Saturday, April 6, 2013

ಮತ್ತದೇ ಹಾಡು ಅದೇ ರಾಗ..

ನಮ್ಮ ಮನೆ ಎದುರಿಗೆ ಎಳನೀರಪ್ಪನ ಮನೆ. ಮನೆಯೆಂದರೆ ಎದುರಿನ ಸೈಟಿನಲ್ಲೊಂದು ಶೆಡ್ಡು. ದಿನಾಲೂ ಬೆಳಗ್ಗೆ  ಇಂತಾ ಹೊತ್ತು ಎಂಬುದಿಲ್ಲ, ಸೈಕಲ್ಲಿನ ಮೇಲೆ ಎಂಟರಿಂದ ಹತ್ತು ಎಳನೀರಿಟ್ಟು ಕೊಂಡು, ಏಳ್ ನೀರ್  ... ಎಂದು  ತಾರಕದಲ್ಲಿ ಕೂಗುತ್ತಾ ಶುರುಮಾಡಿ ಮಂದ್ರದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಾನೆ.. ಆದರೆ ಕೊನೆಯಲ್ಲಿ  ಶಬ್ದ ಸೈಲೆಂಟಾಗಿ ನಿಶ್ಯಬ್ಧವಾಗುತ್ತದೆ.  ಸೈಕಲ್ಲಿನಲ್ಲಿರುವ ಎಳನೀರು ಕಾಯಿಗಳನ್ನು ನೋಡಿದಮೇಲೆ  'ಏಳ್ ನೀ.....' ಎಂದು ಕೂಗುತ್ತಿದ್ದಾನೆಂಬುದು  ಸ್ಪಷ್ಟವಾಗುತ್ತದೆ.
ಎಳನೀರಪ್ಪನಿಗೆ ವಯಸ್ಸು ಸುಮಾರು ಅರವತ್ತರ ಮೇಲಾಗಿರಬಹುದು. ಮದುವೆಯಾದ ಮಗ ಇದ್ದಾನೆ. ಸೊಸೆ ಮಾತ್ರಾ ಮಗನನ್ನು ಬಿಟ್ಟು ಹೋಗಿದ್ದಾಳೆ.  ಎಳನೀರಪ್ಪನ ಹೆಂಡತಿ ಗಾರ್ಮೆಂಟ್ಸ್ ಗೆಲ್ಲೋ ಹೋಗುತ್ತಾಳೆ.ಅವಳಿಗೂ ಸುಮಾರೇ  ವಯಸ್ಸಾಗಿರಬಹುದು.  ದಿನಾಲೂ ಬೆಳಗಾಯಿತೆಂದರೆ ಕಿವಿಗೆ ಕಡ್ಡಿ ಹಾಕುತ್ತಾ ಹೆಗಲ ಮೇಲಿನ ಟವೆಲ್ಲಿನಿಂದ ಆಗಾಗ ಮುಖ ಉಜ್ಜುತ್ತಾ ಕೂತಿರುವ ಎಳನೀರಪ್ಪನ ದರ್ಶನ ನಮಗೆ. ಬೆಳ ಬೆಳಗ್ಗೆ ಅವನ ಹೆಂಡತಿ ತಿಂಡಿ ಮಾಡಿ ಮನೆ ಕೆಲಸ ಪೂರೈಸಿ ಅವನಿಗಷ್ಟು ತಿಂಡಿ ಕೊಟ್ಟು ತಾನೂ ತಿಂದು ಡಬ್ಬಿ ತೆಗೆದುಕೊಂಡು ಹೋಗುವ ವರೆಗೂ ಹೀಗೆಯೇ ಹಲ್ಲು ಕುಕ್ಕುತ್ತಲೋ, ಕಾಲು ನೀವುತ್ತಲೋ ಕುಳಿತಿರುವ ದುಡಿಯುವ ಗಂಡು  ಎಳನೀರಪ್ಪ ಅದ್ಯಾವಾಗಲೋ ಹೋಗಿ ಒಂದಷ್ಟು ಕಾಯಿಗಳನ್ನು ಸೈಕಲ್ಲಿಗೆ ನೇತು ಹಾಕಿಕೊಂಡು ಬರುತ್ತಾನೆ. ಮನೆ ಮುಂದೆಯೇ ನಾಲ್ಕಾರು ಬಾರಿ ಕೂಗಿ ಕೂಗಿ ಪ್ರಚಾರ ಮಾಡುತ್ತಾನೆ.

