Saturday, May 21, 2011

ಚಿಲಿಯ ಕಲಿಗಳು

ಈ ಸಲ ಊರಿಂದ ಬರುತ್ತಿದ್ದಂತೆ  ನಟರಾಜ್   ಪುಸ್ತಕವೊಂದರಿಂದಲೇ ಸ್ವಾಗತಿಸಿದರು...! ಆಶ್ಚರ್ಯ ...! ಏಕೆಂದರೆ ಸಮಯವಿದ್ದಾಗಲೆಲ್ಲಾ ದಿನಪತ್ರಿಕೆ.. ಬ್ಯುಸಿನೆಸ್ ಮ್ಯಾಗಜೀನ್ ಗಳಲ್ಲೇ ಮುಖ ಹುದುಗಿಸಿಕೊಳ್ಳುವ  ಇವರು ಕಥೆ, ಕಾದಂಬರಿ ಇತ್ಯಾದಿಗಳನ್ನು ಮುಟ್ಟಿಯೂ ನೋಡುವುದಿಲ್ಲ. 
ಊಟ, ತಿಂಡಿ  ಹೊತ್ತಿನಲ್ಲಿ, ಕೂತಲ್ಲಿ ನಿಂತಲ್ಲಿ ಇವರದ್ದು ಆ ಪುಸ್ತಕದ್ದೇ ಕಥೆ.. ಇವರ  ಬೈರಿಗೆ ಮೆದುಳನ್ನು  ಕೊರೆದು ಕೊರೆದು ಹಾಕಿತು.ಈ ಪುಸ್ತಕದಲ್ಲಿ ಬರುವ ಬೈರಿಗೆಯಂತೆ..! ಇವರ ತಮ್ಮ ತಂದುಕೊಟ್ಟ ಪುಸ್ತಕ ಓದಿ ಇವರು ಸಿಕ್ಕಾಪಟ್ಟೆ ಪ್ರಭಾವಿತರಾಗಿ ಬಿಟ್ಟಿದ್ದರು. 'ಓದಿದ್ಯನೆ..'    'ಓದಿದ್ಯನೆ..'ಬಿಡುವ ಜಾತಿಯೇ ಅಲ್ಲ.   ನನಗೋ ಮನೆಯನ್ನೆಲ್ಲಾ ಒಮ್ಮೆ ಕ್ಲೀನ್ ಮಾಡುವ ಗಡಿಬಿಡಿ.. 

ಅಂತೂ ಪುಸ್ತಕ ಹಿಡಿದು ಕೂತವಳು ಈ ಪ್ರಪಂಚಕ್ಕೆ ವಾಪಾಸು ಕಾಲಿಟ್ಟಿದ್ದು ಪೂರಾ ಎಲ್ಲರನ್ನೂ ಪಾತಾಳದಿಂದ ಎತ್ತಿ ತಂದ ಮೇಲೆಯೇ..
ಈಗ್ಗೆ ಕೆಲ ತಿಂಗಳ ಮೊದಲು ಟೀವೀ ನ್ಯೂಸ್ ನಲ್ಲಿ ಈ ಕಾರ್ಯಾಚರಣೆಯನ್ನು  ನೋಡಿ 'ಒಹ್ ' ಎಂದು ಉದ್ಘರಿಸಿದ್ದು ಆಮೇಲೆ ಮರೆತಿದ್ದು  ಎಲ್ಲಾ ನೆನಪಾಯಿತು..

ಅದು ''ಚಿಲಿ ಗಣಿ ಸುಖಾಂತ''

ಅದು ದುರಂತವಾಗದಂತೆ ತಡೆಯುವಲ್ಲಿ ಯಾರ್ಯಾರು , ಹೇಗ್ಹೇಗೆ, ಎಷ್ಟೆಷ್ಟು ರೀತಿಯಲ್ಲಿ ಶ್ರಮಿಸಿದರು ಎಂಬುದನ್ನೇ ಕನ್ನಡದಲ್ಲಿ ''ಚಿಲಿಯ ಕಲಿಗಳು'' ಎಂಬ ಪುಸ್ತಕವಾಗಿಸಿ  ನಮ್ಮನ್ನು ರೋಮಾಂಚಿತಗೊಳಿಸಿದವರು 'ಸರೋಜಾ ಪ್ರಕಾಶ್ ರವರು.' 

