Tuesday, November 2, 2010

ಹಬ್ಬದ ವಿಶೇಷ ...?

ಬಂದೇ ಬಿಟ್ಟಿತಲ್ಲ.. ದೀಪಗಳ ಹಬ್ಬ, ಒಡಲೊಳಗಿನ  ಅ೦ದಕಾರವನ್ನು  ಹೊಡೆದೋಡಿಸುವ ಬೆಳಕಿನ ಹಬ್ಬ , ಅರಿವಿನ ಹಬ್ಬ,   ಸೊಬಗಿನ ದೀಪಾವಳಿ ಹಬ್ಬ..!


ವಿಶೇಷ ಏನೆಂದರೆ ಎರಡಿವೆ. ಮೊದಲನೆಯದು ಹಬ್ಬವನ್ನು ಈ ಸಲ ಬೆಂಗಳೂರಲ್ಲೇ ಆಚರಿಸುತ್ತೇವೆ...!  ಅದು ವಿಶೇಷವಾ...? ಎಂದು ಹುಬ್ಬೇರಿಸಬೇಡಿ. ನಾನಾ ತರದ ಕಾರಣಗಳಿಂದ ಊರಿಗೆ ಹೋಗಲು ಆಗದೆ ಇದ್ದುದರಿಂದ  ನಾವು ಇಲ್ಲಿಯೇ  ''ಶೇಷ''.   ಹಬ್ಬವಾದ್ದರಿಂದ'' ವಿ '' ಹಚ್ಚಲಾಗಿದೆ.


ಊರಲ್ಲಿ ಹಬ್ಬದ ಹಿಂದಿನ ದಿನ ನಡೆಸುವ ತಯಾರಿಯನ್ನು ನಾನಿಲ್ಲೇ ನೆನೆಸಿಕೊಳ್ಳುತ್ತೇನೆ....!

ಭೂರೆ ಹಬ್ಬದ ಹಿಂದಿನ ದಿನ ಮನೆ ಮಾರನ್ನು, ತೊಳೆದು ಬೆಳಗಿ, ಬಾಗಿಲಿಗೆ, ಗೋಡೆಗೆ, ಸ್ನಾನದ ಹಂಡೆಗೆ ಎಲ್ಲಾಕಡೆ ಕೆಮ್ಮಣ್ಣು ಹಚ್ಚಿ, ಶೇಡಿ ಬರೆಯುವುದರಿ೦ದ ಹಿಡಿದು , ಊರಿಗೆ ನಾನೇನಾದರೂ ಹೋಗಿದ್ದಿದ್ದರೆ ಶೇಡೀ ಬರೆಯುವ ಕೆಲಸ ನನಗೇ ಕೊಟ್ಟು ಗೌರವಿಸುವುದರಿಂದ   ಹಿಡಿದು .... ಹಂಡೆಗೆ  ಊರೆಲ್ಲಾ ಸುತ್ತಿ ಹರ್ಕೊಂಡು ಬಂದ ಕೈಯಿಂಡ್ಲೆ ಕಾಯಿ ಬಳ್ಳಿಯನ್ನು ಸುತ್ತಿ, ಹೊಸ ನೀರು ತುಂಬಿ, ಆಮೇಲೆ ಭೂರೆ ದಿನ ಬೆಳಗಾಗಿ ಮುಂಜಾವಿನಲ್ಲೇ  ಆಯಿ ಭೂರೆ ನೀರು ತುಂಬಿ ಪೂಜೆ ಮಾಡುವಾಗ ' ಜಾಗಟೆ  ಬಡಿಲಕ್ಕು ಎದ್ಕಳ್ರೆ' ಎಂದು ಕರೆದು ಎಬ್ಬಿಸುವುದರಿಂದ ಹಿಡಿದು..  ಆಮೇಲೆ ತಲೆಗೆ ಎಣ್ಣೆ ಹಾಕಿ ಕೊಟ್ಟ ಕಾಯಿಸುಳಿ, ಸಕ್ರೆ ತಿಂದು ಸ್ನಾನ ಮಾಡಿ ಕಡುಬಿನ ಊಟ ಮಾಡಿದ್ರೆ ಭೂರೆ ಊಟ ಮುಗೀತು.ನನ್ನ ತವರು ಮನೆ ಒಂಟಿ ಮನೆ. ಉಳಿದ ಮನೆಗಳೆಲ್ಲಾ ದೂರ..   ಮತ್ತು ಸದಾಕಾಲ ನಾಯಿಕಾವಲು ಇರುವುದರಿಂದ ಭೂರೆಗಳುವಿಗೆ ಅವಕಾಶವಿಲ್ಲ...!  




ಮತ್ತು ಮರುದಿನ ಅಮಾವಾಸ್ಯೆಯ ದಿನ ಹಿತ್ತಲೆಲ್ಲಾ ಅಲೆದು  ಚಂಡುಹೂ ಕೊಯ್ದು  ಗೋವಿನ ಕೊರಳಿಗೆ ಒಪ್ಪುವಂತೆ ಅದರ ದಂಡೆಗಳನ್ನು ಮಾಡಿ  ಜೋಡಿಸಿಡುವದು ಮನಸ್ಸಿಗೊಪ್ಪುವ ಕೆಲಸ. ದೀಪಾವಳಿ ಹಬ್ಬದ ದಿನ ಮಾತ್ರಾ ತುಂಬಾ ಸಂಭ್ರಮದ ದಿನ.ಎಲ್ಲರೂ  ಬೆಳಗ್ಗೆ ಬೇಗೆದ್ದು,
ಸೂರ್ಯ ಹುಟ್ಟುಟ್ಟುತ್ತಲೇ ಗೋಪೂಜೆಯೂ ಮುಗಿಯ ಬೇಕೆನ್ನುವುದು ಅಪ್ಪಯ್ಯನ ಸಂಪ್ರದಾಯ. ಅದೇ ಚಂದ ಎನ್ನುವುದು ಅವನ ಧೋರಣೆ. 
ಮಕ್ಕಳು  ಮೊಮ್ಮಕ್ಕಳೆಲ್ಲಾ ಬೇಗೆದ್ದು  ಪೂಜೆಯ ನಂತರ ಹುಲ್ಲುದೇವರ [ಹುಲಿದೇವರ] ಬನಕ್ಕೆ ಹೋಗಿ  ಅಲ್ಲಿ ಹಣ್ಣು ಕಾಯಿ ಪೂಜೆ ಮಾಡಿ ಪಟಾಕಿ ಹೊಡೆದು ಮನೆಗೆ ಬಂದು  ತುಳಸಿ ಮುಂದೆ ಸುತ್ತ ಮುತ್ತಲಿನ ಭೂತ, ಚೌಡಿ ಗಳಿಗೆಲ್ಲಾ ಕಾಯಿ ಒಡೆದು ಅಪ್ಪಯ್ಯ ಅವರನ್ನೆಲ್ಲಾ ಸರಿ ಮಾಡಿಟ್ಟುಕೊಳ್ಳುವುದನ್ನೂ ನೆನೆಸಿಕೊಳ್ಳುವುದಕ್ಕೆ ಹಿತ. 

ಆಮೇಲೆ ಬೆಳಗಿನ ತಿಂಡಿ ಸವತೆ ಕಾಯಿ ತೆಳ್ಳವು ತಿನ್ನದೂ ಅಂದ್ರೆ  ಅದರ ಸುಖ  ತಿಂದೇ ತಿಳಿಯಬೇಕು..!  ಆಮೇಲೆಲ್ಲಾ ಹೋಳಿಗೆ ಮಾಡುವುದೂ,  ಸೊಂಪಾಗಿ ಹಬ್ಬದೂಟ ಉಂಡು ಒಂದು ನ್ಯಾಪ್ ತೆಗೆಯುವುದು.  ಸಾಯಂಕಾಲ   ಎಲ್ಲ ಕಡೆ ಕೈಹಿಂಡ್ಲೆ ಕಾಯಿ ಅರ್ಧ ಮಾಡಿ ಅದಕ್ಕೆ ಸೂಡಿ ಸಿಕ್ಕಿಸಿ ದೀಪ ಹಚ್ಚಿಟ್ಟು ಹಬ್ಬ ಕಳಿಸುವುದೊಂದು  ಆಯಿಯ ಕೆಲಸ. ಮೊಮ್ಮೊಕ್ಕಳದು  ಜನ್ಗಟೆ  ಹೊಡೆದು ಸಾಂಪ್ರದಾಯಿಕ ಸ್ಲೋಗನ್ನುಗಳಾದ 'ದಿಪ್ ದಿಪ್ ದೀವಾಳ್ಗ್ಯೋ ಹಬ್ಬಕ್ಕೊಂದ್ ಹೋಳಿಗ್ಯೋ.. ಜೊತೆಗೆ ತುಂಟು ಮಕ್ಕಳ ಬಾಯಲ್ಲಿ ಹಬ್ಬಕ್ಕೊಂದ್ ಹರ್ಕ್ ಹೋಳಿಗ್ಯೋ.. ಎನ್ನುತ್ತಾ ಹಬ್ಬ ಕಳಿಸುವುದು ವಾಡಿಕೆ.ಇಲ್ಲಿಗೆ  ಹಬ್ಬ ನಮ್ಮ ಕಡೆಯಿಂದ ಮುಗಿದಂತೆ.
ಮಧ್ಯ ರಾತ್ರೆ ಯಲ್ಲಿ  ಬರುವ ಹಬ್ಬ ಹಾಡುವುವರನ್ನು ಸುಧಾರಿಸುವುದು ಅತ್ತಿಗೆಯಂದಿರ ಕೆಲಸ..ಮಲಗಿದಲ್ಲಿಯೇ, ಅಥವಾ ಅಲ್ಲೇ ಕುಳಿತೋ ಬಾಗಿಲ ಮರೆಯಲ್ಲಿ ನಿಂತೋ  ತೂಕಡಿಸುತ್ತಾ ಹಬ್ಬ ಹಾಡುವವರ ಹಾಡುಗಳನ್ನು ಕೇಳುವುದು  ನಮ್ಮ ಕೆಲಸ..!




ಈ ಸಲ ಹೀಗೆ ಹಬ್ಬವನ್ನು ನೆನೆಸುವುದೇ ವಿಶೇಷ. ಎದುರಿಗೆ ಇರುವುದರಲ್ಲಿರದ ಸುಖ ಕಲ್ಪನೆಯಲ್ಲಿದೆ ಅಲ್ಲವೇ..?   ಸಂಭ್ರಮದ  ದೀಪಾವಳಿ ಕೆಟ್ಟದ್ದನ್ನು ನಾಶ ಮಾಡಲು ಜ್ಞಾನದ ದಾರಿ  ದೀಪ ಹಚ್ಚಲು ಪ್ರತಿ ವರ್ಷ ಬರುತ್ತಲೇ   ಇರುತ್ತದೆ.. ಅರಿವಿನ ನಡುಗೆ ಮಾತ್ರ ನಮ್ಮದಾಗಬೇಕಷ್ಟೇ.


ಇನ್ನೊಂದು..ಈ ವಿಶೇಷದಲ್ಲಿ ಮತ್ತೊಂದು ವಿಶೇಷ.

ದೀಪಾವಳೀ ಹಬ್ಬದ ಸಂಜೆ ಎಲ್ಲರೂ ದೀಪ ಹಚ್ಚಿಟ್ಟು ಕೈ ಮುಗಿದು  ಕೈ ವರೆಸಿಕೊಂಡರೆ ತಲವಾಟದ ರಾಘಣ್ಣ ಮಾತ್ರ ಬೇರೆ ಐಡಿಯಾ ಮಾಡಿದ್ದಾರೆ.  ರಾಘಣ್ಣ ಅಂದರೆ ಶ್ರೀಶ೦  ಬ್ಲಾಗಿನ ರಾಘವೇಂದ್ರ ಶರ್ಮ...!  

ಇವರದ್ದು ಹೊಸ ನಮೂನೆಯ ದೀಪ...!   ತಮ್ಮ ಜೀವನಾನುಭವ, ಜೇನು ಕೃಷಿ , ಅಡಿಕೆ ಕೃಷಿ ಇವುಗಳ ಸಾರವನ್ನೆಲ್ಲಾ ತೆಗೆದು   ಕಥೆ ಕಟ್ಟಿ, ಅದನ್ನೆಲ್ಲ ಸಂಗ್ರಹಿಸಿ ''ಕಟ್ಟು ಕಥೆಯ ಕಟ್ಟು''  ಮಾಡಿ ಅದನ್ನು ಪ್ರಕಟಿಸುತ್ತಿದ್ದಾರೆ ಪುಸ್ತಕವಾಗಿ. ದೀಪಾವಳಿ ಸಂಜೆಯನ್ನು ಹೀಗೆ ಅರ್ಥಪೂರ್ಣವಾಗಿಸುತ್ತಿದ್ದಾರೆ. ಇವರ ಜೇನು ಕೃಷಿಯ  ಸಿಹಿಯನ್ನು ಮೆಲ್ಲುತ್ತಾ ನಮಗೆ  ಜ್ಞಾನ ಕೃಷಿ   ಮಾಡಲೊಂದು ಅವಕಾಶ..!ಎಲ್ಲ ಕಡೆ ಸೋಸಿ ತಂದ ಜೇನು ಹನಿಗಳನ್ನು  ಪುಸ್ತಕ  ಪಾತ್ರೆಯಲ್ಲಿ  ಇಟ್ಟು ಕೊಡುತ್ತಿದ್ದಾರೆ ಸವಿಯಿರೆಂದು.   ಆಗಾಗ ಕೈ ಚೀಲದಿಂದ ತೆಗೆದು ಸವಿಯಬಹುದು. ತುಪ್ಪ ಸಕ್ರೆ ಪಾಕದಲ್ಲಿ ನೆನೆಸಿದ   ಹೋಳಿಗೆಯ ಸವಿದಂತೆ. ಗುಡ್ ಐಡಿಯಾ ...!


ಈ ಎರಡೂ ಸಂಬ್ರಮಕ್ಕೂ ನನ್ನದು ಗೈರು ಹಾಜರಿ  ಅನ್ನುವುದೇ ಶೇಷ. ರಾಘಣ್ಣನ ಕಾರ್ಯಕ್ರಮಕ್ಕೆ ನನ್ನ ಶುಭ ಹಾರೈಕೆಗಳನ್ನು ಇಲ್ಲಿಂದಲೇ ರವಾನಿಸುತ್ತಿದ್ದೇನೆ. ಹಾಗಾಗಿ ನೀವು ಹೋದವರು ಅಲ್ಲಿ ಏನೇನೆಲ್ಲ ನಡೆಯಿತು ?ಕಾರ್ಯಕ್ರಮ ಹೇಗಾಯ್ತು ? ಅನ್ನುವುದನ್ನು ನನಗೂ ಹೇಳುತ್ತೀರಲ್ಲವೇ..? 


ನಿಮಗೆಲ್ಲಾ ದೀಪಾವಳಿಯ ಶುಭ ಹಾರೈಕೆಗಳು.










Sunday, October 31, 2010

ಜಲವಿಹಾರ

 ನಿನ್ನೆ ಲಾಲ್ ಬಾಗ್ ಕೆರೆಯಲ್ಲಿ ಸಿಕ್ಕ ಕೆಲ ಸಂತಸದ ಕ್ಷಣಗಳು.
ಇಲ್ಲಿದೆ ಮೀನು.. 


 ನಮ್ಮ ಸಂಸಾರ ಆನಂದ ಸಾಗರ 


ಜೊತೆಯಲಿ... ನೀರಲಿ...


 ಮುಂದೆ ನೀ ಹೋದಾಗ ಹಿಂದೆ ನಾ ಬರುವೆ..


ಕದಡದಿರು ಬಿಂಬ 




ಗೆಳತೀ ಓ ಗೆಳತಿ ಕೇಳೆ ಸ್ವಲ್ಪಾ...



ಎಲ್ಲರಿಗೂ ರಾಜ್ಯೋತ್ಸವದ ಶುಭ ಹಾರೈಕೆಗಳು.

Thursday, October 21, 2010

ಮರಿ ಹಾಕಿದ ನಾಯಿ ತನ್ನ ಮೊದಲ ಮರಿಯನ್ನು ತಿನ್ನುತ್ತದೆಯೇ...?

''ಮಕ್ಕಳೇ ... ಒಲೆ ಬದಿಗೆ ಹೋಗಬೇಡಿ. ಒಲೆ ಒಳಗೆ  ನಾಯಿ  ಮರಿ ಹಾಕಿದೆ...  ಹತ್ತಿರ ಹೋದವ್ರನ್ನ ಕಚ್ಚಿ ಬಿಡುತ್ತೆ.''
ಅಂಗಳದಲ್ಲಿ  ತೊಗರೊಲೆ  ಬದಿಗೆ   ಥ್ರೋಬಾಲ್ ಆಡುತ್ತಿದ್ದ ಕ್ಷಮಾ ಮತ್ತು ಪಾರ್ಥ ರನ್ನು ಕರೆದು ಅಜ್ಜ ಎಚ್ಚರಿಸಿದರು.ತೊಗರೊಲೆ ಅಂದರೆ ಅಡಿಕೆ ಬೇಯಿಸಲು ಉಪಯೋಗಿಸುವ ದೊಡ್ಡ ಒಲೆ.ನಾಯಿ ಒಲೆ ಒಳಗೆ, ಚೀಲದ ಸಂದು ಹೀಗೆ ಮರಿ ಹಾಕಲೊಂದು ಜಾಗ ಮಾಡಿಕೊಳ್ಳುತ್ತದೆ.
'' ಟಾಮಿ ಮರಿ ಹಾಕಿದೆಯಾ?  ನಾನು ನೋಡಬೇಕು... ತೋರಿಸು ಅಜ್ಜ...." ಕ್ಷಮಾ ಅಜ್ಜನಿಗೆ ಗಂಟು ಬಿದ್ದಳು.
''  ಹೇಳಿದ್ದೆ  ತಪ್ಪಾಯ್ತು. ನೋಡು ಮರಿ ಹಾಕಿದ ನಾಯಿಗೆ ಸಿಟ್ಟು ಜಾಸ್ತಿ. ಕಚ್ಚತ್ತೆ ಅಂದರೆ ಕೇಳಬೇಕು..ಇಲ್ಲ ನಾಯಿ ಕಚ್ಚಿದ್ದಕ್ಕೆ ಹೊಕ್ಕುಳ ಸುತ್ತ  ಹದಿನಾಲ್ಕು ಇಂಜಕ್ಷನ್ ಹಾಕಿಸ್ಕೋ ಬೇಕಾಗುತ್ತೆ.. ''
'' ದೂರದಿಂದ ನೋಡ್ತೇನೆ. ಟಾಮಿ ಪಾಪ ಏನೂ ಮಾಡಲ್ಲ, ಟಾಮಿ .. ಟಾಮಿ .. ಕ್ರು.. ಕ್ರು .. '' ಪಾರ್ಥ ಒಲೆಯಲ್ಲಿ ಬಗ್ಗಿ ನೋಡಿದ.
''  ಅಜ್ಜ ..    ಮೂರು ಮರಿ ಇದೆ.  ಕಣ್ಣು ಕೂಡಾ ಬಿಟ್ಟಿಲ್ಲ..'' ಬೆರಗಿನಿ೦ದ ತನ್ನ ಬಟ್ಟಲುಗಣ್ಣು ಅರಳಿಸುತ್ತಾ ಹೇಳಿದ.
''ನಾಕ್  ಹಾಕಿರ್ತೈತಿ....  ಮದಾಲಿನ್  ಮರೀನಾ ನಾಯೇ ತಿನ್ದ್ಬುಡ್ತೈತಿ. ಮೂರ್ ಉಳ್ಕಂಡ್  ಐತೆ ... '' ಕೆಲಸದ ಮಂಜ ವೀಳ್ಯದೆಲೆಗೆ ಸುಣ್ಣ ಸವರುತ್ತಾ ಹೇಳಿದ.
'' ಸುಳ್ಳು,  ಯಾವ್ದೂ ತನ್ನ ಮರೀನೆ ತಾನು ತಿನ್ನಲ್ಲಪ್ಪಾ.. ''  ಕ್ಷಮಾ ನಂಬಲು ತಯಾರಿಲ್ಲ.
''ಅಲ್ಲಾ .. ನಾ ನೋಡೀನಿ.. ಹೊದೊರ್ಸ ನಮ್ಮನೆ ನಾಯಿ ನಾ ನೋಡ್ ನೋಡ್ತಾ ಇದ್ದಂಗೆ ತಿಂದ ಬುಡ್ಲಾ.. ? ಮದಾಲಿನ್ ಮರೀನ್ ತಿನ್ನದ್ ಸುಳ್ಳಲ್ಲ... '' ಮ೦ಜ ವಾದಿಸಿದ.


