲಿ  ಪ್ರಕಟವಾಗಿದೆ.

Wednesday, October 17, 2012

ಹಳತು...

 ಒಂದಷ್ಟು ಹಳೆಯ ಚಿತ್ರಗಳು.. ಸುಮಾರು ಹದಿನೆಂಟರಿಂದ ಇಪ್ಪತ್ತು ವರ್ಷ ಹಳೆಯವು..  ಸಾಧ್ಯವಾದರೆ ಅಡಿಬರಹ ಕೊಡಿ ನೀವೂ ...:)


1. ವಾಟರ್ ಕಲರ್

ಗತಕಾಲದ ನೆನಪುಗಳು 


2. ನಿಬ್ ಪೇಂಟಿಂಗ್ 

ಕತ್ತಲಲೂ ಜೊತೆಯಾಗಿ ಬೆಳಕ ನೋಡುವ ಬಾ
[ ಮಂಜುಳಾ ಬಾಬಲಾಡಿಯವರು ಕೊಟ್ಟ ಅಡಿಬರಹ ]


3. ಫ್ಯಾಬ್ರಿಕ್ ಪೇಂಟಿಂಗ್

  ಹೂಅರಸಿ 

  4.  ವಾಟರ್ ಕಲರ್

ರಾಜೀವ್ ಗಾಂಧಿ 

5.  ವಾಟರ್ ಕಲರ್ 

ಸ್ಥಿರ ಚಿತ್ರ 


6.  ವಾಟರ್ ಕಲರ್ 

ರಾಮ ಗುಹನನ್ನು ಸಂಧಿಸಿದ್ದು ..  ಬೊಂಬೆ ಮನೆ ಚಿತ್ರ ನೋಡಿ ಬರೆದಿದ್ದು.


7. ಚಾರ್ಕೋಲ್ ಪೇಂಟಿಂಗ್ 


Saturday, July 7, 2012

ರೂಪಾ೦ತರದೊಳಗೊ೦ದು ಸುತ್ತು..!




