Showing posts with label ಲಹರಿ. Show all posts
Showing posts with label ಲಹರಿ. Show all posts

Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.  


Saturday, April 6, 2013

ಮತ್ತದೇ ಹಾಡು ಅದೇ ರಾಗ..

ನಮ್ಮ ಮನೆ ಎದುರಿಗೆ ಎಳನೀರಪ್ಪನ ಮನೆ. ಮನೆಯೆಂದರೆ ಎದುರಿನ ಸೈಟಿನಲ್ಲೊಂದು ಶೆಡ್ಡು. ದಿನಾಲೂ ಬೆಳಗ್ಗೆ  ಇಂತಾ ಹೊತ್ತು ಎಂಬುದಿಲ್ಲ, ಸೈಕಲ್ಲಿನ ಮೇಲೆ ಎಂಟರಿಂದ ಹತ್ತು ಎಳನೀರಿಟ್ಟು ಕೊಂಡು, ಏಳ್ ನೀರ್  ... ಎಂದು  ತಾರಕದಲ್ಲಿ ಕೂಗುತ್ತಾ ಶುರುಮಾಡಿ ಮಂದ್ರದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಾನೆ.. ಆದರೆ ಕೊನೆಯಲ್ಲಿ  ಶಬ್ದ ಸೈಲೆಂಟಾಗಿ ನಿಶ್ಯಬ್ಧವಾಗುತ್ತದೆ.  ಸೈಕಲ್ಲಿನಲ್ಲಿರುವ ಎಳನೀರು ಕಾಯಿಗಳನ್ನು ನೋಡಿದಮೇಲೆ  'ಏಳ್ ನೀ.....' ಎಂದು ಕೂಗುತ್ತಿದ್ದಾನೆಂಬುದು  ಸ್ಪಷ್ಟವಾಗುತ್ತದೆ.
ಎಳನೀರಪ್ಪನಿಗೆ ವಯಸ್ಸು ಸುಮಾರು ಅರವತ್ತರ ಮೇಲಾಗಿರಬಹುದು. ಮದುವೆಯಾದ ಮಗ ಇದ್ದಾನೆ. ಸೊಸೆ ಮಾತ್ರಾ ಮಗನನ್ನು ಬಿಟ್ಟು ಹೋಗಿದ್ದಾಳೆ.  ಎಳನೀರಪ್ಪನ ಹೆಂಡತಿ ಗಾರ್ಮೆಂಟ್ಸ್ ಗೆಲ್ಲೋ ಹೋಗುತ್ತಾಳೆ.ಅವಳಿಗೂ ಸುಮಾರೇ  ವಯಸ್ಸಾಗಿರಬಹುದು.  ದಿನಾಲೂ ಬೆಳಗಾಯಿತೆಂದರೆ ಕಿವಿಗೆ ಕಡ್ಡಿ ಹಾಕುತ್ತಾ ಹೆಗಲ ಮೇಲಿನ ಟವೆಲ್ಲಿನಿಂದ ಆಗಾಗ ಮುಖ ಉಜ್ಜುತ್ತಾ ಕೂತಿರುವ ಎಳನೀರಪ್ಪನ ದರ್ಶನ ನಮಗೆ. ಬೆಳ ಬೆಳಗ್ಗೆ ಅವನ ಹೆಂಡತಿ ತಿಂಡಿ ಮಾಡಿ ಮನೆ ಕೆಲಸ ಪೂರೈಸಿ ಅವನಿಗಷ್ಟು ತಿಂಡಿ ಕೊಟ್ಟು ತಾನೂ ತಿಂದು ಡಬ್ಬಿ ತೆಗೆದುಕೊಂಡು ಹೋಗುವ ವರೆಗೂ ಹೀಗೆಯೇ ಹಲ್ಲು ಕುಕ್ಕುತ್ತಲೋ, ಕಾಲು ನೀವುತ್ತಲೋ ಕುಳಿತಿರುವ ದುಡಿಯುವ ಗಂಡು  ಎಳನೀರಪ್ಪ ಅದ್ಯಾವಾಗಲೋ ಹೋಗಿ ಒಂದಷ್ಟು ಕಾಯಿಗಳನ್ನು ಸೈಕಲ್ಲಿಗೆ ನೇತು ಹಾಕಿಕೊಂಡು ಬರುತ್ತಾನೆ. ಮನೆ ಮುಂದೆಯೇ ನಾಲ್ಕಾರು ಬಾರಿ ಕೂಗಿ ಕೂಗಿ ಪ್ರಚಾರ ಮಾಡುತ್ತಾನೆ.

ಆವತ್ತು  ಬೆಳಗಿನ ಟೀ  ಸಮಯ, ಮಕ್ಕಳಿಗೆ ರಜೆಯಿದ್ದಿದ್ದರಿಂದ ಮಕ್ಕಳಿನ್ನೂ   ಎದ್ದಿರಲಿಲ್ಲ. ಮನೆಯೊಳಗೆ  ಬೆಳಗ್ಗೆಯೇ ಅದೆಂಥಾ ಸೆಖೆ!  ಫ್ಯಾನಿನ ಕೆಳಗೆ ಕುಳಿತರೆ ಟೀ  ಆರಿ ಹೋಗುತ್ತದೆಂದು ಕಿಟಕಿಯ ಪಕ್ಕದಲ್ಲಿ ನಿಂತು  ತೆಳುವಾಗಿ ಬೀಸುವ ಗಾಳಿಯನ್ನು ಆಸ್ವಾದಿಸುತ್ತಾ  ಟೀ  ಹೀರುತ್ತಿದ್ದೆ.  ಕಿಟಕಿಯಲ್ಲಿ ಹೊರಗೆ ನೋಡಿದಾಗ ನಮ್ಮ ಎಳನೀರಪ್ಪನ ಹೆಂಡತಿ ಲಕ್ಷಣವಾಗಿ ತಲೆಸ್ನಾನ ಮಾಡಿ ತಲೆಗೊಂದು ಬಟ್ಟೆ ಸುತ್ತಿಕೊಂಡು ಊದಿನ  ಕಡ್ಡಿಯಿಂದ  ಹೊಸಲಿನ ಮೇಲಿರುವ ಯಾವುದೋ ದೇವರನ್ನು ಪೂಜಿಸುತ್ತಿದ್ದುದು ಕಾಣಿಸಿತು. ಎಳನೀರಪ್ಪ ಯಥಾಪ್ರಕಾರ ಕಿವಿಗೆ ಕಡ್ಡಿ ಹಾಕುತ್ತಾ ಕುಳಿತಿದ್ದ. ಆ ಮನೆಗೆ ಆತ ಬಾಡಿಗೆಗೆ ಬಂದ  ಹೊಸತು. ನನಗಾದರೋ ಮಕ್ಕಳನ್ನು ಶಾಲೆಗೆ  ಕಳಿಸುವ ಬೆಳಗಿನ ಧಾವಂತವಿರಲಿಲ್ಲ.  ನೋಡುತ್ತಾ ನಿಂತೆ.

ಪೂಜೆ ಮಾಡಿ ಎಳನೀರಪ್ಪನ ಮಡದಿ   ಒಳಗಿನಿಂದ  ಹರಿವಾಣದಲ್ಲಿ ಒಡೆದ ತೆ೦ಗಿನ ಕಾಯಿ, ಹೂ ಮತ್ತೆ೦ತದೋ ಪ್ರಸಾದವನ್ನು ಇಟ್ಟುಕೊ೦ಡು ಬ೦ದು ಗ೦ಡನ ಕೈಲಿ ಕೊಟ್ಟು ಕಾಲಿಗೆ ಭಕ್ತಿಯಿ೦ದ  ನಮಸ್ಕರಿಸಿದಳು.  ಎಳನೀರಪ್ಪ ಕೈಯಲ್ಲಿದ್ದ ಕಡ್ಡಿ ಒರೆಸಿ ಪಕ್ಕಕ್ಕಿಟ್ಟು , ಅವಳ ಹಣೆಗೆ ಕು೦ಕುಮ ಹಚ್ಚಿ  ಹೆರಳಿಗೆ  ಹೂ ಮುಡಿಸಿದ.ಮೇಲು ನಕ್ಕ.  ಪ್ರೀತಿಗೆ ಬಡತನವೇನೂ ಸಿರಿತನವೇನೂ..? ನೋಡುತ್ತಿದ್ದ ನನಗೆ ಮನಸ್ಸು ಮುದವಾಯಿತು. ಅವಳ ಮುಖದಲ್ಲಿ ಅದೆ೦ತದೋ ಕಳೆ.  ಎಳನೀರಪ್ಪ ಪ್ರಸಾದವನ್ನ ತಾನೊ೦ಚೂರು ಬಾಯಿಗೆ ಹಾಕಿಕೊ೦ಡು  ಅವಳಿಗೊ೦ಚೂರು ಕೈಗೆ ಹಾಕಿದ.  ಕುಕ್ಕರುಗಾಲಿನಲ್ಲಿ ಕುಳಿತು ಎರಡೂ ಕೈಗಳಲ್ಲಿ ಪ್ರಸಾದವನ್ನು  ಕಣ್ಣಿಗೊತ್ತಿಕೊ೦ಡು ಬಾಯಿಗೆ ಹಾಕಿಕೊ೦ಡಳು.  ನನಗೆಲ್ಲೊ  ''ಬಡವನಾದರೆ ಏನು ಪ್ರಿಯೆ ಕೈತುತ್ತೂ  ತಿನಿಸುವೆ ”  ಎ೦ದು ರಾಜು ಅನ೦ತ ಸ್ವಾಮಿ ಹಾಡಿದ೦ತಾಯ್ತು.

ಕೆಲಸದವಳು ಬಂದಾಗ ಈ ವಿಚಾರ ಹೇಳಿದೆ..'ಪಾಪ ಕಣೆ,' ಅಂತಾ ಎಕ್ಸ್ಟ್ರಾ ಸೇರಿಸಿದೆ.  ಅವಳು ಕೇಳಿದ್ದೇ  ಮುಸಿ ಮುಸಿ ನಕ್ಕಳು. ''ಅಕ್ಕೋ ಅವ್ನ ಸುದ್ದಿ ಯಾಕೆ, ಎರಡು ಹೆಂಡ್ರಂತೆ ಅವನಿಗೆ.  ಇಲ್ಲೋಬ್ಳು,  ಊರಲ್ಲೋಬ್ಳು  ಇಲ್ಲಿ ಜಗಳ ಮಾಡ್ಕೊಂಡು ಅಲ್ಲಿಗೆ, ಅಲ್ಲಿ ಜಗಳ ಮಾಡ್ಕೊಂಡು ಇಲ್ಲಿಗೆ ಹೋಗ್ತಾನೆ ಇರತ್ತೆ ಸವಾರಿ.  ಸಾಯಂಕಾಲ ನೋಡು ಗೊತ್ತಾಗತ್ತೆ,''  ಅಂತ ಮತ್ತಷ್ಟು ನಕ್ಕಳು.

ಏನೋ  ನನಗೆ ನನ್ನ ಕೆಲಸದಲ್ಲಿ ಅವತ್ತು  ಮರೆತು ಹೊಯಿತು.  

ಮತ್ತೆ ಒಂದೆರಡು ದಿನ ಕಳೆದು ಒಂದಿನ ರಾತ್ರೆ ಸಿಕ್ಕಾಪಟ್ಟೆ ಸೆಖೆ, ಮಳೆ ಬರುತ್ತೇನೋ ಅನ್ನುವಂತೆ  ಆಗಾಗ ಮಿಂಚು, ಗುಡುಗು, ಹೊರಗಡೆ ಒಂದೇ ಸಮನೆ  ಬೀದಿ ನಾಯಿಗಳ ಕೂಗಾಟ.    
ಸೆಖೆ ಅಂದರೆ ಯಮಸೆಖೆ, ಫ್ಯಾನ್ ಹಾಕಿದರೆ ಅದೂ ಬಿಸಿ ಗಾಳಿ. ಕಣ್ಣು ತೆರೆದು ಕುಳಿತರೆ ಕಣ್ಣನೀರ   ಪಸೆಯಷ್ಟೂ ಆವಿಯಾಗಿ  ಬಿಡುವುದೇನೋ ಎಂಬಂತೆ ಕಣ್ಣು ಉರಿ. ಕಿಟಕಿಯ ಬಾಗಿಲು ತೆರೆದು ಸ್ವಲ್ಪ ಗಾಳಿಗೆ ಮುಖವೊಡ್ಡಲು ಪ್ರಯತ್ನಿಸಿದೆ.  ಬೀದಿಯಲ್ಲಿ ಕರೆಂಟು ಕೂಡಾ ಹೋಗಿತ್ತು.  ಮಳೆ ಬರುವ ಲಕ್ಷಣಗಳಿದ್ದುದರಿಂದ ಆಕಾಶವೂ   ಕಪ್ಪು  ಕಾರ್ಗತ್ತಲು.
ಎದುರಿನ ಶೆಡ್ಡಿನಲ್ಲಿ ಇಬ್ಬರು ಜೋರಾಗಿ ಬೈದುಕೊಳ್ಳುವ ಶಬ್ಧ.. ಯಾರೆಂದು ತಿಳಿಯಲಿಲ್ಲ.  ಮಿಂಚು ಹೊಡೆದಾಗ  ಪಕ್ಕನೆ ಎಳನೀರಪ್ಪನ ಮುಖ ಕಾಣಿಸಿತು. ಅವನ ಹೆಂಡತಿಯ ಜುಟ್ಟು ಹಿಡಿದು ರಪ ರಪ ಬಡಿಯುತ್ತಿದ್ದ.  ಯಾವುದೋ ಕೇಳಲಾಗದ ಭಾಷೆಯಲ್ಲಿ ಬೈಯ್ಯುತ್ತಿದ್ದ. ಚೆನ್ನಾಗಿ ಕುಡಿದಿದ್ದನೆಂದು  ತೋರುತ್ತದೆ.  ತೂರಾಡುತ್ತಿದ್ದರೂ ಸಮಾ  ಬಡಿಯುತ್ತಿದ್ದ. ಅಷ್ಟೊತ್ತಿಗೆ ಅವನ ಮಗ ಶೆಡ್ ಒಳಗಿನಿಂದ ಬಂದವನೇ ತಾಯಿಯನ್ನು ಬಿಡಿಸಿ ಅಪ್ಪನಿಗೆ ಮುಖ ಮೂತಿ ನೋಡದೆ ಭಾರಿಸಲು ಶುರು ಮಾಡಿದ. ಅಂತೂ ತಪ್ಪಿಸಿಕೊಂಡ ಎಳನೀರಪ್ಪನ ಹೆಂಡತಿ ಆಚೆ ಕುಕ್ಕರಿಸಿ ಸುಧಾರಿಸಿಕೊಳ್ಳುತ್ತಿದ್ದವಳು   ಕೆಲ ನಿಮಿಷ ಬಿಟ್ಟು ಒಳ ಹೋಗಿ ಬಿಂದಿಗೆಯಲ್ಲಷ್ಟು ನೀರು ತಂದು ಅವನಿಗೆ ಎರಚಿದಳು. ಮಗ ಹೊಡೆಯುತ್ತಲೇ ಇದ್ದ.

ಎಳನೀರಪ್ಪನ ಹೆಂಡತಿ ತಾನು  ಹೊಡೆಸಿಕೊಂಡರೂ ಈಗ,  ''ಸಾಕು ಬಿಡೋ ಸಾಕು ಬಿಡೋ,''ಎಂದು ಮಗನನ್ನು ತಡೆಯಲು ಬಂದಳು. ಮಗ ಕೇಳದಿದ್ದಾಗ ''ನಿನ್ನ ದಮ್ಮಯ್ಯ ಬಿಟ್ಬಿಡೋ ಹೊಡಿಬೇಡ,'' ಎಂದು ಅಂಗಲಾಚ ತೊಡಗಿದಳು. ನೋಡುತ್ತಿದ್ದ ನಮಗೆ ಸಂಕಟವಾಯಿತು.

ಮತ್ತೆ ಬೆಳಿಗ್ಗೆ ಏನೂ ಆಗಲೇ ಇಲ್ಲವೆಂಬಂತೆ ಎಳನೀರಪ್ಪ ಕಾಲು ನೀವಿಕೊಳ್ಳುತ್ತಾ  ಕುಳಿತಿದ್ದ. ಹೆಂಡತಿ ತಿಂಡಿ ಕಟ್ಟುತ್ತಿದ್ದಳು...ಮತ್ತದೇ ಹಾಡು ಅದೇ ರಾಗ..  ಸಂಜೆಯಾಗುತ್ತಲೂ ಅದೇ ತಾಳ..!

ಎಷ್ಟು ಕಾನೂನುಗಳು ಬಂದರೂ, ಎಷ್ಟು ಮಹಿಳಾ ದಿನಾಚರಣೆಗಳು ಆಚರಿಸಿಕೊಂಡರೂ ಕುಡುಕ ಗಂಡನ ಹೆಂಡತಿ ಹೀಗೆಯೇ ಇರುತ್ತಾಳೆ, ಹೆಂಡದಂಗಡಿ ಇರುವ  ತನಕ.  ...!!






Thursday, January 10, 2013

ಆಟೋದ ಪ್ರಯಾಣವೂ ಕಾರಿನ ರಗಳೆಯೂ..

ನಾನ್ಯಾವತ್ತೂ ಮಾರ್ಕೆಟಿಗಾಗಲೀ ಶಾಪಿಂಗ್ ಗಾಗಲೀ ಸಾಧ್ಯವಾದಷ್ಟೂ ಆಟೋದಲ್ಲೇ ಹೋಗುವುದು.. ಮತ್ತು ಯಾವಾಗ ನಾನು ಮಲ್ಲೇಶ್ವರಮ್ಮೋ , ಮತ್ತೆಲ್ಲೋ ಹೋಗ ಬೇಕಾದರೆ ನನ್ನವರನ್ನು ಕೇಳುತ್ತೇನೆ.. 'ಏನ್ರೀ  ಸ್ವಲ್ಪ ಡ್ರಾಪ್   ಕೊಡುತ್ತೀರಾ?'    ನನ್ನವರು ಯಾವತ್ತೂ ಇಲ್ಲಾ ಅನ್ನದೆ, ''ಮಲ್ಲೇಶ್ವರಮ್ಮಾ... ಎಷ್ಟೊತ್ತಿಗೆ..?  ಆ೦..  ಊಂ..  ಇವತ್ತು ಯಾರೋ ವಿಸಿಟರ್ಸ್ ಬರೋರಿದಾರೆ...  ಆಂ.. ಊಂ... ಏನ್ ಕೆಲ್ಸಾ ಅಲ್ಲಿ ಅರ್ಜ೦ಟಾ? ...''
 ನಾನು,  ''ಸರಿ, ಆಟೋದಲ್ಲೇ ಹೋಗ್ತೇನೆ ಬಿಡಿ..''ಎಂದು ಅವರನ್ನು  ಉಭಯಸಂಕಟದಿಂದ  ಪಾರು ಮಾಡುತ್ತೇನೆ..  ಅಥವಾ ಹಾಗಂದುಕೊಳ್ಳುತ್ತೇನೆ...!! ಹಾಗೊಂದು ಪಕ್ಷದಲ್ಲಿ ಸಮಯವಿದ್ದು ಜೊತೆಗೆ ಬಂದರು ಅನ್ನಿ, ನಾನು ಅಂಗಡಿ ಮೆಟ್ಟಿಲು ಹತ್ತುತ್ತಿದ್ದಂತೆ ಎಷ್ಟೊತ್ತಿದೆ ನಿನ್ ಕೆಲಸ.. ಎನ್ನುವ ಪ್ರಶ್ನೆ ಬೀಳುತ್ತದೆ.  ಸೀರೆಗೊಂದು ಮ್ಯಾಚಿಂಗ್ ಬ್ಲೌಸ್ ಪೀಸ್ ಹುಡುಕಲು ಕನಿಷ್ಠ ನಾಲ್ಕು ಅಂಗಡಿ ತಿರುಗಬೇಕಾಗುತ್ತದೆ ಅಂಥಾದ್ದರಲ್ಲಿ ಇವರನ್ನು ಕಟ್ಟಿಕೊಂಡು ನಾನು ಶಾಪಿಂಗ್ ಗೆ ಹೊರಟರೆ ಅಷ್ಟೇ.. ಮಕ್ಕಳು ಬಂದರೆ ಅವರ ಚಿಪ್ಸ್ ಪ್ಯಾಕೆಟ್ಟು, ಐಸ್ ಕ್ರೀಮು, ಸ್ವೀಟ್ ಕಾರ್ನು ಇವುಗಳ ಶಾಪಿ೦ಗೇ  ಆಗಿಬಿಡುತ್ತದೆ.. ಅದಕ್ಕೆ ನನ್ನ ಕೆಲಸಕ್ಕೆ ನಾನೊಬ್ಬಳೆ..ಇಲ್ಲಾ ಯಾರಾದರೂ ಸಮಾನ ಮನಸ್ಕ ಗೆಳತಿಯರೊಟ್ಟಿಗೆ  ಆಟೋ ದಲ್ಲಿ.