''ಅಜ್ಜ ಹೌದಾ ..? ಮಂಜ ಹೇಳಿದ್ದು ನಿಜಾನ ...?''
''ಹಾಗಂತ ಹೇಳ್ತಾರೆ.. ಎಲ್ಲವೂ ತಿನ್ನತ್ತೆ ಅ೦ತ ಅಲ್ಲ.. ಹೋಗು ಮಹಡಿ ಮೇಲೆ ನಿನ್ನ ಅತ್ತೆ ಇದ್ದಾಳಲ್ಲ..ಅವಳನ್ನು ಕೇಳು.. ಸರಿಯಾಗಿ ವಿವರಿಸ್ತಾಳೆ. ''
''ಅತ್ತೆ .... ಅತ್ತೇ....  ವೀಣತ್ತೆ..'' ಮನೆ ಮೊಳಗುವಂತೆ ಕರೆಯುತ್ತಾ  ಮೆಟ್ಟಿಲುಗಳನ್ನು ಧಡ ಧಡ ಹತ್ತಿ ಬಂದರು ಕ್ಷಮಾ ಮತ್ತು ಪಾರ್ಥ.. ವೀಣಾ ಓದುತ್ತಾ  ಕುಳಿತಲ್ಲಿಗೆ.
ಮಕ್ಕಳು ತಮ್ಮ ಸಮಸ್ಯೆಯನ್ನು ಅತ್ತೆಯ ಮುಂದಿಟ್ಟರು. ''ಅತ್ತೇ, ನಾಯಿ ಮರಿ ಹಾಕಿದ ನಂತರ ತನ್ನ ಮರಿಗಳನ್ನೇ ತಿನ್ನುತ್ತಾ....? ಯಾಕೆ ತಿನ್ನುತ್ತೆ..? ಆಮೇಲೆ ಉಳಿದ ಮರಿಗಳನ್ನು ಯಾರಿಗೂ ಮುಟ್ಟಲು ಬಿಡದಂತೆ ಕಾಪಾಡುತ್ತದಲ್ಲ... ಯಾಕೆ ಹೀಗೆ....?
ಮಕ್ಕಳಿಬ್ಬರೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.
ವೀಣಾ ವಿವರಿಸಲು ತೊಡಗಿದಳು..'' ನೋಡಿ ..
ನೀವು ಹೈಸ್ಕೂಲ್ ಮಕ್ಕಳಲ್ಲವೇ, ನಿಮಗೆ ಅರ್ಥವಾಗುತ್ತದೆ ಈ ವಿಚಾರಗಳೆಲ್ಲ. 


ನಾಯಿ ಸೂಕ್ಷ್ಮ ಪ್ರಾಣಿ... ಅದಕ್ಕೆ ಹುಟ್ಟಿನಿಂದ ಬರುವ ಸಹಜ ಗುಣದ [basic instinct] ಜೊತೆಗೆ    ಹೇಳಿಕೊಟ್ಟಿದ್ದನ್ನು ಕಲಿಯುವ ಗುಣವಿದೆ. ಅದು ಕೆಲವನ್ನು ನೋಡಿಯೂ  ಅನುಸರಿಸಬಲ್ಲದು.ಅವು ಮರಿಯಾಗಿದ್ದಾಗಲೇ ಕಲಿಸುವಿಕೆ ಶುರು ಮಾಡಬೇಕಲ್ಲದೆ ಬೆಳೆದ ನಾಯಿಗಳಿಗೆ ಕಲಿಸುವುದು ಕಷ್ಟ.
ಈಗ ನಾಯಿ ತನ್ನ ಮರಿಯನ್ನು ಏಕೆ ತಿನ್ನುತ್ತದೆ....? ಪಟ್ಟಿ ಮಾಡೋಣ.



೧ . ನಾಯಿ ಮರಿ  ಹೊರಬರುವಾಗ ಮಾಸು ಚೀಲದ [ placenta ] ಸಮೇತ ಬರುತ್ತದೆ.ಪ್ರತಿ ಪ್ರಾಣಿಗೂ ತಾಯ್ತನ ಅನ್ನುವುದು ಸಹಜ ಗುಣ. ಅದು ಈ ಮಾಸುಚೀಲ ಅಥವಾ ನೀರ್ಮೊಟ್ಟೆಯನ್ನು ತನ್ನ ಹಲ್ಲುಗಳಿಂದ ಹರಿದು ಹೊಕ್ಕಳು ಬಳ್ಳಿಯನ್ನು ತುಂಡರಿಸಿ  ಮರಿಯನ್ನು ನೆಕ್ಕಲು ತೊಡಗುತ್ತದೆ.ಇದು ಮರಿಯ ಉಸಿರಾಟ ಕ್ರಿಯೆಯನ್ನು ಸರಾಗ ಗೊಳಿಸುತ್ತದೆ. ಮತ್ತು ಸಹಜವಾಗಿಯೇ ಎಲ್ಲಾ ಪ್ರಾಣಿಗಳೂ ತಮ್ಮ ಮಾಸನ್ನು ತಿನ್ನುತ್ತವೆ. ಮಾಸು ಕೀಳುವ ರಭಸದಲ್ಲಿ ಕೆಲವೊಮ್ಮೆ ಮರಿಗಳನ್ನೂ ಅಕಸ್ಮಾತ್ತಾಗಿ ತಿನ್ನುವ ಸಾಧ್ಯತೆಗಳಿವೆ.


೨.  ನಾಯಿ ಸುಮಾರಾಗಿ  ಮರಿ ಹಾಕುವ   ಒಂದು ದಿನ ಮುಂಚಿನಿಂದ ಆಹಾರವನ್ನು ಸರಿಯಾಗಿ ಸೇವಿಸುವುದಿಲ್ಲ. ತಿಂದಿದ್ದನ್ನು ಕಾರಿಕೊಳ್ಳುತ್ತದೆ.  ಹೆಚ್ಚಿನ ನಾಯಿಗಳದು ಕೋಪದ ಗುಣ.ತನಗೆ ನೋವಾದಾಗ, ನೋವಿಗೆ ಕಾರಣವಾದ  ವಸ್ತು ಅಥವಾ ಪ್ರಾಣಿಯ ಮೇಲೆ ಆಕ್ರಮಣ ಮಾಡುತ್ತದೆ. ಹೆರಿಗೆಯ ಸಮಯದಲ್ಲಾದ ನೋವಿನಿಂದ ಪ್ರಚೋದನೆಗೊಂಡ ನಾಯಿ ತನ್ನ ಮರಿಯನ್ನೇ ಕಚ್ಚುವ    ಸಾಧ್ಯತೆಗಳುಂಟು. ಮತ್ತು ಹಾಗೆಯೇ  ಮಾಂಸಹಾರಿ ಪ್ರಾಣಿಯಾದ್ದರಿಂದ ತಿನ್ನಲೂ ಬಹುದು.


೩. ಅಲ್ಲದೆ ಹೆರಿಗೆಯ ನಂತರ ತೀವ್ರವಾಗಿ ಹಸಿವೆಯಾಗುವುದೂ ಅಲ್ಲದೆ ನೋವಿನಿಂದ ಉಂಟಾದ ಕ್ರೋಧವೂ  ತನ್ನ ಮರಿಯನ್ನು ತಾನೇ ತಿನ್ನಲು ಕಾರಣವಿರಬಹುದು.ಏಕೆಂದರೆ ಮನುಷ್ಯರಂತೆ ಅವುಗಳಿಗೆ ವಿವೇಚನಾ ಶಕ್ತಿಯಿರುವುದಿಲ್ಲವಲ್ಲ.ಒಮ್ಮೆ ಹೊಟ್ಟೆ ತುಂಬಿದ ನಂತರ ಸಹಜ ತಾಯಿ ಭಾವದಿಂದ ಉಳಿದ ಮರಿಗಳನ್ನು ಕಾಪಾಡಬಹುದು. ಮತ್ತು ಆಗ ತನ್ನ ಮರಿಗಳನ್ನು  ಮುಟ್ಟಲು ಬಂದವರನ್ನು ಹೆದರಿಸುತ್ತದೆ.ಕೆಲವೊಮ್ಮೆ ಕಚ್ಚುತ್ತದೆ. ಅವುಗಳನ್ನು ಮೆತ್ತಗೆ ಕರೆಯುತ್ತಾ ವಿಶ್ವಾಸಕ್ಕೆ ತೆಗೆದುಕೊಂಡಾಗ ಅದು ನಮ್ಮನ್ನು ನಂಬುತ್ತದೆ.


ಮತ್ತು ಎಲ್ಲಾ ನಾಯಿಗಳೂ ಈ ರೀತಿ ತನ್ನ ಮರಿಯನ್ನು ತಾನೇ ತಿನ್ನುವುದಿಲ್ಲ. ಕೋಪದ ಪ್ರವೃತ್ತಿಯಿರುವ ನಾಯಿಗಳು ಹೀಗೆ ಮಾಡುತ್ತವೆ. [aggresive ness ] ಎಲ್ಲ  ನಾಯಿಗಳೂ  ಕಚ್ಚುವುದಿಲ್ಲವಲ್ಲ... ಹಾಗೇ.   ಅಲ್ಲದೆ ಪ್ರಾಣಿಗಳ ಕೆಲವು ನಡವಳಿಕೆಗಳು ಇನ್ನೂ ಅರ್ಥವಾಗದೆ ಇರುವಂತಹದ್ದು ಬೇಕಷ್ಟಿವೆ.     




 ಮತ್ತೆ ಅಲ್ಲಿಯೇ ಹೋಗಬೇಡಿ.. ಗೊತ್ತಾಯ್ತೆನ್ರೋ '' 
''ಸರಿ,   ಪೇರಳೆ ಮರಕ್ಕೆ ಹೋಗೋಣ '' ಎನ್ನುತ್ತಾ ಕ್ಷಮಾ ಪಾರ್ಥ  ಹೊರಗೆ  ನಡೆದರು.


 ಹೆಚ್ಚು ಕಡಿಮೆತಾಯಿಯ ಸಮಕ್ಕಿದೆ ಮರಿ. ಆದರೂ ತಾಯಿ ಪ್ರೀತಿ.

 ಪ್ರಾಣಿಗಳ ನಡವಳಿಕೆಗಳ ಅಧ್ಯಯನ ತು೦ಬಾ ಆಸಕ್ತಿ ದಾಯಕ. ಅವುಗಳ ವೈವಿಧ್ಯತೆಯನ್ನು, ವೈಚಿತ್ರ್ಯವನ್ನು  ಸೂಕ್ಷ್ಮವಾಗಿ ಗಮನಿಸಿಯೇ ಅರಿತುಕೊಳ್ಳಬೇಕು. ಮನುಷ್ಯರಂತೆ ಮಾತಾಡಬಲ್ಲವಾಗಿದ್ದರೆ ಒಮ್ಮೆ ಕೇಳಿ ನೋಡಬಹುದಿತ್ತು.. ಅಲ್ಲವೇ ?




[ ಈ ಬಗ್ಗೆ  ಇನ್ನೂ ಹೆಚ್ಚಿನ ಮಾಹಿತಿಯಿದ್ದವರು ದಯವಿಟ್ಟು ಹಂಚಿಕೊಳ್ಳಿ]

Tuesday, October 12, 2010

ಹೆಜ್ಜೆ ಮೇಲೆ ಹೆಜ್ಜೆ .. ಚಿತ್ತಾರದರಮನೆಗೆ ಆಯ್ತು ವರುಷ.....!

  ತುಂಬಾ ದಿನಗಳೇ ಆಗಿ ಹೋಯ್ತು. ಬ್ಲಾಗಿನ ಕಡೆ ಮುಖ ಹಾಕಿ..  
ಅಷ್ಟರಲ್ಲೇ ಚಿತ್ತಾರದರಮನೆಗೆ ವರ್ಷವಾಯ್ತೆನ್ನುವ ವಿಚಾರ ನನ್ನ ತಲೆಗೆ ಹೋಗಿದ್ದೂ ಲೇಟಾಗೆ... ಹಾಗಾಗಿ ಬಣ್ಣ ಬಡಿಯ ಬೇಕಾಗಿದೆಯೆ೦ದು ಗಡಿಬಿಡಿಯಲ್ಲಿಯೇ ಬ೦ದೆ....
ಮತ್ತಿನ್ನೇನು....  ಮಾತಿನ ಮಧ್ಯದಲ್ಲಿ ಸಿಕ್ಕಿದ ಮಾಹಿತಿಯ ಬೆನ್ನು ಹಿಡಿದು ಹೋದಾಗ ಸಿಕ್ಕಿದ್ದು ಈ ಚಿತ್ತಾರದರಮನೆಗೊಂದು ಸೈಟು ... 
ಸೈಟು   ಮಾಡಿಟ್ಟು ಕೊ೦ಡ ಮೇಲೆ ಮನೆ ಕಟ್ಟಿದ್ದೂ ಆಯ್ತು.. ಕಲರವ ಶುರು ಆಗಿದ್ದೂ ಆಯ್ತು.
ಸಪ್ಟೆ೦ಬರ್ ನಲ್ಲಿ ಶುರು ಮಾಡಿದ್ದಾದರೂ ಬರೆದದ್ದು ವಿಜಯದಶಮಿ ಕಳೆದ ಮೇಲೆ.. ಅಕ್ಟೋಬರ್ ಮಧ್ಯದಲ್ಲಿ.

ಬಹುಷ: ನಾನೇನಾದರೂ ಬರೆದಿದ್ದು [ಅಥವಾ ಅಕ್ಷರಗಳನ್ನು  ಕುಟ್ಟಿದ್ದು ] ಅ೦ತ ಅ೦ದರೆ ಈ ಬ್ಲಾಗಿನಲ್ಲಿಯೇ.. ಅಲ್ಲಿಯವರೆಗೆ ಬರಹ ಅದು,ಇದು ಮಣ್ಣು ಮಶಿ. ಅ೦ತ ಯೋಚಿಸಿದ್ದೇ ಇಲ್ಲ.

ಮೊದಲ ಪೋಸ್ಟ್ ಹಾಕಿದ ನ೦ತರ ನೂರಾ ಒ೦ದು ಸಲ ನಾನೇ ಓದಿದೆ....!!!!!! ಲಲಿತಾ ಸಹಸ್ರ ನಾಮ ಓದಿದ೦ತೆ.....!!!!  ಬ್ಲಾಗ್ ಅ೦ದರೇನೂ೦ತ ಗೊತ್ತಾಗಲಿಕ್ಕೆ ಸುಮಾರು ದಿನ ಬೇಕಾಯ್ತು. ಅಲ್ಲದೆ ನಾನು ಟೆಕ್ನಾಲಜಿಯಲ್ಲಿ ಸ್ವಲ್ಪ ಹಿ೦ದೆ.
ಪೋಸ್ಟ್ ಹಾಕಿದಾಕ್ಷಣ ಚುಕ್ಕಿ ಚಿತ್ತಾರದ ಮೇಡ್೦ ... ಅಕ್ಕಯ್ಯ...ತ೦ಗಿ... ಅದೇನೋ ಬರೆದಿದ್ದಾರೆ... ಅ೦ದುಕೊ೦ಡು ಸಡಗರದಿ೦ದ ಬ೦ದು ಓದುವವರು  ನೀವು....
 ನನ್ನ ಬ್ಲಾಗ್ ಬರಹಗಳನ್ನು ಓದಿ ಅದನ್ನು ವಿಮರ್ಶಿಸಿ,   ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದವರು ನೀವು .

ನಿಮಗೆ ನನ್ನ ಮೊದಲ ನಮಸ್ಕಾರ.

ಪ್ರತಿಯೊ೦ದು ಕ್ರಿಯೆಗೂ ಪ್ರೇರಣೆ ಬೇಕಾಗುತ್ತದೆ.. ಪ್ರೇರಣೆ ಇದ್ದಲ್ಲಿ ಪ್ರಗತಿಯೂ ಹೆಚ್ಚು . 
ನಾನು ಬರೆದ ಲೇಖನಗಳಾಗಲೀ, ಕಥೆಗಳಾಗಲೀ,  ಕವಿತೆಯಾಗಲೀ, ಚಿತ್ರಗಳಾಗಲೀ ನಿಮ್ಮೆಲ್ಲರ ಪ್ರೋತ್ಸಾಹವಿರದಿದ್ದಲ್ಲಿ  ಬೆಳೆಯುವುದು ಇನ್ನೂ  ನಿಧಾನವಾಗುತ್ತಿತ್ತೇನೋ ..... ಅಥವಾ ಆಸಕ್ತಿ ಕಡಿಮೆಯಾಗುತ್ತಿತ್ತೇನೋ..ಈ ಬ್ಲಾಗಿನ ಮಾಧ್ಯಮದಲ್ಲಿ ನನಗೆ ಪ್ರೇರಣೆಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹ... ಸಹಾಯ ... ಸಾ೦ತ್ವಾನ...
ಈ ಸಾಗರದಲ್ಲಿ ನಾನೊ೦ದು ಬಿ೦ದು. ಚಿಕ್ಕದೊ೦ದು ಚುಕ್ಕಿ. ಈ ಚುಕ್ಕಿಯನ್ನು ವಿಸ್ತಾರ ಮಾಡಲು ಸಹಕರಿಸಿದ್ದೀರಿ.  ತೆವಳುತ್ತಾ,  ತೊದಲುತ್ತಾ ಸಾಗುವ ನನ್ನ ನಡೆಗೊ೦ದು, ನುಡಿಗೊ೦ದು  identity ಒದಗಿಸಿದ್ದೀರಿ. ನನ್ನ ಕ್ರಿಯಾಶೀಲತೆ ಹೆಚ್ಚಿಸಿದ್ದೀರಿ.