ಆವತ್ತು  ಬೆಳಗಿನ ಟೀ  ಸಮಯ, ಮಕ್ಕಳಿಗೆ ರಜೆಯಿದ್ದಿದ್ದರಿಂದ ಮಕ್ಕಳಿನ್ನೂ   ಎದ್ದಿರಲಿಲ್ಲ. ಮನೆಯೊಳಗೆ  ಬೆಳಗ್ಗೆಯೇ ಅದೆಂಥಾ ಸೆಖೆ!  ಫ್ಯಾನಿನ ಕೆಳಗೆ ಕುಳಿತರೆ ಟೀ  ಆರಿ ಹೋಗುತ್ತದೆಂದು ಕಿಟಕಿಯ ಪಕ್ಕದಲ್ಲಿ ನಿಂತು  ತೆಳುವಾಗಿ ಬೀಸುವ ಗಾಳಿಯನ್ನು ಆಸ್ವಾದಿಸುತ್ತಾ  ಟೀ  ಹೀರುತ್ತಿದ್ದೆ.  ಕಿಟಕಿಯಲ್ಲಿ ಹೊರಗೆ ನೋಡಿದಾಗ ನಮ್ಮ ಎಳನೀರಪ್ಪನ ಹೆಂಡತಿ ಲಕ್ಷಣವಾಗಿ ತಲೆಸ್ನಾನ ಮಾಡಿ ತಲೆಗೊಂದು ಬಟ್ಟೆ ಸುತ್ತಿಕೊಂಡು ಊದಿನ  ಕಡ್ಡಿಯಿಂದ  ಹೊಸಲಿನ ಮೇಲಿರುವ ಯಾವುದೋ ದೇವರನ್ನು ಪೂಜಿಸುತ್ತಿದ್ದುದು ಕಾಣಿಸಿತು. ಎಳನೀರಪ್ಪ ಯಥಾಪ್ರಕಾರ ಕಿವಿಗೆ ಕಡ್ಡಿ ಹಾಕುತ್ತಾ ಕುಳಿತಿದ್ದ. ಆ ಮನೆಗೆ ಆತ ಬಾಡಿಗೆಗೆ ಬಂದ  ಹೊಸತು. ನನಗಾದರೋ ಮಕ್ಕಳನ್ನು ಶಾಲೆಗೆ  ಕಳಿಸುವ ಬೆಳಗಿನ ಧಾವಂತವಿರಲಿಲ್ಲ.  ನೋಡುತ್ತಾ ನಿಂತೆ.

