Thursday, July 7, 2011

ಮಾನಸಿಕ ಖಿನ್ನತೆ. ಭಾಗ - ೧

ಈ ಮೊದಲು ನಾನು  ಖಿನ್ನತೆ ಯ ಬಗ್ಗೆ ಚೂರು ಪಾರು ಬರೆದಿದ್ದೆ.ಆ ಪೋಸ್ಟಿನಲ್ಲಿ ಒಂದು ಬಗೆಯನ್ನಷ್ಟೇ ವಿವರಿಸಿದ್ದೆ.
ಯಾರಿಗಾದರೂ ಖಿನ್ನತೆಯ [depression] ಸಮಸ್ಯೆ ಇದ್ದಲ್ಲಿ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ..? ಅವರು ಮೆಂಟಲ್ ಕೇಸು ಕಣ್ರೀ .. ಸ್ವಲ್ಪ ಹಾಗೆ.  ಜಾಸ್ತಿ ಮಾತಾಡ್ಸಕ್ಕೆ ಹೋಗಬೇಡಿ.  ಯಾವಾಗ ಹೇಗೆ ಅನ್ನೋದು ಗೊತ್ತಾಗಲ್ಲ.   ಈ ರೀತಿಯಲ್ಲಿ ನಮ್ಮ ವಿಚಾರ ಸಾಗುತ್ತದೆ.  ಖಿನ್ನತೆ ಅಂದರೆ ಹುಚ್ಚುತನವಲ್ಲ.ಡಿಪ್ರೆಶನ್ ಇರುವವರೆಲ್ಲ ಹುಚ್ಚರಲ್ಲ.


ಖಿನ್ನತೆಯಲ್ಲಿ ಅನೇಕ ವಿಧಗಳಿವೆ.
* ಮೇಜರ್ ಡಿಪ್ರೆಶನ್,
*  ಮಾದರಿಗೆ ಸರಿ ಹೊಂದದ ಎಟಿಪಿಕಲ್ ಡಿಪ್ರೆಶನ್,
* ಈ ಮೊದಲು ವಿವರಿಸಿದ ಡಿಸ್ಥೀಮಿಯ,
* ಮನೋ ವಿಕಾರತೆಯಿಂದ ಕೂಡಿದ ಸೈಕೊಟಿಕ್ ಡಿಪ್ರೆಶನ್,
* ಋತುಮಾನಕ್ಕೆ ತಕ್ಕಂತೆ  ಕಾಣಿಸಿಕೊಳ್ಳುವ  ಸೀಜನಲ್ ಆಫೆಕ್ಟಿವ್ ಡಿಸಾರ್ಡರ್,
*  ಬಾಳಂತಿ ಸನ್ನಿ ಎಂಬುದಾಗಿ ಪ್ರಚಲಿತವಿರುವ ಪೋಸ್ಟ್ ಪಾರ್ಟಂ ಡಿಪ್ರೆಶನ್ ಹಾಗೂ
*  ಬುದ್ದಿ ವಿಕಲ್ಪತೆಯಿಂದ ಕೂಡಿದ ಮ್ಯಾನಿಕ್ ಡಿಪ್ರೆಶನ್ ಅಥವಾ ಬೈ ಪೋಲಾರ್ ಡಿಪ್ರೆಶನ್.


ಡಿಪ್ರೆಶನ್ ಎಂದರೆ ಏನು ಮತ್ತು ಅದರ ಗುಣ ಲಕ್ಷಣಗಳೇನು..?

ಡಿಪ್ರೆಶನ್ ಎಂದರೆ,  ದಿನ ನಿತ್ಯ ಜೀವನಕ್ಕೆ ತೊಂದರೆ ಕೊಡುವ ದೀರ್ಘ ಕಾಲಿಕ ಮತ್ತು ಬದಲಾವಣೆಯಿಲ್ಲದ ಋಣಾತ್ಮಕ ಆಲೋಚನೆಗಳಿಂದ ಕೂಡಿದ ಮನಸ್ಥಿತಿ.

ಗುಣ ಲಕ್ಷಣಗಳೆಂದರೆ,

ಅನಾಸಕ್ತಿ - ಮೊದಲು ಇಷ್ಟ ಪಟ್ಟು ತೊಡಗಿಸಿ ಕೊಳ್ಳುತ್ತಿದ್ದ  ವಿಚಾರಗಳ ಬಗೆಗೆ ಆಸಕ್ತಿ ಹಿಮ್ಮುಖವಾಗುವುದು.



ತಪ್ಪಿತಸ್ಥ ಮನಸ್ಸು- ತನ್ನಿಂದ ಬೇರೆಯವರಿಗೆ ತೊಂದರೆ ಆಗುತ್ತಿದೆಯೇನೋ ಅಥವಾ ಯಾವುದೋ ತಪ್ಪು ಮಾಡುತ್ತಿದ್ದೇನೆ ಅನ್ನುವ ಆಲೋಚನೆಗಳು.

ಅಸಾಮರ್ಥ್ಯ-  ತನ್ನಿಂದ ಯಾವ ಕೆಲಸವೂ ಆಗದು, ಎಷ್ಟೇ ಚಿಕ್ಕ,ಸರಳ ಕೆಲಸ ಮಾಡುವಾಗಲೂ ಕೂಡಾ ನಿರುತ್ಸಾಹಿಗಳಾಗಿರುವುದು.


                                
ಒಂಟಿತನ - ಈ ಡಿಪ್ರೆಶನ್ನಿಗೆ ಒಂಟಿತನವೂ ಕಾರಣವಾಗಿರಬಹುದು ಮತ್ತು ಡಿಪ್ರೆಶನ್ ಆವರಿಸಿಕೊಂಡ ಮೇಲೆ ಒಂಟಿತನ ಅನುಭವಿಸಬಹುದು. ಉದಾಹರಣೆಗೆ, ಎಲ್ಲರೂ ಮಾತನಾಡುತ್ತಾ ಖುಷಿಯಾಗಿರುವಾಗ ಒಬ್ಬರೇ  ಸುಮ್ಮನೆ ಮೂಲೆಯಲ್ಲೋ, ಕೋಣೆಯಲ್ಲೋ ನಿರಾಸಕ್ತಿಯಿಂದ ಕುಳಿತುಕೊಂಡಿರುವುದು.ಒಬ್ಬರೇ ಒಂಟಿಯಾಗಿರುವುದಕ್ಕೂ, ಮನಸ್ಸಿನಲ್ಲೇ ಒಂಟಿತನವನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಹಾಸ್ಯ ಮಾಡುತ್ತಾ ಎಲ್ಲರೂ ನಗುತ್ತಿದ್ದರೂ ಖಿನ್ನತೆ ಇರುವವರು ಪ್ರತಿಕ್ರಿಯಿಸದೆ  ಒಂಟಿತನವನ್ನು ಅನುಭವಿಸುತ್ತಾರೆ.

ಹಸಿವು - ಕೆಲವರು ಆಹಾರವನ್ನೇ ಸರಿಯಾಗಿ ಸೇವಿಸುವುದಿಲ್ಲ. ಅಥವಾ ಪೌಷ್ಟಿಕಾಂಶದ ಕೊರತೆಯೂ ಕೆಲವು ಡಿಪ್ರೆಶನ್ನಿಗೆ ಕಾರಣವಾಗುತ್ತದೆ. ಮತ್ತೆ ಕೆಲವರು ಹೊಟ್ಟೆಬಾಕತನವನ್ನು ತೋರಿಸುತ್ತಾರೆ.ಈ ಬಗ್ಗೆ ವಿವರಣೆಗೆ  ನನ್ನ್.ಈ ಪೋಸ್ಟಿನಲ್ಲಿ ನೋಡಬಹುದು.

ನಿದ್ರೆಯಲ್ಲಿನ ಬದಲಾವಣೆ- ನಿದ್ರಾ ಹೀನತೆ [ insomnia ]  ಅಥವಾ ಅತಿನಿದ್ರೆ [ hypersomnia ] ಕಾಡಬಹುದು.

 ದೈಹಿಕ ಚಟುವಟಿಕೆಗಳು- ಕೆಲವೊಮ್ಮೆ ಅತಿಯಾದ ಚಟುವಟಿಕೆಯನ್ನೂ, ಕೆಲವೊಮ್ಮೆ ನಿಧಾನಪ್ರವೃತ್ತಿಯನ್ನೂ ಕಾಣಬಹುದು.

ಏಕಾಗ್ರತೆಯಲ್ಲಿನ ಅಸಾಮರ್ಥ್ಯ- ವಸ್ತು,ವಿಷಯ ಗಳನ್ನು ಗ್ರಹಿಸುವಲ್ಲಿ, ನಿರ್ಧಾರ ತೆಗೆದುಕೊಳ್ಳುವಲ್ಲಿ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ, ಮತ್ತು ನೆನಪಿನ ಶಕ್ತಿ ಕೂಡ ಕುಂಟಿತಗೊಳ್ಳಬಹುದು.ದೈಹಿಕ ಅಶಕ್ತತೆ ಕಾಣಿಸಿಕೊಳ್ಳಬಹುದು.

  ಕೆಲವೊಮ್ಮೆ ಅಸ್ಥಿರ, ಚಂಚಲ ಮನಸ್ಥಿತಿಯನ್ನೂ ಕಾಣಬಹುದು. ಬೇಗನೆ ಕಿರಿಕಿರಿಗೊಳಗಾಗುತ್ತಾರೆ.ಸುಮ್ಮನೆ ಸಿಟ್ಟಿಗೇಳುವುದು,
ಅನಗತ್ಯ ವಾದಕ್ಕಿಳಿಯಬಹುದು.

ಕೆಲವೊಮ್ಮೆ ಯಾವಾಗಲೂ ತಲೆನೋವು, ಬೆನ್ನುನೋವು, ಹೊಟ್ಟೆನೋವು, ಬೇಧಿ, ಮಲಬದ್ಧತೆ, ಸಂದುನೋವುಗಳು ಮುಂತಾದ ದೈಹಿಕ ಕಾಯಿಲೆಗಳನ್ನು ಅನುಭವಿಸಬಹುದು.  ವೈದ್ಯರಿಗೆ ಯಾವ ದೈಹಿಕ ತೊಂದರೆಯೂ ಕಾಣದಿರಬಹುದು.

ಹೆಚ್ಚಿನದಾಗಿ ಮಾನಸಿಕ ಖಿನ್ನತೆಯಿರುವವರು ಪ್ರಪಂಚದ ಬಗ್ಗೆ ಒಂದು ಋಣಾತ್ಮಕ ಮನೋಭಾವನೆಯನ್ನು ತೋರಿಸುತ್ತಾರೆ. ಅತೀ  ಕಾಳಜಿ,  ಅತೀ   ನಿರ್ಲಕ್ಷ್ಯ,  ಭವಿಷ್ಯದ  ಬಗೆಗೆ ಭಯ,ಗೊಂದಲ ಹೆಚ್ಚಾಗಿ ತೋರ್ಪಡಿಸುತ್ತಾರೆ.
ಪ್ರತಿಯೊಬ್ಬರೂ ನಮ್ಮ ಜೀವಮಾನದ ಒಂದಲ್ಲಾ ಒಂದು ಸನ್ನಿವೇಶದಲ್ಲಿ ಖಿನ್ನತೆಗೆ ಒಳಗಾಗಿಯೇ ಆಗುತ್ತೇವೆ.ಆದರೆ ಬಹುಬೇಗ ಮಾಮೂಲಿನ ಜೀವನ ನಡೆಸಲು ಶುರು ಮಾಡುತ್ತೇವೆ. ಕೆಲವೊಮ್ಮೆ ನೆನಪು ಮಾಡಿಕೊ೦ಡರೂ, ನಂತರ ನಿಧಾನಕ್ಕೆ ಮರೆತು ಬಿಡುತ್ತೇವೆ. ತೀವ್ರತೆ ಕಡಿಮೆಯಾಗ ತೊಡಗುತ್ತದೆ. ಆದರೆ  ದಿನದ  ಹೆಚ್ಚಿನ  ಭಾಗ  ಖಿನ್ನತೆಯಲ್ಲಿಯೇ ಇದ್ದರೆ ಮತ್ತು ತೀವ್ರತೆ ಮೊದಲಿದ್ದಂತೆಯೇ ಮುಂದುವರೆದುಕೊಂಡು ಹೋಗುತ್ತಿದ್ದರೆ  ಅಂತವರಿಗೆ   ತಜ್ಞರ  ಜರೂರತ್ತಿದೆ.

ಹಾಗಾದರೆ ಈ ಮಾನಸಿಕ  ಖಿನ್ನತೆಗೆ ಕಾರಣಗಳೇನು..?ಇದಕ್ಕೆ ಮುಖ್ಯ ಕಾರಣಗಳೆಂದರೆ,   

೧. ವಂಶಪಾರಂಪರ್ಯವಾಗಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನದಾಗಿ ಸಂಬಂಧಗಳಲ್ಲಿನ ಮದುವೆಯಾದರೆ ಅವರ  ಮಕ್ಕಳಲ್ಲಿ ಈ ಪ್ರವೃತ್ತಿ ಹೆಚ್ಚು. ಹತ್ತಿರದ ಸಂಬಂಧಿಗಳಲ್ಲಿ ಉದಾಹರಣೆಗೆ, ತಂದೆ ಅಥವಾ ತಾಯಿ, ಅಜ್ಜ ಅಜ್ಜಿ ಇವರುಗಳು ಖಿನ್ನತೆಯಿಂದ ಬಳಲುತ್ತಿದ್ದರೆ; ಅದು ಮುಂದಿನ ಸಂತತಿಗೆ  ವರ್ಗಾವಣೆಯಾಗುತ್ತದೆ.

೨.ನರಚೋದಕಗಳ ಅಸಮರ್ಪಕ ಸ್ರವಿಸುವಿಕೆ- ನಮ್ಮ ಎಲ್ಲ ಮಾನಸಿಕ ಕ್ರಿಯೆಗಳೂ ಕೆಲವು ರಾಸಾಯನಿಕ ವಸ್ತುಗಳಿಂದ ನಿರ್ವಹಿಸಲ್ಪಡುತ್ತಿರುತ್ತದೆ.ಈ ರಾಸಾಯನಿಕಗಳ ಸ್ರಾವದಲ್ಲಿ ಏರು ಪೇರು ಆದಾಗ  ಮೆದುಳಿನ ನರ ಕೋಶಗಳಿಗೆ ಸಮರ್ಪಕ ಸೂಚನೆಗಳು ಸಿಗದೇ ಕ್ರಿಯೆಯಲ್ಲಿ ವ್ಯತ್ಯಾಸವಾಗುತ್ತದೆ. ಕನೆಕ್ಷನ್ ತಪ್ಪಿ ಹೋಗಿರಬಹುದು. ರಾಂಗ್ ಕನೆಕ್ಷನ್ ಆಗಬಹುದು.  ಕೆಲವೊಮ್ಮೆ ಯಾವುದೋ ಸ್ವಿಚ್ ಒತ್ತಿದರೆ ಯಾವುದೋ ಲೈಟ್ ಹೊತ್ತಿಕೊಳ್ಳಬಹುದು.! ಎಲ್ಲಿಯೋ ಶಾಕ್ ಹೊಡೆಯಬಹುದು..!

೩.ಜೀವನದಲ್ಲಾಗುವ ಸಹಿಸಲಾಗದ ಆಘಾತ.- ಪ್ರೀತಿ  ಪಾತ್ರರ ಅಗಲುವಿಕೆ, ವ್ಯಾಪಾರ ವ್ಯವಹಾರದಲ್ಲಿ ಸೋಲು, ಅತಿಯಾದ ಕೆಲಸದ ಒತ್ತಡ, ಅತಿಯಾದ ನಿರೀಕ್ಷೆ ಇವುಗಳೆಲ್ಲ ಖಿನ್ನತೆಗೆ ಕಾರಣವಾಗುತ್ತವೆ.

 ಇದರ ಮುಖ್ಯ ಪರಿಣಾಮಗಳೇನು..?

ಸಾಮಾಜಿಕವಾಗಿ ಸುಖ ಜೀವನ ನಡೆಸಲು ಕಷ್ಟವಾಗುತ್ತದೆ. ಕೆಲಸ, ಕುಟುಂಬ, ಮಕ್ಕಳನ್ನು ನಿರ್ವಹಿಸುವುದರಲ್ಲಿ ಅಸಮರ್ಥತೆ ತೋರುತ್ತದೆ.

ಈ ನಡುವೆ ನನ್ನ ಆಪ್ತ ಗೆಳತಿಯೊಬ್ಬಳು ಈ ಮಾನಸಿಕ ಖಿನ್ನತೆಯ ಪರಿಣಾಮವಾಗಿ ನೇಣಿಗೆ  ಶರಣಾದಳು. ಡಿಪ್ರೆಶನ್ ನ  ಮುಖ್ಯ ಪರಿಣಾಮಗಳಲ್ಲಿ ಈ ಆತ್ಮ ಹತ್ಯೆಯೂ ಒಂದು.ಪ್ರಪಂಚದಲ್ಲಿ ಶೇಕಡಾ ನಾಲ್ಕು ಜನ ಈ ಮೇಜರ್  ಡಿಪ್ರೆಶನ್ ಗೊಳಗಾದವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಶೇಕಡಾ ಅರವತ್ತರಿಂದ ಅರವತ್ತೈದು ಜನ ಡಿಪ್ರೆಶನ್ ಅಥವಾ ಉಳಿದ  ಮಾನಸಿಕ ಸಮಸ್ಯೆಗೊಳಗಾದವರೇ  ಆಗಿರುತ್ತಾರೆ !  ಈ ಆತ್ಮಹತ್ಯಾ ಮನೋಭಾವನೆ  ಸಾಮಾನ್ಯ ಜನರಲ್ಲಿ ಕಾಣಿಸಿಕೊಳ್ಳುವುದಕ್ಕಿಂತಲೂ ಖಿನ್ನತೆಗೊಳಗಾದವರಲ್ಲಿ ೨೫ ಪಟ್ಟು ಹೆಚ್ಚಿಗೆ ಕಾಣಿಸಿಕೊಳ್ಳುತ್ತದೆ. ಈ ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯನ್ನು ಸೂಕ್ತ ಔಷಧಗಳಿಂದ, ಆಪ್ತ ಸಮಾಲೋಚನೆಯಿಂದ ಸಾಧ್ಯವಾದಷ್ಟು ಮುಂದಕ್ಕೆ ಹಾಕಬಹುದು.ಸಹೃದಯ ಸಹಕಾರದಿಂದ  ಕೆಲವರಿಗೆ ಉತ್ತಮ ಫಲಿತಾಂಶಗಳೂ ಲಭ್ಯ.
ಆದರೆ ಈ ರೀತಿ ಯೋಚನೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದರೆ, ಅಥವಾ ಅದಕ್ಕೆ ಮುನ್ಸೂಚನೆಯಾಗಿ ಯಾವುದಾದರೂ ಕ್ರಿಯೆ ನಡೆಯುತ್ತಿದ್ದರೆ ತಕ್ಷಣವೇ ಮಾನಸಿಕ ತಜ್ಞರನ್ನು ಕಾಣಲೇ ಬೇಕು.ಪ್ರಾರಂಭದ ಹಂತದಲ್ಲಿ  ಉತ್ತಮ ಫಲಿತಾಂಶಗಳೇ ದೊರಕುತ್ತದೆ.

ಆದರೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನ ಮಾಡಿದರೆಂದರೆ,  ಹೇಗೋ ಉಳಿದರೂ ಕೂಡಾ ಅವರು ತಮ್ಮ ಅಂತ್ಯವನ್ನು ಆತ್ಮಹತ್ಯೆಯಲ್ಲಿಯೇ  ಪೂರ್ಣ  ಮಾಡಿ ಕೊಳ್ಳುತ್ತಾರೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಳ್ಳುವುದು ಅವಶ್ಯ.ಯಾವ ವಿಚಾರಗಳಿ೦ದ ಪ್ರಚೋದನೆಗೊಳಗಾಗುವರೆ೦ಬ ಸಣ್ಣ ಸುಳಿವು ಸಿಕ್ಕರೂ ಸಹಾ ಅ೦ತಹವುಗಳಿ೦ದ ದೂರವಿರಿಸುವುದು ಉತ್ತಮ.
ಖಿನ್ನತೆಗೊಳಗಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ..ಅದು  ಅದರ ತೀವ್ರತೆಯನ್ನು ಆಧರಿಸಿರುತ್ತದೆ.

ಮತ್ತೆ ಕೆಲವರು ಬೇರೆಯವರ ಮೇಲೆ ಹಲ್ಲೆ ನಡೆಸಲೂ ಬಹುದು. ಸೈಕೊಟಿಕ್ ಅಥವಾ ಮ್ಯಾನಿಕ್ ಡಿಪ್ರೆಶನ್ನಿನ ವ್ಯಕ್ತಿಗಳು ಈ ನಡವಳಿಕೆ ತೋರಿಸಬಹುದು.

