Showing posts with label ಪ್ರಕೃತಿ...ಪಾಠ... Show all posts
Showing posts with label ಪ್ರಕೃತಿ...ಪಾಠ... Show all posts

Tuesday, July 17, 2018

''ಜಿಲೇಬಿ''ಎಂಬ ಮಾಟಗಾತಿ

 ತುಂಬಾ ದಿನಗಳ ನಂತರ ಬ್ಲಾಗಿಗೆ ಕಾಲಿಡುತ್ತಿದ್ದೇನೆ.. ......  ಜಿಲೇಬಿ ರುಚಿಯೊಂದಿಗೆ.. 
 
 
ಈಗಾಗಲೇ ನಾನು ನನ್ನ ಜಿಲೇಬಿ ಕೃಷಿಯಲ್ಲಿನ  ಪ್ರಯೋಗಗಳನ್ನ ತಮ್ಮೆಲ್ಲರಿಗೂ ಆಗಾಗ ತಿಳಿಸುತ್ತಾ, ರಗಳೆ ಮಾಡುತ್ತಾ ಗೋಳು ಹೊಯ್ದು ಕೊಂಡಿದ್ದೀನಷ್ಟೆ .. ಇದು ಲಾಸ್ಟು .. ನಂಬಿ ಪ್ಲೀಸ್ ನನ್ನ ನಂಬಿ.
ಮೊದಲ ಸಲ  ಸುಮಾರು ನಾಲ್ಕು ವರ್ಷಗಳ ಹಿಂದೆ ಜಿಲೇಬಿ ಮಾಡಿದ್ದನ್ನು ಹೆಮ್ಮೆಪಟ್ಟುಕೊಂಡು ಜಗತ್ತಿಗೆಲ್ಲ ಸಾರಿದ್ದು ನಿಮಗೂ ನೆನಪಿಗೆ ಬಂದಿರಬಹುದು. ಅದು ಜಿಲೇಬಿ...  ಜಿಲೇಬಿ ಹೌದೋ ಅಲ್ಲವೋ ಎಂಬುದನ್ನು ನಮ್ಮನೆಯಲ್ಲಿರುವ  ಮೂವರು ತಜ್ಞರು ಅಳೆದು ಸುರಿದು ( ಸುರಿದಿದ್ದು ಎಲ್ಲಿಗೆ ಅಂತ ಯಾರೂ ತನಿಖೆ ಮಾಡಬೇಡಿ ದಯವಿಟ್ಟು..!) ನೋಡಿ,  ಇವಳಿಂದ ಮಾತ್ರ ಜಿಲೇಬಿ ಎಂದು ಕರೆಸಿಕೊಳ್ಳಲ್ಪಡುವ ಬೇರೆ ಯಾವುದೋ ಒಂದು ವಸ್ತು  ಎಂದು ಒಮ್ಮತದಿಂದ ತೀರ್ಮಾನಕ್ಕೆ ಬಂದಿದ್ದರೂ ನಾನು ಮಾತ್ರಾ ಅದನ್ನುಸಾರಾಸಗಟಾಗಿ ತಿರಸ್ಕರಿಸಿ ಜಗತ್ತಿನ ಯಾವುದೋ ಒಂದು ಅದ್ಭುತವೇ ಸರಿ ಎಂಬಂತೆ ಬ್ಲಾಗು, ಫೇಸ್ಬುಕ್ಕು ಜೊತೆಗೆ ನಾಡಿನ  ಎಲ್ಲ ಸ್ತರದವರಿಗೂ ತಿಳಿಯಲೆಂಬಂತೆ ಪತ್ರಿಕೆಗೂ ಕಳಿಸಿ ನನಗೆ ನಾನೇ ಹೆಮ್ಮೆ ಪಟ್ಟುಕೊಂಡಿದ್ದು ನಿನ್ನೆ ಮೊನ್ನೆ ನಡೆದಂತಿದೆ..!  ಅಂತೂ ಮೊದಲ ಪ್ರಯತ್ನ ಯಶಸ್ವಿಯಾಗಿ ಡಿಸ್ ಕ್ವಾಲಿಫೈ ಆಯ್ತು... !
ಹೆತ್ತವಳಿಗೆ ಹೆಗ್ಗಣ ಮುದ್ದು .. ಕಟ್ಟಿಕೊಂಡವನಿಗೆ ಕೋಡಂಗಿ ಮುದ್ದು ಎನ್ನುವಂತೆ ನಾ ಮಾಡಿದ ಜಿಲೇಬಿ ನನಗೆ ಮುದ್ದು .. :)  ಯಾರೇನೇ ಅಂದರೂ ನಾನು ಮಾತ್ರ ಮತ್ತೊಮ್ಮೆ ಮಗದೊಮ್ಮೆ ನನ್ನ ಜಿಲೇಬಿ ಪ್ರಯೋಗಗಳನ್ನು ಮಾಡುತ್ತಲೇ ಹೋದೆ. ಪ್ರತಿ ಸಾರಿಯೂ ಒಂದೊಂದು ಹೊಸ ವಿಷಯವನ್ನು ಕಲಿಯುತ್ತಲೇ ಹೋದೆ.
ಜಿಲೇಬಿ ಎನ್ನುವ ರಮಣೀಯ ಖಾದ್ಯವನ್ನು ಮಾಡಲು ಪ್ರತಿ ಹೆಜ್ಜೆಯೂ ಸರಿ ಇರಲೇ ಬೇಕು.  ಹಿಟ್ಟಿನ ಹದ, ಜಿಲೇಬಿ ಬೇಯಿಸುವ ಹದ , ಸಕ್ಕರೆ ಪಾಕ, ಉರಿ, ಜಿಲೇಬಿ ಹಿಟ್ಟನ್ನು ಎಣ್ಣೆಗೆ ಬಿಡುವ ಕಲೆ ಎಲ್ಲವೂ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ನಿಮಗೆ ಉತ್ತಮ ಜಿಲೇಬಿ ಭಾಗ್ಯ  ಸಿಗುತ್ತದೆ. ನಾನು ಸುಮಾರು ಏಳೆಂಟು ಸಲ ಜಿಲೇಬಿ ಮಾಡಿ ಮಾಡಿ ಈ ನಡುವೆ ತಿನ್ನಲು ಯೋಗ್ಯವಾದ ಜಿಲೇಬಿಗಳನ್ನು ಮಾಡುತ್ತಿದ್ದೇನೆ. ಯೂ ಟ್ಯೂಬ್ ನೋಡಿ, ಅವರಿವರು ಮಾಡಿದ್ದನ್ನು ನೋಡಿ ಮನದಲ್ಲೇ ಲೆಕ್ಕಾಚಾರ ಹಾಕಿ, ಯಾರ್ಯಾರನ್ನೋ ಕೇಳಿ ಈ ಮಟ್ಟಕ್ಕೆ ಬಂದಿದ್ದೇನೆ. ರಾಜಕುಮಾರನೊಬ್ಬ  ಸಾವಿರಾರು ಮೈಲಿ ಪ್ರಯಾಣ ಮಾಡಿ ಏಳು ಸಮುದ್ರದ ಆಚೆ, ಏಳು ಕೋಟೆಯ ನಡುವೆ ಬಂಧಿತಳಾದ ರಾಜಕುಮಾರಿಯನ್ನು ಕರೆತರಲು ಹರ ಸಾಹಸ ಮಾಡಿದಂತೆ ನಾನೂ ಈ ಸ್ವೀಟಿನ ತಯಾರಿಯಲ್ಲಿ ಎಲ್ಲ ತಪ್ಪುಗಳನ್ನೂ ಹಾದು ಬಂದು ಸಾಹಸ ಗೈದಿದ್ದೇನೆ  ಎನ್ನಲು ಸಂತೋಷಿಸುತ್ತೇನೆ . :)

ಮೊದಲು ವಿಧಾನ ವಿವರಿಸುತ್ತೇನೆ ನಿಧಾನ  ಕೇಳಿ.
ಒಂದು ಲೋಟ ಮೈದಾ ಹಿಟ್ಟಿಗೆ ಎರಡು ಚಮಚ ಮೊಸರು+ ಒಂದು ಚಮಚ ಕಡಲೆ ಹಿಟ್ಟು + ಚಿಟಿಕೆ ಅರಿಶಿನ + ನೀರು ಹಾಕಿ  ದೋಸೆಯ ಹಿಟ್ಟಿನ ಹದಕ್ಕಿಂತಲೂ ಸ್ವಲ್ಪ ದಪ್ಪ ಹದಕ್ಕೆ ಗಂಟುಗಳಿಲ್ಲದಂತೆ  ಕದಡಿ. ಸುಮಾರು ೧೦ ಘಂಟೆ ಹಿಟ್ಟು ಹುಳಿ ಬರಲು ಬಿಡಿ. ಮಾಡುವ ಹೊತ್ತಿಗೆ ಚಿಟಿಕೆ ಸೋಡಾ ಬೆರೆಸಿ.
ಸಕ್ಕರೆ ಪಾಕಕ್ಕೆ-  ಎರಡು ಲೋಟ ಸಕ್ಕರೆಗೆ ಒಂದು  ಲೋಟ ನೀರು ಹಾಕಿ ಎಳೆ ಪಾಕ ಮಾಡಿಟ್ಟುಕೊಳ್ಳಬೇಕು. ಪಾಕ ತುಂಬಾ ಬಿಸಿಯೂ ಇರದೇ ತಣ್ಣಗೂ ಇರದೇ ಮಧ್ಯಮ  ತಾಪದಲ್ಲಿ ಇರಲಿ. ಒಂದು ಚಮಚ ಲಿಂಬೆ ಹುಳಿ + ಒಂದು ಚಮಚ ಜೇನುತುಪ್ಪ ವನ್ನು ಕುದಿಯುವಾಗಲೇ ಸೇರಿಸಿ. ಕೇಸರಿ ಎಸಳುಗಳನ್ನು ಸೇರಿಸಬಹುದು.
ಅಗಲ ತಳದ ಪ್ಯಾನನ್ನು ಓಲೆ ಮೇಲಿಟ್ಟು ಎಣ್ಣೆ ಹಾಕಿ. ಸುಮಾರು ಒಂದೂವರೆ ಇಂಚು ಮುಳುಗುವಷ್ಟು ಇರಲಿ. ಉರಿ ಸಿಮ್ ನಲ್ಲಿರಲಿ. ಮಧ್ಯದಲ್ಲಿ ತೂತಿರುವ ದಪ್ಪ ಬಟ್ಟೆ ಅಥವಾ ಸ್ಕ್ವೀಝರ್ ಗೆ ಹಿಟ್ಟನ್ನು ತುಂಬಿಕೊಳ್ಳಿ. ಎಣ್ಣೆ ಕಾದಿದೆಯಾ ನೋಡಲು ಒಂದು ಹನಿ ಹಿಟ್ಟು ಎಣ್ಣೆಗೆ ಹಾಕಿದರೆ ಅದು ತಕ್ಷಣ ತಳ  ಬಿಟ್ಟು ಏಳುತ್ತದೆ .. ಅಂದರೆ ಕಾದಿದೆ ಅಂತ ಅರ್ಥ. ಈಗ ನಿಧಾನಕ್ಕೆ ಹಿಟ್ಟನ್ನು ಜಿಲೇಬಿ ಆಕಾರಕ್ಕೆ (?) ಎಣ್ಣೆಗೆ ಬಿಡಿ. ಕರಿಯುವವರೆಗೆ ಸಹನೆಯಿಂದ ಕಾಯುವುದೂ ಇಲ್ಲಿ ಮುಖ್ಯ. ಜಿಲೇಬಿ ಸ್ವಲ್ಪ ಹೊಂಬಣ್ಣಕ್ಕೆ ತಿರುಗಿ ಗರಿ ಗರಿಯಾದ ಲಕ್ಷಣ ಕಂಡುಬಂದಾಗ ತೆಗೆದು ಪಾಕಕ್ಕೆ ಹಾಕಿ ಅರ್ಧ ನಿಮಿಷದಿಂದ ಒಂದು ನಿಮಿಷದ ವರೆಗೆ ಪಾಕದಲ್ಲಿ ಅದ್ದಿ ನಂತರ ಬೇರೆ ಪ್ಲೇಟಿಗೆ ವರ್ಗಾಯಿಸಿ.

  ಮಾಡಿದ ಮತ್ತು ಮಾಡುವ ತಪ್ಪುಗಳು . 
 
೧.  ಹಿಟ್ಟು ತೆಳ್ಳಗೆ ಆದರೆ ಜಿಲೇಬಿ ದುಂಡನೆಯ ಜಿಲೇಬಿಯಾಗದೆ ಚಪ್ಪಟೆಯಾಗುತ್ತದೆ. ಜಿಲೇಬಿ ಗರಿಗರಿಯಾಗದೆ ಮೆತ್ತಗಾಗುತ್ತದೆ. ಹಿಟ್ಟಿನಲ್ಲಿ ಗಂಟುಗಳಿಲ್ಲದಂತೆ ನೋಡಿಕೊಳ್ಳಿ.
೨. ಸಕ್ಕರೆ ಪಾಕ ತೆಳ್ಳಗಾದರೆ ಸ್ವಲ್ಪ ಹೊತ್ತಿನ ನಂತರ ಜಿಲೇಬಿಯಿಂದ ಪಾಕ ಸೋರಿ ಹೋಗುತ್ತದೆ. ತೀರಾ ದಪ್ಪ ಇದ್ದಲ್ಲಿ ಪಾಕ ಹೀರಿಕೊಳ್ಳುವುದಿಲ್ಲ.   ಮೊದ ಮೊದಲು ಪಾಕ ಸರಿ ಹದದಲ್ಲಿ ಇದ್ದು ತಣ್ಣಗಾದಂತೆ ದಪ್ಪವಾಗುತ್ತದೆ.. ತುಸುವೇ ನೀರು ಬೆರೆಸಿ ಮತ್ತೆ ಒಂದು ಕುದಿ ಬರಿಸಿಕೊಳ್ಳಬೇಕು                           
೩, ಎಣ್ಣೆ ಸಣ್ಣ ಉರಿಯಲ್ಲಿಯೇ ಕಾಯಬೇಕು ಮತ್ತು ಕೊನೆಯವರೆಗೂ ಉರಿ  ಸಿಮ್ ನಲ್ಲಿಯೇ ಇರಬೇಕು. ಕರಿಯಲು ಎಣ್ಣೆ ಕಡಿಮೆಯಾದರೆ ಸರಿಯಾಗಿ ಬೇಯುವುದಿಲ್ಲ. ಹಿಟ್ಟು ತಳ ಬಿಟ್ಟು ಮೇಲೆ ಬರುವಷ್ಟಾದರೂ ಎಣ್ಣೆ ಬಾಣಲೆಯಲ್ಲಿ ಇರಲೇ ಬೇಕು. ಕೌಚಿ ಮಗುಚಿ ಬೇಯಿಸಬೇಕು. ಉರಿ ಜಾಸ್ತಿಯಾದರೆ ಜಿಲೇಬಿ ಗರಿಗರಿಯಾಗುವುದಿಲ್ಲ. 
೪. ಇನ್ನು ಜಿಲೇಬಿ ಬಿಡುವ ಕಲೆ... ನಿಮ್ಮ ಹಣೆಬರಹದಲ್ಲಿ ಹೇಗಿದೆಯೋ ಯಾರಿಗ್ಗೊತ್ತು..:) ಮೊದಮೊದಲು ಸಕಲೆಂಟು ಜಾತಿಯ ಜೀವರಾಶಿಗಳ ಉಗಮವಾಗಿ ಸಮುದ್ರ ಮಥನದಲ್ಲಿ ಕೊನೆಯಲ್ಲಿ ಅಮೃತ ದೊರಕಿದಂತೆ ನಾಲ್ಕಾರು ಪ್ರಯೋಗಗಳ ಬಳಿಕ ಒಂದು ಶೈಲಿ ನಿಮಗೆ ಒಲಿಯಬಹುದು...  :) ನಾನೂ ಇನ್ನೂ ಪ್ರಾಕ್ಟೀಸ್ ಹಂತದಲ್ಲಿಯೇ ಇದ್ದೇನೆ.  ಕಾಲಾಂತರದಲ್ಲಿ ಸುಧಾರಣೆ ಆಗಬಹುದೆಂಬ ಬಹುದೊಡ್ಡ ನಂಬಿಕೆಯೊಂದಿಗೆ ..:)

ನನ್ನದು ಟ್ರಯಲ್ ಅಂಡ್ ಎರರ್ ಪದ್ಧತಿ ...  ಹಾಗಾಗಿ ನನ್ನ ಜಿಲೇಬಿಗೆ ಇನ್ನೂ ಉತ್ತಮ ತರಗತಿಯ ರಿಸರ್ಚ್ ಅಂಡ್ ಡೆವಲಪ್ಮೆಂಟ್ ನ  ಅಗತ್ಯ ಇರಬಹುದು...  ಇಲ್ಲಿರುವ ಜಿಲೇಬಿ ಪಂಡಿತರುಗಳು ಹೆಚ್ಚಿನ ಮಾಹಿತಿ ಕೊಡುತ್ತಾರೆಂದು ಭಾವಿಸುತ್ತಾ ಈ ರಗಳೆಯನ್ನು ಮುಗಿಸುತ್ತಿದ್ದೇನೆ.

