Showing posts with label ಸುತ್ತಾ ಮುತ್ತಾ. Show all posts
Showing posts with label ಸುತ್ತಾ ಮುತ್ತಾ. Show all posts

Friday, November 2, 2012

ಬಾಳೆದಿಂಡಿನ ದೀಪಸ್ಟ್ಯಾಂಡ್..

 ದೀಪಾವಳಿ ಬೆಳಕಿನ ಹಬ್ಬ. ಕತ್ತಲ ಕೊಳೆಯ ತೊಳೆಯುವ ಹಬ್ಬ. ತಾಮಸವ ಕಳೆದು ಜಗಕೆಲ್ಲ ಸತ್ವವ ಕೊಡುವ ಹಬ್ಬ. ಅಮಾವಾಸ್ಯೆ ಕಳೆದು ಪಾಡ್ಯ ಬರುತ್ತಿದ್ದಂತೆ ಮನೆ ಮನೆಯಲ್ಲೂ, ಪ್ರತಿ ಹೊಸಲಿನಲ್ಲೂ ಸಾಲು ಸಾಲಾಗಿ ಬೆಳಕಿನ ಚಿತ್ತಾರಗಳು. ತುಳಸಿ ಕಟ್ಟೆಯ ಸುತ್ತ, ಅಂಗಳದ ತುಂಬೆಲ್ಲಾ ಬಲೀಂದ್ರನನ್ನು ಸ್ವಾಗತಿಸಲು ತೆಂಗಿನ ಕಡ್ಡಿಗೆ ಬಿಳಿ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿ ಹಚ್ಚಿ ಅಲ್ಲಲ್ಲಿ ಸಾಲಾಗಿ ಸಿಕ್ಕಿಸಿದ ಸೂಡಿಗಳು.



 

ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!

ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.



 ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ,   ಚಿಕ್ಕ ಚಾಕು.


  
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.



 * ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.

* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು



* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.

ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !

ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
  ಇದು ದೀಪಾವಳಿ ಸ್ಪೆಶಲ್ ದೀಪ.
 ಈ ಲೇಖನ  ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ  ಪ್ರಾಪರ್ಟಿಯಲ್ಲಿ  ಪ್ರಕಟವಾಗಿದೆ.

Friday, October 12, 2012

ಕಸ ಮತ್ತು ರಸ..!

''ಕಸ ಕಸ ಕಸವೆಂದೂ ಎಸೆದಾಡದಿರಿ  ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ   ಕ್ಷಮೆ ಯಾಚಿಸುತ್ತಾ]   ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ  ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ  ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ  ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ  ಎಲ್ಲ ಹೆಂಗಸರೂ  ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ  ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ  ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ.   ಈ ಕ್ಲಿಷ್ಟಕರ  ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ  ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ  ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ   ಹಸಿ ಒಣ ಅಂತೇನೂ  ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ.  ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ.  ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ  ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ  ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು  ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ  ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ  ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ.  ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು  ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ!  ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು! 

ಹ್ಞೂ , ಕಸದ್ದೇ   ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ!  ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ  ಕರೆಯಿರಿ  ಪರವಾಗಿಲ್ಲ..:)

ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ  ಮುಂಬದಿ ಮತ್ತು ಹಿಂಬದಿ,  ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ  ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು.  ನಾನು  ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ.  ನನ್ನ ಗೆಳತಿಯರ ಮಧ್ಯೆ  ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!

ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು.  ಯಾರಾದರೂ ಬರ್ಕೊಡು  ಅಂದಾಗ ಮಾತ್ರ  ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ.  ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ  ಸರ್ಪ್ರೈಸ್ ಮಾಡಿದರು!  ಅಲ್ಲಿಂದ ಮುಂದೆ  ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು.  ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ.  ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ,  ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ  ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ   ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ   ಅಭಿವೃದ್ಧಿಯಾಗುತ್ತಿದೆ. ನನಗೆ  ಯಾರಾದರೂ, ಬರೀ... ಅಂತ ನನ್ನ  ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ  ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ  ಮುಲಾಜು ಬೇಕು..!

 ಕೆಲವು  ಚಿತ್ರಗಳು.






















ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ.   ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ.  ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್  ಬುಕ್  ಬಳಸುವುದನ್ನು  ಗೊತ್ತು   ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ  ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು  ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ  ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.












Saturday, March 3, 2012

ಮಂಟಪ ಕಟ್ಟಿರಿ..!