ಹದಿ ಹರೆಯ ಅನ್ನುವುದು ಮನುಶ್ಯನ ಒ೦ದು ಸ್ಥಿತಿಯಿ೦ದ ಇನ್ನೊ೦ದು ಸ್ಥಿತಿಗೆ ರೂಪಾ೦ತರ ಹೊ೦ದುವ ಒ೦ದು ಪ್ರಮುಖ ಘಟ್ಟ.ಕನಸುಗಳು ಮೂಡುವ ಹೊತ್ತು. ದೈಹಿಕವಾಗಿ, ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ಪ್ರತಿ ಮಗುವೂ ಈ ಸಮಯದಲ್ಲಿ ಬದಲಾವಣೆ ಹೊ೦ದುತ್ತದೆ. ಪ್ರತೀ ತಾಯ್ತ೦ದೆಯರಿಗೆ ತಾವೂ ಕೂಡಾ ಬದಲಾಗಲೇ ಬೇಕಾದ ಅನಿವಾರ್ಯತೆ.    ಈ ಸಮಯದಲ್ಲಿ ಮಕ್ಕಳು ತು೦ಬಾ ಸ್ವಕೇ೦ದ್ರಿತ ಮನೋಭಾವವನ್ನು ಹೊ೦ದಿರುತ್ತಾರೆ. ಅಪ್ಪ ಅಮ್ಮ ಏನು ಹೇಳಿದರೂ ಅದು ತಪ್ಪಾಗಿಯೇ ಕಾಣಿಸುತ್ತದೆ. ತನಗೆ ಎಲ್ಲವೂ ಗೊತ್ತು ಮತ್ತು ಅಪ್ಪ ಅಮ್ಮನಿಗೆ ಅಥವಾ ಮನೆಯ ಉಳಿದ ಸದಸ್ಯರಿಗೆ ಇದೆಲ್ಲಾ ಗೊತ್ತಿಲ್ಲ ಎನ್ನುವ ಮನಸ್ಥಿತಿಯನ್ನು ಮುಖ್ಯವಾಗಿ ಹೊ೦ದಿರುತ್ತಾರೆ..    ಇದಕ್ಕೆ ಕಾರಣವೇನೆ೦ದರೆ ಮಗುವು ಪ್ರೌಢವಾಗುತ್ತಾ ತಾಯ್ತ೦ದೆಯರ ಪರಿಧಿಯಿ೦ದ ನಿಧಾನ ಹೊರಬರಲೆತ್ನಿಸುವುದು. ಅದಕ್ಕಾಗಿ ಇದು ಒ೦ದು ಸಹಜವಾದ ಹೋರಾಟ. ಅವನಿಗೆ/ಳೆ  ತನ್ನದೊ೦ದು ವ್ಯಕ್ತಿತ್ವವನ್ನು ಸೃಷ್ಟಿಸಿಕೊಳ್ಳಬೇಕಾಗಿದೆ.  ಈ ಹ೦ತದಲ್ಲಿ ಪೋಷಕರು ಸರಿಯಾದ ಮಾರ್ಗದರ್ಶನ ಮಾಡ ಬೇಕಾಗುವುದು. ಹೊಸತನ್ನು ಅನುಭವಿಸಬೇಕು  ಮತ್ತು ತಾನು ಎಲ್ಲವನ್ನೂ ಪಡೆಯಬಲ್ಲೆ ಅನ್ನುವ ಅತ್ಯುತ್ಸಾಹ ಅವರಲ್ಲಿ  ತುಡಿಯುತ್ತಿರುತ್ತದೆ. ಆದರೆ ದಾರಿ ತಪ್ಪುವ ಸ೦ದರ್ಭಗಳೂ ಎದುರಿಗಿರುತ್ತವೆ. ಮಕ್ಕಳು ಅನುಭವಕ್ಕೆ ತೆರೆದುಕೊಳ್ಳಲೆತ್ನಿಸುತ್ತಾರೆ. ತಾಯ್ತ೦ದೆಯರು
ತಮ್ಮ ಅನುಭವವನ್ನು ಮಕ್ಕಳ ಮೇಲೆ ಹೇರುತ್ತಾರೆ.ಆಹಾರ, ವಿಹಾರ, ವಿಚಾರ ಎಲ್ಲದರ ಮೇಲೆ ತಮ್ಮ ಅನುಭವದ ಹಸ್ತಕ್ಷೇಪ ಮಾಡಿದ೦ತೆ ಮಕ್ಕಳಿಗೆ ಕಾಣತೊಡಗುತ್ತದೆ.
 ಹದಿಹರಯದ  ಮಕ್ಕಳಿಗೆ ತಮ್ಮ ಓರಗೆಯವರಲ್ಲಿ ಯಾವಾಗಲೂ ತಾವೇ ವಿಶೇಷವಾಗಿ, ಭಿನ್ನವಾಗಿ ಎದ್ದು ಕಾಣಬೇಕೆ೦ಬ ಹ೦ಬಲ. ಕನ್ನಡಿಯೊ೦ದಿಗಿನ ಒಡನಾಟ ಹೆಚ್ಚು.
  ಕೆಲ ಮಕ್ಕಳಿಗೆ ತಮ್ಮ ಶರೀರದ ಬಗೆಗೆ  ಅತೀ ಕಾಳಜಿ ಹಾಗು ಕೆಲವೊಮ್ಮೆ  ನಕಾರಾತ್ಮಕ ಭಾವನೆ ಮೂಡತೊಡಗುತ್ತದೆ. ದಪ್ಪಗಿರುವವರಲ್ಲಿ, ಕುಳ್ಳಗಿರುವವರಲ್ಲಿ, ಕಪ್ಪಗಿರುವವರಲ್ಲಿ ಈ ಕೀಳರಿಮೆ ಹೆಚ್ಚು. ಸುಮ್ಮನೆ ಚಾಳಿಸಲು ಯಾರಾದರೂ ನಿನ್ನ ಮೂಗು ದಪ್ಪ, ನಿನ್ನ ಕೂದಲು ಕೊತ್ತ೦ಬರೀ ಕಟ್ಟು ಅ೦ತ ಹೇಳಿದರೂ ಸಹಾ ಅದನ್ನೇ ಮನಸ್ಸಿಗೆ ಹಚ್ಚಿಕೊ೦ಡು ಕೊರಗುತ್ತಾರೆ.


ಹತ್ತನೆ ತರಗತಿಯಲ್ಲಿ ಹೆಚ್ಚಿನ ಅ೦ಕ ಗಳಿಸುವಲ್ಲಿನ ಪೋಷಕರ ಮತ್ತು ಮನೆಯವರ ಒತ್ತಡ ಮಗುವಿನಲ್ಲಿ ಸಾಕಷ್ಟು ಗೊ೦ದಲವನ್ನು ಸೃಷ್ಟಿಸುತ್ತದೆ. ಬಹು ವಿಧ  ಪಠ್ಯ ವಿಷಯ ಕಲಿಕೆಯ ಪರಿಣಾಮ ಮಗುವಿಗೆ  ಯಾವುದನ್ನೂ ಆಳವಾಗಿ ಅಭ್ಯಸಿಸಲು  ದಕ್ಕುವುದಿಲ್ಲ. ಸಿಕ್ಕಾಪಟ್ಟೆ ಸ್ಪರ್ಧಾತ್ಮಕ ಜಗತ್ತು ಮತ್ತು ಅತಿಯಾದ ನಿರೀಕ್ಶೆ ಮಕ್ಕಳಲ್ಲಿ ಒ೦ದು ರೀತಿಯ ಅಸಹನೆಯನ್ನು ರೂಪಿಸುತ್ತದೆ. ತನ್ನ ಮಗು ಹೆಚ್ಚಿನ ಅ೦ಕ ಗಳಿಸಿ ತಾ೦ತ್ರಿಕವೋ ವೈಧ್ಯಕೀಯವೋ ಕ್ಷೇತ್ರದಲ್ಲಿಯೇ ಕಾಲಿಡಬೇಕೆನ್ನುವ ಹೆತ್ತವರ ಹಪಾಹಪಿಯಲ್ಲಿ ಮಕ್ಕಳ ಮಾನಸಿಕ ಆಗು ಹೋಗುಗಳು ನಿರ್ಲಕ್ಷಕ್ಕೊಳಗಾಗುತ್ತವೆ. ತಾನು ಓದುವುದರಿ೦ದ ಹೆತ್ತವರಿಗೆ ಏನೋ ಹಿರಿಮೆಯಿದೆ. ಅದಕ್ಕಾಗಿ ತಾನೇಕೆ ಸುಮ್ಮನೆ ಒಪ್ಪಿಕೊಳ್ಳಬೇಕು.. ನನಗೊ೦ದು ಬೈಕ್ ಕೊಡಿಸು, ಹೊಸ ನಮೂನೆಯ ಮೊಬೈಲ್ ಕೊಡಿಸು  ನಾನು ನಿನಗಾಗಿ ಓದುವುದಿಲ್ಲವೇ? ಇದಕ್ಕಾಗಿ ನನಗೆ ಈ ಎಲ್ಲವೂ ಬೇಕು ಎನ್ನುವ   ಹಟಮಾರೀತನ ಮಕ್ಕಳ ಮನಸ್ಸಿನಲ್ಲಿ  ಈಗೀಗ ಹೆಚ್ಚಾಗುತ್ತಿದೆ. ಎದುರಿಗೆ ಅದು ಗೋಚರವಾಗದಿದ್ದರೂ ಅವ್ಯಕ್ತವಾಗಿ ಅದು ಹೀಗೆ ಇರುತ್ತದೆ.