ಧನ್ಯವಾದಗಳು .

Sunday, October 13, 2013

ಅಂಧಕಾರವೂ.. ಜ್ಞಾನೋದಯವೂ ..

ಆ ಐ ಕೇರ್ ಸೆಂಟರಿನ ಕುರ್ಚಿಗೆ ತಲೆಯಾನಿಸಿ ಕೂತಿದ್ದೆ.  ಸ್ವಲ್ಪ ಹೊತ್ತಿನ ಮೊದಲು  ಕಣ್ಣಿಗೆ ಡ್ರಾಪ್ಸ್ ಹಾಕಿಸಿಕೊಂಡು..
ತಲೆಯಲ್ಲಿ ಸಾವಿರ ಯೋಚನೆಗಳು.. ಒಂದರ ಮೇಲೊಂದು, ಎಲ್ಲಾ ಒಟ್ಟೊಟ್ಟಿಗೆ, ಯಾವುದು ಮೊದಲು ಬರುತ್ತೆ ಯಾವುದು ಕೊನೆಗೆ ಗೊತ್ತಾಗದಷ್ಟು .
 ಇಷ್ಟು ನಡೆದಿದ್ದು,
 ನಮ್ಮ ಅತ್ತೆಯವರಿಗೆ ಕಣ್ಣಿನ ಪೊರೆಯ  ತೊಂದರೆ  ಶುರು ಆಗಿತ್ತು. ಸರಿ, ಐ ಸ್ಪೆಶಲಿಷ್ಟರಿಗೆ ತೋರಿಸುವುದು ಅಂತಾಯಿತು. ಹತ್ತಿರದಲ್ಲೇ ಒಂದು ಪ್ರಸಿದ್ಧ  ಐ ಕೇರ್ ಸೆಂಟರಿನಲ್ಲಿ ಚೆಕ್ ಮಾಡಿಸುವುದು ಅಂತ ತೀರ್ಮಾನವಾಯಿತು. ಇವರು ಹೇಳಿದರು, ''ಅಮ್ಮನ ಜೊತೆಯಲ್ಲೇ ನೀನೂ ಕಣ್ಣು ಟೆಸ್ಟ್ ಮಾಡಿಸಿಕೊಂಡು ಬಾ, ನಿನಗೂ ಕಣ್ಣಿನ ತೊಂದರೆ ಇದೆ ! ''
''ಅದು ಹೇಗೆ  ನನ್ನ ಕಣ್ಣಿನ ವಿಚಾರ ನಿಮಗೆ   ಗೊತ್ತಾಯಿತು..?'' ನನ್ನ ಪ್ರಶ್ನೆ..
''ನಾನು ಎದುರಿಗೇ  ಇದ್ದರೂ ಜೋರಾಗಿ ಕಿರುಚುತ್ತೀಯಲ್ಲ, ಅದಕ್ಕೆ ನಿನ್ನ ಕಣ್ಣೂ ಚೆಕ್ ಮಾಡಿಸ ಬೇಕು.. ತೊಂದರೆ ಇದ್ದೆ ಇದೆ..!!
ಅತ್ತೆಯ ಎದುರಿಗೇ ಹೇಳುತ್ತಾರೆ. ನೋಡಿ ಅಮ್ಮನ ಎದುರಿಗೆ ಮಕ್ಕಳಿಗೆ  ಧೈರ್ಯ ಜಾಸ್ತಿ.. 
  '' ಗಂಡಂದಿರಿಗೆ  ಕಿವಿ ದೂರ ಅನ್ನುವುದು ಲೋಕಕ್ಕೆಲ್ಲಾ ಗೊತ್ತು, ಕೂಗದೆ ಮತ್ತಿನ್ನೇನು? '' ನಾನು ಸುಮ್ಮನಿರಲಾ..?
''ಅದು ಹಾಗಲ್ಲ, ನಿನಗೆ ನಾನೆಲ್ಲೋ ದೂರದಲ್ಲಿದ್ದಂತೆ ಕಾಣಿಸುತ್ತದೆ, ಶಬ್ಧದ ವೇಗ ಕಡಿಮೆ,   ಅದಕ್ಕೆ ನೀನು ಕೂಗುವುದು ಅಂತ ನನಗೆ ಚೆನ್ನಾಗಿ ಗೊತ್ತು..''ಎಂದು ರಾಜಿಗೆ ಬಂದರು.. ಎಷ್ಟು ಒಳ್ಳೆಯವರು ..!!

ಸರಿ, ಇಷ್ಟೆಲ್ಲಾ ಆದಮೇಲೆ   ನಮ್ಮತ್ತೆಯವರನ್ನು ಕರೆದುಕೊಂಡು ಆ ಐ ಕೇರ್ ಸೆಂಟರಿಗೆ ಹೋದೆ. ಅಲ್ಲಿ ಅವರು ನಮ್ಮ ಹೆಸರು, ವಿಳಾಸ ತಗೊಂಡು ನಾ ನಿನ್ನ ಮರೆಯಲಾರೆ,  ಅನ್ನುತ್ತಾ ಕಂಪ್ಯೂಟರ್ ನಲ್ಲಿ  ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುವ ವ್ಯವಸ್ಥೆ  ಮಾಡಿಕೊಂಡರು.
ನಮ್ಮ ಅತ್ತೆಯ ಪರೀಕ್ಷೆಯಾಯಿತು.. ಈಗ ನನ್ನ ಸರದಿ, ಐ ಟೆಸ್ಟಿಂಗ್  ಮಷೀನ್ ಮೇಲೆ ಗದ್ದ  ಊರಿ ಕೂರಲು ತಿಳಿಸಿ ಅದೇನೋ ಟೆಸ್ಟ್ ಮಾಡಿದ್ರು ಅಲ್ಲಿ ಒಬ್ರು ಲೇಡಿ. ಮತ್ತೆ ಇನ್ನೊಂದು ಮಷೀನ್, ಕಣ್ಣಿನ ಪ್ರೆಶರ್ ಟೆಸ್ಟ್ ಮಾಡುವುದು.  ಮತ್ತೆ  ಮಷೀನ್ ಗೆ ಗದ್ದ ಊರಿ ಕುಳಿತುಕೊಂಡೆ.  ''ಏನಿಲ್ಲ  ಸ್ವಲ್ಪ ಗಾಳಿ ಊದುತ್ತೇವೆ ಹೆದರಬೇಡಿ ಅಂದ್ರು.  ಸರಿ, ಸ್ವಲ್ಪ ಫೋರ್ಸ್ ಇಂದ ಕಣ್ಣಿಗೆ ಗಾಳಿ ಬಂತು. ನನಗೆ ಇಷ್ಟುದ್ದಾ ನಾಲಿಗೆ ಸುಳಿಯುವ ಹಸಿರು ಹಾವಿನ ನೆನಪಾಯಿತು.  ತೊಂಡೆ ಚಪ್ಪರದ ಮೇಲೆ, ಬೇಲಿಗೆ ಅಲ್ಲಿ ಇಲ್ಲಿ ಕಾಣ ಸಿಗುವ ಪಾಪದ ಹಾವನ್ನು ಕೆಲವು ತುಂಟ ಹುಡುಗರು ಬಾಲ ಹಿಡಿದು ತಿರುಗಿಸಿ ದೂರಕ್ಕೆ ಒಗೆಯುತ್ತಿದ್ದರು ..  ಆಗ ದೊಡ್ಡವರು  ಹಸಿರುಳ್ಳೆ  ಹಾವು   ಕಣ್ಣಿಗೆ ಊದುತ್ತೆ . ಕಣ್ಣು ಕುರುಡೇ ಆಗಿ ಬಿಡುತ್ತೆ ಅದರ ಸುದ್ದಿಗೆ ಹೋಗಬೇಡಿ ಎಂದು ಹೆದರಿಸುತ್ತಿದ್ದರು. ಯಾವತ್ತೂ ಯಾರಿಗೂ  ಅದು ಕಣ್ಣು ಊದಿದ್ದಿಲ್ಲ ಎಂತಿಲ್ಲ, ಆದರೂ ಊದಿದರೆ ಹೀಗೆ ಊದಬಹುದೇನೋ ಅನ್ನಿಸಿತು.

ಮತ್ತೆ ಅದರಿಂದ ರಿಪೋರ್ಟ್ ತೆಗೆದುಕೊಡುತ್ತಾ , ಸುಮ್ಮನೆ ಕೊಡಬಹುದಿತ್ತು.. ''ನಿಮಗೆ  ಪ್ರೆಶರ್ ಇದೆ ಅಂತೇನಾದ್ರೂ ಈ ಮೊದಲು  ಡಾಕ್ಟರ್ ಹೇಳಿದ್ರಾ ..? ''ಅಂತ ಲೋಕಾಭಿರಾಮವಾಗಿ ಆಕೆ ಕೇಳಿದರು.    ಅವರು ಕೇಳಿದ್ದೆ ಸರಿ,,  'ಇಲ್ಲವಲ್ಲ'  ಅಂತ ತಕ್ಷಣಕ್ಕೆ  ಅಂದು ಹೊರಬಂದರೂ ನನಗೆ ತಲೆಯಲ್ಲಿ ಹುಳ ಕೊರೆಯಲಾರಂಬಿಸಿತು.. ಒಂಥರಾ ವಿವರಿಸಲಾಗದ ದುಗುಡ,

ಈಗ ಇನ್ನೊಬ್ಬರು phoropter ನಲ್ಲಿ ಒಂದಿಪ್ಪತ್ತು ಲೆನ್ಸ್ ಗಳನ್ನೂ ಹಾಕಿ ತೆಗೆದು ಮಾಡಿ ದೃಷ್ಟಿ ಚೆಕ್ ಮಾಡಿದರು. ಆ ರಿಪೋರ್ಟ್ ನೋಡಿ,'' ಏನ್ರೀ  ಕಣ್ಣಿನ ಪ್ರೆಶರ್ ೨೩, ೨೨  ಇದೆ.. ''ಅಂತಾ ರಾಗ ಎಳೆದರು.. ನನ್ನ ತಲೆಯಲ್ಲಿ ಈಗ ಸಾವಿರ ಹುಳುಗಳ ನರ್ತನ..ಮತ್ತೊಮ್ಮೆ ಚೆಕ್ ಮಾಡಿಸಲು ಅದೇ ಪ್ರೆಶರ್ ಮಶಿನ್ನಿನ ಬಳಿ ಕಳಿಸಿದರು. ಆದರ ಪಾಲಕ ಅದಕ್ಕೆ ಇಯರ್ಬಡ್  ಹಾಕಿ ಧೂಳು ಎಲ್ಲಾ ಒರೆಸಿ ಮತ್ತೆ ಕಣ್ಣಿನ ಚೆಕ್ ಮಾಡಿದ..!
ಚೇರ್ ನಲ್ಲಿ ಕೂರಿಸಿ ಅತ್ತೆ ಮತ್ತು ನನಗೆ ಕಣ್ಣಿಗೆ ಅದೆಂತದೋ ಡ್ರಾಪ್ಸ್ ಬಿಟ್ಟು ಕೂರಿಸಿದರು.. ''ಕಣ್ಣು ಮುಚ್ಚಿ ಕುಳಿತುಕೊಳ್ಳಿ.. ಕೆಲವು ಘಂಟೆ ಕಣ್ಣು ಮಂಜಾಗಿರುತ್ತೆ.. ಕ್ಲಾರಿಟಿ ಇರೋಲ್ಲ..ಮುಕ್ಕಾಲು ಘಂಟೆ ಬಿಟ್ಟು ಕಣ್ಣಿನ ಡಾಕ್ಟ್ರು ಟೆಸ್ಟ್ ಮಾಡ್ತಾರೆ,'' ಅಂದರು.

ಈಗ ಕಣ್ಣಿನ ಮುಂದೆ ಅಂಧಕಾರ..!

ಇಲ್ಲಿಂದ ಶುರು ಆಲೋಚನೆಗಳ ಸಂತೆ..         ೨೩, ೨೨  ಪ್ರೆಶರ್ ಇದೆ ಅಂದರೆ ಏನರ್ಥ ..? ಗ್ಲೂಕೋಮ ಇದೆ ಅಂತ ಅಲ್ಲವೇ..? ಅಂದರೆ ಈಗಲೇ ಶುರು ಆಯ್ತು ಅಂದರೆ ಮುಂದೆ ಏನು ಕಥೆ,  ಕಣ್ಣೇ  ಕಾಣಿಸುತ್ತೋ ಇಲ್ವೋ,,? ಸ್ವಲ್ಪವಾದರೂ ಕಾಣಿಸಬಹುದ..? ಕಾಣಿಸದಿದ್ರೆ ಏನು ಮಾಡೋದು..? ಹೇಗೆ ಓದೋದು ? ಬರಿಯೋದು..? ಚಿತ್ರ ಬರಿಯೋದು ? ಕೆಲಸ ಮಾಡೋದು..? ಮಕ್ಕಳ ಹೋಂ ವರ್ಕ್ ಕಥೆ ಏನು..?   ಇಂಟರ್ ನೆಟ್ಟು , ಬ್ಲಾಗು, ಫೇಸ್ ಬುಕ್ಕು  ಕಥೆ ಏನು..?

ಅತ್ತೆ,  ಪಕ್ಕದಲ್ಲಿ ಕುಳಿತವರಿಗೆ ಅವರ ಸಂಕಟ ಅವರದ್ದು.. ಯಾವ ಕಾರಣಕ್ಕೂ ಇಲ್ಲಿಯವರೆಗೆ ಯಾವುದಕ್ಕೂ  ಆಪರೇಶನ್ ಗೀಪರೆಶನ್ ಗೆ ಒಳಗಾಗದ ಘಟ್ಟಿ  ಆರೋಗ್ಯವಂತ ಜೀವ ಅವರದು,  ಅಂತಾದ್ದರಲ್ಲಿ ಕಣ್ಣಿಗೆ ಪೊರೆ ಬಂದಿದೆ! ಅದನ್ನು ಆಪರೇಟ್ ಮಾಡಿ ತೆಗೆಯಬೇಕು ಅಂದಿದ್ದು ಮತ್ತು ಕೂಡಲೇ  ಮಾಡಿಸಬೇಕು ಅಂದಿದ್ದು ಅವರಿಗೆ ಸಿಕ್ಕಾಪಟ್ಟೆ  ತಲೆ ಬಿಸಿ ..  '' ವಿಜಯ, ಕಣ್ಣು ಒಂದು ಕಾಣಿಸುವುದಿಲ್ಲ  ಅಂದರೆ   ಮನುಷ್ಯ ಸತ್ತಂತೆ..'' ಅಂದರು!  ಅತ್ತೆ ಬೇರೆ ಹಾಗಂದರು.