 ಮದುವೆ, ಉಪನಯನ, ಚೌಲ, ನೂತನ  ಗೃಹಪ್ರವೇಶ  ಹೀಗೆ   ಕಾರ್ಯದ ಮನೆಗಳು ಸಾಲು ಸಾಲಾಗಿ ಬರುತ್ತಿವೆ.. ಒಂದರ ಹಿಂದೊಂದು, ಜೊತೆ ಜೊತೆಗೆ  ಒಮ್ಮೆಲೇ ರಶ್ಯಿನಲ್ಲಿ ಶುರುವಾಗುತ್ತವೆ. ಕೆಲಸಕಾರ್ಯಗಳು ವೇಗ ಗತಿಯಲ್ಲಿ ಸಾಗುತ್ತವೆ.  ಮದುವೆ, ಉಪನಯನಕ್ಕೆ ಮಂಟಪ ಕಟ್ಟುವ ಚತುರರಿಗೆ ತಮ್ಮ  ಕಾರ್ಯ ಕೌಶಲ್ಯವನ್ನು ತೋರಲು ಒಳ್ಳೆಯ ಅವಕಾಶ ಸಿಗುತ್ತದೆ.  ಹೆಚ್ಚಿನ ಖರ್ಚಿಲ್ಲದೆ ಸುಲಭವಾಗಿ ಕಟ್ಟಬಹುದಾದ ಮಂಟಪಕ್ಕೆ ಒಂದು ಚಂದದ ಉದಾಹರಣೆ ಇಲ್ಲಿದೆ..

 ಬೆಲ್ಲದ ಡಬ್ಬಕ್ಕೆ ಬಣ್ಣ ಬಳಿದು ಮೇಲಿಂದ ಶೇಡಿ ಬರೆದದ್ದು..










ಪಾಂಡವರಡಿಕೆ  ಗಿಡವನ್ನು   ಕಿತ್ತು   ತಂದು  ಡಬ್ಬದಲ್ಲಿ ಮರಳು ಹಾಕಿ ಅದರಲ್ಲಿ ಹುಗಿಯಲಾಗಿದೆ.ಮನೆಯ ಹಿತ್ತಲಲ್ಲಿರುವ ಕೆಲ ಚಂದದ ಗಿಡದ ಹೆಣಿಕೆಗಳನ್ನು ಕಿತ್ತು ತಂದು  ಡಬ್ಬದಲ್ಲಿ ಊರಲಾಗಿದೆ.


 ಖರ್ಚಿಲ್ಲದ ಚಂದದ ಮಂಟಪ 
 ಶೇಡೀ  ಬರೆಯಲು  ಮಾತ್ರಾ  ಎರಡು  ದಿನ  ನನಗೆ  ಖರ್ಚಾಯಿತು...:))   ಅಣ್ಣನ  ಮಗನ ಉಪನಯನಕ್ಕೆ..

Thursday, January 5, 2012

ಗೋಲ್ಕೊ೦ಡ ಕೋಟೆಯ ಕೆಲ ನೆನಪುಗಳು.

 ಹೈದರಾಬಾದಿನಲ್ಲಿ ನೋಡಿದ ಸ್ಥಳಗಳಲ್ಲಿ ನನ್ನನ್ನು ಸೆಳೆದದ್ದು ಈ ಕೋಟೆ.
  ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.


 ಇಲ್ಲಿಂದ ಕೋಟೆ  ಹತ್ತಲು ಶುರು...









 ಬಾಲ ಹಿಸಾರ್ ದ್ವಾರ ..



 ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ.  ಇದರ ಕೆಳಗೆ  ಚಪ್ಪಾಳೆ ತಟ್ಟಿದರೆ ಅದು ಕೋಟೆಯ  ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ.   ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ  ಎಂಬ ಸೂಚನೆಯನ್ನು ರಾಜನಿಗೆ  ರವಾನಿಸುತ್ತಿದ್ದರಂತೆ.



 ದರ್ಬಾರ್ ಹಾಲ್  ನ ನೋಟ ದೂರದಿಂದ..!



 ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ  ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!



 ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..



ನಟರಾಜ್...



ತಾರಾಮತಿ ಪ್ಯಾಲೇಸ್.  ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.!  ಕೋಣೆಯ    ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...




 ಕೋಟೆಯ  ತುದಿಯಲ್ಲಿರುವ  ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ.  ಇದಕ್ಕೆ ನೇರವಾಗಿ  ಎಂಟು   ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ  ಸ್ಥಳ ನನಗೆ ರಾಜರ ಪೀಕದಾನಿಯನ್ನು    ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)




ಕೋಟೆ ಹತ್ತಲು ಮೆಟ್ಟಿಲುಗಳು..



ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ  ಶತ್ರುಗಳ ಚಲನವಲನವನ್ನು ಇದರ ಮರೆಯಿಂದ  ಗಮನಿಸುತ್ತಿದ್ದರಂತೆ..



 ಬಾಲಹಿಸಾರಿನ ಮೆಟ್ಟಿಲು  ಹತ್ತಿ  ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!


ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.



