Sunday, January 17, 2010

ಚಿತ್ತಾರದರಮನೆಯಲ್ಲಿ ಹೂದೋಟ..

ನಿಮಗೆ ಮೊದಲೊಮ್ಮೆ ಹೇಳಿದ್ದೆನಲ್ಲ.... ಬ್ಲಾಗೂರಲ್ಲೊಂದು ಪುಟ್ಟ ಅರಮನೆ ಕಟ್ಟುತ್ತಿದ್ದೇನೆ ಅಂತ ..ಬೇಕಾದರೆ ನೋಡಿ ಬನ್ನಿ..
(
ಬನ್ನಿರಲ್ಲ...ಬ್ಲಾಗೂರ ನನ್ನ ಮನೆಗೆ .)

ಅಲ್ಲೀಗ ಹೂದೋಟ ಮಾಡಿದ್ದೇನೆ..
ಹೀಗೆ.... ನೋಡಲು ಬಂದವರು ಹೇಳಿದ್ದು...
ಕಟ್ಟುತ್ತಿದ್ದ ಹಾಗೆ ನಾಲ್ಕಾರು ಗಿಡ ಗೆನ್ಟೆ ನೆಡು....
ಉಪ್ಪರಿಗೆ ಕಟ್ಟುವಷ್ಟರಲ್ಲಿ ಗಿಡ ದೊಡ್ಡದಾಗಿ ಹೂ ಬಿಡುತ್ತೆ... ನೋಡಲು ಚಂದ....ಅಂತ..
ನಾನೂ ಆಚೀಚೆ , ಅಲ್ಲಿ ಇಲ್ಲಿ ಗಿಡ ಒಟ್ಟು ಮಾಡಿ ತಂದು ನೆಟ್ಟಿದ್ದೇನೆ...

ಈಗದು ಹೂಬಿಟ್ಟಿದೆ.ಎಲ್ಲಾ ತರದ್ದೂ ಇದೆ.
ಒಂದೊಂದು ಸಾಲಿನಲ್ಲಿ ಒಂದೊಂದು ತರ...
ಎಷ್ಟೊಂದು ಚಂದ ಅಂದ್ರೆ ...ಬಾಳ ಸುಂದರ..
ಮನೆ ಕಟ್ಟುವಾಗ ಸ್ವಲ್ಪ ಸಿಮೆಂಟು, ಮರಳಿನ ಧೂಳು ಬಿದ್ದಿರಬಹುದು....
ಆದರೂ ಚಂದವಿದೆ ....
ಕಾಂಪೌಂಡ್ ನ ಪಕ್ಕಕ್ಕೆ ಸಾಲಾಗಿ ಜಿನಿಯಾ ಹಾಕಿದ್ದೇನೆ...
ಬರುವವರಿಗೆಲ್ಲಾ ಸ್ವಾಗತ ಕೋರಲು ನಿ೦ತ ಸು೦ದರಿಯರ ತರ ಕಾಣುತ್ತೆ...





ತರತರದ ತರುಣಿಯರು...ಕಣ್ಣೆರಡು ಸಾಕಾಗಲಿಕ್ಕಿಲ್ಲ...ಚಂದ ಸವಿಯಲು..







ಮತ್ತೆ ಕಾಡುವ ಹುಡುಗರು ಹೂದೋಟದ ಸುತ್ತ ಸುತ್ತುತ್ತಲೇ ಇರುತ್ತಾರೆ... ಹೂಮುತ್ತಿನಾಸೆಗೆ ...




ಚಂಡು ಹೂ ಗೊತ್ತಲ್ಲವೇ...ಯಾವುದೋ ಒಣಗಿದ ಹೂಮಾಲೆ ಎಸೆದಿದ್ದು, ಬೀಜ ಉದುರಿ ಗಿಡ ಆಗಿತ್ತು .



ರಾತ್ರಿ ಉಪ್ಪರಿಗೆಯ ಬಾಲ್ಕನಿಯಲ್ಲಿ ನನ್ನವರೊಂದಿಗೆ ನಿಂತು ನೋಡಿದರೆ........ ಏನಂತ ಹೇಳಲಿ ......!! ಮೋಡಗಳ ಮರೆಯಲ್ಲಿ ಚಂದಿರ ಹೂ ನಗೆ ಚೆಲ್ಲಿದಂತೆಲ್ಲಾ...
ನಲ್ಲನಲ್ಲಿ ತುಂಟ ಕವಿ ಇಣುಕುತ್ತಾನೆ........!

ನಲ್ಲೆ ನಗುವಾಗಲೆಲ್ಲಾ....
ಮಾರಿ ಗೋಲ್ಡ್ ....
ಮತ್ತೆ ಕೋಪಿಸಿಕೊಂಡರಂತೂ....
ಹೆಮ್ಮಾರಿ ಗೋಲ್ಡ್...

ಮತ್ತೆ ಮಾರಿ ತಿರುವಷ್ಟರಲ್ಲಿ ....ಇನ್ನೊಂದು ಕವಿತೆ ರೆಡಿ.

ನಲ್ಲೆ ಮೊಗ ಕೆಂಗುಲಾಬಿ ....
ಮುನಿಸ ಮುಳ್ಳ ಬೇಗ ತೆಗಿ......




ಬಾನಲ್ಲಿ ಇಣುಕುವ ಬಿದಿಗೆ ಚಂದ್ರಮ ಪಳಕ್ಕನೆ ನಗುತ್ತಾನೆ...!!!!!
ಹಾಗೆ ಪಕ್ಕನೆ ಮೋಡದಲ್ಲಿ ಮರೆಯಾಗುತ್ತಾನೆ......
ಶಾಪದ ಭೀತಿಗಲ್ಲ..... ತಾರೆಯ ನೆನಪಾಗಿರಬೇಕು......!


ಮತ್ತೆ ಗುಲಾಬಿ ಗಿಡಗಳು ಹೂಬಿಟ್ಟು ಮುಡಿಯುವವರಿಗಾಗಿ ಕಾದಿವೆ..



ಮೈಯೆಲ್ಲಾ ಇಬ್ಬನಿಯಲ್ಲಿ ತೋಯಿಸಿಕೊಂಡು ಮಂದಹಾಸ ಬೀರುವ ಬಾಲೆಯಂತೆ ಕಾಣುತ್ತಾಳೆ.




ಮುತ್ತಿನ ಮಣಿಗಳಂತಿರುವ ಹನಿಯನ್ನು ಕೈಯಿಂದೊಮ್ಮೆ ಸವರಲೇ...... ಅನ್ನಿಸುವುದು.



ಮೊಗ್ಗುಗಳದು ಚಂದವೇ ಬೇರೆ.....
ಎಲೆ ಬಿಸಿಲಿಗೆ... ಹರಯಕ್ಕೆ ಕಾಲಿಡುವ ಬಯಕೆ ....ಅವಕ್ಕೆ ..



ತಲೆ ತುಂಬಾ ಸೆರಗ ಹೊದ್ದ ಪುಟಾಣಿ ವಧುವಿನಂತೆ ಕಂಗೊಳಿಸುವ ಬಯಕೆ ......ಹೇಳತೀರದು.




ಅಕ್ಕನ ಮದುವೆಯಲ್ಲಿ ತಂಗಿಯ ಸಡಗರಕ್ಕೇನು ಕೊರತೆ..
ಸಧ್ಯ.....! ನನಗೇನಿಲ್ಲ....
ಜವಾಬ್ಧಾರಿ ..... ಸಂಸಾರದ ಚಿಂತೆ.....!

ಗುಲಾಬಿಗಳ ವರ್ಣಿಸಿದ್ದು ಮುಗಿಯಿತಲ್ಲ..
ಸೇವಂತಿಗೆ ಕಣದ ಕಡೆ ಹೋಗೋಣ ಬನ್ನಿ....



ಕಣದಲ್ಲಿ ಚೆನ್ನಾಗಿ ಮಣ್ಣು, ಗೊಬ್ಬರ ಹಾಕಿ ಸೇವಂತಿಗೆ ಗಿಡ ನೆಟ್ಟರೆ ಚೆನ್ನಾಗಿ ಹೂ ಬಿಡುತ್ತವೆ.
ಬೆಳಗಿನ ಬಿಸಿಲು ಬಿದ್ದರೆ ಕೇಳುವುದೇ ಬೇಡ....
ಬೇರೆ ಬಣ್ಣದವೂ ಇವೆ...


ಹಳದಿ ಬಣ್ಣದವೆಂದರೆ ನನಗಿಷ್ಟ...



ಕುಂಡದಲ್ಲಿ ನೆಟ್ಟರೂ ಚೆಂದದ ಹೂಗಳು ಬಿಡುತ್ತವೆ...
ಇದನ್ನು ಹೊರ ಬಾಗಿಲ ಪಕ್ಕದಲ್ಲಿ ಮೆಟ್ಟಿಲ ಕೆಳಗೆ ಇಟ್ಟಿದ್ದೇನೆ.


ಇದು ಕಿಂಕರ ಅನ್ನುವ ಹೂಗಿಡ...ನಿಮ್ಮಲ್ಲೆಲ್ಲಾ ಏನಂತ ಕರೆಯುತ್ತೀರೋ....



ಇದು ಈಗ್ಸೋರ ....ಪೊದೆ ಆಗುವುದರಿಂದ ಕಾಂಪೌಂಡಿನ ಮೂಲೆಯಲ್ಲಿ ಜಾಗ ಕೊಟ್ಟಿದ್ದೇನೆ.
ಆದರೂ ಸಾಲಿನಲ್ಲಿ ಮುಂದೆ ಬಂದು ನಿಂತಂತೆ ಕಾಣುತ್ತೆ.

ಇದಕ್ಕೆ ಸ್ಟಾರ್ ಕ್ಲಸ್ಟರ್ ಅನ್ನುತ್ತಾರಂತೆ...
ಕಿಂಗ್ ಫಿಷರ್ ವಿಮಾನದ ಒಯ್ಯಾರದ ಗಗನಸಖಿಯಂತಿದ್ದಾಳೆ. ಕೆಂಪು ...ಕೆಂಪು...


ಇದ್ಯಾವುದರ ಹೂ ಹೇಳಿ....?
ಗೊತ್ತಾಗಲಿಲ್ವಾ .......!! ಟೊಮೇಟೊ ಹೂ .... ಅರ್ಜಂಟ್ ಗೆ ಸಾರಿಗೆ ಬೇಕಾಗುತ್ತೆ ನೋಡಿ...


ಇನ್ನೂ ಕೆಲವು ಹೆಸರೇ ಗೊತ್ತಿರದ ಗಿಡಗಳೂ ಇವೆ....

ಮುಂದಿನ ಸಲ ಯಾವಾಗಲಾದರೂ ತೋರಿಸಲೇ....

[ ಮತ್ತೆ ಏನೆಂದರೆ.....ಪಾಪ ಇಷ್ಟೆಲ್ಲಾ ಗಿಡ ಗೆನ್ಟೆ ಬೆಳೆಸಿದ್ದಾರೆ... ಯಾರಾದರೂ ಕಳ್ಳ, ಕಾಕರು ಹೂ ಕದ್ದರೆ.....ಅಂತ ನೀವು ಚಿಂತೆ ಮಾಡುವುದೇನೂ ಬೇಡ...
ಮೊನ್ನೆ ಊರಿಗೆ ಹೋದಾಗ '' ಹೂ ಬನಕ್ಕೆ ಸಿಗಂದೂರು ಚೌಡಿಯ ಕಾವಲಿದೆ ....'' ಅಂತ ಬೋರ್ಡ್ ಬರೆಸಿ, ಪೂಜೆ ಮಾಡಿಸಿಕೊಂಡು ಬಂದು ತಗುಲು ಹಾಕಿದ್ದೇನೆ.
ಈ ಕೆಲಸವನ್ನು ನನ್ನವರು ಮೆಚ್ಚಿ ಶ್ಲಾಘಿಸಿದ್ದಾರೆ.'' ಅಲ್ವೇ...ಇನ್ನೊಂದು ಬೋರ್ಡ್ ಬರೆಸಿಕೊಂಡು ಬಂದು ಭಾರತ,,, ಪಾಕ್,,, ಗಡಿಯಲ್ಲಿ ಹಾಕು... ಭಾರತ ದೇಶಕ್ಕೆ ಸಿಗಂದೂರು ಚೌಡೇಶ್ವರಿಯ ಕಾವಲಿದೆ..... ಅಂತ,,,,'' ಎಂದು ಉಚಿತವಾಗಿ , ಉಪಯುಕ್ತ ಸಲಹೆ ಕೊಟ್ಟಿದ್ದಾರೆ. ಈಗ ಪುರಸೊತ್ತಿಲ್ಲ .... ಮಕ್ಕಳಿಗೆ ಪರೀಕ್ಷೆ ,,ಮುಗಿಯುತ್ತಿದ್ದಂತೆ ಮದುವೆ, ಉಪನಯನ ಇತ್ಯಾದಿ ಕಾರ್ಯದ ಮನೆಗಳ ಸಾಲು ಸಾಲು .... ಮಳೆಗಾಲಕ್ಕೆ ಬಿತ್ತು.....ಬಿಡಿ.. ಚೌಡೇಶ್ವರಿಯ ವ್ಯಾಪ್ತಿ ವಿಸ್ತಾರವಾಗಿದೆ. ]

Wednesday, January 13, 2010

ಶುಭಾಶಯಗಳು ....




