Sunday, April 24, 2011

ಅಪ್ಪಯ್ಯನ ಹಳೆ ಸೈಕಲ್ಲೂ.. ಕೆಂಪಿ ದನವೂ..

 ನನ್ನ ತಂದೆಯವರ ಬಳಿ ಒಂದು ಹಳೆ ಸೈಕಲ್ ಇದೆ.ಸಾವಿರದೊ೦ಬೈನೂರಾ  ಐವತ್ತೇಳನೆ ಇಸವಿಯಲ್ಲಿ ನೂರಾ ಐವತ್ತೈದು ರೂಪಾಯಿಗಳಿಗೆ ಅವರು ಚೌಕಾಸಿ ಮಾಡಿ ಖರೀದಿಸಿದ್ದು ಅದು.  ಅದು ಎಷ್ಟು ಹಳೆಯದು ಎಂದು  ಅವರಿಗೂ  ಗೊತ್ತಿಲ್ಲ..! ಆವರು ಖರೀದಿಸಿದ್ದೇ ಸೆಕೆಂಡ್ ಹ್ಯಾಂಡ್ ಸೈಕಲ್ಲು.. ಈಗ  ಅದರ ಬಹುತೇಕ ಎಲ್ಲಾ ಭಾಗಗಳನ್ನೂ ಬದಲಾಯಿಸಲಾಗಿದೆ.. ! ಎಲ್ಲಾ ಪಾರ್ಟ್ಸೂ ಒಟ್ಟಿಗೆ  ಹಾಳಾಗದು.ಅಂತೆಯೇ   ಹೊಸ ಬಿಡಿ ಭಾಗ ಜೋಡಿಸಿದಾಗ ಹಳೆ ಭಾಗದ ಹಳೆತನ ಮುಂದುವರೆದುಕೊಂಡು ಹೋಗುತ್ತಿರುತ್ತದೆ. ಅಂತೂ   ಅಪ್ಪಯ್ಯನಿಗೆ [ನಮ್ಮ ತಂದೆ ] ವಯಸ್ಸು  ಈಗ ಎಪ್ಪತ್ತೈದು ದಾಟಿದ ಹಾಗೆ ಅದಕ್ಕೂ ಐವತ್ತೊಂದೆರಡಾದರೂ ದಾಟಿದ್ದಿರಲೇ ಬೇಕು!

ಅಪ್ಪಯ್ಯ ಕಷ್ಟ ಜೀವಿ.. ಬಹು ಕಷ್ಟದ ಬಾಲ್ಯ . ಅಪ್ಪಯ್ಯನ ಬದುಕನ್ನು ಅವನೇ ಬದುಕಿದ್ದಾನೆ. ಕಿತ್ತಳೆ ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು  ಹದಿನೈದು ಮೈಲಿ ದೂರದ ಸಂತೆಗೆ ಹೋಗಿ ಮಾರಿ ಸಿಕ್ಕ ಹಣದಲ್ಲಿ ದಿನಸಿ ತಂದು ಆವತ್ತಿನ ಊಟ ಉಣ್ಣುವ ಪರಿಸ್ಥಿತಿ ಇತ್ತಾಗ.   ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ ಖರೀದಿಸಿದ ಸೈಕಲ್ಲು ಅವನ ಬಹುತೇಕ ಕಷ್ಟಗಳನ್ನು ತಾನೂ ಹಂಚಿಕೊಂಡಿದೆ. ಅದಕ್ಕಾಗಿಯೇ ಏನೋ ಅದರ ಮೇಲೆ ತೀವ್ರ  ಅಭಿಮಾನ ಆಪ್ಪಯ್ಯನಿಗೆ. ಜೀವನದ ಕಷ್ಟದ ಸಮಯದಲ್ಲಿ ಜೊತೆ ಕೊಟ್ಟ ಯಾರೇ ಆಗಲಿ, ಅದು ಜೀವವೇ ಆಗಲೀ ಜಡವೇ ಆಗಲೀ ಅದರೆಡೆಗೊಂದು ಅಭಿಮಾನ ಕೊನೆವರೆಗೂ  ಮನುಷ್ಯನಲ್ಲಿ ಬೇರೂರಿರುತ್ತದೆ.ಅದನ್ನು ಬಾರಿ ಬಾರಿಗೂ ವ್ಯಕ್ತ ಪಡಿಸಲೇ ಬೇಕೆಂದಿಲ್ಲ..  

ಬಸ್ಸು, ಇನ್ನಿತರೇ ವಾಹನಾದಿ ಸೌಕರ್ಯಗಳಾದ ಮೇಲೆ ಅಪ್ಪಯ್ಯ ಅದನ್ನು ಚಲಾಯಿಸುವುದನ್ನು ಬಿಟ್ಟಿದ್ದಾನೆ. ಆದರೆ ಮನೆಗೆ ಬರುವ ನೆಂಟರ ಮಕ್ಕಳಾದಿಯಾಗಿ ಅನೇಕ ಜನರು ಸೈಕಲ್ ಹೊಡೆಯುವುದನ್ನು ಅಪ್ಪಯ್ಯನ ಸೈಕಲ್ಲಿನಲ್ಲಿಯೇ ಕಲಿತಿದ್ದಾರೆ. ದೂರದ ಊರಿಂದ ಕೂಲಿಗೆ ಬರುವ ಕೂಲಿಯಾಳುಗಳಿಗೂ ವಾರಕ್ಕೆ ಮೂರು, ನಾಲ್ಕು ದಿನ ದಾರಿ ಹಾಯಿಸುತ್ತಿದ್ದುದು ಅದರ ಚರಿತ್ರೆಯ ಪುಟಗಳಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ಅದರ ಒವರ್ಹ್ವಾಲಿಂಗ್ ಮಾಡಿಸಿ ಜತನ ಮಾಡುತ್ತಿರುತ್ತಾನೆ.
 ಅಪ್ಪಯ್ಯ ಎಷ್ಟೋ ಕಷ್ಟಗಳನ್ನು ಸೈಕಲ್ಲಿನ ಜೊತೆಯಲ್ಲಿಯೇ ಅನುಭವಿಸಿದ್ದಾನೆ.  ಹೋರಾಡಿದ್ದಾನೆ, ಬಿದ್ದಿದ್ದಾನೆ, ಗೆದ್ದಿದ್ದಾನೆ.ಈಗ ಮನೆಯಲ್ಲಿ ಮೊಮ್ಮೊಕ್ಕಳದು ಚಿಕ್ಕ ಪುಟ್ಟ ಸೈಕಲ್ಲಿನಿಂದ ಹಿಡಿದು ಗೇರ್ ಸೈಕಲ್ಲಿನ ವರೆಗೆ ಇದೆ. ಆದರೆ ಅವ್ಯಾವುವೂ ಅಪ್ಪಯ್ಯನ ಸೈಕಲ್ಲಿನ ಯೋಗ್ಯತೆಗೆ ಬರವು. 'ಈಗಿನ  ಹತ್ ಸೈಕಲ್ಲಿನ  ಯೋಗ್ಯತೆ ಯನ್ ಒಂದ್ ಸೈಕಲ್ಲಿನ ಯೋಗ್ಯತಿಗೆ ಸರಿ  ಬತಲೇ..' ಎಂದು ಆಗಾಗ  ಸ್ವಗತದಲ್ಲಿ ಉದ್ಘರಿಸುತ್ತಿರುತ್ತಾನೆ.
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ  ಇರ್ತು...  ಎಂತಾ ಸೈಕಲ್ ಮಾಡ್ತ್ವೆನ..'  ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು  ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
ಅಪ್ಪಯ್ಯನ ಹಳೆ ಕಷ್ಟದ  ಕಥೆಯಲ್ಲಿ ಸೈಕಲ್ಲಿನದು  ಒಂದು ಪ್ರಮುಖ ಪಾತ್ರ. ಆಗ ಕಷ್ಟ ಪಟ್ಟಿದ್ದೆಲ್ಲವೂ ಈಗ ಅಪ್ಪಯ್ಯನದು  ನೆನಪು ಅಷ್ಟೇ.    ಅದು ಹಾಗೆಯೇ..  ಸುಖದ ಮೆಟ್ಟಿಲಿನಲ್ಲಿ ನಿಂತು ತಿರುಗಿ ನೋಡಿದಾಗ ಪಟ್ಟ ಕಷ್ಟ, ನೋವುಗಳೆಲ್ಲವೂ ಸುಖದ ನೋವುಗಳಾಗೆ ಕಾಣಿಸುತ್ತವೆ. ಜಯಿಸಿದ ಸಾರ್ಥಕ ಭಾವ ಅನ್ನುವುದು  ಕಷ್ಟದ ಎಸೆನ್ಸ್ ಒಂದನ್ನು  ಮಾತ್ರ ಉಳಿಸುತ್ತದೆ.

ಹೀಗಿದ್ದಾಗಲೂ ಒಮ್ಮೆ  ಅಪ್ಪಯ್ಯನಿಗೆ ಆ ಸೈಕಲ್ಲನ್ನು ಮಾರುವ ಆಲೋಚನೆ ಬಂದು ಬಿಟ್ಟಿತ್ತು. ''ನಮಗಂತೂ ಇದು ಇನ್ನು ಉಪಯೋಗಿಲ್ಲೇ. . ಸುಮ್ನೆ ಮನೇಲಿ ತುಕ್ಕು ಹಿಡಿಸ ಬದ್ಲು ಹುಟ್ಟಿದಷ್ಟಕ್ಕೆ ಕೊಟ್ ಹಣದ್ರಾತು.   ಲಾಭಕ್ಕಲ್ಲ, ಪುಗಸಟ್ಟೆ ಕೊಡದು ಬ್ಯಾಡ ಹೇಳಿ.. ಏನ್ ಹೇಳ್ತ್ಯ ಗಣಪಯ್ಯ ನೀನು..'' ಎಂದು ಅಪ್ಪಯ್ಯ ತನ್ನ ಸ್ನೇಹಿತನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಹೌದು.  ಅಪ್ಪಯ್ಯನ ಕಷ್ಟ ಸುಖಗಳನ್ನೆಲ್ಲಾ ಕಣ್ಣಾರೆ ಕಂಡ ಆ ಸ್ನೇಹಿತ ಹೇಳಿದ್ದಿಷ್ಟು.'' ಹೌದೌದು.. ನಿಂಗೆ ಇದೊಂದು ಸೈಕಲ್ಲೂ ..ಮತ್ತೆ ಕೆಂಪಿ ದನಾನೂ ಮಾರ್ಕ್ಯಂಡೆ  ಅರಮನೆ ಕಟ್ಸಕೂ ಅಂತ ವಿಚಾರಿದ್ದು  ಕಾಣ್ತು'' ಎಂದು ಒಂದೇ ಮಾತಿನಲ್ಲಿ ಅಪ್ಪಯ್ಯನ
ವಿಚಾರಕ್ಕೆ ಕೊಡಲಿ ಏಟು ಹಾಕಿದ. ಅಪ್ಪಯ್ಯ ನಿಜಕ್ಕೂ ತಾನು ಈ ತರಾ ವಿಚಾರ ಮಾಡಿದೆನಲ್ಲಾ ಎಂದು ಭಾರೀ ಬೇಜಾರು ಮಾಡಿಕೊಂಡದ್ದು ನನಗಿನ್ನೂ ನೆನಪಿದೆ.


ಕೆಂಪಿ ದನವೂ ಅಷ್ಟೇ.ಅದು ನಮ್ಮನೆಯಲ್ಲೇ ಹುಟ್ಟಿದ ಕರು ದೊಡ್ಡದಾಗಿದ್ದು. ಬಹುಷಃ ನಮ್ಮೂರಲ್ಲಿ ಯಾರ ಮನೆಗೆ ಹೋದರು ಕೆಂಪಿ ಅನ್ನುವ ಹೆಸರಿನ ದನವೊಂದಿರುತ್ತದೆ. ದನಗಳಿಗೆ ಕೆಂಪಿ, ಗಂಗೆ, ಗೌರಿ, ಕಪಿಲೆ, ಬೆಳ್ಳಿ, ಈ ಹೆಸರುಗಳು ಮಾಮೂಲು. ಅದು ಹೇಗಿತ್ತಪ್ಪಾ ಅಂದ್ರೆ, ಗಾ೦ವಟೀ ದನ ಕುಳ್ಳಕ್ಕೆ, ಚಿಕ್ಕದಾಗಿ,  ಮುದ್ದಾಗಿ ಇತ್ತು.ಬಣ್ಣ ಕೂಡಾ ಕೆಂಪೇ.  ಕರು ಹಾಕಿದ ದಿನದಿಂದ ಹಾಲು ಕೊಡಲು ಶುರು ಮಾಡಿದರೆ ಮತ್ತೆ ಮೂರು ವರ್ಷಕ್ಕೆ ಮತ್ತೊಂದು  ಕರು ಹಾಕುವ ಹಿಂದಿನ ದಿನದ ವರೆಗೂ ಒಂದು ದಿನವೂ ಬಿಟ್ಟದ್ದಿಲ್ಲ. ಕರು ಹಾಕಿದ ಶುರುವಿನಲ್ಲಿ ಕರುವಿಗೆ ಬಿಟ್ಟು  ಅರ್ಧ ಲೀಟರಿನಷ್ಟು ಹಾಲು  ಕೊಡುತ್ತಾ ಕೊನೆಯಲ್ಲಿ ಅರ್ಧ ಕಾಫೀ ಕಪ್ಪಿನ ಪ್ರಮಾಣಕ್ಕೆ ಇಳಿಯುತ್ತಿತ್ತು. ಅದನ್ನಾದರೂ ಆಯಿ ಎಲ್ಲದಕ್ಕೂ ಮೊದಲಾಗಿ ಕರೆದು ನೋಡುವವರ ಕಣ್ಣು ಬೀಳಬಾರದೆಂದು ಸೆರಗು ಮುಚ್ಚಿ ಅಡುಗೆ ಮನೆಗೆ ಒಯ್ಯುತ್ತಿದ್ದಳು.   ಒಂದು ದಿನ ಒದ್ದಿದ್ದಿಲ್ಲ. ಹಾಯ್ದಿದ್ದಿಲ್ಲ. ದೇವರಿಗೆ ಹೂ ತಪ್ಪಿದರೂ ಕೆಂಪಿ ದನದ ಹಾಲು ತಪ್ಪದು. ಅದು ಇರುವ ವರೆಗೆ ದೊಡ್ದಹಬ್ಬದ   ಗೋ ಪೂಜೆಗೆ  ಬೇರೆ ದನಗಳಿಗೆ ಪ್ರವೇಶವಿರಲಿಲ್ಲ. ಕರು ಹಾಕಿದ ಹತ್ತು ದಿನ ಸೂತಕ ಎಂದು ದೇವರಿಗೆ ನೈವೇದ್ಯಕ್ಕೆ ಅದರ ಹಾಲಿರಲಿಲ್ಲ ಹೊರತಾಗಿ ಕಾಫೀ ಬಳಕೆಗೆ ಅದರದ್ದೇ ಹಾಲು. ಕರು ಹಾಕಿತು ಗಿಣ್ಣ ಸಿಗುವುದೆಂಬ ಭರವಸೆಯನ್ನೆಲ್ಲಾ  ನಾವ್ಯಾರೂ ಇಟ್ಟು ಕೊಳ್ಳುವ ಹಾಗೆಯೇ ಇರಲಿಲ್ಲ.ಸಾರ್ವಕಾಲಿಕ ಹಾಲು ಸರಬರಾಜು ಹಾಗಾಗಿ ಗಿಣ್ಣವಾಗುವುದು ಹೇಗೆ..? ಈ ದನವೇ ಹೆಚ್ಚುಗಾರಿಕೆಗೆ ಕಾರಣವಾಗುವ ಬಗೆ ಹೇಗೆ ಎಂದರೆ ಎಷ್ಟೊತ್ತಿಗೆ ಹೋಗಿ ಹಾಲು ಕರೆದರೂ ಇದ್ದಷ್ಟನ್ನು ಕೊಡುವ ಪರಿ.ಬಂದ ನೆಂಟರಿಗೆ ಕಾಫೀ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲು ಈ ದನವೇ ಕಾರಣ. ಉಳಿದಂತೆ ನಾಲ್ಕಾರು  ದನಗಳು ಕೊಟ್ಟಿಗೆ ತುಂಬಾ  ಇದ್ದವು ಕೂಡಾ.  ಎಲ್ಲವೂ ಕಾಟು ದನಗಳೇ ಆದರೂ ಅದರಲ್ಲಿ ಎರಡು ಬರಡು, ಒಂದು ಇನ್ನೂ ಕರು ಹಾಕದ  ಮಣಕ, ಇನ್ನೆರಡು ಚಾಳಿ.  ಚಾಳಿ ಮಾಡುವ ದನಗಳೆಂದಾದರೂ ಹೇಗೆ, ಅರ್ಧ ಲೋಟ ಹಾಲು ಕರೆಯಲು ಆಯಿ ಇಪ್ಪತ್ತು ಬಾರಿ ಕೊಟ್ಟಿಗೆಗೂ ಮನೆಗೂ ಓಡಾಡಬೇಕಿತ್ತು.