ಹೈಸ್ಕೂಲು ಮುಗಿಯುತ್ತಿದ್ದ೦ತೆ ಕಾಲೇಜಿಗೆ ಹೋಗುವ ಸ೦ಭ್ರಮ. ಹೈಸ್ಕೂಲಿನ ಕಟ್ಟುನಿಟ್ಟಿನ ಶಿಸ್ತು, ಶಿಕ್ಷಕರ ಹತೋಟಿ, ಅಪ್ಪ ಅಮ್ಮ೦ದಿರ ಹಿಡಿತ, ಎಲ್ಲವೂ ಒಮ್ಮೆಲೆ ತಪ್ಪಿ ಮನಸ್ಸು ಕುದುರೆಯಾಗುವುದು ಸಹಜ.  ಕಣ್ಣಿಗೆ ಕ೦ಡ ಎಲ್ಲ ಹೊಸತೂ ಆಕರ್ಷಣೀಯ. ಹತ್ತನೇ ತರಗತಿ ಅನ್ನುವ ಒ೦ದು ವಿಶಿಷ್ಟ ಹ೦ತವನ್ನು ತೇರ್ಗಡೆಯಾಗುವಲ್ಲಿನ ಒತ್ತಡ, ಗೊ೦ದಲ, ಭಯ, ಒಮ್ಮೆಲೆ ಕರಗಿ ಹೋದ೦ತೆನಿಸುತ್ತದೆ. ಕಾಲಕ್ಕೆ ತಕ್ಕ೦ತ ಹೊಸ ಹೊಸ ಬಗೆಯ ದಿರಿಸುಗಳೂ, ಎಲೆಕ್ಟ್ರಾನಿಕ್ ವಸ್ತುಗಳೂ, ವಿವಿಧ ಹವ್ಯಾಸಗಳೂ ಮನಸೆಳೆಯುತ್ತವೆ. ಇ೦ತಹಾ ಸ೦ದರ್ಭಗಳಲ್ಲಿ ಪೋಷಕರಿಗೂ ಮಕ್ಕಳಿಗೂ ನಡುವೆ ಸಾಕಷ್ಟು ತರದಲ್ಲಿ ಸ೦ಘರ್ಷಗಳು೦ಟಾಗುತ್ತವೆ.  ಬೇರೆಯ ಮಕ್ಕಳಲ್ಲಿವೆ ನಮ್ಮಲ್ಲಿಲ್ಲ ಅನ್ನುವ ಭಾವ, ಮತ್ತು ಮಾಡ್ರನ್ ದಿರಿಸುಗಳನ್ನು ಧರಿಸಲು ಕಡಿವಾಣ ಹಾಕಿದಲ್ಲಿ  ಈ ಟ್ರೆ೦ಡೀ ಜಗತ್ತಿನಲ್ಲಿ  ನಮ್ಮ ಮಗುವೇ ಕೀಳರಿಮೆಯಿ೦ದ ನರಳತೊಡಗುತ್ತದೆ.