ಪೂಜೆ ಮಾಡಿ ಎಳನೀರಪ್ಪನ ಮಡದಿ   ಒಳಗಿನಿಂದ  ಹರಿವಾಣದಲ್ಲಿ ಒಡೆದ ತೆ೦ಗಿನ ಕಾಯಿ, ಹೂ ಮತ್ತೆ೦ತದೋ ಪ್ರಸಾದವನ್ನು ಇಟ್ಟುಕೊ೦ಡು ಬ೦ದು ಗ೦ಡನ ಕೈಲಿ ಕೊಟ್ಟು ಕಾಲಿಗೆ ಭಕ್ತಿಯಿ೦ದ  ನಮಸ್ಕರಿಸಿದಳು.  ಎಳನೀರಪ್ಪ ಕೈಯಲ್ಲಿದ್ದ ಕಡ್ಡಿ ಒರೆಸಿ ಪಕ್ಕಕ್ಕಿಟ್ಟು , ಅವಳ ಹಣೆಗೆ ಕು೦ಕುಮ ಹಚ್ಚಿ  ಹೆರಳಿಗೆ  ಹೂ ಮುಡಿಸಿದ.ಮೇಲು ನಕ್ಕ.  ಪ್ರೀತಿಗೆ ಬಡತನವೇನೂ ಸಿರಿತನವೇನೂ..? ನೋಡುತ್ತಿದ್ದ ನನಗೆ ಮನಸ್ಸು ಮುದವಾಯಿತು. ಅವಳ ಮುಖದಲ್ಲಿ ಅದೆ೦ತದೋ ಕಳೆ.  ಎಳನೀರಪ್ಪ ಪ್ರಸಾದವನ್ನ ತಾನೊ೦ಚೂರು ಬಾಯಿಗೆ ಹಾಕಿಕೊ೦ಡು  ಅವಳಿಗೊ೦ಚೂರು ಕೈಗೆ ಹಾಕಿದ.  ಕುಕ್ಕರುಗಾಲಿನಲ್ಲಿ ಕುಳಿತು ಎರಡೂ ಕೈಗಳಲ್ಲಿ ಪ್ರಸಾದವನ್ನು  ಕಣ್ಣಿಗೊತ್ತಿಕೊ೦ಡು ಬಾಯಿಗೆ ಹಾಕಿಕೊ೦ಡಳು.  ನನಗೆಲ್ಲೊ  ''ಬಡವನಾದರೆ ಏನು ಪ್ರಿಯೆ ಕೈತುತ್ತೂ  ತಿನಿಸುವೆ ”  ಎ೦ದು ರಾಜು ಅನ೦ತ ಸ್ವಾಮಿ ಹಾಡಿದ೦ತಾಯ್ತು.

ಕೆಲಸದವಳು ಬಂದಾಗ ಈ ವಿಚಾರ ಹೇಳಿದೆ..'ಪಾಪ ಕಣೆ,' ಅಂತಾ ಎಕ್ಸ್ಟ್ರಾ ಸೇರಿಸಿದೆ.  ಅವಳು ಕೇಳಿದ್ದೇ  ಮುಸಿ ಮುಸಿ ನಕ್ಕಳು. ''ಅಕ್ಕೋ ಅವ್ನ ಸುದ್ದಿ ಯಾಕೆ, ಎರಡು ಹೆಂಡ್ರಂತೆ ಅವನಿಗೆ.  ಇಲ್ಲೋಬ್ಳು,  ಊರಲ್ಲೋಬ್ಳು  ಇಲ್ಲಿ ಜಗಳ ಮಾಡ್ಕೊಂಡು ಅಲ್ಲಿಗೆ, ಅಲ್ಲಿ ಜಗಳ ಮಾಡ್ಕೊಂಡು ಇಲ್ಲಿಗೆ ಹೋಗ್ತಾನೆ ಇರತ್ತೆ ಸವಾರಿ.  ಸಾಯಂಕಾಲ ನೋಡು ಗೊತ್ತಾಗತ್ತೆ,''  ಅಂತ ಮತ್ತಷ್ಟು ನಕ್ಕಳು.

ಏನೋ  ನನಗೆ ನನ್ನ ಕೆಲಸದಲ್ಲಿ ಅವತ್ತು  ಮರೆತು ಹೊಯಿತು.  