ದಕ್ಷಿಣ ಅಮೆರಿಕಾದ ಮೆಣಸಿನ ಕಾಯಿ ಆಕಾರದ ಚಿಲಿ ದೇಶದಲ್ಲಿ ನಡೆದ ಐತಿಹಾಸಿಕ ಘಟನೆಯಾದ ಚಿನ್ನಮತ್ತು ತಾಮ್ರದ ಅದಿರನ್ನು ತೆಗೆಯುವ ಸ್ಯಾನ್ ಯೋಸೆ   ಗಣಿಯಲ್ಲಿನ ಭೂ ಕುಸಿತದಿಂದಾಗಿ 2300 ಅಡಿ ಆಳದಲ್ಲಿ  ಸಿಕ್ಕಿ ಹಾಕಿಕೊಂಡ ಮೂವತ್ಮೂರು ಜನ  ಕಾರ್ಮಿಕರನ್ನು  ಅರವತ್ತೊಂಬತ್ತು ದಿನಗಳಲ್ಲಿ ಹೇಗೆ ಸುರಕ್ಷಿತವಾಗಿ ರಕ್ಷಿಸಿದರು? ಅದಕ್ಕೆ ಎಷ್ಟು ಜನ ಶ್ರಮಿಸಿದರು? ಬಳಕೆಯಾದ ಯಂತ್ರಗಳಾವುವು? ವಿಜ್ಞಾನವನ್ನು ಎಷ್ಟು ವ್ಯವಸ್ತಿತವಾಗಿ ಬಳಸಲಾಯಿತು? ಸರಕಾರ ಹೇಗೆ ಸ್ಪಂದಿಸಿತು? ಮಾಧ್ಯಮಗಳು, ಸೇವಾ ಸಂಸ್ಥೆಗಳೂ, ಕಾರ್ಮಿಕರ ಬಂಧುಗಳೂ  ಹೇಗೆ ಕಾರ್ಯಾಚರಣೆ ಮುಗಿಯುವ ವರೆಗೂ ಕಾದರು?  ವಿಶ್ವ ಹೇಗೆ ಪ್ರತಿಕ್ರಿಯಿಸಿತು..?  ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ಸುರಕ್ಷಿತವಾಗಿ ಕಾಯ್ದಿಡಲಾಯಿತು?
ಈ ಮುಂತಾದ  ಎಲ್ಲ ಪ್ರಶ್ನೆಗಳಿಗೆ  ಸವಿವರವಾಗಿ, ಸರಳವಾಗಿ  ಉತ್ತರಿಸುತ್ತಾ  ಹೋಗುತ್ತಾರೆ ಲೇಖಕಿ.