ಹಾಗಾಗಿ ಈ ಎರಡು ಸಂಗತಿಗಳಲ್ಲಿ ಅಪ್ಪಯ್ಯನಿಗೆ ನಿಯತ್ತಿಗಿಂತಾ ಬೇರೆ ಯಾವುದೂ ಕಾಣಿಸಿಲ್ಲ. ತನ್ನ ಕಷ್ಟದ ಸಮಯದಲ್ಲಿ ಇವೆರಡೂ ತನ್ನ ಕೈ ಬಿಟ್ಟಿಲ್ಲ ಎನ್ನುವ ಸಮಾಧಾನ ಅವನಿಗೆ.ಎಷ್ಟೋ ದೊಡ್ಡ ದೊಡ್ಡ ಸಂಗತಿಗಳು ಇದ್ದರೂ ಕೂಡಾ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಿಗುವ ಸಾಂತ್ವಾನ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಈಗ ಕೊಟ್ಟಿಗೆ ತು೦ಬಾ ದೊಡ್ಡ ಜಾತಿಯ ದನಗಳೇ ಇವೆ. ಬೇಕಷ್ಟು ಹಾಲು ಕೊಡುತ್ತವೆ. ಆದರೂ ಕಷ್ಟ ಪಟ್ಟು ಪಡೆದಿದ್ದರ ಸುಖ ಇದರಲ್ಲಿಲ್ಲ..! ಆಗ ಪ್ರತಿ ಕ್ಷಣವೂ ಅನುಭವಕ್ಕೆ ಬರುತ್ತಿತ್ತು.. ಕಷ್ಟದ್ದು.!   ಸುಲಭವಾಗಿ ಸಿಕ್ಕುವುದರೆಡೆಗೆ ಯಾವಾಗಲೂ ತಾತ್ಸಾರವೇ ನಮಗೆ. ಮೊಸರು ತಾಡನೆಗೊಳಗಾಗಿ ಆಗಿ ಕೊನೆಯಲ್ಲಿ ಬೆಣ್ಣೆ ಸಿಗುವುದಿಲ್ಲವೇ..?ಹಾಗೆ..ಜೀವನ ಕೂಡ.. ಅಪ್ಪಯ್ಯನ ಪ್ರಕಾರ. ಸುಖದ ಬೆಲೆ ಗೊತ್ತಾಗಬೇಕಿದ್ದರೆ ಅದಕ್ಕಾಗಿ ಹಗಲಿರುಳೂ  ಹಂಬಲಿಸ ಬೇಕು.

ಕೆಂಪಿ ದನ ಈಗಿಲ್ಲ.. ಆದರೆ ಸೈಕಲ್ಲು ಮಾತ್ರಾ ಅಪ್ಪಯ್ಯನ ಕಷ್ಟಗಳಿಗೆ ಸಾಕ್ಷಿಯಾಗಿ ಇನ್ನೂ ಬಳಕೆಯಲ್ಲಿದೆ.


ವಂದನೆಗಳು.

Friday, April 15, 2011

ರೇಷ್ಮೆ ಹುಳುಗಳ ಜೀವನದಾಟ.. ಪಾಠ..

ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ  ರೇಷ್ಮೆ ಹುಳುಗಳ  ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ   ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ   ಮಾಹಿತಿಗಳೊಂದಿಗೆ ಒಳಗಡೆ    ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ  ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್]  ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು  ಅನುವು ಮಾಡಿಕೊಟ್ಟರು.  
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.

ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು   ಮಾಹಿತಿಯನ್ನೂ ಹೊಂದಿಸಿ  ಮತ್ತಷ್ಟು ವಿಸ್ತರಿಸಿಕೊಳ್ಳಲು  ಅಂತರ್ಜಾಲಮುಖಿಯಾದೆ.


ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು 

ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.


ಬಾಂಬಿಕ್ಸ್ ಮೊರಿ     [  bombyx mori  ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ  ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ   ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.



ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.

ಬಲಿತ ಹುಳುಗಳು 

ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ  ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ. 


ಕೋಶದ ಸಿದ್ದತೆಯಲ್ಲಿರುವ ಹುಳು
 
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ  ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು  sericin .  ಫೈಬ್ರೊಇನ್  ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.

ಪೂರ್ಣಗೊಂಡ ಕೋಶ [cocoon ]




ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ   ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್   ಸಾವಿರ ಅಡಿಗಳಿಂದ ಮೂರು  ಸಾವಿರ ಅಡಿ ಉದ್ದದ ಎಳೆಯಿಂದ  ಮಾಡಲ್ಪಟ್ಟಿರುತ್ತದೆ.  ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.

ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ  ಹಾತೆಯಾಗಿ ಹೊರಬರುತ್ತದೆ.  ಇದು ಸ್ರವಿಸುವ  ಪ್ರೋಟಿಯೋಲಿಟಿಕ್ ಕಿಣ್ವ  ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.

ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ  ವೈವಿಧ್ಯಮಯವಾಗಿ   ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ  ಮಾತ್ರ  ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ  ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..

ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...!  ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!

ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!


ವಂದನೆಗಳು 

Tuesday, April 12, 2011

ಲ೦ಚದ ಮೂಲ..ಇಲ್ಲೂ ಇರಬಹುದು...

ಅಣ್ಣಾಹಜಾರೆಯವರು  ಭ್ರಷ್ಟಾಚಾರ  ವಿರೋಧಿ ಆಂದೋಲನದ ಪ್ರಯುಕ್ತ ಹಮ್ಮಿಕೊಂಡಿದ್ದ ನಿರಶನ ಸತ್ಯಾಗ್ರಹ ತಾತ್ಕಾಲಿಕವಾಗಿ ಮುಗಿದಿದೆ. ಲೋಕಪಾಲ್  ವಿಧೇಯಕವನ್ನು ಮಳೆಗಾಲದಲ್ಲಿ ಮಂಡಿಸುತ್ತೇವೆನ್ನುವ  ಹೇಳಿಕೆಗಳು ಸರಕಾರದಿಂದ ಹೊರಟಿವೆ. ಮಳೆಗಾಲದ ಮಳೆಯಲ್ಲಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಅಥವಾ ಚೂರು ಪಾರು ಮಳೆಯಿಂದ ಮುಗ್ಗುಲು ಹಿಡಿಸದಿದ್ದರೆ ಸಾಕು. ಜಾರಿಗೆ ಬರುವಲ್ಲಿ ಅದಿನ್ನೆಷ್ಟು ಭ್ರಷ್ಟವಾಗಿರುತ್ತದೋ  ಕಾಣೆ. 
ಈ ಕೆಲ ದಿನಗಳಿಂದ ದಿನಪತ್ರಿಕೆ ಓದಲು   ಹೆಮ್ಮೆ ಆಗುತ್ತಿರುವುದು ನಿಜ. ಅಣ್ಣಾ ಹಜಾರೆಯವರೊಂದಿಗೆ ಅದೆಷ್ಟೊಂದು ಬೆಂಬಲದ ಕೈಗಳು.ಸಾವಿರವಲ್ಲ. ಕೋಟಿ ..! ಆ ಮಾಹಾಕಾಳಿಗೂ ಇಷ್ಟು ಕೈಗಳಿರಲಿಲ್ಲ...!  

ಓದುತ್ತ ಓದುತ್ತ ಹೋದಂತೆ ಅರಿವಿಲ್ಲದೆ ಎದ್ದು ನಿಲ್ಲುವಂತಹಾ ವೀರಾವೇಶ ನನಗೆ. ಈ ಎಲ್ಲಾ ತರದ ಲಂಚ, ಆಮಿಷ, ಹಿಂಸೆ,  ಮೋಸಾದಿ ಭ್ರಷ್ಟಾಚಾರಗಳನ್ನೂ ಒಮ್ಮೆಲೇ ಯಾವುದಾದರೂ ಫಿನಾಯಿಲ್ಲೋ, ಮಾರ್ಜಕದಿಂದಲೋ  ತೊಳೆದು ಬಿಡುವ ಆಸೆ ನನಗೆ. ಹಾಗೆ ಮಾಡಲು ಸಾಧ್ಯವಾಗಿದ್ದಿದ್ದರೆ ತೊಳೆದ ನಂತರ ಸುತ್ತಲೂ ಲಕ್ಷ್ಮಣ ರೇಖೆ ಎಳೆದು,   ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು ಮತ್ತೆ ಬಾರದಂತೆ  ಬಂದೋಬಸ್ತ್ ಮಾಡುವ ಬಯಕೆ ನನಗೆ.
ಇಷ್ಟು ವರ್ಷದ ಭ್ರಷ್ಟಾಚಾರದ ಬೇರನ್ನು ಕೀಳಲು ಹೀಗೆಲ್ಲಾ ಮಾಡಿದರೆ ಆದೀತೆ ...?    ಅನಿಸುತ್ತಿದ್ದಂತೆ   ಮತ್ತೆ ತಣ್ಣಗೆ ಕುಳಿತುಕೊಳ್ಳುವುದು...! 
ನಾನಾದರೂ ಏನು ಮಾಡಲು ಸಾಧ್ಯ.. ಮಾಡುವುದಿದ್ದರೆ ನನ್ನ ಪರಿಧಿಯಲ್ಲಿಯೇ ಮಾಡಬೇಕು. ಗಂಡ, ಮನೆ,  ಮಕ್ಕಳು..... ಗೃಹಿಣಿಯಾಗಿ, ತಾಯಿಯಾಗಿ ನಾನೇನು ಮಾಡಬಲ್ಲೆ .. ?  ಯೋಚಿಸುತ್ತಿರುವೆ.

ನಾಲ್ಕು ಜನ ತಾಯಂದಿರ ಗುಂಪಿನಲ್ಲಿ ಕೇಳಿಸುವ ಮಾತುಗಳು ಮಕ್ಕಳ ಹೊರತಾಗಿ ಬೇರೆ ಇರುವುದೇ ಇಲ್ಲ..!.

ತಾಯಂದಿರಂತೂ ಮಕ್ಕಳ ಹೋಂ ವರ್ಕೂ, ಅವರ ಟ್ಯೂಷನ್ನು, ಅವರ ಊಟ,ಅವರ ಕಾಟ  ಇವುಗಳ ಬಗೆಗೆ ಚಿಂತನೆ ನಡೆಸುವರು.

ಮಕ್ಕಳು ಊಟ ಮಾಡೋಲ್ಲ , ಹೋಂ ವರ್ಕ್ ಮಾಡೋಲ್ಲ.. ಓದೋಲ್ಲ ., ಬರಿಯೋಲ್ಲ,  
ಬರೀ ಟೀವಿ ನೋಡು, ಕಂಪ್ಯೂಟರ್ ನೋಡು, ಗೇಂ ಆಡು.  

ಈ ಮಾಡದಿರುವ ಕೆಲಸಗಳನ್ನು ಮಾಡಿಸಲೇ ಬೇಕೆಂಬ ' ಅನಿವಾರ್ಯತೆ 'ಹೆತ್ತವರಿಗೂ.. 

ಊಟ ಮಾಡಿದ್ರೆ ಚಾಕ್ಲೆಟ್ ಕೊಡ್ತೀನಿ.. 
 ದಿನಾ ಹೋಂ ವರ್ಕ್ ಮಾಡಿದ್ರೆ ಮುಂದಿನ ವಾರ ಬೆನ್ 10  ವಾಚು ಕೊಡಿಸ್ತೀನಿ.. 
ಫಸ್ಟ್ ರ್ಯಾಂಕ್  ಬಂದ್ರೆ ವೀಡಿಯೋ ಗೇಮ್ ಕೊಡಿಸ್ತೀನಿ..

ಚಾಕ್ಲೆಟ್ ಗಾಗಿ, ಟಾಯ್ ವಾಚ್ ಗಾಗಿ, ವೀಡಿಯೋ ಗೇಂ ಗಾಗಿ [ ಸ್ವಲ್ಪ ಹೆಚ್ಚು ಕಡಿಮೆ ] ಹೇಳಿದ    ಕೆಲಸವಾಗುವುದು ...! 
  ಮತ್ತು ಮುಂದೆ  ಕೆಲಸವಾಗಲು ಈ ತರದ   'reinforcement 'ಅನಿವಾರ್ಯವಾಗಿ ಹೆಚ್ಚು ಹೆಚ್ಚು ಬೇಕಾಗಲು ಶುರುವಾಗುವುದು...! 