ಹುಟ್ಟುಗುರುಡರಾದರೆ ಅದೊಂದು ಕಥೆ, ಈಗ ಮಧ್ಯದಲ್ಲಿ ಈ ಗ್ಲೂಕೋಮ   ಅನ್ನುವ ರಾಕ್ಷಸನ ಕೈಯಲ್ಲಿ ಸಿಲುಕಿ ಕಣ್ಣೆ ಹೋಗಿಬಿಟ್ಟರೆ ?  ಯಾಕೋ ಒಂಟಿ ಕಣ್ಣಿನ ರಾಕ್ಷಸನ ಕಥೆ  ನೆನಪಾಯಿತು. ಈಗ ನನ್ನ ಕಣ್ಣು ಪೂರಾ ಹೋಯಿತು ಅಂತಿಟ್ಟುಕೊಳ್ಳೋಣ. ಅಡುಗೆ ಮಾಡೋದು ಹೇಗೆ..? ಅಲ್ಲ ಒಂದು ರೂಮಿಂದ ಇನ್ನೊಂದು ರೂಮಿಗೆ ಓಡಾಡೋದು ಹೇಗೆ..? ನಿಧಾನ ಕಲಿತುಕೊಳ್ಳಬೇಕು. ಚಿತ್ರ ಬರೆಯೋದು ಮಾತ್ರ ಕಷ್ಟ ಆಗಬಹುದು.ಯಾವುದೋ ಅಂಧ ಆರ್ಟಿಸ್ಟ್  ಬಗ್ಗೆ  ಎಲ್ಲೋ ಓದಿದ್ದು ಮಸುಕಾಗಿ ನೆನಪಾಯಿತು. ಎಷ್ಟೋ ಕಾದಂಬರಿಗಳು ಓದದೇ ಇರುವುದು ಸಾಕಷ್ಟಿವೆ.   ಮೊದಲು ಬ್ರೈಲ್ ಕಲಿತುಕೊಳ್ಳಬೇಕು. ಅದಕ್ಕೂ ಮೊದಲು ಕೋಲು ಬೇಕಲ್ಲ..!     ಪ್ರತಿಯೊಂದಕ್ಕೂ ಅವರಿವರನ್ನು  ಆಶ್ರಯಿಸುವುದು ಕಷ್ಟ ಕಷ್ಟ . ಹತ್ತು ಹಲವು ಬಗೆಯ ಸಂಕಟಗಳು.  ಹಾಳಾಗ್ಲಿ  ಫೇಸ್ ಬುಕ್ ನೋಡುವುದು ಹೇಗೆ..?  ಸುಮಾರು ದಿನ ಯಾವುದೇ ಸ್ಟೇಟಸ್,  ಪ್ರೊಫೈಲ್ ಚಿತ್ರ  ಚೇಂಜ್ ಇರದಿದ್ದುದನ್ನು ನೋಡಿ ಫೇಸ್ ಬುಕ್ಕಿನ ಫ್ರೆಂಡ್ಸ್,  ಅಂತಃಪುರದ ಸಖಿಯರು  ಎಲ್ಲಿ,  ಎಲ್ಲಿ ವಿಜಯಶ್ರೀ?   ಅನ್ನಬಹುದು.. ಆಮೇಲೆ ಹೇಗೋ   ಹೀಗೆ  ಆಗಿ ಹೀಗಾಗಿದೆ ಅಂತ ಸುದ್ದಿ ಹೋಗಿರುತ್ತೆ.. ಅಯ್ಯೋ ಪಾಪ, ಹೀಗಾಗ್ಬಾರ್ದಿತ್ತು,  ಅಂತ ಅವರೆಲ್ಲಾ ಅಲವತ್ತು ಕೊಳ್ಳುತ್ತಿರಬಹುದಾ..? ನನಗೆ ಕಾಣಿಸಲ್ವೆ.  :)   ನನ್ನ ಕಣ್ಣಿನ ಬಗ್ಗೆ ಹೀಗೆ  ಒಂದಷ್ಟು ಶ್ರದ್ಧಾಂಜಲಿ  ಕಾಮೆಂಟುಗಳು ಇರಬಹುದೇ..?    :)  ಎಲ್ಲದಕ್ಕೂ ಸೊಲ್ಯುಶನ್ಸ್ ಇರುತ್ತೆ ಸುಮ್ನಿರೇ,  ಅಂದ ಹಾಗಾಯ್ತು ಇವರು ಕಿವಿಯಲ್ಲಿ..

ಆಲೋಚನೆಗಳು ಸಾಗುತ್ತಾ ಸಾಗುತ್ತಾ ಇರುವಂತೆಯೇ ಡಾಕ್ಟರು ನಮ್ಮನ್ನು ಕರೆದು ಆಪ್ಥಾಲ್ಮೊಸ್ಕೊಪಿ ಯಿಂದ ಕೂಲಂಕುಶವಾಗಿ ಟೆಸ್ಟ್ ಮಾಡಿ,  ಅಷ್ಟೊತ್ತಿಗೆ ಪುನಃ ಮಾಡಿಸಿದ ಟೆಸ್ಟ್ ರಿಪೋರ್ಟ್ ಕೂಡಾ ಬಂದಿದ್ದು ಪ್ರೆಶರ್ ನಾರ್ಮಲ್   ಇತ್ತು.. ಎಂತ ಸಮಸ್ಯೆಯೂ ಇಲ್ಲ..ಗ್ಲೂಕೊಮಾವೂ  ಇಲ್ಲ, ಕೊಮಾವೂ  ಇಲ್ಲ ಅಂತ ರಿಪೋರ್ಟ್ ಕೊಟ್ಟರು.  ಹ್ಹಾ ... ಸುಮ್ಮನೆ ಇಷ್ಟೊತ್ತು ತಲೆ ಹಾಳು ಮಾಡಿಕೊಂಡಿದ್ದೆ ಬಂತು.   ಸುಖಾ ಸುಮ್ಮನೆ  ಹುಳಬಿಟ್ಟಿರಿ,  ಅಂತ ಆ ಡಾಕ್ಟರಿಗೆ ಹೇಳಿಯೇ ಹೊರ ಬಂದೆ.ಕರೆದು ಕೊಂಡು  ಹೋಗಲು ಬಂದ ನನ್ನವರ ಮೇಲೆ ಈಗ ಸಿಟ್ಟು. ಅವರೇ ಕಳಿಸಿದ್ದಲ್ವಾ..? ಮುಕ್ಕಾಲು ಘಂಟೆಯ ಅಂಧಕಾರದಲ್ಲಿ ಎಷ್ಟೆಲ್ಲಾ  ಅನುಭವ.. 

ನೋಡಿ, ಈ ದುಗುಡ ಅನ್ನುವುದು ಸುಮ್ಮನೆ ಗೊತ್ತಿಲ್ಲದೇನೆ ಮನಸ್ಸಿನೊಳಗೆ ಸೇರಿಕೊಂಡು ಬಿಡುತ್ತೆ.. ಎಲ್ಲದಕ್ಕೂಈ ಕಾಲದಲ್ಲಿ   ಪರಿಹಾರ ಇದೆ ಅನ್ನುವುದು ಗೊತ್ತಿದ್ದರೂ ಸುಮ್ಮನೆ ಉದ್ವೇಗ,
  ಈ ಭಾವಗಳು  ಒಂಥರಾ ನಮಗೆ ಗೊತ್ತಿಲ್ಲದೇನೆ ನಮ್ಮನ್ನು ಆಳುತ್ತಿರುತ್ತದೆ. ಭಯ, ಗೊಂದಲ, ದುಗುಡ,  ಉದ್ವೇಗ ಹೀಗೆ. ಕೆಲವೊಮ್ಮೆ ಎಲ್ಲವೂ !  ಪರಿಹಾರ ಇದೆ ಅನ್ನುವುದು  ಗೊತ್ತಿಲ್ಲದ್ದೇನೂ ಅಲ್ಲ.   ಸುಮ್ಮ ಸುಮ್ಮನೆ ತಲೆ ಬಿಸಿ ಮಾಡುತ್ತಿರುತ್ತದೆ..  ಎಷ್ಟೋ ಸಲ ನಮಗೆ ಆಗುತ್ತಿರುವ ಭಾವ  ಏನು  ಅಂತ ಗೊತ್ತಾಗುವುದೂ ಇಲ್ಲ..   ಬೇರೆಯವರ ವಿಚಾರದಲ್ಲಾದರೆ  ಕೆಲವೊಮ್ಮೆ  ಅದಕ್ಕೆ ಜಾಗ್ರತೆ ಅನ್ನುವ ಹೆಸರು ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬಹುದು ಬೇಕಿದ್ದರೆ.  ಕೆಟ್ಟ ಅಡುಗೆಯ ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪಿನ ಅಲಂಕಾರ ಮಾಡಿದ ಹಾಗೆ.


 ಮೊನ್ನೆ ಉತ್ತರ ಭಾರತದ ಕಡೆ ಪ್ರವಾಸ ಹೋಗಿದ್ದೆವಲ್ಲ.. ಮಧ್ಯದಲ್ಲಿ ನಮ್ಮ ಟ್ಯಾಕ್ಸಿಯವನು ಯಾವುದೋ ಒಂದು  ಹೋಟೆಲ್ ಗೆ ಕರೆದೊಯ್ದ. ನೋಡುತ್ತಿದ್ದಂತೆಯೇ   ನಾಲ್ಕಾರು ಅಂಧ ಕುಟುಂಬಗಳು ಅದೇ ಹೋಟೆಲಿಗೆ ಬಂದವು..  ಗಂಡ, ಹೆಂಡತಿ ಇಬ್ಬರೂ ಕುರುಡರೇ, ಮಕ್ಕಳು ಮಾತ್ರಾ ಅಲ್ಲ.. ಅವರಿಗೆ ಶಬ್ಧ ಮಾಧ್ಯಮವೇ ಮುಖ್ಯ.  ಹೋಟೆಲಿನಲ್ಲಿ ಗೌಜು.  ಹೋಟೆಲ್ ಸೂಪರ್ವೈಸರ್ ಕೂಡಾ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದ ಕಾಣುತ್ತೆ..    ನಮಗೆ  ಊಟ ಮಾಡುವುದಕ್ಕಿಂತ ಅವರನ್ನು ಗಮನಿಸುವುದೇ ಸೋಜಿಗದ ವಿಚಾರವಾಗಿತ್ತು.   ಕಣ್ಣಿದ್ದವರಾಗಿದ್ದರೆ ಯಾಕ್ಲಾ .. ಗುರಾಯಿಸ್ತೀಯಾ.. ಹೆಂಗೈತೆ ಮೈಗೆ?  ಅನ್ನುವಷ್ಟು.    ಅವರು ಊಟ ಮಾಡುವಾಗ ಬಟ್ಟಲನ್ನು  ಹೇಗೆ ನಿಧಾನಕ್ಕೆ ತಡವಿ  ಪರೀಕ್ಷಿಸುತ್ತಾರೆ.    ರೋಟಿ, ದಾಲ್ . ಸಬ್ಜಿ ಗಳನ್ನೆಲ್ಲಾ ಕೈ ಬೆರಳುಗಳಿಂದ ಮುಟ್ಟಿದಿಕ್ಕು ಗುರುತಿಸಿಕೊಂಡರು.    ಎಲ್ಲರೂ ಅದೆಷ್ಟು ಆತ್ಮ ವಿಶ್ವಾಸದಿಂದಿದ್ದರು  ಅಂದ್ರೆ   ನನಗೆ   ಐ ಕೇರ್ ಸೆಂಟರಿನ ಕಥೆ ನೆನಪಾಗಿ ನಗು ಬಂತು. ಯಾರೊಬ್ಬರೂ ಕಂಬ , ಟೇಬಲ್ಲು, ಕುರ್ಚಿ ಇನ್ನಿತರೇ ವಸ್ತುಗಳನ್ನು ಎಡವಲಿಲ್ಲ.. ಬೀಳಲಿಲ್ಲ.. ಯಾರಿಗೆಲ್ಲಾ ಫೋನ್ ಮಾಡಿದರು..! ಮನಸ್ಸು ಒಂಥರಾ ಒದ್ದೆ ಒದ್ದೆ .   ನನ್ನ ಮಗಳು  ತಮ್ಮನಿಗೆ ಹೇಳುತ್ತಿದ್ದಳು.. ಅವರು ಮೊಬೈಲನ್ನು ಬಳಸುವ ಬಗೆ ಕುರಿತು .. ಐದು ಸಂಖ್ಯೆಯ ಮೇಲೊಂದು ಚುಕ್ಕಿ ಇರುತ್ತೆ, ಅದನ್ನು ಗುರುತಿಸಿಕೊಂಡು  ಅದರ ಆಚೀಚೆ, ಮೇಲೆ ಕೆಳಗೆ  ಇರುವ ಸಂಖ್ಯೆಗಳನ್ನು  ನೆನಪಿಟ್ಟುಕೊಂಡು ಬಳಸುತ್ತಾರೆ ಅಂತ..
ಅವರ ಸೂಕ್ಷ್ಮತೆಗೆ,  ಆತ್ಮ ವಿಶ್ವಾಸಕ್ಕೆ ಶರಣು ಶರಣೆನ್ನುವೆ..  

 ಜೀವನ ಅನ್ನುವುದು ಯಾವ್ಯಾವುದೋ ಸಂದರ್ಭದಲ್ಲಿ  ಏನೇನನ್ನೋ ಕಲಿಸುತ್ತೆ !   ಗೊತ್ತಿಲ್ಲದೇನೇ,  ಕಷ್ಟ ಪಡದೇ  ಜ್ಞಾನದ ಹನಿ ಶೇಖರವಾಗುತ್ತೆ ತುಸುವಾದರೂ. 

 ಹೀಗೆ ಅಲ್ಪ ಸ್ವಲ್ಪ ಜೀವನವನ್ನು ಅರ್ಥ ಮಾಡಿಕೊಳ್ಳುತ್ತಿದ್ದೇನೆ   ಅನ್ನುವ ಹೆಮ್ಮೆಯೊಂದಿಗೆ ನಾನಿರಬೇಕಾದರೆ  ನನ್ನ ಬ್ಲಾಗು   ನಾಲ್ಕು ಕಳೆದು ಐದನೇ  ವರ್ಷಕ್ಕೆ ಕಾಲಿಡುತ್ತಾ ಇದೆ ಅನ್ನುವ ಜ್ಞಾನವೂ ಆಗಿ ಅದನ್ನೇ ಎಲ್ಲರಲ್ಲಿ   ಟಾ೦  .. ಟಾ೦ ಹೊಡೆಯುತ್ತಿದ್ದೇನೆ.

ವಂದನೆಗಳು.  


Wednesday, April 3, 2013

ಬೇರಿನಲ್ಲೇನಿದೆ ಮಹಾ..!!

ಬಸ್ಸಿಳಿದು ಮನೆಗೆ ಬರುವ ದಾರಿಯಲ್ಲಿ  ಅಪ್ಪಯ್ಯನ ಜೊತೆ ಹೆಜ್ಜೆ ಹಾಕುವುದೆಂದರೆ ಅದು ಓಟಕ್ಕೆ ಸಮ.ದಾಪುಗಾಲಿಡುತ್ತಾ ಹೋಗುತ್ತಿರುವ  ಅಪ್ಪಯ್ಯನನ್ನು  ರಸ್ತೆಯ ಪಕ್ಕದ ಇಳಿಜಾರಿನ ದರೆಯಲ್ಲಿ ಚಾಚಿಕೊಂಡಿರುವ ಒಣ  ಮರದ ಬೇರೊಂದು ತಡೆದು ನಿಲ್ಲಿಸಿಬಿಡುತ್ತಿತ್ತು.    ನಾನು  ಓಡುತ್ತಾ  ಬಂದು ''ಯಂತಾ ಅಪ್ಯಾ ...'' ಎನ್ನುವ ಹೊತ್ತಿಗೆ ಅಪ್ಪಯ್ಯನ ತಲೆಯಲ್ಲೊಂದು ಆಕಾರ ಕುಣಿಯುತ್ತಿರುತ್ತಿತ್ತು. ''ಈ ಬೇರು ನೋಡಿದ್ಯಾ..  ಯಂತ್ ಕಂಡಂಗೆ  ಕಾಣ್ತು  ಹೇಳು ನೋಣ.....'' ಎನ್ನುತ್ತಾ ನಮ್ಮ ಕಲಾಪ್ರಜ್ನೆಗೆ ಸವಾಲು ಹಾಕುತ್ತಿದ್ದ. ಬೇರಿಗೆ ಮೊದಲ ಸಾಮ್ಯತೆ ಹಾವಾಗಿದ್ದರಿಂದ ''ಹಾವು ಮಾಡ್ಳಕ್ಕನಾ ಇದ್ರಲ್ಲಿ,?'' ಎನ್ನುತ್ತಾ  ನಾನೂ  ಅದರ ಹಾವ ಭಾವ ಪರಿಶೀಲಿಸುತ್ತಿದ್ದೆ. ''ಆನೆ ಸೊಂಡ್ಲಿದ್ದಂಗೆ ಇಲ್ಯನೇ,'' ಎನ್ನುತ್ತಾ ಅಪ್ಪಯ್ಯ  ''ಬಾ ಹೋಪನ''ಎನ್ನುತ್ತಾ ಕರೆದೊಯ್ಯುತ್ತಿದ್ದ. ಸಾಯಂಕಾಲದ ಹೊತ್ತಿಗೋ, ಮರುದಿನವೋ ಕತ್ತಿ  ತಂದು ಅದನ್ನು ನಿಧಾನಕ್ಕೆ ಬಿಡಿಸಿಕೊಂಡು ಮನೆಗೆ ತಂದು ಬಿಸಿನೀರಲ್ಲಿ ನೆನೆಸಿಟ್ಟು ಅದರ ತೊಗಟೆ ಬಿಡಿಸುವ ಯತ್ನದಲ್ಲಿರುತ್ತಿದ್ದ.ಅದನ್ನು ಒಣಗಿಸಿ ಅದನ್ನು ತಿದ್ದಿ ತೀಡಿ,  ಮರಳು ಪೇಪರ್ ಹಾಕಿ ಉಜ್ಜಿ, ಅದಕ್ಕೆ ಪಾಲಿಷ್  ಹಾಕಿ  ಅದರ ಅಸ್ಪಷ್ಟ ರೂಪಕ್ಕೊಂದು  ಸುಂದರ ರೂಪವನ್ನು ತೆರೆದಿಡುತ್ತಿದ್ದ. 