ಮತ್ತೆ ಒಂದೆರಡು ದಿನ ಕಳೆದು ಒಂದಿನ ರಾತ್ರೆ ಸಿಕ್ಕಾಪಟ್ಟೆ ಸೆಖೆ, ಮಳೆ ಬರುತ್ತೇನೋ ಅನ್ನುವಂತೆ  ಆಗಾಗ ಮಿಂಚು, ಗುಡುಗು, ಹೊರಗಡೆ ಒಂದೇ ಸಮನೆ  ಬೀದಿ ನಾಯಿಗಳ ಕೂಗಾಟ.    
ಸೆಖೆ ಅಂದರೆ ಯಮಸೆಖೆ, ಫ್ಯಾನ್ ಹಾಕಿದರೆ ಅದೂ ಬಿಸಿ ಗಾಳಿ. ಕಣ್ಣು ತೆರೆದು ಕುಳಿತರೆ ಕಣ್ಣನೀರ   ಪಸೆಯಷ್ಟೂ ಆವಿಯಾಗಿ  ಬಿಡುವುದೇನೋ ಎಂಬಂತೆ ಕಣ್ಣು ಉರಿ. ಕಿಟಕಿಯ ಬಾಗಿಲು ತೆರೆದು ಸ್ವಲ್ಪ ಗಾಳಿಗೆ ಮುಖವೊಡ್ಡಲು ಪ್ರಯತ್ನಿಸಿದೆ.  ಬೀದಿಯಲ್ಲಿ ಕರೆಂಟು ಕೂಡಾ ಹೋಗಿತ್ತು.  ಮಳೆ ಬರುವ ಲಕ್ಷಣಗಳಿದ್ದುದರಿಂದ ಆಕಾಶವೂ   ಕಪ್ಪು  ಕಾರ್ಗತ್ತಲು.
ಎದುರಿನ ಶೆಡ್ಡಿನಲ್ಲಿ ಇಬ್ಬರು ಜೋರಾಗಿ ಬೈದುಕೊಳ್ಳುವ ಶಬ್ಧ.. ಯಾರೆಂದು ತಿಳಿಯಲಿಲ್ಲ.  ಮಿಂಚು ಹೊಡೆದಾಗ  ಪಕ್ಕನೆ ಎಳನೀರಪ್ಪನ ಮುಖ ಕಾಣಿಸಿತು. ಅವನ ಹೆಂಡತಿಯ ಜುಟ್ಟು ಹಿಡಿದು ರಪ ರಪ ಬಡಿಯುತ್ತಿದ್ದ.  ಯಾವುದೋ ಕೇಳಲಾಗದ ಭಾಷೆಯಲ್ಲಿ ಬೈಯ್ಯುತ್ತಿದ್ದ. ಚೆನ್ನಾಗಿ ಕುಡಿದಿದ್ದನೆಂದು  ತೋರುತ್ತದೆ.  ತೂರಾಡುತ್ತಿದ್ದರೂ ಸಮಾ  ಬಡಿಯುತ್ತಿದ್ದ. ಅಷ್ಟೊತ್ತಿಗೆ ಅವನ ಮಗ ಶೆಡ್ ಒಳಗಿನಿಂದ ಬಂದವನೇ ತಾಯಿಯನ್ನು ಬಿಡಿಸಿ ಅಪ್ಪನಿಗೆ ಮುಖ ಮೂತಿ ನೋಡದೆ ಭಾರಿಸಲು ಶುರು ಮಾಡಿದ. ಅಂತೂ ತಪ್ಪಿಸಿಕೊಂಡ ಎಳನೀರಪ್ಪನ ಹೆಂಡತಿ ಆಚೆ ಕುಕ್ಕರಿಸಿ ಸುಧಾರಿಸಿಕೊಳ್ಳುತ್ತಿದ್ದವಳು   ಕೆಲ ನಿಮಿಷ ಬಿಟ್ಟು ಒಳ ಹೋಗಿ ಬಿಂದಿಗೆಯಲ್ಲಷ್ಟು ನೀರು ತಂದು ಅವನಿಗೆ ಎರಚಿದಳು. ಮಗ ಹೊಡೆಯುತ್ತಲೇ ಇದ್ದ.

ಎಳನೀರಪ್ಪನ ಹೆಂಡತಿ ತಾನು  ಹೊಡೆಸಿಕೊಂಡರೂ ಈಗ,  ''ಸಾಕು ಬಿಡೋ ಸಾಕು ಬಿಡೋ,''ಎಂದು ಮಗನನ್ನು ತಡೆಯಲು ಬಂದಳು. ಮಗ ಕೇಳದಿದ್ದಾಗ ''ನಿನ್ನ ದಮ್ಮಯ್ಯ ಬಿಟ್ಬಿಡೋ ಹೊಡಿಬೇಡ,'' ಎಂದು ಅಂಗಲಾಚ ತೊಡಗಿದಳು. ನೋಡುತ್ತಿದ್ದ ನಮಗೆ ಸಂಕಟವಾಯಿತು.