ಮಕ್ಕಳಿಗೆ ಉತ್ತೇಜನ, ಪ್ರೋತ್ಸಾಹ ಬೇಕೇ ಬೇಕು .. ಅನ್ನುವ ಮಾತು ನಿಜ.  ಮೊದ ಮೊದಲು ಊಟದಲ್ಲಾಗಲೀ, ಓದಿನಲ್ಲಾಗಲೀ ಆಸಕ್ತಿ ಮೂಡಿಸಲು ಈ ರೀತಿಯ ಬಾಹ್ಯ   ಉತ್ತೇಜನ ಅವಶ್ಯವೇ.   ಆದರೆ ನಂತರದಲ್ಲಿ ಅದು ಕ್ರಮೇಣ ಕಡಿಮೆಯಾಗಿ ಆಂತರಿಕವಾಗಿ  ಉತ್ತೇಜಿಸಲ್ಪಡಬೇಕು. ಆದರೆ ಆಗುತ್ತಿಲ್ಲ . ಏಕಿರಬಹುದು...? ಉತ್ತರ ನಿಮಗೂ ಗೊತ್ತಿಲ್ಲದ್ದಲ್ಲ. 
 ಪ್ರಕೃತಿಯೊಂದಿಗೆ ಬೆರೆಯಲೇ ಆಗುತ್ತಿಲ್ಲ..   ಮಕ್ಕಳಿಗೆ ಹೊರಾಂಗಣ ಆಟವಾಡಲೇ  ಸಾಧ್ಯವಾಗುತ್ತಿಲ್ಲ.  ಆಟದಲ್ಲಿ ಮೈ ಮರೆಯುತ್ತಿಲ್ಲ. ಶಾಂತತೆಯಿಂದ ನಿದ್ರಿಸಲಾರರು.

ಒಂದನೆಯದಾಗಿ  ಟ್ಯೂಷನ್ನು,  ಹೋಂ ವರ್ಕಿನಿಂದ ಆಡಲು  ಸಮಯವಿಲ್ಲ. ಇನ್ನೊಂದು ಆಡಲು ಮನೆ ಎದುರಿಗೆ ಅಂಗಳವೇ ಇಲ್ಲ. ಈಗಿನ ಶಾಲೆಗಳಲ್ಲೂ ಕೂಡಾ ಆಟದ ಬಯಲು ಇರದು.. ಇರುವ ಜಾಗದಲ್ಲೆಲ್ಲಾ ಗೋಡೆಗಳನ್ನು ಕಟ್ಟಿ ಮತ್ತಷ್ಟು ಮಕ್ಕಳನ್ನು ತುಂಬಿದರೆ ಆಡಲು ಜಾಗವೆಲ್ಲಿ..?  


ಮಕ್ಕಳಿಗೆ ಆಟದಿಂದ ದೈಹಿಕ ಶ್ರಮದೊಂದಿಗೆ ಮಾನಸಿಕ ವಿಕಾಸವೂ ಆಗುವುದು ..ಹಸಿವೂ ಆಗುವುದು , ಹಠವೂ ಕಡಿಮೆಯಾಗುವುದು .. ಅನ್ನುವುದನ್ನು  ಪತ್ರಿಕೆಗಳಲ್ಲಿ ಓದುವೆವು. ಹಿರಿಯರು ಹೇಳುವರು. ನಮಗೂ ಗೊತ್ತು. ಎಲ್ಲಾ ಸರಿ. ಆಡಲು ಎಲ್ಲಿಗೆ ಕಳಿಸೋಣ..? ದಿನಾಲು ಎಲ್ಲರಿಗೂ  ದೂರದ  ಪಾರ್ಕ್ ಗೆ ಕರೆದೊಯ್ಯಲು ಸಾಧ್ಯವೇ?  

ನಗರಗಳಲ್ಲಿ  ಆಡಲು ರಸ್ತೆಯೇ ಗತಿ.. ಅಲ್ಲಿ ವಾಹನಗಳ ಭೀತಿ, ಮಕ್ಕಳನ್ನು ಅಪಹರಿಸುವವರ ಭೀತಿ.. ಬೀದಿ ನಾಯಿಗಳ ಭೀತಿ.. ಹೀಗೆ ಭೀತಿಗಳ ಮೂಟೆಯನ್ನೇ ಮಕ್ಕಳಲ್ಲಿ ತುಂಬಿ ಕಳುಹಿಸುವವರು ನಾವು.  ಹೀಗಿರುವಾಗ  ಮಕ್ಕಳ ಕಣ್ಣುಗಳಲ್ಲಿ ಭೀತಿಯ ಹೊರತಾಗಿ ಬಣ್ಣಗಳು ಮೂಡಲು ಸಾಧ್ಯವೇ..? ರಸ್ತೆಯ ಧೂಳಿನಲ್ಲಿ, ತಾರಿನಲ್ಲಿ, ಕಸದ ಬುಟ್ಟಿಗಳಲ್ಲಿ, ಚರಂಡಿಯಂಚಿನಲ್ಲಿ  ಕನಸುಗಳು  ಅರಳಬಲ್ಲದೇ..? ಪ್ರಪಂಚದೆಡೆಗೊಂದು ಸಾತ್ವಿಕ ಕುತೂಹಲ ಸೃಷ್ಟಿಯಾಗ ಬಲ್ಲದೇ..? ಅವರ ಸುತ್ತಲಿನ   ಪರಿಸರ  ಅವರಿಗೆ  ಆಪ್ಯಾಯಮಾನವಾಗಬಲ್ಲುದೆ..?

ಏನು ಮಾಡೋಣ..? ಅವರಿಗೆ  ಬಣ್ಣಗಳನ್ನು, ಕನಸುಗಳನ್ನು, ಕುತೂಹಲವನ್ನು  ಕೊಡಲು ಸಾಧ್ಯವಿಲ್ಲದ ಗಿಲ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಏನೇನು ಸವಲತ್ತುಗಳನ್ನು ಕೊಡಲು ಸಾಧ್ಯವಾಗುವುದೋ ಅವೆಲ್ಲವನ್ನೂ ಕೊಡಲು ಶುರುಮಾಡುವೆವು ನಾವು. 

ಪ್ರಕೃತಿಯ ಸಾಂಗತ್ಯದ ಸವಿ  ನಾಲ್ಕು ಗೋಡೆಗಳ ಮಧ್ಯ ಸಿಗುವುದೇ..? ಹೊಳೆಯ ನೀರು,   ಮಾವಿನ ಮರ, ಗುಬ್ಬಚ್ಚಿ, ಕಾಕಮಟ್ಲೆ ಹಣ್ಣು,  ನಾನಾ ತರದ ಪ್ರಾಣಿ ಪಕ್ಷಿಗಳೂ, ಗುಡ್ಡ, ಬೆಟ್ಟ ಇವುಗಳನ್ನೆಲ್ಲಾ  ನಗರದಲ್ಲಿ ಎಲ್ಲಿಂದ ತರಲು ಸಾಧ್ಯ..?  ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಲ್ಲಿ ಅವರ ಸಾಂಗತ್ಯದಿಂದಲೂ ವಂಚಿತರು ಈ ಮಕ್ಕಳು.    ಪರಿಧಿಯೊಳಗಣ ಬದುಕು.ವಿಸ್ತಾರಕ್ಕೆಲ್ಲಿದೆ ಬಯಲು..?  ಮಕ್ಕಳ ಮನಸ್ಸು ವ್ಯಗ್ರ ಗೊಳ್ಳದೆ  ಮತ್ತೇನಾಗುವುದು..? 

ಅಳಬಾರದೆನ್ನುವುದಕ್ಕೆ ಲಂಚ.. ಊಟಕ್ಕೆ ಲಂಚ, ಓದಲು ಲಂಚ. ಬರೆಯಲು ಲಂಚ..  ಹೀಗೆ ಪ್ರತಿಯೊಂದಕ್ಕೂ ಲಂಚ ಕೊಡುವುದಷ್ಟೇ ನಮಗೆ ಉಳಿಯುವುದು.. !

 ನಾನಂತೂ ಅಂದುಕೊಂಡಿದ್ದೇನೆ,   ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!
[ಅನಿವಾರ್ಯವಾಗಿ ] ಪೋಷಕರೇ ಮೊದಲ ಗುರು.. !!!
ಇಂದಿನ ಮಕ್ಕಳೇ ಮುಂದಿನ ..............?

ಮನುಷ್ಯ ಬಾಲ್ಯದಲ್ಲಿ ಸ್ವಚ್ಚವಾಗಿ, ನೇರವಾಗಿಯೇ ಇರುವನು.. ಹಂತಗಳು ಬದಲಾಗುತ್ತಾ ಬಂದಂತೆ ಪರಿಸ್ಥಿತಿಯ  ಸಾಂದ್ರತೆಗನುಗುಣವಾಗಿ ಬಾಗುತ್ತಾ ಹೋಗುವನು...  


ಈ ಜೀವನ ವಕ್ರೀಭವನ ...  !  ಅಲ್ಲವೇ..?



ಇದು ಒಂದು ದಿನದ ಸಮಸ್ಯೆಯಲ್ಲ. ಮಕ್ಕಳ ಪೂರಾ ಬಾಲ್ಯದ ಸಮಸ್ಯೆ.. ಅಪ್ಪ, ಅಮ್ಮಂದಿರ ಅನಿವಾರ್ಯತೆ..

ಹೇಗೆ ಇದರ ವಿರುದ್ಧ ಹೋರಾಡೋಣ ಹೇಳಿ..?   ಪರಿಹಾರ ಹುಡುಕಲು  ಶುರು ಮಾಡಿರುವೆ.

ವಂದನೆಗಳು.

Sunday, April 3, 2011

ಕೊಕ್ಕರೆ ಬೆಳ್ಳೂರಿನ ಒ೦ದಷ್ಟು ಕೊಕ್ಕರೆಗಳು..


  ಇವು ಪೇ೦ಟೆಡ್ ಸ್ಟಾರ್ಕ್ ಗಳ೦ತೆ..





ಇಲ್ಲಿಯ  ಪ್ರತಿ ಮರದ ಮೇಲೂ   ಇವುಗಳದೇ  ಸ೦ಸಾರ..






ಗು೦ಪು ಗು೦ಪಾಗಿ ಮರದ ಮೇಲೆ ಕುಳಿತಿರುವ ಇವುಗಳನ್ನು ನೋಡುವುದೇ ಚ೦ದ.



 ಹೊಸಾ ಜೋಡಿ..ಇರಬಹುದೆ..?



 ಇಲ್ಲೇ ಎಲ್ಲೋ ಇದೆ ನನ್ನ ಗೂಡು..?


 ಹಾರುವೆ ಬಾನೆತ್ತರಕೆ..


 ಫೋಟೋಕ್ಕೆ ಫೋಸ್ ಕೊಡಲೆ೦ದೇ ಹೀಗೆ  ಕುಳಿತಿದ್ದು.



 ಮಕ್ಕಳು ಮರಿಗಳು  ಸ೦ಸಾರ.



 ಒಳ್ಳೆ ವಕೀಲ ಹಕ್ಕಿಗಳ ತರಾ ಕಾಣುತ್ವೆ.. ಮಕ್ಕಳಿಗೆ ಬಿಸಿಲು ತಾಗದಿರಲಿ.. ಎ೦ದು ರೆಕ್ಕೆ ಮರೆ ಮಾಡಿವೆ..!



 ಕತ್ತು ಕೊ೦ಕಿಸಿದಳಾ ಬಾಲೆ..


ಎಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು

Sunday, March 27, 2011

''ಶ್ರೀಖಂಡ '' ಮಾಡುವ ಸುಲಭ ವಿಧಾನ..

ಶ್ರೀಖ೦ಡ ಮಾಡಲೂ ಸುಲಭ ವಿಧಾನವೇ..? ಎ೦ದು ನೀವು ಹುಬ್ಬೇರಿಸಬೇಡಿ.. 
ಮೊಸರನ್ನು ನೀರು ತೆಗೆದು ಗಟ್ಟಿ ಮಾಡಿ ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಅರೆದು ಗೋಡ೦ಬಿ, ದ್ರಾಕ್ಷೀ ಇತ್ಯಾದಿಗಳಿ೦ದ ಅಲ೦ಕರಿಸಿದರೆ ಮುಗಿಯಿತಪ್ಪಾ.. ಅದೇನು ಕಷ್ಟದ ಕೆಲಸವೇ..? ಸುಲಭ..   ಎ೦ದು ಯೋಚಿಸುತ್ತಿದ್ದೀರಾ..? 

ಇದರಲ್ಲಿ ಕಷ್ಟ ಎಂದರೆ  ಮೊಸರಿನ ನೀರು ತೆಗೆದು ಗಟ್ಟಿ ಮಾಡುವುದು.. ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ನೇತುಹಾಕಲು ಮನೆಯೆಲ್ಲಾ ಓಡಾಡಿ ಜಾಗ ಹುಡುಕಬೇಕಾದ ಕಷ್ಟ ಸ್ವಲ್ಪವಲ್ಲ..

ಸುಲಭದ ವಿಧಾನವೊ೦ದಿದೆ .... ನೋಡಿ.

ಮೊದಲು ಮೊಸರನ್ನು ಸ್ವಚ್ಚವಾದ  ಬಟ್ಟೆಯೊ೦ದರಲ್ಲಿ ಹಾಕಿ ಅದನ್ನು ಗ೦ಟು ಕಟ್ಟಿ..
 ನ೦ತರ ಅದನ್ನು ಹಿಟ್ಟು ಸಾಣಿಸುವ ಸಾಣಿಗೆಯ ಮೇಲೆ ಇಟ್ಟು ಕೆಳಗೆ ಮೊಸರಿನ ನೀರು ಬೀಳಲು ಅನುಕೂಲವಾಗುವ೦ತೆ ಸಾಣಿಗೆಯ ಅಳತೆಯ ಪಾತ್ರೆಯೊ೦ದನ್ನು ಹೊ೦ದಿಸಿಡಿ.


 ನ೦ತರ ಅದನ್ನು ಪಾತ್ರೆಸಮೇತ ಫ್ರಿಜ್ಜಿನಲ್ಲಿಡಿ. [ಹುಳಿಯಾಗುವುದನ್ನು ತಪ್ಪಿಸಲು..] ಸುಮಾರು ಮೂರು ನಾಲ್ಕು ತಾಸು ಬಿಟ್ಟು ಹೊರತೆಗೆದು ಬಟ್ಟೆಯ ಗ೦ಟು ಬಿಚ್ಚಿ..