 ಅಪ್ಪಯ್ಯನ ಈ ಕಾಷ್ಠ ಶಿಲ್ಪದ ಪ್ರೇಮ ಬೆಳೆಯಲು ಪ್ರಾರಂಭವಾಗಿದ್ದು ಸುಮಾರು ಅವನ ಮಧ್ಯ ವಯಸ್ಸಿನ ನಂತರ.  ನಮಗೆಲ್ಲಾ ಪಾಠ ಕಲಿಸಿದ ನಮ್ಮೂರ ಪ್ರಾಥಮಿಕ ಶಾಲೆಯ ಮೇಷ್ಟರು   ಈ ರೀತಿಯ ಬೇರು ನಾರುಗಳ ಶಿಲ್ಪಗಳನ್ನು ಮಾಡುವ ಹವ್ಯಾಸದವರಾಗಿದ್ದರು. ಅಪ್ಪಯ್ಯನಿಗೆ ಯಾವುದನ್ನಾದರೂ ಮಾಡಬೇಕೆಂದು  ತಲೆಗೆ ಹೊಕ್ಕಿತೆಂದರೆ ಶತಾಯ ಗತಾಯ ಅದನ್ನು ಮಾಡಿಯೇ ಸಿದ್ಧ..  ಹೀಗೆ ಸುಮ್ಮನೆ ಯಾವುದೋ ಬೇರೊಂದನ್ನು ತಂದು ಅದನ್ನು ಕೆತ್ತಿ ಹಾವಿನ ರೂಪ ಕೊಟ್ಟ.  ಅಲ್ಲಿಂದ  ದಿನಗಳೆದಂತೆ ಅಪ್ಪಯ್ಯನ ಆಸಕ್ತಿ ಹೆಚ್ಚಾಗುತ್ತಲೇ ಹೊಯಿತು. ಒಂದಾದ ಮೇಲೊಂದರಂತೆ , ಕಂಡ ಕಂಡ ಒಣ ಮರಗಳನ್ನೆಲ್ಲಾ ಪರಿಶೀಲಿಸಿ ಬೇರು ಹುಡುಕುವುದೂ,   ಅದಕ್ಕೊಂದು ರೂಪ ಕೊಡುವುದೂ ನಿತ್ಯದ ಕೆಲಸವಾಯಿತು. ಅದಕ್ಕೆಂದೇ ಚಿಕ್ಕ ದೊಡ್ಡ ಚಾಣ, ಉಳಿ, ಈ ತರದ ಹತಾರಗಳನ್ನೆಲ್ಲಾ ಕೊಂಡು ತಂದು  ಮಧ್ಯ ರಾತ್ರಿಯ ವರೆಗೂ ಕೆತ್ತಿ ಉಜ್ಜಿ  ತಿರುಗಿಸಿ ಮುರುಗಿಸಿ ನೋಡುತ್ತಾ ಮನಸ್ಸಿನಲ್ಲಿಯೇ ಸಮಾಧಾನ ಪಡುತ್ತಿದ್ದ.    ನಾವೂ ಅಪ್ಪಯ್ಯನ ಪಕ್ಕ ಕುಕ್ಕರುಗಾಲಲ್ಲಿ  ಕುಳಿತುಕೊಂಡು  ಈ ಕೆಲಸಗಳನ್ನೆಲ್ಲಾ ನೋಡುತ್ತಿದ್ದೆವು. ಮೊದಮೊದಲಿಗೆ ಅದೇನು ಆಕಾರ ತಳೆಯುತ್ತದೆ ಅನ್ನುವುದು ನಮ್ಮ ಕಲ್ಪನೆಗೆ ನಿಲುಕುತ್ತಿರಲಿಲ್ಲ.  ಇದು ಅದರ ಹಾಗೆ ಕಾಣುತ್ತೆ, ಇದರ ಹಾಗೆ ಕಾಣುತ್ತೆ ಅನ್ನುತ್ತಾ ಸುಳ್ಳು ಸುಳ್ಳೇ  ಲೆಕ್ಕಾಚಾರ  ಹಾಕುತ್ತಿದ್ದೆವು.ಕೊನೆ ಕೊನೆಗೆ ರೂಪ ಸ್ಪಷ್ಟವಾಗುತ್ತಾ ಬಂದಂತೆ 'ಹೌದಲ್ವಾ, ನಮಗೆ ಗೊತ್ತೇ ಆಗ್ಲಿಲ್ಲ 'ಅನ್ನುತ್ತಾ ಪೆಚ್ಚುನಗು ಬೀರುತ್ತಿದ್ದೆವು.   ಕಲಾವಿದನಿಗಷ್ಟೇ ಗೊತ್ತು ಕಲೆಯ ಮರ್ಮ..!  ಸುಮ್ಮನೇ  ನೋಡಿದರೆ ಈ ಬೇರಿನಲ್ಲೇನಿದೆ  ಮಹಾ ಅನ್ನಿಸಿಬಿಡುತ್ತೆ..  ಬೇರು ಹುಡುಕಿದ್ದು, ಅದಕ್ಕೆ  ಸಂಸ್ಕಾರ ಕೊಟ್ಟಿದ್ದು,    ಕೊನೆಗೆ  ಕಲ್ಪನೆಗೆ ತಕ್ಕ ರೂಪು ತಾಳಲು ಮಾಡಿದ  ಶತಪ್ರಯತ್ನ,  ಇವೆಲ್ಲದರ ಕಥೆ  ಅಪ್ಪಯ್ಯನ ಬಾಯಲ್ಲೇ ಕೇಳಲು  ಚಂದ!


ಕೆಲವು ರೂಪಾಂತರಗೊಂಡ  ಬೇರುಗಳು 

 ಹಾವುಗಳು  ಮತ್ತು ಮುಂಗುಸಿ .. 


 ಆನೆ ಮುಖ 

 ಕೆಂಬೂತ ಮತ್ತು ನವಿಲು 

 ಕ್ರಿಕೆಟ್ ಬೌಲರ್ 

 ಪೀರ್ ಸಾಬ್ 



 ಮತ್ತು ಮಹಮ್ಮದ್ ಸಾಬ್ 

 ನರ್ತಕಿ 


    ಅಪ್ಪಯ್ಯ ಮತ್ತು ಅವನ  ಕಾಷ್ಠ ಶಿಲ್ಪಗಳನ್ನು ಒತ್ತಾಯಪೂರ್ವಕವಾಗಿ ಚಿತ್ರಿಸಿದ್ದು.. [ ಈಗ ಯಂಗೆ ಪುರ್ಸೋತ್ತಿಲ್ಲೇ,  ಕಡಿಗೆ  ಫೋಟೋ ತೆಗಿಲಕ್ಕು  ಎನ್ನುವ ಅಪ್ಪಯ್ಯನನ್ನು ಹಿಡಿದು ಕೂರಿಸಿದ್ದು  ಹೀಗೆ ...:)   ] 


ಈಗೀಗ ಈ ಬೇರುಕೆತ್ತುವ ಕೆಲಸ  ಸ್ವಲ್ಪ ಕಡಿಮೆಯಾಗಿದೆ. ವಯಸ್ಸಿನ ಕಾರಣದಿಂದ ಹಾಗೂ ಆರೋಗ್ಯದ ಕಾರಣದಿಂದ ತುಂಬಾ ಹೊತ್ತು ಕುಳಿತುಕೊಳ್ಳಲು ಕಷ್ಟ .  ಆದರೂ  ಊರಿಗೆ  ಹೋದಾಗೆಲ್ಲಾ, ''ಇದೊಂದು ಹೊಸಾದು ನೋಡಿದ್ಯನೇ,'' ಅನ್ನುತ್ತಾ ಹೊಸದೊಂದು ಆಕೃತಿಯನ್ನು ತೋರಿಸುತ್ತಾನೆ ಅಪ್ಪಯ್ಯ..!

ವಂದನೆಗಳು

 . 

Friday, November 2, 2012

ಬಾಳೆದಿಂಡಿನ ದೀಪಸ್ಟ್ಯಾಂಡ್..

 ದೀಪಾವಳಿ ಬೆಳಕಿನ ಹಬ್ಬ. ಕತ್ತಲ ಕೊಳೆಯ ತೊಳೆಯುವ ಹಬ್ಬ. ತಾಮಸವ ಕಳೆದು ಜಗಕೆಲ್ಲ ಸತ್ವವ ಕೊಡುವ ಹಬ್ಬ. ಅಮಾವಾಸ್ಯೆ ಕಳೆದು ಪಾಡ್ಯ ಬರುತ್ತಿದ್ದಂತೆ ಮನೆ ಮನೆಯಲ್ಲೂ, ಪ್ರತಿ ಹೊಸಲಿನಲ್ಲೂ ಸಾಲು ಸಾಲಾಗಿ ಬೆಳಕಿನ ಚಿತ್ತಾರಗಳು. ತುಳಸಿ ಕಟ್ಟೆಯ ಸುತ್ತ, ಅಂಗಳದ ತುಂಬೆಲ್ಲಾ ಬಲೀಂದ್ರನನ್ನು ಸ್ವಾಗತಿಸಲು ತೆಂಗಿನ ಕಡ್ಡಿಗೆ ಬಿಳಿ ಬಟ್ಟೆಯನ್ನು ಸುತ್ತಿ ಎಣ್ಣೆಯಲ್ಲಿ ಅದ್ದಿ ಹಚ್ಚಿ ಅಲ್ಲಲ್ಲಿ ಸಾಲಾಗಿ ಸಿಕ್ಕಿಸಿದ ಸೂಡಿಗಳು.



 

ಕಾರ್ತಿಕ ಮಾಸದುದ್ದಕ್ಕೂನಡೆಯುವ ದೀಪೋತ್ಸವಕ್ಕೆ ದೀಪಾವಳಿಯೇ ನಾಂದಿ. ಮನೆಗಳಲ್ಲಿ, ದೇವಾಲಯಗಳಲ್ಲಿ, ಅಶ್ವತ್ಥ ಕಟ್ಟೆಯ ಸುತ್ತ, ಹೀಗೆ ಬಗೆ ಬಗೆಯಾಗಿ ದೀಪ ಬೆಳಗಿ ದೀಪೋತ್ಸವ ನಡೆಸುತ್ತಾರೆ. ಬಾನಂಗಳಕ್ಕೆ ಸೆಡ್ಡು ಹೊಡೆಯುವಂತೆ ಊರ ತುಂಬಾ ದೀಪಗಳ ಬಿತ್ತನೆ ಮಾಡುತ್ತಾರೆ. ದೀಪದಿಂದ ದೀಪ ಬೆಳಗುತ್ತಾರೆ. ಮೈ ಮನಗಳಲ್ಲೆಲ್ಲಾ ಬೆಳಕನ್ನೇ ತುಂಬಿಕೊಳ್ಳಲು ಹವಣಿಸುತ್ತಾರೆ. ದೀಪ ದಾನದ ಮೂಲಕ ಜ್ಞಾನದಾನದ ಸಂದೇಶವನ್ನು ಸಾರಲಾಗುತ್ತದೆ. ವರ್ಷಕ್ಕೆ ಮೂರು ದಿನದ ಮಟ್ಟಿಗೆ ಭೂಮಿಗಿಳಿದು ಬರುವ ಬಲೀಂದ್ರನಿಗೆ ದೀಪಾರಾಧನೆಯಿಂದ ಸ್ವಾಗತ ಮತ್ತು ಬೀಳ್ಕೊಡುಗೆ!

ಎಲ್ಲಾ ಕಡೆ ಹಣತೆಗೆ ಎಣ್ಣೆ ಹಾಕಿ ಬತ್ತಿ ಇಟ್ಟು ಅದಕ್ಕೆ ದೀಪ ಹಚ್ಚುವುದು ಸಾಮಾನ್ಯ. ಅದು ಸಾಂಪ್ರದಾಯಿಕ ಶೈಲಿಯಾದರೂ ಗಾಳಿ ಬಂದರೆ ದೀಪ ಆರಿ ಹೋಗುತ್ತದೆ. ತುಂಬಾ ಹೊತ್ತು ಉರಿಯುವಂತೆ ಮತ್ತು ಮತ್ತಷ್ಟು ಸುಂದರವಾಗಿ ಕಾಣುವಂತೆ ಮಾಡಲು ಕೆಲವು ಸರಳ ಉಪಾಯಗಳು ಹಲವಾರಿವೆ. ಅವುಗಳ ಪೈಕಿ ಒಂದು ಬಾಳೆ ದಿಂಡಿನ ದೀಪಸ್ಟ್ಯಾಂಡ್. ಅದನ್ನು ತಯಾರಿಸುವುದು ಹೇಗೆ ? ಏನೆಲ್ಲ ವಸ್ತು ಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ.



 ಬಳಸುವ ವಸ್ತುಗಳು - ಸೂಕ್ತ ಅಳತೆಯ ಬಾಳೆ ದಿಂಡು, ಹಣತೆ ದೀಪ ಅಥವಾ ಮೊಂಬತ್ತಿ,   ಚಿಕ್ಕ ಚಾಕು.


  
* ಮೊದಲು ಬಾಳೆ ದಿಂಡಿನ ಹೊರಗೆ ಇರುವ ಒಣಗಿದ ಮತ್ತು ಹಸಿರು ನಾರನ್ನು ಬಿಡಿಸಿ ಎಸೆದು ಒಳಗಿರುವ ಬಿಳಿ ನಾರನ್ನು ಮಾತ್ರ ಚಂದವಾಗಿ ಬಿಡಿಸಿಕೊಳ್ಳಿ.



 * ಬಾಳೆ ದಿಂಡಿನ ಎರಡು ನಾರನ್ನು ಒಂದರೊಳಗೊಂದು ಹಾಕಿ ಕೊಳವೆಯಂತೆ ಮಾಡಿ.

* ನಾರಿನ ಮೇಲೆ ಬೇಕಿದ್ದರೆ ಚಿಕ್ಕ ಚಿಕ್ಕ ಕಿಂಡಿ ಅಥವಾ ವಿನ್ಯಾಸಗಳನ್ನು ಕೊರೆದು ನಮ್ಮ ಕಲಾತ್ಮಕತೆಯನ್ನು ಸಾದರಪಡಿಸಬಹುದು



* ಹಣತೆ ಅಥವಾ ಮೊಂಬತ್ತಿಯನ್ನು ಹಚ್ಚಿ ಮಧ್ಯದಲ್ಲಿ ಬರುವಂತೆ ಇಟ್ಟು ಬಾಳೆದಿಂಡಿನ ಕೊಳವೆಯನ್ನು ಕೌಚಿಡಿ.

ಈಗ ಸಾವಯವ ಕೊಳವೆ ದೀಪ ರೆಡಿ. ಬಾಳೆ ನಾರಿನ ಮೂಲಕ ಹೊರಬರುವ ಬೆಳಕು ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಡೂಮ್ ಲೈಟಿನಂತೆ ಶ್ರೀಮಂತವಾಗಿ ಕಂಗೊಳಿಸುತ್ತದೆ. ಗಾರ್ಡನ್ನಿನ ಹೂಗಿಡಗಳ ಪಕ್ಕದಲ್ಲಿ ಇಟ್ಟರೆ ನೋಡಲು ನಮ್ಮ ಮನೆಯಂಗಳವೀಗ ನಂದನದ ಅಂಗಳ !

ದೀಪಾವಳಿಯ ಹೊರತಾಗಿ ಮನೆಯ ವಿಶೇಷ ಕಾರ್ಯಕ್ರಮಗಳಲ್ಲೂ ಹೀಗೆಯೇ ದೀಪಗಳನ್ನು ಹಚ್ಚಿದರೆ ಸುಂದರ ಮತ್ತು ಎಣ್ಣೆ ಖಾಲಿಯಾಗುವವರೆಗೆ ದೀಪ ಆರುವ ಭಯವಿಲ್ಲ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ.
  ಇದು ದೀಪಾವಳಿ ಸ್ಪೆಶಲ್ ದೀಪ.
 ಈ ಲೇಖನ  ದಿನಾಂಕ 03-11-2012 ರ ವಿಜಯಕರ್ನಾಟಕ ಪತ್ರಿಕೆಯ ವಿ.ಕೆ  ಪ್ರಾಪರ್ಟಿಯಲ್ಲಿ  ಪ್ರಕಟವಾಗಿದೆ.

Friday, October 12, 2012

ಕಸ ಮತ್ತು ರಸ..!