ನಿಮಗೆ ನನ್ನ ನಮನ....


ನನ್ನದು  ಬರಹವೋ ಸಾಹಿತ್ಯವೋ ಮತ್ತೆ೦ತದೋ... ಅ೦ತೂ ನನ್ನ ಅಭಿಪ್ರಾಯಗಳನ್ನು ಹ೦ಚಿಕೊಳ್ಳಲು ಇರುವ ಅವಕಾಶ... ಒ೦ದು ವೇದಿಕೆ ಇದು. ನೀವೆಲ್ಲಾ ನನ್ನ ಅಭಿಪ್ರಾಯಗಳನ್ನು ಓದಿದ್ದೀರಿ. ಮೆಚ್ಚಿದ್ದೀರಿ. ತಪ್ಪು ತಿದ್ದಿದ್ದೀರಿ.  ನಿಮ್ಮ ಅಭಿಪ್ರಾಯಗಳ ಮೂಲಕ ನನ್ನ ಒಳ ಅರಿವಿನ ಹರಿವನ್ನು ಹೆಚ್ಚಿಸಿದ್ದೀರಿ. ಪ್ರತಿಕ್ರಿಯಿಸಿದ.. ಓದಿದ... ಪ್ರತಿಯೊಬ್ಬರೂ ನನಗೆ ತು೦ಬಾ ಮುಖ್ಯ.  ಮತ್ತೆ ನಿಮ್ಮೆಲ್ಲರ ಸ೦ಗಡ ನಾನೂ ಬರುತ್ತಿದ್ದೇನೆ....



ನನ್ನ ಕುಟು೦ಬದೊಡಗೂಡಿ ನಿಮಗೆಲ್ಲರಿಗೂ  ನನ್ನ ಹ್ರುತ್ಪೂರ್ವಕ ನಮಸ್ಕಾರಗಳು...









Thursday, August 5, 2010

ಹೀಗೊ೦ದು ಆಕ್ಸಿಡೆ೦ಟ್ ......

ಗೆಳತಿ ತುಂಬಾ ಒತ್ತಾಯ ಮಾಡಿ ಕರೆದಿದ್ದಕ್ಕೆ ಹೊರಟಿದ್ದು...ಯಜಮಾನ್ರು , ಮಕ್ಕಳನ್ನ ಆಫೀಸಿಗೆ , ಶಾಲೆಗೇ ಅಂತ ಕಳಿಸಿ ಗಡಿಬಿಡಿಯಲ್ಲೇ ತಯಾರಾಗಿ ಹೊರಡುವ ಹೊತ್ತಿಗೆ ಘಂಟೆ ೯. ೩೦ ಆಗಿತ್ತು.. ಹತ್ತು ಘಂಟೆಗೆಲ್ಲಾ ಗೆಳತಿಯ ಮನೆಗೆ 
   ಬರುತ್ತೇನೆಂದು ಹೇಳಿದ್ದೆ..ಅಲ್ಲಿಂದ ಇಬ್ಬರೂ  ಸಿಟಿಗೆ  ಹೋಗುವ ಪ್ಲಾನ್...


'' ಆಟೋ .... ಆಟೋ....'' ಯಾರೂ ನಿಲ್ಲಿಸುತ್ತಲೇ ಇಲ್ಲ..
ಒಬ್ಬ ನಿಲ್ಲಿಸಿದ..'' ಫಸ್ಟ್ ಬ್ಲಾಕ್ ಬರ್ತೀರಾ.... ?''
''ವಿಜಯನಗರ ಬೇಕಾದ್ರೆ ಬರ್ತೀನಿ ''

ಇವನ ತಲೆ ! ವಿಜಯನಗರಕ್ಕೆ ಹೋಗಿ ನಾನೇನು ಮಾಡ್ಲಿ....?ಏನ್ ಆಟೋದವರಪ್ಪಾ.. ಕರೆದಲ್ಲಿಗೆ ಬರುವುದಿಲ್ಲ.  ಆಟೋ ಇಟ್ಟಿದ್ದಾದರೂ ಯಾಕೆ ಅಂತಾ.  ಸಾಲಾಗಿ ಆಟೋ ನಿಲ್ಲಿಸಿಕೊಂಡು ಆಟೋ ಸ್ಟಾಂಡ್ ನಲ್ಲೆ ಬೇಕಾದರೆ ಬೆಳಗಿನಿಂದ ಸಂಜೆ ತನಕ ನಿಂತ್ಕೊಂಡು ಏನ್ ಮಾಡ್ತಾರೋ ?  ಏನೋ ಸ್ವಲ್ಪ ಬಂನೀಪ್ಪಾ ಅಂತ ಕರೆದರೆ ಸೊಕ್ಕು ಮಾಡುತ್ತಾರೆ.  ಹಾಳಾಗ್ ಹೋಗ್ಲಿ.  ನಿಂಗೆ ಇಲ್ಲ ದುಡಿಮೆ. ಮನದಲ್ಲೇ ಬೈದು ಕೊಂಡೆ.  ರೋಡಿನ ಆ ಪಕ್ಕಕ್ಕಾದರೂ ಹೋದ್ರೆ ಆಟೋ ಸಿಗಬಹುದು.  ಅಂದುಕೊಂಡೆ ರಸ್ತೆ ದಾಟಲು ಅಣಿಯಾದೆ.

ಒಹ್ ! ಏನು ಟ್ರಾಫಿಕ್ಕು ? ಹೌದು ಪೀಕ್ ಅವರ್ ಆಲ್ವಾ.  ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ.  ಈ ಬದಿಯಿಂದ ಆಬದಿಗೆ ಹೋಗಲು ಐದು ನಿಮಿಷಾನೆ ಬೇಕು.


ರ್ರ್ರೂಯ್ ..ರ್ರೂಯ್.... ರ್ರೋಯ್ .. ಇಂತಾ  ಟ್ರಾಫಿಕ್ ನಲ್ಲೂ ಈಪಡ್ಡೆ  ಹುಡುಗರ ಬೈಕ್ ಬಿಡುವ  ಉತ್ಸಾಹ ಮಾತ್ರಾ...   ಸಾಕಪ್ಪಾ ಸಾಕು.  ಮೈ ಮೇಲೆ ಹತ್ತಿಸಿಕೊಂಡು ಹೋಗ್ತಾರೇನೋ ಅನ್ನುವ ಭಯ   ನನಗೆ ಯಾವಾಗಲೂ.


ಸುಮ್ಮನೆ ನಿಂತೆ. ಎದುರಿಗೆ'' ಶಾಂತಿ ನಿವಾಸ '' ಎನ್ನುವ ಹೋಟೆಲ್ ಬೋರ್ಡ್ ಕಾಣಿಸಿತು.  ಪಕ್ಕನೆ ನಗು ಬಂತು...!   ಮಗ, ಮಗಳು ಬೆಳಿಗ್ಗೆ ಜಗಳ ಆಡುತ್ತಿದ್ದುದು ನೆನಪಾಗಿ. ವ್ಯಾಜ್ಯ ನನ್ನವರೆಗೂ ಬಂದಿದ್ದರಿಂದಲೇ  ನಗು ಬಂದಿದ್ದು.
''ಅಮ್ಮಾ,   ಶಾಂತಿ ಎಂದರೆ ಹಿ....[he] ನಾ...? ಶಿ....[she] ನಾ....? ಮಗ ಸಮಸ್ಯೆ ಹೊತ್ತು ತಂದಿದ್ದ..
'' ಪುಟ್ಟಾ ಶಾಂತಿ ಎಂದರೆ she ಕಣೋ .  ಶಾಂತಿ ಅನ್ನುವುದು ಹುಡುಗಿಯರ ಹೆಸರು''
''ನೋಡು ಅಮ್ಮಾ...   ಅಕ್ಕ ಓಂ ಶಾಂತಿ , ಶಾಂತಿ , ಶಾಂತಿ ಹಿ ಅಂತ ಹೇಳ್ತಾ ಇದ್ದಾಳೆ.  ನಾನೆಷ್ಟು ಹೇಳಿದ್ರೂ ಶಿ ಅಂತ ಹೇಳ್ತಿಲ್ಲಮ್ಮಾ.....?''
 ಎಲ್ಲರೂ ಜೋರಾಗಿ ನಕ್ಕಿದ್ದೆವು.
ಮತ್ತೆ ಸುತ್ತ ಮುತ್ತ ನೋಡಿಕೊಂಡೆ ನಕ್ಕಿದ್ದು ಯಾರಾದ್ರೂ ನೋಡಿದ್ರಾ ಅಂತ.

ಟ್ರಾಫಿಕ್ ಸ್ವಲ್ಪ ಕಡಿಮೆಯಾಗತೊಡಗಿತು.  ಸ್ವಲ್ಪ ದೂರದಲ್ಲಿ ಟ್ರಕ್ ಒಂದು ಬರುತ್ತಿತ್ತು  ಅಷ್ಟೇ.
ಈಗಲೇ  ರಸ್ತೆ ದಾಟಿದರೆ ದಾಟಬೇಕು. ಇಲ್ಲಾಂದ್ರೆ ಮತ್ತೆ ಸಿಗ್ನಲ್ ಬಿಟ್ಟು ವಾಹನಗಳ ಪ್ರವಾಹವೇ ಹರಿಯ ತೊಡಗುತ್ತೆ.
ಲಗುಬಗೆಯಿಂದ ದಾಟತೊಡಗಿದೆ.
'ಶ್ಯೇ .....ಆ ಟ್ರಕ್ ನವನು ಏಕ್ದಂ ಸ್ಪೀಡ್ ತಗೊಳ್ಳೋದೇ...?   ಮೈ ಮೇಲೆ ಬಂದಹಾಗೆ ಬಂದ ನೋಡಿ. ಚಂಗನೆ ಪಕ್ಕಕ್ಕೆ ಹಾರಿಕೊಂಡೆ. ಸವರಿಕೊಂಡೇ ಹೋದಂತೆನಿಸಿತು ಒಮ್ಮೆ. ಅಲ್ಲೇ ಬದಿಯಲ್ಲಿ ಕುಕ್ಕರಿಸಿದೆ..!   ಕಿರ್ರೋಓಒ ಅಂತ ಬ್ರೇಕ್ ಶಬ್ದ.

ಸ್ವಲ್ಪ ಸುಧಾರಿಸಿಕೊಂಡು ನೋಡ್ತೇನೆ. ಜನ ಎಲ್ಲಾ ಬರ್ತಾ ಇದ್ದಾರೆ. ನನಗೇನೂ ಆಗಿಲ್ಲ ಸಧ್ಯ...!! ಮತ್ಯಾರದ್ದೋ ಮೈ ಮೇಲೆ ಟ್ರಕ್ ಹತ್ತಿಸಿದ್ದಾನೆ.  ಈ ಟ್ರಕ್ ಡ್ರೈವರ್ ಗಳಿಗಂತೂ ಪ್ರಜ್ಞೆಯೇ ಇರುವುದಿಲ್ಲ. ಕುಡಿದಿದ್ದನಿರಬೇಕು.
ಎಲ್ಲಾ ಜನ ಸೇರತೊಡಗಿದರು.

ನಾನು ನೋಡ್ತಲೇ ಇದ್ದೇ. ಅದ್ಯಾರೋ ಬ್ಯಾಗ್ ನಿಂದ   'ಮೊಬೈಲ್ ' ತೆಗೆದು  ಕಾಲ್ ಮಾಡತೊಡಗಿದ....!!! ಅರೆ, ನನ್ನ ಬ್ಯಾಗು...! ಓಹ್ ,  ಹಾರಿಕೊಳ್ಳುವ ರಭಸದಲ್ಲಿ ಕೈ ತಪ್ಪಿಬಿದ್ದು  ಹೋಗಿತ್ತಾ ?  ಛೇ,  ಎಂತಾ ಜನ ಇರುತ್ತಾರೆ ನೋಡಿ.  ಏನೋ ಅಯ್ಯೋ ಪಾಪ ಅಂತ ಬ್ಯಾಗ್ ಹೆಕ್ಕಿ ಕೊಡುವುದು ಬಿಟ್ಟು ಮೊಬೈಲ್ ತೆಗೆದು ಕಾಲ್ ಬೇರೆ ಮಾಡ್ತಿದ್ದಾನಲ್ರೀ....?


''ಓಯ್ .... ಸ್ವಾಮಿ .. ಕೊಡ್ರೀ ಇಲ್ಲಿ.. ನಂ ಬ್ಯಾಗನ ಮೊಬೈಲ್ನ... ಕೊಡ್ರೀ ಇಲ್ಲಿ.. ''

ಅಯ್ಯೋ.  ಪುಣ್ಯಾತ್ಮ ತಿರುಗಿಯೂ ನೋಡಲಿಲ್ಲ. ಅಥವಾ ಭಯದಲ್ಲಿ ನನಗೆ ಧ್ವನಿಯೇ ಹೊರಡುತ್ತಿಲ್ಲವೋ !  ಅರ್ಥವಾಗುತ್ತಿಲ್ಲ..ಶಾಕ್ ಆಗುವುದೆಂದರೆ ಇದೆ ತರಾ ಇರಬೇಕು....!!  ಮು೦ದೆ ಹೆಜ್ಜೆ ಕಿತ್ತಿಡಲೂ ಸಾಧ್ಯ ಆಗ್ತಾ ಇಲ್ಲ  ನನಗೆ.


ನಾನೂ ಈಗ ಆಕ್ಸಿಡೆಂಟ್ ಆದ ವ್ಯಕ್ತಿಯತ್ತ ನೋಡತೊಡಗಿದೆ. ಅದು ಹೆಂಗಸು, ಸುತ್ತ ಮುತ್ತಿಕೊಂಡ ಜನರ ನಡುವೆಯೇ ನನಗೆ ಕಾಣಿಸುತ್ತಿತ್ತು. ನನಗೊಂದು ತರಾ ಸಿಟ್ಟು ಬಂತು. ಎಲ್ಲಾ ಆ ಹೆಂಗಸಿನ ಸುತ್ತಲೇ ಇದ್ದಾರೆ ಹೊರತೂ ಆಘಾತಕ್ಕೊಳಗಾದ ನನ್ನನ್ನು ಯಾರೂ ಗಮನಿಸುತ್ತಲೇ ಇಲ್ಲ.   ಛೇ..
ಅಷ್ಟರಲ್ಲಿ ನಮ್ಮವರ ಕಾರ್ ಬರುತ್ತಿದ್ದುದು ಕಾಣಿಸಿತು..      


ಓಹ್ ... ಸಧ್ಯ  ಇಲ್ಲೆಲ್ಲೊ ಕೆಲಸದ ಪ್ರಯುಕ್ತ  ಬ೦ದಿರಬೇಕು. ಕೈ ಮಾಡಿದೆ. ..... ರೀ.... ರೀ.....
ಹ್ನಾ.. ನನ್ನನ್ನ ನೋಡುತ್ತಲೇ ಇಲ್ಲ......!!!!  ಸೀದಾ ಗು೦ಪಿನತ್ತಲೇ ನಡೆದರು..ಏನ್ ಇವ್ರು.  ಇಷ್ಟು ಎದುರಲ್ಲಿ ನಿ೦ತಿದ್ದರೂ ನೋಡದೇ ಅಲ್ಯಾಕೆ ಹೋದರು..?




 ನನಗೆ ಎಲ್ಲವೂ ನಿಚ್ಚಳವಾಗತೊಡಗಿತ್ತು. ನನ್ನವರು   ತಲೆ ಮೇಲೆ ಕೈ ಹೊತ್ತು ಕೊ೦ಡು  ಹೆ೦ಗಸಿನ ಬದಿಯಲ್ಲಿ  ಕೂತುಕೊ೦ಡಿದ್ದು ಕಾಣಿಸುತ್ತಿತ್ತು.  ಅರೆ... ಇವರ ಆಫೀಸಿನಲ್ಲಿ ಕೆಲಸ ಮಾಡುವವರಾರಾದರೂ ಇರಬಹುದಾ...?  ಇದ್ದರೂ ಇರಬಹುದು..
ಆದರೆ ಇವರ ಕಣ್ಣಲ್ಲಿ ನೀರೇಕೆ....? ಉಳಿದ ಜೊತೆಯವರು ಇವರನ್ನು ಸಮಾಧಾನಿಸುವುದ್ಯಾಕೆ....?  ಯಾವುದೋ ಸ೦ಬ೦ಧದ  ಎಳೆ ಬಿಗಿಯತೊಡಗಿತು..


ಅಷ್ಟೋತ್ತಿಗೆ ಅ೦ಬ್ಯುಲೆನ್ಸ್  ಬ೦ತು.. ಆ ಹೆ೦ಗಸಿನ ದೇಹವನ್ನು ಎತ್ತಿ ವಾಹನದಲ್ಲಿಡತೊಡಗಿದರು.. ಸುಮಾರು ನನ್ನದೇ  ವಯಸ್ಸಿನಾಕೆ. ನಾನು ಧರಿಸಿದ೦ತೆಯೇ  ಆಕೆಯೂ ಬಿಳೀ ಬಣ್ಣದ ಚೂಡೀದಾರ್  ಧರಿಸಿದ್ದಳು..ರಕ್ತ ಚೆಲ್ಲಾಡಿತ್ತು.
  ನನ್ನವರೇನಾದರೂ ನಾನು ಅ೦ತ ತಪ್ಪು ತಿಳಿದಿರಬಹುದೇ...?
ಅಥವಾ  ರವಿಚ೦ದ್ರನ್ ಸಿನಿಮಾಗಳಲ್ಲಿ ಇರುವ೦ತೆ ಇಬ್ಬಿಬ್ಬರು  ಹೆಂಡತಿಯರು ............!!!!! ಇಬ್ಬರಿಗೂ ಒ೦ದೆ ತರಾ ಡ್ರೆಸ್ಸು ಗಿಫ್ಟ್ ಕೊಡುವುದು..!!!  ಒಂದೇ ತರದ ವಸ್ತುಗಳನ್ನು ಕೊಡುವುದು.....!!!  ದೇವ್ರೆ.....  ಹಾಗೊ೦ದು ಆಗದಿರಲಿ. ಕಣ್ಕತ್ತಲೆ ಬ೦ದ೦ತಾಯ್ತು.