ಬಾಳ ಪಥದಿ ಚಲಿಸಿ ಮುಂದೆ
ರಾಗ ದ್ವೇಷ ಬಿಟ್ಟು ಹಿಂದೆ
ಎಳ್ಳು ಬೆಲ್ಲ ಸವಿದು ಬೇಗ
ಶಾಂತಿ ಬಾಳ್ವೆ ನಡೆಸಿರೀಗ....


ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು.

Saturday, January 9, 2010

ನೀರ ದಾರಿ....................




ಯುಗಾದಿ ಕಳೆದು
ಮರಳುತಿರೆ ಮತ್ತೆ ಧರೆ
ಸುಡುನೆತ್ತಿ ಬಿಸಿಲ ಮುಸಲಧಾರೆ
ಕಂಕುಳ ಮಗುವಿಗೂ....ಬೆವರಹನಿ ಜಲಧಾರೆ..!


ಛಾಯೆಯಿಲ್ಲದ ಭೂಮಿ
ದೂರದಾ ಹರದಾರಿ
ತೀರದಾ ದಾಹಕ್ಕೆ
ನೀರ ಬಿಂದಿಗೆ ಹೊತ್ತ
ನೀರೆ ಹೊರಟಿಹಳಲ್ಲಿ.....ನೀರಬೇಟೆಗೆ....!


ಭರವಸೆಯ ಹುಸಿನೆರಳು
ವಿಧಿಯ ಕರಿನೆರಳು
ಏಗಬೇಕಿದೆ ಜೀವ
ಬವಣೆಯಾ ಬದುಕಿಗೆ
ಆಗಬೇಕಿದೆ ಅಲ್ಲಿ... ಚಮತ್ಕಾರ ಬಾನಲ್ಲಿ...!


ಸಾಗಬೇಕಿದೆಯಿನ್ನೂ...
ಜೀವದಾ ಹಾದಿ
ಜೀವಜಲ ದರುಶನಕೆ ಹುಡುಕಿ ದಾರಿ
ಬದುಕಲೇ ಬೇಕಿದೆ...ಸ್ವಾಮಿ
ನೀರೆ ಹೊರಟಿಹಳಲ್ಲಿ ...ಕಾಲನಿಗೆ ಬೆನ್ನು ತೋರಿ....!

[ ಚಿತ್ರ ನನ್ನದೇ ರಚನೆ.]

Wednesday, January 6, 2010

ಮಲೆನಾಡಿನಲ್ಲಿ ಯಂತ್ರಗಳು...

ಮಲೆನಾಡು ಎಂದಾಕ್ಷಣ ಗುಡ್ಡ ,ಬೆಟ್ಟ, ಕಾಡು, ಝರಿ ,ಹಳ್ಳ ,ತೊರೆ, ಕಾಫಿ , ಇವುಗಳೆಲ್ಲಾ ನೆನಪಾಗುತ್ತದಷ್ಟೇ...
ಜೊತೆಗೆ ಮುಖ್ಯವಾಗಿ ಇನ್ನೂ ಒಂದು ನೆನಪಾಗೇ ಆಗುತ್ತದೆ..........!!!
ಅಡಿಕೆತೋಟ...... ಅಲ್ಲವೇ .....?
ಅಡಿಕೆ ಮಲೆನಾಡಿನ ಮುಖ್ಯ ವಾಣಿಜ್ಯ ಬೆಳೆ. ತಾಂಬೂಲಕ್ಕೆ ಅಡಿಕೆಯೇ ರಾಜ..! ಮಲೆನಾ
ಡಿನಲ್ಲಿನ ಬಹುತೇಕ ಜನರಬಾಯಿ...ಗಲ್ಲವೆಲ್ಲಾ ತಾಂಬೂಲರಸಪೂರಿತ ......!!!
ಸಾಗರ,ಸೊರಬ, ಹೊಸನಗರ,ತೀರ್ಥಹಳ್ಳಿ , ಉತ್ತರಕನ್ನಡದ ಸಿರಸಿ , ಸಿದ್ದಾಪುರ, ಯೆಲ್ಲಾಪುರ ಈ ಸಾಲಿನಲ್ಲಿ ಅಡಿಕೆಬೆಳೆ ಅಧಿಕ .
ಅಲ್ಲದೆ ಕೆಲವು ವರ್ಷಗಳ ಹಿಂದೆ ಅಡಿಕೆ ಬೆಲೆ ಒಮ್ಮೆಲೇ ಹೆಚ್ಚಾಗಿದ್ದರಿಂದ ಚಿತ್ರದುರ್ಗದ ಸುತ್ತಮುತ್ತ , ಚನ್ನಗಿರಿ, ಹೊನ್ನಾಳಿ , ಭೀಮಸಮುದ್ರ ,....ಇನ್ನಿತರ ಕಡೆಗಳಲ್ಲೂ ಅಡಿಕೆ ಕೃಷಿ ಮಾಡಲು ಶುರುಮಾಡಿದ್ದಾರೆ.


ಅಡಿಕೆ ತೆಂಗಿನ ಮರದಂತೆಯೇ ಉದ್ದವಾಗಿ ಬೆಳೆಯುತ್ತದೆ . ಕಾಂಡದ ಅಗಲ ಕಡಿಮೆ. ತೆಂಗಿನಂತೆಯೇ ಗರಿಗಳು . ಅಡಿಕೆ ಮಡ್ಳು ಎನ್ನುತ್ತಾರೆ.
ಇದು ನೋಡಿ... ಅಡಿಕೆ ಮರ.ಕೊನೆಯಲ್ಲಿ ಕೊನೆ [ಗೊನೆ] ಬಿಟ್ಟಿದೆ .




ಅಡಿಕೆ ಬೆಳೆದ ನಂತರ ಅದರ ಮರಹತ್ತಿ ಕೊಯ್ಲು ಮಾಡಬೇಕು . ಹಸಿರು ಅಡಿಕೆ ಸುಲಿದು ಒಳಗಿನ ಬೇಳೆಯನ್ನು ಬೇಯಿಸಿ ಒಣಗಿಸ
ಬೇಕು. ಅದು ಕೆಂಪಡಿಕೆ . ಹಣ್ಣಾದ ಅಡಿಕೆಯನ್ನು ಹಾಗೆ ಒಣ ಹಾಕಿ ' ಚಾಲಿ ' ಮಾಡುತ್ತಾರೆ. ಈ ಅಡಿಕೆ ಕೊಯ್ಲು ನವೆಂಬರ್ ತಿಂಗಳಿನಿಂದ ಜನವರೀ ಕೊನೆವಾರದವರೆಗೂ ಇರುತ್ತದೆ.



ಇದು ಹಣ್ಣಡಿಕೆಗಳ ರಾಶಿ .

ಇದನ್ನು ಸಂಸ್ಕರಿಸಲು ಅದರದೇ ಆದ ಕ್ರಮಗಳಿವೆ. ಕತ್ತಿಯಿಂದ ಪ್ರತಿಯೊಂದು ಅಡಿಕೆಯನ್ನೂ ಸುಲಿಯಬೇಕು. ಸುಲಿಯಲು ಬರದ, ಅರ್ಧ ಸುಲಿದ ಕಾಯಿಗಳು ಕುಕ್ಕುಗೋಟು ಆಗುತ್ತವೆ. ಕುಕ್ಕು ಗೋಟಿಗೆ ಬೆಲೆ ಕಡಿಮೆ.







ಮೆಟ್ಗತ್ತಿಯಿಂದ ಅಡಿಕೆ ಸುಲಿಯುವುದು


ಕೂಲಿಯಾಳುಗಳ, ಅಡಿಕೆಸುಲಿಯುವವರ ಸಮಸ್ಯೆ ತಲೆದೊರಿದ್ದರಿಂದ ಅಡಿಕೆಬೆಳೆಗಾರರು ಈಗೀಗ ಅಡಿಕೆ ಸುಲಿಯುವ ಯಂತ್ರಗಳನ್ನು ಬಳಸ ತೊಡಗಿದ್ದಾರೆ.

ಮೊದಲು ಅಡಿಕೆಗಳನ್ನು ಗೊನೆಯಿಂದ ಬೇರ್ಪಡಿಸಬೇಕು.
ಇದು ನೋಡಿ ...



ಗೊನೆಯಿಂದ ಅಡಿಕೆ ಬೇರ್ಪಡಿಸುವ ಯಂತ್ರ


ಇದಕ್ಕೆ 1 h.p. ಮೊಟರಿನ ಅಗತ್ಯವಿದೆ .ಆಳಿನ ಅಗತ್ಯವಿಲ್ಲದೆ ಹೆಣ್ಣು ಮಕ್ಕಳಾದ
ರೂ ಈ ಕೆಲಸ ಮಾಡಬಹುದು . ಸ್ವಲ್ಪ ಎಚ್ಚರಿಕೆ ಸಾಕು.

ಈಗ ಬಿಡಿಸಿದ ಅಡಿಕೆಗಳನ್ನು ಸುಲಿಯಬೇಕು.ಅದಕ್ಕೆ ಯಂತ್ರ ಸಿದ್ಧವಿದೆ.



ಅರೆಕಾ ಹಸ್ಕರ್


ಇದರ ಮೇಲಿನ ಸಾಣಿಗೆಯಲ್ಲಿ ಹಸಿ ಅಡಿಕೆಗಳು ಕಾಣಿಸುತ್ತಿವೆಯಲ್ಲವೇ...? ಮೊದಲು ಅಡಿಕೆಗಳನ್ನು ಸಾಣಿಗೆಯಲ್ಲಿ ಸುರಿಯಬೇಕು....
ಕಲ್ಲುಗಳಿಲ್ಲದಂತೆ ನೋಡಿಕೊಳ್ಳಬೇಕು. ಇದ್ದರೆ ಬ್ಲೇಡ್ ಹಾಳಾಗಬಹುದು.



ಇದು ಯಂತ್ರದ ಹಿಂಬಾಗ . ಇಲ್ಲಿಂದ ಸಿಪ್ಪೆ ಬೀಳುತ್ತದೆ.




ಅಡಿಕೆ ಬೀಳುವ ಜಾಗ

ಇಲ್ಲಿಂದ ಸುಲಿದ ಅಡಿಕೆ ಹೊರಬರುತ್ತದೆ . ಮೇಲಿನ ಪ್ಲೇಟ್ ನಿಂದ ಗಟ್ಟಿಯಿರುವ, ಅರ್ಧ ಸುಲಿದ ಅಡಿಕೆಗಳು ಹೊರಬರುತ್ತವೆ. ಅದನ್ನಾದರೂ ನಂತರ ಕೈಯಿಂದಲೇ ಸುಲಭವಾಗಿ ಬಿಡಿಸಿ ಹಾಕಬಹುದು.ಕೆಳಗಿರುವ ಪ್ಲೇಟ್ ನಿಂದ ಪೂರ್ಣ ಸುಲಿದ ಅಡಿಕೆಗಳು ಹೊರಬರುತ್ತವೆ.
ಕಸ ಬೇರ್ಪಡಿಸಲು ವೈಬ್ರೆ ಟರ್ ಅಳವಡಿಸಲಾಗಿದೆ.
ಅಡಿಕೆಯ ಮೇಲ್ಪದರಕ್ಕೆ ಹಾನಿಯಿಲ್ಲ.
ಸಣ್ಣ , ದೊಡ್ಡ ಎಂದು ಅಡಿಕೆಗಳನ್ನು ವರ್ಗೀಕರಿಸುವ ಅಗತ್ಯವಿಲ್ಲ. ಎಲ್ಲವನ್ನೂ ಸುಲಿಯುತ್ತದೆ.