 ಅದನ್ನು ಬೌಲಿಗೆ ಹಾಕಿ ಸಕ್ಕರೆಯೊ೦ದಿಗೆ ಚನ್ನಾಗಿ ಅರೆದು ಏಲಕ್ಕಿ, ಲವ೦ಗದ ಪುಡಿ ಸೇರಿಸಿ, ಮತ್ತು ಒಣ ಹಣ್ಣುಗಳೊ೦ದಿಗೆ ಅಲ೦ಕರಿಸಿದರೆ  ತಣ್ಣನೆಯ  ಶ್ರೀಖ೦ಡ ಸವಿಯಲು ಸಿದ್ಧ..







 ಶ್ರೀಖ೦ಡ ಮಾಡಲು ಅಳತೆ -

* ಮೊಸರು  -  ಅರ್ಧ ಲೀಟರ್  [ ಫ್ರಿಜ್ಜಿ ನಲ್ಲಿಟ್ಟ ಮೊಸರಾದರೆ ನಿನ್ನೆಯ ಮೊಸರಾದರೂ ಆದೀತು.. ಹುಳಿ ಹೆಚ್ಚಿಗೆ ಇರದಿದ್ದರಾಯಿತು  ]
ಸಕ್ಕರೆ    - ಗಟ್ಟಿಯಾದ ಮೊಸರಿನ ಅಳತೆಯಷ್ಟೇ ಬೇಕು. ರುಚಿಗೆ ತಕ್ಕ೦ತೆ  ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಏಲಕ್ಕಿ, ಲವ೦ಗದ ಪುಡಿ[ಕೇಸರಿ ಬೇಕಿದ್ದರೆ ] -   ಸ್ವಲ್ಪ..
ಗೋಡ೦ಬಿ, ದ್ರಾಕ್ಷೀ.. ಇತ್ಯಾದಿ ಒಣ ಹಣ್ಣುಗಳು..  - ಯಥಾನ್ಶಕ್ತಿ...




ಮಾಡಿ ನೋಡಿ.. ಇನ್ನೂ ಸುಲಭದ ವಿಧಾನವಿದ್ದರೆ ನನಗೂ ಹೇಳಿ.

ವ೦ದನೆಗಳು.

Friday, March 11, 2011

ನಿಮ್ಮನೆಯಲ್ಲಿ ಜಿರಳೆಗಳಿವೆಯೇ..?

ಮನೆ ಅ೦ದ ಮೇಲೆ  ಜಿರಳೆ, ಸೊಳ್ಳೆ, ನೊಣ,  ಗೋಡೆಯ ಮೇಲೆ ನಾಲ್ಕಾರು ಹಲ್ಲಿಗಳು, ಗೋಡೆ ಬದಿಯಲ್ಲಿ ಸಾಲಿಕ್ಕುವ ಇರುವೆಗಳು  ಇದ್ದೇ ಇರುತ್ತವೆ  ಬಿಡಿ. 
ಹಾಗೂ ಇವೆಲ್ಲಕ್ಕೂ ಸೊಳ್ಳೆ ಬತ್ತಿ, ಲಕ್ಷ್ಮಣ ರೇಖೆ,  ಹಿಟ್ಟು ಪಟ್ಟು ಅನ್ನುವ ಉಪಶಮನಕಾರಿ ವಸ್ತುಗಳೂ ಇರುತ್ತವೆ.. ಅನ್ನಿ. 

ಉಳಿದವು ಸಾಯಲಿ..     ಮನೆಯ ಮಹಿಳೆಯರಿಗೆ ವಿಪರೀತವೆನ್ನುವಷ್ಟು ರೇಜಿಗೆ ಉಂಟು ಮಾಡುವ  ಈ ಜಿರಳೆ ಮಾತ್ರ ಸುಮಾರಿಗೆ ಯಾವುದಕ್ಕೂ ಜಗ್ಗುವ ಕುಗ್ಗುವ ಬಾಬತ್ತಿನದಲ್ಲ..
ನೀವು ಯಾರ ಮನೆಗಾದರೂ ಹೋದಾಗ ಅಲ್ಲೇನಾದರೂ ಸೆರಗು ಸಿಕ್ಕಿಸಿ ಪೊರಕೆ ಹಿಡಿದು ಹಿತ್ತಿಲ ಬಾಗಿಲ ಕಡೆ ವೀರಾಗ್ರಣಿಯಂತೆ ನಿಂತಿರುವ ಮಹಿಳೆಯರನ್ನೆನಾದರೂ   ನೋಡಿದರೆ, ಜೊತೆಗೆ ರಾಪ್ .. ರಾಪ್...ಅನ್ನುವ ಹಿನ್ನೆಲೆ ಸಂಗೀತವಿದ್ದರೆ ಹೆಜ್ಜೆ ಕಿತ್ತಿಡಲು ಯೋಚನೆ ಮಾಡುವುದೇನೂ ಬೇಡ.. ಹೆಂಗಸರಿಗೆ ಜಪ್ಪಲು ಜಿರಳೆಗಳೂ ಇವೆ..!      ಮಹಿಳೆಯರ ನಿಜವಾದ ವೈರಿಗಳೆಂದರೆ ಈ ಜಿರಲೆಗಳೇ.. !!

ಮೊಸರಿನ ಪಾತ್ರೆಗೇ ಬಿದ್ದು ಸಾಯುತ್ತವೆ ಹಾಳಾದವು..
ಅವು  ಲಕ್ಷ್ಮಣ ರೇಖೆಗೆ ನಿರೋಧಕ ಶಕ್ತಿ ಬೆಳೆಸಿಕೊಂಡು ಬಿಟ್ಟಿವೆ.  ನಾವೇ ಸಾಯಬೇಕೆ ಹೊರತೂ ಜಿರಳೆಗಳು ಅವುಗಳ ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತವೆ....!       {ನನ್ನ ಮಕ್ಕಳಿಗೆ  ರಾಮಾಯಣದ ಕಥೆ ಹೇಳಲು ಹೋಗಿ 'ಅವಾಗ ಕೂಡ ಲಕ್ಷ್ಮಣ ರೇಖೆ ಇತ್ತೇ, ಮತ್ತು ಅದನ್ನು ಮನುಷ್ಯರಿಗೆ ಹಾಕುತ್ತಿದ್ದರೇ...?' ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸೋತಿದ್ದು ನನ್ನ ಜೀವಮಾನದ ಸೋಲಾಗಿ ಹೋಗಿದೆ..!}

 ಲಕ್ಷ್ಮಣ ರೇಖೆ ಬೇಡ  ಬಿಡಿ. ಅದಕ್ಕಿಂತಲೂ ಒಳ್ಳೆಯ ಉಪಾಯ ಇದೆ ಜಿರಳೆ ಸಂಹಾರಕ್ಕೆ.

ನಿಮ್ಮನೆಯಲ್ಲಿ ಕೇರಂ ಬೋರ್ಡ್ ಇದೆಯಾ.. ?  
ಏಕೆಂದರೆ ಕೇರಂ ಬೋರ್ಡ್ ಇದ್ದವರ ಮನೆಯಲ್ಲಿ ಸುಮಾರಾಗಿ ಬೋರ್ಡ್ ಗೆ ಹಾಕಲು '' ಬೋರಿಕ್ ಪೌಡರ್ '' ಅಂತೂ ಇದ್ದೇ ಇರುತ್ತದೆ.. 

ಈಗ ಹೀಗೆ ಮಾಡಿ.. ಐದು ಚಮಚ ಬೋರಿಕ್ ಪೌಡರ್ ಗೆ ಐದು ಚಮಚ ಮೈದಾಹಿಟ್ಟು ಹಾಕಿ.   ನೀರು ಹಾಕಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ  [ ಜಾಮೂನಿನ ಉಂಡೆಗಳ ಗಾತ್ರದಲ್ಲಿ] ಮಾಡಿ ಅಡುಗೆ ಮನೆಯಲ್ಲಿ, ಪುಸ್ತಕದ ಕಪಾಟುಗಳಲ್ಲಿ, ಬಚ್ಚಲು ಮನೆಯಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ಜಿರಳೆಗಳು ಬರುವಲ್ಲಿ ಮೀಟರಿಗೊಂದರಂತೆ ಇಡಿ. ಬೋರಿಕ್ ಪೌಡರ್ ಬೇಕಿದ್ದರೆ ಇನ್ನೊಂದು ಸ್ವಲ್ಪ ಹೆಚ್ಚಿಗೆಯೂ ಹಾಕಬಹುದು.  

ಹೀಗೆ ಮಾಡಿ..  ಒಂದು ವಾರದ ನಂತರದಲ್ಲಿ  ನಿಮಗೆ  ಒಂದಾದರೂ ಜಿರಳೆ ಬೇಕೆಂದರೆ ತರಲು ಪಕ್ಕದ ಮನೆಗೇ ಹೋಗಬೇಕಾಗುತ್ತದೆ.! 

ಇದು ನಾನು ಮಾಡಿ ನೋಡಿದ ಪ್ರಯೋಗ. ನನ್ನ ತವರು ಮನೆಯಲ್ಲಿ ದಶಕಗಳ ಹಿಂದಿನಿಂದಲೇ ಈ ಪ್ರಯೋಗ ಮಾಡಿ ಫಲಕಾರಿಯಾಗಿತ್ತು.. 
ಸೈಡ್ ಎಫೆಕ್ಟ್ ಇರದ ಉಪಾಯ..[ ಅಂದುಕೊಂಡಿದ್ದೇನೆ.] ಆದರೆ ಚಿಕ್ಕ ಮಕ್ಕಳಿರುವವರ ಮನೆಯಲ್ಲಿ ಜಾಗ್ರತೆ ಅಗತ್ಯ. ಆಗ ಮಿಶ್ರಣವನ್ನು ಪೇಷ್ಟ್ ತರಾ ಮಾಡಿ ಸಂದಿ ಗೊಂದಿನಲ್ಲಿ ಹಚ್ಚ ಬಹುದು.   


ಆಸಕ್ತರು ಪ್ರಯೋಗಿಸಿ ನೋಡಿ. ಮತ್ತೆ ಹೇಳಿ..



ಒಬ್ಬ ಜವಾಬ್ಧಾರಿಯುತ ಮಹಿಳೆಯಾಗಿ ನನ್ನಂತೆ ಸಮಾನ ದುಃಖಿಗಳಾದ  ಮಹಿಳೆಯರಿಗೆ   ಮಹಿಳಾದಿನಾಚರಣೆಯ ಸಂದರ್ಭದಲ್ಲಿ    ಹೀಗಾದರೂ  ಕಿಂಚಿತ್   ಸಹಾಯವನ್ನು   ಮಾಡೋಣ ಎಂಬುದು ನನ್ನ ಬಯಕೆ..!

ಜಿರಳೆ ಸಂಹಾರಕ್ಕೆ ಜಯ ಸಿಗಲಿ...:)

ವಂದನೆಗಳು.

Friday, February 25, 2011

ಯುದ್ಧ....!!!!!!

ಅತ್ತಿತ್ತ ಹಾರಾಡಿ 
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ 
 ಕೈ ಬಡಿದು  ತೊಡೆ ತಟ್ಟಿ
 ಬಿಡದೆ  ಬೆನ್ನಟ್ಟಿ 
ಯುದ್ಧ ಗೆದ್ದಿದ್ದೇನೆ ನೋಡು..

ಕೈ ಬೀಸಿ  ಕುಣಿದಾಡಿ
ಅತ್ತಿತ್ತ ನೆಗೆದಾಡಿ 
ಕೈ ಸೆಳೆಸಿ ಕಾಲ್ ಉಳುಕಿ 
ಮುಡಿ ಬಿಚ್ಚಿ ಹಾರಾಡಿ 
ಒತ್ತರಿಸಿ ಬರುವ ಕೋಪಕ್ಕೆ 
ಜಜ್ಜಿ  ಕೆಡಹಿದ್ದೇನೆ ನೋಡು..

ಚಲುವೆ ಕೆನ್ನೆಯ ಬಳಸಿ 
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ 
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ  
ಚಿತ್ರ ಬರೆದಿದ್ದೇನೆ ನೋಡು..

ಮಾಡು ಸುಖ ನಿದ್ರೆಯನು 
ಬಿಡು ದಾರಿ ಎನಗೀಗ 
ಮತ್ತೆ ಹೋಗಲೇ ಬೇಕು 
ಶತ್ರು ಸಂಹಾರಕ್ಕೆ 
ಹುಡುಕುತ್ತ ಹುಡುಕುತ್ತ 
ಮತ್ತೊಂದು ಸೊಳ್ಳೆಯನು.....!!!!!!!!!


Friday, February 11, 2011

ಇರುವೆ ಸತ್ತ ನಂತರ ಏನಾಗುತ್ತೆ..ಪ್ರೇತವಾಗುತ್ತಾ..?


 ಕೆಲಸದ ರುಕ್ಕಮ್ಮ ಸ್ವಲ್ಪ ಭಯಮಿಶ್ರಿತ ಧ್ವನಿಯಲ್ಲಿಯೇ ಹೇಳಿದಳು.'' ಅಕ್ಕ ನಿನ್ನೆ ನಮ್ಮನೆ ಹತ್ರ ದೆವ್ವ ಬಂದಿತ್ತು...! ''




 '' ಎನ್ಮಾಡ್ತೆ ?''
''ಅಕ್ಕೋ ಎನ್ಮಾಡ್ತೂ ಅಂತೀಯಾ.. ಮನೆ ಶೀಟ್  ಮೇಲೆಲ್ಲಾ ದಡ ಬಡ ದಡ  ಬಡ ಓಡಾಡ್ತಾ ಇತ್ತು..''
''ಬೆಕ್ಕಿರಬಹುದು  ...! ಇಲೀನೋ ಹೆಗ್ಗಣನೋ ಓಡಿಸ್ಕೊಂಡು    ಬಂದಿರಬಹುದೇನೋ...?    ನೀನೊಬ್ಳು  ಶಬ್ದ   ಆದರೆ   ಸಾಕು,   ದೆವ್ವ ಅಂತೀಯ...''
''ಇಲ್ಲಾಕ್ಕ, ಮಧ್ಯ ರಾತ್ರಿ ಹೊತ್ತಿಗೆ...ಏನ್ ಭಯ ಆಯ್ತೂನ್ತೀಯ ...
ನನ್ನೆಜ್ಮಾನ ಯಾವ್ ದೆವ್ವಕ್ಕೂ ಹೆದರದೆ ಇರೋವ್ನು ಈ ದೆವ್ವಕ್ಕೆ ಭಯ  ಬಿದ್ಬುಟ್ಟ. ಒಂತರಾ ಅಳ್ತಿತ್ತು.....    ಕಳೆದ ತಿಂಗಳು ಆ ವಟಾರದ ಮನೇಲಿ ಬಸುರೀ ಹೆಂಗಸು  ಸುಟ್ಕೊಂಡು ಸತ್ತೊದ್ಳಲ್ಲಾ ಅಕ್ಕಾ ಅದು ಕೊಲೆ ಅಂತೆ.  ಅದಕ್ಕೆ ಅವಳೇ ದೆವ್ವ ಆಗಿ ಅಲೀತಾ ಇರೋದಂತೆ.. ಆಮೇಲೆ...., ಹೇಗೋ ಧೈರ್ಯ ತಂದ್ಕೊಂಡು ಇನ್ನೊಂದ್ ಸಲ ಈ ಕಡೆ ಬಂದೇ ಅಂದ್ರೆ ನೋಡು  ಚಪ್ಲಿ ತಗೊಂಡ್ ಹೊಡೀತೀನಿ ಅಂದಕೂಡಲೇ ದೆವ್ವದ ಶಬ್ಧಾನೆ ಇಲ್ಲಾನ್ತೀನಿ....'' ಕಣ್ಣು ಬಾಯಿ ತಿರುಗಿಸಿ ಹೇಳುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ...