ಕೋಟೆಯ ಮೇಲಿನಿಂದ ಕೆಳಗೆ ನೋಡಿದಾಗ ...:( 



ನೀರು ಸಂಗ್ರಹಕ್ಕೆ.. 
ಆಗಲೇ ಅವರು ಮಳೆ ಕೊಯ್ಲು ಮಾಡುತ್ತಿದ್ದರಂತೆ. ಯುದ್ಧದ ಸಮಯದಲ್ಲಿ  ನೀರಿನ ಅಭಾವವಾಗದಿರಲು ನೀರು ಶೇಖರಣೆ ಮಾಡುತ್ತಿದ್ದರಂತೆ.


ವಾತಾಯನ ವ್ಯವಸ್ಥೆಗೆ ..ಕಿಂಡಿ.


ಇದು ಏರ್ ಕಂಡಿಶನ್  ವ್ಯವಸ್ಥೆ, ಗೋಡೆಯಲ್ಲಿ ಹುದುಗಿಸಿದ  ಮಣ್ಣಿನ ಪೈಪುಗಳ ಮೂಲಕ ನೀರು ಸಂಚಲನೆ.

ಆಗಿನ ಕಾಲದ ರಾಜರ ವೈಭವಗಳನ್ನು ಆಯಾ ಸ್ಥಳಗಳಲ್ಲಿಯೇ ಕಲ್ಪಿಸಿಕೊಳ್ಳಲು ಒಂತರಾ ಮಜಾ.ಅವರದ್ದೇನು ವೈಭೋಗ, ಆರ್ಭಟ !     ಆದರೂ ಈಗಿನಂತೆ ವಿಮಾನು, ಇಂಟರ್ನೆಟ್ಟು, ಮೆಟ್ರೋ ಟ್ರೇನು ಇದೆಲ್ಲ ಇರಲಿಲ್ಲ ಬಿಡಿ. ಸಾಮಾನ್ಯ ಜನರಾದರೂ   ನಾವೇ ಬೆಟರ್ರು.. :)



Saturday, September 24, 2011

ಮತ್ತೆ ಬಂತು ಚಿತ್ತಾರದರಮನೆಯಲ್ಲಿ ಹುಟ್ಟಿದ ಹಬ್ಬ..!

  ಎರಡು ಹೆಜ್ಜೆ ಮುಂದಿಟ್ಟಿದ್ದೇನೆ..

ತುಂಬಾ ಚಿಕ್ಕದು ನನ್ನ ಅಕ್ಷರ ಪ್ರಪಂಚ.  ಇಲ್ಲಿಯ ವರೆಗೆ ನಾನು ಪೋಸ್ಟಿಸಿದ್ದು; ಅದು  ಯಾವ ಪ್ರಾಕಾರ  ಅನ್ನುವುದು ಕೆಲವೊಮ್ಮೆ ನನಗೆ ಗೊಂದಲ ಉಂಟಾಗುತ್ತದೆ.  ನಾನು ಬರೆದಿದ್ದು ಕಥೆಯೋ ಕವನವೋ, ಕಾದಂಬರಿಯೋ, ಹಾಸ್ಯವೋ, ಹರಟೆಯೋ, ಅಂತೂ ನಾನು ಅದನ್ನು ಏನೆಂಬುದಾಗಿ  ತಿಳಿದುಕೊಂಡಿದ್ದೇನೆ ಎನ್ನುವುದನ್ನು ಕಥೆ, ಹರಟೆ, ಕವನ ಎನ್ನುವ ಲೇಬಲ್ ಹಚ್ಚಿ ನಿಮಗೆ ತಿಳಿಸಿದ್ದೇನೆ.ಸಹ ಬ್ಲಾಗಿಗರಿಂದಲೇ ನಾನು ಬರೆಯುವುದನ್ನು ಕಲಿತಿದ್ದು.  ಸಾಹಿತ್ಯ ಅದು, ಇದು, ಮಣ್ಣು ಮಸಿ ಎನ್ನುವ ತೀರಾ ಗೋಜಿಗೆ ಹೋಗುವವಳೇನೂ ನಾನಲ್ಲ.. ಆದರೆ ಬಾಲ್ಯದಿಂದಲೂ  ವಿಪರೀತ  ಓದುವ ಹುಚ್ಚು. ಪಾಠದ ಪುಸ್ತಕಕ್ಕಿಂತ ಬೊಂಬೆಮನೆ, ಚಂದಮಾಮ,  ಬಾಲಮಿತ್ರ, ಮಯೂರ, ತುಷಾರ, ತರಂಗ, ವಾರಪತ್ರಿಕೆ, ಪ್ರಜಾಮತ, ಲೆಕ್ಕವಿಲ್ಲದಷ್ಟು ಕಾದಂಬರಿಗಳು, ವಿಧ ವಿಧ ಪುಸ್ತಕಗಳು   ಹೀಗೆ ಕಾಲಕ್ಕೆ ತಕ್ಕಂತೆ ವಯಸ್ಸಿಗನುಗುಣವಾಗಿ ಪುಸ್ತಕಗಳ ಸಂತೆಯೇ ನನ್ನೆದುರು. 