ಆಟೋನೆ ಪರವಾಗಿಲ್ಲ ಈ ಟ್ರಾಫಿಕ್ ಗೆ.   ಜಿರಳೆಯ ಮೀಸೆ ತೂರಿದರೆ  ಸಾಕು ಎಂತಹಾ ಪದರದಲ್ಲೂ ನುಸಿಯುವ ಹಾಗೆ ಈ ಆಟೋದ ಮುಂದಿನ ಚಕ್ರ ನುಸುಳಿದರೆ ಸಾಕು ಇಡೀ  ಆಟೋನೆ ನುಸುಳುತ್ತದೆ.. ಎಂತಹಾ ಟ್ರಾಫಿಕ್ ನಲ್ಲೂ...!   ಕಾರಿನದೇ  ತೊಂದರೆ.  ಅಲ್ಲೆಲ್ಲೋ ಕಿಲೋಮೀಟರ್ ದೂರದಲ್ಲಿ  ಪಾರ್ಕಿಂಗ್ ಪ್ಲೇಸ್ ಹುಡುಕಿ ಅಲ್ಲಿ ಇಟ್ಟು ಮತ್ತೆ ಆಟೋನೆ ಮಾಡಿಸಿಕೊಂಡು ಗಮ್ಯವನ್ನು ತಲುಪಬೇಕು. ಆಟೋನೆ ಸಾಕಪ್ಪಾ.. ಕಾರಿನ ಹಂಗೆ ಬೇಡ. ಆಟೋದವರ ಜೊತೆ ಜಗಳ  ಮಾಡಿಕೊಂಡು, ಕೇಳಿದಷ್ಟು,  ಒಂದಕ್ಕೆ  ಒಂದೂವರೆ  ಕೊಟ್ಟು ಅವರನ್ನು ಓಲೈಸಿಕೊಂಡು  ಬರುವುದರಲ್ಲಿಯೇ ಒಂಥರಾ ರೋಚಕತೆಯಿದೆ ಬಿಡಿ. ಮತ್ತು   ಬೆಂಗಳೂರಿನ ರಸ್ತೆಯ ಅವಸ್ಥೆಗೆ ಯಾಕೆ ಸುಮ್ಮನೆ  ನಮ್ಮನೆ ಕಾರು  ಹಾಳು ಮಾಡಿ ಕೊಳ್ಳಬೇಕು ..?

 ಹ್ಣೂ  ಕಣ್ರೀ..   ಮೊನ್ನೆ ನಮ್ಮ ಏರಿಯಾದ ಮುಖ್ಯ ರಸ್ತೆಯನ್ನು  ಅದೆಷ್ಟು ಚನ್ನಾಗಿ ಟಾರು  ಹಾಕಿದ್ದರೆಂದರೆ,   ನನಗೆ ನಮ್ಮೂರಲ್ಲಿ  ಹೆಬ್ಬಾಗಿಲ ಮುಂದೆ ರಂಗೋಲಿ ಹಾಕುವ ಜಾಗವನ್ನು ಕೊಚ್ಚಿ ಮಗುಚಿ, ಪೆಟ್ನೆ ಬಡಿದು,  ಕೈ ಮಣ್ಣು ಹಾಕಿ, ಗಣಪೆ ಕಾಯಿ ತಗೊಂಡು ಒರೆದು ನುಣ್ಣಗೆ ಮಾಡುತ್ತಿದ್ದುದರ  ನೆನಪಾಗಿತ್ತು...!!  ನನಗೆ ಖುಷಿಯಾಗಿ   ದಿನಾಲೂ ಬೆಳಿಗ್ಗೆ  ಒಂದ್ಸಲಾ, ಸಾಯಂಕಾಲ ಒಂದ್ಸಲಾ  ಹೋಗಿ ಅಡ್ಡಾಡಿ ಸುಮ್ಸುಮ್ನೆ  ತರಕಾರಿ ತಗೊಂಡು ಬಂದೆ ಹೊಸಾ ರಸ್ತೆ ಅಂತಾ..!  ಯಾರ ದೃಷ್ಟಿ ತಾಗಿತೋ ಏನೋ ಮತ್ತೆ ಮೂರ್ ದಿನಕ್ಕೆ ಬಂದ್ರಪ್ಪಾ ಒಳಚರಂಡಿಯವರು.. 'ಅಯ್ಯೋ ಅಯ್ಯೋ ಅಯ್ಯೋ' ಅನ್ಕೊಂಡು.   ಬಂದವರೇ   ಅಲ್ಲೊಂದು  ಹೊಂಡಾ.. ಇಲ್ಲೊಂದು ಹೊಂಡಾ ತೆಗೆದು ರಸ್ತೆಯನ್ನೆಲ್ಲಾ ಅಗೆದು ಯಮರಾಡಿಯೆಬ್ಬಿಸಿಬಿಟ್ಟರು. ಹಾಗಾಗಿ ಈ ಅವಸ್ಥೆಯ ರಸ್ತೆಗಳಲ್ಲಿ ಕಾರಿನಲ್ಲಿ ಕುಳಿತು  'ಬ್ರೇಕ್ ಡ್ಯಾನ್ಸ್' ಮಾಡುತ್ತಾ ಹೋಗುವುದಕ್ಕಿಂತಾ ಆಟೋದಲ್ಲೇ ಹೋಗುತ್ತಾ  'ಅಣ್ಣಮ್ಮನ ಡ್ಯಾನ್ಸ್' ಮಾಡುವುದೊಳಿತು.ಹೋದ ಅನುಭವ ಚೆನ್ನಾಗಿ ನೆನಪಿನಲ್ಲಾದರೂ ಉಳಿಯುತ್ತೆ. ಮತ್ತೆ ಆ ಕಾರಿನ ಏಸಿ  ನನಗಾಗೋಲ್ಲಪ್ಪಾ.  ಹಾಗಂತಾ ಹೇಳಿ  'ನಿನಗೆ ಸುಖ ಹೆಚ್ಚಾಯ್ತು ಕಣೆ' ಅಂತ ಇವರಿಂದ ಮೂತಿ ತಿವಿಸಿಕೊಳ್ಳುವುದಕ್ಕಿಂತಾ ನನಗೆ ಸಮೃದ್ಧ ಗಾಳಿ ಧೂಳು ಸಿಗುವ ಆಟೋನೆ ಸಾಕು..

ಮೊದಲ ಸಲ ಕಾರು ತಗೊಂಡಾಗ ಅದೂ,   ಮಾರುತಿ ಒಮ್ನಿ... ಎಂತಹಾ ಆನಂದ.. ಅದರಲ್ಲಿ ಕುಳಿತು ಹೋಗುತ್ತಿದ್ದರೆ ಪ್ರಪಂಚದ ಎಲ್ಲರೂ ನಮ್ಮನ್ನೇ ನೋಡಿದ ಹಾಗೆ ಅನ್ನಿಸುತ್ತಿತ್ತು..!! ಅಷ್ಟೊಂದು ಥ್ರಿಲ್.   ಮೊದಲನೇ ಸಲದ್ದು ಎಲ್ಲಾ ಹಾಗೆ. 'ಮೊದಲ ಬಾರಿ ಸೆಕೆಂಡ್ ಹ್ಯಾಂಡ್ ಬೈಕ್ ತಗೊಂಡಾಗ ಆದ ಸಂತೋಷ  ಕಾರು ತಗೊಂಡಾಗ ಆಗಿಲ್ಲ ಕಣೇ. ' ಆನ್ನೋದು ನನ್ನವರ ಯಾವತ್ತಿನ  ಅನಿಸಿಕೆ. ವ್ಯವಹಾರಸ್ತರ ಮೊದಲ ಕಾರು ಹೆಚ್ಚಾಗಿ ಒಮ್ನಿಯೇ ಆಗಿರುತ್ತದೆ ಅನ್ನುವುದು ನನ್ನ ಪರ್ಸನಲ್ ಒಪೀನಿಯನ್ನು.  ಮೊದಲು ಲಗ್ಗೆಜಿಗೆ, ಪುರಸೋತ್ತಿದ್ದರೆ ಮನೆ ಮಂದಿಗೆ ಅನ್ನುವುದು ನೂರಕ್ಕೆ ನೂರು ನಿಜ.




ಆಮೇಲಾಮೇಲೆ ಕಾರುಗಳು ನಾನಾ ತರದವು ಬಂದು ಹೋಗಿ ಮಾಡಿದ್ದರೂ  ನನಗೆ ಅರಿವಿಗೆ ಬರುವುದು ಮಾರುತಿ ಒಮ್ನಿ ಮಾತ್ರಾ.ಮತ್ತು ಇನ್ನೊಂದು ವಿಶೇಷ ಅಂದರೆ, ನಮ್ಮ ಪಕ್ಕದ್ಮನೆ ಮಗು ಒಂದಿಪ್ಪತ್ತು   ತರದ ಕಾರುಗಳನ್ನು ಅದರ ಚಕ್ರವೋ, ಲೈಟನ್ನೋ, ಮೂತಿಯನ್ನೋ  ನೋಡಿಯೇ ಅದು ಇಂತಾ ಕಾರು ಅಂತ ಗುರುತಿಸಿಬಿಡುತ್ತದೆ. ಇದು ನ್ಯಾನೋ, ಇದು ಸ್ಕಾರ್ಪಿಯೋ, ಇದು ಡಿಸೈರ್,ಇದು ಬೆಂಜ್   ಅಂತ ನೋಡಿದಾಕ್ಷಣ ಹೇಳಿಬಿಡುತ್ತದೆ. ನಾನಂತೂ  ಕಾರುಗಳಲ್ಲಿ ಮಾರುತಿ ಒಮ್ನಿಯನ್ನಾದರೆ ತಕ್ಷಣಕ್ಕೆ ಅದು ಅದೇ ಅಂತ ಗುರುತಿಸಬಲ್ಲೆ.ಯಾಕೆ ಅಂದರೆ ಅದು ಪೆಟ್ಟಿಗೆ ತರಾ ಇರುತ್ತಲ್ಲ ಅದು ಒಮ್ನಿ.. ಮೂತಿ ಇರುವುದೆಲ್ಲಾ ಕಾರುಗಳು.. ಇಲ್ಲಾ ಅಂದರೆ ನಮ್ಮ ಶೆಡ್ ನಲ್ಲಿ ಯಾವ ಕಾರು ನಿಂತಿದೆಯೋ ಅದು ಮಾತ್ರಾ ಗುರುತಿಸಿ ಹೇಳಬಲ್ಲೆ. ಅದು ರಸ್ತೆಗಿಳಿದರೆ ಮತ್ತೆ ನನಗೆ ಅಯೋಮಯ..!   ಮೂತಿಯಿರುವವು ಎಲ್ಲವನ್ನೂ ಒಟ್ಟುಗೂಡಿಸಿ 'ಕಾರು' ಲಿಸ್ಟಿಗೆ ಸೇರಿಸಿಬಿಡುತ್ತೇನೆ ನಾನು.  ನಾವು ಕಲಿತಿದ್ದೆ ಹಾಗಲ್ವಾ.. ಕಾರು, ಜೀಪು, ಬಸ್ಸು,  ಲಾರಿ,  ರೈಲು, ವಿಮಾನ ಅಂತ ಸಂಚಾರ ಮಾಧ್ಯಮಗಳನ್ನು..!!
ಇದೊಂದು ಕೇಳಿ,  ನಾವೆಲ್ಲಾ  ಎಲ್ಲಾದರೂ  ಹೋಗುತ್ತಿರಬೇಕಾದರೆ ನನ್ನ ಜಾಣತನದ ಪರೀಕ್ಷೆ ನಡೆಯುತ್ತಿರುತ್ತದೆ.    ನನ್ನ ಮಕ್ಕಳು ಆಗಾಗ ಆಚೀಚೆ ನೋಡುತ್ತಾ.. ಆಡಿ, ಆಡಿ.. ಮರ್ಸಿಡಿಸ್  ಬೆಂಜ್ ಬೆಂಜ್ ವಾವ್.. ಎನ್ನುತ್ತಿರುತ್ತಾರೆ.. ನಾನು ಎಲ್ಲಿ ಎಲ್ಲಿ ಅನ್ನುತ್ತಾ ಎದುರಿಗೆ ಹೋಗುವ ಆಟೋ, ಮತ್ಯಾವುದೋ  ಬೆನ್ನು ನಪ್ಪಿದ ಕಾರುಗಳನ್ನು ನೋಡುತ್ತಿರುತ್ತೇನೆ. ಪೇಪರ್ ಓದುವಾಗ, ಟೀವಿ ನೋಡುವಾಗ.. 'ಏ ಬುಗಾಟಿ ನೋಡು, ಲ್ಯಾಮ್ಬರ್ಗಿನಿ ನೋಡು.. ಯಪ್ಪಾ ಫೆರಾರಿ ಯಂತಾ ಚನಾಗಿದೆ..'ಅನ್ನುತ್ತಾ ನಮ್ಮನೆಯ ಕನ್ನಡ ಕುವರಿ, ಕುವರ .. ಇಬ್ಬರೂ ಉದ್ಘರಿಸುತ್ತಿದ್ದರೆ ನನಗೆ ಅದರ ತಲೆ ಬುಡ ತಿಳಿಯುವುದಿಲ್ಲ.





ಕಾರಿನ ಹಿಂದಗಡೆಯೇ ಅಲ್ಲವೇ  ಹೆಸರು ಇರುವುದು..?     ನನಗೋ ಎದುರಿಗೆ ಹೋಗುವ ಕಾರಿನ ಹಿಂಬದಿಯಲ್ಲಿ ಏನು ಬರೆದರೆ ಅದೇ 'ಕಾರಿನ ಹೆಸರು' ಅಂದುಕೊಂಡುಬಿಡುತ್ತೇನೆ. .. ಆಲ್ಟೊ, ಸ್ವಿಫ್ಟ್, ಹೊಂಡಾ ಸಿಟಿ, ಇನ್ನೋವಾ  .. ,...,...,.. ಜೊತೆಗೆ  ಬಾಲಾಜಿ, ಪ್ರೇರಣಾ, ಆರ್ ಎನ್ ಎಸ್ಸ್ ಎಲ್ಲವೂ ಕಾರಿನ ಹೆಸರುಗಳಾಗಿ ಕಾಣಿಸುತ್ತವೆ..!   ''ಓ ಇದ್ಯಾವುದೋ ಹೊಸಾ ಕಾರು ಮಾಂಡೋವಿ ನೋಡಿ..!!!'' ಅಂತ ನಾನು ನನ್ನ ಜಾಣತನವನ್ನು ಪ್ರದರ್ಶಿಸುತ್ತಿದ್ದರೆ  ನನ್ನವರು  ಸ್ಟೇರಿಂಗ್ ಗೆ ತಲೆ ತಲೆ ಜಪ್ಪಿಕೊಳ್ಳಲು ಶುರು ಮಾಡುತ್ತಾರೆ. ಈಗೀಗ ಅದ್ಯಾವ ಉಸಾಬರಿಗೂ ಹೋಗುವುದೇ ಇಲ್ಲ.. ಎದುರಿಗೆ ಹೋಗುವ ಗಾಡಿಗಳ ಹಿಂದೆ ಬರೆದಿರುವ ಶ್ರೀ ಧರ್ಮಸ್ಥಳ,ಶ್ರೀ ಸಿಗಂದೂರೇಶ್ವರಿ. ವೆಂಕಟೇಶ್ವರ,  ಅಣ್ಣಮ್ಮ ದೇವಿ, ಮಾತೃ ಕೃಪಾ,...,.. ಎನ್ನುವ ಹೆಸರುಗಳನ್ನೂ ತಪ್ಪಿಯೂ ಬಾಯ್ಬಿಟ್ಟು ಓದುವುದಿಲ್ಲ..!!! 


 [ ಇಲ್ಲಿನ ವಿಚಾರಗಳಲ್ಲಿನ ಸತ್ಯತೆ ಮತ್ತು ಉತ್ಪ್ರೇಕ್ಷೆಗಳನ್ನು ಓದುಗರ ಊಹೆಗೆ  ಬಿಟ್ಟಿದ್ದೇನೆ...:) ]





Sunday, September 30, 2012

ತುಂತುರು ಹನಿಗಳು.

 ಫೇಸ್ ಬುಕ್ಕಿನ ಗೋಡೆಯಲ್ಲಿ ಬರೆದ ನನ್ನ  ಕೆಲ  ತುಂತುರು ಹನಿಗಳು.


ನೀರಸ!

ರಾತ್ರಿಯಿಡೀ
ನಿದ್ರೆಗೊಡದೇ
ಗಲ್ಲಕ್ಕೆ ಹಚ್ಚೆ ಚುಚ್ಚಿದ್ದು
ನಲ್ಲನೇನು..?
ಅಲ್ಲ, ಚಚ್ಚಿ ಹಾಕಿದ್ದೇನೆ
ನೋಡು ಯಕಶ್ಚಿತ್ ಸೊಳ್ಳೆ!

----------------------------------

ವ್ಯತ್ಯಾಸ!
 
ನಾನ್ಯಾವತ್ತೂ ದೊಡ್ಡವರೊ೦ದಿಗೇ
ಹೋಲಿಸಿಕೊಳ್ಳುವುದು.
ಲತಾ ಮ೦ಗೇಶ್ಕರ್ ಗೂ ನನಗೂ ಒ೦ದೇ ವ್ಯತ್ಯಾಸ..
.
.
.
.
ಅವರು ಹಾಡುತ್ತಾರೆ,
ನಾನು ಹಾಡೋಲ್ಲ...!!!

--------------------------------------------------------


 ಕೆಲಸ..

 ಆಯಾ ದಿನದ ಕೆಲಸ
ಅ೦ದೇ ಮುಗಿಸಿ ಎ೦ದದ್ದಕ್ಕೆ
ಎಲ್ಲರೂ ಅ೦ದ೦ದೇ
ದಿನ ಮುಗಿಸಿದರು!

---------------------------------------

 ಹೆಸರು..

ಚಿತ್ರಾನ್ನ ಮಾಡಿದ೦ದು
ನನ್ನವರು ನನ್ನ
ಕರೆದದ್ದು,
ಚಿತ್ರಾ೦ಗೀ ಎಂದು !