ಮೊದಲೇ ಹೇಳಿದ೦ತೆ ನನ್ನ ಆತ್ಮೀಯ ಗೆಳತಿಯೊಬ್ಬಳು ಕೆಲದಿನಗಳ ಹಿ೦ದೆ ನೇಣು ಹಾಕಿಕೊ೦ಡು ಮೃತಪಟ್ಟಳು.ಆಕೆಗೆ ಡಿಪ್ರೆಶನ್ನಿಗೆ ಕಾರಣವಾದದ್ದು ಕಾಯಿಲೆಯಿ೦ದ ನರಳಿ  ತೀರಿಕೊ೦ಡ  ಮಗಳ ವಿಚಾರ. ಹೊರಗಿನವರಿಗೆ ಒ೦ಚೂರೂ  ಡಿಪ್ರೆಶನ್ನಿನ  ಸುಳಿವೇ ಸಿಗದಷ್ಟು ಜೀವನೋತ್ಸಾಹ ಕಾಣಿಸುತ್ತಿತ್ತು ಆಕೆಯಲ್ಲಿ.  ಆದರೆ ಒಳಗಿನ ಪರಿಸರವೇ ಬೇರೆ ನೋಡಿ.ಯಾವುದು ಆ ಗಳಿಗೆಯಲ್ಲಿ ಪ್ರಚೋದಿಸಿತೊ ಅ೦ತೂ ಈಗಿಲ್ಲ ಆಕೆ. ಗೊತ್ತೇ ಆಗದ೦ತೆ ಒಳಗೊಳಗೇ ಕಾಡುವ, ಬಲಿ  ತೆಗೆದುಕೊಳ್ಳುವ ಮಾರಿ  ಇದು.

[ಈ ಮೊದಲು”ಈಪೋಸ್ಟಿನಲ್ಲಿ ’ಕೊಟ್ಟ ಲಿ೦ಕ್ ತಪ್ಪಾಗಿತ್ತು ಈಗ ಸರಿಪಡಿಸಿದ್ದೇನೆ.]
[ ಚಿತ್ರಕೃಪೆ ಅ೦ತರ್ಜಾಲ]              
[ಮು೦ದುವರೆಯುವುದು]           

Monday, July 4, 2011

ಗಡ್ಡೆ ಹುಡುಕಿದೆ..!

ಮದುವೆಯಾದ ಹೊಸತು
ಮಡದಿಯ ಕೈಗೆ ಗಡ್ದೆಯೊಂದನಿತ್ತು
ಹೇಳಿದ
ಸಾರು ಮಾಡಿಡು ಚೆಲುವೆ 
ಮಧ್ಯಾನ್ನದಿ ಬರುವೆ,

ನೇಗಿಲು ಹೊತ್ತುಕೊಂಡು,
ಬೆವರಿಳಿಸಿಕೊಂಡು
ಬ೦ದವನೆ ಕೂಗಿದ
ಅಡುಗೆ ಆಯ್ತಾ?ಸಾರು ಮಾಡಿದೆಯ?
ಮಡದಿಯ ಕೈಯಡುಗೆ 
ರುಚಿ ನೋಡುವ ಬಯಕೆ

 ಹೆಬ್ಬಾಗಿಲ  ಹಿಂಬದಿಗೆ ನಿಂತು 
 ಬಾಗಿಲ ಕಟ್ಟಿಗೆ  ಬೆರಳಿಂದ ರಂಗೋಲೆ 
ಗೀಚುತ್ತಾ  ಇಂತೆಂದಳು ಮುಗುದೆ,
ಗಡ್ದೆ...   ಬಿಡಿಸುತ್ತಾ, ಬಿಡಿಸುತ್ತಾ, ಬಿಡಿಸುತ್ತಾ 
ಬಟ್ಟಲು ತುಂಬಿತು, ಮೊರ ತುಂಬಿತು ಬರೀ ಸಿಪ್ಪೆ.
 ಗಡ್ದೆಯೇ ಸಿಗಲಿಲ್ಲ  ತೆಗೆದೊಗೆದೆ ಸೇರಿತು ತಿಪ್ಪೆ
ಸರಿಯಾಗಿ ಆರಿಸಿ ತರಬಾರದೆ ಎಂತಾ ಬೆಪ್ಪು ನೀವು!

ಗಂಡ ಕುಸಿದು ಕುಳಿತು ಉಸುರಿದ,
ಅದು ಎಲೆಕೋಸು ಗಡ್ದೆ ಕಣೆ...   ಏ ಬೆಪ್ಪೆ!
 
 

Monday, June 27, 2011

ಜೀವನ ಕಲೆ !

ಭಾನುವಾರದ ದಿನ ಬೆಳಗಿನಲ್ಲಿ ಟ0ಟಾಣ ಟ0ಟಾಣ ಎನ್ನುವ ಸದ್ದಿನೊ೦ದಿಗೆ,  ನನ್ನ ತಲೆಯಲ್ಲಿ  ಹುಟ್ಟಿಕೊ೦ಡ ಕೆಲವು ವಿಚಾರಗಳು.


 ಸದ್ದು ಯಾವುದರದ್ದು..? ಪುಟ್ಟ ಬಾಲಕನೊಬ್ಬನ   ಮರಗಾಲು  [stilts] ಕುಣಿತದ್ದು..
ಅದ್ಯಾವುದೋ ಭಾಷೆಯಲ್ಲಿ ಪದ್ಯ ಹೇಳುತ್ತಾ  ಅದಕ್ಕೆ ತಕ್ಕಂತೆ ನರ್ತಿಸುವುದರದ್ದು.. 
ಅದು ಅವನ ಕಲೆಯ ಸದ್ದು ,  ಸಂಸ್ಕೃತಿಯ  ಸದ್ದು,  ಜೀವದ ಸದ್ದು .. ಬದುಕಿನ ಸದ್ದು..
 ಇಂದಿನ ಸದ್ದು.. ಅವನ ನಾಳೆಗಳ ಸದ್ದು..
ಸಧ್ಯಕ್ಕೆ ಅದು ಹೊಟ್ಟೆಯ ಸದ್ದು , ಹಸಿವಿನ ಸದ್ದು.. ಹೌದು ಅದು ಅವನ ಹಸಿವಿನ ಸದ್ದು..!! 


ನೋಡಿದರೆ ಪಾಪ ಅನ್ನಿಸುತ್ತದೆ. ಹತ್ತರಿ೦ದ ಹನ್ನೆರಡು ವಯಸ್ಸಿರಬಹುದು. ಆತ ಲಾಗ ಹಾಕುವುದು, ಮೈ ಬಾಗಿಸುವುದು ನೋಡುತ್ತಿದ್ದರೆ ಮೈ ನವಿರೇಳುತ್ತದೆ. ಯಾರಾದರೂ ಎತ್ತರ ಹಿಮ್ಮಡಿಯ ಚಪ್ಪಲಿ ಧರಿಸಿದ್ದನ್ನು  ನೋಡುತ್ತಿದ್ದರೆ 'ಬಿದ್ದರೆ 'ಅನ್ನುವ ಭಯ ನನಗೆ!   ಅಷ್ಟೊಂದು ಉದ್ದದ ಮರಗಾಲು ಹಾಕಿಕೊಂಡು ಡ್ಯಾನ್ಸ್ ಬೇರೆ ಮಾಡುತ್ತಾನೆ!  ಅದವರ ಕುಲ ಕಸುಬು. ಪಿತ್ರಾರ್ಜಿತ..!  ಯಾವ ರಿಯಾಲಿಟಿ ಶೋದಲ್ಲಿ ತೋರಿಸುವ ಕಸರತ್ತುಗಳಿಗೇನು ಕಡಿಮೆಯಿಲ್ಲ  ಅವನದು.   ಅವಕಾಶ ಸಿಕ್ಕಿಲ್ಲವೋ? ಅದವನಿಗೆ ಬೇಡವೋ?  ಅಂತೂ  ಹಾದಿ  ಬದಿಯ ಬದುಕು ಅವನದು. ಅನೇಕ ಕಡೆ ಹಳ್ಳ ದಾಟಲು ಮರಗಾಲು ಬಳಸುವ ಪದ್ದತಿಯಿದೆಯಂತೆ.    ಇಲ್ಲಿ ಜೀವನದ ನದಿ ದಾಟುತ್ತಿದ್ದಾನೆ ಅಷ್ಟೇ.


ಯಾವ ವಿಶ್ವ ವಿದ್ಯಾಲಯದಲ್ಲೂ ಕಲಿಸಲು ಸಾಧ್ಯವಾಗದ ಜೀವನ ಕಲೆ ಅವನದು.ಕಲೆಯೇ ಜೀವನ. ಹುಟ್ಟುಟ್ಟುತ್ತಲೇ    ಕಲಿತದ್ದು. 
ಸುಮ್ಮನೆ ಬಾಲ ಕಾರ್ಮಿಕರು , ಕೌಮಾರ್ಯದ  ಕೊಲೆ .. ಹಾಗೆ  ಹೀಗೆ  ಎಂದು  ಕೂಗಿ  ಕಿರುಚಾಡುವುದಕ್ಕಿಂತ, ಆಮೇಲೆ ನಡು ಹೊಳೆಯಲ್ಲಿ ಅವರನ್ನು ಬಿಟ್ಟು ಹೋಗುವುದಕ್ಕಿಂತ,   ಸಾಧ್ಯವಾದರೆ ನಿಂತು  ನೋಡಿ ಸಂತೋಷಿಸೋಣ, ಕೈಲಾದಷ್ಟು ದುಡ್ದೋ,  ಹಳೆ ಬಟ್ಟೆಯೂ ಏನೋ ಒಂದು ಕೊಡೋಣ, ಅವರನ್ನ ಇದ್ದ ಹಾಗೆಯೇ ಗೌರವಿಸೋಣ,  ಸಂತೋಷ ಪಟ್ಟಿದ್ದರ  ಋಣ ಅಷ್ಟರ ಮಟ್ಟಿಗೆ ಕಡಿಮೆಯಾದೀತು.ಮಕ್ಕಳ ಕಣ್ಣಿನ ಅಚ್ಚರಿಗೊಂದು ಬೆಲೆ ಕೊಟ್ಟಂತಾದೀತು.


ಬಂದದ್ದು ಭಾನುವಾರ, ಹಾಗಾಗಿ ಉಳಿದ ದಿನಗಳಲ್ಲಿ ಶಾಲೆಗೆ  ಹೋದರೂ  ಹೋಗಬಹುದು ಎನ್ನುವ ಆಶಾವಾದ ನನ್ನದು. ಅಲೆಮಾರಿಯಲ್ಲದಿದ್ದಲ್ಲಿ.  ಕೇಳಲಿಲ್ಲ ಅವನನ್ನು.




Friday, June 17, 2011

ಕಳೆದುಹೋಗಬೇಕಿದೆ..ಮತ್ತೆ..

ಜಿಟಿ ಜಿಟಿ ಮಳೆ .  ಇರುಚಲು ಬಡಿದು  ಬಾಲ್ಕನಿಯಲ್ಲಿಟ್ಟ ಪಾಟುಗಳ ತುಂಬೆಲ್ಲ ನೀರು.  ಹಾಕಿದ ಗಿಡಗಳೆಲ್ಲಾ ಕೊಳೆತು ಹೋಗುತ್ತವೋ ಏನೋ.. ?
ಯಾಕೋ  ಮನಸಿಗೆ  ಸೋಮಾರೀತನ.   ಮಕ್ಕಳು ಶಾಲೆಯಿಂದ ಬರಲಿನ್ನೂ ತುಂಬಾ ಹೊತ್ತಿದೆ.

ಟೀಪಾಯಿಯ ಮೇಲೆ ಪಗಡೆ ಕಾಯಿಗಳು  ಹರಡಿಕೊಂಡಿದ್ದು ಯಾಕೋ ಆಪ್ಯಾಯಮಾನ.  ಮಗ  ಬಂದವನೇ ಪಗಡೆ ಕಾಯಿ ಹುಡುಕುತ್ತಾನೆ.ಮಗಳು ಪಟ ಹಾಸುತ್ತಾಳೆ.  ಅಮ್ಮ, ಅಪ್ಪ ಬರಲೆಷ್ಟು ಹೊತ್ತಿದೆ.?  ಪಗಡೆ ಆಡೋಣ...

ಮನಸ್ಸು ಹಳೆಯದನ್ನೇ ಮೆಲುಕು ಹಾಕುತ್ತದೆ.  ಚಿಕ್ಕವರಿರುವಾಗ ತಮ್ಮನೊ೦ದಿಗೆ ಅತ್ತೆಯ ಕೈ ಹಿಡಿದೆಳೆದು ಹೀಗೆ ಮಾಡುತ್ತಿದ್ದದ್ದು ನಿನ್ನೆ ಮೊನ್ನೆ ನಡೆದ೦ತಿದೆ. ಮಳೆಯ ಹನಿಗಳೆಡೆಯಿ೦ದ ನೆನಪುಗಳ ತು೦ತುರು ಮನಸ್ಸನ್ನು ಒದ್ದೆ ಮಾಡುತ್ತದೆ.ಮಳೆಯ ಮಹತ್ವ ಅದಲ್ಲವೇ ? ಅದಕ್ಕೂ  ನೆನಪುಗಳ ಜರೂರತ್ತಿದೆ.!

ಅತ್ತೆಯಾದರೂ ಪಾಪ..,  ಮದುವೆಯಾಗಿ ಮೂರು ವರುಷ ತು೦ಬುವುದರೊಳಗೆ, ಗ೦ಡ ತಿರುಗಿ ನೋಡದೇ  ಮೋಡದೆಡೆ ನಡೆದು ಬಿಟ್ಟಿದ್ದ. ಮಗುವೊ೦ದು ಇತ್ತ೦ತೆ ಅತ್ತೆಗೂ. ಅದಕ್ಕೆ ಅದ್ಯಾವುದೊ ಜ್ವರ ಬಡಿದು ತೀರಿಕೊ೦ಡಿತ೦ತೆ. ಅತ್ತೆಯ ಕನಸುಗಳೆಲ್ಲಾ ಕಮರಿಹೋದವು. ಮತ್ತೆ ಭುಗಿಲೇಳದ೦ತೆ ಕನಸುಗಳ ಕ೦ಪಾರ್ಟ್ಮೆ೦ಟಿಗೆ ದೊಡ್ಡದೊ೦ದು ಬೀಗ ಹಾಕಿ ಕೀಲಿಯನ್ನು ಎಡಗೈಲೆಲ್ಲೋ ಇಟ್ಟು ಮರೆತುಬಿಟ್ಟಿದ್ದಳು.ಸಿಕ್ಕ೦ತಾಗಿ ಸಿಗದೇ ಹೋದ ಬಿಸಿಲ್ಗುದುರೆಯಾಯ್ತು ಅತ್ತೆಯ ಬಾಳು.  ಮತ್ತೆ ಅತ್ತೆಗಾದರೂ ದಿಕ್ಕು ತವರೇ ಆಯಿತು.   ತಮ್ಮನ ಮನೆ ತನ್ನದು, ತಮ್ಮನ ಮಕ್ಕಳು ತನ್ನವು..  ದನ ಕರು, ಕೊಟ್ಟಿಗೆ, ಗದ್ದೆ ನೆಟ್ಟಿ, ತೋಟದ ಕಳೆ ಎಲ್ಲಾ ಕಡೆಗೂ ಅತ್ತೆಯೇ ದಿಕ್ಕು,  ''ಅಕ್ಕಿಯೊಂದಿದ್ದರೆ ಸಾಕ?  ಬರೀ ಅನ್ನನೆ ತಿನ್ನಕಾಗ್ತಾ?ನಾಕು ಮಗೆ ಬೀಜ, ತಿಂಗಳವರೆ ಬೀಜ ಹಾಕಿರೆ ಮಳೆಗಾಲಿಡೀ ಮಾಯ್ನ್ಕಾಯಿ , ಹಲ್ಸಿನ್ಕಾಯಿ ಎರಡ್ರದ್ದೆ ಪದಾರ್ಥ ತಿಮ್ಬದು ತಪ್ಪ್ತು,''  ಎನ್ನುವವಳೂ ಆಕೆಯೇ.   ಆಸರಿಗೆ  ಮನೆಗೆ ಬಂದ ಆಳುಗಳ ಕೈಲಿ ಅಂಗಳದಲ್ಲಿ  ಮಣ್ಣು ಹೊಯ್ಸಿ ಏರಿ ಮಾಡಿಸಿಕೊಂಡು ಅವರೇ ಕಾಯಿಯ ಒಂದೊಂದೇ ಬೀಜ ಹುಗಿಯುವವಳೂ ಅವಳೇ. ತ್ಯಾರಣದ ಏರಿ ಮಾಡಿ ಮನೆ ಮುಂದೆ ಉದ್ಯಾನವನ ಮಾಡುವವಳೂ ಅವಳೇ. ಎಲ್ಲರ ಕನಸುಗಳಿಗೆ ಬಣ್ಣ ಹಚ್ಚುವವಳೂ ಅವಳೇ!

ಶಾಲೆ ಬಿಟ್ಟ ಮೇಲೆ ಸ೦ಜೆ ಕಡೆಗೆ  ಜೋರು ಮಳೆ ಹೊಯ್ಯುವಾಗ ಇನ್ನೇನು ಕೆಲಸ? ಅತ್ತೆಯ ಬಳಿ ಸಾರಿ ಕಥೆ ಹೇಳೆ ಅತ್ತೆ ಅ೦ದರೆ ಸಾಕು,  '' ಕಥೆ ನಾ ಎ೦ತಾ ಹೇಳ್ತ್ನೆ..? ಅದಕ್ಕೆ ಮಾಚಬಟ್ಟರು ಇದ್ವಲೇ, ಅವ್ವಾದ್ರೆ ಚೊಲೋತ್ನಾಗಿ ಹೇಳ್ತ. ಬನ್ನಿ ಪಗಡೆ ಆಡನ.  ಕೂಸೇ ಪಟ ಹಾಸಿ ಕಾಯಿ ಇಡು, ಈಗ ಬ೦ದಿ ಹಪ್ಳ ಸುಟ್ಕಂಬತ್ತಿ ನಾಕೆಯ.  ಕಡಿಗೆ ಎಂತಾರೂ  ತಿನ್ನಕ್ಕೊಡು ಹೇಳಿ ಅಮ್ಮಂಗೆ   ಗೋಳ್ಹೊಯ್ಯಡಿ. ಆ ಚಾಳಿ ಎಮ್ಮೆ ಕರಿಯಕ್ಕೆ ಹೊಯ್ದ.  ಆಗಿಂದ  ನಾಕ್ ಬಾರಿ ಆತು,  ಮೂರು ಸಲ ನಾ ನೋಡಿದ್ದಿ,  ಇನ್ನೆಷ್ಟು  ಬಾರೀ ನೋಡಕಾ ಏನ ? ಮತ್ತೆ  ದೋಸೆ ಅಕ್ಕಿ ಸೈತ ಬೀಸದಿದ್ದು,  ನಾ ಬರದು  ಒಂದೇ ಆಟಕ್ಕೆ  ಮತ್ತೆ ''

ಇಷ್ಟರ ಜೊತೆಗೆ ಮೊದಲೇ ಸುಟ್ಟು ಅಡಗಿಸಿಟ್ಟ  ಹಲಸಿನ ಬೇಳೆ, ಹಪ್ಪಳ  ಹಾಳೆ ತಟ್ಟೆಯಲ್ಲಿಟ್ಟುಕೊಂಡು ಬರುವ ಹೊತ್ತಿಗೆ ಅಕ್ಕ ತಮ್ಮನಲ್ಲಿ ಪಗಡೆ  ಕಾಯಿಯ ಬಣ್ಣಕ್ಕಾಗಿ ಜಗಳ.

'ನಂಗೆ ಕೆಂಪಿದು ಬೇಕು.' ತಮ್ಮನ ಹಕ್ಕು. 
'ಯಾವಾಗಲೂ ನಿಂಗೆ ಕೆಂಪಿ ಕಾಯಿ ಬೇಕಾ. ನಂಗೊತ್ತಿಲ್ಲೆ. ಇವತ್ತು ಕೆಂಪುಕಾಯಿ ನಾ ತಗತ್ತಿ.,  ಅತ್ತೆ ನೋಡೇ...'


ಜಗಳ ತಗಾದೆ ಮುಗಿದು ಅತ್ತೆಯ ಪ೦ಚಾಯ್ತಿಕೆ ನಡೆದು  ಅಂತೂ ಆಟ ಶುರು. ಅತ್ತೆಯ ಕೈಯ್ಯೋ ಕಯ್ಯಿ , ಅದು ಹೇಗೆ ಕವಡೆ ಪಳಗಿಸಿದ್ದಳೋ.    ಚಿತ್ತ, ನಾಕು , ಭಾರ ಬೇಕೆಂದಾಗಲೆಲ್ಲಾ ಒಚ್ಚಿ, ಮೂರು..  ಮೊದಲು ಕಾಯಿ ಇಳಿಸಿ  ಜುಗ ಕಟ್ಟುವುದು ಅವಳೇ. ಉಳಿದ  ಎಲ್ಲರ  ಕಾಯಿಯೂ ಆಗಾಗ ಮನೆಗೆ, 
ತಮ್ಮನದು ಬರೀ ಮೋಸ.  ಒಚ್ಚಿ ಬಿದ್ದರೆ ಮೆಲ್ಲ ಮಗಚಿಟ್ಟು 'ಭಾರ' ಮಾಡುವುದು,  ಹುಳ್ಳಗೆ ನಗುವುದು! ಚಿಮನೀ ಬುಡ್ಡಿಯ ದೀಪದ ಬೆಳಕಲ್ಲಿ ಹೌದೆಂದುಕೊಳ್ಳಬೇಕು!
ಅಂತೂ ಅತ್ತೆಯ ಕಾಯಿಯೇ ಮೊದಲು ತೆಗೆಯುವುದು.  ಅತ್ತೆಯೇ ಗೆಲ್ಲುವುದು.! ಜೀವನದ ಎಲ್ಲಾ ಪರೀಕ್ಷೆಗಳನ್ನೂ ಅನಿವಾರ್ಯವಾಗಿ ಎದುರಿಸಿದವಳು  ಅವಳು. ಗೆಲುವೋ, ಸೋಲೋ..? ಅರ್ಥವಾಗದ ವಯಸ್ಸುಅದು. ಅಪ್ಪ ಅಮ್ಮ ಆಗಾಗ ಹೇಳುತ್ತಿದ್ದುದು, ''ಪಾಪ ಇವಳ ಬಾಳು ಕಣ್ಣೀರಾದರೂ ಮೇಲೆ ಒಂಚೂರು ತೊಸ್ಕ್ಯತ್ಲಲ್ಲೇ, ಅವಳಿಗೆ ಹ್ಯಾಂಗೆ ಬೇಕಾ ಹಾಂಗೆ ಇರ್ಲಿ.''ಮಕ್ಕಳಿಗೆ  ಅದೆಲ್ಲಿ ಅರ್ಥವಾದೀತು?
’ಅತ್ತೇನೆ ಯಾವಾಗ್ಲೂ ಗೆಲ್ತಾ...’
'ಆಮೇಲೆ, ಒಂದ್ ಕೈ ಆಡಿಕೊಡೆ ಅತ್ತೆ ಒಚ್ಚಿ ಬೀಳ್ತೆ ಇಲ್ಲೇ..'
 'ಹುಗಿದ ಕಾಯಿ ತೆಗೆಯಲೇ ಆಗ್ತಿಲ್ಲೆ.. ಎರಡು ಬೀಳ್ಸಿಕೊಡು,' ಎನ್ನುತ್ತಾ ಅಕ್ಕ ತಮ್ಮನ ಗೋಳಾಟ..