ಮಕ್ಕಳ ಒತ್ತಾಯಕ್ಕೆ ಒಲಿದು ಕೆಲವೊಮ್ಮೆ ನಲಿದು ಮೊಬೈಲ್ ಕೊಡಿಸಿದರೆನ್ನಿ. ಅದರ ಇಯರ್ ಫೋನನ್ನು ಕಿವಿಗಿಟ್ಟು ಕೂತರೆ೦ದರೆ ಯಾರು ಕರೆದರಿಲ್ಲ. ಕೂಗಿದರಿಲ್ಲ. ಮನೆಗೆ ಯಾರಾದರೂ ಅತಿಥಿಗಳು ಬ೦ದರೂ ಮಾತನಾಡಿಸಲು ಹೇಳಬೇಕು. ಕ೦ಪ್ಯೂಟರಿನ ಮು೦ದೆ  ಕೂತ ಮಕ್ಕಳು ಊಟಕ್ಕೆ ಕರೆದರೂ ಹ್ಣೂ ಹ್ಣಾ.. ಗುಟ್ಟಿದರೆ ನಮ್ಮ ಪುಣ್ಯ. ಇ೦ಟರ್ನೆಟ್ಟಿನ್೦ದ ಮಾಹಿತಿಗಳನ್ನು ಶೋಧಿಸಿ  ಮಕ್ಕಳು ಬುದ್ಧಿವ೦ತರಾಗಲಿ ಎ೦ದು ಕ೦ಪ್ಯೂಟರ್ ತ೦ದುಕೊಟ್ಟರೆ ಅವರು ಆನ್ ಲೈನ್ ಗೇಮ್ ಆಡತೊಡಗುತ್ತಾರೆ. ಓದ್ಕೋ, ಓದಿದ್ಯಾ ಕೇಳುವ ಹಾಗೇ ಇಲ್ಲ.  ನಿನಗೆ ಗೊತ್ತಾಗೋಲ್ಲ ಸುಮ್ಮನಿರು.. ಇದೊ೦ದು ಗೇಮ್ ಮುಗಿಸಿ ಬರ್ತೇನೆ.. ಎನ್ನುತ್ತಾರೆ.
ಎಷ್ಟೊತ್ತಿಗೂ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊ೦ಡು ಮ್ಯುಸಿಕ್ ಕೇಳುವುದು ಕಿವಿಯ ಆರೋಗ್ಯಕ್ಕೆ ಹೇಗೂ ಕೆಟ್ಟದ್ದು. ಜೊತೆಗೆ ಅವರು ಪ್ರಪ೦ಚವನ್ನು ಗಮನಿಸುವುದನ್ನು ಕಡಿಮೆ ಮಾಡುತ್ತಾರೆ. ಪ್ರಕೃತಿಯಲ್ಲಿನ ಅನೇಕಾನೇಕ ಸೂಕ್ಶ್ಮ ಸ೦ವೇದನೆಗಳು,ಭಾವನೆಗಳೂ, ಭಾ೦ಧವ್ಯಗಳೂ ಅವರ ಮನಸ್ಸಿಗೆ ತಾಗುವುದೇ ಇಲ್ಲ.ಆಗ ತನ್ನಿ೦ದ ತಾನೇ ಸ್ವಕೇ೦ದ್ರಿತರಾಗುತ್ತ ಹೋಗುತ್ತಾರೆ.  ಮನಸ್ಸಿನ ಏಕಾಗ್ರತೆಯೊ೦ದಿಗೆ ಕ್ರಿಯಾಶೀಲತೆಯೂ ಕಡಿಮೆಯಾಗುತ್ತಿದೆ. ಇ೦ಟರ್ನೆಟ್ನ ಅಪಾಯವೂ ಹೀಗೇ ಅನೇಕ. ಒಮ್ಮೆ ಮನೆಯಲ್ಲಿ ಸಿಸ್ಟಮ್ಮನ್ನು ಪ್ರತಿಸ್ಟಾಪಿಸಿದ ಮೇಲೆ ಮುಗಿದೇ ಹೋಯಿತು. ಬೇಡ ಅ೦ದರೆ ಕೇಳುವವರಾರು.? ಏನೋ ದುಡಿಯುವುದೆಲ್ಲ ನಮ್ಮ ಮಕ್ಕ್ಳಿಗೇ ತಾನೆ ಎ೦ದು ಸವಲತ್ತುಗಳನ್ನು ಒದಗಿಸುವುದು. ನ೦ತರದಲ್ಲಿ ಹೀಗೆ ಮಾಡುತ್ತಾರೆ೦ದು ಗೋಳಾಡುವುದು ಇ೦ದಿನ ಪೋಷಕರ ಸ್ಥಿತಿ.   ದೊಡ್ಡ ಮಕ್ಕಳಿಗೆ ಹೊಡೆದು ಬೈದು ಬುದ್ದಿಹೇಳಲು ಕಷ್ಟ.  ಸಮಾಧಾನದ ಮಾತುಗಳು ತಾಗುವುದೇ ಇಲ್ಲ..ಮತ್ತು   ಇ೦ದಿನ ಅಪ್ಪ ಅಮ್ಮ ತಮ್ಮ ಮಕ್ಕಳನ್ನು ಗಮನಿಸುವುದು ಹೆಚ್ಚು. ಇರುವ ಒಬ್ಬ, ಇಬ್ಬ ಮಕ್ಕಳನ್ನು  ಹೀಗೆ ಮಾಡಿ, ಹಾಗೆ ಮಾಡಿ, ಮಾಡಬೇಡ ಎನ್ನುವ  ಸಲಹೆಗಳನ್ನು ಕೊಡುವುದು ಅತಿಯಾಗಿ ಹೋಗಿದೆ. ಯಾರೂ ಯಾರ ಮಾತನ್ನೂ ಕೇಳುವುದಿಲ್ಲ  ಒಟ್ಟಿನಲ್ಲಿ ಮನೆಯೊ೦ದು ಅಶಾ೦ತಿಯ ಸಾಗರವಾಗತೊಡಗುತ್ತದೆ.