ಸುಲಿದ ಅಡಿಕೆ


ಇದಕ್ಕೆ 1 h.p. ಮೋಟಾರ್ ಅಗತ್ಯವಿದೆ. ಒಂದು ಘಂಟೆಗೆ ನಾಲ್ಕು ಡಬ್ಬ ಅಡಿಕೆ ಸುಲಿಯುವ ಈ ಯಂತ್ರದ ಜೊತೆ ಹದಿನೈದು ಜನ ಆಳುಲೆಕ್ಕ ಬೇಕಾಗುವಲ್ಲಿ ನಾಲ್ಕೇ ಜನರಿದ್ದರೆ ಸಾಕಾಗುವುದು. ಅಡಿಕೆ ಕೊಳೆಸಿಕೊಳ್ಳುವ ಭಯವಿಲ್ಲ.

ಮಲೆನಾಡಿನಲ್ಲಿ ಕೂಲಿಯಾಳುಗಳ ಸಮಸ್ಯೆ ಅಧಿಕ ..
ಹಾಗಾಗಿ ಕೆಲಸಕ್ಕೆ ಪರ್ಯಾಯಮಾರ್ಗ ಹುಡುಕಿಕೊಳ್ಳುವುದು ಅನಿವಾರ್ಯ.ಜನರ ಬದಲಿಗೆ ಬೆಳೆಗಾರ ಯಂತ್ರದ ಮೊರೆಹೊಗಬೇಕಾಗಿದೆ.
ಅಡಿಕೆ
ಸುಲಿಯುವವರ ನಡುವಿನ ಹುಂಡಿ ಪದಗಳು, ಜನಪದಗೀತೆಗಳು, ಗಾದೆಮಾತುಗಳೂ, ಸುದ್ದಿ ಸಪ್ತಾಹಗಳು ಮರೆಯಾಗಿ ಜೀವನ ಯಾಂತ್ರಿಕವಾಗುತ್ತಿರುವುದು ಬೇಸರದ ಸಂಗತಿಯಾದರೂ.. ಗತ್ಯಂತರವಿಲ್ಲ .. ಬೆಳೆಗಾರನೂ ಬದುಕಬೇಕಲ್ಲ ...
ಜೀವ ಗಟ್ಟಿಯಿದ್ದರೆ ಭಾವ ಸೆಲೆಯೊಡೆದೀತು.......!!

ಮತ್ತೆ ಕಳೆ ಕೀಳಲು ಕೂಡಾ ವೀಡ್ ಕಟ್ಟರ್ ಉಪಯೋಗಿಸಲಾಗುತ್ತಿದೆ.ಗೌರವವಾಗಿ ಕಳೆಕೀಳಬಹುದು.



ವೀಡ್ ಕಟ್ಟರ್


ಹಳ್ಳಿಗಳಲ್ಲಿ ವಿಧ್ಯುತ್ತಿನ ಅಭಾವ ಸಾಮಾನ್ಯ .
ಅದಕ್ಕೂ ಉಪಾಯವಿದೆ. ಮಲೆನಾಡಿನಲ್ಲಿ ಗುಡ್ಡದ ಇಳಿಜಾರಿನಲ್ಲಿ ಸಣ್ಣ ಪುಟ್ಟ ಝ
ರಿಗಳು ಹರಿಯುತ್ತಿರುತ್ತವೆ. ಅದನ್ನು ಕಿರು ಜಲವಿದ್ಯುತ್ ಯೋಜನೆಯ ಮೂಲಕ ವಿದ್ಯುತ್ ವುತ್ಪನ್ನ ಮಾಡಲು ಬಳಸಿಕೊಳ್ಳುತ್ತಾರೆ.

ಇದು ಮಿನಿ ಹೈಡ್ರೋ ಎಲೆಕ್ಟ್ರಿಕ್ ಪವರ್ ಪ್ಲಾಂಟ್






ಎಲ್ಲಾ ಸೌಲಭ್ಯಗಳನ್ನು ಹೊಂದಲು ಸರ್ಕಾರ ಸಹಾಯಧನವನ್ನು ಕೊಡುತ್ತದೆನ್ನುವುದು ಮೆಚ್ಚುವ ವಿಚಾರವಾಗಿದೆ.
ಮಲೆನಾಡಿನ ಸಂಪತ್ತನ್ನು ಯೋಗ್ಯರೀತಿಯಲ್ಲಿ ಬಳಸಿಕೊಂಡರೆ ಮಲೆನಾಡಿಗರಷ್ಟು ಅನುಕೂಲಸ್ತರು ಮತ್ಯಾರಿದ್ದಾರೆ....?

ಮಾಡುವ ಛಲ, ಬಳಸುವ ಕಲೆ ಗೊತ್ತಿದ್ದರೆ ಸಾಕೇ ಸಾಕು.
ವಿಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ.

Saturday, January 2, 2010

ಅಮ್ಮಾ.......



ಅಮ್ಮಾ , ನಿನ್ನ ತೋಳತೆಕ್ಕೆಯಲ್ಲಿ,
ಮಡಿಲ ಮೆತ್ತೆಯಲ್ಲಿ,
ಕಣ್ಣಂಚಿನ ರಕ್ಷೆಯಲ್ಲಿ,
ಬರೆದಿದ್ದು ನನ್ನ ಬಾಳನಕ್ಷೆಯಲ್ಲವೇ...?



ಮೊಗದ ತುಂಬಾ
ಮಮತೆ ಬಿಂಬ,
ಹೊತ್ತೆ ನೀನು, ಹೆತ್ತೆ ನೀನು,
ಗೊತ್ತೇ ಆಗಲಿಲ್ಲ.... ನಿನ್ನ ಕಷ್ಟವೇನು...?



ಅಲ್ಲಿ ನೋವು ಕಾಣೆ, ದುಃಖ ಕಾಣೆ,
ಕಥೆಯಿಲ್ಲ, ವ್ಯಥೆಯಿಲ್ಲ,
ದೇವರಾಣೆಗೂ ಮಮತೆಯೊಂದರ
ಒರತೆಯಷ್ಟೇ..... ಅಲ್ವೇ ಅಮ್ಮಾ...?



[ ಮೇಲಿನ ಚಿತ್ರ ನನ್ನದೇ ರಚನೆ. ಯಾರೂ ಇಲ್ಲದಿದ್ದಾಗ, ಹೊತ್ತು ಕಳೆಯಲು ಏನಾದರೂ ಬೇಕಲ್ಲ . ಅನಿಸಿದ್ದನ್ನು ಬರೆದು ಮುಗಿಸಿದಾಗ ಮನಸ್ಸಿಗೆ ಧ್ಯಾನ ನಂತರ ಸಿಗುವ ಆನಂದ ದೊರೆತಂತೆ ಭಾಸವಾಗುವುದು .
ಇದು ನಾನು ಬಾಲ್ಯದಿಂದ ಬೆಳೆಸಿಕೊಂಡು ಬಂದ ಹವ್ಯಾಸ.
ಗುಣಮಟ್ಟ ಹೇಗೆ ಇದ್ದರೂ.... ಹೆತ್ತವಳಿಗೆ ಹೆಗ್ಗಣ ಮುದ್ದು...
ಹಾಗೆ ...
ಅದನ್ನು ಹೆಚ್ಚಿಸಿಕೊಳ್ಳಲು ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ..]

Monday, December 21, 2009

ನನ್ನ ಕನ್ನಡ ಪ್ರೇಮ....!!..?

ಅಯ್ಯೋ ... ನವೆಂಬರ್ ಕಳೆದು, ಡಿಸೆಂಬರ್ ಕೂಡಾ ಮುಗಿಯುತ್ತಿದೆ , ಇನ್ನೂ ಕನ್ನಡ ಕನ್ನಡ ಎಂದು ಗೋಳಿಡುವುದನ್ನು ನಿಲ್ಲಿಸಿಲ್ಲವೆನ್ರೀ ....ಅಂದರೆ ಹುಷಾರ್ ... ಜಗಳ ಮಾಡಿಬಿಡುತ್ತೇನೆ....!!

ನೋಡಿ ಇವರೇ... ನನ್ನ ಮಕ್ಕಳಿಗೆ ದಿನಾಲೂ ರಾತ್ರೆ ಮಲಗುವಾಗ ಕಥೆ ಕೇಳುವ ಅಭ್ಯಾಸ. ಶಿಶಿರನಂತೂ,'' ಅಮ್ಮಾ ಇವತ್ತು ಬರೀಮೂರು ಕಥೆ ಹೇಳಿದರೆ ಸಾಕು, '' ಎನ್ನುತ್ತಾನೆ.....! ಮಕ್ಕಳಿಗೆ ಕಥೆ ಹೇಳಲು ಸಾಕಷ್ಟು ಪ್ರಾಕ್ಟೀಸ್ ಬೇಕಾಗುವುದು. ಹಗ್ಗದ ಮೇಲೆ ನಡೆದ ಹಾಗೆ.ಶುರು ಮಾಡಿದ ಕಥೆಯನ್ನು ಪೂರಾ ಕೇಳಿದ ಮೇಲೆ , 'ಇದು ಬೇಡ , ಬೇರೆಯದು ಹೇಳು... ' ಎನ್ನುತ್ತಾರೆ.ನಿನ್ನೆ ಹೇಳಿದ ಕಥೆಯನ್ನೇ ಮತ್ತೆ ಹೇಳುವುದಾದರೆ , ಸ್ವರ , ಧಾಟಿ ,ಕಥೆಯ ಶೈಲಿ ಸಂಯೋಜನೆಯಲ್ಲಿ ಚೂರೂ ಮುಕ್ಕಾಗದ ರೀತಿಯಲ್ಲಿಯೇ ಹೇಳಬೇಕು. ಸ್ವಲ್ಪ ವ್ಯತ್ಯಾಸವಾದರೂ ,'ನೀನು ಸುಳ್ಳು ಸುಳ್ಳೇ ಕಥೆ ಹೇಳುತ್ತೀಯ , ' ಎಂಬ ಆರೋಪ ಬೇರೆ.

ಕೆಲವೊಮ್ಮೆ ಕಥೆ ಹೇಳೀ ಹೇಳೀ ನನಗೆ ಬೇಸರ ಬಂದು ನನ್ನವರಿಗೆ ಮಧುರ ಶಿಕ್ಷೆಯನ್ನು ವರ್ಗಾಯಿಸುತ್ತೇನೆ. ಮಕ್ಕಳಿಗೆ ಅಪ್ಪನಕಥೆಯ ವಿಶೇಷತೆಯೇ ಬೇರೆ.......!!!!

ಅಪ್ಪನ ಕಥೆಯಲ್ಲಿ ಬರುವ ಕರ್ಣನ ಕೈಯಲ್ಲಿ A.K. 47 ಇರುತ್ತದೆ... ಅರ್ಜುನ ಸ್ಟೇನ್ ಗನ್ ನಿಂದ ಡಗ...ಡಗ ....ಡಗ..... ಶೂಟ್ ಮಾಡುತ್ತಿರುತ್ತಾನೆ.
ಘತೊತ್ಕಜನ ಬಾಯಿಯಿಂದಂತೂ ಬಾಂಬುಗಳ ಸುರಿಮಳೆ.... !!!
ಭೀಮ ಬಕಾಸುರನಿಗೆ ಒಯ್ಯುವ ಬಂಡಿಯಲ್ಲಿ ಗೋಬಿಮಂಚೂರಿ , ಕಾಶ್ಮೀರಿ ಪುಲಾವ್ , ಟೊಮ್ಯಾಟೋ ಸೂಪ್, ಪಾನಿಪೂರಿ ಇನ್ನಿತರಚಾಟ್ಸ್ ಮತ್ತು ಕೊನೆಯಲ್ಲಿ ಚಾಸ್ [ಮಜ್ಜಿಗೆ] ಇರುತ್ತವಲ್ಲಾ....!
ಗೀತೋಪದೇಶದ ಕೃಷ್ಣ '' worry ಮಾಡ್ಕೋಬೇಡ, ಹೇಳೋದ್ ಸ್ವಲ್ಪ ಕೇಳ್ರಾಜಾ.. ಅನ್ನುತ್ತಾನೆ ಅರ್ಜುನನಿಗೆ.. !
ಕರಡಿ u.p.s. ಮಾರಲು ಹೊರಡುತ್ತದೆ. ಬೆಕ್ಕಿಗೆ ವಿಸಿಟಿಂಗ್ ಕಾರ್ಡ್ ಕೊಡುವುದು. ಕೊಟೇಶನ್ ರೆಡಿ ಮಾಡುವುದು ಮತ್ತು ಬಿಲ್ಕೊಡುವುದು .