                                                                           




ವಾಹನವೊಂದರಲ್ಲಿದ್ದೆ.. ನನಗೆ ಅರಿವು ಮೂಡಿದಾಗ .
.ಅದೊಂದು ಅಂಬುಲೆನ್ಸ್ ತರಾನೆ ಇತ್ತು.  ಈ ಮೊದಲು ಆ ತರದ ಗಾಡಿಯಲ್ಲಿ ಹೋದ ಅನುಭವವಿಲ್ಲ.
ಅರೆ ನಾನ್ಯಾವಾಗ ಹತ್ತಿಕೊಂಡೆ  ಈ ವೆಹಿಕಲ್ಲನ್ನ.  ನೆನಪಿಗೆ ಬರ್ತಾ ಇಲ್ಲ.  ಓಹೋ ಬಹುಷಃ ಎಚ್ಚರ ತಪ್ಪಿತ್ತು ಅಂತ ಕಾಣುತ್ತೆ  ನನಗೆ.   ಯಾರೋ ಎತ್ತಿ ಮಲಗಿಸಿದ್ದಾರೆ..ಪಾಪ ಪುಣ್ಯ ಇದೆ  ಜನಕ್ಕೆ.


ಅದೇನದು..? ಒಹ್,  ಆಕ್ಸಿಡೆಂಟ್ ಆದ ಹೆಂಗಸಿನ ಬಾಡಿ ಅನ್ನಿಸುತ್ತೆ. ಸತ್ತ ದೇಹದ ಜೊತೆ ನನ್ನನ್ನೂ ಕರೆದೊಯ್ಯುತ್ತಿದ್ದಾರೆ.   ಮನುಷ್ಯತ್ವವಿಲ್ಲದ ಜನರು.  ಭಾವನೆಗಳಿಗೆ ಬೆಲೆಯಿಲ್ಲ  ಇಲ್ಲಿ. ಅಥವಾ ಬೇರೆ ವೆಹಿಕಲ್ ಯಾಕೆ  ಹೆಣಕ್ಕೆ ಅಂತ ಅಂಬುಲೆನ್ಸ್ ನಲ್ಲಿಯೇ ಕರೆದೊಯ್ಯುತ್ತಿದ್ದಾರ... ?
ನನಗೇನಾಗಿದೆ ಮಹಾ  ಅಂತ ಅಂಬುಲೆನ್ಸ್ ನಲ್ಲಿ ಕರೆದೊಯ್ಯುತ್ತಿದ್ದಾರೆ.. ? ಯಾವ ನೋವು, ಉರಿ ಏನೂ ಇಲ್ಲ.   ಮುಖಕ್ಕಷ್ಟು ನೀರು ಚುಮುಕಿಸಿದ್ದಿದ್ದರೆ ಎಚ್ಚರವಾಗುತ್ತಿತ್ತು.   ಅದನ್ನು ಬಿಟ್ಟು ಈ ಹೆಣದ ಜೊತೆ ನನ್ನನ್ನು ...... ಛೆ.


ಯೋಚನೆಗಳ ಮಹಾಪೂರ ಮನದೊಳಗೆ ಪ್ರವಹಿಸುತ್ತಿತ್ತು.  ಗಾಡಿಯ ಅಲುಗಾಟದಿಂದ ಹೆಣದ ಮೇಲೆ ಮುಚ್ಚಿದ್ದ  ವಸ್ತ್ರ ಸರಿಯಲು ತೊಡಗಿತ್ತು.  ಕೈ ಮೇಲಿನ ಬಟ್ಟೆ ತುಸು ಸರಿಯಿತು.  ವಾಚು ಕಾಣಿಸಿತು.
ಹ್ಞಾ ... ಇದು ನನ್ನ ವಾಚಿನಂತದ್ದೆ.
 ಬೆರಳಿನಲ್ಲಿದ್ದ ಉಂಗುರ ಪರೀಕ್ಷಿಸಿದೆ. ಹೌದು.  ಹೋದ ವರ್ಷ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ  ಇದೆ ತರದ ಉಂಗುರವಲ್ಲವೇ...?
ಹ್ಹಾ ..ವಿಧಿಯೇ..! ಅನಿಲ್ ಕಪೂರ್ ಸಿನಿಮಾ ನೆನಪಾಯ್ತು.   ಘರವಾಲೀ ಬಾಹರ್ವಾಲೀ .....
ಮನೆಯಲ್ಲೊಬ್ಬಳು.   ಹೊರಗಡೆ ಇನ್ನೊಬ್ಬಳು. ಇಷ್ಟು ದಿನವಾದರೂ ಒಂಚೂರೂ ಗೊತ್ತಾಗದೆ ಹೋಯ್ತೆ.
ಹೇ  ದೇವ್ರೇ...!  ಸತ್ತವಳು ಸತ್ತಳು ನನಗೆ ಗೊತ್ತು ಮಾಡಿಯೇ ಸಾಯಬೇಕೆ....?
ಮನೆಗೆ ಹೋದಮೇಲೆ ವಿಚಾರಿಸಿಕೊಳ್ಳುತ್ತೇನೆ ಯಾವುದಕ್ಕೂ.


ಅಯ್ಯೋ ಎಷ್ಟೊತ್ತು ಆಗೋಯ್ತು. ಮಕ್ಕಳು ಬೇರೆ ಮನೆಗೆ ಬಂದು ಕಾದಿರುತ್ತಾರೆ .. ಅಮ್ಮಾ ಎಲ್ಲಿ ಅಂತ ಗಾಬರಿಯಾಗುತ್ತಾರೆ.
ಅಂತ ಟೈಮ್ ನೋಡಿದೆ ಕೈಲಿದ್ದ ವಾಚನ್ನು.
ಹ್ಞಾ ...ವಾಚೆಲ್ಲಿ...?...?    ಕೈ ತಿರುಗಿಸಿ ನೋಡಿದೆ..
ಉಸಿರು ನಿಂತಂತಾಯ್ತು.. ಕೈಯೇ ಕಾಣುತ್ತಿಲ್ಲ...!!
 ಯಾಕೋ ಅನುಮಾನ ......  ದೆವ್ವ ಮೆಟ್ಟಿಕೊಂಡಿತೆ ..? ....ಪುಣ್ಯಾತ್ಗಿತ್ತಿ ಯಾರಿವಳು  ನೋಡೋಣ ಅಂತ ಮುಖದ ಮೇಲಿನ ವಸ್ತ್ರವನ್ನು ನಿಧಾನವಾಗಿ ಸರಿಸುತ್ತಿದ್ದಂತೆ.......
..........................................
.........ಮುಖ
ನೋಡಿದರೆ....
ನೋಡಿದರೆ  ...  ....................
ಅದು ನನ್ನ ಮುಖ.......!!!!!!
...........................
ಹ್ಹಾ...ಹ್ಹಾ...ಹ್ಹ..
ನನಗೆ ತೆಲುಗು ಲೇಖಕರೆಲ್ಲ ಒಮ್ಮೆಲೇ ನೆನಪಾದರು... ಯಂಡಮೂರಿ..ವಂಶಿ... ..... ....ಇತ್ಯಾದಿ..
ಇದು ನನ್ನ ಮೂರನೇದೋ  ನಾಲ್ಕನೇದೋ   ಆಯಾಮಾ......!!!
ಹ್ಹಾ....ಹ್ಹಾ....ಹ್ಹಾ...






''ಏ... ಏಳೇ... ಏಳು ಘಂಟೆಯಾಯ್ತು. ಅನ್ನಪೂರ್ಣೆಶ್ವರಿ  ತಾಯೀ... ಏಳು ಟೀ ಮಾಡೇ .....''

 ಸದಾಶಿವ ಮೈ ಅಲುಗಾಡಿಸಿ ಎಚ್ಚರಿಸುತ್ತಿದ್ದ...
ದಿಗ್ಗನೆದ್ದಳು   ಸುಧಾ..  ಏನೂ ಅರ್ಥವಾಗದೆ ತನ್ನ ಮೈಯನ್ನೆಲ್ಲಾ ನೋಡಿಕೊಂಡಳು... ಪಕ್ಕದಲ್ಲಿ ನೋಡಿದಳು. ಮಗ ತಲೆಕೆಳಗಾಗಿ  ಮಲಗಿದ್ದ..ಮಗಳು ಮಲಗಿದಲ್ಲೆ ಕಣ್ಣು ಬಿಟ್ಟು ನೋಡುತ್ತಿದ್ದಳು.

ಅರೆ   ಇಷ್ಟೊತ್ತೂ ಕನಸಿನಲ್ಲಿದ್ದೆನಾ...?
ಮುಖದಲ್ಲಿ ನಗು ಹೊಮ್ಮಿತು..
  .[ ಕಥೆ]                                                  

Wednesday, July 28, 2010

ಇರಬಹುದೇ ಹೀಗೆ....?

ಇರಬಹುದೇ ಹೀಗೆ....?
ದೊಡ್ಡ ತಲೆ 
ಹೊರಚಾಚಿದ ಕಣ್ಣು 
ಕುತ್ತಿಗೆಗೇ ಕೈ 
ಸುರುಟಿಹೋದ ಮೈ...

  ಇರಬಹುದೇ ಹೀಗೆ ...?
ಕಿವಿಗೆರಡು ತೂತು..
ಬೇಕಿಲ್ಲದ ಮಾತು..  
ಒಣಗಿ ಹೋದ ನಾಲಿಗೆ ..
ಕೆಲಸವಿಲ್ಲ ಕಾಲಿಗೆ..

ಇರಬಹುದೇ ಹೀಗೆ ..?
ಪರಲೋಕದ ಜೀವಿಯ ಹಾಗೇ..
ಜೀವ ಜಗತ್ತು ವಿಕಾಸವಾದದ್ದು ಹೇಗೆ..?
ಕೆಲಸವಿಲ್ಲದ ಅಂಗ 
ಆಗಬಹುದೇ ಭಂಗ...?

ಇರಬಹುದೇ ಹೀಗೆ..?
ಹತ್ತಾರು ಸಾವಿರ ವರುಷದ ಕೊನೆಗೆ..
ಬೀಸಿ ಗಣಕ ಯಂತ್ರದ ಹೊಗೆ
ಕೆಲಸ.. ತಲೆಗೆ ಮತ್ತು 
ಕೈ ಬೆರಳುಗಳಿಗೆ ಮಾತ್ರ..

ಇರಲೂ ಬಹುದು ಹೀಗೆ..ಮಾನವ 
ಅಳಿಯದೆ ಇದ್ದರೆ ಅವನ ಪೀಳಿಗೆ
 ......ಈ ಭೂಮಿ    ಹಸಿರಿದ್ದರೆ ಜೊತೆಗೆ..


ಅಲ್ವೇ..?
ಆಧುನಿಕತೆ ಮತ್ತು ತಂತ್ರಜ್ಞಾನದ ಸುಳಿಗೆ ಸಿಕ್ಕಿದ ಮನುಷ್ಯ  ಮುಂದೆ... ವಿಕಾಸವಾದಂತೆಲ್ಲಾ.. ಹೀಗಿರಬಹುದೇ.. ಅನ್ನುವುದು ನನ್ನ ಕಲ್ಪನೆ.

ಈಗೀಗ ಕಂಪ್ಯೂಟರ್ ಅಂತೂ  ಪ್ರತಿ ಮನೆಯಲ್ಲೂ ಕಾಣಬಹುದು..ಕಚೇರಿಗಳಲ್ಲೊಂದೆ  ಅಲ್ಲ.. ನನ್ನಂತ ಗೃಹಿಣಿಯರೆ  ಅದರ ಮುಂದೆ ದಿನದಲ್ಲಿ ಎಷ್ಟೊತ್ತು ಕುಳಿತು ಕೊಳ್ಳುತ್ತೇವೆ .. ಅದೇ ಉದ್ಯೋಗ ಮಾಡುವವರು ಸತತ ಎಷ್ಟು ದಿನಗಳ ಕಾಲ ಕುಳಿತು ಕೊಳ್ಳುವರೋ....!!!!  ಮಾತು,  ಊಟ, ನಿದ್ರೆ, ಚಲನೆ ಯಾವುದೂ ನಿಯಮಿತವಾಗಿ ಇರದೇ...


ಇದೆ ತರಹ ಮುಂದುವರೆದರೆ ಮುಂದೊಮ್ಮೆ ಕೆಲವಷ್ಟು ಅಂಗಗಳನ್ನೆ ಕಳೆದು ಕೊಳ್ಳಬಹುದೇ...? ಜೀವ ವಿಕಾಸದ ನಿಯಮದ ಪ್ರಕಾರ...
ಗಣಕ ಯಂತ್ರದಲ್ಲಿ ತಲೆ ಹಾಕಿ ಕುಳಿತು ಕೊಂಡರೆ ಅಲ್ಲಿಂದ  ತಪ್ಪಿಸಿಕೊಳ್ಳಲು ಘಂಟೆ, ದಿನ, ವಾರಗಳೇ ಬೇಕಾಗಬಹುದು..!
ಎಲ್ಲಕ್ಕೂ ಕಂಪ್ಯೂಟರ್... ಹೀಗೆಯೇ ಮುಂದುವರೆದು ಪ್ರತಿ ಮನೆಯಲ್ಲೂ ರೋಬೋಟ್ ಬರಲು ಹೆಚ್ಚಿಗೆ ದಿನಗಳಿಲ್ಲ..ಯಾವ ಕೆಲಸಕ್ಕೂ ಕುಳಿತಲ್ಲಿಂದ ಏಳುವ ಕೆಲಸವಿಲ್ಲ...! ಉಪಯೋಗಿಸದೆ  ಬಿಟ್ಟರೆ ಕಬ್ಬಿಣ ತುಕ್ಕು ಹಿಡಿಯುವಂತೆ ಉಪಯೋಗಿಸದ ನಮ್ಮ ಅಂಗಾಂಗಗಳೂ   ನಶಿಸಿ ಹೋಗಲಾರದೆ...?

ಮುಂದೆ ನಮ್ಮ ಮಕ್ಕಳ, ಮೊಮ್ಮೊಕ್ಕಳ, ಮರಿಮಕ್ಕಳ, ಅವರ ....ಮಕ್ಕಳ ......ಕ್ಕಳ....ಕ್ಕಳ... ಳ...ಳ....ಳ....................................................................................................................................................................ಕಾಲದಲ್ಲಿ ಏನೇನಾಗುವುದೋ.....?





Friday, July 16, 2010

ಚಿಟ್ಟೆ ... ಹಿಡಿದು ಬಿಟ್ಟೆ....!!!

ಅಲ್ಲಿ ಕೂತು ಇಲ್ಲಿ ಕೂತು
ಮೆಲ್ಲ ಮೆಲ್ಲ ರೆಕ್ಕೆ ಬಡಿದು
ಚಿಣ್ಣರಂತೆ  ಕಣ್ಣು ಮುಚ್ಚೆ 
 ಮಾಯವಾಗುವೆ ಮತ್ತೆ ಮೊರೆ ತೋರುವೆ. 



ಮಣ್ಣು, ಹೂವು, ದರಕು ಪರಕು.
ಕಾಲು ಸೋತಲ್ಲಿ ಕುಳಿತು.
ಕೊಂಬನೆತ್ತಿ ಹೂವ ಮುಡಿಯ
ಸವರ ಬೇಕಿದೆ ನವಿರು ಭಾವತಾಕಿದೆ

ಅಂದ ಚಂದದೊಡವೆ ತನುಗೆ  [ತನುವಿಗೆ]

ಕಣ್ಣು ತುಂಬಾ ಕಣ್ಣೇ  ಮೈಗೆ..
ಹೂವ  ಹೀರುವಾಸೆ ನಿನಗೆ
ಸ್ವಪ್ನ ಸುಂದರಿ ಮನಕೆ  ಬಯಕೆ ದಳ್ಳುರಿ.




ಪಕ್ಕದೊಂದು ಸೈಟಿನಲ್ಲಿ
ಮುಕ್ತವಾಗಿ ಹಾರುತಿರುವೆ
ಮಕ್ಕಳೆಲ್ಲ ಮುದದಿ ನಿನ್ನ
ರೆಕ್ಕೆ ಹಿಡಿವರು ಬಣ್ಣ ಮೆತ್ತಿಕೊಳುವರು.






ಕಷ್ಟ ಪಟ್ಟು ಹಿಡಿದು ಬಿಟ್ಟೆ
ಇಷ್ಟ ಪಟ್ಟು ಫೋಟೋದಲ್ಲಿ
ಜತನದಿಂದ ಸಾರಲಿಕ್ಕೆ 
ಬ್ಲಾಗ ಬೇಕಿದೆ ಜನಕೆ  ತೋರಬೇಕಿದೆ..







[ಪಕ್ಕದ ಸೈಟಿನಲ್ಲಿ ತನ್ನಷ್ಟಕ್ಕೆ ಹೂ ಬಿಟ್ಟು ನಿಂತಿರುವ ಚದುರಂಗದ ಗಿಡಗಳ ಸುತ್ತ ಚಿಟ್ಟೆಗಳದೇ  ಹಾರಾಟ .. ನೋಡಲಾಗದೆ ನನ್ನ ಕ್ಯಾಮರಾದಲ್ಲಿ ಕೆಲವನ್ನು ಕಷ್ಟ ಪಟ್ಟು ಅಡಗಿಸಿಟ್ಟು ಕೊಂಡಿದ್ದೇನೆ..ಮತ್ತೆ 
ಹಾಗೇ   ಮಕ್ಕಳಿಗೊಂದು ಪದ್ಯ ಮನಸಿನಲ್ಲೇ ಮೂಡಿ ಬಂತು..]

Monday, July 5, 2010

ಪ್ರಕೃತಿ




[ಚಿತ್ರ ನನ್ನದೇ ರಚನೆ.ಗ್ರೀಟಿಂಗ್ ಒಂದರ ಸ್ಫೂರ್ತಿ ]


ನನ್ನಲ್ಲೇ
ಇರುವ
ನನ್ನಿಂದಲೇ ಹುಟ್ಟುವ
ನನ್ನಿಂದಲೇ ಬೆಳೆಯುವ
ಜೀವನ, ಕಲೆ, ಕಾವ್ಯಕೃಷಿಯನ್ನು
ಕದ್ದಿದ್ದೀರೆಂದು,
ಕೃತಿಚೌರ್ಯ ಮಾಡಿದ್ದೀರೆಂದು
ಬೊಬ್ಬೆ ಹೊಡೆಯದ
ಏಕೈಕ ವ್ಯಕ್ತಿಯೇ ನಾನು
.......