''ಕಸ ಕಸ ಕಸವೆಂದೂ ಎಸೆದಾಡದಿರಿ  ನಿಮ್ಮ ಕಸದ ಕೊಳೆಯನೇನಾದರು ಬಲ್ಲಿರಾ ಬಲ್ಲಿರಾ.. ''[ದಾಸೋತ್ತಮರಲ್ಲಿ   ಕ್ಷಮೆ ಯಾಚಿಸುತ್ತಾ]   ಎನ್ನುವಂತೆ ನಮ್ಮ ಮನೆಗಳ ಮುಂದೆ ವಾರಕ್ಕೆರಡು ದಿನ ಬೆಳ್ಳಂ ಬೆಳಿಗ್ಗೆ ಕಸಪ್ಪ  ಸೀಟಿ ಹೊಡೆಯುತ್ತಾ ಗಡ ಗಡ ಸದ್ದಿನೊಂದಿಗೆ ಗಾಡಿಯನ್ನು ತಂದು ನಿಲ್ಲಿಸುತ್ತಾನೆ. ಮಕ್ಕಳಿಗೆ ಸ್ನಾನ ಮಾಡಿಸುತ್ತಿರುವರು ಅರ್ಧಕ್ಕೆ ಬಿಟ್ಟು, ಮಗಳಿಗೆ  ಜಡೆ ಬಾಚುತ್ತಿದ್ದರೆ ಹಾಗೆಯೇ ಹಿಡ್ಕೋ ಒಂಚೂರು, ಅನ್ನುತ್ತಾ ನೂಕಿ, ಗಂಡನಿಗೆ ಚಾ ಕಾಸುತ್ತಿದ್ದರೆ ಅದು ಒಲೆ  ಮೇಲೆ ಬೇಕಿದ್ದರೆ ಉಕ್ಕಿ ಹರಿಯಲಿ, ಕ್ಯಾರೆ ಮಾಡದೆ  ಎಲ್ಲ ಹೆಂಗಸರೂ  ಹಿಡಿದ ಕೆಲಸ ಬಿಟ್ಟು ಕಸದ ಬುಟ್ಟಿ ಹಿಡಿದು, ನೈಟಿ ಸರಬರ ಮಾಡಿಕೊಂಡು,ಎಡ ಗೈಲಿ  ಕೂದಲು ತಳ್ಳುತ್ತಾ, ದಾಪುಗಾಲಿಕ್ಕುತ್ತಾ ಗಾಡಿಗೆ ಕಸ ಹಾಕುವುದರಲ್ಲಿ ಬ್ಯುಸಿ..! ವಾರಕ್ಕೆರಡೇ  ಬಾರಿ ಕಸಪ್ಪನ ಆಗಮನ ನಮ್ಮ ಏರಿಯಾಕ್ಕೆ. ಮನೆಯನ್ನೇ ಮಗುಚಿ ಬಿಡುವರೆನೋ ಎನ್ನುವಷ್ಟು ಕಸ ಶೇಖರಣೆ ಯಾಗಿರುತ್ತದೆ.   ಈ ಕ್ಲಿಷ್ಟಕರ  ಸಮಯದಲ್ಲಿ ಬಡಪಾಯಿ ಗಂಡಂದಿರೇನಾದರೂ  ಪೇಪರ್ ಓದುತ್ತಾ ಕೂತಿದ್ದುದು ಕಣ್ಣಿಗೆ ಬಿದ್ದಿದ್ದೆ ಹೌದಾದರೆ ಥೇಟ್ ಶುದ್ಧ ಸೋಮಾರಿಯಂತೆಯೇ ಕಂಡು ಹೆಂಗಸರ  ಉಗ್ರ ನೇತ್ರಗಳಿಗೆ ಆ ದಿನವಿಡೀ ಈಡಾಗಬೇಕಾಗುತ್ತದೆ..!!!
ಮೊದಲೆಲ್ಲಾ   ಹಸಿ ಒಣ ಅಂತೇನೂ  ಬೇರೆ ಮಾಡದೆ ಇದ್ದ ಹಾಗೆಯೇ ಕಸ ತಗೊಂಡು ಹೋಗಿ ನಿರ್ಲಕ್ಷ್ಯವಾಗಿ ಸುರುವಿ ಬಂದಿದ್ದರೆ ಮುಗಿದು ಹೋಗುತ್ತಿತ್ತು. ಈಗ ಕಾನೂನು..ಕಾನೂನು ಬಂದಿದೆಯಲ್ಲ.  ಹಸಿ,ಒಣ ವಿಷಯುಕ್ತ ಅಂತೆಲ್ಲಾ ವಿಂಗಡಿಸಿ ಕಸ ಹಾಕಬೇಕು ಅಂತ.  ಕಾನೂನು ಆಗಲೂ ಇತ್ತು, ಬಿಗಿ ಇರಲಿಲ್ಲ. ಕಸಪ್ಪ ಸೀಟೀ ಹೊಡೆಯುತ್ತಲೇ ನೆಲದ ಮೇಲೊಂದು ಕತ್ತರಿಸಿದ  ಪ್ಲಾಸ್ಟಿಕ್ ಚೀಲವೊಂದನ್ನು ಜಮಖಾನ ಹಾಸಿದಂತೆ  ಹಾಸಿ ಎಲ್ಲ ಕಸವನ್ನೂ ಮೊದಲು ಅದರ ಮೇಲೆ ಸುರುವಲು  ತಾಕೀತು ಮಾಡಿ ಅದರಲ್ಲೇನಾದರೂ ವ್ಯತ್ಯಾಸವಾಗಿ ಹಸಿ ಒಣ  ಮಿಕ್ಸ್ ಆಗಿದ್ದು ಕಂಡು ಬಂದರೆ ಕಸ ತಂದವರ ಹತ್ತಿರವೇ ಬೇರೆ ಬೇರೆ ಮಾಡಿಸುತ್ತಾನೆ. ಈಗ ಹೆಂಗಸರಿಗೆ ರಸ್ತೆಯ ಮೇಲೆ ಕಸ ಕೆದಕುವ ಗತಿ.. ಆಚೀಚೆಯವರು ಕಸ ಗೆಬರುವುದನ್ನು ನೋಡಿಯಾರೆಂಬ ಒಂತರಾ  ಆಗುವಿಕೆ, ಈ ಎಲ್ಲದರ ಮಧ್ಯೆ ಬೆಳಗಿನ ಗಡಿಬಿಡಿ ಎಲ್ಲವೂ ಸೇರಿ ತಲೆ ಪೂರಾ ಕಸದ ತೊಟ್ಟಿ..!
ಕಸಪ್ಪನ ಸ್ಟ್ರಿಕ್ಟ್ ಆಜ್ಞೆಯ ಮೇರೆಗೆ ಈಗ ಎಲ್ಲಾ ಕಸ ಬೇರೆ ಬೇರೆ ಮಾಡಿಯೇ ಕೊಡುತ್ತಾರೆ. ಇಲ್ಲದಿದ್ದರೆ ರಸ್ತೆಯಲ್ಲಿ ಕಸ ಹೆಕ್ಕಿಸುತ್ತಾನೆ ಅವನು..ಹಾಳಾದವನು. ಕಸ ವಾಪಾಸ್ ಕಳಿಸುತ್ತಾನೆ.  ಗಂಡ ಮಕ್ಕಳಿಗೆ ಹೆದರಿಸಿಯಾದರೂ ಕಸ ವಿಂಗಡಣೆಯ ಕಾನೂನು ಪಾಲನೆ ಮಾಡುತ್ತಾರೆ ಕಸಪ್ಪನ ಕಸ ಹೆಕ್ಕಿಸುವಿಕೆಗೆ ಹೆದರಿ. ಯಾವಾಗಲೂ ಅದು ಹಾಗೆಯೇ.. ಸುಮ್ಮನೆ ಹೇಳಿದರೆ ಯಾರು ಕೇಳುತ್ತಾರೆ..? ತಲೆ ಮೇಲೆ ಮೊಳೆ ಇಟ್ಟು  ಸುತ್ತಿಗೆ ಎತ್ತಿದರೆ ಮಾತ್ರ ಹೇಳಿದ ಮಾತು ಕೇಳುವುದು.ಕಸಪ್ಪನಾದರೂ ಅಷ್ಟೇ ಅವನಿಗೆ ಅಲ್ಲಿ ಬಿಸಿ, ನಮಗೆ ಇಲ್ಲಿ ಬಿಸಿ. ಏನಾದರೂ ಆಗಲಿ ಕಸಕ್ಕೊಂದು ಗತಿಯಾಯಿತಲ್ಲಾ, ಅಭ್ಯಾಸವಾಗುವ ವರೆಗೆ ಜನರಿಗೂ ರಗಳೆ, ನಂತರ ತನ್ನಿಂದ ತಾನೇ ಸರಿಯಾಗಿ ಬಿಡುತ್ತದೆ.ಬದಲಾಗಲಿಕ್ಕೆ ಸಮಯ ಮತ್ತು ಭಯ ಬೇಕಾಗುತ್ತದೆ!  ರೂಲ್ಸ್ ಫಾಲೋ ಮಾಡಲು ಸರಿಯಾಗಿ ಬಿಗಿ ಬೇಕು! 

ಹ್ಞೂ , ಕಸದ್ದೇ   ಸುದ್ದಿಯಾಯಿತು.. ನಾನಾದರೂ ಈ ನಡುವೆ ಕೆಲವು ಒಳ್ಳೆಯ ಕೆಲಸ ಮಾಡಿ ಒಳ್ಳೆಯವಳಾಗಲು ಹೊರಟಿದ್ದೇನೆ. ಕೆಲವಾರು ಚಿತ್ರ ಪತ್ರ ಬರೆದು ಖುಷಿ ಪಡುತ್ತಿದ್ದೇನೆ. ನಿಜ, ನನ್ನ ಈ ಚಿತ್ರ ಬರೆಯುವ ವಿಚಾರಕ್ಕೆ ಮಹಾ ಇತಿಹಾಸವೇ ಇದೆ ನಂಬಿ!  ಬಾಲ್ಯದಿಂದಲೂ ಚಿತ್ರ ಬರೆಯುತ್ತಿದ್ದುದರಿಂದ ಮತ್ತು ಈಗಲೂ ಅದೇ ತೆರದಲ್ಲಿ ಬರೆಯುವುದರಿಂದ ನನ್ನನ್ನು ನೀವು 'ಬಾಲ ಕಲಾವಿದೆ' ಎಂದು ಬೇಕಾದರೆ ಈಗಲೂ  ಕರೆಯಿರಿ  ಪರವಾಗಿಲ್ಲ..:)

ಹೈಸ್ಕೂಲು, ಕಾಲೇಜು ಕಲಿಯುವಾಗ ನನ್ನ ನೋಟ್ಸು, ರೆಕಾರ್ಡುಗಳ ರಕ್ಷಾ ಪುಟದ  ಮುಂಬದಿ ಮತ್ತು ಹಿಂಬದಿ,  ಮೊದಲ ಪುಟ, ಕೊನೆಯ ಪುಟ, ಮಧ್ಯದ ಪುಟ ಹೀಗೆ ಪುಸ್ತಕದ ಅನೇಕ ಕಡೆ ಚಿತ್ರ ಬರೆದಿಟ್ಟುಕೊಳ್ಳುತ್ತಿದ್ದೆ. ನನ್ನ ಪುಸ್ತಕವೊಂದೇ  ಅಲ್ಲದೆ ಗೆಳತಿಯರ ನೋಟ್ ಬುಕ್ಕುಗಳ ಮೇಲೂ. 'ಏ ನನಗೊಂದು ಚಿತ್ರ ಬರ್ಕೊಡೇ,' ಅನ್ನುತ್ತಾ ಒಬ್ಬೊಬ್ಬರಾಗಿ ತಮ್ಮ ನೋಟ್ಸ್ ಗಳನ್ನೂ ನನ್ನ ಮುಂದಿಡುತ್ತಿದ್ದರು.  ನಾನು  ಒಳ್ಳೆ ಆಸ್ಥಾನ ಕಲಾವಿದೆಯ ಹುರುಪಿನಲ್ಲಿ ಯಾರಿಗೂ ಇಲ್ಲವೆನ್ನದೇ ಎಲ್ಲರ ಪುಸ್ತಕದ ಮೇಲೂ ನವಿಲು, ಚಿಟ್ಟೆ, ಹೂಬಳ್ಳಿ, ತರತರ ಡಿಸೈನುಗಳೂ, ದೇವರುಗಳೂ, ತೀರಾ ಆಪ್ತರಿಗೆ ಎರಡೆರಡು ಚಿತ್ರಗಳೂ, ಹೀಗೆ ಬರೆದು ಪ್ರಾಕ್ಟೀಸ್ ಮಾಡುತ್ತಿದ್ದೆ. ಲೀಸರ್ ಪೀರಿಯಡ್ಡಿನಲ್ಲಿ , ಊಟದ ಸಮಯದಲ್ಲಿ, ಬಸ್ಸಿಗೆ ಕಾಯುತ್ತಿರುವ ಸಮಯದಲ್ಲಿ ಕೂರುವ ವ್ಯವಸ್ಥೆಯಿದ್ದರೆ, ಬಸ್ಸಿನಲ್ಲಿ, ಹೀಗೆ ಎಲ್ಲೆಂದರಲ್ಲಿ ನನ್ನ ಗೆಳತಿಯರಿಗೆ ಚಿತ್ರ ಬರೆದು ಕೊಡುತ್ತಿದ್ದೆ.  ನನ್ನ ಗೆಳತಿಯರ ಮಧ್ಯೆ  ಆಗ ನಾನು ಸಿಕ್ಕಾಪಟ್ಟೆ ವರ್ಲ್ಡ್ ಫೇಮಸ್ಸು!

ನನ್ನದೊಂದು ಸಮಸ್ಯೆ ಎಂದರೆ ಏನೋ ಮೂಡು ಬಂದಾಗ ಬರೆದು ಬಿಡುತ್ತೇನೆ. ಮತ್ತೆ ವರ್ಷಗಟ್ಟಲೆ ಬರೆಯದಿದ್ದರೂ ಆದೀತು.  ಯಾರಾದರೂ ಬರ್ಕೊಡು  ಅಂದಾಗ ಮಾತ್ರ  ನನಗೆ ಬರೆಯುವ ನೆನಪಾಗಿ ಬಿಡುತ್ತದೆ ಮಹಾ ದೊಡ್ಡದಾಗಿ.  ಹೀಗೆ ಸುಮ್ಮನೆ ಫೇಸ್ ಬುಕ್ಕಿನ ಗೆಳತಿಗೆ ಸರ್ಪ್ರೈಸ್ ಮಾಡಲು ಒಂದು ಚಿತ್ರ ಬರೆದು ಗೋಡೆಗೆ ತೂಗು ಬಿಟ್ಟಿದ್ದೆ. ಎಲ್ಲರೂ ಅದನ್ನು ಅವರೇ ಅಂತ ಗುರುತಿಸಿ ನನಗೇ  ಸರ್ಪ್ರೈಸ್ ಮಾಡಿದರು!  ಅಲ್ಲಿಂದ ಮುಂದೆ  ನನಗೆ ನನ್ನ ಶಾಲಾ ದಿನಗಳೇ ಎದುರಿಗೆ ಬಂದಿತು. ನಂದೊಂದು ಚಿತ್ರ ಬರ್ಕೊಡಿ. ಅನ್ನುವ ಸ್ನೇಹಮಯ ಬೇಡಿಕೆಗಳು. ಎಲ್ಲರ ಕಾಲ್ಪನಿಕ ನೋಟ್ಸುಗಳು.  ನನ್ನ ಎಲ್ಲಾ ಚಿತ್ರಗಳು ಏನು ಬರೆದಿದ್ದೀನೋ ಅದೇ ಆಗಿರುತ್ತದೆಂಬ ನಂಬಿಕೆ ನನಗೆ ಯಾವತ್ತೂ ಇಲ್ಲವಾದರೂ ಸುಮಾರು ಜನರ ಚಿತ್ರ ಬರೆದೆ.  ನಾನು ಚಿತ್ರಿಸಿದ ಗೆಳತಿಯರು ಹೋಲಿಕೆ ಇದೆಯೋ ಇಲ್ಲವೋ ಅಂತೂ ಚೆನ್ನಾಗಿದೆ ಅಂತ ಒಪ್ಪಿಕೊಂಡು ನನ್ನ ಬೆನ್ನು ತಟ್ಟಿ,  ಕಾಮೆಂಟು ಕುಟ್ಟಿ ನನಗೆ ಇನ್ನಷ್ಟು ಚಿತ್ರಿಸಲು ಪ್ರೋತ್ಸಾಹ ಕೊಡುತ್ತಿದ್ದಾರೆ. ನನ್ನ ಪೆನ್ಸಿಲ್ಲಿನ ಒರಟು ರೇಖೆಗಳಲ್ಲಿ  ಅವರ ಮುಖಗಳನ್ನು ಸುರೂಪವಾಗಿಸಿದ್ದೆನೆಯೋ ಕುರೂಪವಾಗಿಸಿದ್ದೇನೆಯೋ ಅಂತೂ ನನಗೆ ಮಾತ್ರ   ಅನೇಕ ರೀತಿಯ ಮುಖಗಳು ಸಿಕ್ಕು ನನ್ನ ಭಾವಚಿತ್ರ ಬರೆಯುವ ಕಲೆ ನನಗೇ ಅರಿವಿಲ್ಲದಂತೆ   ಅಭಿವೃದ್ಧಿಯಾಗುತ್ತಿದೆ. ನನಗೆ  ಯಾರಾದರೂ, ಬರೀ... ಅಂತ ನನ್ನ  ನೂಕ ಬೇಕು. ಇಲ್ಲದಿದ್ದರೆ ಬರೆದರಾಯಿತು ಅಂದುಕೊಂಡು ನಾಳೆಗೆ  ಇಟ್ಟುಕೊಳ್ಳುತ್ತೇನೆ. ಅದು ವರ್ಷ ಗಟ್ಟಲೆ ಮುಂದುವರೆದು ಬಿಡುತ್ತದೆ. ಈ ಕಸ ಹಾಕುವ ಕಾನೂನಿನಂತೆಯೇ. ಸ್ವಲ್ಪ ಒತ್ತಾಯ ಬೇಕು.ಜೊತೆಗೆ  ಮುಲಾಜು ಬೇಕು..!