ಇಲ್ಲಿ ಪೋಷಕರೆ ನೇರವಾಗಿ ಜವಾಬ್ಧಾರರು. ನಾವ೦ತೂ ಯಾವ ಸವಲತ್ತುಗಳನ್ನೂ ಅನುಭವಿಸಲಿಲ್ಲ. ಮಕ್ಕಳಾದರೂ ಅನುಭವಿಸಲಿ ಎನ್ನುವ ಅನಾರೋಗ್ಯಕರ  ಮುಚ್ಚಟೆಯೇ ಇದಕ್ಕೆ ಕಾರಣ.ಕೆಲಸಕ್ಕೆ ಹೋಗುವ ತಾಯ್ತ೦ದೆಯರು ತಮ್ಮ ಮಗುವಿನೊ೦ದಿಗೆ ಸಮಯ ಕಳೆಯಲಾರದ ಸ೦ಕಟದಲ್ಲಿ,  ಹೊರಾ೦ಗಣ  ಕ್ರೀಡೆಗಳಿಗೆ ಅವಕಾಶವಿಲ್ಲದಲ್ಲಿ, ಸಮಯ ಕಳೆಯಲು ಹೀಗೆ ನಾನಾ ತರದ ಆಮಿಷಗಳನ್ನು ಒಡ್ಡಿ ಸಮಾಧಾನಿಸುವ ಪ್ರಯತ್ನ ಮಾಡುತ್ತೇವೆ.ಹೆತ್ತವರು ಮಕ್ಕಳು ಪ್ರಕೃತಿಯೊ೦ದಿಗೆ ಸೌಹಾರ್ದವಾಗಿ ಬೆರೆಯುವಲ್ಲಿ ಸಹಕಾರಿಯಾಗಬೇಕು. ಇದಕ್ಕೆ ಮೊದಲು ತಮ್ಮ ಚಿ೦ತನೆಯಲ್ಲಿ ಬದಲಾವಣೆ ತ೦ದುಕೊಳ್ಳಬೇಕು. ಮನೆಯಲ್ಲಿ ಆಧುನಿಕ ವಸ್ತುಗಳನ್ನು ಹೊಕ್ಕಿಸಿಕೊ೦ಡ೦ತೆ ನಾವು ಮಕ್ಕಳೊ೦ದಿಗಿನ ಬಾ೦ಧವ್ಯವನ್ನು ಕಡೆಗಾಣಿಸಿಬಿಡುತ್ತೇವೆ. ಅದಾಗದ೦ತೆ ಪೋಷಕರ ಎಚ್ಚರಿಕೆ ಅತ್ಯಗತ್ಯ.

 ದಿನಾಂಕ - 8/7/2012  ರ ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.
 http://vijaykarnataka.indiatimes.com/articleshow/14735800.cms


ಫೇಸ್ ಬುಕ್ ಗೆಳೆಯರ ಪ್ರತಿಕ್ರಿಯೆಗಳು

Pushparaj Chauta ಪೋಷಕರು ನಿಮ್ಮ ಲೇಖನದೊಳಗಿನ ಆಶಯವನ್ನು ಗಮನಿಸಿ ಅದನ್ನು ಅಳವಡಿಸಿಕೊಳ್ಳಬೇಕಾದ ತೀವ್ರ ಅವಶ್ಯಕತೆಯಿದೆಯೇನೋ.

ಸೂಕ್ತ ಲೇಖನ ಸನ್ನಿವೇಷಗಳಿಗನುಗುಣವಾಗಿ. ಅಭಿನಂದನೆಗಳು ನಿಮಗೆ


Krishna Murthy ‎"ಪ್ರತಿ ಮಗುವಿನ ಹುಟ್ಟಿನಿ೦ದ ಒಬ್ಬ ಅಪ್ಪ, ಒಬ್ಬ ಅಮ್ಮ ಹುಟ್ಟುತ್ತಾರೆ, ", ನಾನು ನನ್ನ ಕನಸು ಚಿತ್ರದ ಒ೦ದು ಸ೦ಭಾಷಣೆ, ಮಕ್ಕಳ ಮನೊವಿಜ್ನಾನ ಬಹಳ ಕ್ಲೀಷ್ಟ, ಆದರೂ ಸರಳವಾಗಿ ವಿವರಿಸಲಾಗಿದೆ. ಅಭಿನ೦ದನೆಗಳು..ಮತ್ತು ಧನ್ಯವಾದಗಳು.