ಆದರೆ ಈಗೀಗ ಓದಲು ಸಮಯ ಸಾಲುತ್ತಿಲ್ಲ ಎನ್ನುವ ನೆವವಿದೆ..! ಓದದಿದ್ದರೆ ಬರೆಯುವಾಗ ತಡವರಿಸುತ್ತದೆ,  ಮೊದಲೆಲ್ಲಾ ಬ್ಲಾಗು ವಾರಕ್ಕೊಮ್ಮೆ ಹೊಸ ಪೋಸ್ಟಿನಿಂದ ಕಂಗೊಳಿಸುತ್ತಿತ್ತು. ಈಗ ವಾರ ಮುಗಿದು ತಿಂಗಳು ಕಳೆದರೂ  ಬಾಗಿಲು ಬಳಿದು ರಂಗೋಲೆ ಇಡಲು ಸಾಧ್ಯವಾಗುತ್ತಿಲ್ಲ. ಆದರೂ ಚಿತ್ತಾರದರಮನೆಗೆ ಎರಡು ತುಂಬಿದ ಸಂಭ್ರಮ   ಸಡಗರದಿಂದ ಬರೆಯಲು ತೊಡಗಿದ್ದೇನೆ.ಏನು ಬರೆಯಲಿ? ಹೇಗೆ ಬರೆಯಲಿ?  ಎನ್ನುವ ಹುಡುಕಾಟದಲ್ಲಿಯೇ ಓಡಾಡುತ್ತಿದ್ದೇನೆ.ಚುನಾವಣೆ ಬಂದಾಗ ರಾಜಕಾರಣಿಗಳು ಎಲ್ಲಾ ತೋರಿಕೆಯ  ಕಾಮಗಾರಿಗಳನ್ನೂ ಮಾಡಿ ಮುಗಿಸಲು ಹವಣಿಸುವುದಿಲ್ಲವೇ..? ಹಾಗೆಯೇ.  ಬರೆಯಲು ಸುಮಾರು ವಿಷಯ, ವಿಶೇಷ ಇದ್ದರೂ....  ಬರೆಯಬೇಕು ಅಂದುಕೊಂಡ ವಿಚಾರವನ್ನು ಮತ್ಯಾರೋ ಬರೆದಿದ್ದಾರೆ, ಮತ್ತೆ ಅದನ್ನೇ ಬರೆಯುವುದೇನು ಅನ್ನುವ ಪಲಾಯನವಾದ ಕೂಡಾ ಇದೆ....!


ಎಲ್ಲರಿಗೂ ನನ್ನಂತೆ ಆಗುತ್ತಿದೆಯೇನೋ ?ಬ್ಲಾಗ್ ಬರೆಯುವವರ ಉತ್ಸಾಹ ಕಡಿಮೆಯಾದಂತಿದೆ,  ಮಾತಿಗೆ ಸಿಕ್ಕವರಲ್ಲಿ , ಏನ್ರೀ ಹೊಸಾ ಪೋಸ್ಟ್ ಇದೆಯಾ ? ..
ನಿಮ್ಮದಿದೆಯಾ..? ಎಂದು ಪುನಃ ಪ್ರಶ್ನಿಸಿ ಎರಡೂ ಕಡೆಗೂ ಇಲ್ಲಪ್ಪಾ .. ಎನ್ನುವ ಉತ್ತರದೊಂದಿಗೆ ಇವರು ನಮ್ಮೊಂದಿಗಿದ್ದಾರೆ ಎನ್ನುವ ಕೆಟ್ಟ ಸಮಾಧಾನ ಹೊಂದುವುದೇ ಆಗಿದೆ.ಇಲ್ಲ ಅಂದರೆ ಅವರೆಲ್ಲಾ  ಬರೆದು ಬಿಡುತ್ತಾರೆ ಅನ್ನುವ ಹುಳುಕಿಗಾದರೂ ನಾನೂ  ತಡಕಾಡಿ ಬರೆದುಬಿಡಬಹುದಿತ್ತು!