''ಅಲ್ವೇ ಚಪ್ಲಿಗೆ ಹೆದರಿ ಹೊಯ್ತೇನೆ  ಭೂತ.....? ಅದು ಯಾವಾಗಲೂ ನಿಮ್ಮನೆಗೆ ಯಾಕೆ ಬರತ್ತೆ.. ಎದ್ರೀಗೆ ನಮ್ಮನೆ ಇಷ್ಟ್ ದೊಡ್ಡದಾಗಿ ಇದೆ.  ಒಂದಿನಾನೂ ನಮ್ಮನೆಗೆ ಬಂದಿಲ್ವಲ್ಲೇ...?   ಮುಂದಿನ ಸಲ ಬಂದಾಗ ನಮ್ಮನೆ ಅಡ್ರೆಸ್ ಕೊಡು ಅದಕ್ಕೆ.. ''ಎನ್ನುತ್ತಾ ನಕ್ಕೆ. 

''ಅಕ್ಕೋ ನೀನ್ಯಾವತ್ತೂ ನಗ್ತೀಯ.. ನಂಬದೆ ಇಲ್ಲ.. ಸುಳ್ಳಲ್ಲ ಅಕ್ಕಾ. '' ಎನ್ನುತ್ತಾ ನನ್ನನ್ನು ನಂಬಿಸಲು ಸಾಧ್ಯವಾಗದಿದ್ದಿದ್ದಕ್ಕೆ ಮತ್ತೇನೂ  ತೋಚದೆ   ಗೋಡೆ ಪಕ್ಕದಲ್ಲಿ ಹರಿಯುತ್ತಿದ್ದ ಇರುವೆಯೊಂದನ್ನು ಹೊಸಕಿ ಕೊಂದಳು...!
''ಅಯ್ಯೋ ರುಕ್ಕಮ್ಮ....! ಇರುವೆ ಕೊಂದ್ಯಲ್ಲೇ...! ಅದು ದೆವ್ವವಾಗಿ ಬಂದು ಕಾಡಿದರೆ ಎನ್ಕಥೆ...?''
 '' ಹೋಗಕ್ಕೋ.. ಇರುವೆ ಎಲ್ಲಾ ದೆವ್ವ ಆಗಲ್ಲಕ್ಕೋ ''
'' ಅಲ್ವೇ...    ಇರುವೆ ಯಾಕೆ ದೆವ್ವ ಆಗ್ಬಾರ್ದೂ..?   ಎಲ್ಲರಿಗೂ ಒಂದೇ ಅಲ್ವೇನೆ ಜೀವ..? ಅದು ಬಸರಿಯಾಗಿತ್ತಾ...? ಬಾಳ೦ತಿಯಾಗಿತ್ತಾ...? ಮಕ್ಕಳಿಗೆ ಅಂತ ಆಹಾರ ಹುಡುಕೋಕೆ ಬಂದಿತ್ತಾ ಅನ್ಯಾಯವಾಗಿ ಇರುವೆ ಕೊಂದ್ಯಲ್ಲೇ.    ಅದು ದೆವ್ವ ಆಗಿ ಕಾಡತ್ತೆ ಇರು.  ''
  ಪಾಪ ರುಕ್ಕಮ್ಮ ಯೋಚಿಸತೊಡಗಿದಳು..


ನಾನೂ ಯೋಚನೆಗೆ ಬಿದ್ದೆ....!  ಮನುಷ್ಯರು ಮಾತ್ರ ದೆವ್ವವಾಗುವುದೇ ...? ಇರುವೆ ಯಾಕಾಗಬಾರದು..?
ಅದು ಬಸುರಿಯೋ  ಬಾಳಂತಿಯೋ  ಆಗಿದ್ದು ಸತ್ತರೆ ಪ್ರೇತವಾಗಲಾರದೆ..? ಗೂಡಿನಲ್ಲಿ ಮೊಟ್ಟೆ, ಮರಿಗಳಿದ್ದು ಅವಕ್ಕೆ ಆಹಾರ ತೆಗೆದುಕೊಂಡು ಹೋಗಬೇಕಾದರೆ ನಮ್ಮ ಕಾಲಿಗೆ ಸಿಕ್ಕಿ ಸತ್ತರೆ ಅದು ದೆವ್ವವಾಗಿ ನಮ್ಮನ್ನು ಕಾಡಬಹುದೇ..?
ನಾಯಿ ಆಕ್ಸಿಡೆಂಟ್ ನಲ್ಲಿ ಸತ್ತರೆ ದೆವ್ವವೇನಾದರೂ ಆಗಬಹುದೇ..?  ಹಸು ಕರು ಹಾಕುವಾಗೇನಾದರೂ ತೊಂದರೆಯಾಗಿ ಬಳಲಿ ಸತ್ತಿದ್ದರೆ..?
ಮಾಂಸಾಹಾರ ಸೇವಿಸುವವರು ಅದೆಷ್ಟು ಪ್ರಾಣಿಗಳನ್ನು ಕೊಂದಿರುವುದಿಲ್ಲ.. ತಿಂದಿರುವುದಿಲ್ಲ.. ಅವೆಲ್ಲ ದೆವ್ವವೋ ಪ್ರೇತವೋ ಆಗಿ ಅವರುಗಳನ್ನು ಕಾಡಬಹುದೇ..?


ಅದೇ ಮನುಷ್ಯರಲ್ಲಿ ಅಕಾಲದಲ್ಲಿ, ಬಸುರಿಯೋ, ಬಾಳಂತಿಯೋ ಸತ್ತರೆ ಅವರುಗಳ  ಆತ್ಮ ಅತೃಪ್ತಿಯಿಂದ ಪ್ರೇತವೋ, ಪಿಶಾಚಿಯೋ, ದೆವ್ವವೋ ಮತ್ತಿನ್ನೇನೋ ಆಗಿ ಮನುಷ್ಯರಿಗೆ ಕಾಟ ಕೊಡುತ್ತವೆ ಅನ್ನುತ್ತಾರಲ್ಲ...! ಯಾಕೆ ಕಾಟ ಕೊಡಬೇಕು..?
ಇಷ್ಟು ದಿನ ಆದರೂ ನನಗೆ ಒಂದೂ ದೆವ್ವ ಕಾಣಿಸಿಲ್ಲ..

ಪ್ರಾಣಿಗಳಲ್ಲಿ ದೆವ್ವ, ಭೂತ ಕಾನ್ಸೆಪ್ಟ್ ಇಲ್ಲ ಅನ್ನೋಣವೇ...?  ಆತ್ಮ ಅನ್ನುವುದರ ಕಾನ್ಸೆಪ್ಟ್ ಎಲ್ಲರಿಗೂ   ಒಂದೇ ತಾನೇ..? ಹೇಳುವುದಿಲ್ಲವೇ ... ಪಾಪ ಮಾಡಿದವರು ಮುಂದಿನ ಜನ್ಮದಲ್ಲಿ ನಾಯಿಯೋ,ನರಿಯೋ ಆಗಿ ಹುಟ್ಟುತ್ತಾರೆಂದು...! ಅದೆಷ್ಟೋ ಜನ್ಮದ ಪುಣ್ಯದಿಂದಾಗಿ ಮನುಷ್ಯ ಜನ್ಮ ಸಿಕ್ಕಿತು ಎಂದು..
ಚರಾಚರ ಜೀವಿಗಳಲ್ಲೆಲ್ಲಾ ಇರುವುದು ನಾನೆ ಎ೦ದು ಶ್ರೀಕೃಷ್ಣನೇ  ಹೇಳಿದ್ದಾನೆ.. ಎಂದು ಬಲ್ಲವರು ಹೇಳುತ್ತಾರೆ..ಅಂದರೆ ಭೂತದಲ್ಲಿ, ಪಿಶಾಚಿಯಲ್ಲಿ,ಪ್ರೇತದಲ್ಲಿ,   .... ಯಾರಿದ್ದಾರೆ..? ಭೂತ  ಜೀವಿಯಲ್ಲವೇ..? ಸತ್ತ ಮೇಲೆ ಆಗುವುದು ಭೂತವೆಂದಾದರೆ ಅದು ನಿರ್ಜೀವ...  ಅಂದರೆ ಅದರಲ್ಲೂ ಇದ್ದದ್ದು ಶ್ರೀ ಕೃಷ್ಣನೇ ಆದಂತಾಯಿತಲ್ಲವೆ..? ಎಲ್ಲದರಲ್ಲೂ ಅವನೇ ಇದ್ದಾನೆ ಅಂದರೆ ಈ ಭೂತ ಯಾರು..?


ಆತ್ಮ ಕಾನ್ಸೆಪ್ಟ್ ಒಂದೇ ಅಂದರೆ ಭೂತ ಅನ್ನುವುದು ನಿಜ ಅನ್ನುವುದಾದರೆ, ಎಲ್ಲ ತರದ ಪ್ರಾಣಿಗಳೂ ಅಕಾಲದಲ್ಲಿ ಸತ್ತರೆ, ಅತೃಪ್ತಿಯಿಂದ ಸತ್ತರೆ ಪ್ರೇತವೇ ಆಗುತ್ತವೆಂದಾಯ್ತು ..ಇಲ್ಲ ಕೆಳಸ್ತರದ ಪ್ರಾಣಿಗಳು ಪ್ರೇತ  ಆಗೋಲ್ಲ ಅಂತಂದ್ರೆ  ಮನುಷ್ಯರಲ್ಲೂ ಪ್ರೇತ, ಪಿಶಾಚಿ ಎಲ್ಲಾ ಇಲ್ಲ ಅಂತಲೂ ಆಗಬಹುದು. 

ಪ್ರಾಣಿಗಳಲ್ಲಿ ಈ ತರದ್ದು ಇಲ್ಲ ಅಂದರೆ ಮನುಷ್ಯರಲ್ಲಿ ಮಾತ್ರ ಯಾಕಿರ ಬೇಕು..?ಮನುಷ್ಯನಿಗೆ ಯೋಚಿಸಲು ಬರುತ್ತೆ ಅಂತಲೇ ..?
ನರವ್ಯೂಹ ಬೆಳೆದಿದೆ ಅಂತಲೇ..? ಪ್ರಕೃತಿ ಮನುಷ್ಯನಿಗೆ ಯೋಚನಾ ಶಕ್ತಿ ಎನ್ನುವ ವರದೊಂದಿಗೆ ಭ್ರಮೆ, ಭಯ ಇತ್ಯಾದಿ   ಅಡ್ಡ ಪರಿಣಾಮವನ್ನೂ ಕೊಟ್ಟಿತೇ..?  

''ಗಿಲ್ಟ್ '' ಅನ್ನುವುದು ಮನುಷ್ಯನೊಬ್ಬನಲ್ಲೇ  ಬೆಳೆಯುವುದು..ಮತ್ತು ಬೆಳೆಸುವುದು ಜೊತೆಗೆ ಬಿಡಿಸಿಕೊಳ್ಳಲೆತ್ನಿಸುವುದು.   ತಪ್ಪಿತಸ್ತ ಮನೋಭಾವನೆಯೇ ಈ ರೀತಿಯ ಸಮಸ್ಯೆಗಳಿಗೆ   ದಾರಿ ಮಾಡಿಕೊಡುವುದಲ್ಲವೇ..?  ಈ ಭಾವನೆಗಳು  ಹುಟ್ಟುಟ್ಟುತ್ತಲೇ ಹಿರಿಯರಿ೦ದ ಮಕ್ಕಳಿಗೆ ಕಾಪಿ ಪೇಸ್ಟ್ ಆಗಿಬಿಟ್ಟಿರುತ್ತವೆ. ಏನೋ ತಪ್ಪು ಮಾಡಿದ್ದೇವೆಂದುಕೊಳ್ಳುವುದೂ, ಅದಕ್ಕೊಂದು ಶಾಂತಿ ಮಾಡಿಸುವುದು..ಹರಕೆ ಹೇಳಿಕೊಳ್ಳುವುದೂ .. ತಪ್ಪುಗಾಣಿಕೆ ಕಟ್ಟಿ  ತಪ್ಪಿತಸ್ತ ಮನೋಭಾವದಿಂದ ಬಿಡಿಸಿಕೊಳ್ಳಲೆತ್ನಿಸುವುದು..ಹೀಗೆ ನಾನಾ ತರದಲ್ಲಿ.   
ದೇವರು, ದೆವ್ವ ಎರಡೂ ವಿಚಾರ  ನಮ್ಮ ಮನಸಿನಲ್ಲೇ ಇರುವುದಲ್ಲವೇ..? ಅವೆಲ್ಲ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ ಅನ್ನುವುದು ಹೌದಾದರೂ  ಅದಕ್ಕಾಗಿ ಮಾಡದ ತಪ್ಪನ್ನು ಊಹಿಸಿಕೊಂಡು ಕೊರಗುವುದ್ಯಾಕೆ..?


ಇವಿಷ್ಟನ್ನೂ ರುಕ್ಕಮ್ಮನಿಗೆ ಹೇಳಿ ಸಮಾಧಾನಿಸುವಷ್ಟರಲ್ಲಿ ಸಾಕುಬೇಕಾಯಿತು..ಇನ್ನೂ ಒಂದಷ್ಟು ನೀವೂ ಹೇಳಿ ಪುಣ್ಯ ಕಟ್ಟಿಕೊಳ್ಳಿ...!!!  

Thursday, February 10, 2011

ಹುಡುಕಾಟ ...!!!!!

ಮಹಾನ್ 
ಕಾವ್ಯವೊಂದರ
ರಚನೆಗೆ 
ಮನಸ್ಸು
ಮಾಡಿದ್ದೇನೆ.!
ಹಾಗಾಗಿ 
ಯಾರೂ 
ಬಳಸದ 
ಪದಗಳನ್ನು 
ಹುಡುಕಾಡುತ್ತಿದ್ದೇನೆ...!!!!