ಮತ್ತೆ ಬೆಳಿಗ್ಗೆ ಏನೂ ಆಗಲೇ ಇಲ್ಲವೆಂಬಂತೆ ಎಳನೀರಪ್ಪ ಕಾಲು ನೀವಿಕೊಳ್ಳುತ್ತಾ  ಕುಳಿತಿದ್ದ. ಹೆಂಡತಿ ತಿಂಡಿ ಕಟ್ಟುತ್ತಿದ್ದಳು...ಮತ್ತದೇ ಹಾಡು ಅದೇ ರಾಗ..  ಸಂಜೆಯಾಗುತ್ತಲೂ ಅದೇ ತಾಳ..!

ಎಷ್ಟು ಕಾನೂನುಗಳು ಬಂದರೂ, ಎಷ್ಟು ಮಹಿಳಾ ದಿನಾಚರಣೆಗಳು ಆಚರಿಸಿಕೊಂಡರೂ ಕುಡುಕ ಗಂಡನ ಹೆಂಡತಿ ಹೀಗೆಯೇ ಇರುತ್ತಾಳೆ, ಹೆಂಡದಂಗಡಿ ಇರುವ  ತನಕ.  ...!!






16 comments:

  1. ಗುಂಡಿನ ತಾಪ ಆರಂಬಂ
    ಪತಿ ಪತ್ನಿ ಕಲಹ ಜೀವನ ಪರ್ಯಂತಂ ಎನ್ನುವಂತೆ..
    ಪ್ರೀತಿಯನ್ನು ಕೊಡುವ ಮನುಜನ ಇನ್ನೊಂದು ಮುಖ ಮತ್ತೊಂದೆಡೆ ಅನವಾರಣಗೊಳ್ಳುತ್ತಲೇ ಹೋಗುತ್ತದೆ. ಹಗಲಿನದು ಹಗಲಲ್ಲಿ ರಾತ್ರಿಯದು ರಾತ್ರಿಯಲ್ಲಿ ನಡೆಯುವ ತನಕ ಸರಿ ಯಾವಾಗ ಅದಲು ಬದಲಾಗುತ್ತದೆ ಕೋರ್ಟಿನ ಮೆಟ್ಟಿಲು ಸವೆಯುತ್ತದೆ. ಮನಕರಗಿಸುವ ಲೇಖನ ಮೇಡಂ!

    ReplyDelete
  2. ಹಗಲಲ್ಲೊಂದು ಇರುಳಲ್ಲೊಂದು! ಒಂದೇ ನಾಣ್ಯದ ಎರಡು ಮುಖಗಳು!

    ReplyDelete
  3. ಪ್ರತಿಕ್ರಿಯೆಗೆ,ಪ್ರೋತ್ಸಾಹಕ್ಕೆ ವ೦ದನೆಗಳು

    ReplyDelete
  4. ಎಂದೂ ಬದಲಿಸಲಾಗದ ವ್ಯವಸ್ಥೆಗಳು... ನಮ್ಮ ಸುತ್ತಮುತ್ತಲೂ ಇಂತಹವೇ ನೆಡೆಯುತ್ತವೆ. ಇದಕ್ಕೆ ಪರಿಹಾರವೇ ಇಲ್ಲವೇನೋ ಎಂದೆನಿಸುತ್ತದೆ

    ReplyDelete
  5. ಪ್ರತಿಕ್ರಿಯೆಗೆ ವ೦ದನೆಗಳು..

    ReplyDelete
  6. ನಮ್ಮ ಜೀವನದ ವಾಸ್ತವ ಚಿತ್ರಣವನ್ನೇ ಕೊಟ್ಟಿರುವಿರಿ. ಜೊತೆಗಿರುವ ರೇಖಾಚಿತ್ರವೂ ಚೆನ್ನಾಗಿದೆ. ನೀವೇ ತೆಗೆದ ಚಿತ್ರವೆ? ಅಭಿನಂದನೆಗಳು.