ಇರಲಿ, ನಾನು ತೀರ್ಮಾನಿಸಿದ್ದೇನೆಂದರೆ, ಮೂರು ತುಂಬುವುದರೊಳಗಾಗಿ ಇನ್ನೂ  ನಾಲ್ಕಾರು ಪೋಸ್ಟ್ ಹಾಕಿಬಿಡಬೇಕೆಂದು!
ಅರಮನೆಯನ್ನೇ ಕಟ್ಟಲು  ಹೋಗಿ   ಈಗ 'ಅರ' ಮನೆಯಾಗಿದೆ. ಆಕಾಶದೆತ್ತರಕ್ಕೆ ಕಟ್ಟ ಬೇಕೆಂಬ ಆಸೆ.. ಪುರಸೊತ್ತಿಲ್ಲ..!

ಒಂದಷ್ಟು ಮಳೆಯ ಫೋಟೋಗಳು ..




 ಚೌತಿಗೆ  ಊರಿಗೆ ಹೋದವಳು ಮಳೆಗಾಲದ ಅಬ್ಬರಾಟ  ಕಂಡು ಮರಳಿ  ಬಂದಿದ್ದೇನೆ. ಬಹಳ ದಿನಗಳೇ ಆಗಿತ್ತು. ನಿಜ ಮಳೆಗಾಲವನ್ನು ಅನುಭವಿಸದೆ. ನಾನು ಊರಿಗೆ ಕಾಲಿಟ್ಟಿದ್ದೆ ತಡ.. ಮಳೆ ಸುರಿಯಲು ಶುರುಮಾಡಿದ್ದು ಬರುವವರೆಗೂ ಹನಿ ಕಡಿಯಲಿಲ್ಲ.


 ಸೂರಂಚಿನ ನೀರಿನಲ್ಲಿ ಕಾಲು ತೊಳೆದುಕೊಳ್ಳುವುದು ಮಜಾ ಅಲ್ವೇ..?

 ಒಂದು  ದೊಡ್ಡ ಮಳೆ, ಹಾಗೆ ಚಿಕ್ಕ ಮಳೆ, ಮತ್ತೊಂದು ಸುಮಾರಿನ ಮಳೆ.  ಹೀಗೆ ಮಳೆ, ಮಳೆ, ಮಳೆ, ಹೇಳಲು ಹೊರಟರೆ ಮೂರು ಪೇಜು ಮಳೆಯೇ ಆಗಿಬಿಡುತ್ತದೆ...!  ಹೊರ ಹೋಗಲು ಆಗದಿದ್ದುದಕ್ಕೆ ಎಲ್ಲಾ ಮಳೆಯನ್ನೂ ಶಪಿಸುತ್ತಾ, ಕೆಲವರು ಹಳೆ ಕಾಲದ ಮಳೆಯನ್ನು ಹಾಡಿ ಹೊಗಳುತ್ತಾ  ಕುಳಿತು ಕೊಂಡದ್ದಾಯ್ತು.



 ನಾವು ಶಾಲೆಗೆ ಹೋಗುವಾಗಿನ ಕಾಲದ  ಮಳೆ ನಿಜಕ್ಕೂ ನಮಗೆ ಸಂತಸವನ್ನೇ ತರುತ್ತಿತ್ತು. ಶಾಲೆ ಬಿಟ್ಟ ತಕ್ಷಣ ಎಲ್ಲರೂ ಸರತಿಯ ಸಾಲಿನಲ್ಲಿ ಮಳೆ ನೀರು ಕಲೆಯುತ್ತಾ ಹೋಗುತ್ತಿದ್ದೆವು ರಸ್ತೆ ಪಕ್ಕದ ಕಾಲುವೆಯಲ್ಲಿ!   ಒಬ್ಬರಾದರೂ ರಸ್ತೆಯಲ್ಲಿ ಹೋಗುವವರಿಲ್ಲ.  ನೀರು ತುಂಬಿದ ಚಿಕ್ಕ ಚಿಕ್ಕ ಹೊಂಡದಲ್ಲಿ ಪಚ್ಚಂತ ಕಾಲಿಟ್ಟು ಕಾಲಿನ ಪಕ್ಕದಲ್ಲಿ ಮೂಡುವ ನೀರಿನ ರೆಕ್ಕೆಯನ್ನು ನೋಡಿ ಬೆರಗಾಗುತ್ತಿದ್ದೆವು. ನೀರು ಸ್ವಲ್ಪ ಎತ್ತರದಲ್ಲಿ ಬೀಳುವ ಜಾಗಕ್ಕೆ ದರಕಿನ ಕಡ್ಡಿಯನ್ನು ಹಿಡಿದು ಅದು ಕಡ್ಡಿಯ ಕವಲುಗಳಲ್ಲಿ ಹರಡಿಕೊಳ್ಳುವ ವಿನ್ಯಾಸಕ್ಕೆ  ಮುದಗೊಳ್ಳುತ್ತಿದ್ದೆವು. ಅಪ್ಪಿ ತಪ್ಪಿ ಬಿಸಿಲು ಬಿದ್ದಾಗ ಮೂಡುವ ಕಾಮನಬಿಲ್ಲು ರೋಮಾಂಚನ ಮೂಡಿಸುತ್ತಿತ್ತು.