  --------------------------------------------


ಜ್ಣಾನೋದಯ!

 ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..
ಸೆನ್ಸರ್ ಸರಿ ಇದ್ದರೆ ಸರಿ
ಇಲ್ಲಾ.. ನೀರು ಓವರ್ ಫ್ಲೋ ಆಗುತ್ತೆ
ಇಲ್ಲಾ.. ನೀರೇ ತಗೋಳ್ಳಲ್ಲ..
ಒಮ್ಮೆ ತಿರುಗುತ್ತೆ ಇನ್ನೊಮ್ಮೆ ಹಿ೦ಡುತ್ತೆ..
ಕೆಲವೊಮ್ಮೆಸುಮ್ಮನೆ ಗುಮ್ ಅ೦ತ ಕೂತಿರುತ್ತೆ.
ರಿಪೇರಿಗೆ ಮತ್ಯಾರನ್ನೋ ಕರೆಸು,ರಾಜೀ ಮಾಡಿಸು..
ಸರಿಯಾಗೋ ಹೊತ್ತಿಗೆ ಸಾಕಾಗುತ್ತೆ..
ಜೀವನ ಒ೦ದು ವಾಶಿ೦ಗ್ ಮಶಿನ್ನು ಕಣೇ..

[ ಮಧ್ಯಾಹ್ನದ ಹೊತ್ತಲ್ಲಿ ನನ್ನವರಿಗೆ ಆದ ಜ್ಣಾನೋದಯ]...:)


-------------------------------------------------------
ಶೂನ್ಯ

ಬದುಕೆ೦ಬುದೊ೦ದು ಶೂನ್ಯ ಎ೦ದರು,
ಹೌದು ಬದುಕು ಶೂನ್ಯ,
ಶ್ಯೂನ್ಯವೆ೦ದರೆ ಸೊನ್ನೆ,
ಸೊನ್ನೆಯೆ೦ದರೆ ವೃತ್ತ,
ವೃತ್ತ ತಿರುಗುತ್ತಾ ಚಕ್ರ
ಬದುಕು ಚಕ್ರದ೦ತೆ ಸುತ್ತುತ್ತದೆ,
ಹಾಗಾಗಿ ಬದುಕೆ೦ಬುದು ಶೂನ್ಯ..!
ನಾನು ಸಾಧಿಸಿ[prove] ತೋರಿಸಿದೆ!
 --------------------------------------------------------------------------
 

Monday, September 10, 2012

ಗೋಡೆ ಮೇಲಿನ ಚಿತ್ತಾರಗಳು.


 ನಮ್ಮ ಮನೆಗೆ ಯಾರಾದರೂ  ನೆಂಟರು ಬರುತ್ತಾರೆಂದು ಗೊತ್ತಾದ ಹಿಂದಿನ ದಿನ ನಾವು ಮನೆಗೆ ಬಣ್ಣ ಹೊಡೆಸುವುದರ  ಬಗ್ಗೆ  ಚರ್ಚಿಸುತ್ತೇವೆ. ಮನೆಗೆ ಕಾಲಿಟ್ಟ ಪ್ರತಿ ನೆಂಟರೂ ''ಓಹ್ಹೋ .. ಗೋಡೆಯ ತುಂಬಾ ಬರೆದು ಮುಗಿಸಿದ್ದಾನೆ.. ಮಗರಾಯ,'' ಎನ್ನುತ್ತಾ ದೇಶಾವರೀ ನಗೆ ಬೀರುತ್ತಾರೆ. ನೀವೇನಾದರೂ  ಬಂದು ಸೋಫಾದ ಮೇಲೆ ಕೂತು ಎದುರಿನ ಗೋಡೆಯನ್ನು ಸಹಜವಾಗಿ ದಿಟ್ಟಿಸಿದಿರೋ  ನೀವು ಮೂರ್ಚೆಹೊಗುತ್ತೀರಿ. ಎದುರಿಗೆ ಅಷ್ಟೂ ಹಲ್ಲುಗಳನ್ನೂ ಕಿರಿದು ಹೆದರಿಸುತ್ತಿರುವ ದೊಡ್ಡ ಬಾಯಿಯ ರಾಕ್ಷಸನಿದ್ದಾನೆ.  ರಾಕ್ಷಸನ ಚಿತ್ರವಿದೆ! ಶಿಶಿರನ ಕರ ನೈಪುಣ್ಯ!




ಸುಮಾರು ಅವನಿಗೆ ಎರಡು ವರ್ಷಗಳಿದ್ದಾಗ ನಾವೂ ಬಾಡಿಗೆ ಮನೆ ಬಿಟ್ಟು ಹೊಸದಾಗಿ ನಮ್ಮದೇ ಮನೆ ಕಟ್ಟಿಸಿಕೊಂಡು ಚಂದದ ಬಣ್ಣ ಹುಡುಕಿ ಹೊಡೆಸಿಕೊಂಡು ಗೃಹ ಪ್ರವೇಶಿಸಿದೆವು.ಹೊಸಾ ಮನೆ, ಹೊಸ ಬಣ್ಣ, ನಮ್ಮ ಟೇಸ್ಟಿಗೆ ನಾವೇ ಮೆಚ್ಚಿಕೊಳ್ಳುತ್ತಾ ಇರುವ ಒಂದು ದಿನ ನಮ್ಮವರು ಸ್ನಾನ ಮುಗಿಸಿ ಹೊರ ಬಂದವರೇ ಅತ್ಯಾಶ್ಚರ್ಯಕರವಾದ ಧ್ವನಿಯಲ್ಲಿ ನನ್ನನ್ನು ಕರೆದರು, 'ನೋಡಿಲ್ಲಿ ಎಷ್ಟ್ ಚನಾಗಿ ಬರೆದಿದ್ದಾನೆ,'  ಎನ್ನುತ್ತಾ! ನಾನಾದರೂ ಕೈಯಲ್ಲಿ ದೋಸೆ ಸೌಟನ್ನು ಹಿಡಿದುಕೊಂಡು ಬೆಡ್ ರೂಮಿಗೆ ಓಡಿದೆ. ನಮ್ಮವರು ಮುಖದಲ್ಲಿ ಸಾವಿರ ಕ್ಯಾಂಡಲ್ ಲೈಟ್  ಬೀರುತ್ತಾ, ಹಿಗ್ಗುತ್ತಾ ನಿಂತಿದ್ದು ಕಾಣಿಸಿ ಅವರ ದೃಷ್ಟಿಯನ್ನು ಹಿಂಬಾಲಿಸಿದರೆ ಅಲ್ಲಿ ಕಾಣಿಸಿತು. ABCD ಎನ್ನುವ ಹೊಳೆಯುವ ಅಕ್ಷರಗಳು.  ಮಗ ಇಂಜಿನಿಯರೋ, ಡಾಕ್ಟರೋ ಆದನೇನೋ ಎನ್ನುವ ಸಂಭ್ರಮದಲ್ಲಿ ಬರೆದ ಅಕ್ಷರಗಳನ್ನು ನೋಡುತ್ತಿದ್ದಂತೆ ಒಮ್ಮೆಲೇ ಉಸಿರು ಅರ್ಧವಾಯಿತು! ಬೆಡ್ ರೂಮಿನ ಗೋಡೆಯ ಮೇಲೆ ಕ್ರೆಯಾನ್ಸ್ ನಿಂದ ಮುದ್ದಾದ ಅಕ್ಷರಗಳು ನಳ ನಳಿಸುತ್ತಿದ್ದವು!  ''ಪುಟ್ಟಾ ಗೋಡೆಯ ಮೇಲೆ ಬರೀ ಬಾರದು,'' ಎನ್ನುತ್ತಾ ನಾನಾದರೂ ಗೋಡೆ ಹಾಳಾಯಿತೆಂದು  ತೀವ್ರವಾದ ಸಂತಾಪದಿಂದ ಕೈಯಲ್ಲಿರುವ ಕ್ರೆಯಾನ್ಸ್ ಕಸಿದು ಬಚ್ಚಿಟ್ಟೆ. ಮಗಳಿಗೆ ''ಕಂಡ ಕಂಡಲ್ಲಿ ಪೆನ್ಸಿಲ್ಲು, ಕ್ರೆಯಾನ್ಸು ಒಗೆದರೆ ನೋಡು,'' ಎನ್ನುತ್ತಾ ಸುಮ್ಮನೆ ಅವಳಿಗೆ ಜೋರು ಮಾಡಿದೆ.ನನ್ನವರು ಮಾತ್ರಾ ಗೋಡೆಯ ಮೇಲೆ ಬರೆದ ಅನ್ನುವುದಕ್ಕಿಂತ ಎಷ್ಟು ಚನ್ನಾಗಿ ಬರೆದಿದ್ದಾನೆ, ಅನ್ನುವ ಆನಂದಾನುಭೂತಿಯಿಂದ ಹೊರಬಂದಂತೆ ಕಾಣಿಸಲಿಲ್ಲ.ನಾನು   ಇವರ ಹಳೆ ಬನಿಯನ್ನನ್ನು ನೆನೆಸಿ    ಹಿಂಡಿ ಬರೆದದ್ದನ್ನು  ಮೆಲ್ಲಗೆ ಒರೆಸಿ ಅಳಿಸಲು  ಶುರು ಮಾಡಿದೆ.
 ಅವನು ಬರೆದಂತೆಲ್ಲಾ ನನ್ನದು ಒರೆಸುವ ಕೆಲಸ. ಹೀಗೆ ಸುಮಾರು ದಿನ.




ಅವನಿಗೆ ಗೋಡೆಯ ಮೇಲೆ ಬರೆಯುವ ಆಸೆ ಅದೆಷ್ಟು ತೀವ್ರವೆಂದರೆ ಎಲ್ಲಿ ಏನಾದರೂ ಚಿಕ್ಕ ಪೆನ್ಸಿಲ್ಲೋ ಕ್ರೆಯಾನ್ಸೋ ಸಿಕ್ಕರೆ ಸಾಕು ಬಚ್ಚಿಟ್ಟುಕೊಂಡು ಬರೆಯುತ್ತಿದ್ದ. ಮೊದ  ಮೊದಲು ಅಕ್ಷರಗಳು, ಸೊನ್ನೆ ಸುತ್ತುವುದು,ಗೆರೆ ಎಳೆಯುವುದು ಹೀಗೆ. ಪ್ರಿ ಕೇಜಿಗೆ ಸೇರಿಸಿದ ಮೇಲೆ ಅದು ಕಥಾರೂಪಗಳನ್ನು ಪಡೆಯಲು ಶುರುವಾಯಿತು. ಆಗವನಿಗೆ ಯಕ್ಷಗಾನವೆಂದರೆ ಸಿಕ್ಕಾಪಟ್ಟೆ ಆಸಕ್ತಿ. ಅದರ ಕಿರೀಟಗಳನ್ನು ಅಪ್ಪನಿಂದ ಪೇಪರ್ ಮೇಲೆ ಬರೆಸಿಕೊಳ್ಳುತ್ತಿದ್ದ. ತದನಂತರ ಗೋಡೆಯ ಮೇಲೆ ನಾನಾ ತರದ ಕಿರೀಟಗಳು.  ಆದಿಶೇಷನ ಚಿತ್ರ,  ಕೆಳಗೆ ವಸುದೇವ ಕೃಷ್ಣನನ್ನು ಬುಟ್ಟಿಯಲ್ಲಿ ಎತ್ತಿಕೊಂಡು ಹೋಗುವಂತೆ. ಜೊತೆಗೆ ಅವನ ಸಂಗಡಿಗರು ಒಂದಷ್ಟು ಚಿಕ್ಕ, ದೊಡ್ಡ ಹಾವುಗಳು.ಉದ್ದ ಹಾವು ಬರೆಯುತ್ತೀನೆಂದು ಚೇರ್ ಹತ್ತಿ ಮೇಲಿನಿಂದ ಕೆಳವರೆಗೆ ಬರೆದಿದ್ದು.   ಶಾಲೆಯಲ್ಲಿ ಪಾಠ ಮಾಡಿದಂತೆಲ್ಲಾ ಅದು ನಮ್ಮ ಮನೆಯ ಗೋಡೆಯ ಮೇಲೆ.   ಸೋಲಾರ್ ಸಿಸ್ಟಂ,  ಅದರಲ್ಲಿ ಸೂರ್ಯ ಮತ್ತು ಚಂದ್ರ  ಜೊತೆ ಜೊತೆಯಲ್ಲೇ ಇರುತ್ತಾರೆ! ಶನಿಗ್ರಹವಂತೂ ನೋಡಲು ಎರಡು ಕಣ್ಣು ಸಾಲದು. ಪರ್ಮನೆಂಟ್ ಮಾರ್ಕರ್ ಎಲ್ಲಿ ಸಿಕ್ಕಿತ್ತೋ ಏನೋ ಅದರಲ್ಲೇ ಬರೆದಿದ್ದ. ಬಿಲ್ಲು ಬಾಣ ಬತ್ತಳಿಕೆಗಳ ಚಿತ್ರವಂತೂ ಹೇರಳವಾಗಿ ಕಾಣ ಸಿಗುತ್ತವೆ. ಅಷ್ಟೊತ್ತಿಗೆ ಯಕ್ಷಗಾನದ ಖಯಾಲಿ ಕಡಿಮೆಯಾಗಿ ಕಾರ್ಟೂನುಗಳ ಮೇಲೆ ತಲೆ ಹಾಯ ತೊಡಗಿತು. ಬೆನ್ ಟೆನ್ ನ ಅಷ್ಟೂ ಕ್ಯಾರೆಕ್ಟರ್ಗಳೂ, ಸ್ಪೈಡರ್ ಮ್ಯಾನ್,   ಬ್ಯಾಟ್ ಮಾನ್, ಆ ಮ್ಯಾನ್, ಈ ಮ್ಯಾನ್ ಅನ್ನುವ ಹೊತ್ತಿಗೆ ಒರೆಸಿ ಒರೆಸಿ ನಾನು ನಿಶ್ಯಕ್ತಿ ಮ್ಯಾನು !





ಅವನು ಬರೆದಂತೆಲ್ಲಾ ಹಿಂದೆ ಹಿಂದೆ ನಾನು ಖಡ್ಗವನ್ನು ಹಿರಿದು  ದಕ್ಷಯಜ್ನವನ್ನು ಧ್ವಂಸ ಮಾಡುವ ವೀರಭದ್ರನಂತೆ ಇವರ ಹಳೆ ಬನಿಯನ್ ಹಿಡಿದು ಎಲ್ಲವನ್ನೂ ಒರೆಸುತ್ತಾ ವೀರಗಾಸೆ ಶುರುಮಾಡಿದೆ. ಒರೆಸುವಾಗ ನನಗೆ ತೀವ್ರವಾಗಿ ಬೇಜಾರಾಗುತ್ತಿತ್ತು. 'ಎಷ್ಟ್ ಚನ್ನಾಗ್ ಬರ್ದಿದಾನೆ. ಪೇಪರ್ ಮೇಲೆ ಬರೆಯಕ್ಕೆ  ಏನ್ ಧಾಡಿ ಇದಕ್ಕೆ,'  ಎನ್ನುತ್ತಾ  ಬಹಳ  ಸಂತಾಪದಲ್ಲಿಯೇ ಒರೆಸುತ್ತಿದ್ದೆ. ನಾನು ಒರೆಸಿದ್ದರಿಂದ ಅವನಿಗೆ ತುಸುವಾದರೂ ಬೇಜಾರಿಲ್ಲದೆ ನಾನು ಮುಂದೆ ಮುಂದೆ ಹೋದಂತೆ ಹಿಂದೆ ಹಿಂದೆ ಬರುತ್ತಿದ್ದ  ಹೊಸ ಚಿತ್ರಗಳ ಸರಣಿಯೊಂದಿಗೆ. ಇವರ ತೂತಾದ ಬನಿಯನ್ ಗಳೆಲ್ಲಾ ಹರಿದು ಚಿಂದಿಯಾದವು. ಈಗ ಸ್ವಲ್ಪ ಮಾಸಲಾದ ಬನಿಯನ್ನುಗಳನ್ನು ನಾನು ನನ್ನ ಗೋಡೆ ವರೆಸುವ ಬಟ್ಟೆಯನ್ನಾಗಿ ಮಾಡಿಕೊಳ್ಳುವ ಹೊತ್ತಿಗೆ ಇವರು ಹೌಹಾರ ತೊಡಗಿದರು. ಬೇರೆ ಬಣ್ಣದ  ಬಟ್ಟೆಯಾದರೆ ಬಟ್ಟೆಯ ಬಣ್ಣ ಮತ್ತೆ ಗೋಡೆಗೆ ಮೆತ್ತುವುದಿಲ್ಲವೇ..? ಅಂತೆಯೇ ನನ್ನ ಪ್ಲಾನು. ನಾನು ಒರೆಸಿದ ಪರಿಣಾಮಕ್ಕೆ ಗೋಡೆ ಅಲ್ಲಲ್ಲಿ ಬಣ್ಣ ಬಿಟ್ಟುಕೊಂಡು ಮತ್ತಷ್ಟು ವಿಕಾರವಾಗಿ ಕಾಣಿಸತೊಡಗಿತು.




ಮೆತ್ತಗೆ ಹೇಳಿದರಿಲ್ಲ, ಜೋರು ಮಾಡಿ ಹೇಳಿದರಿಲ್ಲ. ಎರಡು ಕೊಟ್ಟು ಹೇಳಿದರೂ ಊಹ್ಞೂ .. ಗೋಡೆಯ ಮೇಲೆ ಬರೆಯುವುದನ್ನು ತಪ್ಪಿಸಲಾಗಲೇ ಇಲ್ಲ. ಡ್ರಾಯಿಂಗ್ ಪುಸ್ತಕವಾಯ್ತು, ಬಿಳೀ ಬೋರ್ಡ್ ಆಯ್ತು. ಅದೆಲ್ಲಾ ಬೋರಾಗಿ ಮತ್ತೆ ಗೋಡೆಯೇ ಬೇಕಾಯ್ತು.   ಮತ್ತೆ ಬಂದವರೆಲ್ಲಾ ಹೇಳತೊಡಗಿದರು. ''ಬರ್ಕೊಳ್ಳಿ ಬಿಡಿ.  ಆಮೇಲೆ ಒಂದೇ ಸಲ ಬಣ್ಣ ಹೊಡೆಸಿದರಾಯ್ತು..'' ಎಂದು ಸಮಾಧಾನ ಪಡಿಸಿದರು. ಗೆಳತಿಯೊಬ್ಬಳು, ''ನೀವು ಎಲ್ಲಾ ಹುಟ್ಟಾ ಕಲಾವಿದರಲ್ಲವೇ..? ಬರ್ಕೊಳ್ಳಿ ಬಿಡೇ,''  ನನಗೇ  ಅಂದಳು. ಬಿಟ್ಟರೂ ಸೈ, ಬಿಡದಿದ್ದರೂ ಸೈ.