ಮಕ್ಕಳಿಗೆ ಅಪ್ಪನ ಕಥೆ ಕೇಳಲು ಮಜಾ ಬರುತ್ತದೆ. ಆದರೆ ಪೂರಾ ಕೇಳಿದ ಮೇಲೆ ಶಿಶಿರನಿಗೆ ಸಂಶಯ ಉಂಟಾಗಿ , 'ಅಮ್ಮಾ ನೀನು ಸರಿಯಾಗಿ ಹೇಳು '... ಎಂದು ನನ್ನ ಕಡೆ ತಿರುಗುತ್ತಾನೆ.ಐಶು ಹೇಳಿಟ್ಟಿದ್ದಾಳೆ , ಪುರಾಣದ ಕಥೆಯಲ್ಲಿ ಬಿಲ್ಲು , ಬಾಣ ಮಾತ್ರ ಇತ್ತು ಅಂತ. ಸಮಸ್ಯೆ ಮತ್ತೆ ನನ್ನ ಸುತ್ತಲೇ ಸುತ್ತ ತೊಡಗುತ್ತದೆ.

ನನ್ನ ಸರಕೆಲ್ಲಾ ಖರ್ಚಾದ ಕಾರಣ ಇದಕ್ಕೊಂದು ಪರಿಹಾರ ಕಾಣಿಸಲು ಹೊಸ ಕಥೆಗಳ ಅನ್ವೇಷಣೆಗೆ ಹೊರಟೆ ಪುಸ್ತಕದಂಗಡಿಗೆ.
ಹತ್ತಿರದಲ್ಲಿರುವ ಅಂಗಡಿಯಲ್ಲಿ ದೊರಕುವ ಪುಸ್ತಕಗಳು ನನ್ನಲ್ಲಿಯೂ ಇರುವುದರಿಂದ , ಬೇರೊಂದು ಮಿನಿ ಮಾಲ್ ಗೆ ಹೋದೆ .. ಬುದ್ಧಿವಂತಳಂತೆ....
ಸಣ್ಣ ಪುಟ್ಟ ವಸ್ತುಗಳನ್ನು ಆಯ್ಕೆ ಮಾಡಿಕೊಂಡು , ಪುಸ್ತಕಗಳೇನಾದರೂ ಇವೆಯಾ ಅಂತ ಕಣ್ಣು ಹಾಯಿಸಿದೆ .. ಪಕ್ಕದ ಸ್ಟ್ಯಾಂಡಿನಲ್ಲಿ ಅರ್ಧ ಇಂಚು ದಪ್ಪದ ರಟ್ಟಿನ ಇಂಗ್ಲೀಷ್ ಪುಸ್ತಕಗಳು ಕಣ್ಣು ಕುಕ್ಕುತ್ತಿದ್ದವು . '' ಕನ್ನಡ ಕಥೆ ಪುಸ್ತಕಗಳು ಎಲ್ಲಿವೆ ...?'' ಅಂತ ಕೇಳಿದಾಗ ಸೇಲ್ಸ್ ಬಾಯ್ ನನ್ನ ವಿಚಿತ್ರವಾಗಿ ನೋಡಿದ .
''ಇಂಗ್ಲೀಶ್ ಬುಕ್ಸ್ ತಗೊಳ್ಳಿ ಮೇಡಂ ... ಯಾವುದು ಕೊಡಲಿ ....? ''
''ಕನ್ನಡ ಪುಸ್ತಕಗಳು ಇಲ್ವೇನ್ರೀ....?''
''ಇಲ್ಲ ಮೇಡಂ ''
''ಯಾಕಿಟ್ಟಿಲ್ಲ....''? ತರ್ಸಿ ...
ಕಾರಣಗಳು ಸಾವಿರಾರು
''ಇಲ್ಲ ಮೇಡಂ, ಕನ್ನಡ ಪುಸ್ತಕ ಯಾರೂ ಕೇಳಲ್ಲ ,
ಖರ್ಚಾಗಲ್ಲ,
ಪುಬ್ಲಿಶರ್ಸ್ ಕಳಿಸಿ ಕೊಡಲ್ಲ ,''
''ಅರೆ... ನೀವು ಆರ್ಡರ್ ಕೊಟ್ರೆ ಯಾಕೆ ಕಳ್ಸಿ ಕೊಡೋಲ್ಲಾರೀ.....?
ಇಲ್ಲ ಮೇಡಂ , ಅವ್ರು rack ಕೊಡೊಲ್ಲಾ ಮೇಡಂ ....
ನನಗೆ ಸಿಟ್ಟಿನಿಂದ ಮೂರ್ಚೆ ಬರುವುದೊಂದೇ ಬಾಕಿ.
'' ಇದೂ ಒಂದು ಕಾರಣಾ ಏನ್ರೀ.... ? ಏನ್ ಹೇಳ್ತಾ ಇದೀರಾ ... ಇದೆ rack ನಲ್ಲೆ ಇಡಬಹುದಲ್ಲಾ.....ನಾನು ಯಾವ ಮಹಾ ಪುಸ್ತಕಗಳನ್ನು ಕೇಳಿದೆ... ? ಮಕ್ಕಳ ಕಥೆ ಪುಸ್ತಕವಪ್ಪಾ ... ಅದೇ ತರದ ಇಂಗ್ಲೀಶ್ ಪುಸ್ತಕ ಇಟ್ಟಿದ್ದೀರಲ್ರೀ...ಇದು ಯಾವ ರಾಜ್ಯಾರೀ ಕನ್ನಡ ಯಾರೂ ಕೇಳಲ್ಲ ಅನ್ನೋದಕ್ಕೆ..ಬೆಂಗಳೂರೇನು ಅಮೆರಿಕಾದಲ್ಲಿದೆಯಾ....? ಸ್ವಲ್ಪಾ ಆದರೂ ಅಭಿಮಾನ ಬೇಡ್ವಾ... ಇಲ್ಲೇ ವ್ಯಾಪಾರ ಮಾಡ್ತೀರ . ಕನ್ನಡದೊರೆಯೇ ಬೇಕು ಇವೆಲ್ಲ ವಸ್ತು ಖರೀದಿಸಲಿಕ್ಕೆ ....... ಅಮೇರಿಕಾದವರು ಬರುತ್ತಾರಾ.. ಇಂಗ್ಲೀಶ್ ಪುಸ್ತಕ ಕೊಂಡೊಯ್ಯೋದಕ್ಕೆ... ? ''
'' ಮೇಡಂ ತರ್ಸಿ ಕೊಡ್ತೀವಿ ಮೇಡಂ, ಇಂಗ್ಲೀಶ್ ಪುಸ್ತಕ ಚೆನ್ನಾಗಿದೆ ನೋಡಿ , ಮೇಡಂ ''

ಅಂಗಡಿಯಿಂದ ಹೊರಬಂದೆ. ಇಂಗ್ಲೀಶ್ ಕಥೆ ಪುಸ್ತಕ ಕೊಂಡು ನಾನು ಓದಿಕೊಂಡು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಮಕ್ಕಳಿಗೆ ಕತೆ ಹೇಳಬೇಕೇ.... ನಾನು ....? ಆಗದು ... ಆಗದು ... ಕನ್ನಡ ಪುಸ್ತಕವೇ ಬೇಕು....
ಬೆಂಗಳೂರಿಗೆ ಕನ್ನಡ ಅಲರ್ಜಿಯಾ......ಗೊತ್ತಾಗುತ್ತಿಲ್ಲಾ. ಕರುನಾಡಿನ ರಾಜಧಾನಿಯಲ್ಲಿ ಕನ್ನಡಕ್ಕೆ ಇಂತಾ ಅವಸ್ತೆ.ಕನ್ನಡ ಮಾತಾಡುವವರನ್ನು ಕಂಡರೆ ಅಸಡ್ಡೆ. ಕನ್ನಡದಲ್ಲಿ ಸಾಹಿತ್ಯ ರಚನಾಕಾರರಿಗೆ ಬರವಿಲ್ಲ . ಸಾಹಿತ್ಯಾಸಕ್ತರಿಗೂ .... ಕನ್ನಡ ಪುಸ್ತಕ ಮಾರಾಟ ಮಳಿಗೆಗಳ ಕೊರತೆ ಇದೆ ಅಷ್ಟೇ.
ಮತ್ತೆರಡು ಅಂತದೆ ಕುಲಮಳ್ಳಾ ಮಿನಿ ಮಾಲಿಗೆ ಹೋದೆ .. ನೋಡೋಣ ಇಲ್ಲಿ ಹೇಗೆ ಅಂತಾ .....ಅಲ್ಲೂ ಹಾಗೆಯೇ..

ನನಗೆ ಭಾಷಾಂಧತೆ ಏನಿಲ್ಲ. ಯಾವ ಭಾಷೆಯೇ ಇರಲಿ ,ಮಕ್ಕಳಿಗೆ ಮಾತೃಭಾಷೆಯಲ್ಲಿ ಭಾವನೆ ಅರ್ಥವಾಗುವಷ್ಟು ಚೆನ್ನಾಗಿ ಬೇರೆ ಭಾಷೆಯಲ್ಲಿ ಆಗುವುದಿಲ್ಲ.
ಇಂಗ್ಲೀಶ್ ಒಂದು ತರಾ ಮಾಯಾವೀ ಭಾಷೆ. ಬೆಂಗಳೂರಿಗರಿಗೆ ಅಡಿಕ್ಷನ್. ರಾಜ್ಯದ ಉಳಿದ ಭಾಗಗಳಲ್ಲಿ ಚಟ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲ. ಹೊರನಾಡಿನಲ್ಲಿ ನೆಲೆಸಿರುವ ಎಷ್ಟೋ ಕನ್ನಡದ ಮಂದಿ ಕನ್ನಡದ ಕಂಪನ್ನ , ಪೆಂಪನ್ನ ನೆನೆಸಿಕೊಳ್ಳುತ್ತಾರೆ.

ಮತ್ತೆ ಮರುವಾರ ಅದೇ ಅಂಗಡಿಗೆ ಹೋದೆ . ಬೆನ್ನು ಬಿಡದ ಬೇತಾಳದಂತೆ.

ಕನ್ನಡ ಪುಸ್ತಕ ಇರಲಿಲ್ಲ .ಮುಂದೆ ಮೂರು ಸಾರಿ ಹೋದಾಗಲೂ ಇದೆ ಕಥೆ. ಸಲ ಮತ್ತೆ ಚೆನ್ನಾಗಿ ಜಗಳ ಮಾಡಿದೆ . ಏನೇನು ಮಾತಾಡಿದೆನೋ... ನೆನಪಿಲ್ಲ ಅಷ್ಟು ಜೋರು ಜಗಳ..

ಅವನು ಪುಸ್ತಕವನ್ನೇ ಇಡದಿದ್ದಿದ್ದರೆ ನನಗೆ ಸಮಸ್ಯೆ ಏನಿರಲಿಲ್ಲ . ಇಂಗ್ಲೀಶ್ ಪುಸ್ತಕ ಇಡುವವನಿಗೆ ಕನ್ನಡ ಪುಸ್ತಕ ಇಟ್ಟರೆ ಆಗುವುದೇನು ಅನ್ನುವುದು ನನ್ನ ಪ್ರಶ್ನೆ. ಕೊಳ್ಳುವವರು ನಾವಿದ್ದೆವಲ್ಲಾ....ಪುಕ್ಕಟೆ ಕೊಡಿ ಅಂತ ಕೇಳಿದೆನಾ..? ಯಾವುದಾದರೂ ಮಾರುವುದು ತಾನೇ.