ಮುಂದೆ ಹೋಗುವವರಿಗೆ  ಹಿಂದಿನ ಹುಡುಗರು  ತಮಗೆ ಮುಂದೆ ಬಿಡಲಿಲ್ಲ ಎನ್ನುವ ಸಂಕಟಕ್ಕೆ ನೀರು ಚಿಮ್ಮಿ ಮೈ ಎಲ್ಲ ಒದ್ದೆ ಮಾಡುವುದು.  ನೀರಿನಲ್ಲಿ ಹೋಗುತ್ತಾ ಹೋಗುತ್ತಾ    ಪಾದಗಳನ್ನ ನೋಡಿಕೊಳ್ಳುತ್ತಾ ಅದರ ಗುಲಾಬಿ ಬಿಳುಪಿಗೆ ಮೈ ಮರೆಯುತ್ತಿದ್ದೆವು.ಮನೆಗೆ ಬಂದು  ನುಣ್ಣನೆಯ ನೆಲಕ್ಕೆಕಾಲು  ತೀಡಿ  ಚೀಕ್, ಚೀಕ್  ಎನ್ನುವ ಶಬ್ದ ಹೊರಡಿಸುವುದು,  ಜೋರು ಮಳೆ ಬರಲೆಂದು ದೇವರಿಗೆ ಒಂದು ಕಟ್ಟು ದೂರ್ವೆ ಹರಕೆ ಮಾಡಿಕೊಳ್ಳುವುದು ಇತ್ತು. ಶಾಲೆಗೆ ರಜೆ ಕೊಡುತ್ತಾರೆಂದು. ರಜೆ ಕೊಟ್ಟರೆ ಮತ್ತೆ ಶಾಲೆ ಯಾವತ್ತು ಶುರುವಾಗತ್ತಪ್ಪಾ ಮನೇಲಿ ಬೇಜಾರು,  ಅನ್ನುವ ವೇದನೆ.
 


 ಒಂದೇ ಒಂದಾದರೂ ಮಳೆಯ ಫೋಟೋ ಚನ್ನಾಗಿ ತೆಗೆಯಲಾಗಲಿಲ್ಲ. ನನ್ನವರಲ್ಲಿ ದುಃಖ ತೋಡಿಕೊಂಡರೆ,'' ಮಳೆಯನ್ನು ಅಲುಗಾಡದಂತೆ ನಿಲ್ಲಿಸಿ ಫೋಟೋ ಹೊಡಿ, ಮಳೆ ನಿಂತಿದ್ದಾಗ ಹೊಡಿ,'' ಎನ್ನುವ ಸಲಹೆಯನ್ನೆಲ್ಲಾ ಕೊಟ್ಟರು.

 ಮೋಜಿಗೆ   ಎಲ್ಲಾ ಚನ್ನಾಗಿತ್ತು ಆಗ. ಬೆಂಗಳೂರಲ್ಲಿ ಮಳೆ ಬಂದರೂ ಬೇಸರ, ಬರದಿದ್ದರೂ ಚಿಂತೆ, ಮಕ್ಕಳಿಗೆ ನೀರು ಆಡಲು  ಟೆರೆಸೆ  ಗತಿ.



ಮನೆಯಲ್ಲಿಯೇ ಕುಳಿತು ಟೈಮ್ ಪಾಸ್ ಮಾಡಲು ಮಾಡಿದ  ಕಜ್ಜಾಯವೆಲ್ಲಾ  ಮೆಂದಿದ್ದಾಯ್ತು. ನನ್ನವರು, '' ಹೀಗೆ ಆದರೆ ಮತ್ತೆ ಕೂತವರನ್ನು ಎಬ್ಬಿಸಲು ಯಾವುದಾದರೂ ಮಿನಿ ಕ್ರೈನ್ ಬಾಡಿಗೆಗೆ ಸಿಗುತ್ತಾ ಕೇಳಬೇಕು''  ಎಂದು ನನ್ನನ್ನು ಉದ್ದೇಶಿಸಿಯೇ ಹೇಳಿದರು..!  ಎಲ್ಲರೆದುರು ಯಾಕೆ ಅಂತ  ನಾನೂ ಸುಮ್ಮನಾದೆ..!