ಅಷ್ಟೊತ್ತಿಗೆ ಸುಧಾದಲ್ಲಿ ಯಾರೋ ಪುಣ್ಯಾತ್ಮನ ಬಗೆಗೆ ಬರೆಯಲಾಗಿತ್ತು.ಹೆಸರು ಮರೆತೆ, ಆತ ತುಂಬಾ ಕ್ರಿಯೇಟಿವ್ ವ್ಯಕ್ತಿ. ಆತನೂ ಗೋಡೆಯ ಮೇಲೆ ಬರೆಯುತ್ತಿದ್ದನಂತೆ! ಮತ್ತು ಮಕ್ಕಳಿಗೆ ಗೋಡೆಯ ಮೇಲೆ ಬರೆಯಲು ಬಿಡಿ, ಅವರ ಕಲ್ಪನಾ ಶಕ್ತಿ ಕ್ರಿಯೇಟಿವಿಟಿ ಹೆಚ್ಚುತ್ತದೆ, ಎಂದೆಲ್ಲಾ ಸಂದೇಶ ಕೊಟ್ಟಿದ್ದ. ಅದನ್ನು ಓದಿದ ಮೇಲೆ ನಮಗೆ ಮತ್ತಷ್ಟು ಸಮಾಧಾನವಾಯಿತು. ಪ್ಹಾರಿನ್ನಿನವರು ಹೇಳಿದ್ದಾರೆಂದರೆ ಅದು ಸರಿಯೇ ಸರಿ, ಎನ್ನುತ್ತಾ ಅಲ್ಲಿಂದ ನನ್ನ ಹರಕು ಬನಿಯನ್ ಹಿಡಿದುಕೊಂಡು ಮಾಡುವ  ಯಕ್ಷಗಾನ, ತಾಳ ಮದ್ದಲೆ, ವೀರ ಗಾಸೆ ಎಲ್ಲವನ್ನೂ ಬಿಟ್ ಹಾಕಿ 'ಅಮ್ಮಾ ಬೋರು' ಅಂದರೆ 'ಅಲ್ಲೇ  ಗೋಡೆ ಮೇಲೆ ಏನಾರು ಬರೀ' ಅನ್ನುವಷ್ಟರ ಮಟ್ಟಿಗೆ ಒಳ್ಳೆಯವಳಾದೆ.

 ಈಗ ಗೋಡೆಯ ಮೇಲೆ ನಾನೇನಾದ್ರೂ ಬರೀಬೇಕಂದ್ರೂ  ಚೂರೂ ಜಾಗವಿಲ್ಲ! ಪಕ್ಕದ ಮನೆಗೆ ಹೋಗಿ ಸಖೇದಾಶ್ಚರ್ಯಗಳಿಂದ ಕೇಳುತ್ತಾನಂತೆ, 'ನಿಮ್ಮ ಮನೆಯಲ್ಲಿ ಗೋಡೆಯೆಲ್ಲಾ ಖಾಲಿ ಇದೆಯಲ್ಲಾ..?' ಅಂತ. ಆವತ್ತು ಅಪ್ಪನ ಹತ್ತಿರ ಹೇಳುತ್ತಿದ್ದ. ''ನನಗೂ ಹೆಲಿಕ್ಯಾಪ್ಟರಿಗೆ ಕೀ ಕೊಟ್ಟರೆ ಹಾರುವಂತೆ ಕೀ ಇದ್ದಿದ್ದರೆ ನಾನೂ ಹಾರಿಕೊಂಡು ಮನೆಯ ಸೀಲಿಂಗ್ ಮೇಲೆ ಬರೆಯುತ್ತಿದ್ದೆ,'' ಅಂತ. ಮಗನ ಈ ಘನಂಧಾರೀ ಪ್ಲಾನಿಗೆ ಇವರು ಬೆಚ್ಚಿಬಿದ್ದದ್ದು ಹೌದು.

ಮಕ್ಕಳ ಕಲ್ಪನೆಗಳನ್ನು ಹಿಂಬಾಲಿಸಿಕೊಂಡು ಹೋದರೆ ನಮಗಾದರೂ ಎಷ್ಟೊಂದು ಉಪಾಯಗಳು ಹೊಳೆದು ಬಿಡುತ್ತವೆ.  ಅವರನ್ನು ಇರುವಂತೆಯೇ ಬೆಳೆಯಲು  ಬಿಡಿ.  ಆ ಕಲ್ಪನೆಗಳನ್ನೆಲ್ಲಾ  ಹಳೆ ಬನಿಯನ್ನಿನಿಂದ ತಾಯಂದಿರು ಒರೆಸ ಬಾರದು ಅಷ್ಟೇ.

ಆವತ್ತು ಶಾಲೆಯಿಂದ ಬರುತ್ತಾ ಎದುರು ಮನೆ ಆಂಟಿಗೆ ಹೇಳುತ್ತಿದ್ದ. ''ಆಂಟೀ ನಂಗೆ ಫಸ್ಟ್ ಪ್ರೈಸು.. ಡ್ರಾಯಿಂಗ್ ಕಾಂಪಿಟೆಶನ್ ನಲ್ಲಿ.!'' ಮನೆಗೆ ಬಂದು ಪ್ರೈಸ್ ತೋರಿಸಿದ. ಒಂದು ಆರ್ಟ್  ಸೀಡಿ.ಡ್ರಾಯಿಂಗ್ ಬುಕ್, ಕಲರಿಂಗ್ ಪೆನ್ಸಿಲ್ಸ್ .     ನಾನು ಅಂತಾದರೂ ಬಿಡದೆ, ''ಎಲ್ಲರಿಗೂ ಕೊಟ್ರಾ ನಿನಗೊಂದೆ ಕೊಟ್ರಾ?'' ಕೇಳಿದೆ.  ಗೋಡೆಯ ಮೇಲೆ ಬರೆದದ್ದು ಬಿಟ್ರೆ ಉಳಿದಂತೆ ಅವನ ಸಾಮರ್ಥ್ಯ ನನಗೆ ಗೊತ್ತಿರಲಿಲ್ಲ!
 ''ನನಗೊಬ್ಬನಿಗೆ..'' ನನಗೆ ಅನುಮಾನ,  ನಾಲ್ಕಾರು ಬಾರಿ ಕೇಳಿದೆ, ''ಅಮ್ಮಾ ಎಷ್ಟು ಸಲ ಹೇಳಲಿ, ಪಸ್ಟು ಪ್ರೈಸನ್ನು  ಒಬ್ಬರಿಗೇ  ಕೊಡೋದು'' ಅಂದ. ನಾನು ಬಾಯಿ ಮುಚ್ಚಿಕೊಂಡೆ.
ಅವನಿಗೆ ಈಗೀಗ ನಾಚಿಕೆಯಾಗುತ್ತದೆ. ಯಾರಾದರೂ ನೆಂಟರು ಬಂದವರು ಸೀದಾ ಅವನಲ್ಲೇ ಕೇಳುತ್ತಾರೆ, ಅಕ್ಕನ ಗೆಳತಿಯರ ಮುಂದೆ ನಾಚಿಕೆ  ತುಸು ಜಾಸ್ತಿ.. ''ಅಮ್ಮಾ ಗೋಡೆಗೆ ಬಣ್ಣ ಹೊಡೆಸಿ'' ಅನ್ನುವ ರಾಗ ಶುರು ಮಾಡಿದ್ದಾನೆ.ನನಗೆ ಮಾತ್ರ ಇಷ್ಟವಿಲ್ಲ.


ನನಗೆ ಅವನ ಕಲ್ಪನೆಗಳನ್ನು ಒರೆಸಿ, ಅಳಿಸಿ  ಹಾಳು  ಮಾಡಿದ್ದಕ್ಕೆ ಬಹಳ ಬೇಜಾರಿದೆ.  ಒರೆಸಿದರೂ ಮತ್ತೆ ಮತ್ತೆ ಬರೆದು ಸ್ವಲ್ಪ ಮಟ್ಟಿಗೆ ನನ್ನ ತಪ್ಪಿತಸ್ತ ಭಾವವನ್ನು ಕಡಿಮೆ ಮಾಡಿದ್ದಾನೆ. ಅದಕ್ಕೆ ನಮಗೀಗ ಮನೆಗೆ ಬಣ್ಣ ಹೊಡೆಸಿದರೆ ಗೋಡೆಯ ತುಂಬಾ ಇರುವ  ಅವನ ಮುಗ್ಧತೆಯೆಲ್ಲಾ ಕಳೆದು ಹೋಗಿಬಿಡುತ್ತದಲ್ಲಾ ಅನ್ನುವ ಚಿಂತೆ.  ಮೊನ್ನೆ ಮೊನ್ನೆ ವರೆಗೂ ಬರೆದ.  ನಾಳೆಯೂ ಬರೆದರೆ  ಬರೆಯಲಿ ಬಿಡಿ. ನಿಮ್ಮ ಮಕ್ಕಳಿಗೂ ಬಿಟ್ಟು ಬಿಡಿ, ಬರೆದರೆ ಬರೆದುಕೊಳ್ಳಲಿ.



[ಅವನ ಗೋಡೆಯ ಮೇಲಿನ ಚಿತ್ರಗಳು ತುಂಬಾ ಮಬ್ಬು ಮಬ್ಬಾಗಿವೆ. ಅದಕ್ಕೆ ಅದರ ಪರಿಚಯ ನಿಮಗೆ ಇಲ್ಲ..:)]

ವಂದನೆಗಳು.

Tuesday, July 31, 2012

ಬಾರದ ಮಳೆಯಲೊಂದಷ್ಟು ಕೊಡೆಯ ನೆನಪುಗಳು

ಹೊರಗಡೆ ಸುಯ್ಯನೆ ಗಾಳಿ ಬೀಸುತ್ತಿದೆಯೇ ಹೊರತೂ ಹನಿ ಮಳೆಯಿಲ್ಲ.  ಮಳೆಯಿರದಿದ್ದರೂ ನಮ್ಮನೆಯಲ್ಲಿ ಕೊಡೆಗಳಿಗೆ ಬರಗಾಲವಿಲ್ಲ.ಒಂದು ಐದಾರು ಕೊಡೆಗಳಿವೆ.    ಒಂದು ದಿನವೂ ಮಳೆಗೆ ಕೊಡೆ ಹಿಡಿದಿಲ್ಲ.ಆದರೂ  ಅದರಲ್ಲಿ ಒಂದೂ ನೆಟ್ಟಗಿಲ್ಲ.   ಕಡ್ಡಿಗಳು ಮುರಿದು, ಹೊಲಿಗೆ ಬಿರಿದು, ಬಿಚ್ಚಿದರೆ ಸೊಂಟ ನೋವಿನಿಂದ ಬಳಲುವ  ಅಜ್ಜಿಯಂತೆ ಕಾಣಿಸುತ್ತವೆ. ಅಂಗಡಿಗಳಲ್ಲಿ ಕಾಣುವ ಬಣ್ಣ ಬಣ್ಣದ ಛತ್ರಿಗಳನ್ನು ಕಂಡೊಡನೆ ಪ್ರತೀಸಲ  ನನ್ನ ಮಗಳು ಛತ್ರಿ ಕೊಳ್ಳುವ ವಿಚಾರವನ್ನು  ನೆನಪಿಸುತ್ತಾಳೆ.  ಈಗಿನ ಬಹು ಮಡಿಕೆಗಳ ಛತ್ರಿಗಳು  ವ್ಯಾನಿಟೀ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಲು ಚಂದವೇ ಹೊರತೂ ಮಳೆಗೆ ಬಿಚ್ಚಿಕೊಂಡು ಹೋಗಲಲ್ಲ. ಮಳೆ ಬಂದ್ರೆ ಇರಲಿ ಅನ್ನುವುದಕ್ಕೋಸ್ಕರ ಅದನ್ನೇ ನನ್ನ ಮಗಳು ಬ್ಯಾಗಿನಲ್ಲಿ ಪುಸ್ತಕಗಳೊಂದಿಗೆ  ಪ್ಲಾಸ್ಟಿಕ್ ಕವರಿನಲ್ಲಿ ಇಟ್ಟುಕೊಂಡು ಶಾಲೆಗೆ   ಹೋಗುತ್ತಾಳೆ. ಮಳೆ ಬಂದರೆ ಛತ್ರಿ ನೆನೆಯಬಾರದು ಅನ್ನುವ ಸದುದ್ಧೇಶ!  ನನ್ನ ಮಗ ಮಾತ್ರಾ ಸ್ನಾನದ  ಕೋಣೆಯ  ಶವರಿನಡಿಯಲ್ಲಿ ಛತ್ರಿ ಬಿಚ್ಚಿ ನಿಂದು  ಮಳೆಗಾಲದ ಸ್ವಾದವನ್ನನುಭವಿಸುತ್ತಾನೆ.  ಅಲ್ಲೇ ಕುಣಿದಾಡುತ್ತಾ ಛತ್ರಿಯ   ಅಷ್ಟೂ ಕಡ್ಡಿಗಳನ್ನೂ  ಮುರಿದು ಹಾಕುತ್ತಾನೆ.

ನಾವೆಲ್ಲಾ ಶಾಲೆಗೆ ಹೊಗುವ ಸಮಯದಲ್ಲಿ ಹೀಗೆಲ್ಲಾ ತರತರದ ಛತ್ರಿಗಳ ಆಯ್ಕೆಗಳಿಗವಕಾಶವಿರಲಿಲ್ಲ. ಆಗ ನಮಗೆ  ಇದ್ದ ಛತ್ರಿಗಳಲ್ಲೇ ಅದರ ಹ್ಯಾ೦ಡಲ್ಲಿನ ಬಣ್ಣ ಮತ್ತು ಅದರ ಕ್ವಾಲಿಟಿ ಪ್ರತಿಷ್ಟೆಯ ವಿಚಾರವಾಗಿತ್ತು! ಸ್ಟೀಲ್ ಕೋಲಿನ ಪ್ಲಾಸ್ಟಿಕ್ ಹ್ಯಾ೦ಡಲ್ ಆದರೆ ಅದು ಹೆಗ್ಗಳಿಕೆ.  ಆಪ್ಪಯ್ಯ ನನಗೆ ಮತ್ತು ನನ್ನ ಅಕ್ಕನಿಗೆಂದೇ  ಪ್ಲಾಸ್ಟಿಕ್ ಹ್ಯಾ೦ಡಲಿನ ಎರಡು ಕೊಡೆಗಳನ್ನು ತ೦ದು ಕೊಟ್ಟಿದ್ದ.  ಮರದ ಕೋಲಿನ ಛತ್ರಿ ಇದ್ದವರಿಗೆ ಸ್ವಲ್ಪ ಕೀಳರಿಮೆ, ಆದರೂ ಮರದ ಕೋಲಿನ ಛತ್ರಿಗಳು ದೊಡ್ಡದಾಗಿರುವುದರಿ೦ದ ಮಳೆ ಹೆಚ್ಚು ಮೈಗೆ ತಾಗದು. ಇಬ್ಬಿಬ್ಬರು ಒ೦ದೇ ಛತ್ರಿಯಲ್ಲಿ ಹೊಕ್ಕೊ೦ಡು ಗುಟ್ಟು ಹೇಳಿಕೊ೦ಡು ಬರಬಹುದಾಗಿದ್ದ ಸೌಲಭ್ಯ ಇತ್ತಾದರೂ ಅದು ನಮಗೆ ಆಗಲೇ   ’ಓಲ್ಡ್ ಫ್ಯಾಶನ್’ ಆಗಿತ್ತು. ನನ್ನ ಛತ್ರಿಯ ಹ್ಯಾ೦ಡಲ್ಲು ಕೆ೦ಪು  ಬಣ್ಣದ್ದಾಗಿತ್ತು ಮತ್ತು ಸ್ವಲ್ಪ ಚಿಕ್ಕದು. ನನ್ನಕ್ಕನ ಛತ್ರಿ ಸ್ವಲ್ಪ ದೊಡ್ಡದು. ಅದೇನು ಬೇಜಾರಿನ ಸ೦ಗತಿಯೇನಾಗಿರಲಿಲ್ಲ. ಜೋರು ಮಳೆ,ಗಾಳಿ ಬ೦ದಾಗ ಯಾವ ಛತ್ರಿಯಾದರೂ ಅದರ ಕಥೆ ಡಿಶ್ಶೇ..   ಅದು ಡಿಶ್ ತರ  ಎನ್ನುವ  ಜ್ಞಾನ  ನಮಗೆ ಇಲ್ಲದಿದ್ದರೂ  ಉಲ್ಟಾ ಆಗಿ ಅರಳಿದ ಕಮಲದ೦ತೆ   ಕ೦ಡು ತನ್ನ ಸೌ೦ದರ್ಯವರ್ಧಿಸಿಕೊ೦ಡ೦ತೆ ಭಾಸವಾಗುತ್ತಿತ್ತು! ಅಲ್ಲದೇ ಮಳೆಯಲ್ಲಿ ನೆನೆಯುವುದು ನಮಗೆ  ಮುಖ್ಯಹೊರತೂ  ಛತ್ರಿಯಲ್ಲವಲ್ಲ. ಬೀಸುವ ಗಾಳಿಗೆ ದೊಡ್ಡ ಕೊಡೆ ಒಳಗೆ ಗಾಳಿ ಹೊಕ್ಕು ಅಷ್ಟಷ್ಟು  ದೂರ  ಎಳೆದುಕೊಂಡು ಹೋಗುತ್ತಿತ್ತು. ಮುರಿದ ಛತ್ರಿ ಮಡಚಿಟ್ಟುಕೊಂದು ಗೆಳತಿಯರಲ್ಲಿ   ''ಏ ಛತ್ರಿ.....ಕೊಡೇ '' ಎನ್ನುತ್ತಾ pun ಎಂದರೇನೆಂದು  ಅರಿವೇ ಇಲ್ಲದ ಸಮಯದಲ್ಲೂ  punಡಾಟಿಕೆ  ಮಾಡಿದ್ದುಂಟು. ಕೆಲವರು ಈ ಸಮಸ್ಯೆಗಳೇ ಬೇಡ ಎನ್ನುವಂತೆ ಬಣ್ಣ ಬಣ್ಣದ  ಪ್ಲಾಸ್ಟಿಕ್ ಕೊಪ್ಪೆ ಹಾಕಿಕೊಂಡು ಬರುತ್ತಿದ್ದರು. ನಿಜ ಅಂದರೆ ಅದೇ ಆರಾಮ. ಮಳೆ ಒಂಚೂರೂ ಮೈಗೆ ತಾಗುತ್ತಿರಲಿಲ್ಲ. ಆದರೂ ನಮ್ಮ ಲೆಕ್ಕದಲ್ಲಿ  ಕೊಪ್ಪೆಯ ಬೆಲೆ ಕಡಿಮೆ ಆಗ..! ಒಂದು ಮಳೆಗೆ ಒಂದುಕೊಡೆ ಮತ್ತು ಒಂದು  ಜ್ವರ ಆಗ..
 

  ನನ್ನ ಛತ್ರಿಯ   ಹೆಚ್ಚುಗಾರಿಕೆಯೆ೦ದರೆ ಅದು ಚಿಕ್ಕದಿರುವ ಕಾರಣ, ನನ್ನ ಅಕ್ಕ  ’ ಇವತ್ತೊಂದಿನ  ನಾನು ಶಾಲೆಗೆ ತೆಗೆದುಕೊ೦ಡುಹೋಗುತ್ತೇನೆ ಕೊಡೇ ,’ ಎ೦ದು ಆಗಾಗ ಕೇಳುತ್ತಿದ್ದುದು. ಅವಳ ಶಾಲೆ ದೂರ.ದೊಡ್ಡ ಛತ್ರಿ ಭಾರ.  ಆಗ ನಾನಾದರೂ ಇಲ್ಲದ ಶ್ರೀಮದ್ಗಾ೦ಭೀರ್ಯದಿ೦ದ ಯಾವುದೋ ಮಹಾ ತ್ಯಾಗವನ್ನು ಮಾಡುವವಳ೦ತೆ ಮನಸ್ಸಿಲ್ಲದಿದ್ದರೂ ಅವಳಿಗೆ ಕೊಡುತ್ತಿದ್ದೆ. ಸಮಯಕ್ಕೆ ಬೇಕಾಗುತ್ತಲ್ಲ..! 