ಸಲ ನನ್ನವರೂ ನನ್ನ ಜಗಳಕ್ಕೆ ಜೊತೆಯಾಗಿದ್ದರು.
''ಇನ್ನು ನಿಮ್ಮ ಅಂಗಡಿಗೆ ಯಾವ ಕಾರಣಕ್ಕೂ ಬರುವುದಿಲ್ಲ , '' ಎಂದು ಪ್ರತಿಜ್ಞೆ ಮಾಡಿಯೇ ಹೊರಬಂದೆ .ಮಕ್ಕಳಿಗೆಂದು ಆಯ್ದುಕೊಂಡ ಚಾಕೊಲೆಟ್ ಸಹಾ ಅಲ್ಲೇ ಬಿಸಾಕಿ.....

ದಾರಿಯಲ್ಲಿ ನನ್ನವರಿಂದ ಅವಾರ್ಡ್ ಸಿಕ್ಕಿತು.. '' ಪರವಾಗಿಲ್ಲ ಕಣೆ ನೀನು , ಚೆನ್ನಾಗಿ ಜಗಳ ಮಾಡಿದೆ.. ನನ್ನೊಂದಿಗೆ ಮಾತ್ರಾ ಜಗಳ ಮಾಡುವುದು ಅಂದುಕೊಂಡಿದ್ದೆ, '' ಡ್ರೈವ್ ಮಾಡುತ್ತಿರುವವರ ಮುಖಭಾವ ಗೊತ್ತಾಗಲಿಲ್ಲ. ಮೀಸೆಯಡಿಯಲ್ಲಿ ತುಂಟನಗು ಇದ್ದಿರಲೇ ಬೇಕು.....!


ಸಾಧ್ಯವಾದರೆ ಪ್ರಪಂಚದ ಎಲ್ಲಾ ಭಾಷೆಗಳನ್ನೂ ಕಲಿಯೋಣ. ಎಲ್ಲಾ ತಾಯಂದಿರಿಗೂ ಮಗುವಾಗೋಣ . ಆದರೆ ಹೆತ್ತಮ್ಮನನ್ನು ಮರೆಯುವುದು ಎಷ್ಟು ಸರಿ. ಬೇರೆ ಭಾಷೆಗಳನ್ನು ಗೌರವಿಸೋಣ . ಮಾತೃ ಭಾಷೆಯನ್ನು ಬೆಳೆಸೋಣ. ಅಲ್ಲವೇ....?
ಅದೇ ಸಿಟ್ಟಿನಿಂದ ಈ ಸಲದ ಪುಸ್ತಕ ಪ್ರದರ್ಶನಕ್ಕೆ ಹೋದವಳು ನಾಲ್ಕು ಪುಸ್ತಕ ಹೆಚ್ಚಿಗೆ ಖರೀದಿ ಮಾಡಿದ್ದೇನೆ.....!!
ಆ ಪುಸ್ತಕಗಳಿಗೆ ಬೈಂಡ್ ಮಾಡುವಾಗ ಇದೆಲ್ಲಾ ನೆನಪಾಗಿ ಮತ್ತೆ ಸಿಟ್ಟು ಬಂತು..... ಅಷ್ಟೇ..

ನಾನು ಮತ್ತೆ ಬೇರೆ ಅಂಗಡಿಗಳಿಗೆ ಹೋಗುತ್ತೇನೆ.
ಕನ್ನಡ ಪುಸ್ತಕ ಕೇಳುತ್ತೇನೆ.
ಇರದಿದ್ದಲ್ಲಿ ಜಗಳ ಮಾಡಿ ಕಿರಿಕಿರಿ ಮಾಡುತ್ತೇನೆ. ತರದ ಅಂಗಡಿಗಳು ಒಂದಲ್ಲ ಒಂದು ದಿನ ಅರಿತುಕೊಳ್ಳಬಹುದು.
ಬಲ್ಲವರು ಕನ್ನಡಕ್ಕಾಗಿ ಕಹಳೆ ಊದುತ್ತಾರೆ.....
ನಾನು.... ಜಗಳ ಮಾಡುತ್ತೇನೆ.....!!!

ಯಾರಿದ್ದೀರಾ......? ನನ್ನ ಸಿಟ್ಟಿಗೆ ತುಪ್ಪ ಹೊಯ್ಯುವವರು......!
..

Wednesday, December 16, 2009

ಆಕಾಶವೇ ಮಿತಿಯೇ ......?

ಜಗತ್ತನ್ನು ಹೊಸ ದೃಷ್ಟಿಯಿಂದ ನೋಡುವುದು ...
ಹೊಸ ಹೊಳಹಿನೊಂದಿಗೆ ಹೊಸತರ ಸೃಷ್ಟಿ ...
ಪ್ರತಿಯೊಂದು ಕಡೆಯೂ ಹೊಸ ತನ ...!
ಇದು ಸೃಜನಶೀಲತೆಯಲ್ಲವೇ.......?
ಪ್ರಪಂಚದಲ್ಲಿ ಮನುಷ್ಯರಿಗೆ ಮಾತ್ರ ಒಲಿದಿರುವ ಕ್ರಿಯೇಟಿವಿಟಿ ಲೆಕ್ಕವಿಲ್ಲದಷ್ಟು ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ವಿಜ್ಞಾನ ,ತಂತ್ರಜ್ಞಾನ, ಗಣಿತ, ಕಲೆ, ಸಾಹಿತ್ಯ,ವಾಸ್ತುಶಿಲ್ಪ , ವ್ಯಾಪಾರ ಹೀಗೆ ಜೀವನದ ಎಲ್ಲಾ ವಿಭಾಗಗಳಲ್ಲೂ ಮಾನವನ ಹೊಸತನ ದಿನೇ ದಿನೇ ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿದೆ.

ನಮ್ಮ ಮೆದುಳಿನಲ್ಲಿ ಕ್ರಿಯೇಟಿವಿಟಿ ಎಲ್ಲಿ ಹುಟ್ಟುತ್ತದೆ, ಗೊತ್ತೇ ....? ಮೆದುಳಿನ ಮುಂಬಾಗದಲ್ಲಿ . ಅದಕ್ಕೆ frontal lobe ಎನ್ನುತ್ತಾರೆ.ಜೊತೆಗೆ ಜಾಗ ನಿದ್ರೆ , ಮನಸ್ಥಿತಿ [mood] , ಖಿನ್ನತೆ ಮತ್ತು ಚಟಗಳು ಇವುಗಳಿಗೂ ಕಾರಣವಾಗಿದೆ.
ನೋಡಿ ಬೇಕಾದರೆ... ತುಂಬಾ ಕ್ರಿಯೇಟಿವ್ ಆಗಿರುವವರು ಮೂಡಿಗಳಾಗಿರುತ್ತಾರೆ.
ಉದಾ :ಪ್ರಸಿದ್ಧ ಭೌತಶಾಸ್ತ್ರಜ್ಞ ಅಇನ್ಸ್ಟೀನ್ . ಕೆಲವೊಮ್ಮೆ ಅವನಿಗೆ ತಾನ್ಯಾರು , ಎಲ್ಲಿಗೆ ಹೋಗುತ್ತಿದ್ದೇನೆ ಎನ್ನುವುದೇ ಮರೆತುಹೊಗುತ್ತಿತ್ತಂತೆ . ಆದರೆ ಅವನದು ಅದೆಂತಹಾ ಸೃಜನಶೀಲ ವ್ಯಕ್ತಿತ್ವ ಎನ್ನುವುದು ಲೋಕಕ್ಕೆಲ್ಲ ಪರಿಚಿತವಲ್ಲವೇ....?
ಆರ್ನೆಷ್ಟ್ ಹೆಮಿಂಗ್ವೆ .. ಆತ ಪ್ರಸಿದ್ಧ ಬರಹಗಾರ ಮತ್ತು ಕಲಾವಿದ , ಖಿನ್ನತೆಯಿಂದ ಬಳಲುತ್ತಿದ್ದು ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ.
ಅನೇಕ ಕ್ರಿಯೇಟಿವ್ ವ್ಯಕ್ತಿಗಳು ತಮ್ಮ ಹುಚ್ಚುತನಕ್ಕೂ ಹೆಸರಾಗಿರುತ್ತಾರೆ. ಆರ್ಕಿಮಿಡಿಸ್ ಸಾಪೇಕ್ಷ ಸಾಂದ್ರತೆಯ ನಿಯಮ ಹೊಳೆದಾಕ್ಷಣ ಯುರೇಕಾ ....ಯುರೇಕಾ ....ಎನ್ನುತ್ತಾ ಸ್ನಾನಗೃಹದಿಂದ ಬೆತ್ತಲೆಯಾಗಿಯೇ ಬೀದಿಯಲ್ಲಿ ಓಡುತ್ತಾ ಅರಮನೆಗೆ ಹೋದ ಕತೆ ಗೊತ್ತಲ್ಲವೇ ...? ಕ್ರಿಯೇಟಿವಿಟಿ ಇರುವವರೆಲ್ಲಾ ಹೀಗೆಯೇ ಅಂತಲ್ಲ .. ...! ಜಾಗ ಹಾಗಿದೆ ಅಂತ...

ಸೃಜನಶೀಲತೆ ಆಥವಾ ಕ್ರಿಯೇಟಿವಿಟಿ ಅನ್ನುವುದು ಸೃಜನಶೀಲ ವ್ಯಕ್ತಿ , ಪರಿಸರ, ಕ್ರಿಯೆ ಮತ್ತು ಸೃಜನಶೀಲ ಉತ್ಪನ್ನ ಇವುಗಳಿಂದ ಕೂಡಿರುತ್ತದೆ.
ಒಬ್ಬ ವ್ಯಕ್ತಿ ಕ್ರಿಯೇಟಿವ್ ಆಗಿರಲು ಮಾಧ್ಯಮದಲ್ಲಿ ಹೆಚ್ಚಿನ ಬುದ್ಧಿಮತ್ತೆ ಅತ್ಯವಶ್ಯ.ಕ್ರಿಯೇಟಿವಿಟಿ ವಂಶದಲ್ಲಿ ಹರಿಯುತ್ತದೆ.ರೇಡಿಯಂ ಕಂಡುಹಿಡಿದ ಮೇರಿ ಕ್ಯೂರಿ ಮತ್ತು ಪೆಯರಿ ಕ್ಯೂರಿ ಮತ್ತು ಇವರ ಮಕ್ಕಳು ನೊಬೆಲ್ ಪುರಸ್ಕೃತರು.
ಸರ್ ಫ್ರಾಂಸಿಸ್ ಗ್ಯಾಲ್ಟನ್ ಎನ್ನುವವನು ಅನೇಕ ಪ್ರತಿಭಾಶಾಲಿಗಳ , ಪಂಡಿತರ ಜೀವನಚರಿತ್ರೆಗಳನ್ನು ಅಭ್ಯಾಸ ಮಾಡಿ ವಿಷಯವನ್ನು ಸ್ಪಷ್ಟ ಪಡಿಸಿದ್ದಾನೆ . Genius and productive creators ಬಗ್ಗೆ ಅಭ್ಯಾಸ ಮಾಡಿದ ಸ್ವತಹ ಗ್ಯಾಲ್ಟನ್ ಮತ್ತು ವಿಕಾಸವಾದದ ಚಾರ್ಲ್ಸ್ ಡಾರ್ವಿನ್ ಇಬ್ಬರೂ ರಕ್ತಸಂಬಂಧಿಗಳು.


ಸೃಜನಶೀಲತೆ ಎನ್ನುವುದು ಅಭ್ಯಾಸ ಮಾಡಿದಂತೆ ಹೆಚ್ಚುತ್ತಾ ಹೋಗುವುದು. ಉತ್ತಮ ರಿಸರ , ಪ್ರೇರಣೆ, ಬುದ್ಧಿಮತ್ತೆ, ಮತ್ತು ವ್ಯಕ್ತಿತ್ವ ಕ್ರಿಯೇಟಿವಿಟಿಯನ್ನು ಹೆಚ್ಚುಗೊಳಿಸಲು ಸಹಕರಿಸುತ್ತವೆ.