Monday, January 31, 2011

ಗಾಂಧೀ ತಾತನ ಮನೆ

ಮೊನ್ನೆ  ನಟರಾಜ್ [ನನ್ನವರು] ಅಹಮದಾಬಾದಿಗೆ ಹೋಗಿದ್ದರು.  ಅಲ್ಲಿ ಸಬರಮತಿ ಆಶ್ರಮಕ್ಕೆ ಭೇಟಿ  ಕೊಟ್ಟು ಕೆಲ  ನೆನಹುಗಳನ್ನು ತಂದಿದ್ದಾರೆ..
ನೋಡಿ ನೀವೂನೂ ....ಗಾಂಧೀ ಅಜ್ಜನ ಮನೆಯನ್ನು.

ಸಬರಮತಿ ಆಶ್ರಮಕ್ಕೆ ಸ್ವಾಗತ




ಆಶ್ರಮದ   ಮುಖ್ಯ ದ್ವಾರದಲ್ಲಿ 


ಮಾಡಬಾರದ್ದು .....೧.೨.೩.
   
ಗಾಂಧೀಜಿ ಮತ್ತು ಕಸ್ತೂರಬಾ 


ಗಾಂಧಿ ಮಹಾತ್ಮನ ಹಸ್ತಾಕ್ಷರ 
 





ಗಾಂಧೀಜಿ  ನೆಲೆಸಿದ ಮನೆ 

ಆಶ್ರಮದ ಆವರಣ 







ಸಬರಮತಿ ನದಿ 
 
ಆಶ್ರಮದಲ್ಲಿ ನಟರಾಜ್ 



ಗಾಂಧೀಜಿ ಕುಳಿತುಕೊಳ್ಳುತ್ತಿದ್ದ ಸ್ಥಳ. ಸಂದರ್ಶಕರನ್ನು ಭೇಟಿಯಾಗುತ್ತಿದ್ದ ಕೊಠಡಿ. ಅವರು ಬಳಸುತ್ತಿದ್ದ ಗಾದಿ, ಮೇಜು, ಮಣೆ ಮತ್ತು ಚರಕವನ್ನು ಕಾಣಬಹುದು.


ಕಸ್ತೂರಬಾ ಅಡುಗೆ ಮಾಡುತ್ತಿದ್ದ ಸ್ಥಳ.


 ಅಗಲಿದ ಮಹಾತ್ಮ ........
ಈ ಚಿತ್ರವನ್ನೂ... ಇಂದಿನ ಪರಿಸ್ಥಿತಿಯನ್ನೂ ಹೋಲಿಸಿದರೆ   ಮಹಾತ್ಮನ ಧ್ಯೇಯೋದ್ದೇಶಗಳೆಲ್ಲ  ಸುಟ್ಟು ಭಸ್ಮವಾಗುತ್ತಿರುವಂತಿದೆಯಲ್ಲವೇ..?

ಮೇರಾ  ಭಾರತ್ ಮಹಾನ್ ...

Monday, January 24, 2011

ಆಲೆ ಮನೆ

   ಈ ಸಮಯದಲ್ಲಿ ನೀವೇನಾದರೂ ಮಲೆನಾಡಿನ ಕಡೆ ಹೋದರೆ ಅಲ್ಲೆಲ್ಲಾದರೂ  ನಿಮಗೆ  ಕಬ್ಬಿನ ರಸದ ಸುವಾಸನೆ,ಬೆಲ್ಲದ ನರುಗಂಪು   ಗಾಳಿಯಲ್ಲಿ  ತೇಲಿ ಬಂದು ನಿಮ್ಮ ನಾಸಾಗ್ರಗಳಲ್ಲಿ ಪ್ರವೇಶಿಸಿ ಮನಸ್ಸಿಗೆ ಆನಂದಾನುಭೂತಿಯನ್ನು ಕರುಣಿಸಿತೆಂದರೆ  ಹತ್ತಿರದಲ್ಲೆಲ್ಲೋ  ಆಲೆ ಮನೆ ಇರುವ ಸಾಧ್ಯತೆ ಇದ್ದೇ ಇದೆ  ಎಂದರ್ಥ. 

ಆಲೆಮನೆ ಅದೊಂದು ಹಬ್ಬ. ಊರಕಡೆ ಯಾರ ಮನೆಯಲ್ಲಾದರೂ ಆಲೆಮನೆ ಶುರುವಾಯಿತೆಂದರೆ ಬಂಧು ಬಳಗದವರನ್ನು, ಪರಿಚಯಸ್ತರನ್ನು ಕರೆದು ಹಬ್ಬದ ರೀತಿಯಲ್ಲಿ ಸಂಭ್ರಮಿಸುವುದು ಈಗಲೂ ಇದೆ.  ಆಲೆಮನೆಯಲ್ಲಿ ಹಾಲು ಬೆಲ್ಲದ ಜೊತೆಗೆ ಮಂಡಕ್ಕಿ ಕಂಬಳ, ಬೋಂಡದಾ  ಕಂಬಳ ಇತ್ಯಾದಿಗಳನ್ನೂ ಉತ್ಸಾಹೀ ಯುವಕರು  ಹಮ್ಮಿಕೊಳ್ಳುವುದುಂಟು ಕೆಲವೆಡೆ..


ಈಗೆಲ್ಲಾ ಆಲೆಮನೆಗಳಲ್ಲಿ ಆಧುನಿಕ ಯಂತ್ರಗಳನ್ನು ಬಳಸಿ ಕೆಲಸವನ್ನು ಸುಲಭೀಕರಿಸಿ ಕೊಳ್ಳಲಾಗುತ್ತಿದೆ.ಆದರೆ ಕೋಣ ಕಟ್ಟಿ ''ಆಲೆಕಣೆ  '' ತಿರುಗಿಸುವ ಆ ಒರಿಜಿನಲ್ ಆಲೆಮನೆ ಮಾತ್ರಾ ಒಂದು ರೀತಿಯ ಆಹ್ಲಾದ ಉಂಟುಮಾಡುತ್ತದೆ. ಒಂದು ಊರಿಗೆ ಕಣೇ ಬಂತೆಂದರೆ ಆ ಊರವರೆಲ್ಲರಿಗೂ ಆಲೆಮನೆಯ ಸಂಭ್ರಮ.ಈಗೀಗ  ಕೋಣ ಸಾಕುವವರೂ ಕಡಿಮೆಯಾಗಿದ್ದಾರೆ. ಮತ್ತು ಕೋಣ ಕಟ್ಟಿದರೆ ಬಿಸಿಲಿನಲ್ಲಿ ಕೊಣಕ್ಕೆ ಆಯಾಸವಾಗುತ್ತದೆಂಬ ಕಾರಣಕ್ಕೆ ಸಂಜೆ ತಂಪು ಹೊತ್ತಿನಲ್ಲಿಯೇ ಕೆಲಸ ಮಾಡಬೇಕು. ರಾತ್ರಿಯಿಡೀ ಕೆಲಸ. ಕ್ರಷರ್ ನದು ಆ ತೊಂದರೆ ಇಲ್ಲ..


ಆಲೆ ಮನೆಯ ಕೆಲವು ಫೋಟೋಗಳು 

 
 ಕಬ್ಬಿನ ಗದ್ದೆ ..  


ಕೋಣ ಕಟ್ಟಿದ ಆಲೆ ಕಣೆ   

''ಹೊಯ್ ''ಎನ್ನುತ್ತಾ ಕೋಣ ಹೊಡೆಯುವುದು..ನೋಡುವುದು ಮಜವಾಗಿರುತ್ತದೆ. ಆಲೆ ಮನೆಗೆ ಹೋದರೆ ಸ್ವಲ್ಪ ಸಮಯ ಕೋಣ ಹೊಡೆದು ಚಟ ತೀರಿಸಿಕೊಳ್ಳುವವರೂ ಇದ್ದಾರೆ. 




 ಕಬ್ಬಿನ ರಸ ಬಾನಿಗೆ ಬಂದು ಬೀಳುವುದು 




 ಆಲೆ ಒಲೆ, ಕೊಪ್ಪರಿಗೆ  ಮತ್ತು ಬೆಲ್ಲದ ಪಾಕ  ನೋಡುತ್ತಿರುವುದು .

ಬೆಲ್ಲ ಪಾಕ ಬಂದಿದೆಯಾ ನೋಡಲು ಆಲೆಮನೆ ಗಳಲ್ಲಿ ಕೆಲ ಸ್ಪೆಶಲಿಷ್ಟರೂ ಇರುತ್ತಾರೆ.ಇಲ್ಲದಿದ್ದಲ್ಲಿ ಬೆಲ್ಲ ಅ೦ಟಾಗಿ ಬಿಡುವ, ಹೊತ್ತಿಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಬೃಹದಾಕಾರದ  ಆಲೆ ಒಲೆಗೆ ಸಾಕಷ್ಟು ಬೆಂಕಿ ಹಾಕಲು ದೊಡ್ಡ ದೊಡ್ಡ ಕುಂಟೆಗಳನ್ನು ಬಳಸುತ್ತಾರೆ.
 
 ಕೊಪ್ಪರಿಗೆಯಲ್ಲಿ  ನೊರೆ ಬೆಲ್ಲ



 ಪಾಕದ ಮರಿಗೆ 

ಹದವಾಗಿ  ಪಾಕ ಬಂದ ಬೆಲ್ಲವನ್ನು ಈ ಮರಿಗೆಗೆ ಬಗ್ಗಿಸುತ್ತಾರೆ.ಸಧ್ಯ ಮರಿಗೆ ಕಾಲಿಯಿದೆ. ಬೆಲ್ಲವನ್ನೆಲ್ಲಾ ಡಬ್ಬಗಳಿಗೆ ತುಂಬಿದ್ದಾರೆ.

 ಆಲೆ ಮನೆಯಲ್ಲಿ ಕಬ್ಬಿನ ಹಾಲು ಕುಡಿಯುವುದು, ನೊರೆ ಬೆಲ್ಲ ನೆಕ್ಕುವುದು ಅಲ್ಲಿಗೆ ಹೋದವರ ಖಾಯಂ ಕೆಲಸ. ಮಾವಿನ ಮಿಡಿ ಉಪ್ಪಿನಕಾಯಿ ಜೊತೆಗೆ,ಶುಂಟಿ ರಸದ ಜೊತೆಗೆ  ಹಾಲು ಕುಡಿಯುವುದು ಕೆಲವರ ಖಯಾಲಿ.

Friday, January 21, 2011

ಇಕೆಬಾನ

ಪ್ರಿಯೆ
ನಿನ್ನ ನಾಸಿಕ ಸಂಪಿಗೆ
ಕಣ್ಣು ಕೌಳಿ
ಕೆನ್ನೆ ಕೇದಗೆ
ಕಿವಿ ದಾಸವಾಳ
ದಾಲಿಂಬರದ ಹಲ್ಲು 
ಮುಂಗುರುಳು  ನುಲಿಕುಡಿ
ಶಂಖದ  ಕೊರಳು
ದೇಹ  ಕಡೆದಿಟ್ಟ ಬಾಳೆ ದಿಂಡು
ಎಂದೆಲ್ಲ ಹೇಳುವ ಬದಲು
ನೀ ಇಕೆಬಾನ ಎನ್ನಲೇ......????


[ ಇಕೆಬಾನ = ಜಪಾನಿ ಹೂ ಜೋಡಿಸುವ  ಕಲೆ
ಕಣ್ಣು ಕೌಳಿ = ಕೌಳಿ ಎನ್ನುವುದು ಕಪ್ಪುದ್ರಾಕ್ಷೀ ತರದ ಹಣ್ಣು.
ನುಲಿಕುಡಿ =ಟೆ೦ಡ್ರಿಲ್.. ಬಳ್ಳಿಗಳು ಹಬ್ಬುವಾಗ ಕೊಮ್ಬೆಯನ್ನು ಸುರುಳಿಯಾಕಾರದ ನುಲಿಕುಡಿಗಳಿ೦ದ ಬಳಸಿ ಹಿಡಿಯುತ್ತವೆ]

Thursday, January 13, 2011

ಚುಟುಕು ಕುಟುಕು.

 ಸ್ಯಾಡಿಸಂ  

ಮೋಡ ಬಿಕ್ಕಿ ಬಿಕ್ಕಿ ಅತ್ತು
ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿತು
ಭೂಮಿ ಮೋಡದ ಕಣ್ಣೀರು ನುಂಗಿ
ಗಹಿ ಗಹಿಸಿ ನಕ್ಕಿತು...!ಅಸ್ತಿತ್ವ ಬೆಳೆಸಿಕೊಂಡಿತು..!

ಪ್ರಲಾಪ...!

''ಚಿರೋಟಿಯಂತ ಕೆನ್ನೆಯವಳೇ
ಕೊಯ್ದಿಟ್ಟ ಮೈಸೂರ್ ಪಾಕಿನಂತ ಹಲ್ಲಿನವಳೇ..
ಹೊತ್ತಿ ಹೋದ  ಪೇಣಿಯಂತ ವೇಣಿಯವಳೇ..
ಚಕ್ಕುಲಿಯಂತ ಮುಂಗುರುಳಿನವಳೇ..
ಕ್ಯಾರೆಟ್ ಹಲ್ವದಂತಹ ತುಟಿಯವಳೇ
ನೀನು  ವೀಳ್ಯದೆಲೆಯಂತಹಾ ಕಣ್ಣುಗಳಿಂದ ನೋಡಿ
ಮುಗುಳುನಕ್ಕಾಗ ನೀರ್ಗೊಜ್ಜು ಕುಡಿದಂತೆ ಅಮಲೇರಿತು..! ''
ಎಂದು ಅಡುಗೆ ಭಟ್ಟನ ಮಗ ಪ್ರಲಾಪಿಸುತ್ತಿದ್ದ..

 ಕ್ರೌರ್ಯ..

 ಏನಿದೇನಿದು ..?
 ಪದ ಪ್ರಾಸವಿಲ್ಲ
ವ್ಯಾಕರಣ ಬಳಸಿಲ್ಲ
ಛಂದಸ್ಸಿನ ಚಂದವಿಲ್ಲ
ಪ್ರತಿಮಾ ವಿಶೇಷವಿಲ್ಲ
ವ್ಯುತ್ಪತ್ತಿ  ಸಾಲದು
ಭಾವುಕತೆ ಕೊಂಚ ಜಾಸ್ತಿಯಾಯ್ತು
ಪಂಚ್ ಇಲ್ಲ ಪನ್ ಇಲ್ಲ
ರೋಮಾಂಚನ ಇಲ್ಲವೇ ಇಲ್ಲ
ಎಂದೆಲ್ಲಾ ಹಾಡಿ ಹೊಗಳಿ
ಕವಿತೆಯೊಂದರ
ಕೊಲೆಮಾಡಿದ
ವಿಮರ್ಶಕ..!