Shama Nandibetta ಸಮಯೋಚಿತ ಲೇಖನ,..

Anitha Naresh Manchi nice


  • Ullas Arabhavi ಒಳ್ಳೆಯ ಲೇಖನ..

  • Pravara Kottur ಓದಲೇಬೇಕಾದ ಬರಹ,

  • Shirva Harish Shetty ಮಕ್ಕಳ ಬೆಳೆವಣಿಗೆಯಲ್ಲಿ ಪೋಷಕರ ಮಹತ್ವ ಎಷ್ಟು ಮಹತ್ವಪೂರ್ಣ ಎಂದು ನಿಮ್ಮ ಈ ಲೇಖನ ಓದಿ ತಿಳಿಯಬಹುದು ....ಸುಂದರ ಬರಹ.......ಮಾಹಿತಿಪೂರ್ಣ ಲೇಖನ.......

Monday, November 8, 2010

ಇವರ್ಯಾರು...?

ಇದು ಕೆಲವು ತಿಂಗಳುಗಳ ಹಿ೦ದೆ ಬರೆದ ಚಿತ್ರ. ಜೆಲ್ ಇಂಕ್ ಪೆನ್ ನಲ್ಲಿ.  ಕೆಲವು ಓರೆ ಕೋರೆ ಗೆರೆಗಳಿದ್ದರೂ ಕೂಡಾ ನನಗೇ ತೃಪ್ತಿ ತಂದ ಚಿತ್ರ. ಕೆಲವೇ ನಿಮಿಷಗಳಲ್ಲಿ  ಒಂದೇ ಹಂತದಲ್ಲಿ ಬರೆದಿದ್ದು. ಇವರ್ಯಾರು  ಎಂದು ನಿಮಗೆ ಸುಲಭವಾಗಿ  ಗುರುತಿಸಲು ಸಾಧ್ಯವೇ...? ಸಾಧ್ಯವಾದಲ್ಲಿ ಬರೆದದ್ದು, ಮತ್ತು ಹೆಮ್ಮೆ ಪಟ್ಟಿದ್ದು ಸಾರ್ಥಕ....!!!



Wednesday, July 28, 2010

ಇರಬಹುದೇ ಹೀಗೆ....?

ಇರಬಹುದೇ ಹೀಗೆ....?
ದೊಡ್ಡ ತಲೆ 
ಹೊರಚಾಚಿದ ಕಣ್ಣು 
ಕುತ್ತಿಗೆಗೇ ಕೈ 
ಸುರುಟಿಹೋದ ಮೈ...

  ಇರಬಹುದೇ ಹೀಗೆ ...?
ಕಿವಿಗೆರಡು ತೂತು..
ಬೇಕಿಲ್ಲದ ಮಾತು..  
ಒಣಗಿ ಹೋದ ನಾಲಿಗೆ ..
ಕೆಲಸವಿಲ್ಲ ಕಾಲಿಗೆ..

ಇರಬಹುದೇ ಹೀಗೆ ..?
ಪರಲೋಕದ ಜೀವಿಯ ಹಾಗೇ..
ಜೀವ ಜಗತ್ತು ವಿಕಾಸವಾದದ್ದು ಹೇಗೆ..?
ಕೆಲಸವಿಲ್ಲದ ಅಂಗ 
ಆಗಬಹುದೇ ಭಂಗ...?

ಇರಬಹುದೇ ಹೀಗೆ..?
ಹತ್ತಾರು ಸಾವಿರ ವರುಷದ ಕೊನೆಗೆ..
ಬೀಸಿ ಗಣಕ ಯಂತ್ರದ ಹೊಗೆ
ಕೆಲಸ.. ತಲೆಗೆ ಮತ್ತು 
ಕೈ ಬೆರಳುಗಳಿಗೆ ಮಾತ್ರ..

ಇರಲೂ ಬಹುದು ಹೀಗೆ..ಮಾನವ 
ಅಳಿಯದೆ ಇದ್ದರೆ ಅವನ ಪೀಳಿಗೆ
 ......ಈ ಭೂಮಿ    ಹಸಿರಿದ್ದರೆ ಜೊತೆಗೆ..


ಅಲ್ವೇ..?
ಆಧುನಿಕತೆ ಮತ್ತು ತಂತ್ರಜ್ಞಾನದ ಸುಳಿಗೆ ಸಿಕ್ಕಿದ ಮನುಷ್ಯ  ಮುಂದೆ... ವಿಕಾಸವಾದಂತೆಲ್ಲಾ.. ಹೀಗಿರಬಹುದೇ.. ಅನ್ನುವುದು ನನ್ನ ಕಲ್ಪನೆ.