ಆಂತರಿಕ ಪ್ರೇರಣೆ , ಶಿಸ್ತು , ಸಂಯಮ , ಶ್ರದ್ಧೆ, ನಂಬಿಕೆ , ಉತ್ಕ್ರುಷ್ಟತೆಗೆ ಮೀಸಲಾದ ಜೀವನ ಶೈಲಿ , ಅಡತಡೆಗಳಿಗೆ ಹೆದರದೆ ಮುನ್ನುಗ್ಗುವ ಛಲ, ವಿಷಯದ ಬಗ್ಗೆ ಆಳವಾದ ಜ್ಞಾನ ,ಬದ್ಧತೆ ಗುಣಗಳೆಲ್ಲಾ ಸೃಜನಶೀಲ ವ್ಯಕ್ತಿಗಳಲ್ಲಿ ಅಡಕವಾಗಿರುತ್ತವೆ.


ಓಹೋ .. ಕೊರೆತ ಸಾಕು ಮಾಡಿ ವಿಷಯಕ್ಕೆ ಬನ್ನಿ ಅನ್ನುತ್ತೀರಾ.... ? ಕಳೆದ ಸಂಚಿಕೆ ಕೊನೆತುತ್ತು ಮರೆತಿಲ್ಲ ನಾನು.ಅದೂ ಕೂಡಾ ಸೃಜನಶೀಲತೆಗೊಂದು ಚಿಕ್ಕ ನಿದರ್ಶನ ಅನ್ನಲು ಇಷ್ಟೆಲ್ಲಾ ಪೀಠಿಕೆ ಅಷ್ಟೇ...

ಇದು ಒಂದು ಮದುವೆಯ ಆಹ್ವಾನ ಪತ್ರಿಕೆಯ ವಿನ್ಯಾಸವೆಂದರೆ ನಂಬುತ್ತೀರಾ....?
ಬಾಟಲಿಯ
ಕಾರ್ಕ್ ತೆಗೆದಾಗ ಸುರುಳಿ ಮಾಡಿದ ಕರೆಯೋಲೆಯಿತ್ತು. ಬಾಟಲಿಯ ಕುತ್ತಿಗೆಯಲ್ಲಿರುವ ಸಂಚಿಯಲ್ಲಿ ಸುಗಂಧ ಬೀರುವ ಗುಳಿಗೆಗಳು ಮತ್ತು ಮದುವೆ ನಡೆಯುವ ಸ್ಥಳದ ಮಾರ್ಗಸೂಚಿ .ಬಾಟಲಿಯ ಹೊರಮೈಗೆ ವಿವಾಹದ ವಿವರಗಳುಳ್ಳ ಲೇಬಲ್ ಅಂಟಿಸಿದ್ದಾರೆ. ಒಳಬಾಗದಲ್ಲಿ ಚೆಂದಕ್ಕೆ ಟಿಕಲಿಗಳು. ಎಷ್ಟು ಚೆನ್ನಾಗಿ concept workout ಮಾಡಿದ್ದಾರೆ ನೋಡಿ.. !

ಆಹ್ವಾನ ಪತ್ರಿಕೆಯೊಂದನ್ನು ಹೀಗೂ ಮಾಡಬಹುದು ಅನ್ನುವುದು ಇದನ್ನು ನೋಡಿದ ಮೇಲಷ್ಟೇ ನನಗರ್ಥವಾಯಿತು. ನನ್ನವರು ಮೊದಲು ಇದನ್ನು ತೋರಿಸಿದಾಗ ಏನೆಂದು ಗೊತ್ತಾಗದೆ ಬೇಸ್ತು ಬಿದ್ದಿದ್ದೆ ........! ನಿಮ್ಮ ಥರಾನೇ .......!!!

ಸೃಜನಶೀಲತೆಗೆ ಆಕಾಶವೇ ಮಿತಿಯಲ್ಲವೇ....? UNLIMITED CREATIVITY......!!!

ಕೊನೆತುತ್ತು : ಯಾರಿಗೂ ಫೋಟೋದಲ್ಲಿರುವುದು ಏನೆಂದು ಕಂಡುಹಿಡಿಯಲು ಸಾಧ್ಯವಾಗದಿದ್ದರೂ, ಸಾಕಷ್ಟು ತಲೆ ಕೆಡಿಸಿಕೊಂಡಿದಕ್ಕಾಗಿ ಯಾರಿಗೂ ಬೇಜಾರು ಮಾಡಬಾರದೆಂದು ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಗಿದೆ ......!!! ಬೇಕಷ್ಟು ಆಯ್ದುಕೊಳ್ಳಿ...!













Thursday, December 10, 2009

ಇದು ಶಂಕರಭಟ್ಟನ ಕ್ರಿಕೆಟ್ಟು...!

ನಮ್ಮನೆಯಲ್ಲಿ ಆಗಾಗ ಕೇರಂ ಆಡುತ್ತಿರುತ್ತೇವೆ . ಅ೦ದರೆ ವರ್ಷಕ್ಕೆರಡು ಮೂರು ಸಲ..!

ಹಾಗೆ ಹೇಳುವುದಾದರೆ ನಾವೆಲ್ಲಾ ಕೇರಂ ಆಟದಲ್ಲಿ ಶೂರರು.. .....ಆಡಲು ಶುರುಮಾಡಿದೆವೆಂದರೆ ಘಂಟೆಗಟ್ಟಲೆ ಆಡುತ್ತೇವೆ ...

ಒಂದೇ ಬೋರ್ಡನ್ನ..!!

ನಮ್ಮದೂ ಒಂದು ಸ್ಪೆಷಾಲಿಟಿ ಇದೆ ......?

ಪಾನುಗಳನ್ನು ಪೌಚಲ್ಲಿ ಬೀಳಿಸುವುದು .....ಎಲ್ಲರೂ ಆಡುತ್ತಾರೆ .ಅದೇನು ಮಹಾ.. ? ಹೇಗೆ ಹೊಡೆದರೂ ಪಾನು ಬೀಳದಂತೆ ಆಡುವುದು ವಿಶೇಷ ...!!! ಗೊತ್ತಾಯಿತೆ...? ನಾವು ಹಾಗೆ ಆಡುತ್ತೇವೆ. ಒಂದು ತರಾ ಕ್ಷೇಮ ಸಮಾಚಾರದ ಪತ್ರವಿದ್ದ ಹಾಗೆ..

ಪ್ರೀತಿಯ ............ಗೆ

ಇಲ್ಲಿ ನಾವೆಲ್ಲಾ ಕ್ಷೇಮ . ಅಲ್ಲಿ ನೀವೂ ಕೂಡಾ ಕ್ಷೇಮವೆಂದು ನಂಬಿದ್ದೇನೆ.ಇನ್ನೇನೂ ವಿಶೇಷಗಳಿಲ್ಲ . ಉಳಿದ ಸಮಾಚಾರಗಳು ಮುಂದಿನ ಪತ್ರದಲ್ಲಿ ಅಥವಾ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ
.....................


ಮುಂದಿನ ಪತ್ರ ಸಹಾ ಹೀಗೆಯೇ .... ಸ್ವಾರಸ್ಯವಿಲ್ಲದ್ದು.

ಆದರೆ ನಾವು ಕಾಲೇಜಿನಲ್ಲಿದ್ದಾಗ ನೀರಸದಲ್ಲಿಯೇ ರಸ ಹುಡುಕುವ ಪ್ರಯತ್ನ ಮಾಡುತ್ತಿದ್ದೆವು. ತರಗತಿಗೆ ಹೋಗುವ ಅವಸರದಲ್ಲಿದ್ದಾಗ , ಬೇರೆ ಕ್ಲಾಸಿನ ಗೆಳತಿಯರು ಸಿಕ್ಕರೆ ಅವಸರದಲ್ಲೇ ಹೇಳುವುದು..

ಪ್ರೀತಿಯ ಗೆಳತಿ ರೇವತಿ ...

ನಾನು ಕ್ಷೇಮ . ನೀನು ಕ್ಷೇಮವೆಂದು ನಂಬಿದ್ದೇನೆ . ಸಮಾಚಾರ ಹೇಳಲು ಪುರಸೊತ್ತಿಲ್ಲ. ಉಳಿದ ಸಮಾಚಾರಗಳು ಇನ್ನೊಮ್ಮೆ ಸಿಕ್ಕಾಗ.

ಇಂತಿ ನಿನ್ನ ಪ್ರೀತಿಯ ಗೆಳತಿ

.............

ಎನ್ನುತ್ತಾ ಕ್ಲಾಸಿನೊಳಗೆ ಓಡುವುದು...ಕಿರುನಗುತ್ತಾ...



ಹೀಗಿರುವಾಗ ಅಂದು ಮಧ್ಯಾಹ್ನದ ಮೇಲೆ ನಾನು, ಐಶು ಮತ್ತು ನನ್ನವರು ಕೇರಂ ಆಡಲು ಕುಳಿತೆವು.ಐಶು ಪಾನನ್ನೆಲ್ಲಾ ಜೋಡಿಸಿಡುತ್ತಿದ್ದಳು.ಶಿಶಿರ ಮಲಗಿದ್ದವನು ಎದ್ದು ಬಂದ.


''ನನ್ನನ್ನು ಮಾತ್ರಾ ಆಟಕ್ಕೆ ಸೇರಿಸಿ ಕೊಳ್ಲೋಲ್ಲಾ... ''ಅವನದು ಗಲಾಟೆ.
''ಸರಿ , ಇಲ್ಲಿ ಕುಳಿತುಕೋ.''
''ಬೇಡಾ, ನಾನು ಐಶು ಕುಳಿತಲ್ಲಿಯೇ ಕುಳಿತುಕೊಳ್ಳುವುದು , ಐಶು ನೀ ಏಳು ... '' ಪಾಪ.. ಅವಳನ್ನು ಎಬ್ಬಿಸಿ ತಾನು ಅವಳ ಜಾಗದಲ್ಲಿ ಕುಳಿತ ..
''ನಾನೇ ಪಷ್ಟು .....ಆಡುವುದು ..''ಸ್ಟ್ರೈಕರ್ ತಗೊಂಡ . ಶಿಶಿರ ಬಂದನೆಂದರೆ ನಿಯಮಗಳೆಲ್ಲ ಗಾಳಿಗೆ .....ಐಶುಗು ಗೊತ್ತು ಅದು . ಅವಳು ನಗುತ್ತಾ .. ''ಆಡು ಪುಟ್ಟಾ....''
''ನೋಡೀಗ ಅಷ್ಟೂ ಪಾನೂ ನಾನೇ ಬೀಳಿಸ್ತೀನಿ, '' ಎಲ್ಲೆಲ್ಲೋ ಸ್ಟ್ರೈಕರ್ ಇಟ್ಟು ಅಂತೂ ಹೊಡೆದ.ಕೂಗಿದ ,''ಬಿತ್ತೂ,''
ಏನು ಬಿದ್ದಿದ್ದು.. ಡ್ಯೂ....!!!ಸ್ಟ್ರೈಕರ್ ಪೌಚಲ್ಲಿ ಬಿದ್ದಿತ್ತು.
ಅದೆಲ್ಲ ಅವನಿಗೆ ಗೊತ್ತಿಲ್ಲ. ಸ್ಟ್ರೈಕರ್ ಆದರೂ ಬೀಳಲಿ, ಏನಾದರೂ ಬೀಳಲಿ.ಬೋರ್ಡ್ ಮೇಲಿದ್ದ ನಾಲ್ಕು ಪಾನುಗಳನ್ನು'' ಇವಿಷ್ಟು ನಂದು ''ಎನ್ನುತ್ತಾ ಎತ್ತಿಟ್ಟುಕೊಂಡ.ನಮಗೆ ನಗು. ಇವರು ಹೇಳಿದರು , '' ಮಾರಾಯ, ನಿಂದು ಶಂಕರಭಟ್ಟನ ಕ್ರಿಕೆಟ್ಟು,''

''ಏನು..ಅದು ?''