''ಇನ್ ಸಾಕು. ಯಂಗೆ ಒಳಗೆ ಕೆಲಸ ಇದ್ದು. ನಿನ್ ಅಮ್ಮನೇ ದೋಸಿಗೆ ಬೀಸ್ತಾ ಇದ್ದ ಕಾಣ್ತು, ನಾ ಒಂಚೂರ್ ಕೈ ಹಾಕ್ತಿ. ನಿಂಗ ಇವತ್ತು ಶಾಲೆ ಬಿಟ್ ಬಂದವರು  ಮಗ್ಗಿ ಹೇಳಿದ್ರ. ?    ಬೇಗ ಬೇಗ ಬರ್ಕಂಡು ಓದ್ಕ್ಯ೦ಡು ಮಾಡ್ಕ್ಯಳಿ, ಅಪ್ಪ ಬಂದ್ರೆ ಬೈತ. ಸುಳ್ಳಲ್ಲ..ಮಾಚ್ ಭಟ್ರಿಗೆ  ಸಂಧ್ಯಾವನ್ನೇ  ಆತು ಕಾಣ್ತು. ಕಥೆ ಹೇಳ್ತ,  ಕೇಳ್ಳಕ್ಕು. ಬೇಗ್ ಬರ್ಕಂಡು ಮುಗ್ಸಿ.''
 ಆಯ್ತಪ್ಪಾ ...ಅದೂ ಮುಗಿಸಿಯಾಗುತ್ತಿತ್ತು.
ಈಗ ಮಾಚಭಟ್ಟರ ಸರದಿ.   ಅವರು ಸಹಾ ಜೀವನದಲ್ಲಿ ಸಾಕಷ್ಟು ಕಷ್ಟ ನುಂಗಿದವರೇ ಅಲ್ಲವೇ...? ಅವರ ಬಗ್ಗೆ ವಿವರ  ಯಾರಿಗ್ಗೊತ್ತು? ಮಗನೊಬ್ಬನಿದ್ದನಂತೆ, ಅವನ ಸಂಸಾರದೊಂದಿಗೆ  ಬೇರೆ ಮನೆ ಮಾಡಿಕೊಂಡು.

ಇವರಿಗೆ ಹೆಂಡತಿ ಸತ್ತು ಸುಮಾರು ವರ್ಷಗಳೇ ಆಗಿತ್ತೇನೋ.   ಅವರಿಗೂ ಎಪ್ಪತೈದರ ಮೇಲೆ ವಯಸ್ಸಾಗಿದ್ದಿರಬಹುದು.  ಮಳೆಗಾಲ ಶುರುವಿನಲ್ಲಿ  ಬಂದವರಿಗೆ ಮತ್ತೆ   ಚೌತಿಯ ಗಣಪತಿಯನ್ನು  ಮುಳುಗಿಸಿಯೇ ಹೋಗಬೇಕೆನ್ನುವುದು ಅಪ್ಪನ ಅಣತಿ.
ಅವರಿಗಾದರೂ ಮನೆಯಲ್ಲಿ ಕಾಯ್ದುಕೊಂಡಿರಲು ಯಾರಿದ್ದಾರೆ ? ಆದರೆ  ಆಗ ಅರ್ಥವಾಗದ ಅವರ ನಿಟ್ಟುಸಿರು ಈಗ ಅರಿವಿಗೆ ಬರುತ್ತದೆ.  ಅತ್ತೆಯ ಮದುವೆ ಮಾಡಿಸಿದ್ದು ಅವರೇ ಅಂತೆ.    'ಮಾಣಿ ಘನಾವ' ಎಂದು ಇಲ್ಲದ ತರಾತುರಿಯಲ್ಲಿ.   'ಯಾರ್ಯಾರ ಹಣೆ ಮೇಲೆ ಯಂತಾ ಬರದ್ದು  ಹೇಳದನ್ನ ಯಾರಿಗೆ ಓದಲಾಗ್ತು, ತಲೆ ಬಿಸಿ  ಮಾಡ್ಕ್ಯಳದು ಯಂತಕೆ ಭಟ್ರೇ,ನಮಗೆ ಶಿಕ್ಕಿದ್ದು ಇಷ್ಟೇಯ..' ಅಪ್ಪನ ಸಮಾಧಾನ.
 ಕಥೆ ಕೇಳುವವರಿಗೆ ಕಥೆಯಾದರೆ ಸಾಕು, ಊಟ ಮುಗಿಸಿ ಮಾಚಭಟ್ಟರ   ಒಂದು ಬದಿಗೆ ಅಕ್ಕ, ಇನ್ನೊಂದು ಬದಿಯಲ್ಲಿ ತಮ್ಮ ಆತು ಕುಳಿತರೆಂದರೆ ತಮ್ಮನಿಗೆ ಕಥೆ ಮುಗಿಯುವಷ್ಟರಲ್ಲಿಯೇ ತೊಡೆಮೇಲೆ ನಿದ್ದೆ.
ವೈವಿಧ್ಯಮಯ    ಕಥೆಗಳು ಅವು . ರಾಜಕುಮಾರಿಯನ್ನು  ಧುರುಳನೊಬ್ಬ  ಅಪಹರಿಸಿಕೊಂಡು ಹೋದದ್ದು..ಅವಳನ್ನು ಉಪಾಯವಾಗಿ ಶೂರನೊಬ್ಬ ಕರೆದುಕೊಂಡು ಬಂದಿದ್ದು, ಬರುವಾಗ  ಶತ್ರು ಬೆನ್ನಟ್ಟಿದ್ದು, ಪೊಟರೆಯೊಂದರಲ್ಲಿ ಇವರು  ಅಡಗಿಕೊಂಡಿದ್ದು. ಹೆಜ್ಜೆ ಗುರುತು, ವಾಸನೆ  ಕಂಡು ಹಿಡಿಯುವವರೊಂದಿಗೆ ಆತ ಇವರ ಪೊಟರೆಯನ್ನು ಗುರುತಿಸಿದ್ದು ಅಲ್ಲಿ ಈ ಮೊದಲು ವಾಸವಾಗಿದ್ದ ಭೂತವೊಂದು ಇವರಿಗೆ ಸಹಾಯಮಾಡಿದ್ದು.,  ಮಾಯದ ಕತ್ತಿಯಿಂದ ಹೋರಾಡಿದ್ದು.,

ಕಥೆ ತು೦ಬಾ ಉದ್ದ .ಉದ್ದ ... ಆಮೇಲೆ ಏನಾಯ್ತು..? ಕೇಳಿದಂತೆಲ್ಲಾ  ಒಂದಕ್ಕೆ ಇನ್ನೊಂದು ಕಥೆ  ಸೇರುವುದು, ಸರಕ್ಕೆ   ಮಣಿ ಸುರುಗಿದಂತೆ.  ಏಡಿ ಮನುಷ್ಯನ ಕಥೆ, ಕಪ್ಪೆ ರಾಣಿಯ ಕಥೆ, ಹುಲಿ ಬೆಟ್ಟದ ಕಥೆ,  ಮಂತ್ರವಾದಿಯ ಕಥೆ, ಭೂತದ ಕಥೆ  ಒಂದೇ ಎರಡೇ.. ಕಥೆಗಳ ಖಜಾನೆ.   ಕಥೆಯ ಪಾತ್ರಗಳಲ್ಲೆಲ್ಲಲ್ಲ ತೇಲಿ ಹೋಗುವ ಸುಖ ಮರೆಯುವುದಾದರೂ ಹೇಗೆ..?

 ಕಥೆ ಮುಗಿದ ಮೇಲೆ ಅತ್ತೆ ಮೆಲ್ಲನೆಬ್ಬಿಸಿ ಕರೆದುಕೊಂಡು ಹೋಗಿ ತನ್ನ  ಆ ಪಕ್ಕ ಈ ಪಕ್ಕ ಇಬ್ಬರನ್ನೂ ಮಲಗಿಸಿಕೊಂಡು ಕಥೆಯ ಭೂತ ಕನಸಿನಲ್ಲಿ ಬ೦ದರೆ ಹೆದರಬಾರದೆಂದು ಇಬ್ಬರ ಮೈ ಮೇಲೂ ಕೈ ಇಟ್ಟು ಕೊಂಡು ಮಲಗಿಸಿಕೊಳ್ಳುತ್ತಿರಲಿಲ್ಲವೇ?
ಅತ್ತೆ ಅಂದರೆ ಹಾಗೆ ಇರೋದು!

 ಮೋಡ ಕವಿದು ಕತ್ತಲೆ ಕವಿದಂತೆಲ್ಲ ನೆನಪುಗಳೆಲ್ಲ ಮಿಂಚು ಮಿಂಚು.. 
 ಹನಿದು ಕಣ್ಣೆಲ್ಲ ನೀರ್ಕಾಲುವೆ..! 

ಪಗಡೆಯ ಕಾಯಿಗಳನ್ನೆಲ್ಲ ಎತ್ತಿಡಲು ಹೋದರೆ ಕಾಯಿಗಳೆಲ್ಲಾ  ಅತ್ತೆಯ ಮುಖಗಳೇ ಆದವಲ್ಲ..! ಕುಣಿಯುತ್ತಾ ಕರೆಯುತ್ತಿರುವಳೇ ? ಪಗಡೆ ಆಡೋಣವೆಂದು....    ಪಟದ ಚೌಕಗಳೆಲ್ಲಾ ಮಾಚಭಟ್ಟರ ಕತೆಯ ಪಾತ್ರಗಳಾಗಿ ಹೊರಳಿ ಹೊರಳಿ ನೋಡುತ್ತಿವೆಯೇಕೆ..?

ಕಿರ್ರೋ .... ಕೀಕ್..ಕೀಕ್... ಕಿರ್ರೋ... ಕೀಕ್ ಕೀಕ್..

ಮಕ್ಕಳು ಬಂದರೇ? ಇಷ್ಟು ಬೇಗ ಸಮಯ ಕಳೆದು ಹೋಯಿತೇ...?

ಮತ್ತೆ ಯಾಕೋ ಕಳೆದುಹೊಗಬೇಕೆನಿಸುತ್ತಿದೆ.....!

Sunday, June 12, 2011

ನ್ಯಾಲೆ!

ಅಲ್ಲೂ ಈಗ ಮಳೆಗಾಲವಂತೆ..
ಮೊಡವಂತೆ
ಮಳೆಯಂತೆ
ಬಟ್ಟೆ ಒಣಗೋಲ್ಲವಂತೆ
ಪಟ್ಟೆ ಪೀತಾಂಬರ  
ಸೀರೆ ಪತ್ತಲ 
ಮುಗ್ಗುಲು ಹಿಡಿಯುತ್ತಂತೆ
ಚುಕ್ಕಿಗಳೂರಲ್ಲಿ ಮನೆತುಂಬ ಮಕ್ಕಳಂತೆ 
ಚಂದ್ರನರಸಿಯರು ಉಪಾಯ ಮಾಡಿದರಂತೆ
ಮಳೆ ಸ್ವಲ್ಪ ಬಿಟ್ಟಾಗ 
ಗಾಳಿಯಾಡಲಿಕೆಂದು
 ಬಟ್ಟೆ ಒಣಸಲಿಕೆಂದು ಕಟ್ಟಿದರಂತೆ

ಮುಗಿಲ ಮ್ಯಾಲೆ   ಹೊಗೆಯ ನ್ಯಾಲೆ!







Sunday, June 5, 2011

ಹಲ್ಲು ನೋವಿನ ಕಥೆ- ವ್ಯಥೆ..!

ನನಗೆ ಎಷ್ಟೋ ಸಲ ಅನ್ನಿಸಿದೆ ಜ್ಞಾನ ಬಂದಿದೆ ಎಂದು...!  ಮತ್ತು ಆಗಾಗ ಅನ್ನಿಸುತ್ತಲೇ ಇರುತ್ತದೆ.  ಗಂಟಲ ದ್ವಾರದಿಂದ ತುಸುವೇ ಮುಂದೆ ಎರಡೂ ಪಕ್ಕದಲ್ಲಿರುವ ನಾಲ್ಕು ಹಲ್ಲುಗಳಲ್ಲಿ ಯಾವುದಾದರೂ ಒಂದು ಹಲ್ಲು ನೋವು ಶುರುವಾದಾಗ ತಟ್ಟನೆ ಗೋಚರವಾಗುತ್ತದೆ ಹಲ್ಲಿದೆ ಎಂಬುದರ ಜ್ಞಾನ.!
ಹದಿನೇಳರಿಂದ ಇಪ್ಪತೈದರ ನಡುವಿನ ವಯಸ್ಸಿನಲ್ಲಿ ಅದೇನೇನು ಕನಸು ಕಾಣುತ್ತ ಇರುವೆವೋ ಅದನ್ನೆಲ್ಲ ಒಮ್ಮೆಲೇ ಅಳಿಸಿ ಹಾಕುವಂತೆ ಈ ಜ್ಞಾನ ದಂತಗಳೆಂಬ ಹಲ್ಲುಗಳು ಮೂಡಲು ಶುರುವಾಗುತ್ತದಲ್ಲ;  ಆಗ ಗೊತ್ತಾಗುತ್ತದೆ ಹಲ್ಲಿನ ಮಹತ್ವ.. ಅಲ್ಲಿಯವರೆಗೆ ಸರಿಯಾಗಿ ಹಲ್ಲು ಸ್ವಚ್ಚ ಮಾಡಿಕೊಳ್ಳುವುದರ ಬಗ್ಗೆ ಯೋಚನೆ ಮಾಡದ ಎಲ್ಲರೂ ಜಾಗ್ರತರಾಗ ತೊಡಗಿಬಿಡುತ್ತಾರೆ! ಹಲ್ಲಿನ ಬಗ್ಗೆ ತ೦ತಾನೇ  ಸ್ವಲ್ಪ ಜ್ಞಾನ ಇಟ್ಟುಕೊಳ್ಳುತ್ತಾರೆ..!


ಹುಟ್ಟುವಾಗಲೇ ಸಾಕಷ್ಟು ಕಷ್ಟ ಕೊಡುತ್ತಲೇ ಬರುವ ಜ್ಞಾನ ದಂತಗಳೆಂಬ ಅನುಪಯೋಗಿ ವಸ್ತುಗಳಿಂದ  ಏನೇನು ಸಮಸ್ಯೆಯಾಗುತ್ತದೆಂಬುದನ್ನು ಅನುಭವಿಸಿಯೇ ಅರಿತುಕೊಳ್ಳಬೇಕು. ಹುಟ್ಟುವಾಗ ಸಿಕ್ಕಾಪಟ್ಟೆ ನೋವು ..ಕೆಲವಂತೂ ಹುಟ್ಟುವಾಗಲೇ ಹುಳುಕಾಗಿರುತ್ತವೆ. ಅಡ್ಡಾದಿಡ್ಡಿ ವಕ್ರ ಕೊಕ್ರವಾಗಿ ಹುಟ್ಟಿದರಂತೂ ಸರಿಯೇ ಸರಿ. ಮೇಲಿನ ದಂತಕ್ಕೆ ಅಥವಾ ಮೇಲ್ಪದರಕ್ಕೆ  ತಾಗಿ ಅಲ್ಲಿ ಹುಣ್ಣು ಮಾಡಿ ಬಾಯಿ ಬಾಯಿ ಬಿಡುವಂತೆ ಮಾಡಿಬಿಡುತ್ತದೆ  ಸಾಯಲಿ.
ವಸಡಿನಲ್ಲಿ ರಕ್ತ, ಬಾವು.. ನೋವು.ನೋವು ಬರುವುದಾದರೂ  ವರ್ಣಿಸುವುದು ಸಾಮಾನ್ಯರಿಗೆ ಸಾಧ್ಯವಿಲ್ಲ.  ಆ ಬದಿಯ ತಲೆ, ಕುತ್ತಿಗೆ, ಮೈಕೈ ಎಲ್ಲಾ ಚುಳುಚುಳು  ನೋವು ಶುರುವಾಗಿ  ನೋವಿನ ಮೂಲ ಯಾವುದು ಎನ್ನುವುದೇ ಗೊತ್ತಾಗದು. ಅಂತೂ   ಹುಟ್ಟುಟ್ಟುತ್ತಲೇ  ದಂತವೈದ್ಯರಿಗೆ ದುಡ್ಡು ಮಾಡಿ ಕೊಡಲು ತಯಾರಾಗಿ ಬಿಡುತ್ತದೆ  ಕರ್ಮ.

ಆಹಾರವನ್ನು ಜಗಿಯಲು ಒಂದು ಚೂರೂ ಸಹಾಯ ಮಾಡದಿದ್ದರೂ ಸರಿ ಅದರ ಶೇಖರಣೆ  ಜವಾಬ್ಧಾರಿ ಮಾತ್ರಾ ತನ್ನದೇ ಎಂಬಂತೆ  ಅಲ್ಲಲ್ಲಿ ತೂತು.!ಒಳ್ಳೆ 'ಕೊಟ್ಟ'ದಂತೆ.
  ಹಿಂದೆ ಪ್ಲೇಗ್ ಮಾರಿ ಬಂದಾಗ ಊರಿಗೆ ಊರೇ ಗುಳೆ ಹೊರಡುವ ಸಮಯದಲ್ಲಿ ತಮ್ಮಲ್ಲಿರುವ ಪಾತ್ರೆ ಪರಡಿ ಅಕ್ಕಿ ಇನ್ನಿತರೇ ಸಾಮಾನುಗಳನ್ನು  ನೆಲದಲ್ಲಿ 'ಕೊಟ್ಟ'  ಮಾಡಿ  ಅದರಲ್ಲಿ ಭದ್ರವಾಗಿ ಮುಚ್ಚಿಡುತ್ತಿದ್ದರು.  ನೆಲದಲ್ಲಿ ಒಂದು ಎರಡ್ಮೂರು ಅಡಿ ಆಳ ತೋಡಿ ಅದನ್ನು ಬಳಿದು ಚಂದ ಮಾಡಿ ವಸ್ತುಗಳನ್ನು ಅದರಲ್ಲಿ ಇಟ್ಟು ಮುಚ್ಚುತ್ತಿದ್ದರಂತೆ. ಒಂತರಾ ದೊಡ್ಡ ಹಂಡೆಯಾಕಾರದಲ್ಲಿ ಇರುತ್ತಿತ್ತು ಈ ಕೊಟ್ಟ. ಬಳಿಕ ಪ್ಲೇಗಿನ ತೀವ್ರತೆ ಕಡಿಮೆಯಾದಾಗ ವಾಪಾಸು ಊರಿಗೆ ಮರಳಿ ತಮ್ಮ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರಂತೆ. ಸ್ವಲ್ಪವೂ ಹಾಳಾಗಿರುತ್ತಿರಲಿಲ್ಲವಂತೆ.