ಪ್ರಕೃತಿ


[ಗಮನಿಸಿ ; ಬ್ಲಾಗುಗಳಿಗೆನಾಗಿದೆಯೋ ಗೊತ್ತಿಲ್ಲ.. ಒಂದೂ ಕಾಮೆಂಟ್ ಪಬ್ಲಿಶ್ ಆಗುತ್ತಿಲ್ಲ..
ಬೇರೆಯವರ ಬ್ಲಾಗುಗಳಿಗೆ ಹಾಕಿದ ಕಾಮೆಂಟ್ ಗಳದ್ದು ಕೂಡಾ ಅದೇ ಹಣೆ ಬರಹ..
ಎಲ್ಲಿ ಏನು ತೊಂದರೆ.... ಒಂದೂ ಅರ್ಥವಾಗುತ್ತಿಲ್ಲ..
ಆಗಿನಿಂದ ನನ್ನಷ್ಟಕ್ಕೆ ಗೊಣಗಾಡುತ್ತಿದ್ದೇನೆ.. ಸುಮ್ಮನೆ..
ನೀವೇನೋ ಹೇಳ್ತಾ ಇದ್ದೀರಿ ನನಗೆ ಗೊತ್ತಾಗುತ್ತಿಲ್ಲ... ಕೂತಿದ್ದೇನೆ ಬಿಮ್ಮನೆ....]


Monday, June 7, 2010

ಅಧುನಿಕ ಭಸ್ಮಾಸುರ ವಧೆ...

ಅರ್ಜಂಟಿನಲ್ಲಿ ನಿಮಗೊಂದು ಆಧುನಿಕ [ಅತ್ಯಾಧುನಿಕ...?] ಕಥೆಯೊಂದನ್ನು ಹೇಳಲು ಬಂದೆ.

ನಿಜ ಅಂದರೆ ಇದು ನನ್ನವರು ಮಕ್ಕಳಿಗೆ ಹೇಳಲು ಹೊರಟ ಕಥೆ....!ನನ್ನವರ ಕಥಾ ಶೈಲಿಯ ಬಗ್ಗೆ ಆಸಕ್ತರು ಇಲ್ಲಿ
ನೋಡಿ ತಿಳಿಯಬಹುದು.ನನ್ನವರ ಕಾನ್ಸೆಪ್ಟ್ ಗೆ ನನ್ನ ಸ್ಕ್ರಿಪ್ಟ್....!!



ಈಶ, ನಾಣಿ ಮತ್ತು ಬರಮು ಪರಮ ಮಿತ್ರರು. ಅವರಲ್ಲಿ ಈಶ ಮತ್ತು ನಾಣಿ ಸ್ವಲ್ಪ ಜಾಸ್ತಿಯೇ ಫ್ರೆಂಡ್ಸು.

ಈಶ ಸ್ವಲ್ಪ ಕೊಳಕ, ಅಲ್ಲದೆ ಅಧ್ಯಾತ್ಮ ಜೀವಿ. ಸನ್ ರೇಸ್ ನಿಂದ ಮೈಗೆ ಅಲರ್ಜಿಯಾಗುವುದೆಂದು ಅವನು ಯಾವಾಗಲೂ ಪರಿಹಾರಾರ್ಥವಾಗಿ ಮೈ ತುಂಬಾ ಬೂದಿಯನ್ನು ಬಳಿದು ಕೊಳ್ಳುತ್ತಾನೆ. ಪಾರ್ವತಿ, ಅವನ ವೈಫು ಯಾವಾಗಲೂ ಈ ವಿಚಾರದ [ವಿಕಾರದ] ಬಗ್ಗೆ ಅಬ್ಜೆಕ್ಟ್ ಮಾಡುತ್ತಲೇ ಇರುತ್ತಾಳೆ. ಆದರೆ ಪಾರ್ವತಿ ಅದರಲ್ಲೆಲ್ಲಾ ಭಾರೀ ನಾಜೂಕು.ಮೈತಾಲೀ ಮಿಟ್ಟಿ , ಕ್ರೀಮು, ಪೌಡರುಗಳನ್ನೇ ಬಳಸುತ್ತಾಳೆ.
''ಯಾವಾಗಲೂ ನ್ಯಾಚುರಲ್ ಆಗಿರವು ...ತೆಳತ್ತನೇ, '' ಎನ್ನುವುದು ಈಶನ ಸಮರ್ಥನೆ.

ಇಷ್ಟಾಯ್ತಾ.... ಈಶನಿಗೆ ದಿನಾಲೂ ಬೂದಿ ಒದಗಿಸಲು ಪಾರ್ವತಿಯೇ ಬೇಕು. ದಿನಾಲೂ ಸ್ಮಶಾನಕ್ಕೆ ಹೋಗಿ... ಐ ಮೀನ್ ಹರಿಶ್ಚಂದ್ರ ಘಾಟ್ ಗೆ ಹೋಗಿ ಹೆಣ ಸುಟ್ಟ ಬೂದಿಯನ್ನ ತಂದು ಘನವಸ್ತುಗಳಾವುವೂ ಇಲ್ಲದಂತೆ ಜರಡಿಯಾಡಿ ಹಚ್ಚಿಕೊಳ್ಳಲು ಯೋಗ್ಯವಾದ ಪೌಡರ್ ಮಾಡಿಕೊಡಬೇಕು.[ಎಲ್ಲಾ ಕಡೆ ಒಲೆ ಉರಿಸಲು ಗ್ಯಾಸ್ ಇರುವುದರಿಂದ ಒಲೆ ಬೂದಿ ಸಿಗದ ಕಾರಣ ಈ ಆಲ್ಟರ್ನೆಟ್ ಅಡ್ಜಸ್ಟ್ಮೆಂಟು ]

ಒಮ್ಮೆ ಏನಾಯ್ತೆಂದರೆ, ಪಾರ್ವತೀ ಈಶನಿಗೆ ಕೊಟ್ಟ ಬೂದಿಯಲ್ಲಿ ಅದ್ಯಾವುದೋ ಎಲುಬೋ ... ಎಂತದೋ ಇತ್ತಂತೆ.
ಸಾಣಿಗೆ ಎಲ್ಲಾದ್ರೂ ತೂತು ಬಿದ್ದಿತ್ತೋ ಏನೋ ಪಾಪ.... ಪಾರ್ವತಿಯ ಮೇಲೆ ಈಶ ಭಯಂಕರ ಸಿಟ್ಟು ಮಾಡಿದ.......!!!!!
ಪಾರ್ವತಿ ಕಾರಣ ಕೊಟ್ಟರೂ ಕೇಳದೆ ಪೌಡರ್ ಡಬ್ಬಿಯನ್ನ
ಎತ್ತಿ ರಪ್ಪೆಂದು..ನೆಲದ ಮೇಲೆ ಬೀಸಾಡಿದ....
ಆ ರಭಸಕ್ಕೆ ಅಲ್ಲೊಬ್ಬ ''ಮಗ'' ಹುಟ್ಟಿದ.....!!!!!!![ ಅತ್ಯಾದುನಿಕ ಕಾಲ ] ಅಯ್ಯಬ್ಬಾ......ಅವನ ರೂಪವೋ.....ಥೇಟ್ ರಾಕ್ಷಸಾಕಾರ...!!! ಕೂಗಿದ ಅಂದ್ರೆ ಬ್ರಹ್ಮಾಂಡ ನಡುಗಬೇಕು...[ಬೂದಿಯಿಂದಲೂ ಮಕ್ಕಳು ಹುಟ್ಟುವ, ಮೈ ಬೆವರ ಮಣ್ಣಿನಿಂದಲೂ ಮಕ್ಕಳು ಹುಟ್ಟುವ ತಲೆ ಕೂದಲಿ೦ದಲೂ ಹುಟ್ಟುವ ಅತ್ಯಾಧುನಿಕ ಟೆಕ್ನಾಲಜಿ......!!!!!!]

ಅಷ್ಟೊತ್ತಿಗೆ ಈಶನ ಸಿಟ್ಟು ಕಮ್ಮಿಯಾಗತೊಡಗಿತು. ಪರಿಸ್ಥಿತಿ ಅರ್ಥ ಆಯ್ತು.
ಆದರೂ ಹುಟ್ಟಿದ ಮಗನಿಗೆ ಸಂಸ್ಕಾರ ಕೊಡಬೇಕಲ್ಲ.. ಹೆಸರಿಟ್ಟ. ''ಭಸ್ಮಾಸುರ '' ಭಸ್ಮದಿಂದ ಹುಟ್ಟಿದವ ಎಂದು. ಮಾತು ಕಲಿಸಿದ. ಸಂಬಂಧ ತಿಳಿಸಿಕೊಟ್ಟ. ಮಾಡಲೊಂದು ಕೆಲಸ ಬೇರೆ ಕೊಟ್ಟ...
'' ಮಗನೆ.... ಇನ್ನು ಮೇಲಿಂದ ನನಗೆ ಮೈಗೆ ಹಚ್ಚಿಕೊಳ್ಳಲು ನೀನೆ ಬೂದಿ ವ್ಯವಸ್ಥೆ ಮಾಡು....''

ಸರಿ.. ಅಂತೆಯೇ ಮಗನ ಕೆಲಸ... ಬೂದಿ ತಂದು ಅಪ್ಪನಿಗೆ ಕೊಡುವುದು... ನಡೆಯುತ್ತಾ ಇತ್ತು.
ಹೀಗಿರಲೋಮ್ಮೆ ರಾಕ್ಷಸ ಮಗನಿಗೊಂದು ಯೋಚನೆ ಬಂತು.


'
ಎಲ್ಲರೂ ಹೈ ಫೈ ಮಾಡಿಕೊಂಡು ಅವರವರ ವೆಹಿಕಲ್ ನಲ್ಲಿ ಜುಮ್ಮಂತ ಓಡಾಡಿ ಕೊಂಡಿರುವಾಗ, ಸ್ವಂತ ಜಾಬ್ ಮಾಡುವಾಗ, ನಾನು ಮಾತ್ರ ಅಪ್ಪನಲ್ಲಿ ಬೂದಿ ಕೆಲಸ ಮಾಡಬೇಕೆ.? ಎಷ್ಟು ದಿನಾ ಅಂತ ಹೀಗೆ ಇರುವುದು ...?' ಅನ್ನುವ ಒಂದು ವಿಚಾರ ಮಾಡುತ್ತಾ ...ಇದಕ್ಕೆ '' ಏನಾದರೂ ಮಾಡಲೇ ಬೇಕು'' ಎಂದುಕೊಳ್ಳುತ್ತಾ ಒಂದು ಖತರ್ನಾಕ್ ಐಡಿಯ ಯೋಚಿಸಿಕೊಂಡು ಅಳುತ್ತಾ ...ಐ ಮೀನ್ ಅಳುವಂತೆ ನಟಿಸುತ್ತ ಈಶನಲ್ಲಿಗೆ ಬಂದ.


ಈಶ ಮಗ ಅಳುತ್ತಿದ್ದುದನ್ನು ನೋಡಿ ಕರಗಿ ಹೋದ.  ದಿನಾ ಬೂದಿಯನ್ನು ಸರಿಯಾಗಿ ಗಾಳಿಸಿ ತಂದು ಕೊಡುತ್ತಿದ್ದುದರಿಂದ ಅವನಿಗೆ ಮಗನ ಮೇಲೆ ಪ್ರೀತಿ ಬಹಳ.
'' ಮಗಾ ಎಂತಾತ... ಅಳದೆಂತಕಾ....? '' ಬಾಳಾ ವಾತ್ಸಲ್ಯದಿಂದ ವಿಚಾರಿಸಿದ.

''ಊಂ ........ಊಂ .... ಬೂದಿ ಎಲ್ಲೂ ಸಿಗ್ತೇ ಇಲ್ಲೇ.   ಅದ್ಕೆ ನೀ ನನಗೊಂದು ''ವರ'' ಕೊಡವೂ ....ಊಂ ...ಊಂ .. ''

''ಹ್ನೂ ... ಅಕ್ಕು ಮಾರಾಯಎಂತ 'ವರ ' ಕೊಡವು ಕೇಳಾ.  ಕೊಡ್ತಿ ಅದ್ಕಿನ್ನೆಂತು.   ಅಳದೊಂದ್ ನಿಲ್ಸು ಕೇಳಲಾಗ್ತಿಲ್ಲೇ...''

'' ಕೊಡವೂ ... ಮತ್ತೆ.. ಊಂ... ಊಂ.. ಕೇಳಿದ್ಮೇಲೆ ಇಲ್ಲೇ ಹೇಳಲಿಲ್ಲೇ....''

'' ಕೇಳು .. ಕೇಳು..ಅಳು ನಿಲ್ಸು.. ಕೇಳಲಾಗ್ತಿಲ್ಲೇ.''

''ಊಂ.... ಮತ್ತೆ.. ಮತ್ತೆ.. ನಾ ಯಾರ ತಲೆ ಮೇಲೆ ಕೈ ಇಟ್ರೂ ಅವು ಸುಟ್ಟ ಭಸ್ಮವಾಗವೂ.... ಊಂ.. ವರ ಕೊಡ್ತ್ಯಾ... ? ಇಲ್ದಿದ್ರೆ ನಿಂಗೆ ಬೂದಿ ಸಿಗ್ತೆ ಇಲ್ಲೇ. ''

ಅಷ್ಟರಲ್ಲಿ ಪಾರ್ವತಿ ಈ ಸಂವಾದವನ್ನು ಕೇಳುತ್ತಿದ್ದವಳು, ''ಅಯ್ಯೋ ಹಂಗೊಂದು ವರ ಕೊಡಡಿ.. ಅನರ್ಥ ಆಗಿ ಹೋಕೂ.....'' ಕೂಗಿದಳು ಅಡುಗೆಮನೆಯಿಂದಲೇ..

'' ಕೊಡ್ತೀ ಹೇಳಿದ್ಮೇಲೆ ಕೊಡದೆಯ.   ಆನ್ ಯಾವತ್ತಾದರೂ ಮಾತಿಗೆ ತಪ್ಪವ್ ನನೆ....? ನೀನೂ ಹಂಗೇ ಮಾಡ್ತೆ...''ಎಂದು ಹೇಳಿದವನೇ ಈಶ್ವರ ಉರುಫ್ ಈಶ ಭಸ್ಮಾಸುರನಿಗೆ '' ನೀ ಯಾರ ತಲೆ ಮೇಲೆ ಕೈ ಇಟ್ರೂ ಅವರು ಭಸ್ಮವಾಗಲೀ ...'' ಎಂದು ವರ ಕೊಟ್ಟೆ ಬಿಟ್ಟ.

ವರ ಸಿಕ್ಕಿದ್ದೇ ತಡ, ಭಸ್ಮಾಸುರ ಕಂಡ ಕಂಡವರ ತಲೆ ಮೇಲೆಲ್ಲಾ ಕೈ ಇಟ್ಟು ಅವರನ್ನೆಲ್ಲಾ ಬೂದಿ ಮಾಡಿದ. ಇವನ ಉಪಟಳ ದಿನಾ ದಿನಾ  ಹೆಚ್ಚಾಯ್ತು.

ಇಷ್ಟೇ ಆಗಿದ್ರೆ ಸಾಕಿತ್ತು. ಅವರಿವರ ಸೈಟು, ಫಾರಂ ಹೌಸು.. ಎಲ್ಲಾದರ ಮೇಲೂ ಕಣ್ಣು ಬಿದ್ದು ಅಲ್ಲಿಯ ದೊಡ್ ದೊಡ್ ಮನುಷ್ಯರನ್ನೆಲ್ಲಾ ಅಟ್ಟಿಸಿಕೊಂಡು ಹೊರಟ. ''ಎಲ್ಲಾರ್ನೂ ಭಸ್ಮಾ ಮಾಡ್ತೀ..... ಏನಂತ ತಿಳ್ಕೈಂದ... ನನ್ನ...ಹ್ಞಾ.... '' ಎನ್ನುತ್ತಾ ಅಲೆದಾಡಿದ.

ಎಲ್ಲಾರಿಗೂ ಭಯವಾಗತೊಡಗಿ ಎಲ್ಲಾ ಸೀದಾ ಈಶ್ವರನಲ್ಲಿಗೆ ಬಂದು 'ನಿಮ್ಮನೆ ಮಾಣಿ ಹಿಂಗಿನ್ಗಲ್ಲ ಮಾಡ್ತಿದ್ದ. ನೀ ಒಂಚೂರು ಬುದ್ಧಿ ಹೇಳದೆಯ...' ಹೇಳಿ ಹೇಳಿದರು ದೇವೇಂದ್ರ.   ಮತ್ತೆ ಅವನ ಫ್ರೆಂಡ್ಸ್ ಎಲ್ಲ.

ಅವತ್ತೇ ಭಸ್ಮಾಸುರ ಭಸ್ಮ ತಗಂಡು ಈಶ್ವರನ ಹತ್ರ ಬಂದಿದ್ದೆ ತಡ.


''
ಎಂತಾ ಮಾಣಿ, ಆನ್ ನಿಂಗೆ ವರ ಕೊಟ್ಟಿದ್ದು ಕಂಡ ಕಂಡವರ ತಲೆ ಮೇಲೆ ಕೈ ಇಡು ಹೇಳನಾ..? '' ಹೇಳಿ ಅವನಿಗೆ ಹೊಡೆಯಲು ಹೊರಟ.

ಭಸ್ಮಾಸುರ ಮೊದಲೇ ನೀಚ, ವರದ ಬಲ ಬೇರೆ...
''ಹ್ಹ...ಹ್ಹ..ಹ್ಹಾ... ನೀ ಯಂಗೆ ಎಂತಾ ಮಾಡಲೂ ಆಗ್ತಿಲ್ಲೆ.. ಹೊಡಿತ್ಯ... ಹೊಡಿ ನೋಡನ. ಆನ್ ನಿನ್ ತಲೆ ಮೇಲೇ ಕೈ ಇಡ್ತೀ.... ಹ್ಹ..ಹ್ಹ... ಹ್ಹಾ....''

ಶಿವ ಉರುಫ್ ಈಶನಿಗೆ ಈಗ ಭಯವಾಗತೊಡಗಿತು.. ತಾನು ಕೊಟ್ಟ ವರದ ಅನರ್ಥ ಹೀಗಾಗುತ್ತೆ ಅಂದು ಕೊಂಡಿರದ ಶಿವ ಓಡತೊಡಗಿದ.  ಬಿಟ್ಟಾನ ಭಸ್ಮಾಸುರ.   ಅವನೂ ಅಟ್ಟಿಸಿಕೊಂಡು ಬಂದ.

ಓಡಿದ..ಓಡಿದ.. ಶಿವನಿಗೆ ಏನ್ ಮಾಡಲೂ ತೋಚಲಿಲ್ಲ. ಪಾರ್ವತಿ ಮಾತಾದರೂ ಕೇಳಬೇಕಿತ್ತು.  ಪಕ್ಕನೆ ಆಪ್ತ ಮಿತ್ರ ನಾಣಿಯ ನೆನಪಾಯಿತು.ಅವನ ಮನೆ ಕಡೆ ಧಾವಿಸಿದ.