ಈಗೀಗ ಕಂಪ್ಯೂಟರ್ ಅಂತೂ  ಪ್ರತಿ ಮನೆಯಲ್ಲೂ ಕಾಣಬಹುದು..ಕಚೇರಿಗಳಲ್ಲೊಂದೆ  ಅಲ್ಲ.. ನನ್ನಂತ ಗೃಹಿಣಿಯರೆ  ಅದರ ಮುಂದೆ ದಿನದಲ್ಲಿ ಎಷ್ಟೊತ್ತು ಕುಳಿತು ಕೊಳ್ಳುತ್ತೇವೆ .. ಅದೇ ಉದ್ಯೋಗ ಮಾಡುವವರು ಸತತ ಎಷ್ಟು ದಿನಗಳ ಕಾಲ ಕುಳಿತು ಕೊಳ್ಳುವರೋ....!!!!  ಮಾತು,  ಊಟ, ನಿದ್ರೆ, ಚಲನೆ ಯಾವುದೂ ನಿಯಮಿತವಾಗಿ ಇರದೇ...


ಇದೆ ತರಹ ಮುಂದುವರೆದರೆ ಮುಂದೊಮ್ಮೆ ಕೆಲವಷ್ಟು ಅಂಗಗಳನ್ನೆ ಕಳೆದು ಕೊಳ್ಳಬಹುದೇ...? ಜೀವ ವಿಕಾಸದ ನಿಯಮದ ಪ್ರಕಾರ...
ಗಣಕ ಯಂತ್ರದಲ್ಲಿ ತಲೆ ಹಾಕಿ ಕುಳಿತು ಕೊಂಡರೆ ಅಲ್ಲಿಂದ  ತಪ್ಪಿಸಿಕೊಳ್ಳಲು ಘಂಟೆ, ದಿನ, ವಾರಗಳೇ ಬೇಕಾಗಬಹುದು..!
ಎಲ್ಲಕ್ಕೂ ಕಂಪ್ಯೂಟರ್... ಹೀಗೆಯೇ ಮುಂದುವರೆದು ಪ್ರತಿ ಮನೆಯಲ್ಲೂ ರೋಬೋಟ್ ಬರಲು ಹೆಚ್ಚಿಗೆ ದಿನಗಳಿಲ್ಲ..ಯಾವ ಕೆಲಸಕ್ಕೂ ಕುಳಿತಲ್ಲಿಂದ ಏಳುವ ಕೆಲಸವಿಲ್ಲ...! ಉಪಯೋಗಿಸದೆ  ಬಿಟ್ಟರೆ ಕಬ್ಬಿಣ ತುಕ್ಕು ಹಿಡಿಯುವಂತೆ ಉಪಯೋಗಿಸದ ನಮ್ಮ ಅಂಗಾಂಗಗಳೂ   ನಶಿಸಿ ಹೋಗಲಾರದೆ...?

ಮುಂದೆ ನಮ್ಮ ಮಕ್ಕಳ, ಮೊಮ್ಮೊಕ್ಕಳ, ಮರಿಮಕ್ಕಳ, ಅವರ ....ಮಕ್ಕಳ ......ಕ್ಕಳ....ಕ್ಕಳ... ಳ...ಳ....ಳ....................................................................................................................................................................ಕಾಲದಲ್ಲಿ ಏನೇನಾಗುವುದೋ.....?





Monday, July 5, 2010

ಪ್ರಕೃತಿ




[ಚಿತ್ರ ನನ್ನದೇ ರಚನೆ.ಗ್ರೀಟಿಂಗ್ ಒಂದರ ಸ್ಫೂರ್ತಿ ]


ನನ್ನಲ್ಲೇ
ಇರುವ
ನನ್ನಿಂದಲೇ ಹುಟ್ಟುವ
ನನ್ನಿಂದಲೇ ಬೆಳೆಯುವ
ಜೀವನ, ಕಲೆ, ಕಾವ್ಯಕೃಷಿಯನ್ನು
ಕದ್ದಿದ್ದೀರೆಂದು,
ಕೃತಿಚೌರ್ಯ ಮಾಡಿದ್ದೀರೆಂದು
ಬೊಬ್ಬೆ ಹೊಡೆಯದ
ಏಕೈಕ ವ್ಯಕ್ತಿಯೇ ನಾನು
.......

ಪ್ರಕೃತಿ


[ಗಮನಿಸಿ ; ಬ್ಲಾಗುಗಳಿಗೆನಾಗಿದೆಯೋ ಗೊತ್ತಿಲ್ಲ.. ಒಂದೂ ಕಾಮೆಂಟ್ ಪಬ್ಲಿಶ್ ಆಗುತ್ತಿಲ್ಲ..
ಬೇರೆಯವರ ಬ್ಲಾಗುಗಳಿಗೆ ಹಾಕಿದ ಕಾಮೆಂಟ್ ಗಳದ್ದು ಕೂಡಾ ಅದೇ ಹಣೆ ಬರಹ..
ಎಲ್ಲಿ ಏನು ತೊಂದರೆ.... ಒಂದೂ ಅರ್ಥವಾಗುತ್ತಿಲ್ಲ..
ಆಗಿನಿಂದ ನನ್ನಷ್ಟಕ್ಕೆ ಗೊಣಗಾಡುತ್ತಿದ್ದೇನೆ.. ಸುಮ್ಮನೆ..
ನೀವೇನೋ ಹೇಳ್ತಾ ಇದ್ದೀರಿ ನನಗೆ ಗೊತ್ತಾಗುತ್ತಿಲ್ಲ... ಕೂತಿದ್ದೇನೆ ಬಿಮ್ಮನೆ....]