ಈ ಹಲ್ಲಿನಲ್ಲೂ ಹಾಗೆಯೇ ಆಹಾರ ಪದಾರ್ಥ ಸೇರಿಕೊಂಡರೂ  ಗಡಿಬಿಡಿಯಲ್ಲಿ ತೆಗೆದು ಬಿಸಾಕಬೇಕಾದ ಅನಿವಾರ್ಯತೆ.ಮತ್ಯಾವಾಗಾದ್ರೂ ಉಪಯೋಗಕ್ಕೆ ಅಂತ ಇಟ್ಟು ಕೊಳ್ಳುವ ಹಾಗಿಲ್ಲ.!
ನೀವು  ಯಾವ ಟೂತ್ಪೆಷ್ಟನ್ನೇ ಬೇಕಾದರೂ ಬಳಸಿ ..  ಯಾವ ಸೊಂಟ ಮುರಿದ ಬ್ರಷ್ಯನ್ನೇ ಬಳಸಿ.. ಆ ಹಲ್ಲಿನ ವರೆಗೆ  ಬ್ರಶ್ಶು ತಾಗುವುದೇ ಇಲ್ಲ.  ತಿಪ್ಪರಲಾಗ ಹಾಕಿದರೂ ಯಾವ ನಮೂನೆ ಸರ್ಕಸ್ ಮಾಡಿದರೂ  ಜ್ಞಾನ ದಂತವನ್ನು ಚಕ ಮಕ ಮಾಡಲು ಸಾಧ್ಯವೇ ಇಲ್ಲ..!ಎದುರಿನ ಹಲ್ಲಿನ ನಗುವನ್ನು ಕಂಡು ಯಾರೂ ಮೋಸ ಹೋಗ ಬೇಡಿ..!!
ಹಲ್ಲಿನ ತೊಂದರೆ ಮಲೆ ನಾಡಿಗರಲ್ಲಿ ಹೆಚ್ಚು .ಸಿಹಿ ತಿನ್ನುವುದೊಂದು ಕಾರಣ ವಾದರೆ ತಾಂಬೂಲ ಇನ್ನೊಂದು ಕಾರಣ. ನೋಡಿ ಬೇಕಾದರೆ , ಮಲೆನಾಡಿನ ಜನ ಬಾಯಿ ಬಿಟ್ಟು ಹಲ್ಲು ತೋರಿಸಿ ನಗುವುದೇ ಇಲ್ಲ. ಸಿಕ್ಕಾಪಟ್ಟೆ ನಗು ಬಂತೆಂದರೆ ಆಕಾಶಕ್ಕೆ ಮುಖ ಮಾಡುತ್ತಾರೆ!  ಹವಳದಂತಹಾ ಹಲ್ಲಿನವರು!

ಹ್ಞು,ಇರಲಿ  ಈ ಹಲ್ಲಿನ  ಸಹವಾಸವೇ ಬೇಡ ಎ೦ದು ಹಲ್ಲು ಕೀಳಿಸಲು ದಂತ ವೈದ್ಯರ ಬಳಿಗೆ ಹೊದರೂ ಅಲ್ಲೂ ಏನು ಸುಖವಾಗಿ ಹಲ್ಲು ಕೀಳುವುದಿಲ್ಲ..  ಅವರ ಶಸ್ತ್ರಾಸ್ತ್ರಗಳನ್ನು ನೋಡಿದರೆ ನನಗೆ ಅಂಜಿಕೆ.
ನಾನು ಕೆಲವು ವರ್ಷಗಳ ಹಿಂದೆ ಹಲ್ಲು ಕೀಳಿಸಲು ಮೊದಲ ಸಲ ಒಬ್ಬ ಲೇಡಿ ಡಾಕ್ಟ್ರ ಹತ್ರ ಹೋಗಿದ್ದೆ.   ಆ ಪುಣ್ಯಾತ್ಗಿತ್ತಿ ಸುಮಾರು ಅರ್ಧ ಗಂಟೆಗೂಡಿ ನನ್ನ ಹಲ್ಲು ಕಿತ್ತದ್ದು  ವರ್ಣನೆಗೆ ನಿಲುಕದ  ಇತಿಹಾಸ ...!!!..   ಬಾಯಿ ಹರಿದೇ ಹೋಗುವುದರಲ್ಲಿತ್ತು.! ಅಹಿಂಸಾ ವಾದಿಯೇನೋ ಎಂಬಂತೆ ಸಾಕಷ್ಟು ಹಿಂಸೆ ಮಾಡಿದಳಾ ತಾಯಿ.
ಆಮೇಲಾಮೇಲೆ   ನನಗೆ ಹಲ್ಲಿನ ಸುದ್ದಿಯೆತ್ತಿದರೆ ಎಚ್ಚರ ತಪ್ಪುವಂತೆ ಆಗುತ್ತಿತ್ತು.
ನಾನು ಬಿಟ್ಟರೂ ಹಲ್ಲು ಬಿಡದು.. ಹಲ್ಲಿನ ನೋವು ಬಿಡದು ಸ್ವಾಮಿ. ಯಾವ ನೋವು ಬಂದರೂ ಹಲ್ಲು ನೋವೊಂದು ಬರುವುದು ಬೇಡ  ಎನ್ನುವ ಗೋಳಾಟ..   ಮತ್ತೆ ಬೇರೆ ಕಡೆ  ನೋವು ಬಂದಾಗ ಪುನಃ 'ಈ ನೋವೊಂದು ಬಿಟ್ಟು ಯಾವ ನೋವಾದರೂ ಅನುಭವಿಸಿಯೇನು' ಎನ್ನುವ ಪ್ರಲಾಪ..!

ಮತ್ತೆ ಕೆಲ ದಿನಗಳ ನಂತರ  ಇನ್ನೊಂದು ಬದಿಯ  ಹಲ್ಲು ನೋವು ಶುರುವಾಯಿತು.. ಈ ಸಲ ಆ ಲೇಡಿ  ಡಾಕ್ಟ್ರ ಹತ್ತಿರ ಹೋಗಲಿಲ್ಲ, ಬೇರೊಬ್ಬ ಜಂಟಲ್ ಮ್ಯಾನ್  ಡಾಕ್ಟ್ರ  ಹತ್ತಿರ ಮುಖಕ್ಕೆ ಕೈ ಒತ್ತಿ ಹಿಡಿದು ಹೆದರುತ್ತಲೇ ಹೋದೆ. ಪರವಾಗಿಲ್ಲ ಇವರು..!

 ಮರಗಟ್ಟುವ ಇಂಜಕ್ಷನ್ ನೀಡಿ  ಕೆಲ  ನಿಮಿಷ ಆದ ಮೇಲೆ  ಬಾಯಿ ಕಳಸಿ ಹಲ್ಲನ್ನು ಅವರ ಚಿಮ್ಮಟಿಗೆಯಿಂದ ಅಲುಗಾಡಿಸಿದರು..'ಈಗ ಹಲ್ಲು ಕೀಳಲೇ? ' ಅಂದರು. ನಾನು ಬಾಯಿ ಕಳೆದು ಕೊಂಡೇ' ಊಂ,'ಅಂದೆ. 'ಕಿತ್ತಿದ್ದಾಯ್ತು.'ಎಂದು ನಕ್ಕರು ಡಾಕ್ಟ್ರು.   'ವಾವ್' ನನಗೆ ಆದ ಖುಷಿ ಎಷ್ಟೆಂದರೆ ಈಗಿಂದೀಗಲೇ  ಎಲ್ಲಾ ಹಲ್ಲುಗಳನ್ನೂ ಕೀಳಿಸಿ ಬಿಡೋಣ ಅನ್ನುವಷ್ಟು.! 
ಅಲ್ಲವೇ ಮತ್ತೆ..! ಅರ್ಧ ಗಂಟೆ ನಿರೀಕ್ಷೆಯಲ್ಲಿದ್ದವಳಿಗೆ ಅರ್ಧ ನಿಮಿಷದಲ್ಲಿ ಹಲ್ಲು ಕಿತ್ತಾಯ್ತು ಎಂದರೆ ಸಂತೋಷ ಆಗದಿರುತ್ತದೆಯೇ...? 

ಇದರಿಂದ ನನಗೆ ತಿಳಿದ ನೀತಿಯೆಂದರೆ 'ಹಲ್ಲುದುರಿಸುವ ಕಲೆ ಹೆಂಗಸರಿಗಿಂತ  ಗಂಡಸರಿಗೆ ಸಿದ್ಧಿಸಿರುತ್ತದೆ.' ಎನ್ನುವುದು...!




Saturday, May 21, 2011

ಚಿಲಿಯ ಕಲಿಗಳು

ಈ ಸಲ ಊರಿಂದ ಬರುತ್ತಿದ್ದಂತೆ  ನಟರಾಜ್   ಪುಸ್ತಕವೊಂದರಿಂದಲೇ ಸ್ವಾಗತಿಸಿದರು...! ಆಶ್ಚರ್ಯ ...! ಏಕೆಂದರೆ ಸಮಯವಿದ್ದಾಗಲೆಲ್ಲಾ ದಿನಪತ್ರಿಕೆ.. ಬ್ಯುಸಿನೆಸ್ ಮ್ಯಾಗಜೀನ್ ಗಳಲ್ಲೇ ಮುಖ ಹುದುಗಿಸಿಕೊಳ್ಳುವ  ಇವರು ಕಥೆ, ಕಾದಂಬರಿ ಇತ್ಯಾದಿಗಳನ್ನು ಮುಟ್ಟಿಯೂ ನೋಡುವುದಿಲ್ಲ. 
ಊಟ, ತಿಂಡಿ  ಹೊತ್ತಿನಲ್ಲಿ, ಕೂತಲ್ಲಿ ನಿಂತಲ್ಲಿ ಇವರದ್ದು ಆ ಪುಸ್ತಕದ್ದೇ ಕಥೆ.. ಇವರ  ಬೈರಿಗೆ ಮೆದುಳನ್ನು  ಕೊರೆದು ಕೊರೆದು ಹಾಕಿತು.ಈ ಪುಸ್ತಕದಲ್ಲಿ ಬರುವ ಬೈರಿಗೆಯಂತೆ..! ಇವರ ತಮ್ಮ ತಂದುಕೊಟ್ಟ ಪುಸ್ತಕ ಓದಿ ಇವರು ಸಿಕ್ಕಾಪಟ್ಟೆ ಪ್ರಭಾವಿತರಾಗಿ ಬಿಟ್ಟಿದ್ದರು. 'ಓದಿದ್ಯನೆ..'    'ಓದಿದ್ಯನೆ..'ಬಿಡುವ ಜಾತಿಯೇ ಅಲ್ಲ.   ನನಗೋ ಮನೆಯನ್ನೆಲ್ಲಾ ಒಮ್ಮೆ ಕ್ಲೀನ್ ಮಾಡುವ ಗಡಿಬಿಡಿ.. 

ಅಂತೂ ಪುಸ್ತಕ ಹಿಡಿದು ಕೂತವಳು ಈ ಪ್ರಪಂಚಕ್ಕೆ ವಾಪಾಸು ಕಾಲಿಟ್ಟಿದ್ದು ಪೂರಾ ಎಲ್ಲರನ್ನೂ ಪಾತಾಳದಿಂದ ಎತ್ತಿ ತಂದ ಮೇಲೆಯೇ..
ಈಗ್ಗೆ ಕೆಲ ತಿಂಗಳ ಮೊದಲು ಟೀವೀ ನ್ಯೂಸ್ ನಲ್ಲಿ ಈ ಕಾರ್ಯಾಚರಣೆಯನ್ನು  ನೋಡಿ 'ಒಹ್ ' ಎಂದು ಉದ್ಘರಿಸಿದ್ದು ಆಮೇಲೆ ಮರೆತಿದ್ದು  ಎಲ್ಲಾ ನೆನಪಾಯಿತು..

ಅದು ''ಚಿಲಿ ಗಣಿ ಸುಖಾಂತ''

ಅದು ದುರಂತವಾಗದಂತೆ ತಡೆಯುವಲ್ಲಿ ಯಾರ್ಯಾರು , ಹೇಗ್ಹೇಗೆ, ಎಷ್ಟೆಷ್ಟು ರೀತಿಯಲ್ಲಿ ಶ್ರಮಿಸಿದರು ಎಂಬುದನ್ನೇ ಕನ್ನಡದಲ್ಲಿ ''ಚಿಲಿಯ ಕಲಿಗಳು'' ಎಂಬ ಪುಸ್ತಕವಾಗಿಸಿ  ನಮ್ಮನ್ನು ರೋಮಾಂಚಿತಗೊಳಿಸಿದವರು 'ಸರೋಜಾ ಪ್ರಕಾಶ್ ರವರು.' 

ದಕ್ಷಿಣ ಅಮೆರಿಕಾದ ಮೆಣಸಿನ ಕಾಯಿ ಆಕಾರದ ಚಿಲಿ ದೇಶದಲ್ಲಿ ನಡೆದ ಐತಿಹಾಸಿಕ ಘಟನೆಯಾದ ಚಿನ್ನಮತ್ತು ತಾಮ್ರದ ಅದಿರನ್ನು ತೆಗೆಯುವ ಸ್ಯಾನ್ ಯೋಸೆ   ಗಣಿಯಲ್ಲಿನ ಭೂ ಕುಸಿತದಿಂದಾಗಿ 2300 ಅಡಿ ಆಳದಲ್ಲಿ  ಸಿಕ್ಕಿ ಹಾಕಿಕೊಂಡ ಮೂವತ್ಮೂರು ಜನ  ಕಾರ್ಮಿಕರನ್ನು  ಅರವತ್ತೊಂಬತ್ತು ದಿನಗಳಲ್ಲಿ ಹೇಗೆ ಸುರಕ್ಷಿತವಾಗಿ ರಕ್ಷಿಸಿದರು? ಅದಕ್ಕೆ ಎಷ್ಟು ಜನ ಶ್ರಮಿಸಿದರು? ಬಳಕೆಯಾದ ಯಂತ್ರಗಳಾವುವು? ವಿಜ್ಞಾನವನ್ನು ಎಷ್ಟು ವ್ಯವಸ್ತಿತವಾಗಿ ಬಳಸಲಾಯಿತು? ಸರಕಾರ ಹೇಗೆ ಸ್ಪಂದಿಸಿತು? ಮಾಧ್ಯಮಗಳು, ಸೇವಾ ಸಂಸ್ಥೆಗಳೂ, ಕಾರ್ಮಿಕರ ಬಂಧುಗಳೂ  ಹೇಗೆ ಕಾರ್ಯಾಚರಣೆ ಮುಗಿಯುವ ವರೆಗೂ ಕಾದರು?  ವಿಶ್ವ ಹೇಗೆ ಪ್ರತಿಕ್ರಿಯಿಸಿತು..?  ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೇಗೆ ಸುರಕ್ಷಿತವಾಗಿ ಕಾಯ್ದಿಡಲಾಯಿತು?
ಈ ಮುಂತಾದ  ಎಲ್ಲ ಪ್ರಶ್ನೆಗಳಿಗೆ  ಸವಿವರವಾಗಿ, ಸರಳವಾಗಿ  ಉತ್ತರಿಸುತ್ತಾ  ಹೋಗುತ್ತಾರೆ ಲೇಖಕಿ.

8.1 c.m ಅಗಲ ಕೊಳವೆಯಲ್ಲಿ 33 ಜನರಿಗೆ ಎರಡು ತಿಂಗಳ ಕಾಲ ಅಗತ್ಯವಿರುವ ಸಾಮಗ್ರಿಗಳನ್ನು ಕಳಿಸಲಾಯಿತು. ಐದು ನೂರಕ್ಕೂ ಹೆಚ್ಚು ಮಂದಿ ತಂತ್ರಜ್ಞರು ಹಗಲಿರುಳೂ ಶ್ರಮಿಸಿದರು.ಕಾರ್ಯಪಡೆಗಳು ಅಂತರ್ಜಾಲದ ಮುಖಾಂತರ ವಿಶ್ವದ ಹಲವಾರು ಪರಿಣತ ತಂತ್ರಜ್ಞರ ಸಹಾಯ, ಸಲಹೆ ಪಡೆದುಕೊಂಡಿತು.ಕಾರ್ಯಪಡೆಯ ಬಳಿ ಭೂ ವಿಜ್ಞಾನಿಗಳ, ಡ್ರಿಲ್ಲರುಗಳ, ಮನೋವಿಜ್ಞಾನಿಗಳ, ವೈದ್ಯರ, ಸಬ್ಮರಿನ್  ತಂತ್ರಜ್ಞರ  ಹೀಗೆ ಅನೇಕ ತಜ್ಞರಿದ್ದರು.
ಮೂರು ಬೃಹತ್ ಬೈರಿಗೆಗಳ ಸಹಯೋಗದಲ್ಲಿ ಮೂರು ಗೇಣು ಅಗಲದ,  ಪಾತಾಳಕ್ಕೆ ಕೊರೆದ ಕಿಂಡಿಯಲ್ಲಿ ಎಂಟಡಿ ಎತ್ತರದ ಸಿಲಿಂಡರಿನಾಕೃತಿಯ  ಪಂಜರ 'ಫೀನಿಕ್ಸ್'  ನ ಮುಖಾಂತರ ಗಂಟೆಗೊಬ್ಬರಂತೆ 33 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು.ವಿಜ್ಞಾನದ ಸದುಪಯೋಗದ ಮಹತ್ವಪ್ರಪಂಚಕ್ಕೆ ತಿಳಿಯಿತು.
ಕಾರ್ಮಿಕರು ಗಣಿಯಲ್ಲಿ ಸಿಲುಕಿದ ಸುದ್ದಿ ತಿಳಿಯುತ್ತಿದ್ದಂತೆ ಧಾವಿಸಿದ ಬಂಧುಗಳಿಗೆ ಉಳಿಯಲು  'ಆಶಾ ಶಿಬಿರ' ವನ್ನು ರಚಿಸಲಾಯಿತು.....ಮಕ್ಕಳಿಗಾಗಿ ಅಲ್ಲಿಯೇ ಶಾಲೆ.. ಇತರೆ ಚಟುವಟಿಕೆಗಳಿಗೆ ಅನುಕೂಲತೆಗಳು..ಹೀಗೆ....

ಬರೆದರೆ ಇಡೀ ಪುಸ್ತಕವನ್ನೂ ಬರೆಯುತ್ತಲೇ ಇರಬೇಕಾಗುತ್ತದೆ.  ಅಷ್ಟೊಂದು ವಿಚಾರಗಳಿವೆ..ಎಲ್ಲವೂ ಮುಖ್ಯವಾಗಿಯೇ ಕಾಣಿಸುತ್ತದೆ. 
ಓದುವಾಗ ಆಗಾಗ ಉಮ್ಮಳಿಸಿ ಬರುತ್ತದೆ. ಕಣ್ಣು ಹನಿಗೂಡುತ್ತದೆ.
ಒಂದು ಘಟನೆ -
ಬೈರಿಗೆಗಳ ಮೊಲಕ ಕೊರೆಯುತ್ತಾ ಹೋದಂತೆ ಗಣಿಕುಸಿತದ ಹದಿನೇಳನೆ ದಿನ ಗಣಿಯಲ್ಲಿ  ಸಿಲುಕಿಕೊಂಡ ಕಾರ್ಮಿಕರ ಇರುವು ತಿಳಿಯುತ್ತದೆ. ತಂತಿಯ ಮೂಲಕ ಫೋನ್ ಒಂದನ್ನು 700 m  ಪಾತಾಳಕ್ಕೆ ಇಳಿ ಬಿಡಲಾಗುತ್ತದೆ.ಇತ್ತಕಡೆ  ಗಣಿ ಸಚಿವ ಗೋಲ್ಬೋರ್ನ್  ಅವರೇ ಮಾತಾಡುತ್ತಾರೆ. ಅತ್ತಕಡೆ ಮುಖ್ಯಸ್ಥ ಊರ್ಜುವಾ ..
'ಹೇಗಿದ್ದೀರಾ ಎಲ್ಲಾ' ಎನ್ನುವ ಪ್ರಶ್ನೆಗೆ 'ನಾವೆಲ್ಲಾ ಕ್ಷೇಮವಾಗಿದ್ದೇವೆ. ರಕ್ಷಣೆಗಾಗಿ ಕಾಯುತ್ತಿದ್ದೇವೆ.. ' ಸಚಿವರು  ಮತ್ತೊಂದು ಮಾತಾಡುವ ಮುನ್ನವೇ 'ಸರ್ ಒಂದು ಕ್ಷಣ ನಿಲ್ಲಿ'  ಎನ್ನುತ್ತಾನೆ ಊರ್ಜುವಾ. ಅವಾಕ್ಕಾದ ಸಚಿವರು ಯೋಚಿಸುವಷ್ಟರಲ್ಲಿಯೇ ಚಿಲಿಯ 'ರಾಷ್ಟ್ರಗೀತೆ' ವೃಂದಗಾನದಲ್ಲಿ ಕೇಳಿಸ ತೊಡಗುತ್ತದೆ.!
ಪಾತಾಳದಲ್ಲಿದ್ದ ಎಲ್ಲ ಮೂವತ್ಮೂರು ಜನರೂ ಒಕ್ಕೊರಲಿನಿಂದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದರು.
 ನೆರೆದಿದ್ದವರ  ಕಣ್ಣು ಮಂಜಾಗಿತ್ತು.
ಓದುತ್ತಾ ಹೋದಂತೆ ನನಗೂ ಮನಸ್ಸು ಆರ್ದ್ರವಾಯಿತು.ಎಂತಾ ದೇಶಾಭಿಮಾನ..!

ನಿಜಕ್ಕೂ ಚಿಲಿಯ ಕಲಿಗಳೇ ಅವರು.
ಅನಿವಾರ್ಯವಾಗಿ ಎಂಬಂತೆ ಓದಲು ಕುಳಿತವಳು ಈಗ ಭಾವನೆಗಳನ್ನು  ತಡೆದುಕೊಳ್ಳಲಾರದೆ  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಇಂತಾ   ಅಪರೂಪದ ಪುಸ್ತಕವೊಂದನ್ನು ಬರೆದು ಲೋಕಾರ್ಪಣೆಗೈದ ಸರೋಜಾ ಪ್ರಕಾಶ್ ನಿಜಕ್ಕೂ ಅಭಿನಂದನಾರ್ಹರು.

Sunday, April 24, 2011

ಅಪ್ಪಯ್ಯನ ಹಳೆ ಸೈಕಲ್ಲೂ.. ಕೆಂಪಿ ದನವೂ..