ನಾಣಿ ತನ್ನ ವೈಕುಂಠ ನಿವಾಸದಲ್ಲಿ ಬೆಳಿಗ್ಗೆ ಎದ್ದು ಲಕ್ಷ್ಮಿ ಮಾಡಿದ ದೋಸೆ , ಮಾವಿನ ಹಣ್ಣಿನ ರಸಾಯನ ತಿಂದು ಅದನ್ನೇ ಬಣ್ಣಿಸುತ್ತಾ ಸೋಫಾದ ಮೇಲೆ ಪೇಪರ್ ನೋಡುತ್ತಾ ಕುಳಿತಿದ್ದ. ''ಮಾವಿನ ಹಣ್ಣು ಚನ್ನಾಗಿತ್ತನೆ...? ರಸಾಯನ ಚನಾಗಾಗಿತ್ತು. ಸುಳ್ಳಲ್ಲಾ .... ಎಳ್ಳು ಬೀಸಿ ಹಾಕಿದ್ಯನೆ...? ''
''ಹೌದು ಕಾಯಿ, ಎಳ್ಳು ಎಲ್ಲಾ ಬೀಸಿ ಹಾಕಿದ್ದಿ. ನಾಳೆ ಇನ್ನಷ್ಟು ಹಣ್ಣು ತಗಂಡು ಬನ್ನಿ.  ಹುಡ್ರಲ್ಲ ತಿನ್ಕತ್ತ...''ಕಿಚನ್ನಿಂದ ಕೇಳಿ ಬಂತು.

ಬಾಗಿಲು ಬಡಿದ ಸದ್ದಾಯ್ತು..ದಬ.. ದಬ... ಸದ್ದು ಹೆಚ್ಚಾಯ್ತು. ನಾಣಿಯೇ ಎದ್ದು.. ಒಂದು ಕೈಯಲ್ಲಿ ಪೇಪರ್ ಹಿಡಿದುಕೊಂಡೆ ಬಾಗಿಲು ತೆರೆದ..

''ನಾಣಿ  ನಾರಾಯಣಾಶ್ರೀಮನ್ನಾರಾಯಣ  ಬಾವಯ್ಯಾ.   ನೀನೆ ಕಾಪಾಡವೂ.. ಎನ್ನ...'' ಎನ್ನುತ್ತಾ ತೆರೆದ ಬಾಗಿಲಿಂದ ನಾಣಿಯನ್ನ ದಬ್ಬಿಕೊಂಡೆ ಬಂದು ಸೋಫಾದಲ್ಲಿ ಕುಸಿದ..

''ಬಾಗ್ಲು ಹಾಕುಅವ ಬತ್ತಬಂದ್ ಬುಡ್ತಾ...ಬಾಗ್ಲು ಹಾಕು...''ಶಿವ ಅವಸರಿಸಿದ..

''ಎಂತಾತ ಮಾರಾಯ, ಮತ್ಯನ್ತಾ ಭಾನ್ಗಡೆ ಮಾಡ್ಕ್ಯಂಡು ಬೈನ್ದ್ಯಾ...?ಯಾರ್ ಬತ್ವಾ?   ಹೆದ್ರಡಾ ಹೇಳುನಾ ಇದ್ದಿ... ''

ಶಿವ ಎಲ್ಲವನ್ನೂ, ಹೀಗ್ ಹೀಗೆ , ಹೀಗ್ಹೀಗೆ ಅಂತ ಒಂದೇ ಉಸುರಿಗೆ ಹೇಳಿ ಮುಗಿಸಿದ.

''ಅಲ್ದಾ ಮಾರಾಯ. ನಿಂಗೆ ಖುಷಿಯಾದರೂ ಮಕ್ಕ ಹುಟ್ತಾ ... ಸಿಟ್ ಬಂದರೂ ಮಕ್ಕ ಹುಟ್ತಾ ....!! ಸ್ವಲ್ಪ ಜ್ಞಾನ ಬ್ಯಾಡ್ದನಾ....? ವರ ಗಿರ ಕೊಡಕಿದ್ರೆಅನಾಹುತ ಅನಾಹುತವೇ. ನೀ ನಮ್ಮನಿಗೆ ಬರದೇ ಇಂತದಕ್ಕೆಮತ್ಯಾವಾಗ್ಲೂ ಪುರ್ಸೋತ್ತಿರ್ತಲ್ಲೇ... '' ಎಂದು ನಾಣಿ ಚೆನ್ನಾಗಿ ಕ್ಲಾಸ್ ತಗೊಂಡ..

''ನೋಡಾ..... ಎಂತಾರೂ ಪರಿಹಾರ ಕೊಡಹಂಗಿದ್ರೆ ಕೊಡು. ಮೊದ್ಲೇ ತಲೆ ಕೆಟ್ಟೋಜು...... ನಿಂಗೆ ಆಗ್ತಾ ಹೇಳು... ಇಲ್ದಿದ್ರೆ ಬರಮು ಹತ್ರಾರೂ ಹೋಗದೆಯ...... ಒಳ್ಳೆ ಗೋಟಾವಳಿ ವ್ಯಾಪಾರಾಗೊಜು....''

'' ಸುಮ್ನಿರಾ ಸಾಕು... ಅವಂಗೆ ಮೂರ್ಹೊತ್ತೂ ಸೃಷ್ಟಿ ಕಾರ್ಯ ಮಾಡದೆಯಾ...ಕೆಲಸ. ಈಗಿತ್ಲಾಗಂತೂ ವಯಸ್ಸಾತು ಅವಂಗೆ. ನೋಡು ಅರುಳು ಮರುಳು ಆದಂಗೆ ಆಯ್ದು. ಒಂದು ಮಕ್ಕ ಸೈತ ಸರಿ ಹುಟ್ತ್ವಲ್ಲೇಕೆಲವರಿಗೆ ಒಂದೊಂದೇ ಸಲಕ್ಕೆ ಅವಳಿ, ತ್ರಿವಳಿ.   ಇಲ್ದಿದ್ದ್ರೆ ಸಯಾಮಿ.  ಮತ್ ಕೆಲವರಿಗೆ ಎಂತಾ ಮಾಡಿದರೂ ಮಕ್ಕಾನೆ ಅಗ್ತ್ವಲ್ಲೇ. ಅವನತ್ರ ಹೋಗ್ತ್ನಡಾ ಇಂವಕೇಳೆ ಲಕ್ಷ್ಮೀ,  ಶಿವ್ ಬಾವಯ್ಯನ ಮಾತ....''

''ಸರಿಯಾಹಂಗಾರೆ ನೀನೆ ಎಂತಾರೂ ಉಪಾಯ ಹೇಳು ಭಸ್ಮಾಸುರನಿಂದ ತಪ್ಸಿಗಮ್ಬಲೇ'' .....'' ಅಯ್ಯೋ ಬಾವ,   ಅಂವ ಬಂದನೋ ಮಾರಾಯ....''

ಭಸ್ಮಾಸುರ ಕರ್ಕಶವಾಗಿ ಶಿವನನ್ನು ಕರೆಯುತ್ತಾ , ಕೂಗುತ್ತಾ..ನಾರಾಯಣನ ಮನೆ ಕಡೆ ಬರುವುದು ಕಾಣಿಸಿತು. ಹೆಜ್ಜೆ ಸದ್ದು ಒಳ್ಳೆ ಭೂಕಂಪವನ್ನೇ ನೆನಪಿಸುತ್ತಿತ್ತು.

''ನೀ ಹೆದ್ರಡದಾ... ಬಾವ.  ನೀ ಇಲ್ಲಿ ಗೆಸ್ಟ್ ರೂಮಲ್ಲಿ ಬಾಗ್ಲು ಹಾಕ್ಯಂಡು ಸಂದಿಂದ ನೋಡ್ತಾ ಇರು ಕೀ ಹೋಲಿಂದ. ನಾ ಎಲ್ಲನೋಡ್ಕ್ಯತ್ತಿ. ಒಳ್ಳೆ ಬೋಳೆ ಶಂಕರನ ಸವಾಸಾತು ...'' ಎಂದವನೇ ಶಿವನನ್ನು ಗೆಸ್ಟ್ ರೂಮಿಗೆ ಕಳಿಸಿ ತಾನು ಬೆಡ್ ರೂಮಿನ ಒಳಹೋದ ನಾರಾಯ್ಣ.

ನಾರಾಯ್ಣ.  ಅವ ಮೊದ್ಲೇ ಮ್ಯಾನೇಜ್ಮೆಂಟ್ ಗುರೂ.   ಕ್ರೈಸಿಸ್ ಮ್ಯಾನೆಜ್ ಮಾಡಲು ಹೇಳಿಕೊಡಬೇಕೆ...?ಬಾಳಾ ಕಡೆ ಉಪದೇಶ ಕೊಟ್ಟು ಒಳ್ಳೆ ಒಳ್ಳೆ ಹೆಸರು ತಗೊಂಡವನು.

ಶಿವ ಕೀ ಹೋಲಿಂದ ನೋಡುತ್ತಿದ್ದ .
ಭಸ್ಮಾಸುರನ ಹೆಜ್ಜೆ ಸದ್ದು ಹತ್ತಿರವಾಗುತ್ತಿತ್ತು. ಆಗ ನಾರಾಯಣನ ಬೆಡ್ರೂಮಿನಿಂದ ಸುಂದರಿಯೊಬ್ಬಳು ಹೊರಬಂದಳು. ಅವಳು ಎಷ್ಟು ಸುಂದರವಾಗಿದ್ದಳೆಂದರೆ ಅವಳನ್ನು ನೋಡುತ್ತಿದ್ದ ಶಿವನಿಗೆ ಭಸ್ಮಾಸುರನ ಭಯವೇ ಮರೆತು ಹೋಯಿತು...!!ಇದ್ಯಾವ ಮೋಹಿನಿ ಅಂತ.... ಮತ್ತು ಈ ನಾಣಿ ಹೀಗೊಂದು ಸೆಟಪ್ ಬೇರೆ ಇಟ್ಕೊಂಡಿದ್ದಾನಾ....? ತಂಗಿ ಲಕ್ಶ್ಮಿ ಎಲ್ಲಿ ಹೋದಳು..?.ಹಿಂದ್ ಗಡೆ ಕಸ ಮುಸರೆ ಮಾಡಲೇ ಹೊಯ್ದ್ಲಾ..?ಇವ್ಳು ಯಾರಾಗಿಕ್ಕು...?ಅಂತೆಲ್ಲ ಆಲೋಚಿಸತೊಡಗಿದ ಶಿವ.

ಅಷ್ಟೊತ್ತಿಗೆ ಭಸ್ಮಾಸುರ ಬಾಗಿಲ ಬಳಿ ಬಂದು ಬಾಗಿಲನ್ನು ಒದ್ದ ಹೊಡೆತಕ್ಕೆ  ಸುಮಾರಿನ ಮನೆ ಬಾಗಿಲಾಗಿದ್ರೆ ಚೂರ್ ಚೂರ್ ಆಗಿರುತ್ತಿತ್ತು. ಅದು ನಾರಾಯಣನ ಮನೆ ಬಾಗಿಲಾದ್ದರಿಂದ ಗಟ್ಟಿ  ಇತ್ತು.

ಒಳ ಬಂದವನೇ ಭಸ್ಮಾಸುರ 'ಎಲ್ಹೊದ್ಯೋ ಅಪ್ಪಾ... ' ಎಂದು ಕೂಗಲು ಬಾಯಿ ತೆರೆದವನು ಹಾಗೆಯೇ ನಿಂತ. ಮೋಹಿನಿಯನ್ನು ನೋಡಿ ಅವನೂ ವಿಸ್ಮಯಗೊಂಡ. ತೆರೆದ ಬಾಯಿ   ಬಿಟ್ಟ ಕಣ್ಣು ಮುಚ್ಚದೆ.... !!!!!

ಅಷ್ಟೊತ್ತಿಗೆ....   ಒಳಗಡೆ ಸಿ.ಡಿ.ಪ್ಲೇಯರ್ ಹಾಡತೊಡಗಿತು.

ರಾ ..ರಾ..... ರಾ...ರಾ .... ಸರಸಕು ರಾರಾ....ರಾರಾ
... .........
ನನು ಒಕಸಾರಿ ಕನುಲಾರ ತಿಲಕಿನ್ಚರ...
ನಾ ವ್ಯಥಲಲ್ಲು ಮನಸಾರ ಆಲಿಂಚರ............. ......... ...... ........


ಮೋಹಿನಿ ಬಳುಕುತ್ತಾ, ನುಲಿಯುತ್ತಾ ನರ್ತಿಸ ತೊಡಗಿದಳು. ಅವಳನ್ನೇ ನೋಡುತ್ತಾ ಮೈ ಮರೆತಿದ್ದ ಭಸ್ಮಾಸುರ ತಾನೂ ಅವಳನ್ನೇ ಅನುಕರಿಸ ತೊಡಗಿದ. ತನ್ನನ್ನು ಸೋಲಿಸೆಂಬಂತೆ ಆಕೆಯೂ ಕಣ್ ಸನ್ನೆ ಮಾಡುತ್ತಾ, ಹುಬ್ಬು ಹಾರಿಸುತ್ತಾ ಕುಣಿಯತೊಡಗಿದಳು.
ಮೋಹಿನಿ ಮಾಡಿದಂತೆಯೇ ನರ್ತಿಸುತ್ತಾ .. ನರ್ತಿಸುತ್ತಾ... ಭಸ್ಮಾಸುರ ತನ್ನನ್ನೇ ಮರೆತುಬಿಟ್ಟ.ಲಲನೆ ಮಾಟವಾಗಿ ತನ್ನ ಕೈಗಳೆರಡನ್ನೂ ಮೇಲೆತ್ತುತ್ತಾ....... ಮೇಲೆತ್ತುತ್ತಾ.... ತನ್ನ ತಲೆಯ ಮೇಲಿರಿಸಿ ಕೊಂಡಳು.

.... ಅದನ್ನೇ ಮಾಡಿದ ಭಸ್ಮಾಸುರ......

ಎದುರಿಗೆ ದೊಡ್ಡದಾದ ಬೂದಿ ಗುಡ್ಡೆ  ಬಿತ್ತು.....!!!

ಮೋಹಿನಿ ತುಟಿಯಂಚಿನಲ್ಲಿ ನಕ್ಕು ಬೆಡ್ರೂಮಿನ ಕಡೆ ನಡೆಯ ತೊಡಗಿದಳು. ಒಮ್ಮೆಲೇ ಗೆಸ್ಟ್ ರೂಮಿನ ಬಾಗಿಲು ತೆರೆದ ಶಿವ ಹಾರಿ ಹೋಗಿ ಸುಂದರಿಯ ಕೈ ಹಿಡಿದು ಕೊಂಡ.

''ಯಾರೇ ನೀನು ಚೆಲುವೆ.... ನಿನ್ನಷ್ಟಕ್ಕೆ ನೀನೆ ಏಕೆ ನಗುವೇ....''

... ಬಿಡಲೇ, ಇದೂ ನಾನು ನಾಣಿ.  ಸ್ತ್ರೀವೇಶ ಹಾಕ್ಯ ಬೈಂದಿ.... ಲಕ್ಷ್ಮಿ ಒಳಗೆ ಬರ ಮೊದ್ಲು ಅವಳ ಸೀರೆ ಯಥಾಸ್ಥಾನಕ್ಕೆ ಸೇರಿಸಿದ್ನಾ ಬಚಾವೂಬಿಡು ಬಿಡು...'' ಎನ್ನುತ್ತಾ ಸೆರಗು ಬಿಡಿಸಿಕೊಂಡ ನಾಣಿ ಕೋಣೆಯ ಒಳಗೆ ಓಡಿದ..

''ಅಂತೂ ಒದಗಿದ ಸಂಕಷ್ಟ ಪರಿಹಾರಾತು ಮಾರಾಯ....'' ಎನ್ನುತ್ತಾ ಶಿವ ತನ್ನ ಮನೆ ಕೈಲಾಸನಿಲಯದ ಕಡೆ ನಡೆಯ ತೊಡಗಿದ .


ವಂದನೆಗಳು.

Saturday, April 24, 2010

ನಾಗೇಶ ಹಂದಿ ಹಿಡಿದದ್ದು

ನಮ್ಮ ಊರಿನಿಂದ ಸ್ವಲ್ಪ ದೂರದಲ್ಲಿ ನಮ್ಮದೊಂದಷ್ಟು ಜಮೀನಿದೆ. ಹೊಸದಾಗಿ ತೋಟ ಹಾಕಿಸಿದ್ದು. ದೂರದ್ದಾದ್ದರಿಂದ ನೋಡಿಕೊಳ್ಳಲು ಒಂದು 'ಜನ' ಬಿಟ್ಟಿದ್ದೇವೆ.'ಜನ 'ಅಂದರೆ ನಾಗೇಶ ಮತ್ತು ಅವನ ಫ್ಯಾಮಿಲಿ....!ಅವನದ್ದೂ ಅರ್ಧ ಎಕರೆ ತೋಟ ಪಕ್ಕದಲ್ಲಿಯೇ ಇದೆ. ಒಳ್ಳೆಯವನು . ನಮ್ಮ ತೋಟದ ಎಲ್ಲಾ ಜವಾಬ್ಧಾರಿ ಅವನದೇ...ಅಂದರೆ ಯಾವ ಕೆಲಸ ಮಾಡುವುದಾದರೂ ಅವನೇ ಗುತ್ತಿಗೆ ಹಿಡಿಯುತ್ತಾನೆ. ಆಳು ಜನರ ವ್ಯವಸ್ತೆ, ಹಣಕಾಸಿನ ಮಾತುಕತೆ ಎಲ್ಲಾ ಅವನದೇ ಜವಾಬ್ಧಾರಿ.. ತೋಟಕ್ಕೆ ಬಂದ ದನ ಹೊಡೆದು ಓಡಿಸುವುದರಿಂದ ಹಿಡಿದು.

ತನ್ನದೇ ತೋಟ ಎಂಬಷ್ಟು ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ ಪಾಪ.... ಹಾಗಾಗಿ ತೋಟದ ಸೂಪರ್ ವೈಸರ್ ಎಂತಲೂ ಹೇಳಬಹುದು... ಅಲ್ಲದೆ ನಾವಿಲ್ಲದಿದ್ದಾಗ ತೋಟದ ಯಜಮಾನ ಅವನೇ....!! ನನ್ನವರು ಅವನನ್ನು ಮ್ಯಾನೇಜರ್, ಕೆಲವೊಮ್ಮೆಸಿ.ಇ.ಓ.ಎಂತೆಲ್ಲಾ ಕರೆಯುವುದೂ ಉಂಟು.....!!!!!

ಪಾಪದವ ಮತ್ತು ಒಂತರಾ ಹುಂಬ ..

ಅವನದ್ದೊಂದು ಎಂ 80 ಇತ್ತು. ಅದನ್ನು ಹತ್ತಿ ಹೊರಟನೆಂದರೆ ಮನೆ ಸೇರುತ್ತಾನಾ ಎಂದು ಸಂಶಯ ಪಡಬೇಕಾದ್ದು ನೋಡುವವರ ಧರ್ಮ.