ನನ್ನವರ ಊರಿಗೆ ಹೋಗುವಾಗ ಲಾಂಚಲ್ಲಿ ಹೋಗಬೇಕು.. ಅಲ್ಲೂ ಮಳೆ.ಮಳೆ. ಶರಾವತಿ ಕೂಡಾ ಅಬ್ಬರಿಸುತ್ತಿದ್ದಳು.


ಮನೆ ಒಳಗಿನಿಂದಲೇ ಕಂಡ ಕಂಡದ್ದನ್ನೆಲ್ಲ ಫೋಟೋ ತೆಗೆದಿದ್ದಾಯ್ತು.. ಹೊತ್ತು ಹೋಗದೆ.

ಅಂತೂ ಹಬ್ಬಕ್ಕೆ ಸುಲಭದ  ಕೆಲಸ ಹಮ್ಮಿಕೊಂಡು ಸಂಭ್ರಮಿಸುತ್ತಿದ್ದೇನೆ.  ಈ ಸಲ ಮಳೆಯ ಹೆಳೆಯೊಂದಿಗೆ ಚಿತ್ತಾರದರಮನೆಯಲ್ಲಿ ಹುಟ್ಟು ಹಬ್ಬ..!!



Monday, June 27, 2011

ಜೀವನ ಕಲೆ !

ಭಾನುವಾರದ ದಿನ ಬೆಳಗಿನಲ್ಲಿ ಟ0ಟಾಣ ಟ0ಟಾಣ ಎನ್ನುವ ಸದ್ದಿನೊ೦ದಿಗೆ,  ನನ್ನ ತಲೆಯಲ್ಲಿ  ಹುಟ್ಟಿಕೊ೦ಡ ಕೆಲವು ವಿಚಾರಗಳು.


 ಸದ್ದು ಯಾವುದರದ್ದು..? ಪುಟ್ಟ ಬಾಲಕನೊಬ್ಬನ   ಮರಗಾಲು  [stilts] ಕುಣಿತದ್ದು..
ಅದ್ಯಾವುದೋ ಭಾಷೆಯಲ್ಲಿ ಪದ್ಯ ಹೇಳುತ್ತಾ  ಅದಕ್ಕೆ ತಕ್ಕಂತೆ ನರ್ತಿಸುವುದರದ್ದು.. 
ಅದು ಅವನ ಕಲೆಯ ಸದ್ದು ,  ಸಂಸ್ಕೃತಿಯ  ಸದ್ದು,  ಜೀವದ ಸದ್ದು .. ಬದುಕಿನ ಸದ್ದು..
 ಇಂದಿನ ಸದ್ದು.. ಅವನ ನಾಳೆಗಳ ಸದ್ದು..
ಸಧ್ಯಕ್ಕೆ ಅದು ಹೊಟ್ಟೆಯ ಸದ್ದು , ಹಸಿವಿನ ಸದ್ದು.. ಹೌದು ಅದು ಅವನ ಹಸಿವಿನ ಸದ್ದು..!! 


ನೋಡಿದರೆ ಪಾಪ ಅನ್ನಿಸುತ್ತದೆ. ಹತ್ತರಿ೦ದ ಹನ್ನೆರಡು ವಯಸ್ಸಿರಬಹುದು. ಆತ ಲಾಗ ಹಾಕುವುದು, ಮೈ ಬಾಗಿಸುವುದು ನೋಡುತ್ತಿದ್ದರೆ ಮೈ ನವಿರೇಳುತ್ತದೆ. ಯಾರಾದರೂ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸಿದ್ದನ್ನು  ನೋಡುತ್ತಿದ್ದರೆ 'ಬಿದ್ದರೆ 'ಅನ್ನುವ ಭಯ ನನಗೆ!   ಅಷ್ಟೊಂದು ಉದ್ದದ ಮರಗಾಲು ಹಾಕಿಕೊಂಡು ಡ್ಯಾನ್ಸ್ ಬೇರೆ ಮಾಡುತ್ತಾನೆ!  ಅದವರ ಕುಲ ಕಸುಬು. ಪಿತ್ರಾರ್ಜಿತ..!  ಯಾವ ರಿಯಾಲಿಟಿ ಶೋದಲ್ಲಿ ತೋರಿಸುವ ಕಸರತ್ತುಗಳಿಗೇನು ಕಡಿಮೆಯಿಲ್ಲ  ಅವನದು.   ಅವಕಾಶ ಸಿಕ್ಕಿಲ್ಲವೋ? ಅದವನಿಗೆ ಬೇಡವೋ?  ಅಂತೂ  ಹಾದಿ  ಬದಿಯ ಬದುಕು ಅವನದು. ಅನೇಕ ಕಡೆ ಹಳ್ಳ ದಾಟಲು ಮರಗಾಲು ಬಳಸುವ ಪದ್ದತಿಯಿದೆಯಂತೆ.    ಇಲ್ಲಿ ಜೀವನದ ನದಿ ದಾಟುತ್ತಿದ್ದಾನೆ ಅಷ್ಟೇ.