 ನನ್ನ ತಂದೆಯವರ ಬಳಿ ಒಂದು ಹಳೆ ಸೈಕಲ್ ಇದೆ.ಸಾವಿರದೊ೦ಬೈನೂರಾ  ಐವತ್ತೇಳನೆ ಇಸವಿಯಲ್ಲಿ ನೂರಾ ಐವತ್ತೈದು ರೂಪಾಯಿಗಳಿಗೆ ಅವರು ಚೌಕಾಸಿ ಮಾಡಿ ಖರೀದಿಸಿದ್ದು ಅದು.  ಅದು ಎಷ್ಟು ಹಳೆಯದು ಎಂದು  ಅವರಿಗೂ  ಗೊತ್ತಿಲ್ಲ..! ಆವರು ಖರೀದಿಸಿದ್ದೇ ಸೆಕೆಂಡ್ ಹ್ಯಾಂಡ್ ಸೈಕಲ್ಲು.. ಈಗ  ಅದರ ಬಹುತೇಕ ಎಲ್ಲಾ ಭಾಗಗಳನ್ನೂ ಬದಲಾಯಿಸಲಾಗಿದೆ.. ! ಎಲ್ಲಾ ಪಾರ್ಟ್ಸೂ ಒಟ್ಟಿಗೆ  ಹಾಳಾಗದು.ಅಂತೆಯೇ   ಹೊಸ ಬಿಡಿ ಭಾಗ ಜೋಡಿಸಿದಾಗ ಹಳೆ ಭಾಗದ ಹಳೆತನ ಮುಂದುವರೆದುಕೊಂಡು ಹೋಗುತ್ತಿರುತ್ತದೆ. ಅಂತೂ   ಅಪ್ಪಯ್ಯನಿಗೆ [ನಮ್ಮ ತಂದೆ ] ವಯಸ್ಸು  ಈಗ ಎಪ್ಪತ್ತೈದು ದಾಟಿದ ಹಾಗೆ ಅದಕ್ಕೂ ಐವತ್ತೊಂದೆರಡಾದರೂ ದಾಟಿದ್ದಿರಲೇ ಬೇಕು!

ಅಪ್ಪಯ್ಯ ಕಷ್ಟ ಜೀವಿ.. ಬಹು ಕಷ್ಟದ ಬಾಲ್ಯ . ಅಪ್ಪಯ್ಯನ ಬದುಕನ್ನು ಅವನೇ ಬದುಕಿದ್ದಾನೆ. ಕಿತ್ತಳೆ ಹಣ್ಣಿನ ಬುಟ್ಟಿಯನ್ನು ತಲೆ ಮೇಲೆ ಹೊತ್ತು  ಹದಿನೈದು ಮೈಲಿ ದೂರದ ಸಂತೆಗೆ ಹೋಗಿ ಮಾರಿ ಸಿಕ್ಕ ಹಣದಲ್ಲಿ ದಿನಸಿ ತಂದು ಆವತ್ತಿನ ಊಟ ಉಣ್ಣುವ ಪರಿಸ್ಥಿತಿ ಇತ್ತಾಗ.   ಪರಿಸ್ಥಿತಿ ಸ್ವಲ್ಪ ಸುಧಾರಿಸಿದಾಗ ಖರೀದಿಸಿದ ಸೈಕಲ್ಲು ಅವನ ಬಹುತೇಕ ಕಷ್ಟಗಳನ್ನು ತಾನೂ ಹಂಚಿಕೊಂಡಿದೆ. ಅದಕ್ಕಾಗಿಯೇ ಏನೋ ಅದರ ಮೇಲೆ ತೀವ್ರ  ಅಭಿಮಾನ ಆಪ್ಪಯ್ಯನಿಗೆ. ಜೀವನದ ಕಷ್ಟದ ಸಮಯದಲ್ಲಿ ಜೊತೆ ಕೊಟ್ಟ ಯಾರೇ ಆಗಲಿ, ಅದು ಜೀವವೇ ಆಗಲೀ ಜಡವೇ ಆಗಲೀ ಅದರೆಡೆಗೊಂದು ಅಭಿಮಾನ ಕೊನೆವರೆಗೂ  ಮನುಷ್ಯನಲ್ಲಿ ಬೇರೂರಿರುತ್ತದೆ.ಅದನ್ನು ಬಾರಿ ಬಾರಿಗೂ ವ್ಯಕ್ತ ಪಡಿಸಲೇ ಬೇಕೆಂದಿಲ್ಲ..  

ಬಸ್ಸು, ಇನ್ನಿತರೇ ವಾಹನಾದಿ ಸೌಕರ್ಯಗಳಾದ ಮೇಲೆ ಅಪ್ಪಯ್ಯ ಅದನ್ನು ಚಲಾಯಿಸುವುದನ್ನು ಬಿಟ್ಟಿದ್ದಾನೆ. ಆದರೆ ಮನೆಗೆ ಬರುವ ನೆಂಟರ ಮಕ್ಕಳಾದಿಯಾಗಿ ಅನೇಕ ಜನರು ಸೈಕಲ್ ಹೊಡೆಯುವುದನ್ನು ಅಪ್ಪಯ್ಯನ ಸೈಕಲ್ಲಿನಲ್ಲಿಯೇ ಕಲಿತಿದ್ದಾರೆ. ದೂರದ ಊರಿಂದ ಕೂಲಿಗೆ ಬರುವ ಕೂಲಿಯಾಳುಗಳಿಗೂ ವಾರಕ್ಕೆ ಮೂರು, ನಾಲ್ಕು ದಿನ ದಾರಿ ಹಾಯಿಸುತ್ತಿದ್ದುದು ಅದರ ಚರಿತ್ರೆಯ ಪುಟಗಳಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ಅದರ ಒವರ್ಹ್ವಾಲಿಂಗ್ ಮಾಡಿಸಿ ಜತನ ಮಾಡುತ್ತಿರುತ್ತಾನೆ.
 ಅಪ್ಪಯ್ಯ ಎಷ್ಟೋ ಕಷ್ಟಗಳನ್ನು ಸೈಕಲ್ಲಿನ ಜೊತೆಯಲ್ಲಿಯೇ ಅನುಭವಿಸಿದ್ದಾನೆ.  ಹೋರಾಡಿದ್ದಾನೆ, ಬಿದ್ದಿದ್ದಾನೆ, ಗೆದ್ದಿದ್ದಾನೆ.ಈಗ ಮನೆಯಲ್ಲಿ ಮೊಮ್ಮೊಕ್ಕಳದು ಚಿಕ್ಕ ಪುಟ್ಟ ಸೈಕಲ್ಲಿನಿಂದ ಹಿಡಿದು ಗೇರ್ ಸೈಕಲ್ಲಿನ ವರೆಗೆ ಇದೆ. ಆದರೆ ಅವ್ಯಾವುವೂ ಅಪ್ಪಯ್ಯನ ಸೈಕಲ್ಲಿನ ಯೋಗ್ಯತೆಗೆ ಬರವು. 'ಈಗಿನ  ಹತ್ ಸೈಕಲ್ಲಿನ  ಯೋಗ್ಯತೆ ಯನ್ ಒಂದ್ ಸೈಕಲ್ಲಿನ ಯೋಗ್ಯತಿಗೆ ಸರಿ  ಬತಲೇ..' ಎಂದು ಆಗಾಗ  ಸ್ವಗತದಲ್ಲಿ ಉದ್ಘರಿಸುತ್ತಿರುತ್ತಾನೆ.
'ಬರ್ ಬರ್ತಿದ್ದಂಗೆ ಹಾಳಾಕ್ಯಂಡೆ  ಇರ್ತು...  ಎಂತಾ ಸೈಕಲ್ ಮಾಡ್ತ್ವೆನ..'  ಅಂಗಳದಲ್ಲಿ ಸೈಕಲ್ ಕಸರತ್ತು ನಡೆಸುವ ಮೊಮ್ಮೊಕ್ಕಳನ್ನು  ಕಿಟಕಿಯಿಂದ ನೋಡುತ್ತಾ ತಾಂಬೂಲ ಮೆಲ್ಲುತ್ತಿರುತ್ತಾನೆ..
ಅಪ್ಪಯ್ಯನ ಹಳೆ ಕಷ್ಟದ  ಕಥೆಯಲ್ಲಿ ಸೈಕಲ್ಲಿನದು  ಒಂದು ಪ್ರಮುಖ ಪಾತ್ರ. ಆಗ ಕಷ್ಟ ಪಟ್ಟಿದ್ದೆಲ್ಲವೂ ಈಗ ಅಪ್ಪಯ್ಯನದು  ನೆನಪು ಅಷ್ಟೇ.    ಅದು ಹಾಗೆಯೇ..  ಸುಖದ ಮೆಟ್ಟಿಲಿನಲ್ಲಿ ನಿಂತು ತಿರುಗಿ ನೋಡಿದಾಗ ಪಟ್ಟ ಕಷ್ಟ, ನೋವುಗಳೆಲ್ಲವೂ ಸುಖದ ನೋವುಗಳಾಗೆ ಕಾಣಿಸುತ್ತವೆ. ಜಯಿಸಿದ ಸಾರ್ಥಕ ಭಾವ ಅನ್ನುವುದು  ಕಷ್ಟದ ಎಸೆನ್ಸ್ ಒಂದನ್ನು  ಮಾತ್ರ ಉಳಿಸುತ್ತದೆ.

ಹೀಗಿದ್ದಾಗಲೂ ಒಮ್ಮೆ  ಅಪ್ಪಯ್ಯನಿಗೆ ಆ ಸೈಕಲ್ಲನ್ನು ಮಾರುವ ಆಲೋಚನೆ ಬಂದು ಬಿಟ್ಟಿತ್ತು. ''ನಮಗಂತೂ ಇದು ಇನ್ನು ಉಪಯೋಗಿಲ್ಲೇ. . ಸುಮ್ನೆ ಮನೇಲಿ ತುಕ್ಕು ಹಿಡಿಸ ಬದ್ಲು ಹುಟ್ಟಿದಷ್ಟಕ್ಕೆ ಕೊಟ್ ಹಣದ್ರಾತು.   ಲಾಭಕ್ಕಲ್ಲ, ಪುಗಸಟ್ಟೆ ಕೊಡದು ಬ್ಯಾಡ ಹೇಳಿ.. ಏನ್ ಹೇಳ್ತ್ಯ ಗಣಪಯ್ಯ ನೀನು..'' ಎಂದು ಅಪ್ಪಯ್ಯ ತನ್ನ ಸ್ನೇಹಿತನಲ್ಲಿ ವಿಷಯ ಪ್ರಸ್ತಾಪ ಮಾಡಿದ್ದು ಹೌದು.  ಅಪ್ಪಯ್ಯನ ಕಷ್ಟ ಸುಖಗಳನ್ನೆಲ್ಲಾ ಕಣ್ಣಾರೆ ಕಂಡ ಆ ಸ್ನೇಹಿತ ಹೇಳಿದ್ದಿಷ್ಟು.'' ಹೌದೌದು.. ನಿಂಗೆ ಇದೊಂದು ಸೈಕಲ್ಲೂ ..ಮತ್ತೆ ಕೆಂಪಿ ದನಾನೂ ಮಾರ್ಕ್ಯಂಡೆ  ಅರಮನೆ ಕಟ್ಸಕೂ ಅಂತ ವಿಚಾರಿದ್ದು  ಕಾಣ್ತು'' ಎಂದು ಒಂದೇ ಮಾತಿನಲ್ಲಿ ಅಪ್ಪಯ್ಯನ
ವಿಚಾರಕ್ಕೆ ಕೊಡಲಿ ಏಟು ಹಾಕಿದ. ಅಪ್ಪಯ್ಯ ನಿಜಕ್ಕೂ ತಾನು ಈ ತರಾ ವಿಚಾರ ಮಾಡಿದೆನಲ್ಲಾ ಎಂದು ಭಾರೀ ಬೇಜಾರು ಮಾಡಿಕೊಂಡದ್ದು ನನಗಿನ್ನೂ ನೆನಪಿದೆ.


ಕೆಂಪಿ ದನವೂ ಅಷ್ಟೇ.ಅದು ನಮ್ಮನೆಯಲ್ಲೇ ಹುಟ್ಟಿದ ಕರು ದೊಡ್ಡದಾಗಿದ್ದು. ಬಹುಷಃ ನಮ್ಮೂರಲ್ಲಿ ಯಾರ ಮನೆಗೆ ಹೋದರು ಕೆಂಪಿ ಅನ್ನುವ ಹೆಸರಿನ ದನವೊಂದಿರುತ್ತದೆ. ದನಗಳಿಗೆ ಕೆಂಪಿ, ಗಂಗೆ, ಗೌರಿ, ಕಪಿಲೆ, ಬೆಳ್ಳಿ, ಈ ಹೆಸರುಗಳು ಮಾಮೂಲು. ಅದು ಹೇಗಿತ್ತಪ್ಪಾ ಅಂದ್ರೆ, ಗಾ೦ವಟೀ ದನ ಕುಳ್ಳಕ್ಕೆ, ಚಿಕ್ಕದಾಗಿ,  ಮುದ್ದಾಗಿ ಇತ್ತು.ಬಣ್ಣ ಕೂಡಾ ಕೆಂಪೇ.  ಕರು ಹಾಕಿದ ದಿನದಿಂದ ಹಾಲು ಕೊಡಲು ಶುರು ಮಾಡಿದರೆ ಮತ್ತೆ ಮೂರು ವರ್ಷಕ್ಕೆ ಮತ್ತೊಂದು  ಕರು ಹಾಕುವ ಹಿಂದಿನ ದಿನದ ವರೆಗೂ ಒಂದು ದಿನವೂ ಬಿಟ್ಟದ್ದಿಲ್ಲ. ಕರು ಹಾಕಿದ ಶುರುವಿನಲ್ಲಿ ಕರುವಿಗೆ ಬಿಟ್ಟು  ಅರ್ಧ ಲೀಟರಿನಷ್ಟು ಹಾಲು  ಕೊಡುತ್ತಾ ಕೊನೆಯಲ್ಲಿ ಅರ್ಧ ಕಾಫೀ ಕಪ್ಪಿನ ಪ್ರಮಾಣಕ್ಕೆ ಇಳಿಯುತ್ತಿತ್ತು. ಅದನ್ನಾದರೂ ಆಯಿ ಎಲ್ಲದಕ್ಕೂ ಮೊದಲಾಗಿ ಕರೆದು ನೋಡುವವರ ಕಣ್ಣು ಬೀಳಬಾರದೆಂದು ಸೆರಗು ಮುಚ್ಚಿ ಅಡುಗೆ ಮನೆಗೆ ಒಯ್ಯುತ್ತಿದ್ದಳು.   ಒಂದು ದಿನ ಒದ್ದಿದ್ದಿಲ್ಲ. ಹಾಯ್ದಿದ್ದಿಲ್ಲ. ದೇವರಿಗೆ ಹೂ ತಪ್ಪಿದರೂ ಕೆಂಪಿ ದನದ ಹಾಲು ತಪ್ಪದು. ಅದು ಇರುವ ವರೆಗೆ ದೊಡ್ದಹಬ್ಬದ   ಗೋ ಪೂಜೆಗೆ  ಬೇರೆ ದನಗಳಿಗೆ ಪ್ರವೇಶವಿರಲಿಲ್ಲ. ಕರು ಹಾಕಿದ ಹತ್ತು ದಿನ ಸೂತಕ ಎಂದು ದೇವರಿಗೆ ನೈವೇದ್ಯಕ್ಕೆ ಅದರ ಹಾಲಿರಲಿಲ್ಲ ಹೊರತಾಗಿ ಕಾಫೀ ಬಳಕೆಗೆ ಅದರದ್ದೇ ಹಾಲು. ಕರು ಹಾಕಿತು ಗಿಣ್ಣ ಸಿಗುವುದೆಂಬ ಭರವಸೆಯನ್ನೆಲ್ಲಾ  ನಾವ್ಯಾರೂ ಇಟ್ಟು ಕೊಳ್ಳುವ ಹಾಗೆಯೇ ಇರಲಿಲ್ಲ.ಸಾರ್ವಕಾಲಿಕ ಹಾಲು ಸರಬರಾಜು ಹಾಗಾಗಿ ಗಿಣ್ಣವಾಗುವುದು ಹೇಗೆ..? ಈ ದನವೇ ಹೆಚ್ಚುಗಾರಿಕೆಗೆ ಕಾರಣವಾಗುವ ಬಗೆ ಹೇಗೆ ಎಂದರೆ ಎಷ್ಟೊತ್ತಿಗೆ ಹೋಗಿ ಹಾಲು ಕರೆದರೂ ಇದ್ದಷ್ಟನ್ನು ಕೊಡುವ ಪರಿ.ಬಂದ ನೆಂಟರಿಗೆ ಕಾಫೀ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಲು ಈ ದನವೇ ಕಾರಣ. ಉಳಿದಂತೆ ನಾಲ್ಕಾರು  ದನಗಳು ಕೊಟ್ಟಿಗೆ ತುಂಬಾ  ಇದ್ದವು ಕೂಡಾ.  ಎಲ್ಲವೂ ಕಾಟು ದನಗಳೇ ಆದರೂ ಅದರಲ್ಲಿ ಎರಡು ಬರಡು, ಒಂದು ಇನ್ನೂ ಕರು ಹಾಕದ  ಮಣಕ, ಇನ್ನೆರಡು ಚಾಳಿ.  ಚಾಳಿ ಮಾಡುವ ದನಗಳೆಂದಾದರೂ ಹೇಗೆ, ಅರ್ಧ ಲೋಟ ಹಾಲು ಕರೆಯಲು ಆಯಿ ಇಪ್ಪತ್ತು ಬಾರಿ ಕೊಟ್ಟಿಗೆಗೂ ಮನೆಗೂ ಓಡಾಡಬೇಕಿತ್ತು.



ಹಾಗಾಗಿ ಈ ಎರಡು ಸಂಗತಿಗಳಲ್ಲಿ ಅಪ್ಪಯ್ಯನಿಗೆ ನಿಯತ್ತಿಗಿಂತಾ ಬೇರೆ ಯಾವುದೂ ಕಾಣಿಸಿಲ್ಲ. ತನ್ನ ಕಷ್ಟದ ಸಮಯದಲ್ಲಿ ಇವೆರಡೂ ತನ್ನ ಕೈ ಬಿಟ್ಟಿಲ್ಲ ಎನ್ನುವ ಸಮಾಧಾನ ಅವನಿಗೆ.ಎಷ್ಟೋ ದೊಡ್ಡ ದೊಡ್ಡ ಸಂಗತಿಗಳು ಇದ್ದರೂ ಕೂಡಾ ಕೆಲವೊಮ್ಮೆ ಚಿಕ್ಕ ಚಿಕ್ಕ ವಿಷಯಗಳಲ್ಲಿ ಸಿಗುವ ಸಾಂತ್ವಾನ ಹೆಚ್ಚಾಗಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ.

ಈಗ ಕೊಟ್ಟಿಗೆ ತು೦ಬಾ ದೊಡ್ಡ ಜಾತಿಯ ದನಗಳೇ ಇವೆ. ಬೇಕಷ್ಟು ಹಾಲು ಕೊಡುತ್ತವೆ. ಆದರೂ ಕಷ್ಟ ಪಟ್ಟು ಪಡೆದಿದ್ದರ ಸುಖ ಇದರಲ್ಲಿಲ್ಲ..! ಆಗ ಪ್ರತಿ ಕ್ಷಣವೂ ಅನುಭವಕ್ಕೆ ಬರುತ್ತಿತ್ತು.. ಕಷ್ಟದ್ದು.!   ಸುಲಭವಾಗಿ ಸಿಕ್ಕುವುದರೆಡೆಗೆ ಯಾವಾಗಲೂ ತಾತ್ಸಾರವೇ ನಮಗೆ. ಮೊಸರು ತಾಡನೆಗೊಳಗಾಗಿ ಆಗಿ ಕೊನೆಯಲ್ಲಿ ಬೆಣ್ಣೆ ಸಿಗುವುದಿಲ್ಲವೇ..?ಹಾಗೆ..ಜೀವನ ಕೂಡ.. ಅಪ್ಪಯ್ಯನ ಪ್ರಕಾರ. ಸುಖದ ಬೆಲೆ ಗೊತ್ತಾಗಬೇಕಿದ್ದರೆ ಅದಕ್ಕಾಗಿ ಹಗಲಿರುಳೂ  ಹಂಬಲಿಸ ಬೇಕು.

ಕೆಂಪಿ ದನ ಈಗಿಲ್ಲ.. ಆದರೆ ಸೈಕಲ್ಲು ಮಾತ್ರಾ ಅಪ್ಪಯ್ಯನ ಕಷ್ಟಗಳಿಗೆ ಸಾಕ್ಷಿಯಾಗಿ ಇನ್ನೂ ಬಳಕೆಯಲ್ಲಿದೆ.


ವಂದನೆಗಳು.

Friday, April 15, 2011

ರೇಷ್ಮೆ ಹುಳುಗಳ ಜೀವನದಾಟ.. ಪಾಠ..