 ಕೆಲವು  ಚಿತ್ರಗಳು.






















ಅಂತೂ ಇಂತೂ ಈ ಮೂರು ವರ್ಷಗಳು ನೀವು ನನ್ನ ರಗಳೆಯನ್ನು ಸಹಿಸಿಕೊಂಡು ಮತ್ತಷ್ಟು ರಗಳೆ ಮಾಡಲು ಅವಕಾಶ ಮಾಡಿಕೊಟ್ಟಿದ್ದೀರಿ.   ಟೆಕ್ನಾಲಜಿಯಲ್ಲಿ ನಾನು ಯಾವತ್ತೂ ಹಿಂದೆ ಮತ್ತು ಕಂಪ್ಯೂಟರ್ ನಲ್ಲಂತೂ ನಾನು ಅನಕ್ಷರಸ್ತೆ.  ಈಗೀಗ ವಯಸ್ಕರ ಶಾಲೆಯಲ್ಲಿ ಅಕ್ಷರ ಕಲಿಯುವಂತೆ ಮಕ್ಕಳಿಂದ ಚೂರು ಪಾರು ಕಲಿತುಕೊಂಡು ಬ್ಲಾಗು ಫೇಸ್  ಬುಕ್  ಬಳಸುವುದನ್ನು  ಗೊತ್ತು   ಮಾಡಿಕೊಂಡಿದ್ದೇನೆ. ಆದರೂ ಎಷ್ಟು ಮಾಡಿದರೂ ಕಾಗುಣಿತ ತಪ್ಪಿ ಹೋಗಿಬಿಡುತ್ತದೆ. ಸರಿ ಮಾಡಲು ಮತ್ತೆ ಕಷ್ಟ ಪಡಬೇಕು. ಕನ್ನಡವನ್ನು ಇಂಗ್ಲೀಷಲ್ಲಿ ಬರೆದು ಇಂಗ್ಲೀಷನ್ನು ಕನ್ನಡದ ಇಂಗ್ಲೀಶ್ ಸ್ಪೆಲ್ಲಿಂಗ್ ನಲ್ಲಿ ಬರೆಯುವ ಮಟ್ಟಕ್ಕೆ ಹೋಗಿಬಿಟ್ಟಿದ್ದೇನೆ. ಹೀಗೆ ಆಗಾಗ ಆಗುವ ಅಪಸವ್ಯವನ್ನು ತಿದ್ದುತ್ತಾ  ಮತ್ತೆ ಮತ್ತೆ ಬರೆಯಲು ಎಳಸುವ ನಿಮ್ಮ ಪ್ರೋತ್ಸಾಹಕರ ನುಡಿಗಳನ್ನು  ಈ ನಾಲ್ಕನೆಯ ವರ್ಷಕ್ಕೆ ಕಾಲಿಡುವ ಸಮಯದಲ್ಲಿ  ಮತ್ತೊಮ್ಮೆ ನೆನಪಿಸಿಕೊಳ್ಳುತ್ತಿದ್ದೇನೆ.

ಎಲ್ಲರಿಗೂ ವಂದನೆಗಳು.












Tuesday, September 4, 2012

ಕನಸು ಮಾರಲು ಬಂದ!






ಬೀನ್ ಬ್ಯಾಗಿಗೆ ಸುರಿಯಲು  ಥರ್ಮಾಕೋಲ್ ಮಣಿಗಳನ್ನು  ತಂದ ದೊಡ್ಡ  ಪ್ಲಾಸ್ಟಿಕ್ ಕವರು ಅವತ್ತು ನನ್ನ ಮಗನ ಆಟದ ವಸ್ತುವಾಗಿತ್ತು.  ಅಲ್ಲಲ್ಲಿ ಹೆಕ್ಕಿದಂತೆ ನಟಿಸುತ್ತಾ ಅದರ  ಅಗಲ ಬಾಯಿಗೆ ಅದೇನನ್ನೋ ತುಂಬುತ್ತಿದ್ದ. ನನಗೆ ಕುತೂಹಲ, ಕೇಳಿದೆ,

ಅವನು ಡ್ರೀಮ್ ಕಲೆಕ್ಟರ್ ಅಂತೆ, ಎಲ್ಲರ ಕನಸುಗಳನ್ನು ತುಂಬಿಕೊಂಡು ಬೇಕಾದವರಿಗೆ ಬೇಕಾದ ಕನಸು ಮಾರುತ್ತಾನಂತೆ, ಬೇಕಾದವರಿಗೆ ಬೇಕಾದ ಕನಸು!   ನೀವೂ ಬೇಕಿದ್ದರೆ ಈ ಕನಸು ವ್ಯಾಪಾರಿಯಿಂದ ಕನಸು ಕೊಳ್ಳಬಹುದು..!



Saturday, March 3, 2012

ಮಂಟಪ ಕಟ್ಟಿರಿ..!


 ಮದುವೆ, ಉಪನಯನ, ಚೌಲ, ನೂತನ  ಗೃಹಪ್ರವೇಶ  ಹೀಗೆ   ಕಾರ್ಯದ ಮನೆಗಳು ಸಾಲು ಸಾಲಾಗಿ ಬರುತ್ತಿವೆ.. ಒಂದರ ಹಿಂದೊಂದು, ಜೊತೆ ಜೊತೆಗೆ  ಒಮ್ಮೆಲೇ ರಶ್ಯಿನಲ್ಲಿ ಶುರುವಾಗುತ್ತವೆ. ಕೆಲಸಕಾರ್ಯಗಳು ವೇಗ ಗತಿಯಲ್ಲಿ ಸಾಗುತ್ತವೆ.  ಮದುವೆ, ಉಪನಯನಕ್ಕೆ ಮಂಟಪ ಕಟ್ಟುವ ಚತುರರಿಗೆ ತಮ್ಮ  ಕಾರ್ಯ ಕೌಶಲ್ಯವನ್ನು ತೋರಲು ಒಳ್ಳೆಯ ಅವಕಾಶ ಸಿಗುತ್ತದೆ.  ಹೆಚ್ಚಿನ ಖರ್ಚಿಲ್ಲದೆ ಸುಲಭವಾಗಿ ಕಟ್ಟಬಹುದಾದ ಮಂಟಪಕ್ಕೆ ಒಂದು ಚಂದದ ಉದಾಹರಣೆ ಇಲ್ಲಿದೆ..

 ಬೆಲ್ಲದ ಡಬ್ಬಕ್ಕೆ ಬಣ್ಣ ಬಳಿದು ಮೇಲಿಂದ ಶೇಡಿ ಬರೆದದ್ದು..










ಪಾಂಡವರಡಿಕೆ  ಗಿಡವನ್ನು   ಕಿತ್ತು   ತಂದು  ಡಬ್ಬದಲ್ಲಿ ಮರಳು ಹಾಕಿ ಅದರಲ್ಲಿ ಹುಗಿಯಲಾಗಿದೆ.ಮನೆಯ ಹಿತ್ತಲಲ್ಲಿರುವ ಕೆಲ ಚಂದದ ಗಿಡದ ಹೆಣಿಕೆಗಳನ್ನು ಕಿತ್ತು ತಂದು  ಡಬ್ಬದಲ್ಲಿ ಊರಲಾಗಿದೆ.


 ಖರ್ಚಿಲ್ಲದ ಚಂದದ ಮಂಟಪ 
 ಶೇಡೀ  ಬರೆಯಲು  ಮಾತ್ರಾ  ಎರಡು  ದಿನ  ನನಗೆ  ಖರ್ಚಾಯಿತು...:))   ಅಣ್ಣನ  ಮಗನ ಉಪನಯನಕ್ಕೆ..

Thursday, January 5, 2012

ಗೋಲ್ಕೊ೦ಡ ಕೋಟೆಯ ಕೆಲ ನೆನಪುಗಳು.

 ಹೈದರಾಬಾದಿನಲ್ಲಿ ನೋಡಿದ ಸ್ಥಳಗಳಲ್ಲಿ ನನ್ನನ್ನು ಸೆಳೆದದ್ದು ಈ ಕೋಟೆ.
  ಕೋಟೆ ಕೊತ್ತಲಗಳನ್ನು ನೋಡಲು ಅದೇಕೋ ತುಂಬಾ ಇಷ್ಟ. ಆಗಿನ ಕಾಲದ ಜನ ಜೀವನ ಹೇಗಿರಬಹುದು ? ಅವರೇನು ಮಾಡುತ್ತಿದ್ದರು? ಅಲ್ಲಿಯ ವಾಸ್ತು ಶಿಲ್ಪದ ವಿಶೇಷತೆ ಇವೆಲ್ಲ ಮನಸ್ಸನ್ನು ಕಾಡಲು ಶುರುಮಾಡಿಬಿಡುತ್ತವೆ.


 ಇಲ್ಲಿಂದ ಕೋಟೆ  ಹತ್ತಲು ಶುರು...









 ಬಾಲ ಹಿಸಾರ್ ದ್ವಾರ ..



 ಬಾಲಹಿಸಾರಿನ ದ್ವಾರದ ಒಳಭಾಗದಲ್ಲಿ ಚಾವಣಿಯನ್ನು ಗಮನಿಸಿ.  ಇದರ ಕೆಳಗೆ  ಚಪ್ಪಾಳೆ ತಟ್ಟಿದರೆ ಅದು ಕೋಟೆಯ  ಮೇಲ್ಭಾಗದಲ್ಲಿ ಕೇಳಲ್ಪಡುತ್ತಿತ್ತಂತೆ.   ದ್ವಾರಪಾಲಕರು ಚಪ್ಪಾಳೆ ತಟ್ಟುವುದರ ಮೂಲಕ ಒಳಪ್ರವೇಶಿಸಿದವರು ಮಿತ್ರರೊ? ಶತ್ರುಗಳೋ  ಎಂಬ ಸೂಚನೆಯನ್ನು ರಾಜನಿಗೆ  ರವಾನಿಸುತ್ತಿದ್ದರಂತೆ.



 ದರ್ಬಾರ್ ಹಾಲ್  ನ ನೋಟ ದೂರದಿಂದ..!



 ಈ ಕಲ್ಲು ನೋಡಿ, ಎರಡು ಕ್ವಿಂಟಾಲ್ ಇದೆಯಂತೆ. ಇದನ್ನು ಎತ್ತಿದವರಿಗೆ ಕುತುಬಶಾಹಿ ರಾಜರ ಸೈನ್ಯದಲ್ಲಿ  ಕೆಲಸ ಗ್ಯಾರಂಟಿ.ತಲೆಗಿಂತ ತಾಕತ್ತಿಗೆ ಬೆಲೆ...! ಇದನ್ನು ಯಾರೂ ಕದ್ದುಕೊಂಡು ಹೋಗಿಲ್ಲ ನೋಡಿ..!!



 ಕೋಟೆಯ ಒಳ ಬರುವವರನ್ನು , ಹೋಗುವವರನ್ನು ಪರೀಕ್ಷಿಸುವ ಚೆಕಿಂಗ್ ಏರಿಯ ..



ನಟರಾಜ್...



ತಾರಾಮತಿ ಪ್ಯಾಲೇಸ್.  ರಾಣಿಯ ನೆಂಟರಿಷ್ಟರು ಉಳಿದುಕೊಳ್ಳಲು ಇಲ್ಲಿ ವ್ಯವಸ್ಥೆಯಂತೆ. ಇಲ್ಲಿ ಗೋಡೆಗಳಿಗೂ ಕಿವಿಗಳಿವೆ ಮಾರಾಯ್ರೇ.!  ಕೋಣೆಯ    ಒಂದು ಮೂಲೆಯಲ್ಲಿ ಮಾತನಾಡಿದರೆ ಇನ್ನೊಂದು ಮೂಲೆಗೆ, ಮಧ್ಯದಲ್ಲಿ ಮಾತಾಡಿದರೆ ಮೇಲಿನ ಕೋಣೆಗೆ, ಹೀಗೆ ಯಾರು ಏನು ಪಿಸುಗುಟ್ಟಿದರೂ ಕೇಳಿಸುತ್ತದೆ. ನಾವು ಸುಮಾರು ಟ್ರಯಲ್ ಮಾಡಿದೆವು..! ಏನೇ ಮಸಲತ್ತು ಮಾಡಿದರೂ ಗೊತ್ತಾಗುವ ಹಾಗೆ ವ್ಯವಸ್ಥೆ ..! ಇಲ್ಲಿ ಯಾವ ಗುಟ್ಟು ಮಾಡಿದರೂ ಅದು ರಟ್ಟು ...




 ಕೋಟೆಯ  ತುದಿಯಲ್ಲಿರುವ  ಅರಮನೆಯ ಮೇಲೆ ಚಾರ್ಮಿನಾರಿನ ಪ್ರತಿರೂಪ.  ಇದಕ್ಕೆ ನೇರವಾಗಿ  ಎಂಟು   ಕಿ.ಮೀ. ದೂರದಲ್ಲಿ ಚಾರ್ ಮಿನಾರ್ ಇದೆ.( ಚಾರ್ಮಿನಾರ್ ನೋಡಲು ಸುಂದರವಾಗಿದೆ. ಅಲ್ಲಿ ಹೋದಾಗ ಅದರ ಸೌಂದರ್ಯವನ್ನು ಮಾತ್ರ ನೋಡಬೇಕು.. ! ಕಾಲು ಬುಡ ನೋಡಬಾರದು.. ಅಲ್ಲಿಯ ಸುತ್ತಲಿನ  ಸ್ಥಳ ನನಗೆ ರಾಜರ ಪೀಕದಾನಿಯನ್ನು    ನೆನಪಿಸಿತು. ಅದು ಹೈದರಾಬಾದಿನ ಪೀಕದಾನಿ ...!!)




ಕೋಟೆ ಹತ್ತಲು ಮೆಟ್ಟಿಲುಗಳು..



ಕರ್ಟನ್ ವಾಲ್ .. ಸೈನಿಕರು ಯುದ್ಧದ ಸಮಯದಲ್ಲಿ  ಶತ್ರುಗಳ ಚಲನವಲನವನ್ನು ಇದರ ಮರೆಯಿಂದ  ಗಮನಿಸುತ್ತಿದ್ದರಂತೆ..



 ಬಾಲಹಿಸಾರಿನ ಮೆಟ್ಟಿಲು  ಹತ್ತಿ  ದರ್ಬಾರ್ ಹಾಲ್ ನೋಡಲು ಹೋಗಬೇಕಿದೆ.. ಆಗ ನಾನು..!!!!


ಕೋಟೆಯ ಮೇಲಿನಿಂದ ಕೆಳಗೆ ನೋಡಿದರೆ ಹಾಳಾದ ವಾಸ್ತುಶಿಲ್ಪಗಳು, ಅರಮನೆಗಳು ಒಂದೇ ದೃಷ್ಟಿಗೆ ನಿಲುಕುತ್ತವೆ.



ಕೋಟೆಯ ಮೇಲಿನಿಂದ ಕೆಳಗೆ ನೋಡಿದಾಗ ...:( 



ನೀರು ಸಂಗ್ರಹಕ್ಕೆ.. 
ಆಗಲೇ ಅವರು ಮಳೆ ಕೊಯ್ಲು ಮಾಡುತ್ತಿದ್ದರಂತೆ. ಯುದ್ಧದ ಸಮಯದಲ್ಲಿ  ನೀರಿನ ಅಭಾವವಾಗದಿರಲು ನೀರು ಶೇಖರಣೆ ಮಾಡುತ್ತಿದ್ದರಂತೆ.


ವಾತಾಯನ ವ್ಯವಸ್ಥೆಗೆ ..ಕಿಂಡಿ.


ಇದು ಏರ್ ಕಂಡಿಶನ್  ವ್ಯವಸ್ಥೆ, ಗೋಡೆಯಲ್ಲಿ ಹುದುಗಿಸಿದ  ಮಣ್ಣಿನ ಪೈಪುಗಳ ಮೂಲಕ ನೀರು ಸಂಚಲನೆ.

ಆಗಿನ ಕಾಲದ ರಾಜರ ವೈಭವಗಳನ್ನು ಆಯಾ ಸ್ಥಳಗಳಲ್ಲಿಯೇ ಕಲ್ಪಿಸಿಕೊಳ್ಳಲು ಒಂತರಾ ಮಜಾ.ಅವರದ್ದೇನು ವೈಭೋಗ, ಆರ್ಭಟ !     ಆದರೂ ಈಗಿನಂತೆ ವಿಮಾನು, ಇಂಟರ್ನೆಟ್ಟು, ಮೆಟ್ರೋ ಟ್ರೇನು ಇದೆಲ್ಲ ಇರಲಿಲ್ಲ ಬಿಡಿ. ಸಾಮಾನ್ಯ ಜನರಾದರೂ   ನಾವೇ ಬೆಟರ್ರು.. :)



Friday, October 14, 2011

ಅಲ್ಲಿಂದ ಇಲ್ಲಿಗೆ.... ಇಲ್ಲಿಂದ ಎಲ್ಲೆಲ್ಲಿಗೋ..!!