ಸರ್ವರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು 

Monday, January 10, 2011

ಕವಿತೆ


ಅವಿತಿಟ್ಟುಕೊಳ್ಳಲಾರದೆ
 ಕಲ್ಪನಾ ಸಾಗರದಲೆಯೊಂದು  
ಬಂದು ಮಾನಸ  ದಡಕ್ಕಪ್ಪಳಿಸಿ 
ಹೆಜ್ಜೆ ಗುರುತನೊಂದುಳಿಸಿ  ಕವಿತೆಯಾಯ್ತು
ಭಾವಾ೦ಭುದಿಯಲಿ  ತೇಲಿ ತೇಲಿ 
ಛ೦ದಸ್ಸಿನ ಚಂದವಿರದಿದ್ದರೂ 
ವ್ಯಾಕರಣದ ಹಂಗಿರದಿದ್ದರೂ 
ಮನಕ್ಕೊಪ್ಪುವ   ಭಾವಗೀತೆಯಾಯ್ತು 

ದಡವನಪ್ಪಿದ್ದು ಲವಣವೋ ಹವಳವೋ 
ಮರಳೋ ಹರಳೋ ಶಂಖವೋ  ಶೃ೦ಖಲೆಯೊ 
 ತಬ್ಬಿದವನಿಗೆ  ಗೊತ್ತು
ಅಂದವೋ ಅನುಬಂಧವೋ 
ಚಂದವೋ ಸ್ವಚ್ಚಂದವೋ ಸ್ಮೃತಿಯೋ  ವಿಸ್ಮೃತಿಯೋ 
ಸವಿದವನಿಗೆ ಗೊತ್ತು

ಕಲ್ಪನೆಗಿದೆಯೇ  ಎಲ್ಲೆ
ಹೃದಯ ಪಲುಕಿದಂತೆಲ್ಲಾ
ತೆರೆಯಾಗಿ ಅಲೆಯಾಗಿ ದಿಬ್ಬಣದಂತೆ
ಮೆರವಣಿಗೆ ಹೊರಡುವುದರ  ಪರಿಗೆ
ಬೆರಗಾಗಿ ಮೈಮರೆವಾಗಿ 
ಚಲಿಸಲಾಗದೆ ಹಾಗೇ ಶಿಲೆಯಾದೆನಲ್ಲಿಯೇ ..! 

Tuesday, December 28, 2010

ನನಗೂ ಜ್ಞಾನೋದಯ ಆಯ್ತು....!!!!

ನಾನು  ಹೋಳಿಗೆ ಮಾಡಿದೆ....!! 

ಇದೇನ್ಮಹಾ..? ಹೋಳಿಗೆ ಎಲ್ಲರೂ ಮಾಡ್ತಾರೆ.ನಾನೂ ಮಾಡ್ತೇನೆ.ನಮ್ಮಮ್ಮನೂ ಮಾಡ್ತಾರೆ... ಅಂತ ಅಂದುಕೊಳ್ತೀರೇನೋ ?


ಈ ಮೊದಲೂ ಹೋಳಿಗೆಯನ್ನು ನಾನು  ಮಾಡಿದ್ದೆ .ಬೇರೆ ತರದ ಅಡುಗೆಯನ್ನೂ ಮಾಡ್ತೇನೆ.  ಚೆನ್ನಾಗಿ  ಇರುತ್ತದೆ  ಎಂದು ತಿ೦ದವರು ಹೇಳುತ್ತಾರೆ....!  ಅಂದರೆ ಸಾಂಬಾರು ಸಾಂಬಾರಿನಂತೆಯೇ, ಉಪ್ಪಿನಕಾಯಿ ಉಪ್ಪಿನಕಾಯಿಯಂತೆ, ನೀರ್ಗೊಜ್ಜು  ಅದರಂತೆಯೇ,ಪಾಯಸವಾಗದ ಕೇಸರೀಬಾತೂ,  ಪಾನಕ ಬರೀ ನೀರಾಗದೆ ಪಾನಕವಾಗಿಯೇ ಇರುತ್ತದೆಂದು ಉಳಿದವರು ಹೇಳಿದ್ದು ಹೌದು. 
ನೀವು  ಮಾಡಿದ ಅಡುಗೆಯ ರುಚಿ   ನಿಮಗೆ  ಗೊತ್ತಾಗುವುದಿಲ್ಲವೇ...? ಮತ್ತೆ ಪ್ರಶ್ನೆ  ಕೇಳಬೇಡಿ. ನಮ್ಮ ಮುಖ ನೋಡಿಕೊಳ್ಳಲು ನಮಗೆ ಕನ್ನಡಿ ಬೇಕು.
  


 ಈ ಸಲ ಹೋಳಿಗೆ ಮಾಡಿದೆ ....!!  ಮಾಡ್ತಾ ಮಾಡ್ತಾ ಮೈಮರೆತು ಹೋದೆ.  ಕರೆಕ್ಟಾಗಿ ನಲವತ್ತೊಂಬತ್ತು ಹೋಳಿಗೆ ಆಯ್ತು.ಜೊತೆಗೆ  ನನಗೂ ಜ್ಞಾನೋದಯ ಆಯ್ತು....!!!!


ಹೌದು...ಹೌದಪ್ಪಾ... ಲೈಫು ಇಷ್ಟೇನೆ..!
ಯಾರೋ ಕಣಕದಲ್ಲಿ ಹೂರಣ ತುಂಬಿ ಬಾಳೆ ಎಲೆ ಮೇಲಿಡುವರು . ಮತ್ಯಾರೋ ಅದನ್ನು ಚಂದಕ್ಕೆ, ಮನ ಬಂದಂತೆ ಲಟ್ಟಿಸುವರು. ಇನ್ಯಾರೋ ಬಿಸಿಕಾವಲಿಯ ಮೇಲೆ ಹಾಕಿ ಕೌಚಿ ಮಗುಚಿ ಮಾಡುವರು.ಹದವಾಗಿ ಬೇಯಿಸಿದರೆ ಹೋಳಿಗೆ ಸವಿಯಲು ಸಿದ್ಧ.
ಇಷ್ಟೇ ಜೀವನ.ಈ ಜೀವನ ಎಷ್ಟೊಂದು ಸಿಹಿಯಲ್ಲವೇ..? ಎಷ್ಟೊಂದು ರುಚಿಯಲ್ಲವೇ..?

ಮತ್ತೇನು ಕಷ್ಟ ..? 
ಕಷ್ಟ ಹೋಳಿಗೆಯ ಕ್ವಾಲಿಟಿಯ ಮೇಲೆ ಇರುವುದು ..ಸೃಷ್ಟಿಕರ್ತರ ಚಾತುರ್ಯದ ಮೇಲಿರುವುದು.. ಅನ್ನಿಸ್ತಾ ಇದೆ.  ಪ್ರಶ್ನೆಗಳು  ಅನೇಕ.


ಎಲ್ಲರ ಮನೆ ಹೋಳಿಗೆಯ ಹೂರಣವೂ ಸಮನಾಗಿ ಸಿಹಿ ಇರುವುದೇ..?
ಕಣಕ ಹದ ಬಂದಿತ್ತೆ..?
ಹೂರಣ ಹೊರ ಬರದಂತೆ ಕಣಕದಿಂದ ಒಂದೇ ಸಮನಾಗಿ ತುಂಬಿದ್ದರೆ..?
 ಲಟ್ಟಿಸುವಾಗ ನುರಿತವರ ಕೈಗೆ ಸಿಕ್ಕಿತ್ತೇ..? ಲಟ್ಟಣಿಗೆಯಿಂದ ಲಟ್ಟಿಸುವಾಗ ಹೂರಣವೇನಾದರೂ ಕಣಕದಿಂದ ಹೊರ ಬಂದಿತ್ತೆ..? ಕಣಕ ಲಟ್ಟಣಿಗೆಗೆ  ಮೆತ್ತಿಕೊಂಡಿತ್ತೆ..? ಆಕಾರ ಸರಿಯಾಗಿತ್ತೋ ಅಥವಾ ಯಾವ ದೇಶದ್ದೋ ನಕ್ಷೆಯನ್ನು   ಹೋಲುತ್ತಿತ್ತೋ..? ಬಾಳೆ ಎಲೆಯಿ೦ದ ತೆಗೆದು ಕಾವಲಿಗೆ ಹಾಕುವಾಗಲೇನಾದರೂ ಹರಿದು ಹೋಯಿತಾ...? ಕಾವಲಿ ಸೌಟಿನಿಂದ  ಮಗುಚಿ ಹಾಕುವವರು  ಮೊದಲ ಪದರ ಸರಿಯಾಗಿ ಬೆ೦ದ ನಂತರ ಮಗುಚಿದರೋ ಇಲ್ಲವೋ..?ಕಾವಲಿಗೆ ಸರಿಯಾಗಿ ಎಣ್ಣೆ ಹಚ್ಚಿಕೊಂಡಿದ್ದರೋ ಇಲ್ಲವೋ...? ಹೋಳಿಗೆ ಹತ್ತಿತೆ..?ಹರಿಯಿತೆ..?ಗ್ಯಾಸ್ ಖಾಲಿಯಾಗಿ ಬೆಂಕಿ ಆರಿ ಅರೆ ಬೆಂದಿತೆ..? ಎರಡೂ ಮಗ್ಗುಲು ಬೆಂದ ನಂತರವಷ್ಟೇ ಹೋಳಿಗೆಯನ್ನು ನಿಧಾನಕ್ಕೆ ಮಡಚಿ  ತೆಗೆದು ಬಿಳಿ ಬಟ್ಟೆಯ ಮೇಲೆ ಹಾಕಬೇಕು..? ಪೇಪರಿನ ಮೇಲೆ ಹಾಕಿದರೆ ಹೋಳಿಗೆಗೆ   ಪೇಪರ್ ವಾಸನೆ  ಹಿಡಿದುಕೊಳ್ಳುತ್ತದೆ  ಎಚ್ಚರ ಮುಖ್ಯ. ಇದೆಲ್ಲಾ ಸರಿಯಾಗಿ ಅನುಸರಿಸಿದರೆ ಚಂದದ, ರುಚಿಯಾದ ಹೋಳಿಗೆ ಲಭ್ಯ. 


ಅರ್ಥ ಆಗ್ತಾ ಇದೆ.  ಹಾಗೇ ನಮ್ಮ ಬದುಕೂ ಅಲ್ಲವೇ..?  ಪ್ರಕೃತಿ ಮತ್ತು ಪೋಷಣೆ ಸರಿಯಾಗಿದ್ದಲ್ಲಿ,ಒಂದಕ್ಕೊಂದು ಪೂರಕವಾಗಿದ್ದಲ್ಲಿ  ಮಾತ್ರ ಚಂದದ ಜೀವನ ಸಾಧ್ಯ.. 
ಯಾರೋ ಕಣಕದಲ್ಲಿ  ತುಂಬಿದ ಹೂರಣದ ಉಂಡೆಯಂತೆ ಮಗುವೊಂದನ್ನು  ಈ ಪ್ರಪಂಚದ ಬಾಳೆ ಎಲೆ ಮೇಲೆ ತಂದಿಡುವರು. ಅವರೊಂದಿಗೆ  ಮತ್ಯಾರೋ ಇನ್ಯಾರೋ ಸಮಾಜದ ಜನರು ಲಟ್ಟಿಸಿ ಸಂಸ್ಕಾರ ಕೊಟ್ಟು  ನಮ್ಮದಾದೊಂದು  ರೂಪ ಕೊಡುವರು . ಅದರಂತೆ ಕಷ್ಟ ನಷ್ಟಗಳ  ಕಾವಲಿಯ ಮೇಲೆ  ಸುತ್ತಲಿನ ಜನ   ಕೌಚಿ ಮಗುಚಿ ಹಾಕಿ ನಮ್ಮ ತನವನ್ನು ಪರೀಕ್ಷಿಸುವರು. ಚಂದದ ಹೊಂಬಣ್ಣ  ನೋಡಿ ಹಿರಿ ಹಿರಿ ಹಿಗ್ಗುವರು. ಮತ್ಯಾರೋ ಹೊತ್ತಿಸಿಕೊಂಡು,  ಹರಿದುಕೊಂಡು ಸಹಿಸಲಾರದೆ ಕುಗ್ಗುವರು. ಇದೆಲ್ಲದರ ಒಟ್ಟುರೂಪ  ನಾವು, ನಮ್ಮ ಜೀವನ.


ಅತ್ಯುತ್ತಮ  ವಂಶವಾಹಿಗಳು ,  ಉತ್ತಮ ಸಂಸ್ಕಾರ, ಯೋಗ್ಯ ಪರಿಸರ ಇದ್ದಲ್ಲಿ, ಸಿಕ್ಕಲ್ಲಿ ಮಗುವೊಂದು ಉತ್ತಮ ಮಾನವನಾಗಿ ಬೆಳೆಯುವುದು.
ಯಾವುದಾದರೊಂದು ಕೊರತೆಯಿದ್ದಲ್ಲಿ ಕೆಲವಷ್ಟಕ್ಕೆ ಸೀಮಿತವಾಗುವುದು.......

ಹೀಗೆ....ನಮ್ಮದೇನಿಲ್ಲ. ಎಲ್ಲಾ ನೇಚರ್  ಎಂಡ್  ನರ್ಚರ್.


 ಹೋಳಿಗೆ ಮಾಡ್ತಾ ಮಾಡ್ತಾ ಮಾಡ್ತಾ....... ಜ್ಞಾನೋದಯವಾದದ್ದು ಹೀಗೆ....!!!


ನನ್ನ ಕೊರ್ತಾ ತಾಳಲಾರದೆ ನಿಮಗೀಗ ಮೂರ್ಚೆ ಬರುವಂತಾಗಿರಬಹುದೇ..?ಯೋಚಿಸುತ್ತಿದ್ದೇನೆ. ಮಾಡಿದ ಹೋಳಿಗೆ ಮಿಕ್ಕಿದೆ.ತಿಂದೂ, ನೋಡೀ  ಬಾಯಿ ಮನಸ್ಸು ಸಿಹಿ ಮಾಡಿಕೊಳ್ಳಿ.





ಬರಲಿರುವ ಹೊಸ ವರುಷ  ೨೦೧೧ ನಿಮಗೆಲ್ಲರಿಗೂ  ಶುಭ ತರಲಿ.