ಒಂದಿನಾ ನಮ್ಮ ಬಾವನವರನ್ನು' ಇಲ್ಲಪ್ಪಾ ನಿನ್ನ ಗಾಡಿಯಲ್ಲಿ ಹತ್ತಲು ಭಯ' ಎಂದರೂ ಕೇಳದೆ ಒತ್ತಾಯ ಮಾಡಿ ಜೊತೆಗೆ ಇನ್ನೊಬ್ಬರನ್ನೂ ಕೂರಿಸಿ ಕೊಂಡು ತ್ರಿಬ್ಬಲ್ ರೈಡ್ ಮಾಡಿದ ಹೊಡೆತಕ್ಕೆ ಸ್ವಲ್ಪ ದೂರ ಹೋಗುವಷ್ಟರಲ್ಲಿಯೇ ಅದು ವಿಮಾನದಂತೆ ಟೇಕಾಫ್ ಆಗಿ ಹಿಂದಿದ್ದ ಇಬ್ಬರೂ ನೆಲಕ್ಕೆ ಕಾಲು ಕೊಟ್ಟು ಹೇಗೋ ಬಚಾವಾದ ಕಥೆ ನೆನಪಿಡುವನ್ತದ್ದು.


ಹೋದಲ್ಲೆಲ್ಲಾ ಒಂದಲ್ಲ ಒಂದು ಆಕ್ಸಿಡೆಂಟ್ ಮಾಡಿಕೊಳ್ಳದಿದ್ದರೆ ಅವನ ಗಾಡಿಗೆ ಮರ್ಯಾದೆಯೇ ಇಲ್ಲ. ಒಮ್ಮೆ ನಿಂತ ಲಾರಿಗೆ ಹೋಗಿ ಗುದ್ದಿ ಕುದುರೆಯಂತೆ ಹಾರಿ ಬಿದ್ದಿದ್ದ .
ಇನ್ನೊಮ್ಮೆ ಅಡ್ಡರಸ್ತೆಯಿಂದ ಹಾರನ್ ಕೂಡಾ ಮಾಡದೆ, ಎಡ ಬಲ ನೋಡದೆ ಸೀದಾ ಮೇನ್ ರೋಡಿಗೆ ನುಗ್ಗಿ ಎದುರಿಗೆ ಬರುತ್ತಿದ್ದ ರಿಕ್ಷಾಕ್ಕೆ ಗುದ್ದಿದ್ದ.. ಹೆಚ್ಚಿಗೆ ವೇಗ ಇರಲಿಲ್ಲವಾದ್ದರಿಂದ ಕೈಕಾಲು ಮುರಿತದಿಂದ ಬಚಾವಾದರೂ ಎಲ್ಲರೂ ಸೇರಿ ಗುದ್ದಿದ್ದರ ಪರಿಣಾಮವಾಗಿ ಮೈ ಕೈ ಊದಿ ಎರಡು ದಿನ ಆಸ್ಪತ್ರೆಯಲ್ಲಿ ರೆಷ್ಟು ತಗೊಂಡು ಬಂದಿದ್ದು ನಿಜ. ಊರಿಗೆ ಬಂದು'' ಎಂತಾಆಯಿಲ್ಲೇ...''ಎನ್ನುತ್ತಾ ಮತ್ತೆ ರೆಡಿಯಾದದ್ದೂ ಸುಳ್ಳಲ್ಲ..

ಒಮ್ಮೆ ತೋಟದಲ್ಲಿ ಮೀಟು ಕಡಿಯುವಾಗ ಬದಿಯಲ್ಲೇ ಹರಿದು ಹೋಗುತ್ತಿದ್ದ ನಾಗರ ಹಾವೊಂದನ್ನು ಗುದ್ದಲಿಯಿಂದ ನೋಡದೆ ಕಡಿದು ಬಿಟ್ಟಿದ್ದ.ಅದು ತಲೆ ಬಾಲ ಬೇರೆಯಾಗಿ, ತಲೆಯ ಭಾಗ ಜೀವ ಸಂಕಟದಿಂದ ಒಂದು ಏಡಿ ಕುಣಿಯನ್ನು ಹೊಕ್ಕು ಬಿಟ್ಟಿತ್ತು.ಉಳಿದ ಉದ್ದದ ಬಾಲದ ಭಾಗ ತೋಟದ ಬಣ್ಣದ ಮೇಲೆ ಬಿದ್ದಿತ್ತು.
ಎಲ್ಲಾ ಅಕ್ಕಪಕ್ಕದವರು ....'' ಹಾವಿನ ದ್ವೇಷ ಹನ್ನೆರಡು ವರುಷ ... ಮನೆ ಮಾಡಲ್ಲೆಲ್ಲಾ ಸರ್ಪಿನ ಹಾವೇ ಕಾಣಸಿ ಕೊಳ್ಳತ್...ಎಂತಾಅಂದ್ರೂ ತಪ್ಪಾಗಿ ಹೋಯಿತೇ... ಮಕ್ಳು ಮರಿ ಇರುವವ ನೀನ'' ಅಂದರು. ಇವನ ಹೆಂಡತಿ ಶಾರದೆಯಂತೂ ಹಾವು ನಾಗೇಶನಿಗೆ ಕಡಿದಿದೆಯೇನೋ ಎಂಬಂತೆ ಮೂರ್ಚೆ ಹೋಗಿದ್ದೂ ಆಯ್ತು.

ಆಮೇಲೆ ಇವನಿಗೆ ಹೆದರಿಕೆಯಾಗಿ ಸರ್ಪಸಂಸ್ಕಾರ ಮಾಡಿಸಲು ಪಕ್ಕದ ಹಳ್ಳಿಯ ಜೋಯಿಸರ ಹತ್ತಿರ ಹೋದ. ಜೋಯಿಸರು '
'ಬರೀಬಾಲ ಮಾತ್ರದಿಂದ ಸರ್ಪ ಸಂಸ್ಕಾರ ಮಾಡಲು ಸಾಧ್ಯವಿಲ್ಲ ... ತಲೆ ಭಾಗ ಜೀವ ಇದ್ದರೆ ಮತ್ತೆ ಪಾಪ ಹೆಚ್ಚು ಸುತ್ತಿ ಕೊಳ್ಳುತ್ತೆ... ತಲೆಹುಡುಕಿ ಸಂಸ್ಕಾರ ಮಾಡು ...'' ಎಂದರು


ಹಾವಿನ ಸ್ಪೆಷಲಿಸ್ಟ್ ರ ಹತ್ತಿರ ಬಾಲ ತುಂಡಾದ ಹಾವು ಬದುಕಿರುತ್ತದೋ ಇಲ್ಲವೋ ಪ್ರಶ್ನಿಸಿ ಬದುಕಿರಲು ಸಾಧ್ಯವೇ ಇಲ್ಲ ಎಂಬ ಸಮಾಧಾನದೊಂದಿಗೆ ಧೈರ್ಯವಾಗಿ ಇಂವ ಬಂದು ಏಡಿ ಕುಣಿಯನ್ನು ಸುಮಾರು ಆರೇಳು ಅಡಿಗಳಾಗುವಷ್ಟು ಅಗೆದ. ಕಡೆಗೆ ಸತ್ತ ಹಾವಿನ ತಲೆ ಸಿಕ್ಕಿತು. ಎರಡನ್ನೂ ಸೇರಿಸಿ ಸುಬ್ರಹ್ಮಣ್ಯಕ್ಕೆ ತಪ್ಪುಗಾಣಿಕೆಯಿತ್ತು... ಅದಕ್ಕೆ ಒಂದು ಸಂಸ್ಕಾರ ಅಂತ ಮಾಡಿಯಾಯಿತು...

ಹೀಗೆ ಇವನು ಮಾಡಿಕೊಳ್ಳುವ ಭಾನಗಡೆ ಒಂದೆರಡಲ್ಲ.

ಒಮ್ಮೆ ಇವನ ನಾಲ್ಕಾರು ಸ್ನೇಹಿತರೊಂದಿಗೆ ಹಂದಿ ಬೇಟೆಗೆ ಅಂತ ಊರ ಹಿಂದಿನ ಕಾಡಿಗೆ ಹೋದ. ಹೊಟ್ಟೆಗೆ ಸ್ವಲ್ಪ ಔಷಧಿ ಬೇರೆ ..... ಶಕ್ತಿ ...ಧೈರ್ಯಕ್ಕೆ... ಇರಲಿ ಅಂತ ...
ಎಲ್ಲರೂ ಯಥಾನ್ಶಕ್ತಿ ಕುಡಿದಿದ್ದರು...ಹಂದಿಯೊಂದನ್ನು ಬಿಟ್ಟು..

ಅಲ್ಲಿ ಕೋವಿ ಇದ್ದದ್ದು ಇವನ ಸ್ನೇಹಿತ ಗಿಡ್ಡ ನಾಯಕನಹತ್ತಿರ .. ಅವನಿಗೆ ಮೂವತೈದಕ್ಕೆ ಚಾಳೀಸು ಬಂದಿತ್ತು....!!!!ಹಗಲೇ ಸುಮಾರಾಗಿ ಕಣ್ಣು ಕಾಣಿಸುವವ ರಾತ್ರಿ ಹೇಗಿರಬೇಡ....? ಹಂದಿ ಹೊಡೆಯುವವ ಅವನೇ....
ಕೋವಿ ಅವನದಾದ್ದರಿಂದ ಗುರಿ ಇಡುವ ನೈತಿಕ ಹಕ್ಕು ಅವನದೇ ಅಲ್ಲವೇ...?

ಎಲ್ಲರೂ ಪ್ಲಾನ್ ಮಾಡಿ ಕೊಂಡರು..ಬೆಟ್ಟದಲ್ಲಿ ಮರಗಿಡಗಳ ನಡುವಿನಲ್ಲಿ ಒಂದು ಜಾಗವನ್ನು ಆಯ್ದು ಕೊಂಡು, ಅಲ್ಲಿ ಗಿಡ್ದನಾಯಕ ಕೋವಿ ಮತ್ತು ಗುರಿಯೊಂದಿಗೆ ಸಜ್ಜಾಗಿರಬೇಕು... ಮತ್ತು ನಾಲ್ಕು ಜನ ಹಂದಿಯನ್ನು ಆ ಸ್ಪಾಟಿಗೆ ಓಡಿಸಿಕೊಂಡು ಬರಬೇಕು.. ಅಲ್ಲದೆ ಗುಂಡು ತಗುಲಿದ ಹಂದಿಯನ್ನು ತಪ್ಪಿಸಿಕೊಂಡು ಹೋಗದಂತೆ ಹಿಡಿದು ಅದುಮಲು ನಾಗೇಶ....!!
ಪ್ರಾಜೆಕ್ಟ್ ರೆಡಿಯಾಯಿತು.


ಆ ಕಡೆಯಿಂದ ಸ್ಪಾಟಿಗೆ ಹಂದಿಯನ್ನು ಬೆದರಿಸಿಕೊಂಡು, ಓಡಿಸಿಕೊಂಡು ಬಂದರು.
ಗಿಡ್ಡನಾಯಕ ರೆಡಿಯಾಗಿದ್ದ... ಹೊಟ್ಟೆಯಲ್ಲಿ ಹಾಕಿಕೊಂಡ ಥರ್ಟಿ, ಸಿಕ್ಸ್ಟಿ +,+,+,+ ಕೂಡಾ ಕೆಲಸ ಮಾಡಲಾರಮ್ಬಿಸಿತ್ತು .
ನಾಗೇಶನಿಗೆ ಉತ್ಸಾಹ ಹೆಚ್ಚಾಗಿ ಕಬ್ಬಡ್ಡಿ ಆಡುವವರಂತೆ ಅತ್ತ ಇತ್ತ ಹಾರುತ್ತಿದ್ದ... ಯಾವುದೇ ಕಾರಣಕ್ಕೂ ಹಂದಿ ತಪ್ಪಿಸಿಕೊಂಡು ಹೋಗಬಾರದು ಮತ್ತು ಗುಂಡು ತಾಗಿದ ನಂತರ ಹಂದಿ ಹಾರಿ ಬೀಳುವುದು ತನ್ನ ಕೈಗೆ .......ಕ್ರಿಕೆಟ್ ಬಾಲ್ ಹಿಡಿದ ಹಾಗೇ ಹಿಡಿಯುವುದು ..... ಅನ್ನುವ ಲಾಜಿಕ್ಕು...!!

ಹಂದಿ ಓಡುತ್ತಾ ಬಂತು... ಬಂತು... ಬಂತು... ಬಂದೆ ಬಿಟ್ಟಿತು...........!!!!
ಡಂ.... ಡಾಮ್... ಡಮಾರ್ ...
ಗಿಡ್ದನಾಯಕನ ಕೋವಿಯಿಂದ ಗುಂಡು ಪಾಸಾಯ್ತು..
ಗುಂಡು ಪಾಸಾಗಿದ್ದಿದ್ದು ನಿಜ..
ಹಂದಿಯೂ ಬದಿಗೆ ಹಾರಿ ಪಾಸಾಗಿದ್ದುದು ಅದಕ್ಕಿಂತಲೂ ನಿಜ...!!
ಹಂದಿಯನ್ನು ಹಿಡಿಯುವವನು ಎಲ್ಲಿ ಹೋದ ಎಂದು ಎಲ್ಲರೂ ನಾಗೇಶನನ್ನು ಹುಡುಕಿದರು.. ಪಾಪ ಪೊದೆಯ ಸಂದಿಯಲ್ಲಿ ನರಳುವ ಶಬ್ದ ಕೇಳಿ ನೋಡಿದರೆ... ಕಾಲು ಪೂರ ರಕ್ತವಾದ ನಾಗೇಶ ಬಿದ್ದಿದ್ದ..

'
' ಎಂತ ಮಾರಾಯ ''ಎಂದು ಎಲ್ಲರೂ ನೋಡಿದರೆ ... ಗುಂಡು ಬಿದ್ದಿದ್ದು ಹಂದಿಗಲ್ಲ.. ನಾಗೇಶನ ಕಬಡ್ಡಿಯ ತೊನೆದಾಟದಿಂದಾಗಿ ಹಗಲುಗುರುಡ ಗಿಡ್ದನಾಯಕನ ಕಣ್ಣಿಗೆ ನಾಗೇಶನೇ ಹಂದಿಯಂತೆ ತೋರಿ ಗುರಿಯಿಟ್ಟಿದ್ದ...ಒಂದು ಗುಂಡು ಕಾಲಿಗೆ ಬಿದ್ದಿತ್ತು..ಗುರಿಕಾರನ ಸಾಮರ್ಥ್ಯದ ದೆಸೆಯಿಂದ ಇನ್ನೊಂದು ಗುಂಡು ಸರಿಯಾಗಿ ''ಎದೆಗೆ''ಬಿದ್ದಿತ್ತು.....!!!

ಹೆದರುವ ಅಗತ್ಯವಿಲ್ಲ....!!
.ನಾಗೇಶನ ಗ್ರಾಚಾರ ಸರಿಯಿತ್ತು.......!!!!!!
ಇವನೇನು ಮಾಡಿದ್ದಾ ಅಂದರೆ....... ಎಡದ ಜೇಬಿನಲ್ಲಿ ಸುಣ್ಣದಂಡೆ ಇಟ್ಟುಕೊಂಡಿದ್ದ.. ಗುಂಡು ಸರಿಯಾಗಿ ಸುಣ್ಣದಂಡೆಗೆ ಬಿದ್ದಿತ್ತು... ಸಧ್ಯ.. ಇಲ್ಲದಿದ್ದರೆ ಈ ವರ್ತಮಾನ ಹೇಳಲು ನಾಗೇಶ ಭೂತವಾಗಿರುತ್ತಿದ್ದ..
ಎಲ್ಲರೂ ಪ್ರಾಣ ಕಾಪಾಡಿದ ಸುಣ್ಣದಂಡೆಯನ್ನು ಕೊಂಡಾಡಿದ್ದೆ ಕೊಂಡಾಡಿದ್ದು.

ಪ್ರತೀ ಸಾರಿ ಊರಿಗೆ ಹೋದಾಗಲೂ ಒಂದಲ್ಲ ಒಂದು ನಾಗೇಶನ ಕಥೆ ಇದ್ದೇ ಇರುತ್ತದೆ...ಇಷ್ಟೆಲ್ಲಾ ಭಾನಗಡೆ ಮಾಡಿಕೊಂಡರೂ ಮತ್ತೆ ಮರುದಿನ ರೆಡಿ ಹೊಸ ಕಥೆಗೆ..........!!!!!

ವಂದನೆಗಳು.

Monday, April 19, 2010

ಫ್ಲೂ ಜ್ವರ...

ಬೇಸಿಗೆ ಮರಳಲು ಕರೆಯದೆ ಬರುವೆ
ತಣ್ಣನೆ ತಂಪಿನಲಿ
ಬಣ್ಣದ ನೀರಿಗೆ ಮರುಳಾದೊಡೆ ನೀ
ಕಣ್ಣಿನ ಜೊ೦ಪಿನಲಿ


ಒಂದರ ಹಿಂದಿನ್ನೊಂದರ ಬರುವು
ಸಾಗರದಲೆಯಂತೆ
ಭರತವು ಮೊರೆತವು ಚಳಿಯದು ಕೊರೆತವು
ನಾಲಿಗೆ  ಕಹಿ ಬೇವೂ


ಕೊರಳಲಿ ಹಣೆಯಲಿ ಹನಿಯೊಡೆದಿಹ ಮಣಿ
ಮದ್ದಿಗೆ ಮೈ ಚಾಚಿ
ಎದ್ದೊಡುವೆ ನೀ ಸುದ್ದಿಗೂ ಬಾರದೆ
ಮರಳುವೆ ಕೈ ಚಾಚಿ


ಮೈ ಕೈ ನಡುಕವು ಕುತ್ತಿಗೆ ಕಡು ಬಿಸಿ
ಕಣ್ಣಿನ ಬುಡ ಕಪ್ಪು
ಬಣ್ಣವ ತೆಗೆಯುವೆ ಸುಣ್ಣವ ಬಳಿಯುವೆ
ಮುಖದಲಿ ಸುರಿಗಪ್ಪು


ಒಬ್ಬರ ಬಿಟ್ಟಿನ್ನೊಬ್ಬರ ಹಿಡಿಯುವೆ
ಖೋ ಖೋ ತೆರನಂತೆ
ನಲ್ಲೆಯ ಬಿಡುತಲಿ ನಲ್ಲನ ಬೆಸೆಯುವೆ
ಆಟದಿ ಸಿಗದಂತೆ


ಶಿಶು ಗೂಸೆ೦ದರು ತೋರದೆ ನೀ ದಯೆ
ವೃದ್ಧರ ಬಿಡಲೊಲ್ಲೆ
ವರವಾಗುವೆ ನೀ ಘನ ವೈಧ್ಯರಿಗೆ
ಸ್ಪರ್ಧೆಯ ಭಯದಲ್ಲೇ


ನೀನಿರೆ ಸನಿಹದಿ ಬುದ್ಧಿಗು ಜಡವೂ
ದಿಂಬಿಗೆ ತಲೆ ಇಟ್ಟು
ಮೊದಲಿನ ಮದ್ದದು ನೊಸಲಿಗೆ ತಣ್ಣೀ -
ರಿನ ಶಾಖದ ಕಟ್ಟು


ತುರ್ತಿಗೆ ನಾ ಇಟ್ಟಿರುವೆನು ಆ ಕ್ರೋ-
ಸಿನ್ನಿನ ಗುಳಿಗೆಯನು
ಜ್ವರವದು ಬಿಡದಿರೆ ಬೇಕಿದ್ದರೆ ಕಾ-
ಣೆನುತಲಿ ವೈದ್ಯರನು


Sunday, April 11, 2010

ಒಳ್ಳೆಯತನ ಅಂದ್ರೇನು....? ಸುಮ್ನೆ ಹರಟಿದ್ದು...