 ಸುಮ್ಮನೆ ಹನಿ ಮಳೆಯಲ್ಲಿ ಕೊಡೆ ಹಿಡಿದುಕೊಂಡು ಬರುತ್ತಿರುವಾಗಲೇ ಚಿಕ್ಕ ಪುಟ್ಟ ಜಗಳ, ಅದು ಕೆಲವೊಮ್ಮೆ ಯುದ್ಧಕ್ಕೆ ತಿರುಗುವ ಅಪಾಯಗಳೂ ಇಲ್ಲದಿಲ್ಲ. ಆಗ ಅರಳಿದ ಕೊಡೆಗಳೇ  ಶಸ್ತ್ರಾಸ್ತ್ರಗಳು!  ಒಬ್ಬರ ಕೊಡೆಯಿಂದ   ಮತ್ತೊಬ್ಬರ ಕೊಡೆ ಕುಕ್ಕಿದರೆ ಅದೇ ಮಾರಾಮಾರಿ ಯುದ್ಧ.  ಯಾರು ಜಾಸ್ತಿ ಸಲ ಕುಕ್ಕಿದ್ದಾರೋ ಅವರೇ ಜಯಶಾಲಿಗಳು...! ಈ ಗಲಾಟೆಯಲ್ಲಿ ಎಲ್ಲೋ ಏನೋ ಸ್ವಲ್ಪ ಹೆಚ್ಚು ಕಮ್ಮಿಯಾಗಿ ಕೊಡೆ ತಂತಿಯೇನಾದರೂ ಮುರಿದು ಗಿರಿದು ಹೋದರೆ ಅಕ್ಕಂದಿರು ರಾಜೀಪಂಚಾಯ್ತಿಕೆಗೆ  ಬರಬೇಕಿತ್ತು. 


ಮಳೆಗಾಲ ಬ೦ತೆ೦ದರೆ ಅಪ್ಪಯ್ಯಮುರಿದ ಕೊಡೆಗಳ ರಿಪೇರಿ ಕೆಲಸ ಹಚ್ಚಿಕೊಳ್ಳುತ್ತಾನೆ ಈಗಲೂ..!   ನಮ್ಮನೆಯಲ್ಲಿ ಪೇಟೆಗೆ ತೆಗೆದುಕೊಂಡು ಹೋಗಿ ಆ  ಕೊಡೆ ರಿಪೇರಿ ಮಾಡುವವನನ್ನು ಹುಡುಕಿ ಕಾದು  ರಿಪೇರಿ ಮಾಡಿಸಿಕೊಳ್ಳುವ ಅವಶ್ಯಕತೆಯೇ ಇರಲಿಲ್ಲ. ಅಪ್ಪಯ್ಯ ಮಳೆಗಾಲದ ಬಿಡುವಿನ ಸಮಯದಲ್ಲಿ ಮದ್ಯಾಹ್ನದ ಹೊತ್ತು ಈ ರಿಪೇರಿ ಕೆಲಸಗಳನ್ನೆಲ್ಲ ಆಸಕ್ತಿಯಿಂದ ಮಾಡುತ್ತಾನೆ. ಅದವನಿಗೆ ಒಂತರಾ ಇಷ್ಟದ ಕೆಲಸ. ನಾವು ಕಸೂತಿ ಹಾಕಿದಂತೆ ಅವನ ಸ್ಟೈಲು ಹಾಗೆ.   ಒ೦ದು ರ್ಯಾಗ್ಜಿನ್ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊ೦ಡ  ಹಳೇ  ಕೊಡೆ ಕಡ್ಡಿ, ಕೋಲು, ಹಿಡಿಕೆ, ತಂತಿಗಳೂ,ಛತ್ರಿಯ ಬಟ್ಟೆ  ಇವೆಲ್ಲವನ್ನೂ ಮೆತ್ತಿನ ಮೇಲಿ೦ದ ಕೆಳಗಿಳಿಸುತ್ತಾನೆ. ಬಾಯಲ್ಲಿ ಒಂದು ಹೊಗೆಸೊಪ್ಪಿನ  ಕವಳ  ಇಟ್ಟುಕೊಂಡು ಕುಳಿತರೆ ಏಳುವಾಗ   ಮುರಿದ ಕೊಡೆ  ಹೊಸಕೊಡೆಯಾಗಿರುತ್ತಿತ್ತು ಆಗೆಲ್ಲಾ. ಅಪ್ಪಯ್ಯನ ಹಡಪದಲ್ಲಿ ಇರದ ವಸ್ತುಗಳಿಲ್ಲ.  ಕೆಲವೊಮ್ಮೆಕೊಡೆ  ಬಟ್ಟೆ ಹರಿದುಹೊದರೆ ಪೇಟೆಯಿಂದ ಹೊಸಬಟ್ಟೆ ತಂದು ಹಳೆ ಕೊಡೆಯ ಅಸ್ಥಿಪಂಜರಕ್ಕೆ  ಹೊಲಿದು ಹೊಸಾದು ಮಾಡುತ್ತಿದ್ದ.. ಆಮೇಲೆ ಕೊಡೆ ಕಳೆದು ಹೋಗದಂತೆ  ದಾರದಲ್ಲೇ ಹೊಲಿದಿಡುವ ನಮ್ಮ ಹೆಸರಿನ ಮೊದಲಕ್ಷರ ಸಿದ್ಧ . ''ನೋಡೇ ಹಳೆ ಕೊಡೆ ಹ್ಯಾಂಗೆ ಹೊಸಾದು ಮಾಡಿದ್ದಿ...'' ಎಂದು ಅಪ್ಪಯ್ಯ ಕವಳ ಉಗುಳಿ  ಬಂದು ಹೇಳುತ್ತಿದ್ದರೆ ನಮಗೆ ಖುಶಿ ಮತ್ತು ಅಪ್ಪಯ್ಯನಿಗೂ ಸಂತೃಪ್ತಿ.   ಹಾಗಾಗಿ ನಾವು ಯಾವತ್ತೂ ಹರಕಲು ಮುರುಕಲು ಕೊಡೆ ಒಯ್ದವರೇ ಅಲ್ಲ.

ನನ್ನ ಮಗ  ಒಂದಷ್ಟು  ದಿನ ಟೆರೇಸಿನಲ್ಲಿ ಕೊಡೆ ಹಿಡಿದು  ಮಳೆಯೊಂದಿಗೆ ಆಡಿದ. ಅಲ್ಲೂ ಜೋರು ಗಾಳಿ.   ಇವನನ್ನೆಲ್ಲಾದರೂ  ಹಾರಿಸಿಕೊಂಡು ಹೋಗಿ ಪಕ್ಕದ ಟೆರೇಸಿಗೆ ಹಾಕಿದರೆ ಕಷ್ಟ..   ಹೊರಗೆ ಬೀದಿಯಲ್ಲಿ ಕೊಚ್ಚೆ. ಅವನೇನು ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಚ್ಚಲುಮನೆಯ ನಲ್ಲಿ, ಶವರಿನ ಕೆಳಗೆ ಮಳೆ,ಮಳೆ  ಅನ್ನುತ್ತಾ ಕುಣಿಯುತ್ತಾನೆ. ಮಳೆಬಾರದ ಈ ಮಳೆಗಾಲದಲ್ಲಿ ನೀರ ಬರ.  ನೀರಿಲ್ಲ ಎಂದು ಅವನನ್ನು  ಸುಮ್ಮನಿರಿಸಿದ್ದೇನೆ.
 
ನನ್ನ ಬಳುವಳಿಗೆ ಕೊಟ್ಟ ಹೊಸಾ ಛತ್ರಿ ಇನ್ನೂ ಹೊಸದಾಗಿಯೇ ಇದೆ. ಏಕೆಂದರೆ ಅದನ್ನು ಬಳಸಿದ್ದೇ  ಕಡಿಮೆ ಮತ್ತು ಬೆಂಗಳೂರಲ್ಲಿ ಮಳೆಯಲ್ಲಿ  ಹೊರಗೆ  ಹೋಗಿದ್ದೇ  ಇಲ್ಲ.  ಅಷ್ಟರ ಮೇಲೆ ಅನೇಕ ಛತ್ರಿಗಳು  ನಮ್ಮನೆ ಶೆಲ್ಫ್   ಅಲಂಕರಿಸಿದರೂ ಎಲ್ಲವೂ ಶಿಶಿರನ  ಮಳೆ ಕುಣಿತಕ್ಕೆ  ಸಿಲುಕಿ ಮುರಿದ ಸ್ಥಿತಿಯಲ್ಲಿವೆ. ಅದನ್ನಾದರೂ ರಿಪೇರಿ ಮಾಡಿಸೋಣವೆಂದರೆ  ಕೊಡೆ ರಿಪೇರಿ ಮಾಡುವವರು ಯಾರೂ ಕಾಣುವುದೇ ಇಲ್ಲ ಈಗೀಗ...  ಹೊಸಾದು ತಗೊಳ್ಳುವುದೇ ಒಳ್ಳೇದು ಎಂದು  ಐಶು  ಅನ್ನುತ್ತಾಳೆಂದು ಮತ್ತೆ ಬಾಯಿ ಬಿಗಿದುಕೊಂಡು ಕೂತಿದ್ದೇನೆ  ಅಪ್ಪಯ್ಯನನ್ನು ನೆನೆಸಿಕೊಳ್ಳುತ್ತಾ..


   

Monday, May 28, 2012

ಎಕ್ಸ್ಲಮೇಟ್ರೀ ಮಾರ್ಕುಗಳೂ, ಕ್ವಶ್ಚನ್ ಮಾರ್ಕುಗಳೂ, ದೊರೆಯದ ಫುಲ್ ಸ್ಟಾಪುಗಳೂ...


ಊರಿಗೆ ಹೋಗುವಾಗಿನ ಅವಸರ, ಉದ್ವೇಗ ಬರುವಾಗ ಇರೋಲ್ಲ.  ಮಕ್ಕಳಿಗೆ  ಪರೀಕ್ಷೆ ಮುಗಿಯುತ್ತಿದ್ದಂತೆ ಊರಿಗೆ ಹೋಗುವ ತರಾತುರಿ. ಬಟ್ಟೆ ಬರೆಯನ್ನೆಲ್ಲಾ ನೀಟಾಗಿ ಬ್ಯಾಗಿಗೆ  ತುಂಬಿಕೊಂಡು ಹೋದರೆ ಬರುವಾಗ ಬೇಕಾಬಿಟ್ಟಿ ತುರುಕಿಕೊಂಡು ಬರುವುದು. ಮಕ್ಕಳನ್ನು ಊರಿ0ದ ವಾಪಾಸು ಬೆಂಗಳೂರಿಗೆ ಹೊರಡಿಸುವುದು ಮತ್ತೆ ಪರೀಕ್ಷೆ ತಯಾರಿ ನಡೆಸಿದಂತೆಯೇ, ವಾರದ ಮೊದಲಿಂದ ಟ್ಯೂನ್ ಮಾಡಬೇಕಾಗುತ್ತದೆ. ನಮಗಾದರೂ ಅಷ್ಟೇ.. !

 ಊರಲ್ಲಿ ಮಕ್ಕಳು  ಕಂಡ ಕಂಡದ್ದೆಲ್ಲ ಕಂಡು ಪ್ರಶ್ನೆ ಮಾಡುತ್ತಾ ಕಂಡ ಕಂಡವರ ತಲೆನೆಲ್ಲಾ ಕೆಂಡವಾಗಿಸಿ ಬಿಡುತ್ತಾರೆ. 
ನಮ್ಮ ತಂದೆ ಚಿಕ್ಕವಳಿದಾಗ ನನಗೆ ಹೇಳುತ್ತಿದ್ದರು, ''ಏನ್ ಪ್ರಶ್ನೆ ಕೇಳತೆ ಕೂಸೇ.''

ಅವರಿಗೆ ಕಂಡದ್ದೆಲ್ಲಾ ಆಶ್ಚರ್ಯಸೂಚಕ ಚಿನ್ಹೆಯೇ.   ಆಮೇಲೆ  ನಮ್ಮಲ್ಲಿ  ಪ್ರಶ್ನಾರ್ಥಕ  ಚಿನ್ಹೆ .  ಆಶ್ಚರ್ಯ ಸೂಚಕ  ಚಿನ್ಹೆಗಳೆಲ್ಲಾ  ಒ೦ದರ ಪಕ್ಕ ಒ೦ದು ನಿಲ್ಲುತ್ತಾ ಕೋಟೆಯ ಗೋಡೆ ಯ೦ತಾಗಿ ಮು೦ದೆ  ಮಾಡಿಫೈ   ಆಗುತ್ತಾ   ಡೊಂಕಾಗಿ   ಏಕೆ ? ಹೇಗೆ..?  ಎಲ್ಲಿ? ಏನು? ಎತ್ತ..?ಎನ್ನುತ್ತಾ ಕ್ವಶ್ಚನ್ ಮಾರ್ಕುಗಳಾಗಿ    ಬದಲಾಗುತ್ತವೆ..! ಯೋಚಿಸುತ್ತಾ,ಯೋಚಿಸುತ್ತಾ  ಬೆನ್ನೂ ಮುಡುಗುತ್ತದೆಯಲ್ಲವೇ]   ವಿಜ್ಞಾನಿಗಳೆಲ್ಲಾ ಆಗಿದ್ದು ಹೇಗೆ ಮತ್ತೆ..?ಕ್ವಶ್ಚನ್ ಮಾರ್ಕುಗಳಿಗೆಲ್ಲಾ ತಲೆ ಕೆಡಿಸಿಕೊಂಡಿದ್ದಕ್ಕಾಗಿ ಅಂತೂ ಉತ್ತರ ಹುಡುಕಿ ಫುಲ್ ಸ್ಟಾಪ್ ಇಟ್ಟು ಪ್ರಶಸ್ತಿಗಳನ್ನೆಲ್ಲ    ತೆಗೆದುಕೊ೦ಡರು..!!!   ಕಂಡದ್ದನ್ನು ಸುಮ್ಮನೆ ಒಪ್ಪಿಕೊಂಡಿದ್ದರೆ ಯಾರೊಬ್ಬರೂ ಯಾವ ಸಾಧನೆಯನ್ನೂ ಮಾಡುತ್ತಿರಲಿಲ್ಲ.  ಹಾಗಾಗಿ ನಾನೂ ಸಮಾಧಾನದಲ್ಲೆ ತಿಳಿದಷ್ಟಕ್ಕೆ ಉತ್ತರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ..!  ಉತ್ತರಿಸುವ ಹೊತ್ತಿಗೆ ಸಾಕುಬೇಕಾಗಿ ಬಿ೦ದುವೊ೦ದನ್ನಿಡಲೂ ನಿಶ್ಯಕ್ತಳಾಗುತ್ತೇನೆ.


ಊರಲ್ಲಿ ಗುಡ್ಡ, ಬೆಟ್ಟ,  ತೋಟ, ಗದ್ದೆ ತಿರುಗಲು ಹೋಗಿ  ಐಶು  ಹಕ್ಕೆ ಮನೆಯೊಂದರ ಫೋಟೋ ಹೊಡೆದುಕೊಂಡು ಬಂದಿದ್ದಳು.ರಾತ್ರಿ  ಗದ್ದೆ ಕಾಯಲು ಎಷ್ಟೊಳ್ಳೆ ಉಪಾಯ ಎಂದುಕೊಂಡು   ಒಂದಿಪ್ಪತ್ತು ಎಕ್ಸಲಮೆಟ್ರಿ  ಮಾರ್ಕುಗಳೊಂದಿಗೆ ಅದರ ಇನ್ನಿತರ ವಿಚಾರಗಳಿಗೆ ನಾಲ್ಕಾರು ಕ್ವಶ್ಚನ್  ಮಾರ್ಕುಗಳನ್ನೂ  ಎಸೆದಿದ್ದಳು.





ನಾಲ್ಕು ಗಳ ಹುಗಿದು ನಾಲ್ಕಾರು ಸೋಗೆ ಹೊದಿಸಿ  ಮಧ್ಯದಲ್ಲಿ ಅಟ್ಟಣಿಗೆ ಮಾಡಿದರೆ ಅದೇ ಹಕ್ಕೆ ಕಾಯುವವನ ಅರಮನೆ. ಹಕ್ಕೆ ಅ೦ದರೆ ಹಾಸಿಗೆ ಅಥವಾ ವಿಶ್ರಾ೦ತಿ ಸ್ಥಳ ಅನ್ನುವ ಅರ್ಥವಿದೆ.



ಹಕ್ಕೆ ಕಾಯುವವರ ಅನುಭವಗಳೂ, ಅವರದೇ ಫಜೀತಿಗಳೂ ತುಂಬಾ  ಇಂಟರೆಸ್ಟಿಂಗ್ ಇರುತ್ತವೆ. ಒಂದು ಲಾಟೀನೂ, ಒಂದು ನಾಯಿಯೂ ಹಕ್ಕೆ ಕಾಯುವವನ ಒಡನಾಡಿಗಳು.  ಮತ್ತು  ಒಂದೇ ಕಂಬಳಿ ಪ್ಲಸ್  ಒಂದು ದೊಣ್ಣೆ .  ನಾಯಿ ತು೦ಬಾ ಸೂಕ್ಶ್ಮ ಸದ್ದಿಗೂ ಸ್ಪ೦ದಿಸಿ ಒಡೆಯನನ್ನು ಎಬ್ಬಿಸುವುದರಿ೦ದ ಮತ್ತು ಕಾಯುವ ಅದರ ಸ್ವಾಭಾವಿಕ ಗುಣದಿ೦ದ ನಾಯಿ ಅತ್ಯಗತ್ಯ. ಬ್ಯಾಟರಿ ಎಲ್ಲಾ ವಿಶೇಷವಾಗಿ ಇರುತ್ತಿರಲಿಲ್ಲ.. ಕೆಳಗಡೆ ಹಕ್ಕೆ ಕಾಯುವವನ  ಭಯ ಮತ್ತು ಚಳಿ ದೂರಮಾಡಲು ಒ೦ದು ಹೊಡ್ಸಲು. ಕೆಲವೊಮ್ಮೆಕೇರೆ ಹಾವುಗಳು ಇಲಿ , ಹೆಗ್ಗಣ ಹಿಡಿಯಲು  ಬ೦ದು ಗೋಳು ಗುಟ್ಟಿಸುವುದೂ ಇರುತ್ತದೆ.  ರೈತನ ಗೆಳೆಯ ಕೇರೆ ಹಾವು. ಆದರೂ ಅದು ಹಾವಾಗಿದ್ದಕ್ಕೆ ಹೆದರುವುದು  ಸಹಜ. ಮಲೆನಾಡಿನ ತೋಟಗಳಲ್ಲಿ ಮತ್ತು ಗದ್ದೆಗಳಲ್ಲಿ ಹಂದಿ, ಕಾಡುಕೋಣಗಳ ಹಾವಳಿ ಬಹಳ.  ಕಾಡೆಲ್ಲಾ ಕಡಿದು  ಅವುಗಳ ಸಾಮ್ರಾಜ್ಯಕ್ಕೆ ಮನುಷ್ಯ ಧಾಳಿಯಿಟ್ಟ0ತೆ ಅದಕ್ಕೆ ಪ್ರತೀಕಾರವೆಂಬಂತೆ    ತಮ್ಮ ಕುಟು೦ಬ ಸಮೇತ ನೆ೦ಟರಿಸ್ಟರ  ಜೊತೆ ಈ ನಿಶಾಚರಿಗಳು  ಮನುಷ್ಯರ  ಆಕ್ರಮಿತ ಪ್ರದೇಶಗಳ ಮೇಲೆ ಧಾಳಿಯಿಡುತ್ತವೆ. ಪ್ರಾಣಿಗಳು ತೋಟಕ್ಕೆ ನುಗ್ಗಿದರೆ ಜಾಗಟೆ, ಗರ್ನಾಲು ಇವುಗಳ ಸಹಾಯದಿ೦ದ ಗದ್ದಲ ಮಾಡಿ ಅವುಗಳನ್ನು ಹಿಮ್ಮೆಟ್ಟಿಸುವುದು  ಗುರಿ. 