8.1 c.m ಅಗಲ ಕೊಳವೆಯಲ್ಲಿ 33 ಜನರಿಗೆ ಎರಡು ತಿಂಗಳ ಕಾಲ ಅಗತ್ಯವಿರುವ ಸಾಮಗ್ರಿಗಳನ್ನು ಕಳಿಸಲಾಯಿತು. ಐದು ನೂರಕ್ಕೂ ಹೆಚ್ಚು ಮಂದಿ ತಂತ್ರಜ್ಞರು ಹಗಲಿರುಳೂ ಶ್ರಮಿಸಿದರು.ಕಾರ್ಯಪಡೆಗಳು ಅಂತರ್ಜಾಲದ ಮುಖಾಂತರ ವಿಶ್ವದ ಹಲವಾರು ಪರಿಣತ ತಂತ್ರಜ್ಞರ ಸಹಾಯ, ಸಲಹೆ ಪಡೆದುಕೊಂಡಿತು.ಕಾರ್ಯಪಡೆಯ ಬಳಿ ಭೂ ವಿಜ್ಞಾನಿಗಳ, ಡ್ರಿಲ್ಲರುಗಳ, ಮನೋವಿಜ್ಞಾನಿಗಳ, ವೈದ್ಯರ, ಸಬ್ಮರಿನ್  ತಂತ್ರಜ್ಞರ  ಹೀಗೆ ಅನೇಕ ತಜ್ಞರಿದ್ದರು.
ಮೂರು ಬೃಹತ್ ಬೈರಿಗೆಗಳ ಸಹಯೋಗದಲ್ಲಿ ಮೂರು ಗೇಣು ಅಗಲದ,  ಪಾತಾಳಕ್ಕೆ ಕೊರೆದ ಕಿಂಡಿಯಲ್ಲಿ ಎಂಟಡಿ ಎತ್ತರದ ಸಿಲಿಂಡರಿನಾಕೃತಿಯ  ಪಂಜರ 'ಫೀನಿಕ್ಸ್'  ನ ಮುಖಾಂತರ ಗಂಟೆಗೊಬ್ಬರಂತೆ 33 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು.ವಿಜ್ಞಾನದ ಸದುಪಯೋಗದ ಮಹತ್ವಪ್ರಪಂಚಕ್ಕೆ ತಿಳಿಯಿತು.
ಕಾರ್ಮಿಕರು ಗಣಿಯಲ್ಲಿ ಸಿಲುಕಿದ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿದ ಬಂಧುಗಳಿಗೆ ಉಳಿಯಲು  'ಆಶಾ ಶಿಬಿರ' ವನ್ನು ರಚಿಸಲಾಯಿತು.....ಮಕ್ಕಳಿಗಾಗಿ ಅಲ್ಲಿಯೇ ಶಾಲೆ.. ಇತರೆ ಚಟುವಟಿಕೆಗಳಿಗೆ ಅನುಕೂಲತೆಗಳು..ಹೀಗೆ....

ಬರೆದರೆ ಇಡೀ ಪುಸ್ತಕವನ್ನೂ ಬರೆಯುತ್ತಲೇ ಇರಬೇಕಾಗುತ್ತದೆ.  ಅಷ್ಟೊಂದು ವಿಚಾರಗಳಿವೆ..ಎಲ್ಲವೂ ಮುಖ್ಯವಾಗಿಯೇ ಕಾಣಿಸುತ್ತದೆ. 
ಓದುವಾಗ ಆಗಾಗ ಉಮ್ಮಳಿಸಿ ಬರುತ್ತದೆ. ಕಣ್ಣು ಹನಿಗೂಡುತ್ತದೆ.
ಒಂದು ಘಟನೆ -
ಬೈರಿಗೆಗಳ ಮೊಲಕ ಕೊರೆಯುತ್ತಾ ಹೋದಂತೆ ಗಣಿಕುಸಿತದ ಹದಿನೇಳನೆ ದಿನ ಗಣಿಯಲ್ಲಿ  ಸಿಲುಕಿಕೊಂಡ ಕಾರ್ಮಿಕರ ಇರುವು ತಿಳಿಯುತ್ತದೆ. ತಂತಿಯ ಮೂಲಕ ಫೋನ್ ಒಂದನ್ನು 700 m  ಪಾತಾಳಕ್ಕೆ ಇಳಿ ಬಿಡಲಾಗುತ್ತದೆ.ಇತ್ತಕಡೆ  ಗಣಿ ಸಚಿವ ಗೋಲ್ಬೋರ್ನ್  ಅವರೇ ಮಾತಾಡುತ್ತಾರೆ. ಅತ್ತಕಡೆ ಮುಖ್ಯಸ್ಥ ಊರ್ಜುವಾ ..
'ಹೇಗಿದ್ದೀರಾ ಎಲ್ಲಾ' ಎನ್ನುವ ಪ್ರಶ್ನೆಗೆ 'ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆಗಾಗಿ ಕಾಯುತ್ತಿದ್ದೇವೆ.. ' ಸಚಿವರು  ಮತ್ತೊಂದು ಮಾತಾಡುವ ಮುನ್ನವೇ 'ಸರ್ ಒಂದು ಕ್ಷಣ ನಿಲ್ಲಿ'  ಎನ್ನುತ್ತಾನೆ ಊರ್ಜುವಾ. ಅವಾಕ್ಕಾದ ಸಚಿವರು ಯೋಚಿಸುವಷ್ಟರಲ್ಲಿಯೇ ಚಿಲಿಯ 'ರಾಷ್ಟ್ರಗೀತೆ' ವೃಂದಗಾನದಲ್ಲಿ ಕೇಳಿಸ ತೊಡಗುತ್ತದೆ.!
ಪಾತಾಳದಲ್ಲಿದ್ದ ಎಲ್ಲ ಮೂವತ್ಮೂರು ಜನರೂ ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು.
 ನೆರೆದಿದ್ದವರ  ಕಣ್ಣು ಮಂಜಾಗಿತ್ತು.
ಓದುತ್ತಾ ಹೋದಂತೆ ನನಗೂ ಮನಸ್ಸು ಆರ್ದ್ರವಾಯಿತು.ಎಂತಾ ದೇಶಾಭಿಮಾನ..!