ಕೆಲವು ದಿನಗಳ ಮೊದಲು ಕೊಕ್ಕರೆ ಬೆಳ್ಳೂರಿನ ಕೊಕ್ಕರೆಗಳ ಫೋಟೋಗಳನ್ನು ಬ್ಲಾಗಿನಲ್ಲಿ ಪ್ರಕಟಿಸಿದ್ದೆನಷ್ಟೇ. ಅದೇ ಕೊಕ್ಕರೆ ಬೆಳ್ಳೂರಿನಿಂದ ವಾಪಾಸಾಗುವಾಗ ರಸ್ತೆ ಬದಿಯ ಮನೆಯೊಂದರ ಪಕ್ಕದ ನೆರಳಿನಲ್ಲಿ  ರೇಷ್ಮೆ ಹುಳುಗಳ  ಈ ಚಂದ್ರಿಕೆಗಳು ಕಾಣಿಸಿದವು. 'ಬಿಟ್ಟರೆ ಸಿಗದು ' ಎಂದುಕೊಳ್ಳುತ್ತಾ   ಜ್ಞಾನವನ್ನು ಭದ್ರಪಡಿಸಿಕೊಳ್ಳಲು ತರಾತುರಿಯಿ೦ದ ಕಾರಿಳಿದು ಫೋಟೋ ತೆಗೆಯಲು ಮುಂದಾದೆವು..ಅಷ್ಟೊತ್ತಿಗೆ ಆ ಮನೆಯ ಯಜಮಾನ ಸ್ವಯಂ ರೇಷ್ಮೆ ಕೃಷಿಕ ನಮಗೆ   ಮಾಹಿತಿಗಳೊಂದಿಗೆ ಒಳಗಡೆ    ಇರುವ ಮತ್ತಷ್ಟು ಚಂದ್ರಿಕೆಗಳನ್ನೂ ,ಅಟ್ಟಣಿಗೆಯಲ್ಲಿ  ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಮರಿ ಹುಳುಗಳನ್ನೂ, ಬಲಿತ ಹುಳುಗಳೂ, ಕೋಶ ಮಾಡಿಕೊಳ್ಳುತ್ತಿರುವ [ಕಕೂನ್]  ಹುಳುಗಳ ಮತ್ತು ಕೋಶಗಳನ್ನೂ ತೋರಿಸಿ ಫೋಟೋ ತೆಗೆದುಕೊಳ್ಳಲು  ಅನುವು ಮಾಡಿಕೊಟ್ಟರು.  
ಅವರ ಹೊಟ್ಟೆ ತಣ್ಣಗಿರಲಿ.ಮಕ್ಕಳಿಗೆ ಒಂದು ಉತ್ತಮ ಪ್ರಾತ್ಯಕ್ಷಿಕೆ ದೊರೆತಂತೆ ಆಯಿತು.

ಅಂತೆಯೇ ನಾನೂ ಕೂಡಾ ಫೋಟೋದೊಂದಿಗೆ ಇನ್ನಷ್ಟು   ಮಾಹಿತಿಯನ್ನೂ ಹೊಂದಿಸಿ  ಮತ್ತಷ್ಟು ವಿಸ್ತರಿಸಿಕೊಳ್ಳಲು  ಅಂತರ್ಜಾಲಮುಖಿಯಾದೆ.


ಮೊದಲು ಕಾಣಿಸಿದ ತಟ್ಟಿಯ ಚಂದ್ರಿಕೆಗಳು 

ಹಿಪ್ಪುನೇರಳೆ ಸೊಪ್ಪನ್ನು ಭಕ್ಷಿಸುತ್ತಿರುವ ರೇಷ್ಮೆ ಹುಳುಗಳು.


ಬಾಂಬಿಕ್ಸ್ ಮೊರಿ     [  bombyx mori  ] ಎನ್ನುವ ಒಂದು ಜಾತಿಯ ಹಾತೆಯ ಲಾರ್ವೆಯೇ  ರೇಷ್ಮೆ ಹುಳು. ರೇಷ್ಮೆ ಇಲಾಖೆಯಲ್ಲಿ ಸಿಗುವ ಚಿಕ್ಕ ಲಾರ್ವೆಗಳನ್ನು ತಂದು ಈ ಹಿಪ್ಪುನೇರಳೆ ಸೊಪ್ಪಿನ ಅಟ್ಟಣಿಗೆಯ ಮೇಲೆ ಬಿಡುತ್ತಾರೆ. ಹುಳುಗಳಿಗೆ   ಸದಾಕಾಲ ಸೊಪ್ಪನ್ನು ತಿನ್ನುವುದೇ ಕೆಲಸ..ಸುಮಾರು ಇಪ್ಪತ್ತು -ಇಪ್ಪತೈದು ದಿನಗಳ ಕಾಲ ತಿಂದೂ ತಿಂದೂ ಬಲಿಯುತ್ತವೆ. ರೇಷ್ಮೆ ಸಾಕುವವರು ಹಿಪ್ಪು ನೇರಳೆ ತೋಟವನ್ನೂ ಹೊಂದಿರುತ್ತಾರೆ.



ರೈತರು ಎಳೆ ಹುಳುಗಳಿಗೆ 'ಕಾಯಿ' ಎಂದೂ, ಬಲಿತವಕ್ಕೆ 'ಹಣ್ಣು' ಎಂದು ಸರಳವಾಗಿ ವಿವರಿಸಿದರು.

ಬಲಿತ ಹುಳುಗಳು 

ರೇಷ್ಮೆ ಹುಳುಗಳು ಈ ಅವಧಿಯಲ್ಲಿ ನಾಲ್ಕು ಹಂತಗಳಿಂದ ಹೊರ ಚರ್ಮವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ [molt]. ಚರ್ಮದ  ಬಣ್ಣ ಹಳದಿಯಾಗುತ್ತದೆ. ಸೊಪ್ಪು ತಿನ್ನುವುದನ್ನು ನಿಲ್ಲಿಸುತ್ತದೆ. ಐದನೇ ಹಂತವೇ 'ಪ್ಯೂಪ'.
ಆಗ ಅದನ್ನು ಅಟ್ಟಣಿಗೆಯಿಂದ ಹೊರ ತೆಗೆದು ಚಂದ್ರಿಕೆಯಲ್ಲಿ ಬಿಡುತ್ತಾರೆ. 


ಕೋಶದ ಸಿದ್ದತೆಯಲ್ಲಿರುವ ಹುಳು
 
ತನ್ನ ಜೊಲ್ಲು ರಸದಿಂದ ತನ್ನ ಸುತ್ತಲೂ ಕೋಶವನ್ನು ಹೆಣೆಯಲು ತೊಡಗುತ್ತದೆ. ಇದು ಸ್ರವಿಸುವ  ಜೊಲ್ಲು ರಸದಲ್ಲಿ ಎರಡು ಬಗೆಯ ಪ್ರೋಟೀನ್ ಗಳಿವೆ. fibroin ಮತ್ತು  sericin .  ಫೈಬ್ರೊಇನ್  ಎಳೆಗಳಾಗುತ್ತವೆ ಮತ್ತು ಸೆರಿಸಿನ್ ಅದನ್ನು ಗಟ್ಟಿಗೊಳಿಸಲು ಸಹಾಯಮಾಡುತ್ತದೆ. ಅದು ನಿಶ್ಚಲ ಸ್ಥಿತಿಯಲ್ಲಿರುವ ಪ್ಯೂಪದ ಸಂರಕ್ಷಣೆಗಾಗಿ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಸುಮಾರು ಮೂರು ದಿನಗಳಲ್ಲಿ ಕೋಶ ಸಿದ್ಧವಾಗುತ್ತದೆ.

ಪೂರ್ಣಗೊಂಡ ಕೋಶ [cocoon ]




ಈ ಕಕೂನ್ ಎಷ್ಟು ಗಟ್ಟಿಯಾಗಿರುತ್ತದೆಂದರೆ   ಬರಿ ಕೈಗಳಿಂದ ಇದನ್ನು ಛೇಧಿಸಲಾಗದು. ಒಂದು ಕಕೂನ್   ಸಾವಿರ ಅಡಿಗಳಿಂದ ಮೂರು  ಸಾವಿರ ಅಡಿ ಉದ್ದದ ಎಳೆಯಿಂದ  ಮಾಡಲ್ಪಟ್ಟಿರುತ್ತದೆ.  ಈ ಹಂತದಲ್ಲಿಯೇ ಇದನ್ನು ರೇಷ್ಮೆ ಉತ್ಪನ್ನಗಳಿಗಾಗಿ ಬಳಸುವರು.ಕುದಿ ನೀರಿನಲ್ಲಿ ಈ ಕಕೂನುಗಳನ್ನು ಮುಳುಗಿಸಿ ಹುಳುಗಳನ್ನು ಸಾಯಿಸುತ್ತಾರೆ. ನಂತರ ನೂಲನ್ನು ತೆಗೆಯುತ್ತಾರೆ.

ಈ ಕಕೂನನ್ನು ಹಾಗೆಯೇ ಇಟ್ಟರೆ ಒಳಗಿನ ರೇಷ್ಮೆಹುಳ  ಹಾತೆಯಾಗಿ ಹೊರಬರುತ್ತದೆ.  ಇದು ಸ್ರವಿಸುವ  ಪ್ರೋಟಿಯೋಲಿಟಿಕ್ ಕಿಣ್ವ  ಎಳೆಗಳನ್ನು ಕರಗಿಸಿ ಹೊರಬರಲು ಸಹಾಯಮಾಡುತ್ತದೆ.

ಪ್ರಕೃತಿ ತನ್ನ ಮಕ್ಕಳಿಗೆ ಬದುಕಲು ಎಷ್ಟೆಲ್ಲಾ  ವೈವಿಧ್ಯಮಯವಾಗಿ   ಸಹಾಯ ಮಾಡುತ್ತದೆ. ಮನುಷ್ಯನೆಂಬ ಮಗ  ಮಾತ್ರ  ಅದೆಲ್ಲಾ ತನಗೆ ಸೇರಿದ್ದು ಎನ್ನುವಂತೆ  ಅದನ್ನು ತನಗೆ ಬೇಕಾದಂತೆ ಬಳಸಿಕೊಳ್ಳುತ್ತಾನೆ..

ರೇಷ್ಮೆ ಹುಳುಗಳನ್ನು ಬಿಸಿನೀರಿನಲ್ಲಿ ಹಾಕಿ ಕೊಲ್ಲುತ್ತಾರೆಂದು ಕೇಳಿದಾಕ್ಷಣ ನನ್ನ ಮಗಳು 'ಪಾಪ...!  ನನಗಂತೂ ರೇಷ್ಮೆ ಬಟ್ಟೆ ಬೇಡ.. ಜೀನ್ಸ್ ಬಟ್ಟೆಯೇ ಸಾಕು' ಎನ್ನುವ ಸ್ಟೇಟ್ ಮೆಂಟ್ ಕೊಟ್ಟಿದ್ದಾಳೆ..!!
ಹಾತೆಯಾಗಿ ಹೊರ ಬರುವುದನ್ನು ನೋಡಲೆಂದು ಒಂದು ಕಕೂನನ್ನು ಅವರಲ್ಲಿ ಇಸಿದುಕೊಂಡು ಬಂದಿದ್ದೆವು. ಶಿಶಿರನ ಪ್ರಯೋಗಶೀಲತೆಯ ಪರಿಣಾಮದಿಂದ ಅದು ಹಾತೆಯಾಗುವ ಬದಲು ಮೋಕ್ಷ ಹೊಂದಿತು..!

ಅಂತೂ ಮಕ್ಕಳ ರಜೆಯ ಪ್ರಯುಕ್ತ ಹೋಗಲಾದ ಒಂದು ದಿನದ ಪ್ರವಾಸಕ್ಕೆ ಶೈಕ್ಷಣಿಕ ರೂಪ ಕೊಟ್ಟು ಅರ್ಥ ಪೂರ್ಣವಾಗುವಲ್ಲಿ ಶ್ರಮಿಸಿದ್ದೇವೆ...!


ವಂದನೆಗಳು 

Tuesday, April 12, 2011

ಲ೦ಚದ ಮೂಲ..ಇಲ್ಲೂ ಇರಬಹುದು...

ಅಣ್ಣಾಹಜಾರೆಯವರು  ಭ್ರಷ್ಟಾಚಾರ  ವಿರೋಧಿ ಆಂದೋಲನದ ಪ್ರಯುಕ್ತ ಹಮ್ಮಿಕೊಂಡಿದ್ದ ನಿರಶನ ಸತ್ಯಾಗ್ರಹ ತಾತ್ಕಾಲಿಕವಾಗಿ ಮುಗಿದಿದೆ. ಲೋಕಪಾಲ್  ವಿಧೇಯಕವನ್ನು ಮಳೆಗಾಲದಲ್ಲಿ ಮಂಡಿಸುತ್ತೇವೆನ್ನುವ  ಹೇಳಿಕೆಗಳು ಸರಕಾರದಿಂದ ಹೊರಟಿವೆ. ಮಳೆಗಾಲದ ಮಳೆಯಲ್ಲಿ ಕೊಚ್ಚಿಕೊಂಡು ಹೋಗದಿದ್ದರೆ ಸಾಕು. ಅಥವಾ ಚೂರು ಪಾರು ಮಳೆಯಿಂದ ಮುಗ್ಗುಲು ಹಿಡಿಸದಿದ್ದರೆ ಸಾಕು. ಜಾರಿಗೆ ಬರುವಲ್ಲಿ ಅದಿನ್ನೆಷ್ಟು ಭ್ರಷ್ಟವಾಗಿರುತ್ತದೋ  ಕಾಣೆ. 
ಈ ಕೆಲ ದಿನಗಳಿಂದ ದಿನಪತ್ರಿಕೆ ಓದಲು   ಹೆಮ್ಮೆ ಆಗುತ್ತಿರುವುದು ನಿಜ. ಅಣ್ಣಾ ಹಜಾರೆಯವರೊಂದಿಗೆ ಅದೆಷ್ಟೊಂದು ಬೆಂಬಲದ ಕೈಗಳು.ಸಾವಿರವಲ್ಲ. ಕೋಟಿ ..! ಆ ಮಾಹಾಕಾಳಿಗೂ ಇಷ್ಟು ಕೈಗಳಿರಲಿಲ್ಲ...!  

ಓದುತ್ತ ಓದುತ್ತ ಹೋದಂತೆ ಅರಿವಿಲ್ಲದೆ ಎದ್ದು ನಿಲ್ಲುವಂತಹಾ ವೀರಾವೇಶ ನನಗೆ. ಈ ಎಲ್ಲಾ ತರದ ಲಂಚ, ಆಮಿಷ, ಹಿಂಸೆ,  ಮೋಸಾದಿ ಭ್ರಷ್ಟಾಚಾರಗಳನ್ನೂ ಒಮ್ಮೆಲೇ ಯಾವುದಾದರೂ ಫಿನಾಯಿಲ್ಲೋ, ಮಾರ್ಜಕದಿಂದಲೋ  ತೊಳೆದು ಬಿಡುವ ಆಸೆ ನನಗೆ. ಹಾಗೆ ಮಾಡಲು ಸಾಧ್ಯವಾಗಿದ್ದಿದ್ದರೆ ತೊಳೆದ ನಂತರ ಸುತ್ತಲೂ ಲಕ್ಷ್ಮಣ ರೇಖೆ ಎಳೆದು,   ಮೈದಾಹಿಟ್ಟಿಗೆ ಬೋರಿಕ್ ಪೌಡರ್ ಬೆರೆಸಿ ಉಂಡೆ ಮಾಡಿ ಅಲ್ಲಲ್ಲಿ ಇಟ್ಟು ಮತ್ತೆ ಬಾರದಂತೆ  ಬಂದೋಬಸ್ತ್ ಮಾಡುವ ಬಯಕೆ ನನಗೆ.
ಇಷ್ಟು ವರ್ಷದ ಭ್ರಷ್ಟಾಚಾರದ ಬೇರನ್ನು ಕೀಳಲು ಹೀಗೆಲ್ಲಾ ಮಾಡಿದರೆ ಆದೀತೆ ...?    ಅನಿಸುತ್ತಿದ್ದಂತೆ   ಮತ್ತೆ ತಣ್ಣಗೆ ಕುಳಿತುಕೊಳ್ಳುವುದು...! 
ನಾನಾದರೂ ಏನು ಮಾಡಲು ಸಾಧ್ಯ.. ಮಾಡುವುದಿದ್ದರೆ ನನ್ನ ಪರಿಧಿಯಲ್ಲಿಯೇ ಮಾಡಬೇಕು. ಗಂಡ, ಮನೆ,  ಮಕ್ಕಳು..... ಗೃಹಿಣಿಯಾಗಿ, ತಾಯಿಯಾಗಿ ನಾನೇನು ಮಾಡಬಲ್ಲೆ .. ?  ಯೋಚಿಸುತ್ತಿರುವೆ.

ನಾಲ್ಕು ಜನ ತಾಯಂದಿರ ಗುಂಪಿನಲ್ಲಿ ಕೇಳಿಸುವ ಮಾತುಗಳು ಮಕ್ಕಳ ಹೊರತಾಗಿ ಬೇರೆ ಇರುವುದೇ ಇಲ್ಲ..!.

ತಾಯಂದಿರಂತೂ ಮಕ್ಕಳ ಹೋಂ ವರ್ಕೂ, ಅವರ ಟ್ಯೂಷನ್ನು, ಅವರ ಊಟ,ಅವರ ಕಾಟ  ಇವುಗಳ ಬಗೆಗೆ ಚಿಂತನೆ ನಡೆಸುವರು.

ಮಕ್ಕಳು ಊಟ ಮಾಡೋಲ್ಲ , ಹೋಂ ವರ್ಕ್ ಮಾಡೋಲ್ಲ.. ಓದೋಲ್ಲ ., ಬರಿಯೋಲ್ಲ,  
ಬರೀ ಟೀವಿ ನೋಡು, ಕಂಪ್ಯೂಟರ್ ನೋಡು, ಗೇಂ ಆಡು.  

ಈ ಮಾಡದಿರುವ ಕೆಲಸಗಳನ್ನು ಮಾಡಿಸಲೇ ಬೇಕೆಂಬ ' ಅನಿವಾರ್ಯತೆ 'ಹೆತ್ತವರಿಗೂ.. 

ಊಟ ಮಾಡಿದ್ರೆ ಚಾಕ್ಲೆಟ್ ಕೊಡ್ತೀನಿ.. 
 ದಿನಾ ಹೋಂ ವರ್ಕ್ ಮಾಡಿದ್ರೆ ಮುಂದಿನ ವಾರ ಬೆನ್ 10  ವಾಚು ಕೊಡಿಸ್ತೀನಿ.. 
ಫಸ್ಟ್ ರ್ಯಾಂಕ್  ಬಂದ್ರೆ ವೀಡಿಯೋ ಗೇಮ್ ಕೊಡಿಸ್ತೀನಿ..

ಚಾಕ್ಲೆಟ್ ಗಾಗಿ, ಟಾಯ್ ವಾಚ್ ಗಾಗಿ, ವೀಡಿಯೋ ಗೇಂ ಗಾಗಿ [ ಸ್ವಲ್ಪ ಹೆಚ್ಚು ಕಡಿಮೆ ] ಹೇಳಿದ    ಕೆಲಸವಾಗುವುದು ...! 
  ಮತ್ತು ಮುಂದೆ  ಕೆಲಸವಾಗಲು ಈ ತರದ   'reinforcement 'ಅನಿವಾರ್ಯವಾಗಿ ಹೆಚ್ಚು ಹೆಚ್ಚು ಬೇಕಾಗಲು ಶುರುವಾಗುವುದು...! 


ಮಕ್ಕಳಿಗೆ ಉತ್ತೇಜನ, ಪ್ರೋತ್ಸಾಹ ಬೇಕೇ ಬೇಕು .. ಅನ್ನುವ ಮಾತು ನಿಜ.  ಮೊದ ಮೊದಲು ಊಟದಲ್ಲಾಗಲೀ, ಓದಿನಲ್ಲಾಗಲೀ ಆಸಕ್ತಿ ಮೂಡಿಸಲು ಈ ರೀತಿಯ ಬಾಹ್ಯ   ಉತ್ತೇಜನ ಅವಶ್ಯವೇ.   ಆದರೆ ನಂತರದಲ್ಲಿ ಅದು ಕ್ರಮೇಣ ಕಡಿಮೆಯಾಗಿ ಆಂತರಿಕವಾಗಿ  ಉತ್ತೇಜಿಸಲ್ಪಡಬೇಕು. ಆದರೆ ಆಗುತ್ತಿಲ್ಲ . ಏಕಿರಬಹುದು...? ಉತ್ತರ ನಿಮಗೂ ಗೊತ್ತಿಲ್ಲದ್ದಲ್ಲ. 
 ಪ್ರಕೃತಿಯೊಂದಿಗೆ ಬೆರೆಯಲೇ ಆಗುತ್ತಿಲ್ಲ..   ಮಕ್ಕಳಿಗೆ ಹೊರಾಂಗಣ ಆಟವಾಡಲೇ  ಸಾಧ್ಯವಾಗುತ್ತಿಲ್ಲ.  ಆಟದಲ್ಲಿ ಮೈ ಮರೆಯುತ್ತಿಲ್ಲ. ಶಾಂತತೆಯಿಂದ ನಿದ್ರಿಸಲಾರರು.

ಒಂದನೆಯದಾಗಿ  ಟ್ಯೂಷನ್ನು,  ಹೋಂ ವರ್ಕಿನಿಂದ ಆಡಲು  ಸಮಯವಿಲ್ಲ. ಇನ್ನೊಂದು ಆಡಲು ಮನೆ ಎದುರಿಗೆ ಅಂಗಳವೇ ಇಲ್ಲ. ಈಗಿನ ಶಾಲೆಗಳಲ್ಲೂ ಕೂಡಾ ಆಟದ ಬಯಲು ಇರದು.. ಇರುವ ಜಾಗದಲ್ಲೆಲ್ಲಾ ಗೋಡೆಗಳನ್ನು ಕಟ್ಟಿ ಮತ್ತಷ್ಟು ಮಕ್ಕಳನ್ನು ತುಂಬಿದರೆ ಆಡಲು ಜಾಗವೆಲ್ಲಿ..?  