    ReplyDelete
  7. ಹೌದು ಕಾಕ. ಚಿತ್ರ ನಾನೇ ಬರೆದದ್ದು.. ಕಂಪ್ಯೂಟರ್ ನಲ್ಲಿರುವ paint ಬಳಸಿ,

    ಪ್ರೋತ್ಸಾಹಕ್ಕೆ ಧನ್ಯವಾದಗಳು ಕಾಕ,

    ReplyDelete
  8. ಒಂದು ಉತ್ತಮ ಬರಹ ಮತ್ತು ಒಳ್ಳೆಯ ಬ್ಲಾಗಿನ ಪರಿಚಯವಾಯಿತು. ಒಳ್ಳೆಯ ವಿಚಾರ ಮತ್ತು ರೇಖಾ ಚಿತ್ರ.
    http://badari-poems.blogspot.in

    ReplyDelete
  9. ಕುಡಿದು ಗಂಡ ಹೆಂಡತಿ ಜಗಳ ಆಡುವುದನ್ನು ನಮ್ಮ ಹಳ್ಳಿಯಲ್ಲಿ ಬಹಳಷ್ಟು ನೋಡಿದ್ದೇನೆ ... ಕೆಲವರಿಗೆ ಈ ರೀತಿ ಹೆಂಡತಿಗೆ ಹೊಡೆದು ಬಡಿದು ಮಾಡಬೇಡ ಅಂತ ಎಷ್ಟೋ ಬಾರಿ ಹೇಳಿದ್ದೇನೆ ,ಬೈದಿದ್ದೇನೆ ಕೂಡ .. ಆದರೂ ಪ್ರಯೋಜನವಾಗಿಲ್ಲ .. ವಾಸ್ತವ ಸಂಗತಿ ಬಿಡಿ ಇದು ..
    ಇದೆ ಸನ್ನಿವೇಶಕ್ಕೆ ಹೋಲುವ ಒಂದು ಕವಿತೆಯನ್ನು ಇತ್ತೀಚಿಗೆ ಬರೆದಿದ್ದೆ. ಸಾಧ್ಯ ಆದರೆ ಓದಿ ...
    http://giri-shikhara.blogspot.in/2013/03/blog-post.html

    ReplyDelete
  10. ಅಕ್ಕಾ,
    ಧನ್ಯವಾದಗಳು ಒಂದು ಒಳ್ಳೆಯ ಬ್ಲಾಗ್ ಬರಹಕ್ಕಾಗಿ..
    ಓದಿದೆ....ಆ ದೃಶ್ಯಾವಳಿಗಳು ಹೊಸದೇನಲ್ಲವಾದರು ಬರೆದ ರೀತಿ, ವಿಷಯ ನಿರೂಪಣೆ ಇಷ್ಟವಾಯ್ತು :)...
    ಬರೆಯುತ್ತಿರಿ :) :)
    ನಮಸ್ತೆ :)

    ReplyDelete
  11. ಚೆಂದಿದ್ದು ವಿಜಯಕ್ಕ..
    ಈ ಎಳನೀರಪ್ಪನ ತರದವರು ನಮ್ಮಲ್ಲಿ ಸುಮಾರು ಜನ ಇರ್ತ, ಹೆಂಡದಂಗಡಿಗಳು ಇರೋ ತನಕ ಅನ್ನೋ ನಿಮ್ಮ ಮಾತು ಒಪ್ಪ ಅಂತದ್ದೇ.. ಹೆಂಡದಂಗಡಿಗಳು ಇಲ್ದೇ ಇದ್ರೂ ಕಳ್ಳಭಟ್ಟಿ ಹುಡುಕ್ಕತ್ತ, ಅದಿಲ್ದೇ ಇದ್ರೆ ಮತ್ತೊಂದು.. ಹಿಂಗೇ ಈ ಹುಚ್ಚು ಹವ್ಯಾಸ ಒಮ್ಮೆ ಹಚ್ಕೊಂಡ ಜನ ಮತ್ತೆ ಅದರಿಂದ ಹೊರಬರದೇ ಇಲ್ಲೆ :-( ಒಟ್ಟವರ ಸಂಸಾರ ಸರ್ವನಾಶ ಆಗೋವರ್ಗೆ ಅಥವಾ ಅವ್ರ ದೇಹವೇ ನಾಶ ಆಗೋವರ್ಗೆ :-( ಚಿತ್ರ ಚೆನ್ನಾಗಿದ್ದು :-)

    ReplyDelete