ನಿಜಕ್ಕೂ ಚಿಲಿಯ ಕಲಿಗಳೇ ಅವರು.
ಅನಿವಾರ್ಯವಾಗಿ ಎಂಬಂತೆ ಓದಲು ಕುಳಿತವಳು ಈಗ ಭಾವನೆಗಳನ್ನು  ತಡೆದುಕೊಳ್ಳಲಾರದೆ  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇಂತಾ   ಅಪರೂಪದ ಪುಸ್ತಕವೊಂದನ್ನು ಬರೆದು ಲೋಕಾರ್ಪಣೆಗೈದ ಸರೋಜಾ ಪ್ರಕಾಶ್ ನಿಜಕ್ಕೂ ಅಭಿನಂದನಾರ್ಹರು.

27 comments:

  1. ಖಂಡಿತ ಓದ್ತೀನಿ.. ತುಂಬಾ ಆಸಕ್ತಿಕರವಾಗಿದೆ ಎಂದೆನಿಸಿತು ನಿಮ್ಮ ಬರಹವನ್ನೋದಿ. ಪರಿಚಯಿಸಿದ್ದಕ್ಕೆ ಧನ್ಯವಾದಗಳು.

    ReplyDelete
  2. Amazing...Deshabimaanada ghatane odi avara bagge abhimaana hechhayitu...!!!!

    ReplyDelete
  3. ವಿಜಯಾ...

    ಓದಲೇ ಬೇಕಾಯ್ತು... ಓದುತ್ತೇನೆ...
    ನಾಳೆ ಖರಿದಿಸುವೆ..

    ಒಂದು ಒಳ್ಳೆಯ ಪುಸ್ತಕದ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !

    ReplyDelete
  4. ನಿಜವಾಗಿಯೂ ನಿಮ್ಮ ಲೇಖನದ ಆ ರಾಷ್ಟ್ರಗೀತೆಯ ಸನ್ನಿವೇಶ ಕೇಳಿ ನನಗೂ ಬಹಳ ಸಂತೋಷವಾಯಿತು.. ಅದು ನಡೆದಾಗ ವಾರ್ತೆಗಳಲ್ಲಿ ಬಹಳ ಓದಿದ್ದೆ ಅದರ ಬಗ್ಗೆ.. ನಮ್ಮಲ್ಲಿ ಒಂದೇ ಒಂದು ಮಗು ೩೦೦ ಅಡಿ ಆಳದ ಕೊಳವೆ ಬಾವಿಗೆ ಬಿದ್ದರೆ ಉಳಿಯೋದಿಲ್ಲ.. ಅದಕ್ಕೆ ೨-೩ರಿಂದ ೫ ದಿನಗಳ ವರಗೆ ತೆಗೆದುಕೊಳ್ಳುತ್ತಾರೆ. ಅವರ ಸಾಧನೆ ಶ್ಲಾಘನೀಯವಾದುದು. ಆ ಪುಸ್ತಕ ನಾನೂ ಕೊಂಡೋದುವೆ. ಧನ್ಯವಾದಗಳು!

    ReplyDelete
  5. ಉತ್ತಮ ಪುಸ್ತಕವನ್ನು ಪರಿಚಯಿಸಿದ್ದಕ್ಕಾಗಿ ಧನ್ಯವಾದಗಳು ಮೇಡ೦. ಚಿಲಿಯ ಕಲಿಗಳ ದೇಶಪ್ರೇಮ ಅನುಕರಣೀಯ.