ಮಕ್ಕಳಿಗೆ ಆಟದಿಂದ ದೈಹಿಕ ಶ್ರಮದೊಂದಿಗೆ ಮಾನಸಿಕ ವಿಕಾಸವೂ ಆಗುವುದು ..ಹಸಿವೂ ಆಗುವುದು , ಹಠವೂ ಕಡಿಮೆಯಾಗುವುದು .. ಅನ್ನುವುದನ್ನು  ಪತ್ರಿಕೆಗಳಲ್ಲಿ ಓದುವೆವು. ಹಿರಿಯರು ಹೇಳುವರು. ನಮಗೂ ಗೊತ್ತು. ಎಲ್ಲಾ ಸರಿ. ಆಡಲು ಎಲ್ಲಿಗೆ ಕಳಿಸೋಣ..? ದಿನಾಲು ಎಲ್ಲರಿಗೂ  ದೂರದ  ಪಾರ್ಕ್ ಗೆ ಕರೆದೊಯ್ಯಲು ಸಾಧ್ಯವೇ?  

ನಗರಗಳಲ್ಲಿ  ಆಡಲು ರಸ್ತೆಯೇ ಗತಿ.. ಅಲ್ಲಿ ವಾಹನಗಳ ಭೀತಿ, ಮಕ್ಕಳನ್ನು ಅಪಹರಿಸುವವರ ಭೀತಿ.. ಬೀದಿ ನಾಯಿಗಳ ಭೀತಿ.. ಹೀಗೆ ಭೀತಿಗಳ ಮೂಟೆಯನ್ನೇ ಮಕ್ಕಳಲ್ಲಿ ತುಂಬಿ ಕಳುಹಿಸುವವರು ನಾವು.  ಹೀಗಿರುವಾಗ  ಮಕ್ಕಳ ಕಣ್ಣುಗಳಲ್ಲಿ ಭೀತಿಯ ಹೊರತಾಗಿ ಬಣ್ಣಗಳು ಮೂಡಲು ಸಾಧ್ಯವೇ..? ರಸ್ತೆಯ ಧೂಳಿನಲ್ಲಿ, ತಾರಿನಲ್ಲಿ, ಕಸದ ಬುಟ್ಟಿಗಳಲ್ಲಿ, ಚರಂಡಿಯಂಚಿನಲ್ಲಿ  ಕನಸುಗಳು  ಅರಳಬಲ್ಲದೇ..? ಪ್ರಪಂಚದೆಡೆಗೊಂದು ಸಾತ್ವಿಕ ಕುತೂಹಲ ಸೃಷ್ಟಿಯಾಗ ಬಲ್ಲದೇ..? ಅವರ ಸುತ್ತಲಿನ   ಪರಿಸರ  ಅವರಿಗೆ  ಆಪ್ಯಾಯಮಾನವಾಗಬಲ್ಲುದೆ..?

ಏನು ಮಾಡೋಣ..? ಅವರಿಗೆ  ಬಣ್ಣಗಳನ್ನು, ಕನಸುಗಳನ್ನು, ಕುತೂಹಲವನ್ನು  ಕೊಡಲು ಸಾಧ್ಯವಿಲ್ಲದ ಗಿಲ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಏನೇನು ಸವಲತ್ತುಗಳನ್ನು ಕೊಡಲು ಸಾಧ್ಯವಾಗುವುದೋ ಅವೆಲ್ಲವನ್ನೂ ಕೊಡಲು ಶುರುಮಾಡುವೆವು ನಾವು. 

ಪ್ರಕೃತಿಯ ಸಾಂಗತ್ಯದ ಸವಿ  ನಾಲ್ಕು ಗೋಡೆಗಳ ಮಧ್ಯ ಸಿಗುವುದೇ..? ಹೊಳೆಯ ನೀರು,   ಮಾವಿನ ಮರ, ಗುಬ್ಬಚ್ಚಿ, ಕಾಕಮಟ್ಲೆ ಹಣ್ಣು,  ನಾನಾ ತರದ ಪ್ರಾಣಿ ಪಕ್ಷಿಗಳೂ, ಗುಡ್ಡ, ಬೆಟ್ಟ ಇವುಗಳನ್ನೆಲ್ಲಾ  ನಗರದಲ್ಲಿ ಎಲ್ಲಿಂದ ತರಲು ಸಾಧ್ಯ..?  ತಂದೆ, ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಲ್ಲಿ ಅವರ ಸಾಂಗತ್ಯದಿಂದಲೂ ವಂಚಿತರು ಈ ಮಕ್ಕಳು.    ಪರಿಧಿಯೊಳಗಣ ಬದುಕು.ವಿಸ್ತಾರಕ್ಕೆಲ್ಲಿದೆ ಬಯಲು..?  ಮಕ್ಕಳ ಮನಸ್ಸು ವ್ಯಗ್ರ ಗೊಳ್ಳದೆ  ಮತ್ತೇನಾಗುವುದು..? 

ಅಳಬಾರದೆನ್ನುವುದಕ್ಕೆ ಲಂಚ.. ಊಟಕ್ಕೆ ಲಂಚ, ಓದಲು ಲಂಚ. ಬರೆಯಲು ಲಂಚ..  ಹೀಗೆ ಪ್ರತಿಯೊಂದಕ್ಕೂ ಲಂಚ ಕೊಡುವುದಷ್ಟೇ ನಮಗೆ ಉಳಿಯುವುದು.. !

 ನಾನಂತೂ ಅಂದುಕೊಂಡಿದ್ದೇನೆ,   ಲಂಚಕ್ಕೆ ಮನೆಯೇ ಮೊದಲ ಪಾಠ ಶಾಲೆ..!
[ಅನಿವಾರ್ಯವಾಗಿ ] ಪೋಷಕರೇ ಮೊದಲ ಗುರು.. !!!
ಇಂದಿನ ಮಕ್ಕಳೇ ಮುಂದಿನ ..............?

ಮನುಷ್ಯ ಬಾಲ್ಯದಲ್ಲಿ ಸ್ವಚ್ಚವಾಗಿ, ನೇರವಾಗಿಯೇ ಇರುವನು.. ಹಂತಗಳು ಬದಲಾಗುತ್ತಾ ಬಂದಂತೆ ಪರಿಸ್ಥಿತಿಯ  ಸಾಂದ್ರತೆಗನುಗುಣವಾಗಿ ಬಾಗುತ್ತಾ ಹೋಗುವನು...  


ಈ ಜೀವನ ವಕ್ರೀಭವನ ...  !  ಅಲ್ಲವೇ..?



ಇದು ಒಂದು ದಿನದ ಸಮಸ್ಯೆಯಲ್ಲ. ಮಕ್ಕಳ ಪೂರಾ ಬಾಲ್ಯದ ಸಮಸ್ಯೆ.. ಅಪ್ಪ, ಅಮ್ಮಂದಿರ ಅನಿವಾರ್ಯತೆ..

ಹೇಗೆ ಇದರ ವಿರುದ್ಧ ಹೋರಾಡೋಣ ಹೇಳಿ..?   ಪರಿಹಾರ ಹುಡುಕಲು  ಶುರು ಮಾಡಿರುವೆ.

ವಂದನೆಗಳು.

Sunday, April 3, 2011

ಕೊಕ್ಕರೆ ಬೆಳ್ಳೂರಿನ ಒ೦ದಷ್ಟು ಕೊಕ್ಕರೆಗಳು..


  ಇವು ಪೇ೦ಟೆಡ್ ಸ್ಟಾರ್ಕ್ ಗಳ೦ತೆ..





ಇಲ್ಲಿಯ  ಪ್ರತಿ ಮರದ ಮೇಲೂ   ಇವುಗಳದೇ  ಸ೦ಸಾರ..






ಗು೦ಪು ಗು೦ಪಾಗಿ ಮರದ ಮೇಲೆ ಕುಳಿತಿರುವ ಇವುಗಳನ್ನು ನೋಡುವುದೇ ಚ೦ದ.



 ಹೊಸಾ ಜೋಡಿ..ಇರಬಹುದೆ..?



 ಇಲ್ಲೇ ಎಲ್ಲೋ ಇದೆ ನನ್ನ ಗೂಡು..?


 ಹಾರುವೆ ಬಾನೆತ್ತರಕೆ..


 ಫೋಟೋಕ್ಕೆ ಫೋಸ್ ಕೊಡಲೆ೦ದೇ ಹೀಗೆ  ಕುಳಿತಿದ್ದು.



 ಮಕ್ಕಳು ಮರಿಗಳು  ಸ೦ಸಾರ.



 ಒಳ್ಳೆ ವಕೀಲ ಹಕ್ಕಿಗಳ ತರಾ ಕಾಣುತ್ವೆ.. ಮಕ್ಕಳಿಗೆ ಬಿಸಿಲು ತಾಗದಿರಲಿ.. ಎ೦ದು ರೆಕ್ಕೆ ಮರೆ ಮಾಡಿವೆ..!



 ಕತ್ತು ಕೊ೦ಕಿಸಿದಳಾ ಬಾಲೆ..


ಎಲ್ಲರಿಗೂ ಯುಗಾದಿಯ ಶುಭ ಹಾರೈಕೆಗಳು

Sunday, March 27, 2011

''ಶ್ರೀಖಂಡ '' ಮಾಡುವ ಸುಲಭ ವಿಧಾನ..

ಶ್ರೀಖ೦ಡ ಮಾಡಲೂ ಸುಲಭ ವಿಧಾನವೇ..? ಎ೦ದು ನೀವು ಹುಬ್ಬೇರಿಸಬೇಡಿ.. 
ಮೊಸರನ್ನು ನೀರು ತೆಗೆದು ಗಟ್ಟಿ ಮಾಡಿ ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಅರೆದು ಗೋಡ೦ಬಿ, ದ್ರಾಕ್ಷೀ ಇತ್ಯಾದಿಗಳಿ೦ದ ಅಲ೦ಕರಿಸಿದರೆ ಮುಗಿಯಿತಪ್ಪಾ.. ಅದೇನು ಕಷ್ಟದ ಕೆಲಸವೇ..? ಸುಲಭ..   ಎ೦ದು ಯೋಚಿಸುತ್ತಿದ್ದೀರಾ..? 

ಇದರಲ್ಲಿ ಕಷ್ಟ ಎಂದರೆ  ಮೊಸರಿನ ನೀರು ತೆಗೆದು ಗಟ್ಟಿ ಮಾಡುವುದು.. ಮೊಸರನ್ನು ಬಟ್ಟೆಯಲ್ಲಿ ಕಟ್ಟಿ ನೀರು ಬಸಿಯಲು ನೇತುಹಾಕಲು ಮನೆಯೆಲ್ಲಾ ಓಡಾಡಿ ಜಾಗ ಹುಡುಕಬೇಕಾದ ಕಷ್ಟ ಸ್ವಲ್ಪವಲ್ಲ..

ಸುಲಭದ ವಿಧಾನವೊ೦ದಿದೆ .... ನೋಡಿ.

ಮೊದಲು ಮೊಸರನ್ನು ಸ್ವಚ್ಚವಾದ  ಬಟ್ಟೆಯೊ೦ದರಲ್ಲಿ ಹಾಕಿ ಅದನ್ನು ಗ೦ಟು ಕಟ್ಟಿ..
 ನ೦ತರ ಅದನ್ನು ಹಿಟ್ಟು ಸಾಣಿಸುವ ಸಾಣಿಗೆಯ ಮೇಲೆ ಇಟ್ಟು ಕೆಳಗೆ ಮೊಸರಿನ ನೀರು ಬೀಳಲು ಅನುಕೂಲವಾಗುವ೦ತೆ ಸಾಣಿಗೆಯ ಅಳತೆಯ ಪಾತ್ರೆಯೊ೦ದನ್ನು ಹೊ೦ದಿಸಿಡಿ.


 ನ೦ತರ ಅದನ್ನು ಪಾತ್ರೆಸಮೇತ ಫ್ರಿಜ್ಜಿನಲ್ಲಿಡಿ. [ಹುಳಿಯಾಗುವುದನ್ನು ತಪ್ಪಿಸಲು..] ಸುಮಾರು ಮೂರು ನಾಲ್ಕು ತಾಸು ಬಿಟ್ಟು ಹೊರತೆಗೆದು ಬಟ್ಟೆಯ ಗ೦ಟು ಬಿಚ್ಚಿ..



 ಅದನ್ನು ಬೌಲಿಗೆ ಹಾಕಿ ಸಕ್ಕರೆಯೊ೦ದಿಗೆ ಚನ್ನಾಗಿ ಅರೆದು ಏಲಕ್ಕಿ, ಲವ೦ಗದ ಪುಡಿ ಸೇರಿಸಿ, ಮತ್ತು ಒಣ ಹಣ್ಣುಗಳೊ೦ದಿಗೆ ಅಲ೦ಕರಿಸಿದರೆ  ತಣ್ಣನೆಯ  ಶ್ರೀಖ೦ಡ ಸವಿಯಲು ಸಿದ್ಧ..







 ಶ್ರೀಖ೦ಡ ಮಾಡಲು ಅಳತೆ -

* ಮೊಸರು  -  ಅರ್ಧ ಲೀಟರ್  [ ಫ್ರಿಜ್ಜಿ ನಲ್ಲಿಟ್ಟ ಮೊಸರಾದರೆ ನಿನ್ನೆಯ ಮೊಸರಾದರೂ ಆದೀತು.. ಹುಳಿ ಹೆಚ್ಚಿಗೆ ಇರದಿದ್ದರಾಯಿತು  ]
ಸಕ್ಕರೆ    - ಗಟ್ಟಿಯಾದ ಮೊಸರಿನ ಅಳತೆಯಷ್ಟೇ ಬೇಕು. ರುಚಿಗೆ ತಕ್ಕ೦ತೆ  ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.
ಏಲಕ್ಕಿ, ಲವ೦ಗದ ಪುಡಿ[ಕೇಸರಿ ಬೇಕಿದ್ದರೆ ] -   ಸ್ವಲ್ಪ..
ಗೋಡ೦ಬಿ, ದ್ರಾಕ್ಷೀ.. ಇತ್ಯಾದಿ ಒಣ ಹಣ್ಣುಗಳು..  - ಯಥಾನ್ಶಕ್ತಿ...




ಮಾಡಿ ನೋಡಿ.. ಇನ್ನೂ ಸುಲಭದ ವಿಧಾನವಿದ್ದರೆ ನನಗೂ ಹೇಳಿ.

ವ೦ದನೆಗಳು.

Friday, March 11, 2011

ನಿಮ್ಮನೆಯಲ್ಲಿ ಜಿರಳೆಗಳಿವೆಯೇ..?

ಮನೆ ಅ೦ದ ಮೇಲೆ  ಜಿರಳೆ, ಸೊಳ್ಳೆ, ನೊಣ,  ಗೋಡೆಯ ಮೇಲೆ ನಾಲ್ಕಾರು ಹಲ್ಲಿಗಳು, ಗೋಡೆ ಬದಿಯಲ್ಲಿ ಸಾಲಿಕ್ಕುವ ಇರುವೆಗಳು  ಇದ್ದೇ ಇರುತ್ತವೆ  ಬಿಡಿ. 
ಹಾಗೂ ಇವೆಲ್ಲಕ್ಕೂ ಸೊಳ್ಳೆ ಬತ್ತಿ, ಲಕ್ಷ್ಮಣ ರೇಖೆ,  ಹಿಟ್ಟು ಪಟ್ಟು ಅನ್ನುವ ಉಪಶಮನಕಾರಿ ವಸ್ತುಗಳೂ ಇರುತ್ತವೆ.. ಅನ್ನಿ. 

ಉಳಿದವು ಸಾಯಲಿ..     ಮನೆಯ ಮಹಿಳೆಯರಿಗೆ ವಿಪರೀತವೆನ್ನುವಷ್ಟು ರೇಜಿಗೆ ಉಂಟು ಮಾಡುವ  ಈ ಜಿರಳೆ ಮಾತ್ರ ಸುಮಾರಿಗೆ ಯಾವುದಕ್ಕೂ ಜಗ್ಗುವ ಕುಗ್ಗುವ ಬಾಬತ್ತಿನದಲ್ಲ..
ನೀವು ಯಾರ ಮನೆಗಾದರೂ ಹೋದಾಗ ಅಲ್ಲೇನಾದರೂ ಸೆರಗು ಸಿಕ್ಕಿಸಿ ಪೊರಕೆ ಹಿಡಿದು ಹಿತ್ತಿಲ ಬಾಗಿಲ ಕಡೆ ವೀರಾಗ್ರಣಿಯಂತೆ ನಿಂತಿರುವ ಮಹಿಳೆಯರನ್ನೆನಾದರೂ   ನೋಡಿದರೆ, ಜೊತೆಗೆ ರಾಪ್ .. ರಾಪ್...ಅನ್ನುವ ಹಿನ್ನೆಲೆ ಸಂಗೀತವಿದ್ದರೆ ಹೆಜ್ಜೆ ಕಿತ್ತಿಡಲು ಯೋಚನೆ ಮಾಡುವುದೇನೂ ಬೇಡ.. ಹೆಂಗಸರಿಗೆ ಜಪ್ಪಲು ಜಿರಳೆಗಳೂ ಇವೆ..!      ಮಹಿಳೆಯರ ನಿಜವಾದ ವೈರಿಗಳೆಂದರೆ ಈ ಜಿರಲೆಗಳೇ.. !!

ಮೊಸರಿನ ಪಾತ್ರೆಗೇ ಬಿದ್ದು ಸಾಯುತ್ತವೆ ಹಾಳಾದವು..
ಅವು  ಲಕ್ಷ್ಮಣ ರೇಖೆಗೆ ನಿರೋಧಕ ಶಕ್ತಿ ಬೆಳೆಸಿಕೊಂಡು ಬಿಟ್ಟಿವೆ.  ನಾವೇ ಸಾಯಬೇಕೆ ಹೊರತೂ ಜಿರಳೆಗಳು ಅವುಗಳ ಮೇಲೆ ಆರಾಮಾಗಿ ಓಡಾಡಿಕೊಂಡಿರುತ್ತವೆ....!       {ನನ್ನ ಮಕ್ಕಳಿಗೆ  ರಾಮಾಯಣದ ಕಥೆ ಹೇಳಲು ಹೋಗಿ 'ಅವಾಗ ಕೂಡ ಲಕ್ಷ್ಮಣ ರೇಖೆ ಇತ್ತೇ, ಮತ್ತು ಅದನ್ನು ಮನುಷ್ಯರಿಗೆ ಹಾಕುತ್ತಿದ್ದರೇ...?' ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ಹೋಗಿ ಸೋತಿದ್ದು ನನ್ನ ಜೀವಮಾನದ ಸೋಲಾಗಿ ಹೋಗಿದೆ..!}

 ಲಕ್ಷ್ಮಣ ರೇಖೆ ಬೇಡ  ಬಿಡಿ. ಅದಕ್ಕಿಂತಲೂ ಒಳ್ಳೆಯ ಉಪಾಯ ಇದೆ ಜಿರಳೆ ಸಂಹಾರಕ್ಕೆ.

ನಿಮ್ಮನೆಯಲ್ಲಿ ಕೇರಂ ಬೋರ್ಡ್ ಇದೆಯಾ.. ?  
ಏಕೆಂದರೆ ಕೇರಂ ಬೋರ್ಡ್ ಇದ್ದವರ ಮನೆಯಲ್ಲಿ ಸುಮಾರಾಗಿ ಬೋರ್ಡ್ ಗೆ ಹಾಕಲು '' ಬೋರಿಕ್ ಪೌಡರ್ '' ಅಂತೂ ಇದ್ದೇ ಇರುತ್ತದೆ.. 

ಈಗ ಹೀಗೆ ಮಾಡಿ.. ಐದು ಚಮಚ ಬೋರಿಕ್ ಪೌಡರ್ ಗೆ ಐದು ಚಮಚ ಮೈದಾಹಿಟ್ಟು ಹಾಕಿ.   ನೀರು ಹಾಕಿ ಕಲೆಸಿ ಚಿಕ್ಕ ಚಿಕ್ಕ ಉಂಡೆಗಳನ್ನಾಗಿ  [ ಜಾಮೂನಿನ ಉಂಡೆಗಳ ಗಾತ್ರದಲ್ಲಿ] ಮಾಡಿ ಅಡುಗೆ ಮನೆಯಲ್ಲಿ, ಪುಸ್ತಕದ ಕಪಾಟುಗಳಲ್ಲಿ, ಬಚ್ಚಲು ಮನೆಯಲ್ಲಿ ಹೀಗೆ ಎಲ್ಲಿ ಬೇಕಾದರಲ್ಲಿ ಜಿರಳೆಗಳು ಬರುವಲ್ಲಿ ಮೀಟರಿಗೊಂದರಂತೆ ಇಡಿ. ಬೋರಿಕ್ ಪೌಡರ್ ಬೇಕಿದ್ದರೆ ಇನ್ನೊಂದು ಸ್ವಲ್ಪ ಹೆಚ್ಚಿಗೆಯೂ ಹಾಕಬಹುದು.  

ಹೀಗೆ ಮಾಡಿ..  ಒಂದು ವಾರದ ನಂತರದಲ್ಲಿ  ನಿಮಗೆ  ಒಂದಾದರೂ ಜಿರಳೆ ಬೇಕೆಂದರೆ ತರಲು ಪಕ್ಕದ ಮನೆಗೇ ಹೋಗಬೇಕಾಗುತ್ತದೆ.! 