ಒಳ್ಳೆಯವರು ಅಂದರೆ.. ನೈತಿಕವಾಗಿ, ಬೌದ್ಧಿಕವಾಗಿ ಮೇಲ್ಮಟ್ಟದಲ್ಲಿರುವ, ಪರೋಪಕಾರಿಯಾಗಿರುವ, ಮೌಲ್ಯಯುತ ವಿಚಾರಗಳಿರುವ,ಸಹನಶೀಲ, ನುಡಿದಂತೆ ನಡೆಯುವ,ಕರ್ತವ್ಯ ಶಾಲಿ .......,.......,.......,.......,ಇತ್ಯಾದಿ ಸಕಲ ಗುಣಗಳಿರುವ ವ್ಯಕ್ತಿಗಳು.. ಅನ್ನುವುದು ನನಗೆ ಮತ್ತು ನಿಮಗೆ ಹಾಗೂ ಎಲ್ಲರಿಗೂ ಗೊತ್ತು ಅಲ್ಲವೇ...?

ಆದರೆ ಈ ಒಳ್ಳೆಯ ಗುಣಗಳೆಲ್ಲವೂ ಒಬ್ಬನೇ ವ್ಯಕ್ತಿಯಲ್ಲಿ ಇರುತ್ತವೆಯೇ...?
ಒಂದೆರಡು ಗುಣಗಳು ಮಿಸ್ಸಾದರೆ ಆತ ಕೆಟ್ಟವನೇ....? ಛೇ... ಇಲ್ಲ..
ಹಾಗಂತ ಒಂದೋ ಎರಡೋ ಗುಣಗಳು, ಕೆಟ್ಟ ವ್ಯಕ್ತಿ ಎಂದು ಪ್ರತಿಬಿಮ್ಬಿತನಾದ ವ್ಯಕ್ತಿಯಲ್ಲಿ ಇದ್ದಾಕ್ಷಣ ಆತ ಒಳ್ಳೆಯವನೇ...?


ಒಳ್ಳೆಯ ತನ ಅನ್ನುವುದನ್ನು ಅಂದಾಜಿಸುವುದು ಹೇಗೆ...?
ಅದನ್ನು ಅಳೆಯುವ ಮಾನದಂಡ ಯಾವುದು...?ಸ್ಕೇಲ್ ಯಾವುದು...? [ಧೈರ್ಯವನ್ನಾದರೆ ಈಗೀಗ ಮೀಟರಿನಲ್ಲಿ ಅಳೆಯುತ್ತಾರೆ... ದರ್ಶನ್ ಸಿನಿಮಾಗಳಲ್ಲಿ....!!!!]


ಈ ತರದ ವಿಚಾರಗಳು ನನ್ನ ತಲೆ ತಿನ್ನುತ್ತವೆ ಆಗಾಗ..
ಬೆಳಿಗ್ಗೆ ಟೀ ಕಪ್ಪನ್ನು ಟೀಪಾಯ್ ಮೇಲಿಟ್ಟು ಪೇಪರಿನಲ್ಲಿ ತಲೆ ಹುದುಗಿಸಿ ಕೊಂಡಿದ್ದ ನನ್ನ ಪತಿದೇವರನ್ನು ಕರೆದೆ...


ರೀ..... ''

ಏನು ನಿನ್ನ ಸಮಸ್ಯೆ...? ''


ನಾ ಕರೆವ ಧಾಟಿಯಲ್ಲಿಯೇ ಇವರಿಗೆ ಸಮಸ್ಯೆಯೋ.. ಸಲ್ಲಾಪವೋ .... ಸಮಾಚಾರವೋ ಗೊತ್ತಾಗಿಬಿಡುತ್ತದೆ...!!ನನ್ನನ್ನ ಅಷ್ಟು ಚನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಇವರು......!!! ನನ್ನ ಈ'' ಒಳ್ಳೆಯತನ ''ದ ಸಮಸ್ಯೆಯನ್ನು ಇವರ ಮುಂದೆ ಸುರುವಿದೆ. [ಅರುಹಿದೆ ಇದರ ವುತ್ಪ್ರೆಕ್ಷಾಲಂಕಾರ--ಸುರುವಿದೆ...] ಅದು ಗುಪ್ಪೆಯಾಗಿ,ರಾಶಿಯಾಗಿ, ಗುಡ್ದವಾಗಿ ಅದರ ಹಿಂದಿರುವ ನಾನು ಕಾಣದೆ ಸಮಸ್ಯೆಯೊಂದೆ ಕಂಡು ಸಮಸ್ಯೆಯನ್ನೇ ಕಟ್ಟಿಕೊಂಡಿದ್ದೀನಾ ಎನ್ನುವ ಸಮಸ್ಯೆ ಏನಾದರೂ ನನ್ನವರಿಗೆ ಶುರುವಾಗಿದೆಯಾ... ಎನ್ನುವುದು ನನ್ನ ಇತ್ತೀಚಿನ ಸಮಸ್ಯೆಯಾಗಿದೆ...!!!!! ಇರಲಿ..


''ಒಳ್ಳೆಯವರು.. ಒಳ್ಳೆಯತನ... ಅಂದರೇನು..? ''

''ನಿನಗೆ ಗೊತ್ತಿಲ್ವಾ..? ''

''ಗೊತ್ತಾದಂತೆ ಅನ್ನಿಸುತ್ತೆ...ಆದರೂ ಸ್ವಲ್ಪ ಕನ್ಫ್ಯೂಜನ್ . ನೀವು ಹೇಳಿದ ಮೇಲೆ ಸರಿಯಾಗಿ ಅರ್ಥವಾಗತ್ತೆ...''

''ನೋಡೇ.. ಒಳ್ಳೆಯತನ ಅಂತ ಅಂದ್ರೆ ಅದು ನೋಡುವವರ , ಅನುಭವಿಸುವವರ ದೃಷ್ಟಿಯಲ್ಲಿ, ಅನುಭವದಲ್ಲಿ ಇರುತ್ತೆ...
ಎಲ್ಲರೂ ಎಲ್ಲ ವಿಚಾರಗಳಲ್ಲೂ , ಎಲ್ಲರಿಗೂ ಎಲ್ಲಾ ಸಮಯದಲ್ಲೂ ಒಳ್ಳೆಯವರಾಗಿ ಇರಬೇಕೆಂದಿಲ್ಲ...
ಕಳ್ಳನನ್ನು ಹಿಡಿದ ಪೋಲೀಸ್ ಜನರ ದೃಷ್ಟಿಯಲ್ಲಿ ಒಳ್ಳೆಯವ .. ಕಳ್ಳನ ದೃಷ್ಟಿಯಲ್ಲಿ ಕೆಟ್ಟವ..
ಇಲ್ಲಿ ಕರ್ತವ್ಯ ಪ್ರಜ್ಞೆ ಇದೆ..ಒಬ್ಬ ಕಳ್ಳನಿಂದ ಹಲವರಿಗೆ ಆಗುವ ತೊಂದರೆಯನ್ನು ಪರಿಗಣಿಸಿ ಆತ ಕೆಟ್ಟವನು ಎಂದು ತಿಳಿಯುತ್ತೇವೆ.... ''


''ಕಳ್ಳತನ ಕೆಟ್ಟದ್ದೇ...''

''ಇರು.. ಒಮ್ಮೆ ಅದೇ ಕಳ್ಳ ಸಹಕಳ್ಳರೊಡಗೂಡಿ ಯಾವುದೋ ಮನೆಗೆ ಡಕಾಯಿತಿಗೆ ಹೋದ ಎಂದಿಟ್ಟುಕೊಳ್ಳೋಣ. ಅಲ್ಲಿ ಎಲ್ಲವನ್ನೂ ದೋಚಿದ ಮೇಲೆ ಸಂಗಡಿಗನೊಬ್ಬ ಆ ಮನೆಯ ಮಹಿಳೆಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿದಾಗ ಈ ಕಳ್ಳ ತಡೆದ ಎಂದಿಟ್ಟುಕೊಳ್ಳೋಣ... ಆ ಹೆಂಗಸಿನ ದೃಷ್ಟಿಯಲ್ಲಿ ಈ ನಮ್ಮ 'ಕಳ್ಳ' ದೇವರೇ ಆಗುವುದಿಲ್ಲವೇ...? ಆಪದ್ರಕ್ಷಕ ಶ್ರೀ ಕೃಷ್ಣ ಪರಮಾತ್ಮನೇ ಆಗುವುದಿಲ್ಲವೇ..?''

''ಹೌದು..ಕೆಲಸದವಳು ಹೇಳಿದ್ದಳು .. ಅಕ್ಕ .....ಶ್ರೀರಾಮನಂತ ಒಳ್ಳೆ ಗಂಡನ್ನ ಕೊಡಪ್ಪಾ ಅಂತ ಮಾತ್ರಾ ಬೇಡಿ ಕೊಳ್ಳಬಾರದು.. ಬಸರೀ ಹೆಂಡತೀನ ನಡೂ ಕಾಡಲ್ಲಿ ಬಿಟ್ಟು ಬರ್ತಾನೆ..ಕೃಷ್ಣನ ತರದ ಗಂಡ ಸಿಕ್ಕಿದರೂ ಪರವಾಗಿಲ್ಲ.. ಯಾರಿಗೂ ಮೋಸ ಮಾಡದೆ ಕೊನೆ ಪಕ್ಷ ಬಾಡಿಗೆ ಮನೆನಾದ್ರೂ ಮಾಡಿ ಇಟ್ಟುಕೊಳ್ತಾನೆ .....!!! ಅಂತ. ''

''ಹೌದು .. ಇಲ್ಲಿ ಸನ್ನಿವೇಶ, ಸಮಯ, ಸಂದರ್ಭ , ಆವಶ್ಯಕತೆ ಎಲ್ಲ ಅಂಶಗಳೂ ಒಳಗೊಂಡಿರುತ್ತವೆ..
ಒಬ್ಬನಿಗೆ ಒಳ್ಳೆಯದಾದದ್ದು ಇನ್ನೊಬ್ಬನಿಗೆ ಕೆಟ್ಟದ್ದಾಗಿ ಪರಿಣಮಿಸಬಹುದು.. ''


''.........''

''ತರಕಾರಿ ಮಾರುವವರೊಂದಿಗೆ ಚೌಕಾಸೀ ಮಾಡುತ್ತೀರಲ್ಲ...ನೀವು ಹೆಂಗಸರು... ಐದು ರೂಪಾಯಿ ಆಲೂಗಡ್ಡೆಯನ್ನಮೂರೇ ರೂಪಾಯಿಗೆ ಆತ ಕೊಟ್ಟರೆ ಅವನು ಒಳ್ಳೆಯವನು.ಅವನ ಲಾಭ ಮುರಿದುಕೊಂಡ ನೀವು.... ಅವನಿಗೆ ಕೆಟ್ಟವರಾಗುತ್ತೀರಿ.... ಹೀಗೆ.''


''ಒಳ್ಳೆಯತನಕ್ಕೆ ನಾನಾ ತರದ ಮುಖಗಳಿವೆ... ಕೆಟ್ಟತನದಂತೆಯೇ......ನಾಣ್ಯದ ಎರಡು ಮುಖದಂತೆ ಯಾವುದು ಒಳ್ಳೆಯತನವೋ ಅದಕ್ಕೆ ಸಂಬಂಧಿಸಿದಂತೆ ತದ್ವಿರುದ್ಧ ಕೆಟ್ಟ ತನವೂ ಇರುತ್ತದೆ...ಆಲ್ವಾ......?''


''ಹೌದು... ಮತ್ತು ಒಳ್ಳೆಯತನ ''ಆ ಕ್ಷಣವನ್ನು 'ಅವಲಂಬಿಸಿರುತ್ತದೆ....''ನಮಗೆ ಸಹಾಯ ಬೇಕಿದ್ದಾಗ ಯಾರು ಆ ಕ್ಷಣದಲ್ಲಿ ಸಹಾಯ ಮಾಡುತ್ತಾರೋ ಅದು ಅವರ ಒಳ್ಳೆಯತನ... ಬೇರೆಯವರಿಗೆ ಅವರು ಕೆಟ್ಟವರೆ ಇದ್ದಿರಲೂ ಬಹುದು..
ಉದಾಹರಣೆಗೆ...ನೀನು ರಸ್ತೆಯಲ್ಲಿ ಹೋಗುತ್ತಿರುತ್ತೀಯ... ತಲೆಸುತ್ತು ಬಂದು ಬೀಳುತ್ತೀಯ ಅಂದುಕೋ .. ಅಲ್ಲಿ ಯಾರೋ ದಾರಿಹೋಕರೊಬ್ಬರು ನೀರು ತಂದು ಕುಡಿಸುತ್ತಾರೆ . ಸಂಬಂಧವೇ ಇರದ ಜನ ಸಹಾಯ ನೀಡುತ್ತಾರಲ್ಲಾ.. ಅದು ಆ ಕ್ಷಣದ ಸಾಮಾಜಿಕ,ನೈತಿಕ , ಮಾನವೀಯ ಪ್ರಜ್ಞೆ...''


''ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕಾಗಿ ಕೂಡಾ ನಾವು ಒಳ್ಳೆಯವರಾಗಿರುತ್ತೇವೆ, ಮತ್ತು ಬೇರೆಯವರು ನಮಗಾಗಿ ಎಷ್ಟು ಖರ್ಚು ಮಾಡಲು ತಯಾರಿರುತ್ತಾರೆ ಅಲ್ಲದೆ ಅವರಿಂದ ಎಷ್ಟು ಲಾಭವಿದೆ ಎನ್ನುವುದರ ಮೇಲೂ ಇನ್ನೊಬ್ಬರ ಒಳ್ಳೆಯತನವನ್ನು ಅಳೆಯುತ್ತೇವೆ...ನಾವು......!!!!''

'' ಒಳ್ಳೆಯತನ ತೋರಿಸಲು ಕೆಲವೊಮ್ಮೆ ಸಮಯ ಕೂಡಾ ಇರಬೇಕಾಗುತ್ತೆ .... ಅನಿವಾರ್ಯ ಸಮಯಗಳನ್ನು ಬಿಟ್ಟು ಉಳಿದಂತೆ ನಾವು ನಮ್ಮ ಒಳ್ಳೆಯ ತನ ತೋರ್ಪಡಿಸಲು ಸಮಯ ಇದೆಯಾ.. ಇಲ್ಲವಾ ಅನ್ನುವುದನ್ನೂ ಅವಲೋಕಿಸುತ್ತೇವೆ..

''ಮತ್ತು ಕೆಲವೊಮ್ಮೆ ಗಿಲ್ಟ್ ಕಾಡದಿರಲು ಕೂಡಾ ನಾವು ಒಳ್ಳೆಯ ತನ ತೋರಿಸುತ್ತೇವೆ ... ''

'' ಅಂದರೆ ಒಳ್ಳೆಯತನ ಅನ್ನುವುದು... ಇರುವ ಬೇರೆಲ್ಲ ಗುಣಗಳಿಗಿಂತ ವ್ಯಕ್ತಿಯ ತತ್ ಕ್ಷಣದ ನಿರ್ಧಾರವನ್ನು, ಆತನ ಮಾನವೀಯ ಪ್ರಜ್ಞೆಯನ್ನು ಅವಲಂಬಿಸಿರುತ್ತದೆ.....ಗೊತ್ತಾಯ್ತಾ...? ''

''ಗೊತ್ತಾಯ್ತು.. ಮೊದಲೇ ಗೊತ್ತಿದ್ದರೂ ಹೀಗೆ ಸುಮ್ಮನೆ.........''

''ಈಗ ನೀನು ಇನ್ನೂ ಸುಮ್ಮನಿರದಿದ್ದರೆ... ನನ್ನ ಪೇಪರ್ ಓದುವ ಅಮೂಲ್ಯ ಸಮಯವನ್ನು ಹಾಳು ಮಾಡಿದ್ದಕ್ಕಾಗಿ ಈ ಕ್ಷಣದಲ್ಲಿ ನಾನು ಕೆಟ್ಟವನಾಗ ಬೇಕಾಗುತ್ತದೆ.......!''


'' ಅಂದರೆನಿಮ್ಮ ಮಾತಿನರ್ಥ ನಾನು ಕೆಟ್ಟವಳು ಅಂತಾ ಅಲ್ವೇ....? ''

'' ಅದರ ಬಗ್ಗೆ ಹೇಳಬೇಕು ಅಂದರೆ .... ಈಗ ಈ ತಣಿದ ಟೀಯನ್ನು ಒಳಗೆ ತಗೊಂಡು ಹೋಗಿ ಹಾಗೇ ಬಿಸಿ ಮಾಡಿ ತರದೇ ಹೊಸತಾಗಿ ಟೀ ಮಾಡಿ ತಂದರೆ , ಕುಡಿದಾದ ಮೇಲೆ ನೀನು ಒಳ್ಳೆಯವಳೋ......,... ಎಂಬುದರ ಬಗ್ಗೆ ಆಲೋಚನೆ ಮಾಡುತ್ತೇನೆ.'' ಎನ್ನುತ್ತಾ ನನ್ನ ಪ್ರತಿಕ್ರಿಯೆಗೂ ಅವರಿಗೂ ಸಂಬಂಧವಿಲ್ಲವೇನೋ ಎಂಬಂತೆ ಪೇಪರಿನಲ್ಲಿ ಮುಖ ಮುಚ್ಚಿಕೊಂಡರು....




[ ಈ ಪೋಸ್ಟಿನಲ್ಲಿ ಸಾಕಷ್ಟು ದೋಷಗಳು ಕಾಣಿಸಿರ ಬಹುದು .. ಅದು ನೆಟ್ಟಿನ ತಪ್ಪು.... ನನ್ನದಲ್ಲ ..... ಇದನ್ನು ಓದಿ ಯಾರೂ ಈ ಕ್ಷಣದಲ್ಲಿ ನನ್ನ ಬಗ್ಗೆ ಕೆಟ್ಟವರಾಗದಿದ್ದರೆ ಸಾಕು...!!!!]