  


ನಾನು ಈಸಲ ಬೇಸಿಗೆ ರಜೆ ಪ್ರಯುಕ್ತ ಊರಿಗೆ ಹೋಗಿದ್ದೆನಲ್ಲ. ಪ್ರತಿ ದಿನ ಹೆಚ್ಚು ಕಡಿಮೆ ಮದುವೆ,  ಉಪನಯನ, ಚೌಲ, ಹೀಗೆ ದಿನಾಲೂ ಕಾರ್ಯದ ಮನೆ ತಿರುಗಿದ್ದೇ ತಿರುಗಿದ್ದು.ನನಗೆ ಅದೆಲ್ಲ ಸಿಕ್ಕುವುದು ಅಪರೂಪ ಈಗೀಗ. ಸಿಕ್ಕಾಗ ಬಿಡಬಾರದು ಹಳೆಯ ಗೆಳತಿಯರು,ಪರಿಚಯದವರು, ನೆಂಟರಿಷ್ಟರು ಸಿಗುತ್ತಾರೆನ್ನುವ ಮನೋಭಾವದಲ್ಲಿ ಎಲ್ಲದಕ್ಕೂ ಭಾಗವಹಿಸುವ ತವಕ ನನ್ನದು.
ಒಂದೆರಡಕ್ಕೆ ನನ್ನ ಜೊತೆ ಮಕ್ಕಳೂ ಬಂದವರು,  ಮತ್ತೆ ಇಂತವರ ಮನೆಯ... ಇದು ಇದೆ ಬನ್ನಿ ಹೋಗೋಣ ಎಂದರೆ.. ''ಅಮ್ಮ ನಿನಗೆ ಯಾವ ಯ್ಯಾಂಗಲ್ಲಲ್ಲಿ ಕೈ ಮುಗೀ ಬೇಕು ಹೇಳು.. ನಿನ್ಮನೆ ಕಾರ್ಯದ ಮನೆಗೆ ಮಾತ್ರಾ ಕರಿಯಡ''ಎಂದರು. ನನ್ನ ಮಗಳು ’ಕಾರ್ಯದ ಮನೆ  ’ ಎನ್ನುವ ಶಬ್ಧವನ್ನು ಉರುಹೊಡೆದು ಇಟ್ಟುಕೊ೦ಡಿದ್ದಾಳೆ. ಅದು ಅವಳಿಗೆ ಸೋಜಿಗದ ಶಬ್ಧ.  ''ಯಂತಾತು ನಿಂಗಕ್ಕೆ.. ಅಲ್ಲಿ ಎಷ್ಟ್ ಜನ ಪರಿಚಯ ಆಗ್ತು ಗೊತ್ತಿದ್ದಾ..? ಹುಡ್ರನ್ನ ಕರ್ಕ ಬರ್ಲ್ಯನೆ ಕೇಳ್ತಾ.   ಸುಮ್ನೆ ಬನ್ನಿ.''.ಅಂದರೆ, ”ನಿನಗೊಂದು ಅಲ್ಲಿ ಯಾರ್ಯಾರೋ ಸಿಗ್ತಿರ್ತ.   .  ಮೆಗಾ ಸೀರಿಯಲ್ ತರಾ  ಮಾತಾಡ್ತಾ  ಇರ್ತಿ.  ಒಳ್ಳೆ ಬ್ಲಾಕ್ ಎಂಡ್  ವೈಟ್ ಸಿನ್ಮಾ ಡೈಲಾಗ್ಸ್  ಇದ್ದಂಗಿರ್ತು ನಿಂಗಳ ಡೈಲಾಗ್ಸು.  ಅದ್ನ ಕೇಳಕ್ಕೆ ನಾವ್  ಬತ್ವಲ್ಲೇ.   ಕಡೀಗೆ ಮನೆಗೆ ಬರಕಿದ್ರೆ , ಮತ್ತೆ ಹಂಗಾರೆ ನಮ್ಮನಿಗೆ ಬರ್ರೆ.. ಒಂದ್ಸಲಾ.  ಎನ್ನುವ ಬೋರಿಂಗ್ ಕ್ಲೈಮಾಕ್ಸು'' ಎಂದು ನನ್ನ ಮುಖಕ್ಕೆ ತಿವಿದರು.

 ಅದೂ ಸತ್ಯ. ಅವರಿಗೆ ದಿನನಿತ್ಯ ಶಹರದ ಜನಜ೦ಗುಳಿಯ ನಡುವೆ ಒಡನಾಡಿ ಆಡಿ ಬೇಸರ. ಮಲ್ಲೇಶ್ವರ೦ ಯೆಯ್ತ್ ಕ್ರಾಸ್ ಗೆ ಒಮ್ಮೆ ಹೋಗಿ ಬ೦ದರೆ ಜಾತ್ರೆಗೆ ಹೋಗಿ ಬ೦ದ ಅನುಭವ ನೀಡುತ್ತದೆ. ಮತ್ತೆ ಇಲ್ಲೂ ಅದೇ ತರ ಗಿಜಿಗುಡುವ ಜನ ಅವರಿಗೆ ಬೇಡ.  ಅರಾಮಾಗಿ ಅಜ್ಜನ ಮನೆಯಲ್ಲಿ ಮಕ್ಕಳೊ೦ದಿಗೆ ವಿಶಾಲವಾದ ಜಾಗದಲ್ಲಿ ಸ್ವೇಚ್ಚೆಯಿ೦ದ ಆಡಿಕೊ೦ಡಿರಲು ಅವಕ್ಕೆ ಇಷ್ಟ.  ಮರಗಿಡಗಳ ನಡುವೆ ನಾಯಿ,ಬೆಕ್ಕು, ದನಕರು, ಚಿಲಿಪಿಲಿಗುಟ್ಟುವ ಹಕ್ಕಿಗಳು ಇವುಗಳ ಜೊತೆ ತಮ್ಮದೇ ಭಾಷೆಯಲ್ಲಿ ಸ೦ವಹಿಸುತ್ತಾರೆ. ಶಿಶಿರ ಅ೦ತೂ ಎಲ್ಲಿಗೆ ಬಾ ಎ೦ದು ಕರೆದರೂ 'ನಾಯಿ ಕರಿಯನನ್ನೂ ಕರೆದುಕೊ೦ಡು ಹೋಗೋಣವಾ,' ಎ೦ದು ಕೇಳುತ್ತಾನೆ.



  ಮಾವನಿಗೆ ಹೇಳಿದ್ದಾನೆ ತನಗೊ೦ದು ಪುಟ್ಟೀಕರ ಮತ್ತು ಅದರ ಅಮ್ಮ ಬೇಕೇ ಬೇಕೆ೦ದು. ಬೆ೦ಗಳೂರಿಗೆ ಮರಳುವಾಗ ಕೊಡುತ್ತೇನೆ೦ದು ಮಾವ ಮಾತುಕೊಟ್ಟಿದ್ದ. ದನ ಕರು ಎಲ್ಲ ಎಲ್ಲಿ ಕಟ್ಟಿಹಾಕುತ್ತೀಯೆ೦ದು ಕೇಳಿದ್ದಕ್ಕೆ ಅಪ್ಪನ ಕಾರುಶೆಡ್ಡಿನಲ್ಲಿ ಮತ್ತು ಅಪ್ಪಅಮ್ಮ ಕೊಟ್ಟಿಗೆ ಚಾಕರಿ ಮಾಡುತ್ತಾರೆಂದು ನಿರ್ಧಾಕ್ಷಿಣ್ಯವಾಗಿ ನಮಗೆ ಕೆಲಸ ಕೊಟ್ಟು,  ಅಕ್ಕಚ್ಚು, ನೀರು ಐಶು ಕೊಡುತ್ತಾಳೆ ಮತ್ತು ತಾನೇ ಹುಲ್ಲು ಹಾಕುತ್ತೇನೆ೦ದು ಎಲ್ಲರಿಗೂ ಕೆಲಸ ಬೇರೆ ಹ೦ಚಿ   ಐಶುವನ್ನು ನೇರವಾಗಿ ಮೂರನೇ ಮಹಾಯುದ್ಧಕ್ಕೆ ಆಹ್ವಾನಿಸಿದ್ದ.   '' ಏ.., ಹೋಗೆಲೋ ನೀನೆ ಅಕ್ಕಚ್ಚು ನೀರು  ಕೊಟ್ಟುಕೋ  ಬೇಕಿದ್ದರೆ, ” ಎ೦ದು ಅವಳು ಜಗಳ  ತೆಗೆದು   ಅವನನ್ನು ಅಟ್ಟಿಸಿಕೊ೦ಡು ಹೊರಟಳು.  ನಾವೇನೋ ಈ ಶತಮಾನದ ಯುದ್ಧವನ್ನು ನಮ್ಮನೆಯಲ್ಲಿಯೇ  ನೋಡಬೇಕಾದೀತೇನೋ ಎ೦ದು ಹಿ೦ದೆಯೇ ಹಿ೦ಬಾಲಿಸಿಕೊ೦ಡು ಬ೦ದರೆ ಇಬ್ಬರೂ ಮಾವನ  ಮಕ್ಕಳ  ಜೊತೆಗೆ ಅ೦ಗಳದ ತುದಿಯಲ್ಲಿ ಬೆಳೆದಿರುವ ಚದುರ೦ಗದ ಗಿಡದ ಮೇಲೆ ಮೊದ್ದಾಗಿ ಮಲಗಿರುವ ಓತಿಕ್ಯಾತವೊ೦ದನ್ನು    ನೋಡುವುದರಲ್ಲಿ     ತಲ್ಲೀನರಾಗಿದ್ದರು.    ಮಕ್ಕಳದು ಪ್ರತಿಯೊ೦ದನ್ನೂ ಶೋಧಿಸಿ, ಕೆದಕಿ ವಿವರವನ್ನು ಪಡೆಯುವ ಗುಣ. ಕಣ್ಣಿಗೆ ಕ೦ಡಿದ್ದನ್ನೆಲ್ಲಾ 'ನಮ್ಮನೇಲಿ  ಸಾಕೋಣ' ಅನ್ನುತ್ತಾನೆ ನನ್ನ ಮಗ.ಓತಿಕ್ಯಾತವನ್ನೂ ಸಾಕೋಣ ಅ೦ದರೆ ಕಷ್ಟ ಎ೦ದುಕೊ೦ಡು 'ಅದು ಸಾಕುಪ್ರಾಣಿ ಅಲ್ಲ ಕಣೊ,' ಎ೦ದು ಐಶು ಮುನ್ನೆಚ್ಚರಿಕೆಯಿಂದ  ವಿವರಣೆ ಕೊಡುತ್ತಿದ್ದಳು. ಹಿಂದೊಮ್ಮೆ ಹಾಗೆಯೇ ಆಗಿತ್ತು. ಅವನು ಸುಮಾರು  ಮೂರು ವರ್ಷ ಇದ್ದಾಗ ''ಬಾಲ ಗಣೇಶ ''  ಸೀಡಿ ನೋಡಿ ನೋಡಿ   ನಮ್ಮನೆಯಲ್ಲೂ  ಇಲಿ ಸಾಕೋಣ ಎಂದಿದ್ದ. ''ಗಣೇಶನಿಗಾದರೆ ಇಲಿ ಇದೆ ನನಗೂ ಬೇಕು,'' ಎಂದು ಅಪ್ಪನ ಜೀವ ತಿಂದು ಸಾಕು ಬೇಕು ಮಾಡಿದ್ದ. ಐಶು ''ಜೊತೆಗೆ ಬೆಕ್ಕನ್ನೂ ಸಾಕೋಣ; ಆಮೇಲೆ ಇಲಿ ಹಿಡಿಯಲು ಬೇಕಾಗುತ್ತದೆ, ''ಎಂದು ಕೆಣಕಿ,   ಇಲ್ಲದ ಇಲಿ ಮತ್ತು ಬೆಕ್ಕಿನ ವಿಷಯವಾಗಿ ಸುಮಾರು ಹೊತ್ತು ಮನೆ ರಣಾಂಗಣವಾಗಿತ್ತು.ಅದನ್ನೇ ನೆನೆದು  ರಾಜೀ ಪಂಚಾಯ್ತಿಕೆ ಮಾಡಲು ನಾನು ಸಡಗರದಿಂದ ಬಂದದ್ದೆ ಬಂತು, ಅದಕ್ಕೆ ಅವಕಾಶವನ್ನೇ ಕೊಡದೆ ಓತಿಕ್ಯಾತ ಮುಗುಳ್ನಗುತ್ತಾ ಕುಳಿತಿತ್ತು.



ಮಕ್ಕಳಿಗೆ  ಹಾರಲು, ಕುಣಿಯಲು, ಓಡಲು, ಬೀಳಲು ಸಾಕಷ್ಟು ಜಾಗವಿದೆ ಊರಲ್ಲಿ. ನೋಡ್ತಾ ನೋಡ್ತಾ ಎಷ್ಟೋ ವಿಸ್ಮಯಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತವೆ ಅವು. ವಾಪಾಸು  ಅಲ್ಲಿಂದ ಹೊರಡಿಸುವುದು ಬಲು ಕಷ್ಟದ ಕೆಲಸ. 

ಅಂತೆಯೇ ನನಗೂ ನೆಂಟರಿಷ್ಟರು, ಸಂಬಂಧಿಕರು ಬಳಗದವರನ್ನೆಲ್ಲಾ ಮಕ್ಕಳಿಗೆ  ಪರಿಚಯ ಮಾಡಿಸುವ ಹಂಬಲ. ಅಪ್ಪನ ಬಳಗ  ಅಮ್ಮನ  ಬಳಗ ಎಲ್ಲಾ ಪರಿಚಯ ಮಾಡಿಸಲೇ ಬೇಕೆಂದು ನಾನೂ ನನ್ನ ಸಣ್ಣ ಅತ್ತಿಗೆ ಸೇರಿ ದಿಢೀರ್   ನಿರ್ಧಾರ  ಮಾಡಿಯಾಯಿತು. ಎಲ್ಲಾ ನನ್ನ ಅಜ್ಜನ ಮನೆ ಸಿರ್ಸಿ  ಕಡೆ ಹೋಗುವುದು ಅಂತ.ಸಿರಸಿಯಲ್ಲಿ  ನಮ್ಮ ನೆಂಟರು ತುಂಬಾ ಇದ್ದಾರೆ.
  ಅಣ್ಣನ ಕಾರು ಮತ್ತು ಅವನದೇ ಸಾರಥ್ಯವೂ ಒದಗಿತು.[ ನನ್ನ ಪತಿರಾಯರು ಮೊದಲೇ ಬೆಂಗಳೂರಿಗೆ ಬಂದು ಬಿಟ್ಟಿದ್ದರಲ್ಲ! ]  ತವರಿನಲ್ಲಿ ತಂಗಿಯಂದಿರ ಮಾತಿಗೆ ಬೆಲೆ ಜಾಸ್ತಿ..! ಬೆಳಿಗ್ಗೆ ಒಂಬತ್ತಕ್ಕೆಲ್ಲಾ ತೀರ್ಮಾನಿಸಿ  ಅರ್ಧ ಗಂಟೆಯಲ್ಲಿ ಎಲ್ಲಾ ಮಕ್ಕಳು ಮಂದಿಯೆಲ್ಲಾ 'ನ ಭೂತೋ ನ ಭವಿಷ್ಯತಿ' ಎಂಬಂತೆ  ತಯಾರಾಗಿ ಹೊರಟೆವು.

ಒಟ್ಟು ಒಂದೂವರೆ ದಿನದಲ್ಲಿ ಒಂಬತ್ತು ನೆಂಟರ ಮನೆಗೆ ಭೇಟಿ  ಕೊಟ್ಟು ಅದರಲ್ಲಿ ಒಂದು ಅರ್ಧ ಘಂಟೆ ನನ್ನ ತಾಯಿಯವರಿಗೆ  ಡಾಕ್ಟರ್  ಚೆಕಪ್ಪೂ ಮತ್ತು ಬನವಾಸಿಯ ಮಧುಕೇಶ್ವರನ ದರ್ಶನವನ್ನೂ ಮುಗಿಸಿಬಂದಿದ್ದೆವೆಂದರೆ ನೀವೇ ಊಹಿಸಿ ನಾವೆಷ್ಟು ಹುಶಾರಿದ್ದೇವೆ ಅಂತ. ಎಲ್ಲಾ ಕಡೆ ಪ್ರಕೃತಿ ಸಾನ್ನಿಧ್ಯ ಜೊತೆಗೆ ಇದ್ದುದರಿಂದ ಮಕ್ಕಳಿಗೆ ಪ್ರತಿ ಮನೆಯೂ ಆಪ್ಯಾಯಮಾನವಾಗಿಯೇ ಇತ್ತು ಅನ್ನುವುದು ಗಮನಿಸಿದ ವಿಚಾರ. 