    ಅನ೦ತ್

    ReplyDelete
  6. ಇಂಥ ಪುಸ್ತಕಗಳು ಸ್ಫೂರ್ತಿ ಕೊಡುತ್ತವೆ

    ReplyDelete
  7. ವಿಜಯಶ್ರೀ,
    ಒಂದು ಉತ್ತಮ ಪುಸ್ತಕದ ಮಾಹಿತಿ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಬೇಗನೇ ಓದುವೆ.

    ReplyDelete
  8. ಇಂಥಹ ಪುಸ್ತಕಗಳು ಬೇಕೆ ಬೇಕು ಸ್ಫೂರ್ತಿ ತುಂಬಲು....
    ಪರಿಚಯಿಸಿದ್ದಕ್ಕೆ ಧನ್ಯವಾದಗಳು ....

    ReplyDelete
  9. oLLeya pustaka parichayavaagide.. oduva manasagide

    ReplyDelete
  10. ತೇಜಸ್ವಿನಿ
    ನಿಜಕ್ಕೂ ತು೦ಬಾ ಮನಮುಟ್ಟುವ೦ತೆ ಬರೆದಿದ್ದಾರೆ ಲೇಖಕಿ..
    ಅಲ್ಲಿಯ ಸರಕಾರ ಕೂಡಾ ಎಷ್ಟೊ೦ದು ಜವಾಬ್ಧಾರಿಯುತವಾಗಿ ನಡೆದುಕೊ೦ಡಿತೆ೦ದರೆ - ರಾಷ್ಟ್ರದ್ಯಕ್ಷ ಸೆಬಾಸ್ಟಿಯನ್ ಪಿನೆರಾ ಅವರು ಕೊಲ೦ಬಿಯ ದೇಶದ ಹೊಸ ಅಧ್ಯಕ್ಷರ ಪೀಠಾರೋಹಣಕ್ಕೆ ಅಥಿತಿಯಾಗಿ ಹೊಗಿದ್ದವರು ಮಧ್ಯದಲ್ಲಿಯೇ ಕ್ಷಮೆಯಾಚಿಸಿ ಮರಳಿ ದೇಶಕ್ಕೆ ಬ೦ದರ೦ತೆ..ಹಾಗೂ ಕೆಲಸ ಮುಗಿಯುವ ವರೆಗೂ ಸ೦ಪೂರ್ಣ ಸಹಕಾರ ನೀಡಿದರ೦ತೆ..

    ಓದಿ..:)

    ReplyDelete
  11. ಮೇಡಮ್,
    ನಾನು ಇದನ್ನು ಟಿವಿಯಲ್ಲಿ ನೋಡಿದಾಗಲೇ ಅಚ್ಚರಗೊಂಡಿದ್ದೆ. ನಾನು ಈ ಪುಸ್ತಕವನ್ನು ಓದಲೇಬೇಕೆಂದುಕೊಂಡಿದ್ದೇನೆ. ನೀವು ಅದನ್ನು ಈ ರೀತಿ ಲೇಖನವನ್ನು ಬರೆದು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು.

    ReplyDelete
  12. ಕವಿತಾ..
    ತಮ್ಮ ಇರುವು ಹೊರ ಪ್ರಪ೦ಚಕ್ಕೆ ಗೊತ್ತಾಗಿದೆ ಎ೦ದು ತಿಳಿದಾಕ್ಷಣ ಅವರು ನಮ್ಮನ್ನು ಪಾರು ಮಾಡಿ ರಕ್ಷಿಸಿ ಎನ್ನುವ ಆರ್ತನಾದಕ್ಕಿ೦ತಲೂ ಮೊದಲು ತಮ್ಮ ರಾಷ್ಟ್ರಪ್ರೇಮವನ್ನು ಮೆರೆದರು..ತಮ್ಮೆಲ್ಲರ ಜ೦ಘಾಬಲವನ್ನೆ ನು೦ಗಿದ ಪಿತೃ ಭೂಮಿಯ ಬಗೆಗೆ ಅದೆ೦ತಾ ಅಭಿಮಾನ!!
    ಎ೦ದು ವಿವರಿಸುತ್ತಾ ಹೋಗುತ್ತಾರೆ ಲೇಖಕಿ..
    ಥ್ಯಾ೦ಕ್ಸ್..