ಯಾವ ವಿಶ್ವ ವಿದ್ಯಾಲಯದಲ್ಲೂ ಕಲಿಸಲು ಸಾಧ್ಯವಾಗದ ಜೀವನ ಕಲೆ ಅವನದು.ಕಲೆಯೇ ಜೀವನ. ಹುಟ್ಟುಟ್ಟುತ್ತಲೇ    ಕಲಿತದ್ದು. 
ಸುಮ್ಮನೆ ಬಾಲ ಕಾರ್ಮಿಕರು , ಕೌಮಾರ್ಯದ  ಕೊಲೆ .. ಹಾಗೆ  ಹೀಗೆ  ಎಂದು  ಕೂಗಿ  ಕಿರುಚಾಡುವುದಕ್ಕಿಂತ, ಆಮೇಲೆ ನಡು ಹೊಳೆಯಲ್ಲಿ ಅವರನ್ನು ಬಿಟ್ಟು ಹೋಗುವುದಕ್ಕಿಂತ,   ಸಾಧ್ಯವಾದರೆ ನಿಂತು  ನೋಡಿ ಸಂತೋಷಿಸೋಣ, ಕೈಲಾದಷ್ಟು ದುಡ್ದೋ,  ಹಳೆ ಬಟ್ಟೆಯೂ ಏನೋ ಒಂದು ಕೊಡೋಣ, ಅವರನ್ನ ಇದ್ದ ಹಾಗೆಯೇ ಗೌರವಿಸೋಣ,  ಸಂತೋಷ ಪಟ್ಟಿದ್ದರ  ಋಣ ಅಷ್ಟರ ಮಟ್ಟಿಗೆ ಕಡಿಮೆಯಾದೀತು.ಮಕ್ಕಳ ಕಣ್ಣಿನ ಅಚ್ಚರಿಗೊಂದು ಬೆಲೆ ಕೊಟ್ಟಂತಾದೀತು.


ಬಂದದ್ದು ಭಾನುವಾರ, ಹಾಗಾಗಿ ಉಳಿದ ದಿನಗಳಲ್ಲಿ ಶಾಲೆಗೆ  ಹೋದರೂ  ಹೋಗಬಹುದು ಎನ್ನುವ ಆಶಾವಾದ ನನ್ನದು. ಅಲೆಮಾರಿಯಲ್ಲದಿದ್ದಲ್ಲಿ.  ಕೇಳಲಿಲ್ಲ ಅವನನ್ನು.




Friday, April 15, 2011

ರೇಷ್ಮೆ ಹುಳುಗಳ ಜೀವನದಾಟ.. ಪಾಠ..

ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ  ರೇಷ್ಮೆ ಹುಳುಗಳ  ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ   ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ   ಮಾಹಿತಿಗಳೊಂದಿಗೆ ಒಳಗಡೆ    ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ  ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್]  ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು  ಅನುವು ಮಾಡಿಕೊಟ್ಟರು.  
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.

ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು   ಮಾಹಿತಿಯನ್ನೂ ಹೊಂದಿಸಿ  ಮತ್ತಷ್ಟು ವಿಸ್ತರಿಸಿಕೊಳ್ಳಲು  ಅಂತರ್ಜಾಲಮುಖಿಯಾದೆ.


ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು 

ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.


ಬಾಂಬಿಕ್ಸ್ ಮೊರಿ     [  bombyx mori  ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ  ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ   ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.



ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.

ಬಲಿತ ಹುಳುಗಳು 

ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ  ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ. 


ಕೋಶದ ಸಿದ್ದತೆಯಲ್ಲಿರುವ ಹುಳು
 
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ  ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು  sericin .  ಫೈಬ್ರೊಇನ್  ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.

ಪೂರ್ಣಗೊಂಡ ಕೋಶ [cocoon ]




ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ   ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್   ಸಾವಿರ ಅಡಿಗಳಿಂದ ಮೂರು  ಸಾವಿರ ಅಡಿ ಉದ್ದದ ಎಳೆಯಿಂದ  ಮಾಡಲ್ಪಟ್ಟಿರುತ್ತದೆ.  ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.

ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ  ಹಾತೆಯಾಗಿ ಹೊರಬರುತ್ತದೆ.  ಇದು ಸ್ರವಿಸುವ  ಪ್ರೋಟಿಯೋಲಿಟಿಕ್ ಕಿಣ್ವ  ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.

ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ  ವೈವಿಧ್ಯಮಯವಾಗಿ   ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ  ಮಾತ್ರ  ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ  ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..

ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...!  ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!

ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!


ವಂದನೆಗಳು