 ಹಕ್ಕೆ ಕಾಯುವುದು ಅನ್ನುವುದನ್ನು ಇಂಗ್ಲೀಷಿನಲ್ಲಿ ಮರ್ಯಾದೆಯುತವಾಗಿ ಹೇಳುವುದಾದರೆ ನೈಟ್ ವಾಚಮನ್..  ಎಷ್ಟೋಸಲ  ಹಕ್ಕೆ ಮನೆಯಲ್ಲಿ ಹಕ್ಕೆ ಕಾಯುವವನೂ ನಾಯಿಯೂ ಸೇರಿಯೇ ಗೊರಕೆ ಹೊಡೆದದ್ದು೦ಟು. ಮರುದಿನ ಫಸಲೆಲ್ಲಾ ಹಾವಳಿಯಾದ ಮೇಲೆ  ''ಅಯ್ಯೊ ಎಲ್ಲೊ ಒ೦ದ್ ಗಳಿಗೆ ಮಟ್ಟಿಗೆ ಕಣ್ಮುಚ್ಚಿದ್ದೆ ಅನ್ನಿಸುತ್ತದೆ.. ಆವಾಗ್ಲೆ ಹೀಗೆಲ್ಲಾ ಆಗಿಹೋಗಿದೆ” ಎ೦ದು ಹಳಹಳಿಸಿ ಎಡವಟ್ಟುಮಾಡಿಕೊಳ್ಳುವುದು ಸಾಮಾನ್ಯ.

ಒಮ್ಮೆ ನಾಲ್ಕು ಜನ ಗೆಳೆಯರು   ಮಗೆ ಗದ್ದೆ ಕಾಯಲು ಹೋದರ೦ತೆ. ಇಸ್ಪೀಟಿನ ಚಟ  ಅವರಿಗೆ. ರಾತ್ರೆ ಬೆಳಗೂ ಆಡಿದರ೦ತೆ. ಮರುದಿನ ಬೆಳಗ್ಗೆ ನೋಡಿದರೆ ಬೆಳೆಯಲು ಬಿಟ್ಟ ಮಗೆ ಕಾಯಿಗಳು ಒ೦ದೂ ಇರಲಿಲ್ಲವ೦ತೆ. ಇಸ್ಪೀಟಿನ ಎಲೆಗಳ ಮುಖಗಳಲ್ಲಿ ಮುಳುಗಿಹೋದ ಆ ಕಾವಲುಗಾರರಿಗೆ    ಮಗೆ ಕಾಯಿ ಯಾರು ಎಷ್ಟೊತ್ತಿಗೆ  ಕೊಯ್ದುಕೊ೦ಡು ಹೋದರೆ೦ದೇ  ಗೊತ್ತಾಗಲಿಲ್ಲವ೦ತೆ.

ಒಮ್ಮೆ ಕಾಡುಕೋಣಗಳು ಬ೦ದವೆ೦ದು   ಗರ್ನಾಲು ಹೊಡೆಯುತ್ತಿದ್ದಾಗ  ಅವುಗಳ ಸದ್ದಿಗೆ ಭಯಗೊ೦ಡ ಒ೦ದು ಕೋಣ ಸೀದಾ ಹಕ್ಕೆ ಮನೆಯ ಕಡೆಗೇ ನುಗ್ಗಿ ಓಡಿದ ರಭಸಕ್ಕೆ ಹಕ್ಕೆ ಮನೆಯ   ಗಳುಗಳು ಕಿತ್ತುಬ೦ದು ಅದರ ಕೊ೦ಬಿಗೆ ಸಿಕ್ಕಿ ಅ೦ಬಾರಿಯ೦ತೆ ಹೊತ್ತುಕೊ೦ಡುಹೋಗಿ ಅಲ್ಲೆಲ್ಲೋ ಗದ್ದೆಯ ಮರುಕಲಲ್ಲಿ ಕೊಡವಿಕೊ೦ಡಿತ್ತ೦ತೆ. ಆ ಹೊತ್ತಿಗೆ ಹಕ್ಕೆ ಕಾಯುವವನು ಗರ್ನಾಲು ಹೊಡೆಯಲು ಗದ್ದೆಯ ಬದಿಗೆ ನಿ೦ತಿದ್ದರಿ೦ದ ತಪ್ಪಿಸಿಕೊ೦ಡ. ಇಲ್ಲದಿದ್ದರೆ ಯಮನ ವಾಹನದ ಧಾಳಿಗೆ ಸಿಲುಕಿ  ' ಕೇರ‍್ ಆಫ್ ಯಮ ' ಆಗಿಬಿಡುವ ಸಾಧ್ಯತೆಗಳೇ ಹೆಚ್ಚಿಗೆ ಇದ್ದವು.

ನನಗೆ ಸಣ್ಣವಳಿದ್ದಾಗ ಹಕ್ಕೆಮನೆ ಅ೦ದ್ರೆ  ತು೦ಬಾ ಆಸಕ್ತಿಕರವಾದ ವಿಚಾರವಾಗಿತ್ತು.ನೆ೦ಟರೊಬ್ಬರ ಮನೆಯ ಗದ್ದೆಯಲ್ಲಿ  ಹಕ್ಕೆಮನೆ  ಇತ್ತು.  ಹಗಲಿಗೆ ಅದು ನಮ್ಮ ಆಟದ ಮನೆಯಾಗುತ್ತಿತ್ತು.   ಒಮ್ಮೆ ಅಲ್ಲಿ ನಾವು ಆಡುವಾಗ  ಹಸಿರುಳ್ಳೆ ಹಾವು ಬ೦ದು 'ಹಾಯ್ '  ಅ೦ದಿತ್ತು.ನನಗೆ ಭಯವಾಗಿ ' ಅಯ್ಯಯ್ಯೊ' ಎ೦ದು ಉತ್ತರಿಸಿದ್ದೆ. ಸುಮಾರು ದಿನ ಹಕ್ಕೆ ಮನೆ ಕಡೆ ಸುಳಿದಿರಲಿಲ್ಲ.

ಈಗೀಗ ಐಬೆಕ್ಸ್ ಬೇಲಿಗಳು ಬ೦ದು ಹಕ್ಕೆ ಮನೆಗಳು ಅಷ್ಟೆಲ್ಲಾ ವ್ಯಾಪಕವಾಗಿ ಕಾಣಸಿಗುವುದಿಲ್ಲ.  ಆದರೆ      ಹಸಿರು   ಗದ್ದೆಯ ಮಧ್ಯದಲ್ಲಿ ಕಾಣುವ ಹಕ್ಕೆ ಮನೆಗಳು ದೂರದಿ೦ದ ನೋಡಲು ಮನಸ್ಸಿಗೆ ಮುದನೀಡುತ್ತವೆ.

ಹೀಗೆ ಚಿಕ್ಕದಾಗಿ ಮಕ್ಕಳ  ವ್ಯಾಕರಣ ಚಿನ್ಹೆಗಳಿಗೆ ನಿಶ್ಯಕ್ತಿಯಿ೦ದ ಬಿ೦ದುವೊದನ್ನು ಇಟ್ಟು ಪೂರ್ಣಗೊಳಿಸುವಲ್ಲಿ ಶಕ್ತಳಾಗಿದ್ದೇನೆ...!

ಅಲ್ಲದೇ ಇನ್ನೊ೦ದು ಕ್ವಶ್ಚನ್ ಮಾರ್ಕ್ ಹಾಕಬಹುದು ಎ೦ದರೆ,   ನಾವು ಬಳಸುವ ಈ ವ್ಯಾಕರಣ ಚಿನ್ಹೆಗಳು ಯಾವ ಭಾಷೆಯದು?  ಸ೦ಸ್ಕೃತ ಮತ್ತು ಹಿ೦ದಿಯಲ್ಲಿ ಫುಲ್ ಸ್ಟಾಪಿಗೆ ಗೆರೆಯೆಳೆದು ಗೋಡೆ ಕಟ್ಟಿಬಿಡುತ್ತಾರೆ. ಉಳಿದಿದ್ದೆಲ್ಲ ಒ೦ದೇತರಾ. ಕನ್ನಡದಲ್ಲಿ ನಾವು ಬಳಸುವ ಚಿನ್ಹೆಗಳು ಇ೦ಗ್ಲೀಷಿನದೇ..?   ಅಥವಾ ಕಾಕತಾಳೀಯವಾಗಿ ಎರಡೂ ಒ೦ದೇ ತರದವಾಗಿವೆಯೇ..? ಪದ್ಯ ಬರೆಯುವವರು ಪಲ್ಲ ಅನುಪಲ್ಲಕ್ಕೆ ಆಚೀಚೆ ಎರಡೆರಡು ಗೆರೆ ಎಳೆಯುವುದು ಏಕೆ..? ಅಥವಾ ಇನ್ನಾವುದಾದರೂ ಚರಿತ್ರೆಗಳಿವೆಯೇ..? ಗೊತ್ತಿದ್ದವರು ತಿಳಿಹೇಳಿದರೆ ನನ್ನ ಎಕ್ಸ್ಲ ಮೇಟ್ರಿ ಮಾರ್ಕುಗಳಿಗೂ, ಕ್ವಶ್ಚನ್ ಮಾರ್ಕುಗಳಿಗೂ ಫುಲ್ ಸ್ಟಾಪ್ ದೊರೆಯುತ್ತದೆ.


ವ೦ದನೆಗಳು.

Tuesday, April 10, 2012

ಪಿಜ್ಜಾ ಹಟ್ಟಿನಲ್ಲಿ ಡಿನ್ನರ್ರು..

ಪಿಜ್ಜಾ ಹಟ್ಟಿಗೆ ಹೋಗಿದ್ದೆವು. ನಾನೂ, ಇವರು  ಮತ್ತು ಐಶು.  ಶಿಶಿರ ಹಠ ಮಾಡಿಕೊಂಡು ಊರಿಗೆ ಹೋಗಿದ್ದರಿಂದ ಅವನೊಬ್ಬ ಮಿಸ್ಸಿಂಗು. ಐಶುವಿನ ಬರ್ತ್ ಡೇ ಟ್ರೀಟಿಗೆ ಪಿಜ್ಜಾ ಹಟ್ಟಿಗೆ ಹೋಗುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾಯ್ತು. ನಮ್ಮನೆಯಲ್ಲಿ ಬರ್ತ್ ಡೇ ನಮ್ಮದಾದರೂ ಸರಿ, ಮಕ್ಕಳದ್ದಾದರೂ ಸರಿ ಪಾರ್ಟಿ ಕೊಡಿಸುವುದು ಮಕ್ಕಳಿಗೆ !     ಹಾಗಾಗಿ  ಐಶುವಿನ ಮೋಸ್ಟ್ ಫೆವರಿಟ್ ಚ್ಹೀಸೀ ಬೈಟ್ ಅನ್ನು  ಮೊದಲೇ ನೆನೆದುಕೊಂಡು ಪಿಜ್ಜಾ ಹಟ್ಟಿಗೆ ಪಯಣ  ಬೆಳೆಸಿದ್ದಾಯ್ತು.

ಅಲ್ಲಿ  ವೈಟರ್ ತಂದಿಟ್ಟ ಮೆನು ನೋಡಿಯೇ ನೋಡಿದೆ.  ಪ್ರತಿ ಬಾರಿಯೂ  ಆರ್ಡರ್ ಮಾಡಿದ ಪಿಜ್ಜಾದ ರುಚಿ ನೋಡಿದ ಮೇಲೆ, ರುಚಿ ಏನ್ಬಂತು ಮಣ್ಣು,   ಪಿಜ್ಜಾ ಬಾಯಿಗಿಟ್ಟ ಮೇಲೆ ಬೇರೇದು ತಗೋ ಬೇಕಿತ್ತು ಅನಿಸುತ್ತಿತ್ತು. ಆ ಇಟಲಿಯವರ ಸುಡುಗಾಡು  ಹೆಸರು ಒಂದೂ ನೆನಪಿಗೆ ಬರುವಂತದ್ದಲ್ಲ.   ಐಶು ಅದೊ೦ತರ ಸ್ಟಾರ್ಟ್ರು ಆರ್ಡರ್ ಮಾಡಿದ್ಲು. ರೊಟ್ಟಿ ತುಂಡಿನ ಒಳಗೆ ಒಂದೆರಡು ತರಕಾರೀ ಪೀಸೂ, ಒಂದೆರಡು ಪನ್ನೀರ್ ಪೀಸೂ ಇತ್ತು. ಮತ್ತೆ ಪನ್ನೀರ್ ಪಿಜ್ಜಾ , ಅವಳ ಇಷ್ಟದ ಚ್ಹೀಸೀ ಬೈಟೂ , ಆಮೇಲೆ  ಆ ವೈಟರ್ ಪುಣ್ಯಾತ್ಮ ಅದೇನೋ ಬೆವರೆಜ್, ಎರಡು ತಗೊಂಡ್ರೆ ಡಿಸ್ಕೌಂಟ್ ಸಿಗುತ್ತೆ ಅಂತ ಅದನ್ನೂ ನಮ್ ಕೈಲಿ ಆರ್ಡರ್ ಮಾಡಿಸಿದ..! ಗ್ರೀನ್ ಆಪಲ್ ಮೋಜಿಟೋ ಅಂತ. ಅದು ಚನ್ನಾಗಿತ್ತು. ಮತ್ತು ಅದು ಮಾತ್ರ ರುಚಿಯಾಗಿತ್ತು..!

ಸುಮಾರು ಹೊತ್ತಾದ ಮೇಲೆ ಸ್ಟಾರ್ಟ್ರು ಮುಗಿಸಿದ ಮೇಲೆ ಪಿಜ್ಜಾ ಬಂತು. ಆ ವೈಟರ್ರೆ ಎಲ್ಲಾ ಎಳೆದು, ಸುಗುದು ಒಂದೊಂದು ಪೀಸು ಬಡಿಸಿ ಹೋದ. ನನಗೆ ಆ ಫೋರ್ಕು ಚಾಕು ಹಿಡ್ಕೊಂಡು ಯಾವ ದಿಕ್ಕಿಂದ ಕತ್ತರಿಸ ಬೇಕೂ ಅಂತಾನೂ ಗೊತ್ತಾಗಲಿಲ್ಲ. ನಾರೂ ನಾರು. ಬಾಲ ಬಾಲ..   ಐಶು ಮಾತ್ರಾ ಪ್ರೊಫೆಶನಲ್ಸ್ ತರಾ, 'ಅಮ್ಮ ಹೀಗೆ ಹಿಡ್ಕೋ ಹಾಗೆ ಹಿಡ್ಕೋ' ಅಂತ ಯಾವಾಗಿನಂತೆ  ನನಗೆ ಉಪದೇಶ ಕೊಟ್ಟಳು.ನಟರಾಜ್ ನೋಡಿದೆ. ಅವರು ಒಂದೊಂದು ಕೈಯಲ್ಲಿ ಒಂದೊಂದು ಆಯುಧ ಹಿಡಿದು ಯುದ್ಧೋನ್ಮಾದದಿಂದ ಥೇಟ್ ವೈರಿಯ ತಲೆ ಹರಿಯುವ ಸ್ಟೈಲಿನಲ್ಲಿ ಪಿಜ್ಜಾವನ್ನು ಕತ್ತರಿಸುತ್ತಿದ್ದರು.ನಾನೂ ಶ್ರದ್ಧೆಯಿಂದ, ಭಕ್ತಿಯಿಂದ ಕತ್ತರಿಸುವ ಕಾರ್ಯದಲ್ಲಿ ಮಗ್ನಳಾದೆ.ರುಚಿಯೇ ಇರದ ಈ ಪಿಜ್ಜಾವನ್ನು ಯಾಕಾದರೂ ತಿನ್ನುತ್ತಾರೋ ಅಂತ ಪ್ರತಿಸಾರಿಯಂತೆ ಈ ಸಲವೂ ಅನ್ನಿಸಿತು.


ನಟರಾಜ್ ಒಮ್ಮೆಲೇ ಜ್ಞಾನೋದಯವಾದವರಂತೆ, '' ರುಕ್ಕಮ್ಮನ ಗಂಡನನ್ನು ಕರ್ಕೊಬರ್ಬೇಕಿತ್ತು.'' ಅಂದರು. ಯಾಕೆ ಅಂದ್ರೆ ನಮ್ಮ ಕೆಲಸದಾಕೆ ರುಕ್ಕಮ್ಮನ ಗಂಡ ಗೋಪಾಲ ಕಾರ್ಪೆಂಟರು. ಅವನ ಹತ್ತಿರ ಇರುವ ಗರಗಸ ಪಿಜ್ಜಾ ಕೊಯ್ಯಲು ಸಹಕಾರಿಯಾಗುತ್ತೆ ಅಂತ ಇವರು ಆಗಲೇ ಮನದಟ್ಟು ಮಾಡಿಕೊಂಡಿದ್ದರು. ನನ್ನ   ಅಣ್ಣಂದಿರು ಆಗಿದ್ದಿದ್ದರೆ    'ನಾರು ಬಜ್ಜ' ಅನ್ನುತ್ತಿದ್ದರು ಗ್ಯಾರಂಟಿ. ಇನ್ನೂ ವಿಶ್ಲೇಷಿಸಿ ಬೇಕಿದ್ದರೆ [ ಪಿಜ್ಜಾ ಅಭಿಮಾನಿಗಳು ಯಾರೂ ಕಲ್ಲೆತ್ಕೊಂಡು ಬರಬೇಡಿ..] ಇದು ಹಳೆ ಎಮ್ಮೆ ಚರ್ಮ ಎಳೆದ ಹಾಗಿರುತ್ತೆ..   ಎಂದು ಹೊಗಳುತ್ತಿದ್ದರು. ನಾವೂ ಹೀಗೆ ವಿಸ್ತಾರ ಮಾಡಿ  ಐಶು ವನ್ನು  ಕೆಣಕಿದೆವು. ''ಅಪ್ಪಾ ಬರ್ಗರ್ ತಿನ್ನುವುದು ಇನ್ನೂ ಕಷ್ಟ'' ಎಂದಳು. ಅದಾದರೆ ಮೊಸಳೆಯಂತೆ ಇಷ್ಟಗಲ  ಬಾಯಿ  ತೆರೆದು ಗಬಕ್ಕನೆ ಕಚ್ಚಿ ಹರಿಯಬೇಕಿತ್ತು. ಬಾಯಿ ಎಷ್ಟಗಲ ಮಾಡ್ಬೇಕು ಅಂತಾನೂ ಗೊತ್ತಾಗದೆ  ಎಮ್ಮೆ ಮುರ ತಿಂದಂತೆ ತಿನ್ನ ಬೇಕಿತ್ತು. ''ಅದು ನಿನಗೇ ಇರಲಿ'' ಎಂದೆ.