[ವಿ. ಸೂ. ಅಕ್ಷಯ ಬಟ್ಟಲಲ್ಲಿ ಇದ್ದದ್ದು ನಾಲ್ಕೇ ಹೋಳಿಗೆ. ಮೊದಲು ಬಂದವರಿಗೆ ಆಧ್ಯತೆ...:-))  ]

Monday, December 20, 2010

ಅಡಿಕೆ ಒಲೆಯ ಬೆಂಕಿಯ ನೆನಪಲ್ಲಿ.

ಈಗೊಂದೆರಡು ಮೂರು ದಿನದಿಂದ ಚಳಿ ಯಾವ ಪರಿ ಬಿದ್ದಿದೆಯೆಂದರೆ ಹಳೆ ನೋವುಗಳೆಲ್ಲ ಮರುಕಳಿಸಿ ಬಿಟ್ಟಿವೆ.ಚಿಕ್ಕವರಿರುವಾಗ ಆಡುವಾಗ, ಓಡುವಾಗ, ನಡೆಯುವಾಗ ಬಿದ್ದಿದ್ದರದ್ದು, ಜಪ್ಪಿಸಿಕೊಂಡಿದ್ದು, ಜಜ್ಜಿಕೊಂಡಿದ್ದು, ಇನ್ಜಕ್ಷನ್ನು ತಗೊಂಡಿದ್ದರದ್ದು ಎಲ್ಲದರ ನೋವೂ ಈ ಚಳಿಯಲ್ಲಿ ಹೊಸತಾಗಿ ಬಂದಂತೆ ನಗು ನಗುತ್ತಿದೆ. ಎಲ್ಲಾದರೂ ಹೊಡ್ಚಲು ಹಾಕಿಕೊಂಡು ಕೂರೋಣ ಅನ್ನಿಸುತ್ತಿರುವುದು ನೋವಿನ ವಿಶೇಷ.



    ಊರಲ್ಲಾಗಿದ್ದರೆ ಅಡಿಕೆ ಬೇಯಿಸುವ ಒಲೆ ಬುಡ ಬಿಡುವುದು ಬೇಡವಾಗಿತ್ತು.ಧಗ ಧಗ ಉರಿಯುವ ಬೆಂಕಿಯನ್ನು ನೋಡುತ್ತಾ , ಅದರ ಉರಿವ ಪರಿಗೆ ಬೆರಗಾಗುತ್ತಾ, ಕೊಳ್ಳಿ ನುರಿಯುತ್ತಾ,ಕುಂಟೆ ಸರಿಸುತ್ತಾ,  ಒಲೆ ಬುಡ ಕೆದಕುತ್ತ,  ಹಾಳೆ ಭಾಗ ಹಾಕುತ್ತಾ, ಅಡಿಕೆ ಬೇಯುವಾಗಿನ ತೊಗರಿನ ಕಂಪನ್ನು ಆಸ್ವಾದಿಸುತ್ತಾ  ಚಳಿ ಕಾಯಿಸ ಬಹುದಾಗಿತ್ತು.


ನನಗದೇ ನೆನಪಾಗುತ್ತಿದೆ.ಸಣ್ಣವರಿರುವಾಗ ನಾವು  ರಾತ್ರಿ  ಅಪ್ಪಯ್ಯ ಒಲೆ ಬೆಂಕಿ ಒಟ್ಟಿ ಅಡಿಕೆ ಬೇಯಿಸುವ ಹಂಡೆಯಲ್ಲಿ  ದೊಡ್ಡ ಜಾಲರಿ ಸೌಟಿನಿಂದ ಅಡಿಕೆಗಳನ್ನು ಕೌಚಿ ಮಗುಚಿ ಮಾಡುತ್ತಿದ್ದರೆ ನಾನು ನನ್ನಕ್ಕ ಅಂದಿನ ಶಾಲಾ ವಿಧ್ಯಮಾನಗಳನ್ನು  ಹಂಚಿಕೊಳ್ಳುತ್ತಾ ಚಳಿ ಕಾಯಿಸುತ್ತಿದ್ದೆವು.ಗೋಣೀ ಚೀಲವೋ, ಮೆಟ್ಟುಗತ್ತಿ ಮಣೆಯೋ ಯಾವುದಾದರೊಂದು ಸುಖಾಸನ.


ಮಲೆನಾಡಿನಲ್ಲಿ ಚಳಿ ಬಹಳ. ಆಗೆಲ್ಲಾ ಬೇಸಿಗೆಯಲ್ಲೂ ಒಂದು ಕಂಬಳಿ ಹೊದೆಯುವಷ್ಟು ಚಳಿ ಇರುತ್ತಿತ್ತು.  ಒಲೆ ಮುಂದೆ ನಮ್ಮಿಬ್ಬರ ಜೊತೆ ಒಂದು ಪಕ್ಕದಲ್ಲಿ ನಾಯಿ 'ಜೂಲ' ಮತ್ತು  ಇನ್ನೊಂದು ಪಕ್ಕದಲ್ಲಿ  ಬೆಕ್ಕು 'ಸಿದ್ದಿ' ಖಾಯಂ ಹಕ್ಕುದಾರರು. ಚಳಿಯಲ್ಲಿ ಅವಕ್ಕೆ ಜಗಳಕ್ಕಿಂತಲೂ ಒಲೆಯೇ ಮುಖ್ಯವಾಗಿತ್ತು.ಆಗಾಗ ಜೂಲ ಮಾತ್ರಾ ಕಿವಿ ನಿಗುರಿಸಿ  ಬೆಕ್ಕಿನ ಕಡೆ ಒಮ್ಮೆ ಮತ್ತು ನಮ್ಮ ಕಡೆ ಒಮ್ಮೆ ನೋಡುವ ಕೆಲಸ ಮಾಡುತ್ತಿತ್ತು. ಸಿದ್ದಿ ಮಾತ್ರಾ ರಾಣಿಯಂತೆ ನಮಗೊರಗಿ ಪವಡಿಸುತ್ತಿತ್ತು.  ಎಷ್ಟಾದರೂ ಜಾತಿ ವೈಷಮ್ಯ ಇದ್ದೇ ಇರುತ್ತದೆ. ತನ್ನ ಬುದ್ಧಿ ಗೊತ್ತಾಗಿ ಹೋಯಿತೇನೋ ಒಡತಿಯರಿಗೆ  ಎನ್ನುವಂತೆ ಜೂಲ ಆಗಾಗ  ಮುಖ ಹುಳ್ಳಗೆ ಬೇರೆ ಮಾಡುತ್ತಿತ್ತು. 


ಅಣ್ಣಂದಿರಿಗೆ ಸುಲಿದ ಅಡಿಕೆಯ ಸಿಪ್ಪೆಗಳನ್ನು ಒಗೆಯುವ ಕೆಲಸ ಮತ್ತು ರಾತ್ರಿ ಪಾಳಿಯ ಅಡಿಕೆ ಸುಲಿಯುವವರಿಗೆ ಹಸಿ ಅಡಿಕೆ ರಾಶಿ ಮಾಡುವ ಕೆಲಸ. ಅವಿಷ್ಟು ಮಾಡಿ ಅವರೂ 'ಸರ್ಕಳ್ರೆ' ಎನ್ನುತ್ತಾ ನಮ್ಮ ಜೊತೆಗೂಡುತ್ತಿದ್ದರು. ಆ ಬೆಂಕಿಗೆ ಮುಖ ವೋಡ್ಡಿದರೂ ಬೆನ್ನಿಗೆ ಚಳಿ ಬಿಡದು. ಮತ್ತೆ ಸ್ವಲ್ಪ ಹೊತ್ತು ಬಿಟ್ಟು ಬೆನ್ನು ಕಾಯಿಸಿಕೊಳ್ಳುವುದು.ಮುಂಬಾಗ ಸೆಖೆ, ಬೆನ್ನಿಗೆ ಚಳಿ. ಸ್ವೆಟರ್ ಬೇರೆ ಇರುತ್ತಿತ್ತು.  ಅಪ್ಪಯ್ಯ ಮಾತ್ರಾ ಬನೀನನ್ನೂ ಹಾಕಿಕೊಳ್ಳದೆ ಹೆಗಲ ಮೇಲೆ ಟವೆಲ್ ಮಾತ್ರಾ ಹಾಕಿಕೊಂಡು  ಬರಿ ಮೈಯಲ್ಲೇ ಅಡಿಕೆ ಬೇಯಿಸುವ ಕೆಲಸ ಮಾಡುತ್ತಿದ್ದ.''ಚಳಿ ಆಗ್ತಲ್ಯನ ಅಪ್ಯ '' ಅಂದರೆ,''ಕೆಲಸ ಮಾಡ್ತಾ ಇದ್ರೆ ಚಳಿಯೆಲ್ಲಾ ನೆಗ್ದು ಬಿದ್ ಹೋಗ್ತು , ಪುಟ್ಟ ಪುಟ್ಟ ಕೈಯಲ್ಲಿ ನಿನ್ಗನೂ ಕೆಲಸ ಮಾಡಿದ್ರೆ  ಚಳಿ ಹತ್ರನೂ ಸುಳೀತಲ್ಲೇ'' ಎನ್ನುತ್ತಿದ್ದುದು ಈಗ ನೆನಪಿನಲ್ಲಿ ಸುಳಿಯುತ್ತಿದೆ. 

'ಬೆಂಕಿ ನೆಗ್ಯಾಡ್ತಾ ಇದ್ದು ನೋಡು' ಎಂದು ನನ್ನ ಎರಡನೇ ಅಣ್ಣ ತೋರಿಸುತ್ತಿದ್ದ. ದೊಡ್ಡ ದೊಡ್ಡ ಕುಂಟೆಯ ಇದ್ದಿಲಾದ ಭಾಗದಲ್ಲಿ ಕೆಲವೊಮ್ಮೆ ಹೊಳೆಯುವ ಮಣಿಗಳ ಸಾಲಿನಂತೆ ಕೆಂಡ ಉರಿಯುತ್ತಿತ್ತು. ಅದನ್ನು ನನಗೆ ವರ್ಣಿಸಲು ಕಷ್ಟವಾಗುತ್ತಿದೆ.ಅದನ್ನು  ನೋಡುತ್ತಿದ್ದರೆ  ಬೆಂಕಿ ನಕ್ಕಂತೆ ಭಾಸವಾಗುತ್ತಿತ್ತು.!


ಕೆಲವೊಮ್ಮೆ ಯಾರ ಮನೆಯಲ್ಲಾದರೂ ಮುಂಚೆಯೇ  ಆಲೆ ಮನೆ  ಶುರು ಆದರೆ ಕಬ್ಬು ತಂದು ಕೊಡುತ್ತಿದ್ದರು.ಕಬ್ಬುಸಿಗಿದು ತಿನ್ನುವ ಕೆಲಸವೂ ಒಲೆ ಮುಂದಿನ ಅಧ್ಯಾಯದಲ್ಲಿ ಸೇರಿಕೊಳ್ಳುತ್ತಿತ್ತು. ನನಗೆ ಕಬ್ಬು ತುಂಬಾ ಇಷ್ಟ. 'ಒಂದು ಹಲ್ಲು ಇರುವ ವರೆಗೂ ಕಬ್ಬು ತಿನ್ನುತ್ತೇನೆ ' ಎಂದು  ನಾನಾದರೂ ಆಗ ಘನಘೋರ  ಪ್ರತಿಜ್ಞೆಯನ್ನೇ  ಮಾಡಿದ್ದೆ. ಈಗ ಪ್ರತಿಜ್ಞೆಯನ್ನು  ಮುರಿದಿದ್ದೇನೆ.....!!


ಈಗ ಸ್ವೆಟರ್ ಹಾಕಿಕೊಂಡು   ಗಣಕ ಯಂತ್ರದ ಕೀಲಿ ಮಣೆಯ ಮೇಲೆ ಕುಟ್ಟುತ್ತಿದ್ದರೆ ಏಳುವುದಕ್ಕೆ ಮನಸ್ಸು ಬಾರದು. ಚಳಿ ಅಷ್ಟಿದೆ. ಚಳಿ ದೇಶದವರೆಲ್ಲ ಹೇಗಿರುತ್ತಾರಪ್ಪ...?  ಅಕ್ಷರ ದೋಷವಾಗಿದ್ದರೆ ನೀವೇ ಸರಿ ಮಾಡಿಕೊಳ್ಳಿ.  ಸರಿ ಮಾಡಲೂ ಚಳಿ.....! ನಾನು ಅಡಿಕೆ ಒಲೆಯ ಬೆಂಕಿ ಕಾಯಿಸುವ  ಕನಸು ಕಾಣುತ್ತಾ ಮನಸನ್ನು ಬೆಚ್ಚಗೆ ಮಾಡಿಕೊಳ್ಳುತ್ತೇನೆ.

Friday, December 17, 2010

ಇವುಗಳನ್ನೆಲ್ಲಾ ನೀವು ಎಲ್ಲಾದರೂ ನೋಡಿದ್ದೀರಾ..?

ಗಿಡಕ್ಕಷ್ಟು ನೀರ್ ಹಾಕಿ ಬತ್ತೆ.. ನೀವ್ ಅಲ್ಲಿ ಕೂಕಣಿ..

ದೈತ್ಯ ಚೇಳು ನೋಡಿದ್ರೆ ಭಯ ಆಗುತ್ತೆ.



 ಇವರು ಆದಿಮಾನವರು   ನಾಡಿಗೆ ಬಂದಿದ್ದಾರೆ ..ನಾಗರೀಕರಾಗಲು......!!!



ಹಾವಾಡಿಸುವವ ಹಾವನ್ನು ಮರೆತು ಇಲ್ಲೇ ಬಿಟ್ಟು ಹೋಗಿದ್ದಾನೆ...    ಬುಸ್ಸ್.....!!


 ಅಲ್ಲ ಮಾರ್ರೆ ... ಅಡಿಕಿತ್ತು  ಎಲಿಯಿಲ್ಲ..ಎಂತ ಮಾಡುದ್ ಹೇಳಿ ...



ಇವ್ರು ಹುಬ್ಬಳ್ಳಿ ಯಜಮಾನ್ರು ......   

ಇವುಗಳೆಲ್ಲಾ  ಕೊಡಚಾದ್ರಿ ತಪ್ಪಲಿನಲ್ಲಿರುವ ಸಿಂಹ ರೆಸಾರ್ಟ್ ನಲ್ಲಿ ನಿರ್ಮಿಸಲಾದ ಸಿಮೆಂಟಿನ ಶಿಲ್ಪಗಳು.ಕೊನೆಯ ಫೋಟೋದಲ್ಲಿ ನೇರಳೆ ಜುಬ್ಬದ ಆಸಾಮಿ ಮಾತ್ರ ಶಿಲ್ಪ.....!!!!

ವಂದನೆಗಳು.