''ನಾವೆಲ್ಲ ಹೈಸ್ಕೂಲಿನಲ್ಲಿದ್ದಾಗ ಕ್ರಿಕೆಟ್ ಮ್ಯಾಚ್ ನಡೆಯುತ್ತಿತ್ತು. ನಮಗೂ ,ಪಕ್ಕದೂರಿಗೂ ನಡುವೆ.ಅಲ್ಲೊಬ್ಬ ಭಯಂಕರ ಆಟಗಾರ , ಬ್ಯಾಟ್ಸಮನ್ .. ಶಂಕರಭಟ್ಟ ಅಂತ. ನಮ್ಮದೆಲ್ಲ ಅಡಿಕೆ ಮರದ ಬ್ಯಾಟು . ಅವನದು ಕಂಪನಿ ಬ್ಯಾಟು ..ಕಾಲಿಗೆ ಶೂ ಮತ್ತೆ ಪ್ಯಾಡು..ನಮಗೆ ಅದೆಲ್ಲಾ ಇರಲಿಲ್ಲ. ನಮ್ಮದೇನಿದ್ದರೂ ಹವಾಯಿ ಚಪ್ಪಲು .ಅಂವ ಬ್ಯಾಟ್ ಬೀಸುತ್ತಾ ಬರುವ ರೀತಿಗೆ ಎಂತಹಾ ಎದುರಾಳಿ ತಂಡದವರೂ ಹೆದರಿ ನಡುಗಬೇಕು...! ಹಾಗೆ. ಬಂದು ನಿಂತವನು ಗಂಬೀರ ವದನನಾಗಿ ಮೈದಾನವನ್ನೆಲ್ಲ ವೀಕ್ಷಿಸಿ, ಕವಾಯಿತು ಮಾಡುತ್ತಿದ್ದ... ಬ್ಯಾಟು ಬೀಸಿ,ಕೂತು, ಎದ್ದು..... ಹಾಗೂ ಸೊಂಟ ತಿರುವಿ...! ಥೇಟ್ ಭಾರತ ತಂಡದ ಆಟಗಾರರಂತೆ.


ಎದುರಿಗೆ ಬೌಲರ್ ಓಡುತ್ತಾ ಬಂದು ಫಾಸ್ಟ್ ಬೌಲಿಂಗ್ ಮಾಡಿದ,
ಹೋ ....... ......... ......... ......... .......... .......... ...........
....ಬ್ಯಾಟ್ ಬೀಸಿದ ಹೊಡೆತಕ್ಕೆ,........ ಎಲ್ಲರೂ ದಂಗಾಗಿ ಮೈದಾನದ ಹೊರಗೆ ನೋಡಿದರು.
ಬಾಲು ಬಿದ್ದಿದ್ದೆಲ್ಲಿ ಗೊತ್ತೇ............?
ಎಲ್ಲೋ ಅಲ್ಲ .. ವಿಕೆಟ್ಟಿಗೆ ತಾಗಿ ಕಾಲು ಬುಡದಲ್ಲಿ... !!!!!!!!!
ಹಾಗಾಯ್ತು ಶಿಶಿರಾ...."
ಐಶು ಗೆ ನಗು ತಡೆಯಲಾಗಲಿಲ್ಲ.


ತುಂಬಾ ತಯಾರಿ ನಡೆಸಿ ನಂತರ ವಿಫಲರಾದರೆ ನನ್ನವರು ಯಾವಾಗಲೂ ಹೀಗೆ ಹೇಳುತ್ತಾರೆ ,
ಇದು ಶಂಕರಭಟ್ಟನ ಕ್ರಿಕೆಟ್ಟು.....


ಕೊನೆ ತುತ್ತು : ಇದು ಏನು ?






ಕಂಡು ಹಿಡಿದವರಿಗೆ ಆಕರ್ಷಕ ಬಹುಮಾನವಿದೆ.....!!!!!

Sunday, December 6, 2009

ಗೀಳು

ಅವಳಿಗೆ ಕಥೆ ಪುಸ್ತಕದ ಗೀಳು....
ಇವನಿಗೆ ಸಿನಿಮಾದ ಗೀಳು...
ಅದು ಏನು ಕಂಪ್ಯೂಟರಿನ ಗೀಳು ನಿನಗೆ ....
ಈ ರೀತಿಯ ಮಾತುಗಳನ್ನು ನಾವು ಕೇಳಿರುತ್ತೇವೆ ಹಾಗು ಆಡಿರುತ್ತೇವೆ.ಈ ಮೇಲಿನ ತರದವು ಅತಿರೇಕಕ್ಕೆ ಹೋದಾಗ ಅದು ಗೀಳು ರೋಗ ಎಂದು ಪರಿಗಣಿಸಲ್ಪಡುತ್ತದೆ.

ಗೀಳು ರೋಗ..... ಇದೊಂದು ಮಾನಸಿಕ ತೊಂದರೆ''ಪುನರಾವರ್ತನೆಗೊಳ್ಳುವ ಆಲೋಚನೆಗಳಿಂದ ಆತಂಕ . ಹುಟ್ಟುತ್ತದೆ. ಆತಂಕವನ್ನು ಹತ್ತಿಕ್ಕಲು , ಅದರಿಂದ ಬಿಡುಗಡೆಗೊಳ್ಳಲು ವ್ಯಕ್ತಿ ಪುನರಾವರ್ತಿತ ಕ್ರಿಯೆಯಲ್ಲಿ ತೊಡಗುತ್ತಾನೆ.'' ಇದು ಆತಂಕದಿಂದ ಹುಟ್ಟುವ ಖಾಯಿಲೆ [anxiety disorder]
ಉದಾ : ಪದೇ ಪದೇ ಕೈ ತೊಳೆಯುವುದು. ದೇವರ ಪೂಜೆ ಮಾಡುತ್ತಲೇ ಇರುವುದು , ಬಾಗಿಲ ಅಗಳೀ ಹಾಕಿದೆಯೋ ಇಲ್ಲವೋ ಎಂದು ಪದೇ ಪದೇ ಪರೀಕ್ಷಿಸುವುದು , ಹಿಂಸಿಸುವ ಆಲೋಚನೆಗಳು. ಲೈಂಗಿಕ ಅಸಂಬದ್ಧತೆಗಳು, ..ಇತ್ಯಾದಿ ...

ಈ ತೊಂದರೆ ಹೆಂಗಸರಿಗಿಂತಾ ಗಂಡಸರಲ್ಲಿ ದುಪ್ಪಟ್ಟು ಹೆಚ್ಚು ಕಾಣಿಸಿಕೊಳ್ಳುತ್ತದೆ.ಪ್ರತಿಶತ ೨ ರಿಂದ ೩ ಜನರಲ್ಲಿ ಈ ಖಾಯಿಲೆ ಕಾಣಿಸಿಕೊಳ್ಳುತ್ತದೆ . ಈ ಗೀಳು ತೊಂದರೆಗೆ ಮೆದುಳಿನ ಅಸಮರ್ಪಕ ಬೆಳವಣಿಗೆ, ನರ ಚೋದಕಗಳ ಸ್ರವಿಸುವಿಕೆಯಲ್ಲಿನ ಏರು ಪೇರು, ಜೀನ್ ಗಳಲ್ಲಿನ ಮಾರ್ಪಾಡು [Gene mutation] ಕಾರಣಗಳಾಗಬಹುದು . ಅನುವಂಶೀಯವಾಗಿಯೂ ಬರಬಹುದು.

ಸ್ವಚ್ಚತೆಯ ಗೀಳು : ಈ ವ್ಯಕ್ತಿಗಳು ಪದೇ ಪದೇ ಕೈ ತೊಳೆಯುತ್ತಲೇ ಇರುವರು.ಬಾಗಿಲ ಹಿಡಿಕೆ ಮುಟ್ಟಿದರೆ , ಕೈ ಚೀಲ ಮುಟ್ಟಿದರೆ, ಕಡೆಗೆ ತಮ್ಮದೇ ತಲೆ, ಕೈ, ಕಾಲು ಮುಟ್ಟಿಕೊಂಡರೂ ತಕ್ಷಣ ಹೋಗಿ ಕೈ ತೊಳೆಯುತ್ತಾರೆ.ಕೈ ತೊಳೆಯುವುದಾದರೂ ಹೇಗೆ..? ಒಮ್ಮೆ ತೊಳೆದದ್ದು ಸರಿಯಾಗಿಲ್ಲವೇನೋ ಎಂಬ ಅನುಮಾನ ಕಾಡಿ ಮತ್ತೆ ಸಾಬೂನು ,ಡೆಟ್ಟಾಲ್ ಇತ್ಯಾದಿಗಳನ್ನೆಲ್ಲಾ ಉಪಯೋಗಿಸಿ ಕೈ ತೊಳೆಯುವುದು. ಹೀಗೆಯೇ ಅರ್ಧ ತಾಸು ಕೈ ತೊಳೆಯುತ್ತಲೇ ಇರುವರು. ಯಾವಾಗಲೂ ಕೈ ತೊಳೆಯುತ್ತಲೇ ಇರುವುದರಿಂದ ಚರ್ಮ ಸುಲಿದು ಹುಣ್ಣುಗಳಾಗಬಹುದು [Dermatitis].

ಬಾಗಿಲ ಹಿಡಿಕೆಯಲ್ಲಿ ರೋಗಾಣುಗಳಿರುತ್ತವೆ .ಅದನ್ನು ಮುಟ್ಟಿ ಕೈ ತೊಳೆಯದೇ ಉಳಿದ ಕಡೆ ಮುಟ್ಟಿದರೆ ರೋಗಾಣುಗಳು ಹರಡುತ್ತವೆ. ಎಲ್ಲರಿಗೂ ರೋಗ ಬರುತ್ತದೆ ಎನ್ನುವುದು ಇವರ ಸಮರ್ಥನೆ.ಬಾರಿ ಬಾರಿಗೂ ಕೈ ತೊಳೆಯುವುದು ಇವರ ಆತಂಕ ನಿವಾರಣೆಗಾಗಿ....! ಈ ರೀತಿ ಅರ್ಥ ಹೀನವಾಗಿ ವರ್ತಿಸುವುದು ಅವರ ಗಮನದಲ್ಲೇ ಇದ್ದರೂ ಬಿಡಲಾರರು.

ಹಿಂಸೆಯಲ್ಲಿ : ಕೆಲವರಿಗೆ ಬೇರೆಯವರನ್ನು ಹಿಂಸಿಸಬೇಕೆನ್ನುವ ಆಲೋಚನೆಗಳು ಬರುತ್ತವೆ. ಆದರೆ ಇವರು ಹಿಂಸಾ ವಿನೋದಿಗಳಲ್ಲ. ಈ ರೀತಿ ಆಲೋಚನೆಗಳು ಬರುತ್ತವೆ ಎಂದು ಸ್ವತಹ ಆತಂಕಕ್ಕೊಳಗಾಗುತ್ತಾರೆ.

ವಸ್ತುಗಳ ಸಂಗ್ರಹ [compulsive hoarding] : ಇದು ಒಂದು ತರಹ ಅನುಪಯೋಗಿ ವಸ್ತುಗಳ ಮೇಲಿನ ಮೋಹ. ನಾವು ಯಾವ ವಸ್ತುಗಳನ್ನು ಕಸ ಎಂದು ತೊಟ್ಟಿಗೆ ಎಸೆಯುತ್ತೆವೋ ಅಂತಹಾ ವಸ್ತುಗಳೆಲ್ಲವೂ ಈ ವ್ಯಕ್ತಿಗೆ ಅತ್ಯಮೂಲ್ಯವಾದುದಾಗಿರುತ್ತದೆ.ಕೋಣೆಯ ತುಂಬಾ ಹಳೆ ಪೇಪರ್ ರಾಶಿ, ಗೋಣಿ ಚೀಲಗಳು, ಹರಕು ಬಟ್ಟೆ ,ಒಡಕು ಡಬ್ಬ ,ಹಣ್ಣುಗಳ ಸಿಪ್ಪೆ,ಹೀಗೆ ಎಲ್ಲಾ ರೀತಿಯ ಕಸಗಳನ್ನೂ ಕೂಡಿಟ್ಟುಕೊಂಡಿರುತ್ತಾರೆ.ಈ ಕೊಳಕುತನದಿಂದಾಗಿ ದುರ್ವಾಸನೆ ಮತ್ತು ಇಲಿಗಳ ಒಡನಾಟ ಸಾಕಷ್ಟಿರುತ್ತದೆ. ಯಾವಾಗಲಾದರೂ ಬೇಕಾಗಬಹುದು ಎಂಬ ದೂರದೃಷ್ಟಿ....! ಬೇರೆಯವರಿಂದ ಕಡ ತಂದ ವಸ್ತುಗಳನ್ನು ಹಿಂತಿರುಗಿಸಲಾರದ ವ್ಯಾಮೋಹ .. ಮತ್ತು ಕೆಲವೊಮ್ಮೆ ಕಳ್ಳತನದ ಸ್ವಭಾವ [kleptomania]ವನ್ನು ಸಹಾ ಹೊಂದಿರುತ್ತಾರೆ.ಯಾವುದೇ ಭಾವನಾತ್ಮಕ ಸಂಬಂಧವಿರದಿದ್ದರೂ ಕೂಡಾ ಹಾಳಾದ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅವು ವಸ್ತುಗಳಾಗಲೀ,ಪ್ರಾಣಿಗಳಾಗಲೀ, ಹಣವಾದರೂ ಆಗಲಿ. ಅನಗತ್ಯ ಸಂಗ್ರಹ ಒಂದು ಗೀಳೇ......