Thursday, February 11, 2010

ಐಶು......

ಚಿತ್ರ ನನ್ನ ಮಗಳದು. ಅವಳು .... ತಿಂಗಳ ಮಗುವಾಗಿದ್ದಾಗ ರಚಿಸಿದ್ದು..



Saturday, January 9, 2010

ನೀರ ದಾರಿ....................




ಯುಗಾದಿ ಕಳೆದು
ಮರಳುತಿರೆ ಮತ್ತೆ ಧರೆ
ಸುಡುನೆತ್ತಿ ಬಿಸಿಲ ಮುಸಲಧಾರೆ
ಕಂಕುಳ ಮಗುವಿಗೂ....ಬೆವರಹನಿ ಜಲಧಾರೆ..!


ಛಾಯೆಯಿಲ್ಲದ ಭೂಮಿ
ದೂರದಾ ಹರದಾರಿ
ತೀರದಾ ದಾಹಕ್ಕೆ
ನೀರ ಬಿಂದಿಗೆ ಹೊತ್ತ
ನೀರೆ ಹೊರಟಿಹಳಲ್ಲಿ.....ನೀರಬೇಟೆಗೆ....!


ಭರವಸೆಯ ಹುಸಿನೆರಳು
ವಿಧಿಯ ಕರಿನೆರಳು
ಏಗಬೇಕಿದೆ ಜೀವ
ಬವಣೆಯಾ ಬದುಕಿಗೆ
ಆಗಬೇಕಿದೆ ಅಲ್ಲಿ... ಚಮತ್ಕಾರ ಬಾನಲ್ಲಿ...!


ಸಾಗಬೇಕಿದೆಯಿನ್ನೂ...
ಜೀವದಾ ಹಾದಿ
ಜೀವಜಲ ದರುಶನಕೆ ಹುಡುಕಿ ದಾರಿ
ಬದುಕಲೇ ಬೇಕಿದೆ...ಸ್ವಾಮಿ
ನೀರೆ ಹೊರಟಿಹಳಲ್ಲಿ ...ಕಾಲನಿಗೆ ಬೆನ್ನು ತೋರಿ....!

[ ಚಿತ್ರ ನನ್ನದೇ ರಚನೆ.]

Saturday, January 2, 2010

ಅಮ್ಮಾ.......



ಅಮ್ಮಾ , ನಿನ್ನ ತೋಳತೆಕ್ಕೆಯಲ್ಲಿ,
ಮಡಿಲ ಮೆತ್ತೆಯಲ್ಲಿ,
ಕಣ್ಣಂಚಿನ ರಕ್ಷೆಯಲ್ಲಿ,
ಬರೆದಿದ್ದು ನನ್ನ ಬಾಳನಕ್ಷೆಯಲ್ಲವೇ...?



ಮೊಗದ ತುಂಬಾ
ಮಮತೆ ಬಿಂಬ,
ಹೊತ್ತೆ ನೀನು, ಹೆತ್ತೆ ನೀನು,
ಗೊತ್ತೇ ಆಗಲಿಲ್ಲ.... ನಿನ್ನ ಕಷ್ಟವೇನು...?



ಅಲ್ಲಿ ನೋವು ಕಾಣೆ, ದುಃಖ ಕಾಣೆ,
ಕಥೆಯಿಲ್ಲ, ವ್ಯಥೆಯಿಲ್ಲ,
ದೇವರಾಣೆಗೂ ಮಮತೆಯೊಂದರ
ಒರತೆಯಷ್ಟೇ..... ಅಲ್ವೇ ಅಮ್ಮಾ...?



[ ಮೇಲಿನ ಚಿತ್ರ ನನ್ನದೇ ರಚನೆ. ಯಾರೂ ಇಲ್ಲದಿದ್ದಾಗ, ಹೊತ್ತು ಕಳೆಯಲು ಏನಾದರೂ ಬೇಕಲ್ಲ . ಅನಿಸಿದ್ದನ್ನು ಬರೆದು ಮುಗಿಸಿದಾಗ ಮನಸ್ಸಿಗೆ ಧ್ಯಾನ ನಂತರ ಸಿಗುವ ಆನಂದ ದೊರೆತಂತೆ ಭಾಸವಾಗುವುದು .
ಇದು ನಾನು ಬಾಲ್ಯದಿಂದ ಬೆಳೆಸಿಕೊಂಡು ಬಂದ ಹವ್ಯಾಸ.
ಗುಣಮಟ್ಟ ಹೇಗೆ ಇದ್ದರೂ.... ಹೆತ್ತವಳಿಗೆ ಹೆಗ್ಗಣ ಮುದ್ದು...
ಹಾಗೆ ...
ಅದನ್ನು ಹೆಚ್ಚಿಸಿಕೊಳ್ಳಲು ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ..]