ಇದು ನಾನು ಮಾಡಿ ನೋಡಿದ ಪ್ರಯೋಗ. ನನ್ನ ತವರು ಮನೆಯಲ್ಲಿ ದಶಕಗಳ ಹಿಂದಿನಿಂದಲೇ ಈ ಪ್ರಯೋಗ ಮಾಡಿ ಫಲಕಾರಿಯಾಗಿತ್ತು.. 
ಸೈಡ್ ಎಫೆಕ್ಟ್ ಇರದ ಉಪಾಯ..[ ಅಂದುಕೊಂಡಿದ್ದೇನೆ.] ಆದರೆ ಚಿಕ್ಕ ಮಕ್ಕಳಿರುವವರ ಮನೆಯಲ್ಲಿ ಜಾಗ್ರತೆ ಅಗತ್ಯ. ಆಗ ಮಿಶ್ರಣವನ್ನು ಪೇಷ್ಟ್ ತರಾ ಮಾಡಿ ಸಂದಿ ಗೊಂದಿನಲ್ಲಿ ಹಚ್ಚ ಬಹುದು.   


ಆಸಕ್ತರು ಪ್ರಯೋಗಿಸಿ ನೋಡಿ. ಮತ್ತೆ ಹೇಳಿ..



ಒಬ್ಬ ಜವಾಬ್ಧಾರಿಯುತ ಮಹಿಳೆಯಾಗಿ ನನ್ನಂತೆ ಸಮಾನ ದುಃಖಿಗಳಾದ  ಮಹಿಳೆಯರಿಗೆ   ಮಹಿಳಾದಿನಾಚರಣೆಯ ಸಂದರ್ಭದಲ್ಲಿ    ಹೀಗಾದರೂ  ಕಿಂಚಿತ್   ಸಹಾಯವನ್ನು   ಮಾಡೋಣ ಎಂಬುದು ನನ್ನ ಬಯಕೆ..!

ಜಿರಳೆ ಸಂಹಾರಕ್ಕೆ ಜಯ ಸಿಗಲಿ...:)

ವಂದನೆಗಳು.

Friday, February 25, 2011

ಯುದ್ಧ....!!!!!!

ಅತ್ತಿತ್ತ ಹಾರಾಡಿ 
ಸುತ್ತ ಹೋರಾಡಿ
ಮೂಲೆ ಮೂಲೆಯ ಹುಡುಕಿ 
 ಕೈ ಬಡಿದು  ತೊಡೆ ತಟ್ಟಿ
 ಬಿಡದೆ  ಬೆನ್ನಟ್ಟಿ 
ಯುದ್ಧ ಗೆದ್ದಿದ್ದೇನೆ ನೋಡು..

ಕೈ ಬೀಸಿ  ಕುಣಿದಾಡಿ
ಅತ್ತಿತ್ತ ನೆಗೆದಾಡಿ 
ಕೈ ಸೆಳೆಸಿ ಕಾಲ್ ಉಳುಕಿ 
ಮುಡಿ ಬಿಚ್ಚಿ ಹಾರಾಡಿ 
ಒತ್ತರಿಸಿ ಬರುವ ಕೋಪಕ್ಕೆ 
ಜಜ್ಜಿ  ಕೆಡಹಿದ್ದೇನೆ ನೋಡು..

ಚಲುವೆ ಕೆನ್ನೆಯ ಬಳಸಿ 
ಮೋಹಿಸಿ ಮುದ್ದಿಟ್ಟ
ಕ್ರೂರ ರಾಕ್ಷಸನ 
ಕೈಕಾಲು ಮುರಿದಿಕ್ಕಿ
ರಕ್ತದೋಕುಳಿ ಹರಿಸಿ  
ಚಿತ್ರ ಬರೆದಿದ್ದೇನೆ ನೋಡು..

ಮಾಡು ಸುಖ ನಿದ್ರೆಯನು 
ಬಿಡು ದಾರಿ ಎನಗೀಗ 
ಮತ್ತೆ ಹೋಗಲೇ ಬೇಕು 
ಶತ್ರು ಸಂಹಾರಕ್ಕೆ 
ಹುಡುಕುತ್ತ ಹುಡುಕುತ್ತ 
ಮತ್ತೊಂದು ಸೊಳ್ಳೆಯನು.....!!!!!!!!!


Friday, February 11, 2011

ಇರುವೆ ಸತ್ತ ನಂತರ ಏನಾಗುತ್ತೆ..ಪ್ರೇತವಾಗುತ್ತಾ..?


 ಕೆಲಸದ ರುಕ್ಕಮ್ಮ ಸ್ವಲ್ಪ ಭಯಮಿಶ್ರಿತ ಧ್ವನಿಯಲ್ಲಿಯೇ ಹೇಳಿದಳು.'' ಅಕ್ಕ ನಿನ್ನೆ ನಮ್ಮನೆ ಹತ್ರ ದೆವ್ವ ಬಂದಿತ್ತು...! ''




 '' ಎನ್ಮಾಡ್ತೆ ?''
''ಅಕ್ಕೋ ಎನ್ಮಾಡ್ತೂ ಅಂತೀಯಾ.. ಮನೆ ಶೀಟ್  ಮೇಲೆಲ್ಲಾ ದಡ ಬಡ ದಡ  ಬಡ ಓಡಾಡ್ತಾ ಇತ್ತು..''
''ಬೆಕ್ಕಿರಬಹುದು  ...! ಇಲೀನೋ ಹೆಗ್ಗಣನೋ ಓಡಿಸ್ಕೊಂಡು    ಬಂದಿರಬಹುದೇನೋ...?    ನೀನೊಬ್ಳು  ಶಬ್ದ   ಆದರೆ   ಸಾಕು,   ದೆವ್ವ ಅಂತೀಯ...''
''ಇಲ್ಲಾಕ್ಕ, ಮಧ್ಯ ರಾತ್ರಿ ಹೊತ್ತಿಗೆ...ಏನ್ ಭಯ ಆಯ್ತೂನ್ತೀಯ ...
ನನ್ನೆಜ್ಮಾನ ಯಾವ್ ದೆವ್ವಕ್ಕೂ ಹೆದರದೆ ಇರೋವ್ನು ಈ ದೆವ್ವಕ್ಕೆ ಭಯ  ಬಿದ್ಬುಟ್ಟ. ಒಂತರಾ ಅಳ್ತಿತ್ತು.....    ಕಳೆದ ತಿಂಗಳು ಆ ವಟಾರದ ಮನೇಲಿ ಬಸುರೀ ಹೆಂಗಸು  ಸುಟ್ಕೊಂಡು ಸತ್ತೊದ್ಳಲ್ಲಾ ಅಕ್ಕಾ ಅದು ಕೊಲೆ ಅಂತೆ.  ಅದಕ್ಕೆ ಅವಳೇ ದೆವ್ವ ಆಗಿ ಅಲೀತಾ ಇರೋದಂತೆ.. ಆಮೇಲೆ...., ಹೇಗೋ ಧೈರ್ಯ ತಂದ್ಕೊಂಡು ಇನ್ನೊಂದ್ ಸಲ ಈ ಕಡೆ ಬಂದೇ ಅಂದ್ರೆ ನೋಡು  ಚಪ್ಲಿ ತಗೊಂಡ್ ಹೊಡೀತೀನಿ ಅಂದಕೂಡಲೇ ದೆವ್ವದ ಶಬ್ಧಾನೆ ಇಲ್ಲಾನ್ತೀನಿ....'' ಕಣ್ಣು ಬಾಯಿ ತಿರುಗಿಸಿ ಹೇಳುವುದನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ...

''ಅಲ್ವೇ ಚಪ್ಲಿಗೆ ಹೆದರಿ ಹೊಯ್ತೇನೆ  ಭೂತ.....? ಅದು ಯಾವಾಗಲೂ ನಿಮ್ಮನೆಗೆ ಯಾಕೆ ಬರತ್ತೆ.. ಎದ್ರೀಗೆ ನಮ್ಮನೆ ಇಷ್ಟ್ ದೊಡ್ಡದಾಗಿ ಇದೆ.  ಒಂದಿನಾನೂ ನಮ್ಮನೆಗೆ ಬಂದಿಲ್ವಲ್ಲೇ...?   ಮುಂದಿನ ಸಲ ಬಂದಾಗ ನಮ್ಮನೆ ಅಡ್ರೆಸ್ ಕೊಡು ಅದಕ್ಕೆ.. ''ಎನ್ನುತ್ತಾ ನಕ್ಕೆ. 

''ಅಕ್ಕೋ ನೀನ್ಯಾವತ್ತೂ ನಗ್ತೀಯ.. ನಂಬದೆ ಇಲ್ಲ.. ಸುಳ್ಳಲ್ಲ ಅಕ್ಕಾ. '' ಎನ್ನುತ್ತಾ ನನ್ನನ್ನು ನಂಬಿಸಲು ಸಾಧ್ಯವಾಗದಿದ್ದಿದ್ದಕ್ಕೆ ಮತ್ತೇನೂ  ತೋಚದೆ   ಗೋಡೆ ಪಕ್ಕದಲ್ಲಿ ಹರಿಯುತ್ತಿದ್ದ ಇರುವೆಯೊಂದನ್ನು ಹೊಸಕಿ ಕೊಂದಳು...!
''ಅಯ್ಯೋ ರುಕ್ಕಮ್ಮ....! ಇರುವೆ ಕೊಂದ್ಯಲ್ಲೇ...! ಅದು ದೆವ್ವವಾಗಿ ಬಂದು ಕಾಡಿದರೆ ಎನ್ಕಥೆ...?''
 '' ಹೋಗಕ್ಕೋ.. ಇರುವೆ ಎಲ್ಲಾ ದೆವ್ವ ಆಗಲ್ಲಕ್ಕೋ ''
'' ಅಲ್ವೇ...    ಇರುವೆ ಯಾಕೆ ದೆವ್ವ ಆಗ್ಬಾರ್ದೂ..?   ಎಲ್ಲರಿಗೂ ಒಂದೇ ಅಲ್ವೇನೆ ಜೀವ..? ಅದು ಬಸರಿಯಾಗಿತ್ತಾ...? ಬಾಳ೦ತಿಯಾಗಿತ್ತಾ...? ಮಕ್ಕಳಿಗೆ ಅಂತ ಆಹಾರ ಹುಡುಕೋಕೆ ಬಂದಿತ್ತಾ ಅನ್ಯಾಯವಾಗಿ ಇರುವೆ ಕೊಂದ್ಯಲ್ಲೇ.    ಅದು ದೆವ್ವ ಆಗಿ ಕಾಡತ್ತೆ ಇರು.  ''
  ಪಾಪ ರುಕ್ಕಮ್ಮ ಯೋಚಿಸತೊಡಗಿದಳು..


ನಾನೂ ಯೋಚನೆಗೆ ಬಿದ್ದೆ....!  ಮನುಷ್ಯರು ಮಾತ್ರ ದೆವ್ವವಾಗುವುದೇ ...? ಇರುವೆ ಯಾಕಾಗಬಾರದು..?
ಅದು ಬಸುರಿಯೋ  ಬಾಳಂತಿಯೋ  ಆಗಿದ್ದು ಸತ್ತರೆ ಪ್ರೇತವಾಗಲಾರದೆ..? ಗೂಡಿನಲ್ಲಿ ಮೊಟ್ಟೆ, ಮರಿಗಳಿದ್ದು ಅವಕ್ಕೆ ಆಹಾರ ತೆಗೆದುಕೊಂಡು ಹೋಗಬೇಕಾದರೆ ನಮ್ಮ ಕಾಲಿಗೆ ಸಿಕ್ಕಿ ಸತ್ತರೆ ಅದು ದೆವ್ವವಾಗಿ ನಮ್ಮನ್ನು ಕಾಡಬಹುದೇ..?
ನಾಯಿ ಆಕ್ಸಿಡೆಂಟ್ ನಲ್ಲಿ ಸತ್ತರೆ ದೆವ್ವವೇನಾದರೂ ಆಗಬಹುದೇ..?  ಹಸು ಕರು ಹಾಕುವಾಗೇನಾದರೂ ತೊಂದರೆಯಾಗಿ ಬಳಲಿ ಸತ್ತಿದ್ದರೆ..?
ಮಾಂಸಾಹಾರ ಸೇವಿಸುವವರು ಅದೆಷ್ಟು ಪ್ರಾಣಿಗಳನ್ನು ಕೊಂದಿರುವುದಿಲ್ಲ.. ತಿಂದಿರುವುದಿಲ್ಲ.. ಅವೆಲ್ಲ ದೆವ್ವವೋ ಪ್ರೇತವೋ ಆಗಿ ಅವರುಗಳನ್ನು ಕಾಡಬಹುದೇ..?


ಅದೇ ಮನುಷ್ಯರಲ್ಲಿ ಅಕಾಲದಲ್ಲಿ, ಬಸುರಿಯೋ, ಬಾಳಂತಿಯೋ ಸತ್ತರೆ ಅವರುಗಳ  ಆತ್ಮ ಅತೃಪ್ತಿಯಿಂದ ಪ್ರೇತವೋ, ಪಿಶಾಚಿಯೋ, ದೆವ್ವವೋ ಮತ್ತಿನ್ನೇನೋ ಆಗಿ ಮನುಷ್ಯರಿಗೆ ಕಾಟ ಕೊಡುತ್ತವೆ ಅನ್ನುತ್ತಾರಲ್ಲ...! ಯಾಕೆ ಕಾಟ ಕೊಡಬೇಕು..?
ಇಷ್ಟು ದಿನ ಆದರೂ ನನಗೆ ಒಂದೂ ದೆವ್ವ ಕಾಣಿಸಿಲ್ಲ..

ಪ್ರಾಣಿಗಳಲ್ಲಿ ದೆವ್ವ, ಭೂತ ಕಾನ್ಸೆಪ್ಟ್ ಇಲ್ಲ ಅನ್ನೋಣವೇ...?  ಆತ್ಮ ಅನ್ನುವುದರ ಕಾನ್ಸೆಪ್ಟ್ ಎಲ್ಲರಿಗೂ   ಒಂದೇ ತಾನೇ..? ಹೇಳುವುದಿಲ್ಲವೇ ... ಪಾಪ ಮಾಡಿದವರು ಮುಂದಿನ ಜನ್ಮದಲ್ಲಿ ನಾಯಿಯೋ,ನರಿಯೋ ಆಗಿ ಹುಟ್ಟುತ್ತಾರೆಂದು...! ಅದೆಷ್ಟೋ ಜನ್ಮದ ಪುಣ್ಯದಿಂದಾಗಿ ಮನುಷ್ಯ ಜನ್ಮ ಸಿಕ್ಕಿತು ಎಂದು..
ಚರಾಚರ ಜೀವಿಗಳಲ್ಲೆಲ್ಲಾ ಇರುವುದು ನಾನೆ ಎ೦ದು ಶ್ರೀಕೃಷ್ಣನೇ  ಹೇಳಿದ್ದಾನೆ.. ಎಂದು ಬಲ್ಲವರು ಹೇಳುತ್ತಾರೆ..ಅಂದರೆ ಭೂತದಲ್ಲಿ, ಪಿಶಾಚಿಯಲ್ಲಿ,ಪ್ರೇತದಲ್ಲಿ,   .... ಯಾರಿದ್ದಾರೆ..? ಭೂತ  ಜೀವಿಯಲ್ಲವೇ..? ಸತ್ತ ಮೇಲೆ ಆಗುವುದು ಭೂತವೆಂದಾದರೆ ಅದು ನಿರ್ಜೀವ...  ಅಂದರೆ ಅದರಲ್ಲೂ ಇದ್ದದ್ದು ಶ್ರೀ ಕೃಷ್ಣನೇ ಆದಂತಾಯಿತಲ್ಲವೆ..? ಎಲ್ಲದರಲ್ಲೂ ಅವನೇ ಇದ್ದಾನೆ ಅಂದರೆ ಈ ಭೂತ ಯಾರು..?


ಆತ್ಮ ಕಾನ್ಸೆಪ್ಟ್ ಒಂದೇ ಅಂದರೆ ಭೂತ ಅನ್ನುವುದು ನಿಜ ಅನ್ನುವುದಾದರೆ, ಎಲ್ಲ ತರದ ಪ್ರಾಣಿಗಳೂ ಅಕಾಲದಲ್ಲಿ ಸತ್ತರೆ, ಅತೃಪ್ತಿಯಿಂದ ಸತ್ತರೆ ಪ್ರೇತವೇ ಆಗುತ್ತವೆಂದಾಯ್ತು ..ಇಲ್ಲ ಕೆಳಸ್ತರದ ಪ್ರಾಣಿಗಳು ಪ್ರೇತ  ಆಗೋಲ್ಲ ಅಂತಂದ್ರೆ  ಮನುಷ್ಯರಲ್ಲೂ ಪ್ರೇತ, ಪಿಶಾಚಿ ಎಲ್ಲಾ ಇಲ್ಲ ಅಂತಲೂ ಆಗಬಹುದು. 

ಪ್ರಾಣಿಗಳಲ್ಲಿ ಈ ತರದ್ದು ಇಲ್ಲ ಅಂದರೆ ಮನುಷ್ಯರಲ್ಲಿ ಮಾತ್ರ ಯಾಕಿರ ಬೇಕು..?ಮನುಷ್ಯನಿಗೆ ಯೋಚಿಸಲು ಬರುತ್ತೆ ಅಂತಲೇ ..?
ನರವ್ಯೂಹ ಬೆಳೆದಿದೆ ಅಂತಲೇ..? ಪ್ರಕೃತಿ ಮನುಷ್ಯನಿಗೆ ಯೋಚನಾ ಶಕ್ತಿ ಎನ್ನುವ ವರದೊಂದಿಗೆ ಭ್ರಮೆ, ಭಯ ಇತ್ಯಾದಿ   ಅಡ್ಡ ಪರಿಣಾಮವನ್ನೂ ಕೊಟ್ಟಿತೇ..?  

''ಗಿಲ್ಟ್ '' ಅನ್ನುವುದು ಮನುಷ್ಯನೊಬ್ಬನಲ್ಲೇ  ಬೆಳೆಯುವುದು..ಮತ್ತು ಬೆಳೆಸುವುದು ಜೊತೆಗೆ ಬಿಡಿಸಿಕೊಳ್ಳಲೆತ್ನಿಸುವುದು.   ತಪ್ಪಿತಸ್ತ ಮನೋಭಾವನೆಯೇ ಈ ರೀತಿಯ ಸಮಸ್ಯೆಗಳಿಗೆ   ದಾರಿ ಮಾಡಿಕೊಡುವುದಲ್ಲವೇ..?  ಈ ಭಾವನೆಗಳು  ಹುಟ್ಟುಟ್ಟುತ್ತಲೇ ಹಿರಿಯರಿ೦ದ ಮಕ್ಕಳಿಗೆ ಕಾಪಿ ಪೇಸ್ಟ್ ಆಗಿಬಿಟ್ಟಿರುತ್ತವೆ. ಏನೋ ತಪ್ಪು ಮಾಡಿದ್ದೇವೆಂದುಕೊಳ್ಳುವುದೂ, ಅದಕ್ಕೊಂದು ಶಾಂತಿ ಮಾಡಿಸುವುದು..ಹರಕೆ ಹೇಳಿಕೊಳ್ಳುವುದೂ .. ತಪ್ಪುಗಾಣಿಕೆ ಕಟ್ಟಿ  ತಪ್ಪಿತಸ್ತ ಮನೋಭಾವದಿಂದ ಬಿಡಿಸಿಕೊಳ್ಳಲೆತ್ನಿಸುವುದು..ಹೀಗೆ ನಾನಾ ತರದಲ್ಲಿ.   
ದೇವರು, ದೆವ್ವ ಎರಡೂ ವಿಚಾರ  ನಮ್ಮ ಮನಸಿನಲ್ಲೇ ಇರುವುದಲ್ಲವೇ..? ಅವೆಲ್ಲ ಕೆಲವೊಮ್ಮೆ ಉಪಯೋಗಕ್ಕೆ ಬರುತ್ತದೆ ಅನ್ನುವುದು ಹೌದಾದರೂ  ಅದಕ್ಕಾಗಿ ಮಾಡದ ತಪ್ಪನ್ನು ಊಹಿಸಿಕೊಂಡು ಕೊರಗುವುದ್ಯಾಕೆ..?


ಇವಿಷ್ಟನ್ನೂ ರುಕ್ಕಮ್ಮನಿಗೆ ಹೇಳಿ ಸಮಾಧಾನಿಸುವಷ್ಟರಲ್ಲಿ ಸಾಕುಬೇಕಾಯಿತು..ಇನ್ನೂ ಒಂದಷ್ಟು ನೀವೂ ಹೇಳಿ ಪುಣ್ಯ ಕಟ್ಟಿಕೊಳ್ಳಿ...!!!  

Thursday, February 10, 2011

ಹುಡುಕಾಟ ...!!!!!

ಮಹಾನ್ 
ಕಾವ್ಯವೊಂದರ
ರಚನೆಗೆ 
ಮನಸ್ಸು
ಮಾಡಿದ್ದೇನೆ.!
ಹಾಗಾಗಿ 
ಯಾರೂ 
ಬಳಸದ 
ಪದಗಳನ್ನು 
ಹುಡುಕಾಡುತ್ತಿದ್ದೇನೆ...!!!!