ನನಗಂತೂ  ಈ ಪಿಜ್ಜ್ಯಾದಲ್ಲಿ ರುಚಿ ಎಲ್ಲಿದೆ ಅಂತಾನೆ ಗೊತ್ತಾಗಲಿಲ್ಲ. ಎಲ್ಲಾ ಚೀಸು ಚೀಸು. ನೆಂಚಿಕೊಳ್ಳಲು ಕೂಡಾ ಚೀಸಿ ಡಿಪ್ಪಂತೆ. ಅಲ್ಲಿರುವ ಮೆಣಸಿನ ಬೀಜ.. ಪೆಪ್ಪರ್ ಪೌಡರ್ ನಲ್ಲೆ ಸ್ವಲ್ಪ ರುಚಿ ಇದೆ ಅನ್ನಿಸಿತು. ನಮ್ಮೂರಲ್ಲಿ ಬೇಸಿಗೆಯಲ್ಲಿ  ಕಾಳು ಕಡಿ ಮಾಡುವ ಸಮಯದಲ್ಲಿ,  ಒಣ ಮೆಣಸಿನ ಕಾಯಿ ತಂದು ಅದನ್ನು ಹೆಕ್ಕಿ ಒಣಗಿಸಿ ಡಬ್ಬ ತುಂಬಿ ಇಡುವಾಗ ಕೆಳಗಷ್ಟು ಮೆಣಸಿನ ಬೀಜ ಉಳಿಯುತ್ತಲ್ಲ,  ಅದನ್ನು ಎಸೆದು ಬಿಡುತ್ತಾರೆ. ಆದ್ರೆ ನೋಡಿ, ಇಟಲಿಯಲ್ಲಿ ಅದನ್ನು ದಂಡ ಮಾಡದೆ  ಪಿಜ್ಜಾಗೆ ಹಾಕಿಕೊಂಡು ತಿನ್ನುತ್ತಾರೆ !

  ಐಶು  ಚೀಸಿ ಬೈಟು ತಿಂದಾದ ಮೇಲೆ  ''ಅಯ್ಯೋ ಪಿಜ್ಜಾ ತಿಂದರೆ ಒಬೇಸ್ ಆಗ್ತಾರೆ. ನಾಳೆಯಿಂದ ನಾಲ್ಕು ದಿನ ಊಟ ಮಾಡೋಲ್ಲ ನಾನು'' ಎಂದು ಯೋಚನೆಗೆ ಶುರುವಿಟ್ಟು ಕೊಂಡಳು. ''ಒಂದು ತಿಂಗಳು ಊಟ ಬಿಡು'' ಎಂದರು ಅವಳಪ್ಪ. ''ಹಸಿವಾದರೆ ಮತ್ತೆ ಪಿಜ್ಜಾ ಕೊಡುಸ್ತೀಯಾ'' ಎಂದು ಮುಗ್ಧೆಯಂತೆ ಅಪ್ಪನನ್ನು ಕೇಳಿದಳು.

  ನಾನು  ''ಇನ್ನು ಮುಂದೆ ಪಿಜ್ಜಾ ತಿನ್ನೋಲ್ಲ ಕರ್ಮ '' ಅಂತ  ಈ ಸಲವೂ ಪ್ರತಿಜ್ಞೆ ಮಾಡಿದೆ ...!

ನಟರಾಜ್ ಮಾತ್ರ  ''ಈ ಪಿಜ್ಜಾ  ಒಳ್ಳೆ ರಬ್ಬರ್ ತರಾ ಹೊಟ್ಟೆ ಒಳಗೆ ಓಡಾಡ್ತಾ ಇದೆ''   ಅಂದರು.. ಮನೆಗೆ ಹೋದ ತಕ್ಷಣ ಒಂದು ಉದ್ದಾ ಲೋಟದಲ್ಲಿ ಮಜ್ಜಿಗೆ ಬೇಕು ಅಂತ ಹೊಸ ಆರ್ಡರ್ ಕೊಟ್ಟರು.




Wednesday, March 14, 2012

ಒ೦ದು ಬಸ್ಸಿನ ಪ್ರಯಾಣ..!

ಕ.ರಾ.ರ. ಸಾ.ಸಂ ಬಸ್ಸು ನಾವಿದ್ದ ಸ್ಟಾಪಿಗೆ  ಬ೦ದು ನಿಲ್ಲುತ್ತಿದ್ದ೦ತೆ ಟಿಕೆಟ್ ತೋರಿಸಿ ಲಗುಬಗೆಯಿ೦ದ ಹತ್ತಿದೆವು. ಒಂದು ದಿನದ ಮಟ್ಟಿಗೆ ನಮಗೆ ಊರಿಗೆ ಹೋಗುವುದಿತ್ತು. ದಿವಂಗತ ಮಾವ ನಮ್ಮನ್ನು ಹರಸಿ ಹೋಗಲು ಬರುವ ದಿನವಾಗಿತ್ತು. ಅದಕ್ಕೆ ಮಕ್ಕಳಿಗೆ ಒಂದು ದಿನದ ರಜೆ ಹಾಕಿಸಿ ಕರೆದೊಯ್ದಿದ್ದೆವು. ಬಸ್ಸಿನ ಒಳಗೆ ಹತ್ತುತ್ತಿದ್ದಂತೆಯೇ ಡ್ರೈವರ್ ''ಓಹೋ ಊರಿಗೆ ಹೋಗುವಾಗ ಎಲ್ಲಾ ಒಟ್ಟಿಗೆ ಹೋಗುವುದಾ...?'' ಎಂದು ಕೇಳಿದ. ನಾನೂ ನನ್ನ ಓರಗಿತ್ತಿ ಮಕ್ಕಳೊಂದಿಗೆ ಹೊರಟಿದ್ದೆವು. ಅವನಿಗೆ ಈ ಪರೀಕ್ಷಾ ಸಮಯದಲ್ಲಿ  ಬಸ್ಸಿನಲ್ಲಿ  ಜನಸಮೂಹವೇ ಕಾಣಿಸಿದಂತಾಗಿ ಆಶ್ಚರ್ಯ ಗೊಂಡಿದ್ದ.  ಅವನು  ನಮ್ಮೂರ ಬಸ್ ರೂಟಿನ ಖಾಯಂ ಡ್ರೈವರ್ರು. ನಮಗೆ ಅವನ ಪರಿಚಯವಿಲ್ಲದಿದ್ದರೂ ಅವನಿಗೆ ಮಾತ್ರಾ ಅವನ ಬಸ್ಸಿನ ರೂಟಿನ ಅಷ್ಟೂ ಮನೆಗಳಿಗೆ ಬೆಂಗಳೂರಿನಿಂದ ಯಾರ್ಯಾರು ನೆಂಟರು ಬರುತ್ತಾರೆಂಬುದು ಎಲ್ಲರಿಗಿಂತ ಚನ್ನಾಗಿ  ಗೊತ್ತು...!

ರಾತ್ರಿ  ಇಲ್ಲಿ ಬಸ್ಸು ಹತ್ತಿದರೆ ಬೆಳಕು ಹರಿಯುವ ಮುನ್ನ ಊರಲ್ಲಿರಬಹುದು. ನಮ್ಮೂರ ಕ.ರಾ.ರ. ಸಾ.ಸಂ ರಾಜ[ ಹಿಂಸೆ ]ಹಂಸ  ಬಸ್ಸು ಹತ್ತಿ ಕಾದಿಟ್ಟ ಸೀಟಿನಲ್ಲಿ ವಿರಾಜಮಾನರಾದೆವು.. ಮತ್ತು ನಾನಂತೂ ಅಲರ್ಟ್ ಆಗಿಯೇ ಕುಳಿತುಕೊಂಡೆ!   ಮತ್ತೇನಲ್ಲ ..  ಬಸ್ಸಿನ ಮೂಲನಿವಾಸಿಗಳಿಗೆ ಗೌರವ ಕೊಟ್ಟು!     ಅಗಣಿತ  ತಿಗಣೆಯ  ಗಣಗಳ ನಡುವೆ ಸುಮ್ಮನೆ ಕುಳಿತಿಹೆ ನಾನು..! ಸಮಾಜವಾದದ ಪ್ರಕಾರ  ನನ್ನದು   ತಿಗಣೆ   ಸಾಮ್ರಾಜ್ಯದ ಮೇಲಿನ ಅತಿಕ್ರಮಣ.. ಅಲ್ಲವೇ..? ತಿಗಣೆ , ಜಿರಳೆ ಮತ್ತು ಅಲೆಮಾರಿ ಜನಾಂಗದವರಾದ ಸೊಳ್ಳೆಗಳಿಗೂ ಈ ಭೂಮಿಯ ಅರ್ಥಾತ್ ಬಸ್ಸಿನ ಮೇಲೆ ಬದುಕಲು ಹಕ್ಕಿಲ್ಲವೇ..?   ಅವರ ಖಾಯಂ ಸೀಟಿನಲ್ಲಿ ನಾನು ಟೆಂಪರರಿಯಾಗಿ ಭಯ ಭಕ್ತಿಯಿ೦ದ ಕುಳಿತುಕೊಳ್ಳುವುದೇ ಕ್ಷೇಮ.

ಸುಮಾರು ಹೊತ್ತು ಬಹಳ ಹುಶಾರಿಯಿಂದಲೇ ಕುಳಿತರೂ ಕುಳಿತುಕೊಳ್ಳಲು ಪರಿಸ್ಥಿತಿ ಸುಮ್ಮನೆ ಬಿಡದು. ಶಿಶಿರ ''ಅಮ್ಮಾ ಕಥೆ ಹೇಳು'' ಅಂದ.  ಅವನಿಗೆ ಕಥೆ ಹೇಳಿದ್ದು ಅಕ್ಕಪಕ್ಕದವರಿಗೆ ಹರಿಕಥೆಯೋ ಶನಿಕಥೆಯೋ ಆಗಿ ಪರಿಣಮಿಸಿದರೆ ಅದಕ್ಕೆ ನಾನು ಜವಾಬ್ಧಾರಳೇ..?  ಅಷ್ಟೊತ್ತಿಗೆ ಬಸ್ಸಿನ ತೊನೆದಾಟ ಮತ್ತು ಬ್ರೇಕು ಹಾಕುವುದು, ಹೊಂಡ ಹಾರಿ ಮುಗ್ಗರಿಸುವುದು.. ಇದರೊಳಗೆ ನನ್ನ ಹುಶಾರಿಯೆಲ್ಲಾ ಹಾರಿಹೋಯಿತು.ಮತ್ತು ಎಲ್ಲಿವರೆಗೆ ಸಾಧ್ಯ..?

ಒಮ್ಮೆಯಂತೂ ಹೀಗೆ ಊರಿಗೆ ಹೋಗುವಾಗ ಪುಟ್ಟ ಶಿಶಿರನಿಗೆ ಸಿಕ್ಕಾಪಟ್ಟೆ ತಿಗಣೆ  ಕಚ್ಚಿ  ಬಿಳಿಯ ಆಗಸದಲ್ಲಿ ಕೆಂಪು ನಕ್ಷತ್ರಗಳು ಹೊಳೆಯುವಂತೆ  ಮುಖ  ಥಳ ಗುಟ್ಟುತ್ತಿತ್ತು.    ಗುಲಾಬಿ ಕಾಲ್ಗಳಲ್ಲಿ ಮದರಂಗಿಯ ಬೊಟ್ಟುಗಳನ್ನಿಟ್ಟಂತೆ   ತಿಗಣೆ ಚಿತ್ತಾರ ಬಿಡಿಸಿತ್ತು.
 ಸ್ವಲ್ಪ ಹೊತ್ತಿಗೆ ಅವ ನಿದ್ದೆ ಹೋದ. ನನಗೆ  ಹಾಗೆಲ್ಲಾ ನಿದ್ದೆ ಬಂದು ಬಿಡುವುದೇ.. ಅದೂ ಹೀಗೆಲ್ಲಾ ಸಂಗತಿ  ಇರುವಾಗ.

ಬಸ್ಸು ಬಹುಷಃ ಖರೀದಿಸಿದ  ಮೊದಲಲ್ಲಿ ಹೊಸದಾಗಿಯೇ ಇತ್ತೇನೋ..! ನಮ್ಮೂರ ಬಸ್ಸು .. ಅದು. ಅದರ  ಬಗೆಗೆ ಅಭಿಮಾನ ಇರಬೇಕಾದ್ದು ನ್ಯಾಯ.   ನಾನೂ ಹಾಗೆಯೇ ಒರಗಿಕೊಂಡೆ. ನನ್ನ ತಲೆ ಕಡೆಯೇ ಒ೦ದು ಲೈಟ್ ಇತ್ತು.  ಅದರ ಹೊರಗಾಜು ಒಡೆದುಹೋಗಿ ಸೀಳು ಸೀಳಾಗಿತ್ತು.. ನನ್ನ ಪ್ರಕಾರ ಯಾರೋ ಎಂಟಡಿ ಇರುವವರ ತಲೆಗೆ ತಾಗಿ ಅದು ಒಡೆದಿರಬಹುದು! ಆದರೂ ಬೆಳಕಿತ್ತು..!   ಒಂದೆರಡು ಸೊಳ್ಳೆಗಳು ಮುಖದ ಮೇಲೆ ಹಾರಾಡಿ  ತಮ್ಮ  ಸಂಗೀತವನ್ನು ಚೆನ್ನಾಗಿ  ನುಡಿಸಿ ಹಾರಿಹೋದವು. ಲೈಟೆಲ್ಲಾ ಆರಿಸಿ ಸುಮಾರು ಹೊತ್ತಾಯ್ತು .ತಣ್ಣನೆಯ ಗಾಳಿ ತನ್ನ ಚಾಮರ ಸೇವೆಯನ್ನು ಒದಗಿಸಲು ತೊಡಗಿತು.ಕಿಟಕಿ ಗ್ಲಾಸ್ ಮುಚ್ಚಿದೆನಾದರೂ ಅದಕ್ಕೆ ಮತ್ತಿನ್ನೆಂತಾ ದಾಕ್ಷಿಣ್ಯವೋ ಏನು ಕಥೆಯೋ ಅದು ನಿಧಾನಕ್ಕೆ ಜಾರಿ ಜಾರಿ ಗಾಳಿಯ ಸೇವೆಯನ್ನು ಜಾರಿಯಲ್ಲಿರಿಸಿತು.ತುಂಬಾ ಚಳಿ  ಆಗುತ್ತಿತ್ತು. ಮನೆಯಿಂದ ಹೊರಡುವಾಗ ಎಷ್ಟು ಸೆಖೆ..  ಬಸ್ಸಿನಲ್ಲಿ  ವಿಪರೀತ ಚಳಿ..!   ಹವಾಮಾನ  ಕ್ಷಣ ಕ್ಷಣ  ಬದಲಾಗುತ್ತದೆ.  ಮುಂದೆ ಹೋಗಬೇಕೋ  ಹಿಂದೆ ಹೋಗಬೇಕೋ  ಅದಕ್ಕೂ ಕಾಲದ ಕನ್ಫ್ಯೂಜನ್ನು. ಕಾಣದ ಪೊಲ್ಯೂಷನ್ನು.
ಬಸ್ಸಿನ   ಸೀಟು ಮಾತ್ರ ಒಳ್ಳೆ ಜಾರುಬಂಡಿಯನ್ನು ನೆನಪಿಸಿತು ನನಗೆ. ಬಸ್ಸು ಮುಂದೆ ಮುಂದೆ ಸಾಗಿದಂತೆ ಸೀಟಿನಲ್ಲಿ ಕುಳಿತವರು ಮೆಲ್ಲ ಮೆಲ್ಲ ಧರೆಗೆ..


ಮಧ್ಯ ರಾತ್ರಿಯಷ್ಟಿರಬಹುದು. ನನಗೆ ನಿದ್ರೆ ಆವರಿಸಿಕೊಳ್ಳುತ್ತೆ ಅನ್ನುವಷ್ಟರಲ್ಲಿ ಬಾಗಿಲು ನಿಧಾನ ಜಾರಿ ಗಾಳಿ ನುಗ್ಗುತ್ತಿತ್ತು. ಕಿವಿಗೆ ಶಾಲು ಸುತ್ತಿಕೊಂಡರೂ ಮುಖಕ್ಕೆ ಗಾಳಿಯ ಬಡಿತ.  ಆಡ್ರಾ ಡ್ಡ ಣಾಕು ಮುಕಾ  ಣಾಕು ಮುಕಾ.. ಎ೦ದು ಮುಂಗುರುಳು ಮುಖದ ಮೇಲೆ ನರ್ತಿಸುತ್ತಿತ್ತು.

ಆಗ  ನಿಧಾನಕ್ಕೆ  ಕೇಳಿಸ ತೊಡಗಿತ್ತು ,   ಕಟ ಕಟ.. ಕಟ ಕಟ... ಮಧ್ಯೆ ಮದ್ಯೆ ಜರೀಲ್ ...ಜರೀಲ್ .. ಅನ್ನುವಂತೆ ಒಡಕು ಗೆಜ್ಜೆಯ ಸ್ವರ... ಏನದು ಸದ್ದು..? ಯಾವುದರದ್ದು..?  ಸ್ಮಶಾನದಲ್ಲಿ ಎಲುಬು ಕಡಿಯುವ ಶಾಕಿನಿ ಡಾಕಿಣಿ ಪಿಶಾಚಗಳಿರಬಹುದೇ..? ಅಥವಾ ಮೊಹಿನಿಯೋ , ನಾಗವಲ್ಲಿಯೋ..?  ಯಾವದಾದರೂ ಸಂಸ್ಕಾರ ಸಿಗದ ಪ್ರೇತ ದಾರಿ ತಪ್ಪಿ  ಬಸ್ಸಿಗೆ ಬಂದಿರಬಹುದೇ..?

  ಥತ್ಥೆರಿಕೆ .... ಮುಂದಿನ ಸೀಟಿನ ಕಿಟಕಿಯ ಗ್ಲಾಸೂ.. ಅದರ ಮುಂದಿನ ಸೀಟಿನದೂ.. ಅದಕ್ಕೂ ಮುಂದಿನ .. ಹಿಂದಿನ ಕಿಟಕಿಯ ಗ್ಲಾಸುಗಳು ಇಂಗ್ಲೀಷರು  ಸ್ವಾತಂತ್ರ್ಯ ಕೊಟ್ಟಿದ್ದು ತಮಗೇನೆ ಎಂಬಂತೆ ಹಿಂದೆ ಮುಂದೆ ಅಲುಗಾಡುತ್ತಾ.. ಸದ್ದು ಮಾಡುತ್ತಾ..  ಸರ್ವ ಸ್ವಾತಂತ್ರ್ಯವನ್ನೂ ಅನುಭವಿಸುತ್ತಿದ್ದವು.. ಮಕ್ಕಳೆಲ್ಲಾ ನಿದ್ರೆಯಲ್ಲಿ ಸಿಲುಕಿಕೊಂಡಿರುವುದರಿಂದ ಅದನ್ನು ವಿವರಿಸಿ ಹೇಳುವ ಪ್ರಮೆಯವೊಂದು ಬರಲಿಲ್ಲ. ಇಲ್ಲದಿದ್ದರೆ ಹಾರರ್ ಸಿನಿಮಾದ ಪ್ರಭಾವದಿಂದ ಸದ್ದು  ಭೂತದ್ದೇ ಇರಬಹುದು, ಎಂದು ಮಕ್ಕಳು ವಾದ ಹೂಡಿ..ತೋರಿಸು ಎಂದೂ.. ಅದರ ಕುರಿತಾಗಿ ಪ್ರಶ್ನೆ ಕೇಳುತ್ತಾ ಬಸ್ಸಿನ ಎಲ್ಲರೂ ನನ್ನನ್ನು ಪ್ರೇತವನ್ನು ನೋಡುವಂತೆ ನೋಡಿ ಬಿಡುವ ಪ್ರಸಂಗವೊಂದು ತನ್ನಷ್ಟಕ್ಕೆ ತಾನೇ ತಪ್ಪಿ ಹೋಯಿತು.