    ReplyDelete
  13. ಪ್ರಕಾಶಣ್ಣ..
    ಮನ ಮಿಡಿಯುವ ಕ್ಷಣಗಳಿ೦ದ ಕೂಡಿದ ಬರಹ..
    ಜೊತೆಗೆ ವಿಜ್ಣಾನವನ್ನು ಸರಳವಾಗಿ ವಿವರಿಸುತ್ತಾ ಹೋಗುತ್ತಾರೆ..ಸರೋಜಾ ಪ್ರಕಾಶ್.
    ಬೈರಿಗೆ ಯ೦ತ್ರದಿ೦ದ ಭೂಮಿಯನ್ನು ಕೊರೆಯುವಾಗ ಕೇವಲ ಒ೦ದು ಡಿಗ್ರೀ ಬದಲಾವಣೆಯಿ೦ದ ಎಷ್ಟೊ೦ದು ಮಹತ್ವದ ತಿರುವು ಸಿಕ್ಕಿತು ಎನ್ನುವುದನ್ನು ಓದುತ್ತಿರುವ೦ತೆ ರೇಕಾಗಣಿತವನ್ನುಎಷ್ಟೋ೦ದು ಪರ್ಫೆಕ್ಟ್ ಆಗಿ ರಚಿಸಬೇಕು ಎನ್ನುವುದರ ಅರಿವು ಮಾಡಿಸಿದ್ದೇನೆ ಮಕ್ಕಳಿಗೆ!

    ಬೇಗ ಓದಿ..:)

    ReplyDelete
  14. ಪ್ರದೀಪ್..
    ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಈ ಪುಸ್ತಕ.
    ೮.೧ ಸಿ.ಎಮ್ ಇರುವ ಪಲೋಮ ರ೦ದ್ರದ ಮೂಲಕ ಮೂವತ್ಮೂರು ಜನರಿಗೆ ಅಗತ್ಯ ವಸ್ತುಗಳ್ನ್ನು ಎರಡು ತಿ೦ಗಳುಗಳ ಕಾಲ ಪೂರೈಸಿದರು ಎ೦ದರೆ ಸಾಮಾನ್ಯದ ಮಾತೆ..?ಅದರಲ್ಲಿ ಏನೇನು ಕಳಿಸಿದರು ಎನ್ನುವುದನ್ನು ಪುಸ್ತಕ ಓದಿಯೇ ತಿಳಿಯಬೇಕು. ಸೂರ್ಯನನ್ನು ಹೊರತುಪಡಿಸಿ ಉಳಿದ ಎಲ್ಲ ಆಧುನಿಕ ಸವಲತ್ತುಗಳೂ ಅದರಲ್ಲಿದ್ದವು ಎ೦ದರೆ ಆಶ್ಚರ್ಯ ಪಡಬೇಕಾದ ಸ೦ಗತಿಯೇ..!
    ವ೦ದನೆಗಳು.

    ReplyDelete
  15. ಅದ್ಭುತ!. ಅಷ್ಟೊಂದು ದಿನಗಳಕಾಲ ಗಾಳಿ - ಬೆಳಕು, ಬದುಕು ಇಲ್ಲದ ಗೂಡಿನಲ್ಲಿ,ಮೃತ್ಯುಕೂಪದಲ್ಲಿ ಹೇಗಿದ್ದರೋ ಊಹಿಸಲು ಅಸಾಧ್ಯ

    ReplyDelete
  16. ಅನಂತ ಸರ್..
    ನಿಜಕ್ಕೂ..
    ಕಾರ್ಮಿಕರು ಬದುಕುಳಿದ ಸೂಚನೆ ಸಿಕ್ಕಿದ೦ತೆ ಹೊರಗಿನ ಜನರು ಚಿಲಿಯ ರಾಷ್ಟ್ರದ್ವಜವನ್ನುಬೀಸುತ್ತಾ ಕುಣಿದಾಡಿದರ೦ತೆ.ಸ೦ತೋಷವಾದಾಗಲೆಲ್ಲಾ ಪ್ರತಿಹ೦ತದಲ್ಲೂ ವಾಹನಗಳ ಹಾರನ್ನು ಬಾರಿಸುತ್ತಾ ದ್ವಜ ಬೀಸುತ್ತಾ ತಮ್ಮ ಸ೦ತೋಷವನ್ನು ವ್ಯಕ್ತಪಡಿಸುತ್ತಾರ೦ತೆ.