ಲೈಂಗಿಕತೆಯಲ್ಲಿ ಗೀಳು [sexual obsessions] : ಈ ಗೀಳಿರುವವರಲ್ಲಿ ಅವರಿಗೆ ಯಾವ ವ್ಯಕ್ತಿಯೇ ಇರಲಿ, ಅಪರಿಚಿತರು,ಬಂಧುಗಳು, ಮಕ್ಕಳು, ಸಹವರ್ತಿಗಳು, ಪೋಷಕರು,ಅಲ್ಲದೆ ಪ್ರಾಣಿಗಳ ಜೊತೆಯಲ್ಲಿ ಕೂಡ ಲೈಂಗಿಕತೆಗೆ ಸಂಬಂಧಿಸಿದ ಅರ್ಥಹೀನ ಯೋಚನೆಗಳು ಪದೇ ಪದೇ ಬರ ತೊಡಗುತ್ತವೆ.ಇಂತಹಾ ಆಲೋಚನೆಗಳಿಂದ ಆತಂಕಕ್ಕೊಳಗಾಗಿ ಕೀಳರಿಮೆಯಿಂದ ತನ್ನನ್ನೇ ಟೀಕಿಸಿಕೊಳ್ಳತೊಡಗುತ್ತಾನೆ. ಸದಾ ಆತಂಕದಲ್ಲಿಯೇ ಇರುವುದರಿಂದ ಲೈಂಗಿಕ ಅಸಾಮರ್ಥ್ಯ ಕಾಣಿಸಿಕೊಳ್ಳುತ್ತದೆ. ಮತ್ತೆ ಆತಂಕ.....ತಾನೇನಾದರೂ ಸಲಿಂಗ ಕಾಮಿಯಿರಬಹುದೇ... ? ಸಂಗಾತಿಯೊಂದಿಗಿನ ನಿರಾಸಕ್ತಿ ಈ ರೀತಿಯ ಆಲೋಚನೆಗಳಿಗೆ ಕಾರಣವಾಗುತ್ತದೆ.
ಕೆಲವೊಮ್ಮೆ ಹೀಗೂ ಇರುತ್ತದೆ . ಈ ಗೀಳಿರುವವರು ಯಾವುದೇ ಹೆಂಗಸಿನೊಂದಿಗೆ ಹಸ್ತಲಾಘವ ಮಾಡಲು ಹಿಂಜರಿಯುತ್ತಾರೆ.ಕಾರಣ... ಇದರಿಂದ ಹೇಗಾದರೂ [?] ಆಕೆ ಗರ್ಭಿಣಿಯಾಗಿಬಿಟ್ಟರೆ........??? ಹೀಗೆಲ್ಲಾ ಆಗುವುದಿಲ್ಲ ಎನ್ನುವುದು ಗೊತ್ತಿದ್ದರೂ ಕೂಡ ತಮ್ಮ ಆಲೋಚನೆಯನ್ನು ಹತ್ತಿಕ್ಕಲಾರದವರಾಗುತ್ತಾರೆ.

ಈ ಗೀಳು ರೋಗದವರಿಗೆ ತಮ್ಮ ಆಲೋಚನೆಗಳೆಲ್ಲಾ ಅಸಂಬದ್ಧ ಎಂದು ಗೊತ್ತಾಗುತ್ತದೆ . ತಾವ್ಯಾಕೆ ಈ ರೀತಿ ವರ್ತಿಸುತ್ತೇವೆ ಎಂದು ಆತಂಕ ಪಡುತ್ತಲೇ ಮತ್ತೆ ಸಂಬಂಧಪಟ್ಟ ಕ್ರಿಯೆಯಲ್ಲಿ ತೊಡಗುತ್ತಾರೆ. ಮತ್ತೆ ಆತಂಕ..... ಮತ್ತೆ ಕ್ರಿಯೆ... ವರ್ತುಲದಲ್ಲಿ ಸಿಲುಕಿಕೊಳ್ಳುತ್ತಾರೆ.

ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಗೀಳುರೋಗ [obsessive compulsive disorder] ದವರಿಗೂ ಗೀಳು ವ್ಯಕ್ತಿತ್ವ [obsessive compulsive personality disorder] ದವರಿಗೂ ವ್ಯತ್ಯಾಸವಿದೆ.

ಗೀಳು ರೋಗದವರು ತಮ್ಮ ಆಲೋಚನೆಗಳು ಅರ್ಥವಿಲ್ಲದ್ದು ಎಂದು ಅರಿತಿರುತ್ತಾರೆ. ಆದರೆ ಅದನ್ನು
ಸರಿಪಡಿಸಿಕೊಳ್ಳಲಾರದವರಾಗಿರುತ್ತಾರೆ.

ಆದರೆ ಈ ಗೀಳು ವ್ಯಕ್ತಿತ್ವದವರದ್ದು ಮಾತ್ರಾ ಸ್ವಲ್ಪ ಕಷ್ಟವೇ .ಈ ವ್ಯಕ್ತಿಗಳು ಗೀಳು ರೋಗದ ಎಲ್ಲಾ ಲಕ್ಷಣಗಳನ್ನು ಹೊಂದಿದ್ದರೂ ಕೂಡಾ ಅದನ್ನು ಒಪ್ಪಿಕೊಳ್ಳಲಾರರು....!ಪ್ರತಿಯೊಂದರಲ್ಲೂ ಪರಿಪೂರ್ಣತೆ, ಅಚ್ಚುಕಟ್ಟುತನ ,ನಿಯಮ ಪರಿಪಾಲನೆ ಇವುಗಳನ್ನು ಅಗತ್ಯಕ್ಕಿಂತಲೂ ಹೆಚ್ಚು ನಿರೀಕ್ಷಿಸುತ್ತಾರೆ. ಹೀಗೇ ಇರಬೇಕು ಎಂಬ ಪೂರ್ವ ನಿರ್ಧಾರಿತರಾಗಿರುವ ಇವರು ಅದು ಸರಿಯಿಲ್ಲ ,ಇದು ಸರಿಯಿಲ್ಲ ಎಂಬ ಆತಂಕದಲ್ಲಿಯೇ ಯಾವಾಗಲೂ ಇರುತ್ತಾರೆ. ಅತಿ ನಿರೀಕ್ಷೆಯಿಂದ ಯಾವ ಕೆಲಸವನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ.ಇದು ತಮ್ಮದೊಂದು ಖಾಯಿಲೆ ಎಂದು ಸುತರಾಂ ಒಪ್ಪಿಕೊಳ್ಳಲಾರರು. Perfectionist ಎಂಬ ಸ್ವಯಂ ಬಿರುದಿನಿಂದ ಕಂಗೊಳಿಸುತ್ತಿರುತ್ತಾರಲ್ಲ ....!!! ತಮ್ಮ ಕೆಲಸಗಳು ಎಷ್ಟು ಸರಿ ಎಂಬುದನ್ನೂ , ಕೈ ತೊಳೆಯದಿದ್ದರೆ ರೋಗ ಹೇಗೆ ಹರಡುತ್ತದೆ ಎನ್ನುವುದಕ್ಕೆ ಬೇಕಾದರೆ ಒಂದು ಘಂಟೆ ಉಪನ್ಯಾಸ ಕೊಡಬಲ್ಲರು . ದುಡ್ಡು ಕೂಡಿ ಇಡದಿದ್ದರೆ ಮುಂದೆ ಏನೇನು ಕಷ್ಟ ಅನುಭವಿಸ ಬೇಕಾಗುವುದೋ ಎಂಬ ಆತಂಕದಿಂದ ಖರ್ಚೇ [ಅತಿ ಮಿತ ] ಮಾಡದೆ ಕೂಡಿ ಇಡುತ್ತಲೇ ಹೋಗುವರು ....!!

ಒರಟುತನ , ಅತಿಯಾದ , ಅನಗತ್ಯ ನೈತಿಕ ಪ್ರದರ್ಶನ, ವಿರಾಮದಲ್ಲೂ ಅಗತ್ಯವಿಲ್ಲದಿದ್ದರೂ ಕೆಲಸ ಮಾಡುತ್ತಲೇ ಇರುವುದು ಇತರ ಲಕ್ಷಣಗಳು.ಅತಿ ನಿರೀಕ್ಷೆಯಿಂದ ಕೆಲವೊಮ್ಮೆ ಸಂಬಂಧಗಳೇ ಕಳಚಿಕೊಳ್ಳುವುವು. [ಗಂಡ ಹೆಂಡಿರಲ್ಲಿ,ತಂದೆ ಮಕ್ಕಳ ನಡುವೆ ]

ಸೈಕೋ ಥೆರಪಿ ಮತ್ತು ಔಷಧಿಗಳಿಂದ ಗೀಳನ್ನು ಹೋಗಲಾಡಿಸಬಹುದು . ಚಿಕಿತ್ಸೆ ಹೆಚ್ಚಿನ ಸಮಯವನ್ನು ಬೇಡಿದರೂ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ. ಬಂಧುಗಳೂ ಮತ್ತು ಸಮಾಜದ ಸಹಾಯವಿದ್ದಲ್ಲಿ ಈ ಗೀಳಿನಿಂದ ಮುಕ್ತರಾಗಬಹುದು.

ಹಾಗಾಗಿ ನಮಗೇನಾದರೂ ಈ ರೀತಿಯ ವ್ಯಕ್ತಿಗಳು ಎದುರಾದಲ್ಲಿ ನಾವು ಕಿರಿಕಿರಿಗೊಳಗಾಗದೆ ಸುಮ್ಮನಿದ್ದು ಸೌಹಾರ್ಧತೆಯನ್ನು ಪ್ರದರ್ಶಿಸುವುದು ಒಳಿತು.

ಕೊನೆ ತುತ್ತು :ಅನಗತ್ಯವಾಗಿ ಪುಸ್ತಕಗಳ ಸಂಗ್ರಹ ಮತ್ತು ಒಂದೇ ಪುಸ್ತಕದ ಅನೇಕಪ್ರತಿಗಳನ್ನು ಕಾರಣವಿಲ್ಲದೆ ಸಂಗ್ರಹಿಸಿಟ್ಟುಕೊಳ್ಳುವುದನ್ನು Bibliomaniya ಎನ್ನುತ್ತಾರೆ.

Tuesday, December 1, 2009

ನಲ್ಲನಿಗೊಂದು ಎಸ್ಸೆಮ್ಮೆಸ್ಸು ......?

ಕಾಯುತ್ತಿದ್ದೇನೆ ...
ನಿನ್ನಲ್ಲೇ ಮನಸಿಟ್ಟು
ಬಾಗಿಲಿಗೆ ದೃಷ್ಟಿ ನೆಟ್ಟು ..
ನೆನೆಸುತ್ತಾ ...
ಮೊದಲ ನೋಟ..
ಕೊಡಿಸಿದಾ ಪಾನಿಪೂರಿ
ಮುಡಿಸಿದಾಮಲ್ಲಿಗೆಯ ಘಮ ...
ಉಣದೆ...
ತಿನದೇ..
ಒಲೆ ಹೊತ್ತಿಸದೆ
ದಾರಿ ಕಾಯುತ್ತಿದ್ದೇನೆ ಪ್ರಿಯಾ ....
ಬಾ
ಬೇಗ
ಆಫೀಸಿನಿಂದ....
ಕಟ್ಟಿಸಿಕೊಂಡು
ಸಾಲೆದೋಸೆ
ಹೋಟೆಲಿನಿಂದ.....!!!!!