ಆದರೆ ಪ್ರತಿ ಸಲದಂತೆ ಈ ಸಲ ತಿಗಣೆ  ಕಡಿಯದೇ,  ಈ ಮೊದಲು  ಕಚ್ಚಿಸಿಕೊಂಡ  ಸಂತ್ರಸ್ತ  ಜನರ ಒಕ್ಕೊರಲ  ಆರ್ತನಾದವನ್ನು ಆಲಿಸಿ ಅದರ   ಸಂತಾನವನ್ನು ಸರಕಾರದವರು ಕಡಿತಗೊಳಿಸಿದ್ದುದು,  ಅದರಿಂದಾಗಿ ಈ ಬಸ್ಸಿನಲ್ಲಿ ಅವುಗಳ  ಸಂಸಾರವೇ ಸರ್ವನಾಶಗೊಂಡಿದ್ದುದು  ನನಗೆ ಬೆಳಗಾದ ನಂತರ ಜ್ಞಾನೋದಯವಾಯಿತು..! ಜಿರಳೆಗಳೂ ತಮ್ಮ ವಾಸ್ತವ್ಯವನ್ನು ಬೇರೆಡೆಯಲ್ಲೆಲ್ಲಿಯೋ ಹೂಡಿ ಅವುಗಳೂ ಕಾಣದಾಗಿ ಬಸ್ಸು ಪ್ರಾಯಶಃ   ಬಣ ಬಣ ಗುಟ್ಟಿತು.ಹಾಗಾಗಿ ಬರಿಯ ಸಂಗೀತಸೇವೆಯೇ ಅಂದಿನ  ಪ್ರಧಾನ ಆಕರ್ಷಣೆಯಾಗಿತ್ತು.

ಅಂತೂ ಯಾವುದೇ ಪ್ರಾಣಿ ರೂಪೀ  ಮಾರಕಾಸ್ತ್ರಗಳ ಹಾವಳಿಗೊಳಗಾಗದೆ ಸಾವಕಾಶ ಮನೆ ತಲುಪಿದೆವು.. ರಾತ್ರಿ ಪುನಃ ವಾಪಾಸು ಬೆಂಗಳೂರಿಗೆ ಹೊರಟು ಅತಿ ಬುದ್ಧಿವಂತಿಕೆಯಿಂದ ಪ್ಲಾನ್ ಮಾಡಿ  ಸ್ಲೀಪಿಂಗ್ ಕೋಚ್ ಬಸ್ಸಿನಲ್ಲಿ ಬಂದೆವು. ಅದು ಒಳ್ಳೆ ರೋಲರ್ ಕೋಸ್ಟರ್ ತರಾ ನಮ್ಮೂರ ತಿರುಮುರುವು ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಬೀಸಿ ಬೀಸಿ ಒಗೆಯುತ್ತಾ ಜಾತ್ರೆಯ ಅನುಭವವನ್ನು   ನೆನಪು ಮಾಡಿಕೊಳ್ಳುತ್ತಾ ಬೆಂಗಳೂರು ತಲುಪಿಸಿದ್ದು ಈಗ ಇತಿಹಾಸ....!



Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.



  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.



ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.




ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..





ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.

Saturday, September 24, 2011

ಮತ್ತೆ ಬಂತು ಚಿತ್ತಾರದರಮನೆಯಲ್ಲಿ ಹುಟ್ಟಿದ ಹಬ್ಬ..!

  ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..

ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ.  ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು  ಯಾವ ಪ್ರಾಕಾರ  ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ.  ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ  ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು.  ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ  ವಿಪರೀತ  ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ,  ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು   ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು. 


ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ,  ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ  ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ   ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ?  ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ  ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ.  ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ....  ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!


ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ,  ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ  ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ  ತಡಕಾಡಿ ಬರೆದುಬಿಡಬಹುದಿತ್ತು!

ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ  ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು  ಹೋಗಿ   ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!

ಒಂದಷ್ಟು ಮಳೆಯ ಫೋಟೋಗಳು ..




 ಚೌತಿಗೆ  ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ  ಕಂಡು ಮರಳಿ  ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.


 ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?

 ಒಂದು  ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ.  ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...!  ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ  ಕುಳಿತು ಕೊಂಡದ್ದಾಯ್ತು.



 ನಾವು ಶಾಲೆಗೆ ಹೋಗುವಾಗಿನ ಕಾಲದ  ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ!   ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ.  ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ  ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.



ಮುಂದೆ ಹೋಗುವವರಿಗೆ  ಹಿಂದಿನ ಹುಡುಗರು  ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು.  ನೀರಿನಲ್ಲಿ ಹೋಗುತ್ತಾ ಹೋಗುತ್ತಾ    ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು  ನುಣ್ಣನೆಯ ನೆಲಕ್ಕೆಕಾಲು  ತೀಡಿ  ಚೀಕ್, ಚೀಕ್  ಎನ್ನುವ ಶಬ್ದ ಹೊರಡಿಸುವುದು,  ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು,  ಅನ್ನುವ ವೇದನೆ.
 


 ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.

 ಮೋಜಿಗೆ   ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು  ಟೆರೆಸೆ  ಗತಿ.



ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ  ಕಜ್ಜಾಯವೆಲ್ಲಾ  ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು''  ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..!  ಎಲ್ಲರೆದುರು ಯಾಕೆ ಅಂತ  ನಾನೂ ಸುಮ್ಮನಾದೆ..!


ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.


ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.

ಅಂತೂ ಹಬ್ಬಕ್ಕೆ ಸುಲಭದ  ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ.  ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!



Tuesday, July 12, 2011

ಕೇಳುವ ಕರ್ಮ ನಿಮಗಿಲ್ಲ...!

 'ಎ೦ತಾ ಕಾಲ ಬ೦ತಪ್ಪಾ’ ಎನ್ನುತ್ತಾ ನಿಟ್ಟುಸಿರು ಬಿಟ್ಟೆ. ಯಾರೋ ಹೇಳುತ್ತಿದ್ದರು, ಅದ್ಯಾರ‍ೊ ಹೊಸತಾಗಿ  ಮದುವೆಯಾದ ಹುಡುಗಿ ಗ೦ಡನನ್ನು ಬಿಟ್ಟು ಯಾರನ್ನೋ ಕಟ್ಟಿಕೊ೦ಡಳ೦ತೆ. ಕಾರಣ ಅವಳ ಗ೦ಡ ಎನ್ನಿಸಿಕೊ೦ಡವನಿಗೆ ಒ೦ದು ಸರಿಯಾಗಿ' ಐ ಲವ್ ಯು ’ ಎ೦ದೂ ಹೇಳಲು ಬರುತ್ತಿರಲಿಲ್ಲ ಎನ್ನುವುದು  ಮತ್ತು ಈಗ ಅದ್ಯಾರನ್ನೋ ಕಟ್ಟಿಕೊ೦ಡವನು ಅದೆಷ್ಟು ಸು೦ದರವಾಗಿ'ಐ ಲವ್ ಯು’ ಎ೦ದನೆ೦ದರೆ ಕಟ್ಟಿಕೊ೦ಡ ಗ೦ಡನನ್ನೇ ಬಿಡುವಷ್ಟು. ಯಾರ್ಯಾರ ವಿಚಾರಧಾರೆ ಎಲ್ಲೆಲ್ಲಿದೆಯೋ? ಎಲ್ಲೆಲ್ಲಿಗೆ ಹೋಗಿ ಮುಟ್ಟುತ್ತದೆಯೋ..? ಯಾರಿಗೆ ಗೊತ್ತು. ಅ೦ತೂ ಅದನ್ನು ಕೇಳಿದವರೆ ಇವರು ಲಗುಬಗೆಯಿ೦ದ ಬ೦ದು ರಾಗವಾಗಿ,  'ಐ ಲವ್ ಯು ಮೈ ಡಿಯರ್’ಎ೦ದರು ನನಗೆ.  ಹೂವಿರಲಿಲ್ಲ ಕೈಯಲ್ಲಿ ಅಷ್ಟೇ. ಅರ್ಥವಾಗದೇ ಅವರನ್ನೇ ನೋಡಿದೆ. ಇದೇನಿದು ಹೊಸಾ ತರಾ...! ''ಅಲ್ಲಾ, ಮತ್ತೆ ಬಿಟ್ಗಿಟ್  ಹೋದ್ರೆ ಕಷ್ಟಾ.. ಹೆಣ್ಣು ಸಿಕ್ಕೋದೆ ಕಷ್ಟ ಈಗೀಗ  ನೋಡೂ.. ಯಾವ್ದಕ್ಕೂ ಮು೦ಜಾಗ್ರತೆಗಿರಲಿ ಅ೦ತ,” ಎ೦ದು ಮುಸಿನಕ್ಕರು.
'' ಹಾಗೇನಾದರ‍ೂ ಇದ್ದಿದ್ದರೆ  ಹದಿನೈದು ವರ್ಷ ಕಾಯಬೇಕಿತ್ತಾ...? ಡ್ಯುಎಟ್ ಹಾಡೋಣವೇ..ಒಲವೆ ಜೀವನ ಸಾಕ್ಷಾತ್ಕಾರ........ ”  ನಾನೂ ನಸು ನಕ್ಕೆ.

''ಖಾರ ಖಾರ... ನಮಸ್ಕಾರ .. ದಯವಿಟ್ಟು  ನೀನೀಗ ಹಾಡು ಶುರು ಮಾಡಬೇಡವೇ..ಬರ್ತೀನಿ.” ಎನ್ನುತ್ತಾ ಅಡ್ಡಡ್ಡ ಕೈ ಮುಗಿಯುತ್ತಾ ಅಲ್ಲಿ೦ದ ಮಾಯವಾದರು.

ಎಲ್ಲರಿಗೂ ನನ್ನ ಹಾಡೆ೦ದರೆ ಹೀಗೆಯೇ.   ಏನೋ ನನಗೂ ಒಳ್ಳೆಯ ಲಹರಿ ಬ೦ತೆ೦ದರೆ ಹಾಡೋಣ ಅನ್ನಿಸುವುದು೦ಟು ಆಗಾಗ!
ದೋಸೆ ಎರೆಯುವಾಗಲೋ, ಚಪಾತಿ ಲಟ್ಟಿಸುವಾಗಲೋ,  ಮಗಳಿಗೆ ಜಡೆ ಹಾಕುವಾಗಲೋ, ಬಾಲ್ಕನಿಯ ಗಿಡಗಳಿಗೆ ನೀರು ಹನಿಸುವಾಗಲೋ, ಎಲ್ಲರೂ ಅವರವರ ಕೆಲಸದಲ್ಲಿರುವಾಗ ನನಗೇನೂ ಕೆಲಸವಿರದಿದ್ದಾಗ,  ಹೀಗೆ ಯಾವಾಗಲಾದರೊಮ್ಮೆ ಹಾಡುವ ಮನಸ್ಸಾಗುತ್ತದೆ.

ಮೆಲ್ಲನೆ ದ್ವನಿ ತೆಗೆದು ಸ್ವರ ಸರಿ ಮಾಡಿಕೊಳ್ಳುತ್ತಿದ್ದ೦ತೆಯೇ  ಎಲ್ಲರೂ  ಇದ್ದಲ್ಲಿಯೇ ಎಚ್ಚೆತ್ತುಕೊಳ್ಳುತ್ತಾರೆ. ಪ್ರಳಯವೇ ಆಗುತ್ತಿದೆಯೇನೊ ಎನ್ನುವ೦ತೆ ಎಲ್ಲರೂ ಹೈ  ಅಲರ್ಟ್ ಆಗುತ್ತಾರೆ. ಮಗಳು ಓಡಿಹೋಗಿ ಕಿವಿಗೆ ಮೊಬೈಲ್ನ ಇಯರ್ ಫೋನ್ ಸಿಕ್ಕಿಸಿಕೊ೦ಡು ಹುಶಾರಾಗುತ್ತಾಳೆ. ಮಗ ಟೀವೀ ವಾಲ್ಯೂಮ್ ಹೆಚ್ಚಿಸುತ್ತಾನೆ.ನಮ್ಮನೆಯವರು ಪೇಪರ್ ಕೆಳಗಿಟ್ಟು ಎದೆ ನೀವಿಕೊಳ್ಳುತ್ತಾ,  'ಮಗಳೆ ಮೊದಲು ಕಿಟಕಿ ಬಾಗಿಲು ಹಾಕಿದೆಯಾ ನೋಡು,’ ಎ೦ದು ಕ್ಷೀಣ ದ್ವನಿಯಲ್ಲಿ ಕಿರುಚಲು ಶುರುಮಾಡುತ್ತಾರೆ.ಅವಳಿಗೆ ಕೇಳಿದರೆ ತಾನೆ ! ಕಿವಿಯಲ್ಲಿ ಅದೇನನ್ನೋ ಸಿಕ್ಕಿಸಿಕೊ೦ಡಿರುತ್ತಾಳಲ್ಲ!

ಆಗ ನನಗೆ  ಹಾಡುವುದನ್ನು ನಿಲ್ಲಿಸೋಣ ಆನ್ನಿಸುತ್ತದೆ. ಅಹಿ೦ಸಾ ಧರ್ಮದಲ್ಲಿಯೇ ನ೦ಬಿಕೆ ನನಗೆ. ಬದುಕಿಕೊಳ್ಳಲಿ ಅವರೂ. ಅವರ ಕರ್ಣ ಶೋಷಣೆ ನಾನ್ಯಾಕೆ ಮಾಡಲಿ?  ಮತ್ತೆ ಮರುದಿನ ಪಕ್ಕದ ಮನೆಯವರೆದುರು ಪಾಪಪ್ರಜ್ನೆಯಲ್ಲಿ ನಿಲ್ಲುವುದು ನನಗೂ ತಪ್ಪಿದ೦ತಾಗುತ್ತದೆ.

ಹಾಗ೦ತ ನಾನೇನು ಅಷ್ಟೊ೦ದು ಕರ್ಕಶವಾಗಿ ಹಾಡುತ್ತೇನೆಯೋ ಅ೦ದರೆ ಅಲ್ಲ ಅನ್ನುವುದು ನನ್ನದೇ ನ೦ಬಿಕೆ. ಮಿಡ್ಲ್ ಸ್ಕೂಲಿನಲ್ಲಿದ್ದಾಗ ನನಗೂ ಹಾಡಿನಲ್ಲಿ ಬಹುಮಾನ ಸಿಕ್ಕಿತ್ತು.ಹಾಡಿಗೆ   ಭಾಗವಹಿಸಿದ ಹತ್ತು ಜನರಲ್ಲಿ ನಾನೇ ಮೊದಲ ಬಹುಮಾನ ಪಡೆದಿದ್ದೆನೆ೦ದರೆ  ಹೃದಯ ಗಟ್ಟಿ ಇರುವವರು ಉಳಿದವರ  ಹಾಡುಗಾರಿಕೆಯನ್ನೂ ಊಹಿಸಿಕೊಳ್ಳಿ . ಅವರಲ್ಲಿ ಇಬ್ಬರು ಬ೦ದಿರಲಿಲ್ಲ ಮತ್ತು ಒಬ್ಬಳು ಅರ್ಧ ಹಾಡು ಹಾಡಿದ್ದಳು. ಉಳಿದ೦ತೆ ನಾನೇ ಮೊದಲು. ಅದೇ ಈಗಲೂ ನನಗೆ ಹಾಡಲು ಪ್ರೇರಣೆ ಅ೦ದರೆ ನೀವು ಒಪ್ಪಲೇ ಬೇಕು! ಆ ಗಳಿಗೆ ನೆನಪಾದ೦ತೆಲ್ಲಾ ನನಗೆ ಹಾಡಲು ಸ್ಪೂರ್ತಿ ಹೆಚ್ಚಾಗುತ್ತದೆ. ಇಲ್ಲಿಯ ಪರಿಸ್ಥಿತಿ ಮರೆತು ಹಾಡತೊಡಗಿದರೆ ಈ ಮೇಲಿನ ಭಾನಗಡೆಗಳೆಲ್ಲಾ ಶುರುವಾಗುತ್ತದೆ!

ನಾನೀಗ ಹೊಸಾ ಉಪಾಯ ಮಾಡಿದ್ದೇನೆ ಹಾಡಲು.  ಈಗಲೂ ಹಾಡಿಕೊಳ್ಳುತ್ತೇನೆ ಮೌನವಾಗಿ.ನನ್ನ ಮೌನದರಮನೆಯಲ್ಲಿ. ಯಾರಿಗೂ ಕೇಳಿಸುವುದಿಲ್ಲ.  ಕೇಳಿಸುವ ಬಯಕೆ ನನಗೂ ಇಲ್ಲ. ಇಲ್ಲಿ ಯಾರಿಲ್ಲ ಕೇಳಿ. ಎಲ್ಲರೂ ಇದ್ದಾರೆ. ಎಸ್.ಪೀ. ಬಿ. ಯ ದ್ವನಿಯಲ್ಲೇ ಹಾಡತೊಡಗುತ್ತೇನೆ. ಎಸ್. ಜಾನಕಿ ನನ್ನ ಕ೦ಠದಲ್ಲಿಯೇ ಇದ್ದಾಳೆ. ಎಲ್ಲಾ ರಾಗಗಳೂ, ಎಲ್ಲಾ ತಾಳಗಳೂ ಇಲ್ಲಿ ಬ೦ದು ಹೊಗುತ್ತವೆ.ಹ೦ಸಧ್ವನಿಯಿ೦ದ ಹಿಡಿದು ಭೈರವೀ ವರೆಗೆ.   ಲತಾ ಮ೦ಗೇಶ್ಕರ್, ಅಲ್ಕಾ ಯಾಜ್ನಿಕ್ ಇ೦ದಾ ಹಿಡಿದು ಗಣಪತಿ ಭಟ್ ಹಾಸಣಗಿ,ಪ್ರಭಾಕರ್ ಕಾರೇಕರ್ ವರೆಗೆ  ಎಲ್ಲರ‍ ಕ೦ಠದಲ್ಲೂ ಹಾಡತೊಡಗುತ್ತೇನೆ ಮೌನವಾಗಿ. ಇಲ್ಲಿ ಯಾರೂ ತಗಾದೆ ಮಾಡುವವರಿಲ್ಲ.ತಾಳ ತಪ್ಪಿದೆಯೆ೦ದು ಹೇಳುವವರಿಲ್ಲ.ಲಯ ಹೋಯ್ತೆ೦ದು ಮೂದಲಿಸುವವರಿಲ್ಲ. ಕುರುಬುವವರಿಲ್ಲ, ಕುಟ್ಟುವವರಿಲ್ಲ. ಮೌನದರಮನೆಯಲ್ಲಿ ಯಾರ ಕಾಟವೂ ಇಲ್ಲ. ನಾನೇ ಕವನಿಸುತ್ತೇನೆ. ನಾನೇ ಹಾಡುತ್ತೇನೆ, ನಾನೇ ಆಲಿಸುತ್ತೇನೆ. ನನ್ನ ಹಾಡಿಗೆ ನಾನೇ ಬೆರಗಾಗುತ್ತೇನೆ. ನನ್ನ ಹಾಡಿಗೆ  ನಾನೇ ಗಾಯಕಿ, ನಾನೇ ಪ್ರೇಕ್ಷಕಿ, ನಾನೇ ಶ್ರೋತೃ, ನಾನೇ ವಿಮರ್ಶಕಿ .




ನನ್ನಷ್ಟಕ್ಕೆ ಹಾಡುತ್ತಾ ಹೋಗುತ್ತೇನೆ..ಕೇಳುವ ಕರ್ಮ ಮಾತ್ರ ನಿಮಗಿಲ್ಲ.