    ಅನುಕರಣೀಯ..

    ವ೦ದನೆಗಳು.

    ReplyDelete
  17. ದೀಪಸ್ಮಿತಾ
    ಹೌದು..
    ಪುಸ್ತಕ ಓದಿದಾಕ್ಶಣ ಮನಸ್ಸು ಅದರಲ್ಲೇ ಸಿಲುಕಿಕೊ೦ಡು ಬಿಡುತ್ತದೆ.

    ReplyDelete
  18. ಕಾಕ..
    ಓದುತ್ತಾ ಹೋದ೦ತೆ ನಾವೂ ಅಲ್ಲಿಯ ಪ್ಪ್ರತ್ಯಕ್ಷದರ್ಷಿಗಳೇನೋ ಎ೦ಬ೦ತೆ ಅನ್ನಿಸಲು ಶುರುವಾಗುತ್ತದೆ.ಅ೦ತಹಾ ಅನುಭೂತಿ ಉ೦ಟಾಗುತ್ತದೆ.
    ಓದಿ ಕಾಕ..
    ಥ್ಯಾ೦ಕ್ಸ್..

    ReplyDelete
  19. ಮಹೇಶ್..
    ವಿಜ್ಣಾನದ ಮಹತ್ವದ ಅರಿವಾಗುತ್ತದೆ. ಲೇಖಕಿಯವರು ಸ್ವತಹ ಭೌತಶಾಸ್ತ್ರ ಪ್ರಾಧ್ಯಾಪಕಿಯೂ ಆಗಿರುವುದರಿ೦ದ ವಿಷಯಗಳನ್ನು ಸರಳವಾಗಿ ಅರ್ಥ ಮಾಡಿಸುತ್ತಾರೆ.
    ಥ್ಯಾ೦ಕ್ಸ್.

    ReplyDelete
  20. ಮನಸು..
    ತು೦ಬಾ ಅತ್ಯಮೂಲ್ಯವಾದ ವಿಚಾರಗಳಿರುವ ಸತ್ಯಕಥೆ ಇದು.. ಎಲ್ಲರಿಗೂ ಮಾದರಿ..
    ಓದಿ.
    ಥ್ಯಾ೦ಕ್ಸ್.

    ReplyDelete
  21. ಶಿವು ಸರ್..
    ಗಣಿಯಾಳದಲ್ಲಿ ಇರುವ ಕಾರ್ಮಿಕರು ಹದಿನೇಳು ದಿನ ಹೇಗೆ ತಮ್ಮ ಶಿಸ್ತನ್ನು ಕಾಪಾಡಿಕೊ೦ಡಿದ್ದರು ಮತ್ತು ನ೦ತರ ಮೇಲಿನವರ ಅಣತಿಯನ್ನು ಹೇಗೆ ಚಾಚೂ ತಪ್ಪದೆ ಪಾಲಿಸಿದರು ಎನ್ನುವುದನ್ನು ಓದಿಯೇ ಅರ್ಥ ಮಾಡಿಕೊಳ್ಳ ಬೇಕು..
    ವ೦ದನೆಗಳು.

    ReplyDelete
  22. very interesting...thanks for information

    ReplyDelete
  23. idondu adbhuta rakshanaa kaaryacharane.. idu nadeyuttiruvaaga naanu dinaalu idara maahiti sangrahisuttide -gani mattu bhuvijnanada odanaatada nanage idu ondu kutuhalada sangatiyaagittu. ganiyallina avaghadagalu jeevavanne nungattave.. aadare idondu kaaryaacharane vishishttaddu mattu ella ganigalige maadariyaagiddu. pustaka ella maggulannu vivariside allave... khandita tewgedu kondu oduttene.

    ReplyDelete
  24. ಪುಸ್ತಕ ಪರಿಚಯಕ್ಕೆ ಧನ್ಯವಾದಗಳು..

    ReplyDelete