ಹೋದ ನೆಂಟರ ಮನೆಗಳಲ್ಲೆಲ್ಲಾ ಮನೆ ಜನ  ಎಲ್ಲರೂ ಇದ್ದು ಎಲ್ಲೂ ನಮಗೆ ಡಿಸ್ ಅಪಾಯಿಂಟ್ ಮೆಂಟ್ ಆಗಲಿಲ್ಲ.ಅರ್ಧ ಘಂಟೆ ಅಂದರೆ ಒಂದು ನಿಮಿಷ ಹೆಚ್ಚಿಲ್ಲ ಕಡಿಮೆಯಿಲ್ಲ, ಸಮಯವನ್ನು ಅದು ಹೇಗೆ ನಿಭಾಯಿಸಿದ್ದೆವೆಂದರೆ ನನಗೆ ನನ್ನ ದೇಶವೇ ಮರೆತು ಹೋಗುವಷ್ಟು!  ನಾನು ಈ ದೇಶದಲ್ಲೇ ಹುಟ್ಟಿದ್ದು ಹೌದೋ ಅಥವಾ ನಾವು ಬೇರೆ ದೇಶದಲ್ಲಿದ್ದೇವೋ ಎಂದು ನನಗೆ ಅನುಮಾನ ಬರಲು ಶುರುವಾಯಿತು. ಈಗಲೂ ನೆನಸಿಕೊಂಡರೆ ಅನುಮಾನ ಪರಿಹಾರವೇ ಆದಂತೆನಿಸುವುದಿಲ್ಲ.




ಸುಶೀಲ   ಚಿಕ್ಕಮ್ಮನ ಕೈಗಾರಿಕೆ.

  ಅತಿಥಿ ಸತ್ಕಾರದ ಶೈಲಿಯಲ್ಲಿ ಸಾಗರ ಕಡೆಯವರಿಗಿಂತ ಸಿರಸಿಯ ಕಡೆ ಸ್ವಲ್ಪ ಭಿನ್ನ.ಮನೆ ದಣಕಲು ದಾಟುತ್ತಿರುವಂತೆ ಮೂಲೆ ಮೂಲೆಗಳಿಂದ ಸ್ವಾಗತದ ಧ್ವನಿ ಕೇಳಿ ಬರುತ್ತದೆ.'' ತಂಗೀ ಅಂದಿ, ಮಗಾ ಅಂದಿ, ಕೂಸೇ ಅಂದಿ,   ಅತ್ತೆ  ಅಂದಿ, ಮಾವ ಅಂದಿ,  ಇತ್ಯಾದಿತ್ಯಾದಿ ಅಂದೀ.....  ಎನ್ನುವ ಕರೆ  ಅಲೆಯಲೆಯಾಗಿ   ಕೇಳಿ ಬರತೊಡಗುತ್ತದೆ. ನನ್ನಜ್ಜನ ಮನೆ  ವಿಶೇಷತೆ ಎಂದರೆ    ಒಂದೇ ಮಾಡಿನಡಿ ಒಂಬತ್ತು ಮನೆಗಳಿವೆ.


 ನನ್ನಜ್ಜನ ಮನೆ,  ಇಡೀ ಊರಿಗೆ ಒಂದೇ ಜಗಲಿ

ಒಂದೇ ಕೋಳು. ಅಲ್ಲಿಗೆ ಹೋದೆವೆಂದರೆ ಆಚೀಚೆ ಮನೆಯವರಾದಿಯಾಗಿ ಎಲ್ಲರೂ ಮಾತನಾಡಿಸುವವರೇ.. ಎಲ್ಲರಿಗೂ 'ಹ್ಞೂ ಅಂದಿ,ಹ್ಞೂ ಅಂದಿ, ' ಎಂದು ಹೇಳುವಷ್ಟರಲ್ಲಿ ಒಂದು ಒಪ್ಪತ್ತೆ ಆಗಿಹೋಗುತ್ತಿತ್ತು. ಮಳೆ ನಿಂತ ಮೇಲೆ ಹನಿಯೊಂದು ಮೂಡುವಂತೆ ಆಗಾಗ ಕಂಡವರೆಲ್ಲಾ   'ತಂಗೀ ಅಂದಿ,' ಎನ್ನುವ ಪ್ರಕ್ರಿಯೆ ಮುಂದುವರೆಯುತ್ತಲೇ ಇರುತ್ತದೆ.   ಪ್ರತಿಯೊಬ್ಬರೂ, ಪ್ರತಿಯೊಬ್ಬರನ್ನೂ ಹೀಗೆಯೇ ಸಂಬಂಧಗಳನ್ನು ಆರೋಪಿಸಿಯೇ ಕರೆಯುವುದರಿಂದ ಚಿಕ್ಕ ಮಕ್ಕಳಾದಿಯಾಗಿ  ಎಲ್ಲರಿಗೂ  'ಯಾರು ಹೇಗೆ ನೆಂಟರು,' ಅನ್ನುವ ಮೂಲಜ್ಞಾನ ತಾನಾಗಿಯೇ ಒದಗಿಬಿಡುತ್ತದೆ! ನನ್ನ ಮಾವನ ಮೊಮ್ಮಗಳು ಮೇಧಿನಿ ಪುಟ್ಟ ಸೂಜು ಮೆಣಸಿನಕಾಯಿ, ಎಲ್ಲರನ್ನೂ ದೊಡ್ದವರಂತೆಯೇ ಕರೆದು ಗೊತ್ತಿಲ್ಲದವರನ್ನು 'ನೀನು ಅಕ್ಕನಾ ? ಅತ್ತಿಗೆಯಾ..?' ಎಂದು ಗೊತ್ತುಮಾಡಿಕೊಂಡು ಮುದ್ದಾಗಿ  ಮಾತನಾಡಿಸಿದ್ದು ಎಲ್ಲರಿಗೂ ಹರುಷವುಕ್ಕಿಸಿತು ಜೊತೆಗೆ,   ನನಗೆ ಸ್ವಲ್ಪ ಆಲೋಚನೆಗೆ ಹಚ್ಚಿತು.

ಶಹರಗಳಲ್ಲಿ ವಾಸಿಸುವ ಮಕ್ಕಳಿಗೆ ನಿಜಕ್ಕೂ  ಸಂಬಂಧಗಳ ಪ್ರಾಮುಖ್ಯತೆಯನ್ನು  ಡೆಮೋ  ಮಾಡಿಯೇ ತೋರಿಸಬೇಕಾಗಿ ಬರುತ್ತದೆ ಇನ್ನು ಮುಂದೆ.    ಮನೆಗೊಂದೇ ಮಗು ಕಾನ್ಸೆಪ್ಟಿನಡಿಯಲ್ಲಿ ಸಂಬಂಧಗಳು ಹೇಗೆ ಗೊತ್ತಾಗಬೇಕು..?
ಮೊದಲೆಲ್ಲಾ ಅಜ್ಜನ ಮನೆಗೆ ಹೋದರೆ ಒಂದು ಇಪ್ಪತೈದರಿಂದ ಮೂವತ್ತು ಮಕ್ಕಳು ನಮಗೆ ಆಟಕ್ಕೆ  ಸಿಗುತ್ತಿದ್ದರು. ಈಗ ಇಡೀ ಒಂಬತ್ತು ಮನೆ ಊರಿಗೆ ಒಂದೋ ಎರಡೋ ಮಕ್ಕಳು ! ಮನೆ ಮಕ್ಕಳೆಲ್ಲಾ ಊರು ಬಿಟ್ಟು ಶಹರ ಸೇರಿದುದರ ಪರಿಣಾಮ. ಅಜ್ಜ ಅಜ್ಜಿ ಮಾತ್ರ ಊರಲ್ಲಿ.  ಶ್ರೀಶಂ ಬ್ಲಾಗಿನ ರಾಘಣ್ಣ ಹೇಳಿದಂತೆ ಊರಲ್ಲಿ ಈಗ ಅಡಿಗೆ ಮನೆಲೊಂದು ಕೆಮ್ಮು, ಹೊರಗೆ ಜಗಲಿಯಲ್ಲೊಂದು  ಕೆಮ್ಮು !


  ಸಿರ್ಸಿ ಕಡೆಯ  ಇನ್ನೊಂದು ವಿಶೇಷತೆಯೆಂದರೆ, ಅತಿಥಿಗಳು ಬಂದಾಗ ಅವರಿಗೆ ಕೈಕಾಲು ತೊಳೆಯಲು ನೀರು ತಂದಿಟ್ಟು   ನಮಸ್ಕರಿಸಿ ಹೋಗುವ  ಪರಿಪಾಟ. ಮೊದಲೆಲ್ಲ ಗಮನಕ್ಕೆ ಬರುತ್ತಿರಲಿಲ್ಲ.   ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸುವ ಈ  ಕ್ರಮ ಎಷ್ಟೊಂದು ಮಹತ್ವ ಪೂರ್ಣವಾಗಿದೆ.!ಸಂಬಂಧಗಳನ್ನು ಗುರುತಿಸುವ, ಗೌರವಿಸುವ,  ಬೆಸೆಯುವ, ಬೆಳೆಸುವ, ಉಳಿಸುವ ಈ ಸಂಸ್ಕಾರ ಎಷ್ಟೊಂದು ಅರ್ಥಪೂರ್ಣ!   ಪೇಟೆ ಸೇರಿದ ಮಂದಿಯೆಲ್ಲಾ ಈ ಪದ್ಧತಿಯನ್ನು ಉಳಿಸಿಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ.  ಇಲ್ಲಿಯ ಧಾವ೦ತದ ಬದುಕಿನಲ್ಲಿ ಅದನ್ನೆಲ್ಲಾ ಅನುಸರಿಸಲು ಸಮಯ ಮತ್ತು ಅವಕಾಶ ಸಿಗದೇ   ಅಳಿವಿನಂಚಿಗೆ  ತಲುಪಲು ಹೆಚ್ಚು ಸಮಯ ಬೇಕಿಲ್ಲ. ಆ ಪದ್ಧತಿಗಳೆಲ್ಲಾ ನನಗೆ ಈಗ ಯಾಕೋ  ಆಪ್ಯಾಯಮಾನವಾಗುತ್ತಿವೆ. ಕಳೆದು ಹೋಗಿ ಬಿಡುತ್ತದೆ ಅನ್ನುವುದರ ಬಗೆಗೆ ಹೆಚ್ಚು ಪ್ರೀತಿ..  ನನ್ನ ಮಕ್ಕಳಿಗೆ ಇದೆಲ್ಲಾ ಹೊಸತಾದರೂ ಇಷ್ಟವಾಯಿತು.  


ಅಜ್ಜನ ಮನೆಯಲ್ಲಿ ಅತ್ತೆ ಊಟಕ್ಕೆ ಅನ್ನಕ್ಕೆ ಕಲೆಸಿಕೊಳ್ಳಲು ಬರೀ ಐದೇ ತರದ ಪದಾರ್ಥ ಮಾಡಿದ್ದಳು! ಇನ್ನೂ ಒಂದು ಪದಾರ್ಥ ಕಡಿಮೆಯಾಯಿತೆಂದು ಬೇಜಾರು ಮಾಡಿಕೊಂಡಳು ಜೊತೆಗೆ.! ಉಳಿದಂತೆ ಮೂರು ಸ್ವೀಟು.. ಸ್ವಲ್ಪ ಹಪ್ಪಳ, ಬಜೆ .....ಇತ್ಯಾದಿ..  ಇದೆಲ್ಲಾ ನಟರಾಜ್ ಗೆ ಫೋನಿನಲ್ಲಿ ಹೇಳಿ ಹೊಟ್ಟೆ ಉರಿಸೋಣವೆಂದರೆ ''ಓಹೋ ನೀನು ಈಗ ಜೀರೋ  ಸೈಜ್ಹಾಗಿ ಬರುತ್ತಿದ್ದೀಯ ಅನ್ನು...  ಸೊನ್ನೆಯ ಆಕಾರದಲ್ಲಿ..! '' ಎಂದು ನಕ್ಕರು. 


 ಬನವಾಸಿ ಮಧುಕೇಶ್ವರನ ಸನ್ನಿಧಿಯಲ್ಲಿ..





ಅಮ್ಮ ಅಣ್ಣನೊಂದಿಗೆ  ನಾನೂ ನನ್ನ ಮಗಳೂ ..

ಹೋಗುವಾಗ ಬರುವಾಗ  ದಾರಿಯಲ್ಲಿ ವಿಶಾಲವಾದ ಹಸಿರು  ಗದ್ದೆಗಳನ್ನು ನೋಡುವ  ಅವಕಾಶ ಮಾತ್ರಾ ಸಿಗಲಿಲ್ಲ. ಎಲ್ಲಾ ಕಡೆ  ಭತ್ತ ಕೊಯ್ದು  ಬೆತ್ತಲಾಗಿತ್ತು  ಭೂಮಿ. ಅಲ್ಲಲ್ಲಿ ಹಚ್ಚೆ ಹಾಕಿದಂತೆ ಕಬ್ಬಿನಗದ್ದೆಗಳು ಆಲೆಮನೆಗೆ ಕಾದಿದ್ದವು. 
ದಾರಿಯಲ್ಲೇ ಅದೆಷ್ಟು ಮಾತುಗಳು ಖರ್ಚಾದವು ..! ಒಂದಾದರೂ ಕೆಲಸಕ್ಕೆ ಬರುವಂಥದಲ್ಲ.    ಹಳ್ಳಿಯಿಂದ  ದಿಲ್ಲಿಯವರೆಗೆ, ಕೊನೆಕೊಯ್ಲಿನಿಂದ ರಿಸಿಶನ್ನಿನ ವರೆಗೆ,   ದೇವಸ್ಥಾನದಿಂದ ಪಾಕಿಸ್ತಾನದ ವರೆಗೆ,  ಹೀಗೆ ಒಂದಕ್ಕೊಂದು ತಾಳ ತಂತುಗಳಿಲ್ಲದೆ ಮಾತುಗಳು ರಸ್ತೆಯುದ್ದಕ್ಕೂ ಚೆಲ್ಲಾಡಿದವು. 
ಒಂದು ವಿಚಾರ ಹೇಳಿ ನನ್ನ ಅಣ್ಣ ನನ್ನ ತಲೆ ತಿಂದ..  ನಾನೂ ಹೋದಲ್ಲೆಲ್ಲಾ ದೊಡ್ಡದಾಗಿ    ಕಂಡ ಕಂಡಿದ್ದೆಲ್ಲಾ  ಫೋಟೋ ತೆಗೆಯುತ್ತಾ   ಫೋಸ್ ಕೊಡುತ್ತಿದ್ದೇನಲ್ಲಾ.   ''ಏ ಮಾರಾಯ್ತಿ.. ದೃಶ್ಯವನ್ನೂ ಶ್ರವ್ಯವನ್ನೂ  ರೆಕಾರ್ಡ್ ಮಾಡುವ ಟೆಕ್ನಾಲಜಿ  ಗೊತ್ತು ನಮಗೆ;   ಅದೇ ವಾಸನೆಯನ್ನು ರೆಕಾರ್ಡ್ ಮಾಡಲು ಸಾಧ್ಯವಾ..? ರುಚಿಯನ್ನು ರೆಕಾರ್ಡ್ ಮಾಡ್ಲಿಕ್ಕಾಗುತ್ತ..? ಟಚ್ ಫೀಲಿಂಗನ್ನು ಹಿಡಿದಿಡಲು  ಆಗತ್ತಾ..? !!! ''
  
 
ಹೀಗೆ ಮಾತು ಸಾಗುತ್ತಾ ಸಾಗುತ್ತಾ..ಇದೆಲ್ಲಾ ಟೆಕ್ನಾಲಜಿ   ನಮ್ಮ ಉಪನಿಷತ್ತುಗಳಲ್ಲಿ ಇರಬಹುದೆಂದೂ, ಜಪಾನಿನವರೋ, ಜರ್ಮನಿಯವರೋ ಅದನ್ನು ಅರ್ಥೈಸಿ ಪ್ರಾಡಕ್ಟ್  ತಯಾರಿಸುತ್ತಾರೆಂದೂ,  ಕಡೆಗೆ ಚೀನಾದವರು ಅದನ್ನು ಕದ್ದು ನಮಗೆ ಸೋವಿಯಲ್ಲಿ ಮಾರಬಹುದೆಂದೂ, ಆಗ ನಾವು ಅದನ್ನು ಖರೀದಿಸಬಹುದೆಂದೂ  ಊಹಿಸಿ ಅಲ್ಲಿಗೆ ಆ ತಲೆನೋವು ಕಡಿಮೆ ಮಾಡಿಕೊಂಡೆವು..!!!!

ಎಲ್ಲಿಂದಲೋ ಶುರುವಾದ ಮಾತು ಎಲ್ಲೆಲ್ಲಿಗೋ ಹೋಯಿತು.  ಅಂತೂ ಮುಗಿಸಿದೆ.. ಈಗಿನ ಮಾತನ್ನು..!!!
ವಂದನೆಗಳು.